Thursday, December 17, 2009

ಪುಸ್ತಕ ಪರಿಚಯ...........೩

ಪುಸ್ತಕಗಳ ಪರಿಚಯದ ಸರಣಿಯಲ್ಲಿ ನನ್ನ ಮೂರನೆಯ ಪುಸ್ತಕ ಕೂಡ ದಿ.ತ್ರಿವೇಣಿಯವರದೇ ಮತ್ತು ಕಥಾ ಸಂಕಲನವೇ......"ಹೆಂಡತಿಯ ಹೆಸರು". ಈ ಕಥಾ ಸಂಕಲನದ ಮೊದಲನೆಯ ಕಥೆಯೇ ಪುಸ್ತಕದ ಶೀರ್ಷಿಕೆ, ಹೆಂಡತಿಯ ಹೆಸರು. ಈ ಸಂಕಲನದಲ್ಲಿ ಒಟ್ಟು ೧೪ ಕಥೆಗಳಿವೆ.

ಹೆಂಡತಿಯ ಹೆಸರು ಕಥೆಯ ಆರಂಭದ ಸಾಲುಗಳು "ಹತ್ತು ಬಿಳಿಯ ಹಾಳೆಗಳು ಬರಿದಾದ ಒಡಲಿನಿಂದಾಗಿ ಹಸಿವಿನಿಂದ ಕಂಗೆಟ್ಟು ನನ್ನ ಕಡೆಯೇ ನೋಡುತ್ತಿದ್ದವು. ನಾನು ಪೆನ್ನಿನ ತುಂಬಾ ಶಾಯಿ ತುಂಬಿ ಬರಿದಾದ ಒಡಲನ್ನು ತುಂಬಲು ಕುಳಿತೆ"...... ನನ್ನನ್ನು ಸೆಳೆದವು. ಏನಾದರೂ ಬರೆಯಬೇಕೆಂಬ ಹಂಬಲದ ಮನಸ್ಸಿನವರ ನಿಜ ಸ್ಥಿತಿ ಯಾವಾಗಲೂ ಇದೇ ಆಗಿರುತ್ತದಲ್ಲವೇ..... ಆದರೆ ಈ ಕಥೆಯಲ್ಲಿ ನಾಯಕ ಪ್ರೇಮ ಪತ್ರ ಬರೆಯುವ ಹುನ್ನಾರದಲ್ಲಿರುತ್ತಾನೆ...... ಆದರೆ ಅವಳನ್ನು (ಹೆಂಡತಿಯನ್ನು) ಏನೆಂದು ಸಂಬೋಧಿಸಬೇಕೆಂದು ತಿಳಿಯದೇ... ಬಿಳಿಯ ಹಾಳೆಗಳು ಹಸಿವಿನಿಂದ, ತಮ್ಮೊಡಲ ಹಸಿವು ಇಂಗಿಸೆಂಬಂತೆ ತನ್ನನ್ನೇ ನೋಡುತ್ತಿದ್ದವು ಎನ್ನುತ್ತಾನೆ... ಇದೊಂದು ಅತ್ಯಂತ ಉತ್ತಮ ಉಪಮೆ ಎನ್ನಿಸಿತು ನನಗೆ. ಮದುವೆಯಾಗಿ ಹೆಂಡತಿಯನ್ನು ಬಿಟ್ಟು ಬಂದಿರುವ ಇವನೂ, ಬಿಳಿ ಹಾಳೆಗಳಂತೆ ಪ್ರೇಮಕ್ಕಾಗಿ ಹಸಿದಿದ್ದಾನೆ... ಪ್ರೇಮ ಪತ್ರ ಬರೆಯಲು ಕುಳಿತಿದ್ದಾನೆ... ತಮಾಷೆಯೆಂದರೆ ಅವನಿಗೆ ಹೆಂಡತಿಯ ಹೆಸರೇ ನೆನಪಿಲ್ಲದಿರುವುದು... ಕೊನೆಗೆ ಸ್ನೇಹಿತನ ಸಹಾಯದಿಂದ ತನ್ನನ್ನು ಪ್ರೀತಿಸುವ ನಾಟಕವಾಡಿ, ಬೇರೊಬ್ಬರನ್ನು ಮದುವೆಯಾಗಿ ಹೋದವಳ ಹೆಸರೇ ಹೆಂಡತಿಯದೆಂದೂ ತಿಳಿಯುತ್ತಾನೆ. ಮನೆಗೆ ಬಂದ ಸೊಸೆಗೆ ಹೊಸ ಹೆಸರಿಡಬೇಕೆಂಬ ಸಂಪ್ರದಾಯದಂತೆ, ತನ್ನ ತಾಯಿಯ ಸಲಹೆಯಂತೆ, ತಾನು ಈಶ್ವರಮೂರ್ತಿಯಾದ್ದರಿಂದ ಹೆಂಡತಿಯನ್ನು "ಗಂಗಾ" ಎಂದು ಕರೆಯುತ್ತಾನೆ. ಈ ಕಥೆಯಲ್ಲಿ ಮನಸ್ಸಿಗೆ ನೋವುಂಟು ಮಾಡಿದ ವಿಷಯಗಳನ್ನು ಮರೆಯಬೇಕು, ಬೇರು ಸಹಿತ ನೆನಪುಗಳನ್ನು ತೆಗೆದುಹಾಕಬೇಕೆಂಬ ಒಂದು ತತ್ವ ಕೂಡ ಹೇಳುತ್ತಾರೆ ಲೇಖಕಿ.

೨) ನಾ ಮೆಚ್ಚಿದ ಹುಡುಗಿ :

ಯಾರು ಹಿತವರು ನಿನಗೆ ಈ ಮೂವರೊಳಗೆ... ಕುಮುದಿನಿ.... ಸೌದಾಮಿನಿ.... ವಿಲಾಸಿನಿ.... ನಾಯಕ ತನಗೆ ಬೇಕಾದ ಹುಡುಗಿಯನ್ನು ಕೊನೆಗೂ ಆರಿಸಿಕೊಳ್ಳುತ್ತಾನೆ. ಒಂದು ಕನಸಿನ ನಂತರ.... ಸಂಗೀತದ ರಾಗಗಳಿಗೆ ಮೂವರು ಹುಡುಗಿಯರನ್ನೂ ಹೋಲಿಸಿ, ಅವರ ಸೌಂದರ್ಯ ವರ್ಣನೆ ಮಾಡಿರುವ ರೀತಿ ಚೆನ್ನಾಗಿದೆ.

೩) ಚಿನ್ನದ ಸರ :

ಶ್ರೀಮಂತಳಾದ ಕನಕ, ಬಡವಳಾದ ಕಾವೇರಿ ಇಬ್ಬರೂ ಶಾಂತಳಿಗೆ ಸ್ನೇಹಿತೆಯರೇ ಆದರೂ, ಪಾಪುವಿನ ಸರ ಕಾಣದಾದಾಗ, ಶಾಂತ ಕಾವೇರಿಯನ್ನೇ ಅನುಮಾನಿಸುತ್ತಾಳೆ. ಕಣ್ಣೆದುರೇ ಕನಕ ಆ ಸರವನ್ನು ಮಾರಲು ಹೊರಟರೂ ಶಾಂತಾ ಕೊಂಡುಕೊಳ್ಳುವುದೇ ಇಲ್ಲ. ಇಲ್ಲಿ ಸ್ನೇಹ ಹೇಗೆ ಅನುಮಾನದಿಂದಾಗಿಯೂ, ಬಡತನದಿಂದಾಗಿಯೂ ಸೋಲುವ ಸ್ಥಿತಿಗೆ ಹೋಯಿತೆಂಬುದು ಚೆನ್ನಾಗಿ ಚಿತ್ರಣವಾಗಿದೆ.

೪) ಅವನ ಆಯ್ಕೆ :

ಕುಂಟ ಪಾರಿವಾಳವನ್ನು ಸಾಕಲು ಆಯ್ಕೆ ಮಾಡಿಕೊಂಡು ಹುಡುಗ ಯಾವಾಗಲೂ ಅದನ್ನು ರಕ್ಷಿಸುವ ಮಾತಾಡಿ, ಅಂತ:ಕರಣ ಪ್ರದರ್ಶಿಸುತ್ತಾನೆ. ಕುಂಟಿಯೇ ತನ್ನ ಪಾಲಿಗೆ ರಾಣಿ ಎಂದು, ಆ ಪಾರಿವಾಳವನ್ನು "ರಾಣಿ" ಎಂದು ಕರೆಯುತ್ತಾನೆ.

೫) ಬೆಡ್ ನಂಬರ್ ಏಳು :

ಕ್ಷಯದಾಸ್ಪತ್ರೆಯಲ್ಲಿ ಬೆಡ್ ನಂಬರ್ ೬ - ೭ರ ನಡುವೆ ನಡೆಯುವ ಮಾತುಕತೆ.... ೬ನೇ ನಂಬರಿನ ಬೆಡ್ ಬರೀ ರೋಗಿಗಳ ಸಹವಾಸ ಸಾಕಾಗಿದೆ, ಸುಂದರಿಯೊಬ್ಬಳ ಜೊತೆ ಸಿಕ್ಕರೆ ಎಂದು ಕನಸು ಕಾಣುತ್ತಾ, ರೋಗಿಗಳಿಗಾಗಿ ಮಿಡಿಯುವ ಹೃದಯದ ೭ನೇ ನಂಬರ್ ಬೆಡ್ಡನ್ನು ಟೀಕಿಸುತ್ತಾ, ೭ನೇ ಬೆಡ್ ಗೆ ಬರುವ ವಿಶ್ವನಾಥನ ಹೆಂಡತಿ ಉಮಾಳ ಸೌಂದರ್ಯ ಆಸ್ವಾದಿಸುತ್ತೆ. ತನ್ನ ಜೀವ ಪಣಕ್ಕಿಟ್ಟು, ಕೆಲಸ ಹಿಡಿದು, ಸಂಸಾರ ತೂಗಿಸಿ, ಗಂಡನನ್ನು ರಕ್ಷಿಸುವ ಉಮಾಳೇ ಮುಂದೆ ರೋಗಿಯಾದಾಗ, ಗಂಡನಿಂದ ನಿರ್ಲಕ್ಷಿಸಲ್ಪಟ್ಟು, ತ್ಯಜಿಸಲ್ಪಡುತ್ತಾಳೆ. ಅವಳ ಮೂಕ ರೋದನಕ್ಕೆ ಈ ಬೆಡ್ಗಳೂ ರೋದಿಸುತ್ತಾ ಜೊತೆಗೂಡುತ್ತವೆ. ಮನ ಮಿಡಿಯುವ ಕಥೆ.

೬) ಚಂಪಿ :

ಲಲಿತಳಿಗೆ ಮೂರನೆಯ ಮಗಳಾಗಿ ಮುದ್ದಾದ ಚಂಪಿ ಹುಟ್ಟುವಾಗಲೇ ಬಲಗೈ ಇಲ್ಲದೆ, ಒಂದೇ ಕೈಯಿನ ಕೂಸಾಗಿತ್ತು. ದೊಡ್ಡವರು ಮಗುವನ್ನು ಬಂದವರಿಗೆ ತೋರಿಸದೆ ಮುಚ್ಚಿಡುವುದನ್ನು ಕಂಡು ಚಂಪಿಯ ಅಕ್ಕ ರಾಜಿ ಅವಳನ್ನು ತೆಂಗಿನ ಗರಿಗಳ ಮರೆಯಲ್ಲಿ ಮುಚ್ಚಿಟ್ಟು, ಸಮಾಜದಲ್ಲಿದ್ದ ಅಕ್ಕನನ್ನು ಕರೆತರಲು ಹೋಗುತ್ತಾಳೆ. ಮನೆಗೆ ಬಂದ ಮೇಲೆ ಎಲ್ಲರೂ ರಾಜಿಯ ಮೇಲೆ ಕೋಪಿಸಿಕೊಂಡರೂ, ಚಂಪಿ ಮಾತ್ರ ಇದ್ದ ತನ್ನ ಎಡಗೈ ಚಾಚಿ ಮುದ್ದಾಗಿ ರಾಜಿ ಎಂದು ಕರೆಯುತ್ತಾಳೆ. ಏನೂ ಕಪಟವರಿಯದ ಪುಟ್ಟ ತಂಗಿಯ ಪ್ರೀತಿ ಸುಂದರವಾಗಿ ಹೇಳಲ್ಪಟ್ಟಿದೆ.

೭) ಹಸಿರು ಪೀತಾಂಬರ :

ಗರ್ಭಿಣಿ ಹೆಂಡತಿ ಆಸೆ ಪಟ್ಟಿದ್ದ ಹಸಿರು ಪೀತಾಂಬರವನ್ನು ಶಿವು ಕಷ್ಟಪಟ್ಟು ತಂದಾಗ, ಕೌಸಲ್ಯ ಆಗಲೇ ಮುಂದೆ ಹುಟ್ಟಲಿರುವ ಮಗುವಿಗೆ ತಾಯಾಗಿ ಹೋಗಿದ್ದಳು. ಇದು ಹೆಣ್ತನದಿಂದ ತಾಯ್ತನಕ್ಕೇರುವ ಸ್ತ್ರೀಯ ಒಂದು ರೂಪ ತೋರಿಸುವ ಕತೆ. ಚೆನ್ನಾಗಿದೆ.

೮) ಎರಡು ಜೀವ :

ಗಾಡಿ ಎಳೆಯುವ ಕುದುರೆಯ ಭಾವನೆಗಳನ್ನು ನವಿರಾಗಿ ಚಿತ್ರಿಸಿದ್ದಾರೆ ಲೇಖಕಿ. ದುಷ್ಟ ಮಾನವನಿಗಾಗಿ ಕಷ್ಟಪಟ್ಟು ದುಡಿಯುವ ತನ್ನ ಪರಿಸ್ಥಿತಿಯನ್ನು ಮಾನಸಿಕವಾಗಿ ಮೆಟ್ಟಲು ಪ್ರತ್ನಿಸುತ್ತೆ ಲತೀಫ್.. ಹೆಂಡತಿ ಸತ್ತ ಆರೇ ತಿಂಗಳಿಗೆ ಮರು ಮದುವೆಯಾಗಿ ಬಂದ ಚಂದ್ರುವನ್ನು ಕಂಡು ಹೀನ ಮಾನವ ಎಂದು ಕೆರಳಿದ ಲತೀಫ್, ಭಾವನೆಗಳ ತೀವ್ರತೆಗೆ ಸಿಕ್ಕಿ, ಮನಸ್ಸಿನ ಬಿರುಗಾಳಿ ಸಹಿಸಲಾಗದೆ, ಮಾನವ ಕುಲವನ್ನೇ ದ್ವೇಷಿಸುತ್ತಾ ದೊಡ್ಡ ಮರಕ್ಕೆ ಅಪ್ಪಳಿಸಿಬಿಡತ್ತೆ. ಗಾಡಿಯಲ್ಲಿದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾದರೂ, ಮುಂಗಾಲು ಮುರಿದು ಬಿದ್ದಿದ್ದ ಲತೀಫ್ ನನ್ನು ನಿಷ್ಪ್ರಯೋಜಕನೆಂದು, ಗುಂಡಿಟ್ಟು ಕೊಲ್ಲುತ್ತಾರೆ ಮತ್ತು ಸುತ್ತಲಿದ್ದ ದುಷ್ಟ ಮನುಜರು ರೋಮಾಂಚಕಾರಿ ದೃಶ್ಯವೆಂಬಂತೆ ನೋಡುತ್ತಾ ನಿಲ್ಲುತ್ತಾರೆ. ಮನುಷ್ಯ ಎಷ್ಟು ಸ್ವಾರ್ಥಿ ಮತ್ತು ಕ್ರೂರಿ ಎಂಬುದು ಇಲ್ಲಿ ತೋರಿಸಲ್ಪಟ್ಟಿದೆ. ಒಳ್ಳೆಯ ಕಥೆ.

೯) ತಾಯಿ :

ಎಷ್ಟೇ ಐಶ್ವರ್ಯ, ಸುಖ ಸಂಪತ್ತುಗಳಿದ್ದರೂ ತಾಯಿ ಕೊನೆಗೆ ಒಲಿಯುವುದು ಶುದ್ಧ ಪ್ರೀತಿಗಾಗಿ ಎಂದು ತಾಯ ಮಮತೆ ಬಿಂಬಿಸುವ ಕಥೆ. ಬಡತನದಲ್ಲಿ ಸಣ್ಣ ವಠಾರದ ಮನೆಯಲ್ಲಿ ಬದುಕಿನೊಡನೆ ಹೋರಾಡಲು ಹೊರಟ ಮಗ ಕೇಶವನ ಜೊತೆ ಹೊರಟು ಬಿಡುತ್ತಾಳೆ ಜಾನಮ್ಮ. ಶುದ್ಧ ಮನಸ್ಸಿನ ತಾಯಿ, ಮಗನ ಮೇಲಿನ ಪ್ರೀತಿಗಾಗಿ ಕಷ್ಟ ಪಡಲೂ ತಯಾರಾಗಿ ಬಿಡುವ ಭಾವುಕ ಸನ್ನಿವೇಶ.

ಇನ್ನುಳಿದ ಕಥೆಗಳಲ್ಲಿ ಹೆಣ್ಣಿನ ಸೌಂದರ್ಯ ಕಂಡು ಮೋಹಿತನಾಗಿ ೧೫ ವರ್ಷದ ಕಠಿಣ ಬ್ರಹ್ಮಚರ್ಯದ ತಪಸ್ಸನ್ನು ಗಾಳಿಗೆ ತೂರಿ ಬಿಡುವ ಸಂನ್ಯಾಸಿ, ಬಾಯಿಗೆ ಬಂದ ಸುಳ್ಳು ಕಥೆ ಹೇಳಿ ಭಿಕ್ಷೆ ಬೇಡುವ ಹುಡುಗ, ಪ್ರೀತಿಸಿದ ಹುಡುಗಿ ಆಕಸ್ಮಿಕ ಬೆಂಕಿ ಅಪಘಾತದಲ್ಲಿ ಮರಣ ಹೊಂದಿದಾಗ, ಕಿಡಿಗೇಡಿಗಳು ಅವಳ ಚಾರಿತ್ರ್ಯ ವಧೆ ಮಾಡುವುದು, ೩೦ ವರ್ಷ ತನಗಿಂತ ಹಿರಿಯನಾದ, ತನ್ನನ್ನು ಎತ್ತಾಡಿಸಿ ಸಾಕಿದ ಸೋದರ ಮಾವನನ್ನೇ ಪ್ರೀತಿಸುವ ತಾರಾ.... ಹೊಟ್ಟೆಯಲ್ಲಿ ಪುಂಡಾಟ ನಡೆಸುತ್ತಿದ್ದ ಪೋರ ಇದ್ದಕ್ಕಿದ್ದಂತೆ ತಟಸ್ಥನಾದಾಗ ಮಗು ಹೊರಗೆ ಬರುವ ಮೊದಲೇ ಇಹಲೋಕ ತ್ಯಜಿಸಿದೆ ಎಂದರಿಯುವ ತಾಯಿ, ಕೊನೆಗೆ ಒಂದು ಜೀವಂತ ಶಿಶುವಿಗೆ ಜನ್ಮ ಕೊಡಲಾಗದ ಹೆಣ್ಣೂ ಒಂದು ಹೆಣ್ಣಾ ಎಂದು ಮತ್ತೊಮ್ಮೆ ಇನ್ನೊಬ್ಬ ಅತಿಥಿಯನ್ನು ಎದುರುಗೊಳ್ಳಲು "ಪ್ರಸವ ವೈರಾಗ್ಯ" ಮರೆಯುವ ತಾಯಿ....

ಹೀಗೆ ಪ್ರತಿಯೊಂದು ಕಥೆಯೂ ವಿಭಿನ್ನವಾಗಿವೆ. ಒಟ್ಟಿಗೆ ಒಂದರ ನಂತರ ಒಂದರಂತೆ ಇಡೀ ಪುಸ್ತಕ ಓದಿದರೂ, ಎಲ್ಲ ರೀತಿಯಲ್ಲೂ ಭಿನ್ನವಾಗಿಯೇ ಕಾಣುವುವು ಕಥೆಗಳು. ಇದು ಲೇಖಕಿ ದಿ.ತ್ರಿವೇಣಿಯವರ ಅಪರೂಪದ ಶೈಲಿ... ಎಲ್ಲ ಕಥೆಗಳಿಗಿಂತಲೂ ನನ್ನನ್ನು ಹಿಡಿದಿಟ್ಟು, ಮರೆಯಲಾಗದಂತೆ ಮನಸ್ಸಿನಲ್ಲಿ ಅಚ್ಚೊತ್ತಿದ್ದು "ಎರಡು ಜೀವ". ಮಾತು ಬಾರದ ಮೂಕ ಪ್ರಾಣಿಗಳೇ ಮನುಷ್ಯರಿಗಿಂತ ಹೆಚ್ಚು ಭಾವ ಜೀವಿಗಳು ಎಂಬುನ್ನು ಸಾಬೀತು ಪಡಿಸಿದೆ........

Wednesday, December 2, 2009

ಪುಸ್ತಕ ಪರಿಚಯ............೨

ಮೊದಲು ಓದೇ ಇರಲಿಲ್ಲವೇನೋ ಎಂಬಂತೆ ಒಂದೇ ಉಸಿರಿಗೆ ಓದಿಸಿಕೊಂಡು ಹೋಗಿದ್ದು ತ್ರಿವೇಣಿಯವರ ಕಾದಂಬರಿ .."ಶರಪಂಜರ". ಭಾವನೆಗಳ ಏರು-ಪೇರು, ತಿಕ್ಕಾಟ-ತಿಣುಕಾಟಗಳು.... ಒಮ್ಮೆ ಕರುಣೆ-ಕನಿಕರ, ಒಮ್ಮೊಮ್ಮೆ ಸಿಟ್ಟು-ಅಸಹ್ಯ, ಮೊತ್ತೊಮ್ಮೆ ಅಸಹಾಯಕತೆ.... ನಮ್ಮ ಮನಸ್ಸೂ ಪುಸ್ತಕದ ಉದ್ದಕ್ಕೂ ಭಾವಾವೇಶಕ್ಕೊಳಗಾಗುತ್ತಲೇ ಇರುತ್ತದೆ. ಕರುಳು ಕತ್ತರಿಸುವಂತೆ ಅಳುತ್ತಾ, ಚೀರುತ್ತಾ, ಬದುಕಲು ಒಂದೇ ಒಂದು ಅವಕಾಶ ಬೇಕೆಂದು ಅಂಗಲಾಚುವ ಕಾವೇರಿ ನಮ್ಮನ್ನು ಕಾಡಿ ಬಿಡುತ್ತಾಳೆ. ಭೂತಕಾಲವನ್ನು ಮರೆತು ಬದುಕಲು ಪ್ರಯತ್ನಿಸುವ ಕಾವೇರಿಗೆ ತನ್ನ ಸಂಸಾರ ಮತ್ತು ಸಮಾಜದಿಂದ ಕೊಂಚವೇ ಕೊಂಚ ಕರುಣೆ-ಪ್ರೀತಿ ಸಿಕ್ಕಿದ್ದರೆ, ಜೀವನದ ನದಿಯಲ್ಲಿ ಬಾಳ ನೌಕೆ ತೇಲ ಬಹುದಾಗಿತ್ತು.... ಆದರೆ ಅಂತ್ಯ ಹಾಗಾಗುವುದಿಲ್ಲ...

ಇದನ್ನೊಂದು ಕಥೆ ಎನ್ನುವುದಕ್ಕಿಂತ ನಮ್ಮ ನಡುವೆ ನಡೆದಿರಬಹುದಾದ ಒಂದ ಸತ್ಯ ಘಟನೆ ಎನ್ನಬಹುದೇನೋ..... ಯಾವುದೇ ಕಾರಣಕ್ಕೇ ಆಗಲಿ ಯಾರಿಗಾದರೂ ಮನೋವಿಕಲ್ಪವಾಗಿದ್ದರೆ, ಅವರು ಸುಧಾರಿಸಿದ ನಂತರವೂ ನಮ್ಮ ಸಮಾಜ (ಅಥವಾ ನಾವು) ನೆಮ್ಮದಿಯ ಜೀವನ ಸಾಗಿಸಲು ಬಿಡೋಲ್ಲ. ಈ ಕಥೆ ಎಲ್ಲಾ ಕಾಲಕ್ಕೂ ಸಲ್ಲುವಂತಹುದು.

ತ್ರಿವೇಣಿಯವರು ಮನೋವಿಕಲ್ಪಕ್ಕೆ ಸಂಬಂಧ ಪಟ್ಟ ಕಥೆಗಳನ್ನು ಅತ್ಯಂತ ಶ್ಲಾಘನೀಯ ರೀತಿಯಲ್ಲಿ ಬರೆದಿದ್ದಾರೆ. ಎಲ್ಲೂ ಅತಿ ಎನ್ನಿಸಿಕೊಳ್ಳದೆ ಸಾಗುವ ಕಥೆ ನಮ್ಮನ್ನು ಸುಳಿಯೊಳಗೆ ಪೂರ್ಣವಾಗಿ ಸೆಳೆದುಕೊಂಡು ಬಿಡತ್ತೆ. ಪುಸ್ತಕ ಓದಿಯಾದ ಮೇಲೂ ಎಷ್ಟೋ ಹೊತ್ತು ನಾವು ಆ ಕಥೆಯಲ್ಲೇ ಜೀವಿಸುತ್ತಿರುತ್ತೇವೆ. ಕೆಲವೊಮ್ಮೆ "ಶರಪಂಜರ" ದಂತಹ ಕಾದಂಬರಿಗಳು ಮರೆಯಲು ಅಸಾಧ್ಯವೇ ಆಗಿಬಿಡುತ್ತದೆ. ಈ ಕಥೆ ಅದರಲ್ಲೂ ನಮಗೆ ದಿವಂಗತ ಕಲ್ಪನಾರ ಅದ್ಭುತ ನಟನೆಯಿಂದಾಗಿ, ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಈ ಪುಸ್ತಕಕ್ಕೆ ಮತ್ತು ಕಲ್ಪನಾರ ಅಭಿನಯಕ್ಕೆ, ಎರಡಕ್ಕೂ ಅವೇ ಸಾಟಿ - ಬೇರೆ ಹೋಲಿಕೆಯೇ ಇಲ್ಲ....

ನನಗೆ ಈ ಕಥೆ ಹಾಗೂ ಚಿತ್ರದ ಜೊತೆ ಇನ್ನೊಂದು ಹಿಂದಿ ಸಿನೆಮಾ ಕೂಡ ನೆನಪಾಗುತ್ತಿದೆ. "ಬಸೇರಾ" ಅಂತ... ರಾಖಿ ಹಾಗೂ ರೇಖಾ ಇಬ್ಬರೂ ನಟಿಸಿದ್ದರು. ತಂಗಿ ರೇಖಾಳ ಮದುವೆಯಾದ ತಕ್ಷಣವೇ ಅವಳ ಪತಿಯ ಮರಣವಾದದ್ದು ಕೇಳಿ, ಅಕ್ಕ ರಾಖಿಯ ಬುದ್ಧಿ ಸ್ಥಿಮಿತ ತಪ್ಪಿ ಹೋಗುತ್ತದೆ. ಸುಮಾರು ೧೨ ವರ್ಷಗಳ ನಂತರ ಅವಳು ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ, ರೇಖಾಳ ಮದುವೆ ತನ್ನ ಪತಿಯ ಜೊತೆಗೇ ಆಗಿ, ಒಂದು ಮಗುವೂ ಇರುತ್ತದೆ. ಅದು ಅವಳಿಗೆ ಗೊತ್ತಾದಾಗ, ಪತಿಗೆ ಇನ್ನು ತನ್ನ ಅವಶ್ಯಕತೆಯಿಲ್ಲವೆಂದು ಅರಿತುಕೊಂಡು, ಮತ್ತೊಮ್ಮೆ ಹುಚ್ಚಿಯಾಗಿ ಬಿಡುತ್ತಾಳೆ (ಹುಚ್ಚಿಯಂತೆ ನಟಿಸುತ್ತಾಳೆ). ಆಸ್ಪತ್ರೆಗೆ ವಾಪಸ್ಸು ಹೋಗಿ ಬಿಡುತ್ತಾಳೆ. ತನ್ನ ಮಗನಿಗೆ ನಿಷ್ಕರ್ಷೆಯಾಗಿದ್ದ ಹುಡುಗಿಗೆ ಮಾತ್ರ ಈ ಸತ್ಯ ತಿಳಿಯುತ್ತದೆ ಅಥವಾ ನಿಜ ಏನೆಂದು ತಿಳಿದುಕೊಳ್ಳುವ ಅವಶ್ಯಕತೆಯಾಗಲೀ ಅಥವಾ ತಾಳ್ಮೆಯಾಗಲೀ ಕುಟುಂಬದ ಬೇರೆಯವರಿಗೆ ಇರುವುದಿಲ್ಲ.... ಮುಂದೆಂದೂ ರಾಖಿ ತನ್ನ ಕುಟುಂಬದವರನ್ನು ಭೇಟಿ ಮಾಡುವುದೇ ಇಲ್ಲ. ಆಸ್ಪತ್ರೆಯಲ್ಲೇ ರೋಗಿಗಳ ಸೇವೆ ಮಾಡುತ್ತಾ ಇದ್ದು ಬಿಡುತ್ತಾಳೆ. ಇದರಲ್ಲಿ ಎಲ್ಲರ ಅಭಿನಯವೂ ತುಂಬಾ ಚೆನ್ನಾಗಿತ್ತು. ಅದರಲ್ಲೂ ರಾಖಿಯನ್ನು ಮರೆಯುವುದಸಾಧ್ಯವೇ ಆಗಿ ಬಿಡುತ್ತೆ... ಒಂದು ಹಾಡು... ’ಜಹಾ ಭಿ ಸವೇರಾ ಹೈ... ವಹೀ ತೋ ಬಸೇರಾ ಹೈ...’ ಮನದಲ್ಲಿ ಅನುರಣಿಸುತ್ತಲೇ ಇರತ್ತೆ.... ಭಾವನೆಗಳ ತೀವ್ರವನ್ನು ತುಂಬಾ ಸುಂದರವಾಗಿ ಚಿತ್ರಿಸಲ್ಪಟ್ಟಿದೆ. ಎಲ್ಲವನ್ನೂ ಕಳೆದುಕೊಂಡು, ನೋವಿನಲ್ಲಿ ತುಡಿಯುವ ಪಾತ್ರಗಳು ನಮ್ಮ ಮನದಾಳದಲ್ಲಿ ಬೇರು ಬಿಡುತ್ತವೆ.

Monday, November 23, 2009

"ದಿವ್ಯ" ನಿರ್ಲಕ್ಷ್ಯ

"ನಿರ್ಲಕ್ಷ್ಯ" ಗೊತ್ತು, ಆದರೆ ಇದೇನಿದೂ....... "ದಿವ್ಯ ನಿರ್ಲಕ್ಷ್ಯ" ಎಂದು ಹುಬ್ಬೇರಿಸಬೇಡಿ..... ಬರೀ ನಿರ್ಲಕ್ಷ್ಯವೆಂದರೆ ಹೆಚ್ಚು ಒತ್ತು ಬರೋಲ್ಲ... ದಿವ್ಯವಾಗಿ ಅಥವಾ ಭವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಅದರ ಆಳ, ಒತ್ತು, ಅರ್ಥ ಎಲ್ಲಾ ಒಮ್ಮಿಂದೊಮ್ಮೆಗೇ ಗೋಚರವಾಗತೊಡಗುತ್ತದೆ....

ನಾವು ನಮ್ಮ ಬದುಕಿನಲ್ಲಿ ಅನೇಕ ವಿಷಯಗಳನ್ನೂ, ಅನೇಕ ಜನರನ್ನೂ ನಿರ್ಲಕ್ಷಿಸಿರುತ್ತೇವೆ, ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿಯೂ ಮತ್ತು ಕೆಲವೊಮ್ಮೆ ಅರಿವಿಲ್ಲದೆಯೂ..... ಘಟನೆಗಳನ್ನು ಕಹಿಯಾಗಿದ್ದರೆ ಮರೆಯಬಹುದು... ಆದರೆ ಪ್ರಾಮುಖ್ಯವಲ್ಲದವನ್ನು ನಿರ್ಲಕ್ಷಿಸ ಬೇಕಾಗುತ್ತದೆ. ಕೆಲವೊಮ್ಮೆ ನಾವು ಇದು ಸಾಧಾರಣ ಗುಣ ಮಟ್ಟದ್ದು, ಇದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲವೆಂದು ನಿರ್ಲಕ್ಷಿಸಿದ್ದ ಕೆಲವು ವಿಷಯಗಳು, ಮುಂದೊಂದು ದಿನ ನಮ್ಮ ನಿರೀಕ್ಷೆಗೆ ಮೀರಿ, ಹಠಾತ್ತಾಗಿ ಫೀನಿಕ್ಸಿನಂತೆ ಮೇಲೆದ್ದು ಬಿಡತ್ತೆ ಪ್ರಾಮುಖ್ಯತೆ ಪಡೆದು... ವಿಷಯ ಅದೇ ಆಗಿದ್ದರೂ ಸಮಯ ಬದಲಾದಾಗ ಅದರ ಪ್ರಾಮುಖ್ಯತೆಯೂ ಬದಲಾಗಿ ಬಿಟ್ಟಿರುತ್ತದೆ. ಅದು ನಮ್ಮನ್ನು ಮೂರ್ಖರನ್ನಾಗಿಸಿ, ಮೆರೆಯುತ್ತದೆ... ಇದೆಲ್ಲಾ ಘಟನೆಗಳೋ / ವಿಷಯಗಳೋ ಆದವು...

ಆದರೆ ನಾನೀಗ ಹೇಳುತ್ತಿರುವುದು ಮನುಷ್ಯರ ಬಗ್ಗೆ, ಸಂಬಂಧಗಳ ಬಗ್ಗೆ.. ಈ ಸಂಬಂಧಗಳ ಕಬಂಧ ಬಾಹುವಿನಲ್ಲಿ ಸಿಲುಕಿ ಪ್ರಮುಖವಾದ ವಿಷಯವೊಂದು ನರಳಿದ ಬಗ್ಗೆ.... ತಪ್ಪು ತಿಳುವಳಿಕೆ, ಅಹಂ ಅಥವಾ ಸ್ವಪ್ರತಿಷ್ಠೆಗೆ ಸಿಲುಕಿ ನರಳಿದ ನವಿರಾದ ಸಂಬಂಧದ ಬಗೆಗೆ...

"ನಿರ್ಲಕ್ಷ್ಯ" ಎನ್ನುವುದು ವ್ಯಕ್ತಿ ತಾನೇ ಅನುಭವಿಸಿದಾಗ ಮಾತ್ರ ಅರ್ಥ ಮಾಡಿಕೊಳ್ಳಲಿಕ್ಕಾಗುವಂತಹ ಸೂಕ್ಷ್ಮ ವಿಚಾರ. ಅದೂ ತನ್ನವರೆಂದು ಕೊಂಡು, ತುಂಬಾ ಬೇಕಾದವರೆಂದು ಕೊಂಡಿದ್ದ ಒಬ್ಬ ವ್ಯಕ್ತಿಯಿಂದ, ನಾವು ದಿವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಆಗುವ ನೋವು, ತುಡಿತ ಅನುಭವಿಸಿದ ಮನಸ್ಸಿಗಲ್ಲದೆ ಬೇರೆಯವರಿಗೆ ತಿಳಿಯುವುದು ಸ್ವಲ್ಪ ಕಷ್ಟವೇ...

ಈ ಘಟನೆಯ ಮುಖ್ಯ ಪಾತ್ರಧಾರಿ ಒಮ್ಮೆ ನನಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದರು.... ನನಗೆ ಸಂಬಂಧದಲ್ಲೂ ಅತೀ ಹತ್ತಿರದವರೇ.... ಕಾರಣಾಂತರಗಳಿಂದ ನನ್ನಿಂದ ದೂರವಾಗಿ ಮಾತು-ಕತೆ ಕೂಡ ನಿಂತು ಹೋದಾಗಲೂ ನನಗಿಷ್ಟೊಂದು ನೋವು ಆಗಿರಲಿಲ್ಲವೇನೋ... ಈಗ ತನ್ನ ಒಬ್ಬನೇ ಮಗನಿಗೆ ಮದುವೆ ಗೊತ್ತಾದ ಸಂಭ್ರಮದಲ್ಲಿ ಕೂಡ... ಅವರಿಗೆ ನನ್ನ ನೆನಪೂ ಬಾರದಿದ್ದಾಗ... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ವಾಸ್ತವ ನನಗರ್ಥವಾಯಿತು.... ಊರಿಗೆಲ್ಲಾ ತಾನೇ ದೂರವಾಣಿ ಮೂಲಕ ಮದುವೆ ಸಮಾಚಾರ ಹೇಳುವಾಗ, ತನ್ನ ಸಂತೋಷ ಹಂಚಿಕೊಂಡಾಗ ಕೂಡ, ನನ್ನ ನೆನಪೂ ಆ ವ್ಯಕ್ತಿಗೆ ಆಗಿಲ್ಲವೆಂದರೆ ನನ್ನ ಈ ಹುಚ್ಚು ಮನಸ್ಸೇಕೋ ಒಪ್ಪುತ್ತಲೇ ಇಲ್ಲ.... ಯಾರಿಗೋ ದೂರದವರಿಗೆ ಹೇಳಿದಂತೆ ಹೇಳಿದ್ದರೂ ಪರವಾಗಿರಲಿಲ್ಲ... ಒಂದೇ ಒಂದು ಕರೆ ನನ್ನನ್ನು ಈ ದಿನ ಈ ತರಹದ ನೋವಿನಿಂದ ಪಾರುಮಾಡಿರುತ್ತಿತ್ತು. ಈಗ ನನಗಾಗುತ್ತಿರುವ ನೋವು ಹೆಪ್ಪುಗಟ್ಟಿ ಈ ಸಾಧಾರಣ ಶಬ್ದ ನಿರ್ಲಕ್ಷ್ಯಕ್ಕೆ ದಿವ್ಯ, ಭವ್ಯ, ಮಹತ್ತರ ಎಂಬೆಲ್ಲಾ ಗುಣವಾಚಕ ಬಾಲಗಳನ್ನು ಅಂಟಿಸುವಂತೆ ಮಾಡಿದೆ... ನಿರ್ಲಕ್ಷ್ಯ ಎಂಬ ಶಬ್ದ ಸಾಧಾರಣವಾಗಿದ್ದರೂ, ಇದನ್ನು ಅನುಭವಿಸಿದಾಗ ಆಗುವ ನೋವಿಗೆ ಆಳ, ಅಳತೆ ಎಂಬ ಯಾವ ಮಾಪನಗಳೂ ಉಪಯೋಗವಾಗೊಲ್ಲ....

ಏನಾಗುತ್ತಿದೆ ನಮ್ಮ ಸಂಬಂಧಗಳ ಬೆಸುಗೆಗೆ..... ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ.... ಎಲ್ಲಾ ಶಿಷ್ಟಾಚಾರಗಳನ್ನೂ ಮರೆತೇಬಿಟ್ಟಿದ್ದೇವಾ..... ಪ್ರೀತಿ-ವಿಶ್ವಾಸ-ನಂಬಿಕೆ ಎಂಬೆಲ್ಲಾ ಶಬ್ದಗಳೂ ಎಲ್ಲಿ ಹೋದವು.... ಎಂದು ಒಂಟಿಯಾಗಿ ಕುಳಿತು ನನ್ನ ಮನಸ್ಸು ...... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾರದೇ ಮೂಕವಾಗಿ ರೋದಿಸುತ್ತಿದೆ......

Thursday, November 19, 2009

ನವಾವರಣ ಕೃತಿಗಳು - ೫

ದ್ವಿತೀಯಾವರಣ ಕೃತಿ :

ದ್ವಿತೀಯಾವರಣ ಕೃತಿ ೬೫ನೇ ಮೇಳ ಮೇಚ ಕಲ್ಯಾಣಿ ರಾಗದಲ್ಲಿ ರಚಿಸಲ್ಪಟ್ಟಿದೆ. ಶ್ರೀ ಚಕ್ರ ಪೂಜೆಯ ಈ ಎರಡನೇ ಆವರಣಕ್ಕೆ "ಸರ್ವಾಶಾಪರಿಪೂರಕ್ ಚಕ್ರ" ಎಂದು ಹೆಸರು. ಇದು ನಮ್ಮ ದೇಹದ ಸುಶುಮ್ನಾ ನಾಡಿಯಲ್ಲಿರುವ ಕಂಠದ ಸಮೀಪವಿರುವಕ್ ವಿಶುದ್ಧ ಚಕ್ರ. ಈ ಆವರಣಕ್ಕೆ ದೇವಿ ’ತ್ರಿಪುರೇಶಿ’ಯೇ ಸಾಮ್ರಾಜ್ಞಿ. ಇಲ್ಲಿ ಷೋಡಶ ದಳಗಳ ಪದ್ಮವಿದೆ. ಆ ಪದ್ಮಗಳಲ್ಲಿ ಷೋಡಶ ಗುಪ್ತಯೋಗಿನಿಯರಿದ್ದಾರಂತೆ. ಸ್ವಪ್ನದಲ್ಲಿ ಹೊಂದಿರುವ ವಿಶೇಷ ವೃತ್ತಿಗಳನ್ನೂ ಚಿಚ್ಛಕ್ತಿಯಲ್ಲಿ ಹೊಂದಿರುವ ವಿಶೇಷ ಲಕ್ಷಣಗಳನ್ನೂ ಹೊಂದಿರುವ, ಗುಪ್ತಯೋಗಿನಿ ಎಂದು ಕರೆಯಲ್ಪಡುವ ಚಕ್ರದ ಅಧಿದೇವರೆ ಈ ಆವರಣದಲ್ಲಿ ಪೂಜಿಸಲ್ಪಡುತ್ತಾಳೆ. ನಾವು ನಮ್ಮ ಸೂಕ್ಷ್ಮ ಶರೀರದಲ್ಲಿ ಹೊಂದುವ ಎಲ್ಲಾ ಅನುಭವಗಳನ್ನೂ ಈ ದ್ವಿತೀಯ ಆವರಣ ಸೂಚಿಸುತ್ತದೆ. ಇದರಲ್ಲಿ ಸೂಚಿಸಿರುವ ಹದಿನಾರು ದಳಗಳೆಂದರೆ ಐದು ಪ್ರಾಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ ಮತ್ತು ಒಂದು ಮನಸ್ಸು..... ಎರಡನೆಯ ಆವರಣ ಕೃತಿಯ ಸಾಹಿತ್ಯ ಈ ರೀತಿ ಇದೆ .......

ಪಲ್ಲವಿ

ಕಮಲಾಂಬಾ
ಭಜರೇ ರೇ ಮಾನಸ..
ಕಲ್ಪಿತ ಮಾಯಾಕಾರ್ಯಂತ್ಯಜರೇ... ||

ಅನುಪಲ್ಲವಿ


ಕಮಲಾ ವಾಣಿ ಸೇವಿತಪಾರ್ಶ್ವಾಂ...
ಕಂಬುಜಗ್ರೀವಾಂ ನತದೇವಾಂ.... ||

ಮಧ್ಯಮಕಾಲದ ಸಾಹಿತ್ಯ

ಕಮಲಾಪುರಸದನಾಂ ಮೃದುಗದನಾಂ....
ಕಮನೀಯ ರದನಾಂ ಕಮಲವದನಾಂ.....||


ಚರಣ

ಸರ್ವಾಶಾಪರಿಪೂರಕ ಚಕ್ರಸ್ವಾಮಿನೀಂ.. ಪರಮಶಿವ ಕಾಮಿನೀಂ..
ದೂರ್ವಾಸಾರ್ಚಿತ ಗುಪ್ತ ಯೋಗಿನೀಂ... ದು:ಖ ಧ್ವಂಸಿನೀಂ ಹಂಸಿನೀಂ...
ನಿರ್ವಾಣ ನಿಜಸುಖ ಪ್ರದಾಯಿನೀಂ... ನಿತ್ಯ ಕಲ್ಯಾಣೀಂ ಕಾತ್ಯಾಯಿನೀಂ..
ಶರ್ವಾಣೀಂ ಮಧುಪ ವಿಜಯ ವೇಣೀಂ... ಸದ್ಗುರು ಗುಹ ಜನನೀಂ.. ನಿರಂಜನೀಂ.. ||

ಮಧ್ಯಮಕಾಲದ ಸಾಹಿತ್ಯ


ಗರ್ವಿತ ಭಂಡಾಸುರ ಭಂಜನೀಂ.. ಕಾಮಾಕರ್ಷಿಣ್ಯಾದಿ ರಂಜನೀಂ...
ನಿರ್ವಿಶೇ ಚೈತನ್ಯರೂಪಿಣೀಂ.. ಉರ್ವಿತತ್ವಾದಿ ಸ್ವರೂಪಿಣೀಂ... ||

ಈ ಕೃತಿಯಲ್ಲಿ ದೀಕ್ಷಿತರು ಮನಸ್ಸನ್ನು ಕುರಿತು ಹೇಳುತ್ತಾರೆ... ಎಲೆ ಮನವೇ ನೀನು ಕಲ್ಪಿಸಿಕೊಂಡಿರುವ ಮಾಯಾ, ಮೋಹವನ್ನೆಲ್ಲಾ ತ್ಯಜಿಸಿ, ಕಮಲಾಂಬಿಕೆಯನ್ನು ಭಜಿಸು....... ಮುಂದುವರೆಯುತ್ತಾ ಅನುಪಲ್ಲವಿಯಲ್ಲಿ ಲಕ್ಷ್ಮೀ ಸರಸ್ವತಿಯರಿಂದ ಸೇವಿಸಲ್ಪಡುವವಳೂ, ಅಂದವಾದ ದಂತಪಂಕ್ತಿಯುಳ್ಳವಳೂ, ಶಂಖುವಿನಂತಹ ಸುಂದರ ಕುತ್ತಿಗೆಯುಳ್ಳವಳೂ, ದೇವತೆಗಳೆಲ್ಲರಿಂದಲೂ ನಮಸ್ಕರಿಸಲ್ಪಡುವವಳೂ, ಕಮಲಾಪುರದಲ್ಲಿ ನೆಲೆಸಿರುವವಳೂ ಆದ ಕಮಲಾಂಬಿಕೆಯನ್ನು ಓ ಮನಸೇ... ನೀನು ಮನಸಾರ ಪ್ರಾರ್ಥಿಸು... ಎನ್ನುತ್ತಾರೆ.

ಚರಣದಲ್ಲಿ ಮುಂದುವರೆಯುತ್ತಾ ದೀಕ್ಷಿತರು ದೇವಿಯನ್ನು ಅವಳ ಶಕ್ತಿಗಳನ್ನೂ ಅತ್ಯಂತ ಸುಂದರವಾಗಿ ಸ್ತುತಿಸುತ್ತಾರೆ. ಇಲ್ಲಿ ಮೊದಲೇ ಹೇಳಿದಂತೆ ಸರ್ವಾಶಾಪರಿಪೂರಕ ಚಕ್ರದಲ್ಲಿ ಬರುವ ೧೬ ಶಕ್ತಿಗಳು ಅಂದರೆ ೧) ಕಾಮಾಕರ್ಷಿಣಿ ೨)ಬುಧ್ಯಾಕರ್ಷಿಣಿ ೩)ಅಹಂಕಾರಾಕರ್ಷಿಣಿ ೪)ಶಬ್ದಾಕರ್ಷಿಣಿ ೫)ಸ್ಪರ್ಶಾಕರ್ಶಿಣಿ ೬)ರೂಪಾಕರ್ಷಿಣಿ ೭)ರಸಾಕರ್ಷಿಣಿ ೮)ಗಂಧಾಕರ್ಷಿಣಿ ೯)ಚಿತ್ತಾಕರ್ಷಿಣಿ ೧೦) ಧೈರ್ಯಾಕರ್ಷಿಣಿ ೧೧)ಸ್ಥೈರ್ಯಾಕರ್ಷಿಣಿ ೧೨)ನಾಮಾಕರ್ಷಿಣಿ ೧೩)ಬೀಜಾಕರ್ಷಿಣಿ ೧೪)ಆತ್ಮಾಕರ್ಷಿಣಿ ೧೫)ಅಮೃತಾಕರ್ಷಿಣಿ ೧೬)ಶರೀರಾಕರ್ಷಿಣಿ... ಎಲ್ಲವನ್ನೂ ಸೇರಿಸಿ, ಈ ಚಕ್ರದ ಸ್ವಾಮಿನೀಂ.... ಅಧಿದೇವತೆಯೂ, ಪರಶಿವನ ಪತ್ನಿಯೂ, ದೂರ್ವಾಸರಿಂದ ಪೂಜಿಸಲ್ಪಡುವವಳೂ, ಗುಪ್ತಯೋಗಿನಿಯೂ, ಸರ್ವಾರ್ಥಗಳನ್ನೂ ಕೊಡುವವಳೂ, ದು:ಖವನ್ನು ಧ್ವಂಸ ಮಾಡುವವಳೂ, ಹಂಸಸ್ವರೂಪಿಣಿಯೂ, ಕಾತ್ಯಾಯಿನಿಯೆಂದು ಕರೆಯಲ್ಪಡುವವಳೂ, ಮೋಕ್ಷ ಪ್ರಧಾನ ಮಾಡುವವಳೂ, ಆನಂದ ಸ್ವರೂಪಿಯಾದವಳೂ, ಗುರುಗುಹನ ಜನನಿಯೂ, ಮಾಯಾರಹಿತಳೂ, ಗರ್ವದಿಂದ ಕೊಬ್ಬಿದ್ದ ಭಂಡಾಸುರನನ್ನು ವಧಿಸಿದವಳೂ, ಚೈತನ್ಯ ಸ್ವರೂಪಳೂ, ಪಂಚಭೂತ ಸ್ವರೂಪಳೂ ಆದ ಶ್ರೀ ದೇವಿ ಕಮಲಾಂಬಿಕೆಯನ್ನು ಧ್ಯಾನಿಸು... ಆರಾಧಿಸು... ಓ ಮನಸೇ....

Tuesday, November 17, 2009

ದೂರವಾಣಿ...... ಟ್ರೀಣ್.... ಟ್ರೀಣ್...... ೨

ಆ ದಿನ ನಿಮಗೆ ನಮ್ಮ ಮನೆಗೆ ದೂರವಾಣಿಯ ಆಗಮನ ಮತ್ತು ಅದರ ಸಂಭ್ರಮದ ಬಗ್ಗೆ ಹೇಳಿದ್ದೆ... ಈಗ ಅದರಿಂದಾಗುವ ಕಿರಿಕಿರಿಗಳೂ ಮತ್ತು ತೊಂದರೆಗಳ ಬಗ್ಗೆ ಹೇಳ್ತೀನಿ.... ಇದು ನನ್ನ ಸ್ವಂತ ಅನುಭವ... ನಿಮ್ಮ ಅನುಭವಗಳು ಬೇರೆಯೂ ಇರಬಹುದು.... ಈಗ ಸಧ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಕಿರಿಕಿರಿ ಮಾಡುತ್ತಿರುವ ಕರೆಗಳು ಎಂದರೆ ಎರಡು ಥರದ್ದು :

೧) ಮೊದಲನೆಯದು ವಿಳಾಸ ಬದಲಾದಾಗ ನಮಗೆ ಹೊಸದಾಗಿ ಸಿಗುವ ದೂರವಾಣಿ ಸಂಖ್ಯೆ ಹೊಚ್ಚ್ ಹೊಸದಲ್ಲದೇ, ಇದಕ್ಕೆ ಮುಂಚೆ ಬೇರೆ ಯಾರ ಹೆಸರಿನಲ್ಲೋ ಇದ್ದದ್ದು... ಅಕಸ್ಮಾತ್ ಆ ವ್ಯಕ್ತಿ ಏನಾದರೂ ಐಸಿಐಸಿಐ ಅಥವಾ ಸಿಟಿ ಬ್ಯಾಂಕ್ ನಂತಹ ಕಡೆ ಸಾಲ ತೆಗೆದುಕೊಂಡಿದ್ದರಂತೂ..., ನಮ್ಮ (ಮನೆಯಲ್ಲಿರುವ ಮಡದಿಯರ) ಪಾಡು ಆ ದೇವರಿಗೇ ಪ್ರೀತಿ !! ನೀವು ಕರೆ ಮಾಡಿದ ವ್ಯಕ್ತಿಯ ದೂರವಾಣಿ ಈಗ ಹೊಸದಾಗಿ ನಮಗೆ ಕೊಡಲ್ಪಟ್ಟಿದೆ.. ಹಿಂದಿನ ಗ್ರಾಹಕರು ಯಾರೆಂದು ನಮಗೆ ಗೊತ್ತಿಲ್ಲವೆಂದು ಎಲ್ಲಾ (ಗೊತ್ತಿರುವ) ಭಾಷೆಗಳಲ್ಲಿ ವಿವರಿಸಿದರೂ.. ಬೆಂಬಿಡದ ಭೂತಗಳಂತೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಕರೆ ಮಾಡಿ... ಮಾಡಿ... ಸುಸ್ತು ಮಾಡಿಸಿಬಿಡುವುದು....

೨) ಎರಡನೆಯದು ಸ್ವಲ್ಪ ವಿಭಿನ್ನ ರೂಪ.. ಏನಪ್ಪಾಂದರೆ.. ದೂರವಾಣಿಯ ವಿಳಾಸ ಹಾಗೂ ಸಂಖ್ಯೆಗಳ ಪುಸ್ತಕ ಎದುರಿಗಿಟ್ಟುಕೊಂಡು, ಎಲ್ಲಾ ಮನೆಯ ಸಂಖ್ಯೆಗಳಿಗೂ ಕರೆ ಮಾಡಿ.. ಅತಿ ವಿನಯತೆ ಪ್ರಕಟಿಸುತ್ತ.. "ನಮಸ್ಕಾರ ಮೇಡಮ್... Mr... ಇದ್ದಾರ ಎಂದು ಕೇಳುವುದು... ನಾವು ಮಧ್ಯಾಹ್ನ ೧೨ ಘಂಟೆಗೆ ಅವರು ಕಛೇರಿಯಲ್ಲಿ ಇರ್ತಾರಲ್ವೇನ್ರಿ ಎಂದರೆ... ಹ್ಹೆ ಹ್ಹೆ ಹ್ಹೆ.. ಎಂದು ದೇಶಾವರಿ ನಗೆ ಸಶಬ್ದವಾಗಿ ನಗುತ್ತಾ.. ನಾನು "...." ಫೈನಾನ್ಸ್ ನಿಂದ ಕರೆ ಮಾಡುತ್ತಿದ್ದೇನೆ, ನಿಮಗೆ ಸಾಲ ಏನಾದರೂ ಬೇಕಿತ್ತಾ ಅಂತಾನೋ... ಇಲ್ಲ "....." ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ವಿಭಾಗದಿಂದ.. ನಮ್ಮ ಹೊಸ ಪ್ರಾಡಕ್ಟ್ ಬಂದಿದೆ, ನಿಮಗೇನಾದರೂ ಆಸಕ್ತಿಯಿದೆಯೇ ಎಂದೋ ಕೇಳುತ್ತಾ ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವಾಗ ಆಗುವ ಕಿರಿಕಿರಿ.... ಆಹಾ.... ಅನುಭವಿಸಿದವರಿಗೇ ಗೊತ್ತು...

ಈ ತರಹದ ಕರೆಗಳು ದಿನಕ್ಕೆ ೨ - ೩ ವಿವಿಧ ಕಡೆಗಳಿಂದ ಬರುತ್ತವೆ ಮತ್ತು ನಾಳೆ ಮತ್ತದೇ ಸಮಯಕ್ಕೆ ಸರಿಯಾಗಿ, ಅದೇ ಕಛೇರಿಯಿಂದ, ಆದರೆ ಬೇರೆ ಹುಡುಗನೋ / ಹುಡುಗಿಯೋ ಮಾಡಿದಾಗ... ಸಿಟ್ಟು ತನ್ನೆಲ್ಲಾ ಅಣೆಕಟ್ಟುಗಳನ್ನೂ ಒಡೆದುಕೊಂಡು ಭೋರ್ಗರೆಯುತ್ತೆ..... ಆದರೂ ತಾಳ್ಮೆಯಿಂದ "ನಿನ್ನೆ ತಾನೇ ನಿಮ್ಮಲ್ಲಿಂದ ಯಾರೋ ಹುಡುಗಿ ಮಾಡಿದ್ದರು, ಆಸಕ್ತಿಯಿಲ್ಲ ಎಂದಿದ್ದೆನಲ್ಲಾ"... ಎಂದಿನ್ನೂ ಮಾತು ಪೂರೈಸುವ ಮುನ್ನವೇ ’ದಡ್’ ಎಂದು ನಮ್ಮ ಕಿವಿಯೇ ತೂತಾಗ ಬೇಕು ಹಾಗೆ, ಏನೋ ನಾವೇ ಅವರನ್ನು ಕೆಲಸದ ಮಧ್ಯೆ ಮಾತಾಡಿಸಿ, ತೊಂದರೆ ಉಂಟುಮಾಡಿದೆವೆಂಬಂತೆ... ದೂರವಾಣಿಯನ್ನು ಕುಕ್ಕುವಾಗ... ನಮ್ಮ ಗತಿ ನಿಜವಾಗಲೂ ಆ ಪರಮಾತ್ಮನಿಗೇ ಪ್ರೀತಿಯಾಗಬೇಕು...

ಇನ್ನೊಂದು ಮೂರನೆಯ ಥರದ ಕಿರಿಕಿರಿ ಮೇಲಿನ ಎರಡಲ್ಲದ, ಬೇರೆಯದೇ ರೀತಿಯದು.... ಇದು ಸಂಚಾರಿ ದೂರವಾಣಿಗೆ ಬರುವ ವಿವಿಧ ಸೌಲಭ್ಯಗಳ ಉಚಿತ ಮಾಹಿತಿ ಕರೆಗಳು.... ಸರಿಯಾಗಿ ಮಧ್ಯಾಹ್ನ ೩ ರಿಂದ ೪ ರೊಳಗೆ, ಇಡೀ ಮನೆಯೇ ನಿಶ್ಯಬ್ದವಾಗಿರುವಾಗ, ಅತ್ಯಂತ ಆಸಕ್ತಿಯಿಂದ ಏನನ್ನಾದರೂ ಓದುತ್ತಿರುವಾಗ ಇದ್ದಕ್ಕಿದ್ದಂತೆ ಶುರುವಾಗುವ ಈ ಭಾಜಾ ಭಜಂತ್ರಿ ಬೆಚ್ಚಿ ಬೀಳುವಂತೆ ಮಾಡುವುದಂತೂ ಖಂಡಿತ.... ಈ ರೀತಿ ಗ್ರಾಹಕರಿಗೆ ಕಿರಿಕಿರಿಯಾಗುವಂತಹ ಸಮಯದಲ್ಲಿ, ಅವರ ಅವಶ್ಯಕತೆ ತಿಳಿದುಕೊಳ್ಳದೆ, ಎಲ್ಲಾ ಸಂಖ್ಯೆಗಳಿಗೂ ಮಾಡಲ್ಪಡುವ ಈ ಕರೆಗಳು ನಿಜಕ್ಕೂ ಬೇಕಾ ಅನ್ನಿಸುತ್ತದೆ....

ಎಲ್ಲಕ್ಕಿಂತ ಹೆಚ್ಚಾಗಿ ನನಗಾದ ಒಂದು ಕಹಿ ಅನುಭವ... ೧೯೯೩ ರಲ್ಲಿ ನಾವು ಕಲ್ಕತ್ತಾದಲ್ಲಿದ್ದಾಗ, ನನ್ನವರು ಇದ್ದ ಕೆಲಸ ಬಿಟ್ಟು ಬೇರೊಂದು ಹೊಸ ಕೆಲಸಕ್ಕಾಗಿ... ರಷ್ಯಾಗೆ ಹೋಗಿದ್ದರು. ಅವರು ಹೊರಟ ಮಾರನೇ ದಿನದಿಂದಲೇ ಶುರುವಾಯಿತು ನೋಡಿ ನನಗೆ ಎಲ್ಲಾ ಗ್ರಹಗಳದ್ದೂ ಕಾಟ ಒಟ್ಟಿಗೇ... ದಿನವೂ ನಾನು ಕಛೇರಿಯಿಂದ ಮನೆಗೆ ಬಂದು ಒಳಗೆ ಕಾಲಿಟ್ಟ ಕ್ಷಣ ದೂರವಾಣಿ ಟ್ರೀಣ್........ ಟ್ರೀಣ್....... ಯಾರೆಂದು ಎತ್ತಿದ ತಕ್ಷಣ ಆ ಕಡೆಯಿಂದ ಬರೀ ಅಸಹ್ಯವಾದ... ಅಶ್ಲೀಲವಾದ.... ಅನಾಗರಿಕವಾದ ಮಾತುಗಳು ತೂರಿ ಬರುತ್ತಿದ್ದವು.... ಜೊತೆಗೆ ಕೆಟ್ಟ ಕೊಳಕ ಪೋಲಿ ಹಾಡುಗಳ ಭಜನೆ ಬೇರೆ.... ಎಷ್ಟು ಬೆದರಿಸಿದರೂ, ಉಗಿದರೂ ನಿಲ್ಲದೆ ನನ್ನನ್ನು ತುಂಬಾ ಚಿಂತೆಗೊಳಪಡಿಸಿತ್ತು... ಇದು ನನ್ನ ಪ್ರಕಾರ ಯಾರೋ ಚೆನ್ನಾಗಿ ಪರಿಚಯವಿದ್ದವರದ್ದೇ ಕೆಲಸ... ಆದರೂ ಆ ಕಹಿ ಈಗ ನೆನಪಾದರೂ ಹಿಂಸೆಯಾಗುತ್ತೆ... ನಾನೇನಾದರೂ ಕರೆ ಸ್ವೀಕರಿಸದಿದ್ದರೆ... ಮತ್ತೆ ಮತ್ತೆ ಮಾಡುತ್ತಲೇ ಇರುತ್ತಿದ್ದ ಆ ರಾಕ್ಷಸ. ಆಗ ಇನ್ನೂ ನಮ್ಮ ಹತ್ತಿರ ಕರೆ ಮಾಡಿದವರ ಸಂಖ್ಯೆ ತೋರಿಸುವ ಯಂತ್ರ ಇರಲಿಲ್ಲ..... ಕೊನೆಗೂ ಅಂತೂ ಆ ಕರೆಗಳು ಬರುವುದು ನಿಂತಾಗ ನಾನು ನೆಮ್ಮದಿಯ ನಿಟ್ಟುಸಿರಿಟ್ಟಿದ್ದೆ.....

ಈಗ ಕೆಲವು ದಿನಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಟೆಲಿವ್ಯಾಪಾರಿಗಳಿಂದ ಪಾರಾಗುವ ದಾರಿಗಳು" ಎಂದು ಕೆಲವು ಕ್ರಿಯೇಟಿವ್ (ಅದು ಅವರಿಗೆ ಮಾತ್ರ ಕ್ರಿಯೇಟಿವ್ ಅನ್ನಿಸಿರಬೇಕು, ನನಗನ್ನಿಸಲಿಲ್ಲ) ಐಡಿಯಾಗಳು ಕೊಟ್ಟಿದ್ದರು... ನೀವೆಲ್ಲಾ ನೋಡಿರಬಹುದು... ಅದನ್ನೆಲ್ಲಾ ಇಲ್ಲಿ ಬರೆಯುವ ತಾಳ್ಮೆ, ಅವಶ್ಯಕತೆ ಎರಡೂ ಇಲ್ಲ ಅನ್ನಿಸ್ತು.... ಈ ಸಲಹೆಗಳನ್ನು ಕೆಲಸವಿಲ್ಲದೆ ಕುಳಿತ ಸೋಮಾರಿ ಹೆಂಗಸರು ಬೇಕಾದರೆ ಪ್ರಯತ್ನಿಸಬಹುದೇನೋ.....

ನನಗೇಕೋ ಈಗೀಗ ಸ್ಥಿರ ಹಾಗೂ ಸಂಚಾರಿ ಎರಡೂ ದೂರವಾಣಿಗಳ ಮೇಲೆ "ಸ್ಮಶಾನ ವೈರಾಗ್ಯ" ಅಂತಾರಲ್ಲ ಅದು ಬಂದಿದೆ.... ತ್ಯಾಗ ಮಾಡಿಬಿಡಲೇ ಅಥವಾ ಕಾಶಿ-ಗಯಾಕ್ಕೆಲ್ಲಾದರೂ ಹೋಗಿ ಬಿಟ್ಟು ಬಂದು ಬಿಡಲೇ ಎಂಬ ಯೋಚನೆಯಲ್ಲಿ ಮುಳುಗಿದ್ದೇನೆ......:-)


ಸಂಪದದಲ್ಲಿ ಪ್ರಕಟವಾಗಿದೆ.. ಕೊಂಡಿ..http://www.sampada.net/article/22553#node-22553

Monday, November 16, 2009

ದೂರವಾಣಿ...... ಟ್ರೀಣ್.... ಟ್ರೀಣ್...... ೧

ಈಚಿನ ದಿನಗಳಲ್ಲಿ ಸಂಚಾರಿ ದೂರವಾಣಿ ಹಾಗೂ ಮನೆಯ ಸ್ಥಿರ ದೂರವಾಣಿ ಎರಡೂ ಏಕೋ ತುಂಬಾ ತಲೆನೋವು ಕೊಡುತ್ತಿವೆ. ಮೊದ ಮೊದಲು ನಾನು ಚಿಕ್ಕವಳಿದ್ದಾಗ, ಅಪ್ಪ ಮನೆಗೆ ದೂರವಾಣಿ ಸಂಪರ್ಕ ತೆಗೆದುಕೊಂಡಾಗ, ಅದು ಅವರಿಗೆ ಅವರ ಪತ್ರಿಕೋದ್ಯಮದ ವೃತ್ತಿಗೆ ಪೂರಕವಾಗಿ ಅತ್ಯಂತ ಅವಶ್ಯಕತೆಯಾಗಿತ್ತು. ಎಲ್ಲಾ ತುರ್ತು ವರದಿಗಳನ್ನೂ ಟೆಲಿಗ್ರಾಂ ಮೂಲಕವೇ ಕಳುಹಿಸಲಾಗುವುದಿಲ್ಲ ಮತ್ತು ಸುತ್ತ ಮುತ್ತಲ ಹಳ್ಳಿಯವರು ತಂದೆಯವರನ್ನು ಅಂಚೆ ಕಛೇರಿಯ ಮೂಲಕವಾದರೂ ತಲುಪಬಹುದೆನ್ನುವ ಮುಖ್ಯ ಉದ್ದೇಶ, ನಮ್ಮನೆಗೆ ದೂರವಾಣಿಯ ಆಗಮನಕ್ಕೆ ನಾಂದಿ ಹಾಡಿತ್ತು. ಆ ದಿನ, ನಾನು ಬಹುಶ: ೬ - ೭ ನೇ ತರಗತಿಯಲ್ಲಿದ್ದೆ..... ನಮ್ಮ ಮನೆಗೆ ದೂರವಾಣಿ ಕೇಂದ್ರದವರು ಬಂದು ಆ ಹಳೆಯ ದಪ್ಪಗೆ-ಕಪ್ಪಗೆ, ಭಾರವಾಗಿ ಇದ್ದ ಒಂದು ಅಪರೂಪದ (ನಮಗೆ ಮಾತ್ರ) ವಸ್ತು ತಂದಾಗ ಮನೆಯಲ್ಲಿ ನಮ್ಮ ಸಂಭ್ರಮ ನೋಡಬೇಕಿತ್ತು....!!!

ನಡುಮನೆಯಲ್ಲಿ ಒಳಬಂದಾಗ ಎಡಗಡೆಗೆ ಬಾಗಿಲ ಪಕ್ಕ ಖಾಲಿಯಿದ್ದ ಮೂಲೆಗೆ ಒಂದು ಎತ್ತರವಾದ ಚೌಕಾಕಾರದ ಟೇಬಲ್ ಬಂದು ಕುಳಿತಿತ್ತು. ಅದು ದಶಕಗಳ ನಂತರ ಮಿಂದು ಮಡಿಯುಟ್ಟು ಕಂಗೊಳಿಸುತ್ತಿತ್ತು. ಅದರ ಮೇಲೆ ಶೋಭೆ ಹೆಚ್ಚಿಸಲು ಅಮ್ಮ ತಾನೇ ಬಣ್ಣ ಬಣ್ಣದ ದಾರಗಳಿಂದ ಕಸೂತಿ ಮಾಡಿದ್ದ ಹಾಸು ಹಾಕಲಾಗಿತ್ತು.... ಬರಲಿರುವ ಈ ದೂರವಾಣಿ ಎಂಬ ಮಹಾರಾಜನಿಗೆ ಸಿಂಹಾಸನ ಸಿದ್ಧವಾಗಿ, ನಾವೆಲ್ಲಾ ತಾಳ್ಮೆಗೆಟ್ಟು ಚಡಪಡಿಸುವಂತಾಗಿತ್ತು.... ಕೊನೆಗೂ ಆ ವ್ಯಕ್ತಿ ನಮ್ಮ "ಕಡು ಕಪ್ಪು" ಮಹಾರಾಜನನ್ನು ಎತ್ತಿ ತಂದು ಸಿಂಹಾಸನದಲ್ಲಿ ಕೂರಿಸಿದಾಗ ನಮಗೆಲ್ಲೋ ಏನೋ ಹೆಮ್ಮೆ... ಕೋಡು, ಕಿರೀಟ ಎಲ್ಲಾ ಬಂದಿತ್ತು.... ಜೊತೆಗೆ ಜಂಭ... ದೊಡ್ಡಸ್ತಿಕೆ ಕೂಡ... ಏಕೆಂದರೆ ನಮ್ಮ ಶಾಲೆಯಲ್ಲಿ ನಮ್ಮ ಮನೆಗೇ ಮೊದಲು ದೂರವಾಣಿ ಎಂಬ ಗೋಚರ (ಅಗೋಚರ ಅಲ್ಲ) ಮಾಂತ್ರಿಕ ವಸ್ತು ಬಂದಿದ್ದು.... ಮೊದಲ ಕರೆ ದೂರವಾಣಿ ಕಛೇರಿಯಿಂದ ಬರುವುದೆಂದೂ... ಮಕ್ಕಳು (ನಾನೊಬ್ಬಳೇ ಚಿಕ್ಕವಳು) ತಲೆಹರಟೆಗಳಂತೆ ವರ್ತಿಸದೆ ಸುಮ್ಮನಿರಬೇಕೆಂಬ ಅಪ್ಪನ ತಾಕೀತು ಬೇರೆ..... ಅಂತೂ ನಾವೆಲ್ಲರೂ ’ಬೇಚೈನೀಸೆ’ ಕಾಯುತ್ತಿದ್ದ ಕ್ಷಣ ಕಳೆದು, ನಮ್ಮ ದೂರವಾಣಿ "ಟ್ರೀಣ್... ಟ್ರೀಣ್..." ಎಂಬ ಶಬ್ದ ಮಾಡಲಾರಂಭಿಸಿದಾಗ, ಅಪ್ಪನ ತಾಕೀತು, ಅಮ್ಮನ ಸುಡುನೋಟ ಎಲ್ಲಾ ಗಾಳಿಗೆ ತೂರಿ ಓಡಿದ್ದೆವು.

ಆಷ್ಟರಲ್ಲಾಗಲೇ ಅಪ್ಪ ಆ ಮಾಂತ್ರಿಕ ಮಹಾರಾಜನ ಮುಂಡದಿಂದ ರುಂಡವನ್ನು ಬೇರ್ಪಡಿಸಿ, ತಮ್ಮ ಕಿವಿಗೆ ಹಿಡಿದಿದ್ದರು ಮತ್ತು ತುಂಬಾ ಗತ್ತಿನಿಂದ "ಹಲೋ"... ಎಂದಿದ್ದರು. ಇಷ್ಟು ಹೊತ್ತಿಗಾಗಲೇ ಒಂದು ಕೈನಲ್ಲಿ ಕಾಗದ ಮತ್ತು ಪೆನ್ ರೆಡಿಯಾಗೆ ಇಟ್ಟುಕೊಂಡಿದ್ದರಿಂದ, ಅಪ್ಪ ಏನೋ ಬರೆದುಕೊಂಡರು ಮತ್ತು ಹಾಂ.. ಸರಿ ಸರಿ... ಥ್ಯಾಂಕ್ಸ್ ಎಂದು ಮತ್ತೆ ಬೇರ್ಪಟ್ಟಿದ್ದ ರುಂಡ ಮುಂಡಗಳನ್ನು ಜೋಡಿಸಿಟ್ಟರು. ಅಮ್ಮ ಮತ್ತು ನಮ್ಮನ್ನೆಲ್ಲಾ (ಕುತೂಹಲದಿಂದ ಕಣ್ಣು ಪಿಳಿಪಿಳಿ ಬಿಡುತ್ತಾ ನಿಂತಿದ್ದೆವಲ್ಲಾ) ಕರೆದು ಇನ್ನು ಮೇಲೆ ಇದು ನಮ್ಮ ದೂರವಾಣಿ ಸಂಖ್ಯೆ... ಯಾರಾದರೂ ಕೇಳಿದರೆ ಹೇಳಿ ಎಂದರು.... ನಮ್ಮ ಕತ್ತುಗಳು ಸುಮ್ಮನೆ ’ಸರಿ’ ಎಂಬಂತೆ ಆಡಿದ್ದವು. ನಾವು ನಮ್ಮದೇ ಸಂಖ್ಯೆ ಮರೆತು ಬಿಡಬಹುದೆಂದು, ಅಪ್ಪ ಮುಂದಾಲೋಚಿಸಿ ಅದನ್ನು ಸಣ್ಣ ಚೀಟಿಯಲ್ಲಿ ಬರೆದು ದೂರವಾಣಿ ಯಂತ್ರದ ಮೇಲೆ ಅಂಟಿಸಿ ಬಿಟ್ಟರು. ಆಗ ಎರಡೇ ಸಂಖ್ಯೆಗಳಿದ್ದವು. ಅಪ್ಪ ಹೊರಗೆ ಹೊರಟ ನಂತರ, ನಾವೆಲ್ಲಾ ರುಂಡ-ಮುಂಡಗಳನ್ನು ಬೇರ್ಪಡಿಸಿ, ಕಿವಿಗಿಟ್ಟು ನೋಡಿದ್ದೇ.. ನೋಡಿದ್ದು.. ಕಿವಿಯಲ್ಲಿ ಕೇಳುವ ಟರ್.... ಶಬ್ದ ನಮ್ಮನ್ನು ರೋಮಾಂಚನಗೊಳಿಸಿದ್ದಂತೂ ನಿಜ.... ಅಮ್ಮ ತಾನೇ ಹಾಕಿದ ಸ್ವಲ್ಪ ಚಿಕ್ಕದಾದ ಕಸೂತಿಯ ಇನ್ನೊಂದು ಹಾಸು ತಂದು, ಆ ಮಾಯಾ ಯಂತ್ರದ ಧೂಳೆಲ್ಲಾ ಒರೆಸಿ ಮುಚ್ಚಿಬಿಟ್ಟು, ನಮ್ಮೆಡೆ ’ಉರಿನೋಟ’ ರವಾನಿಸಿದಾಗಷ್ಟೇ ನಾವು ಅಲ್ಲಿಂದ ಕಾಲ್ಕಿತ್ತಿದ್ದು....

ಅಲ್ಲಿಂದ ಪ್ರತೀ ಸಾರಿ ದೂರವಾಣಿಯ ಘಂಟೆ ಬಾರಿಸಿದಾಗಲೂ, ಅದೇನು ಸಂಭ್ರಮ, ಅದೇನು ಕಾತುರ... ಅಬ್ಬಾ ! ನಮಗೆ ಅದೊಂದು ಹಬ್ಬದ ಸಡಗರವೇ ಆಗಿಹೋಗಿತ್ತು..... ಪರಿಚಿತರು, ನೆಂಟರೂ ಎಲ್ಲರೂ ಬಂದು ಅಪ್ಪನನ್ನು ನೋಡಿ ಇವರೇ ಸ್ವಲ್ಪ ಎಡವಟ್ಟಾಗಿಬಿಟ್ಟಿದೆ... ಈ ಇಂಥವರಿಗೆ ಒಂದು ಫೋನ್ ಮಾಡಿಕೊಡೀಪ್ಪ... ಮಾತಾಡಬೇಕು... ಇದಕ್ಕೆಲ್ಲಾ ನೀವೇ ಸರಿ ನೋಡಿ ಎಂದು ಅಪ್ಪನನ್ನು ಅಟ್ಟ ಹತ್ತಿಸಿ ಬಿಟ್ಟಿ ಕರೆಯೂ ಮಾಡಿ, ಅಮ್ಮನ ಕೈಯ ಕಾಫಿಯೂ ಕುಡಿದು ಹೋದವರೆಷ್ಟು ಜನರೋ.....

ದೂರದೂರುಗಳಿಗೆ ಮತ್ತು ವಿದೇಶಗಳಿಗೆ ಕರೆಗಳನ್ನು ನೋಂದಣಿ ಮಾಡಿಸಿ, ರಾತ್ರಿ ೧೨ ಘಂಟೆಯಾದರೂ, ತೂಕಡಿಸುತ್ತಾ ಕಾಯುತ್ತಿದ್ದೆವು... ಅದೆಲ್ಲಾ ನಮಗೆಂದೂ ’ಕಾಟ’ ಎಂದಾಗಲೀ ಅಥವಾ ತೊಂದರೆಯೆಂದಾಗಲೀ ಅನ್ನಿಸಿರಲೇ ಇಲ್ಲ... ಇದೆಲ್ಲಾ ಸಂಭ್ರಮ, ಸಡಗರ, ಅನುಕೂಲ ಅಂದು.....

ಆದರೆ ಇಂದು ದೂರವಾಣಿ ಜಗತ್ತಲ್ಲಿ ಅತ್ಯಂತ ನವೀನ ಆವಿಷ್ಕಾಗಳಾಗಿವೆ.... ಸಂಚಾರಿ ದೂರವಾಣಿ, ಬೇಕೆಂದ ಕಡೆ ಎತ್ತಿಕೊಂಡು ಹೋಗಿ ಕುಳಿತು ಮಾತಾಡ ಬಲ್ಲ ದೂರವಾಣಿ ಎಲ್ಲಾ ಬಂದು ಹಳೆಯದಾಗಿಹೋಗಿವೆ.... ಆ ದಿನಗಳಲ್ಲಿ ತಪ್ಪಿ ಒಮ್ಮೊಮ್ಮೆ ಬರುತ್ತಿದ್ದ "ತಪ್ಪು ಸಂಖ್ಯೆ"ಗಳ ಕರೆ ಕೂಡ ಒಂಥರಾ ಖುಷಿನೇ ಕೊಡ್ತಿತ್ತು... ಆದರೆ ಈಗ ಸಂಚಾರಿ ದೂರವಾಣಿಯಲ್ಲೂ ಬರುವ ತಪ್ಪು ಸಂಖ್ಯೆಗಳ ಕರೆಗಳು ಒಮ್ಮೊಮ್ಮೆ ನೆಮ್ಮದೆ ಕೆಡಿಸುವುದಂತೂ ನಿಜ.

ನಮ್ಮ ಮನೆಗೆ ದೂರವಾಣಿ ಬಂದ ಹೊಸತು... ಮೊದಲ ರಾಂಗ್ ನಂಬರ್ ಕರೆ ಬಂದಾಗ... ಕರೆ ಮಾಡಿದವನು ಯಾವುದೋ ಹೋಟೆಲ್ ಎಂದು ಸ್ನಾನಕ್ಕೆ ಬಿಸಿನೀರು ಬೇಕಿತ್ತು ಎಂದಾಗ ನನ್ನ ಅಕ್ಕ ಹೆದರಿ ಇಟ್ಟುಬಿಟ್ಟಿದ್ದಳು... ಆದರೆ ಅದೇ ಕರೆ ೨ - ೩ ನೇ ಸಲ ಬಂದಾಗ... ಧೈರ್ಯದಿಂದ ’ನಮ್ಮನೆ ಹಂಡೇಲಿ ಕುದೀತಿದೆ... ತಲೆ ಮೇಲೆ ಸುರೀತೀನಿ ಬಾರೋ’.... ಎಂದಿದ್ದಳು....

ಮತ್ತೊಂದು ದಿನ... ಯಾರೋ ಕರೆ ಮಾಡಿ.... ಮಸಾಲೆ ದೋಸೆ ಪಾರ್ಸೆಲ್ ಕಳಿಸಿ ಎಂದಾಗ... ನಾನು ಇದು .....ಇಂಥವರ ಮನೆ, ಇಲ್ಲಿಗೂ ಮೂರು ದೋಸೆ ಪಾರ್ಸೆಲ್ ನಿಮ್ಮ ಲೆಕ್ಕದಲ್ಲೇ ಕಳಿಸಿ ಎಂದಿದ್ದೆ....

ಹೀಗೆ ನಮ್ಮ ಮನೆಯಲ್ಲಿ ಮೊದಲ ಬಾರಿಗೆ ಸ್ಥಾಪಿತಗೊಂಡ ಸ್ಥಿರ ದೂರವಾಣಿಯ ಸಂಪರ್ಕ ಹಲವು ವಿನೋದ ಪ್ರಸಂಗಗಳಿಗೆ ದಾರಿ ಮಾಡಿಕೊಟ್ಟಿತ್ತು....

ಮತ್ತೆ ನಾಳೆ ನಿಮಗೆ ಇದರಿಂದಾಗಿ ಅನುಭವಿಸಿದ/ಇನ್ನೂ ಅನುಭವಿಸುತ್ತಿರುವ ಕಿರಿಕಿರಿಗಳನ್ನು ತಿಳಿಸುತ್ತೇನೆ.... ಅಲ್ಲೀವರೆಗೂ ನಿಮ್ಮ ದೂರವಾಣಿ ಟ್ರೀಣ್... ಟ್ರೀಣ್.... ಅನ್ನುತ್ತಿರಲಿ......

ಸಂಪದದಲ್ಲಿ ಇದು ಪ್ರಕಟವಾಗಿದೆ ಈ ಕೆಳಗಿನ ಕೊಂಡಿಯಲ್ಲಿ..
http://www.sampada.net/article/22493

Wednesday, November 11, 2009

ಪುಸ್ತಕ ಪರಿಚಯ...... ೧

ದಿವಂಗತ ತ್ರಿವೇಣಿಯವರು ಬದುಕಿ - ಬಾಳಿದ ಕಾಲ ಅಲ್ಪವಾದರೂ, ಅವರು ಈ ದಿನಕ್ಕೂ ನಮ್ಮೊಳಗೆ ತಮ್ಮ ಕೃತಿಗಳ ಮೂಲಕ ಜೀವಂತವಾಗಿದ್ದಾರೆ. ಅವರ ಒಂದೊಂದು ಕಾದಂಬರಿಯೂ ಸಂಗ್ರಹ ಯೋಗ್ಯವಾಗಿದೆ. ಕಥಾ ಸಂಕಲನದ ಪ್ರತಿಯೊಂದು ಸಣ್ಣ ಕಥೆಯೂ ಅತ್ಯಂತ ನಿಪುಣತೆಯಿಂದ ಹೆಣೆದು ನಮ್ಮೆದುರಿಗಿಟ್ಟ ಶ್ರೇಷ್ಠ ಕಥೆಯಾಗಿದೆ. ಆ ದಿನದಲ್ಲೇ ಅವರಿಗಿದ್ದ ಮುನ್ನೋಟ, ವಿಷಯ ನಿರೂಪಣೆಯ ನೈಪುಣ್ಯ, ಇಂದಿಗೂ ನಮ್ಮನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.

ಈ ಕಥಾ ಸಂಕಲನ "ಸಮಸ್ಯೆಯ ಮಗು" ಬಹಳ ಹಿಂದೆ ಓದಿದ್ದೆ. ಈಗ ಮತ್ತೆ ನನ್ನ ಕೈಗೆ ಸಿಕ್ಕ ಪುಸ್ತಕ ಪ್ರತಿಯೊಂದು ಕಥೆಯನ್ನೂ ಹೊಸ ಆಯಾಮದಿಂದ ನೋಡುವಂತೆ ಮಾಡಿದೆ. ಮೊದಲನೆ ಸಲ ನಾನು ಓದಿದಾಗ ವಯಸ್ಸಿನ ಪ್ರಭಾವ ಇರಬಹುದು, ಇಷ್ಟೊಂದು ಗಂಭೀರ ಪರಿಣಾಮ ಬೀರಿರಲಿಲ್ಲ. ಸುಮ್ಮನೆ ಕಥೆ ಎಂಬಂತೆ ಓದಿದ್ದೆ ಅಷ್ಟೆ. ಆದರೆ ಈಗ ಓದುತ್ತಿದ್ದಾಗ ಪ್ರತಿಯೊಂದು ಕಥೆಯ ಜೊತೆಗೂ ನನ್ನನ್ನು ನಾನು ಗುರುತಿಸಿಕೊಳ್ಳಲಾಗುತ್ತಿದೆ. ಚಿಂತಿಸುವ ರೀತಿ ಬದಲಾಗಿದೆ. ಆದರೆ ತ್ರಿವೇಣಿಯವರ ದೂರದೃಷ್ಟಿ ನನ್ನನ್ನು ಅಚ್ಚರಿಪಡಿಸಿದೆ. ನನಗನ್ನಿಸಿದ ಕೆಲವು ಸಂಗತಿಗಳು ನಿಮಗಾಗಿ :..............

೧. ಮೊದಲನೆಯ ಕಥೆಯೇ ಪುಸ್ತಕದ ಶೀರ್ಷಿಕೆ "ಸಮಸ್ಯೆಯ ಮಗು". ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿದ್ದರೂ ಒಬ್ಬರಿಂದೊಬ್ಬರಿಗೆ ನೋವಾಗುವುದಾಗಲೀ, ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಾಗಲೀ ಆಗುತ್ತಿರಲಿಲ್ಲ. ಆದರೆ ಈಗ ಮೊದಲ ಮಗುವಿನ ನಂತರ ಎರಡನೆಯ ಮಗು ಹುಟ್ಟಿದಾಗ, ಮೊದಲ ಮಗುವಿಗೆ ತನ್ನನ್ನು ಅಪ್ಪ-ಅಮ್ಮ ಕಡೆಗಣಿಸುತ್ತಿದ್ದಾರೆಂಬ ಭಾವನೆ ಸಹಜವಾಗಿ ಬಂದು ಸಮಸ್ಯೆ ಉಂಟು ಮಾಡುತ್ತದೆ. ಈ ಕಥೆಯಲ್ಲಿ ತ್ರಿವೇಣಿಯವರು ಆಗಿನ ದಿನಗಳಲ್ಲೇ ಈ ಸಮಸ್ಯೆಯನ್ನು ತಮ್ಮ ದೂರ ದೃಷ್ಟಿಯ ಚಿಂತನೆಗಳಿಂದ ನೋಡಬಲ್ಲವರಾಗಿದ್ದರು.

ಇಲ್ಲಿ ಕಥಾನಾಯಕ ನಮ್ಮ ಪುಟ್ಟ ನಾಗೇಂದ್ರ ಅದೇ ರೀತಿಯ ಮನೋ ವೇದನೆಗೊಳಪಡುತ್ತಾನೆ. ತನ್ನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲಿ, ತನ್ನ ಕಡೆ ಗಮನ ಕೊಡಲಿ ಎಂಬ ಒಂದೇ ಕಾರಣಕ್ಕಾಗಿ ಮನೆ ಬಿಟ್ಟು ಓಡಿ ಹೋಗುತ್ತಾನೆ. ಆದರೆ ಅದೃಷ್ಟವಶಾತ್ ಒಬ್ಬ ಸಹೃದಯರ ಮೂಲಕ ಮನೆ ತಲುಪುತ್ತಾನೆ. ಅಲ್ಲಿಯ ವಿದ್ಯಾಮಾನಗಳನ್ನೂ, ಆ ಹುಡುಗನ ತಂದೆ ತಾಯಿಯರನ್ನೂ ಭೇಟಿ ಮಾಡಿದ ನಂತರ, ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು, ತಂದೆ ತಾಯಿಗೆ ತಿಳಿ ಹೇಳುತ್ತಾರೆ. ಇಲ್ಲಿ ತಾಯ್ತಂದೆಯರ ಎಲ್ಲಾ ಪ್ರೀತಿಗೂ ಹಕ್ಕುದಾರನಾಗಿ, ಸರ್ವಾಧಿಕಾರಿಯಂತಿದ್ದ ನಾಗೇಂದ್ರ, ತಮ್ಮನ ಆಗಮನದಿಂದ ಕಡೆಗಣಿಸಲ್ಪಡುತ್ತಾನೆ. ಇದರಿಂದ ನೊಂದ ನಾಗೇಂದ್ರ ತನ್ನ ಸಿಟ್ಟು, ವೇದನೆಯೆಲ್ಲವನ್ನೂ ಏನೂ ಅರಿಯದ ಹಸುಳೆಯನ್ನು ಹಿಂಸಿಸುವುದರಿಂದಲೋ, ಮನೆ ಬಿಟ್ಟು ಹೋಗಿ ತಾಯ್ತಂದೆಯರನ್ನು ಆತಂಕಪಡಿಸುವುದರಿಂದಲೋ ವ್ಯಕ್ತ ಪಡಿಸುತ್ತಿರುತ್ತಾನೆ.

ಕೊನೆಗೆ ಎರಡು ತಿಂಗಳ ನಂತರ ನಾಗೇಂದ್ರನನ್ನು ಕಾಣಲು ಹೋದ ಆ ಸಹೃದಯರಿಗೆ ಅಚ್ಚರಿಯಾಗುವಂತೆ, ಮಗುವನ್ನು ಆಡಿಸುತ್ತಿರುವ ನಾಗೇಂದ್ರ ಕಾಣಸಿಗುತ್ತಾನೆ. ತಂದೆ ತಾಯಿಯರ ಪ್ರೀತಿ ಪಡೆದು ನಾಗೇಂದ್ರ ಸಂತೃಪ್ತನಾಗಿ, ತನ್ನ ಪ್ರೀತಿಯನ್ನು ಮಗುವಿಗೆ ಧಾರೆಯೆರೆಯ ತೊಡಗಿರುತ್ತಾನೆ. ಸಮಸ್ಯೆ ಮಗುವಿನದಲ್ಲ, ಪಿತೃಗಳದ್ದು ಎಂಬುದು ಇಲ್ಲಿ ಹೃದಯಂಗಮವಾಗಿ ಹೇಳಲ್ಪಟ್ಟಿದೆ. ಕಥೆಯ ಜೊತೆ ಲೇಖಕಿ ತುಂಬಾ ಸರಳವಾಗಿ ತಾಯ್ತಂದೆಯರಿಗೆ ತಿಳುವಳಿಕೆ ಹೇಳಿದ್ದಾರೆ ಮತ್ತು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

೨. ತುಂಬಿದ ಕೊಡ ಮತ್ತು ಮಗುವಿನ ಕರೆ :

ಮಗುವನ್ನು ಕಳೆದುಕೊಂಡ ತಾಯಿ - ತಾಯಿಯನ್ನು ಕಳೆದು ಕೊಂಡ ಮಗು, ಎರಡು ಜೀವಗಳ ಸುತ್ತ ಸುತ್ತುವ ತೀವ್ರ ಭಾವನೆಗಳನ್ನೊಳಗೊಂಡ ಕಥೆ. ಪಾಪದ ಕೂಸು, ಅಸಹ್ಯ ಎಂದೆಲ್ಲಾ ಜರಿದಿದ್ದ ಮನಸ್ಸನ್ನೂ ಮಾತೃ ಪ್ರೇಮ ಜಯಿಸಿ, ಕೊನೆಗೆ ಹಾಲು ಇಂಗದೆ, ಮಗುವಿನ ಪಾಲಿಗೆ ಅಮೃತವಾಗುತ್ತದೆ. ಒಂದು ಪುಟ್ಟ ಜೀವ ಬದುಕಲು ಬೇಕಾದ ಜೀವಧಾರೆಯಾಗತ್ತೆ. ಎಲ್ಲಕ್ಕಿಂತಲೂ ಅತ್ಯಂತ ಹಿರಿದಾದದ್ದು ಮಾತೃ ಪ್ರೇಮ ಮತ್ತು ತಾಯಿ ಕರುಳು ಎಂಬುದು ಈ ಕಥೆಯ ಸಾರಾಂಶ. ಮನ ಕಲಕುವಂಥ ನಿರೂಪಣೆ.

ತನ್ನ ಭವಿಷ್ಯ ಹಾಳಾದರೂ ಪರವಾಗಿಲ್ಲ ಮಗುವನ್ನು ತಾನೇ ಸಾಕುವುದಾಗಿ ನಿರ್ಧರಿಸುವ ನಾಗಮ್ಮ ತಾಯಿಯ ಮಮತೆಯನ್ನು ಮೆರೆಸುತ್ತಾಳೆ. ವೀರಪ್ಪ ಕೊಟ್ಟ ಪೊಳ್ಳು ಆಶ್ವಾಸನೆಯಿಂದ, ತಾಯಿಯಾಗುವ ನಾಗಮ್ಮ, ತನ್ನ ಕರುಳ ಬಳ್ಳಿಯನ್ನು ಹೊಸಕಲಾರದೆ, ಎಲ್ಲರಿಂದಲೂ ದೂರ ಹೋಗಿ, ಹೊಸ ಬದುಕು ಕಂಡುಕೊಳ್ಳುವ ಉತ್ತಮ ನಿರ್ಧಾರಕ್ಕೆ ಬರುತ್ತಾಳೆ.

೩. ಮಗಳ ಮನಸ್ಸು :

ತೀರ ಬಡವನಾದ ತಂದೆ ತನ್ನ ಮೂರನೆಯ ಮಗಳ ಮದುವೆ, ಸಾಲ ತೀರಿಸಲು ತನಗೆ ದುಡ್ಡು ಕೊಟ್ಟ, ಶ್ರೀಮಂತ ಮುದುಕನ ಜೊತೆ ಮಾಡಿಬಿಟ್ಟಾಗ, ಮನಸ್ಸು ಮುರಿದು, ಎಲ್ಲಾ ಸಂಬಂಧಗಳನ್ನೂ ತೊರೆದುಕೊಂಡು ಹೊರಟು ಹೋಗುತ್ತಾಳೆ ಚಂದ್ರ. ನಾಲ್ಕು ವರ್ಷಗಳ ನಂತರ ಸಹಾಯ ಕೇಳಲು ಬಂದ ತಂದೆಯನ್ನು ನಿಂದಿಸಿ, ಅಟ್ಟಿ ಬಿಡುತ್ತಾಳೆ. ಆದರೆ ತಾಯಿ ಮತ್ತು ಚಿಕ್ಕ ತಮ್ಮನ ಅನಾರೋಗ್ಯದ ವಾರ್ತೆ ಅವಳಲ್ಲಿನ ಪ್ರೀತಿಯನ್ನು ತಟ್ಟಿ ಎಬ್ಬಿಸಿ, ತಂದೆಯ ಹಿಂದೆ ಓಡಿ ಬಂದು ತನ್ನ ಕೈಲಿದ್ದ ಎರಡು ಚಿನ್ನದ ಬಳೆಗಳನ್ನು ಕೊಟ್ಟು ಹೋಗುತ್ತಾಳೆ. ಮುಂದೆಯೂ ಸಹಾಯ ಬೇಕಾದರೆ ಮತ್ತೆ ಬರುವಂತೆ ವಿನಂತಿಸಿಕೊಂಡು, ತಂದೆಯ ಕ್ಷಮೆಯಾಚಿಸಿ, ಆಶೀರ್ವಾದ ಪಡೆದು ಹೋಗುತ್ತಾಳೆ. ಇಲ್ಲಿ ಹೆಣ್ಣು ಮಕ್ಕಳ ಅಂತ:ಕರಣ ಎಷ್ಟು ಮೃದು ತನ್ನ ಜೀವನವನ್ನೇ ಹಾಳು ಮಾಡಿದನೆಂದು ದ್ವೇಷಿಸುತ್ತಿದ್ದ ತಂದೆಯ ಸಹಾಯಕ್ಕೆ ಎಲ್ಲವನ್ನೂ ಮರೆತು ಹೇಗೆ ಧಾವಿಸಿದಳೆಂಬುದು ಚಿತ್ರಿತವಾಗಿದೆ. ಒಳ್ಳೆಯ ಕಥೆ..

೪. ಪ್ರೇಮದ ಬೆಳಕು :

ಪ್ರೇಮ ಅನುರಾಗವೆಂಬುದು ಬಾಹ್ಯ ಸೌಂದರ್ಯದಲ್ಲಲ್ಲ, ಆಂತರಿಕ ಸೌಂದರ್ಯದಲ್ಲಿದೆ ಎನ್ನುವುದನ್ನು ಬಿಂಬಿಸುವ ಕಥೆ. ಕಲಾವಿದನಾದವನು ಎಂತಹ ಕುರೂಪಿಯನ್ನು ನೋಡಿದರೂ, ಅದರಲ್ಲಿರುವ ಕಲೆಯ ಸೌಂದರ್ಯ ಹುಡುಕುತ್ತಾನೇ ಹೊರತು, ಅಶಾಶ್ವತವಾದ ದೈಹಿಕ ಸೌಂದರ್ಯವನ್ನಲ್ಲ. ಕಥಾನಾಯಕ ಸಂಜಯ ಕೊನೆಗೆ ಸಹನೆ, ಭಕ್ತಿ, ಪ್ರೀತಿ, ಅನುರಾಗದಿಂದ ಹೊಳೆಯುತ್ತಿದ್ದ ಮಂಜುವಿನ ಕಣ್ಣುಗಳ ಭಾಷೆಯನ್ನು ಅರಿಯುತ್ತಾನೆ.

೫. ಆ ಸಂಜೆ :

ತನ್ನನ್ನೇ ಬಸ್ ನಿಲ್ದಾಣದಿಂದಲೂ ಹಿಂಬಾಲಿಸಿ ಬಂದ ಯುವಕನ ಮೇಲೆ ಸಿಟ್ಟು ಮಾಡಿಕೊಂಡು, ಅಸಹ್ಯಿಸಿಕೊಂಡು, ಅವಸರದಲ್ಲಿ ಕಾಶ್ಮೀರ್ ಸಿಲ್ಕ್ ಸೀರೆ ಕೊಂಡು, ಅಂಗಡಿಯಿಂದ ಹೊರಗೋಡಿ ಬಿಡುತ್ತಾಳೆ ಕಥಾನಾಯಕಿ. ಆದರೆ ಅವಳು ಕೊಂಡ ಅಂತಹುದೇ ಸೀರೆಕೊಂಡು, ಮೊದಲ ದೀಪಾವಳಿಯನ್ನು ಹೆಂಡತಿಯೊಡನೆ ಆಚರಿಸಲು, ಸಿಹಿ ಕನಸೊಂದನ್ನು ಕಾಣುತ್ತಾ ಹೋಗುತ್ತಾನೆ, ಅವಳನ್ನು ಹಿಂಬಾಲಿಸಿ ಬಂದಿದ್ದ "ವಿಲನ್". ಇಲ್ಲಿ ಕಥಾನಾಯಕ ಹಿಂಬಾಲಿಸಿ ಬಂದಿದ್ದ ಹುಡುಗಿ ನೋಡಲು ತನ್ನ ಹೆಂಡತಿಯಂತೆಯೇ ಇದ್ದದ್ದು ಮತ್ತು ತನ್ನನ್ನು ಅವನು ಹಿಂಬಾಲಿಸಿದ ಉದ್ದೇಶ ಎರಡೂ ತಿಳಿಯದೆ ಹೆದರುತ್ತಾಳೆ. ಆದರೆ ಅಂತ್ಯ ನವಿರಾದ ಹಾಸ್ಯದಿಂದ ಕೂಡಿದ್ದು, ಮನಸ್ಸು ಮುದಗೊಳ್ಳುತ್ತದೆ.

೬. ಕೊನೆಯ ನಿರ್ಧಾರ :

೨೨ ವರ್ಷಗಳ ಹಿಂದೆ ವೆಂಕಟೇಶಮೂರ್ತಿ ಅನುಮಾನಿಸಿ ಬಿಟ್ಟು ಬಿಟ್ಟಿದ್ದ ತಮ್ಮ ಹೆಂಡತಿಯನ್ನು ಮತ್ತೆ ಕರೆಯಲು ಬಂದಾಗ, ಸ್ವಾಭಾವಿಕವಾಗಿಯೇ ಕ್ಷಮಯಾ ಧರಿತ್ರಿಯಾದ ಲಲಿತಾ ಸ್ವಲ್ಪ ಸ್ವಲ್ಪ ಕರಗುತ್ತಾಳೆ. ಆದರೆ ತನ್ನ ಗಂಡನ ಎರಡನೆಯ ಹೆಂಡತಿ ಸತ್ತು, ಮನೆಯಲ್ಲಿ ಐದು ಮಕ್ಕಳಿರುವ ವಿಷಯ ತಿಳಿದಾಗ, ಕರಗಿದ ಮನಸ್ಸು ಕಲ್ಲಿನಂತಾಗಿ, ಕಾಳಿಯಾಗುತ್ತಾಳೆ. ಇದು ನಿಜವಾದ ಪ್ರೀತಿ ಅಲ್ಲ, ತನ್ನ ಅನುಕೂಲಕ್ಕಾಗಿ ವೆಂಕಟೇಶಮೂರ್ತಿ ಮಾಡಿಕೊಳ್ಳುತ್ತಿರುವ ಸಂಧಾನ ಎಂದು ಅರಿತುಕೊಂಡು, ಅವರನ್ನು ತನ್ನ ಜೀವನದಿಂದ ಎರಡನೇ ಸಲ ಹೊರ ಹಾಕುತ್ತಾಳೆ ಮತ್ತು ಇನ್ನೆಂದೂ ಪುನ: ಬರಬಾರದೆಂದು ಹೇಳುತ್ತಾಳೆ. ಇಲ್ಲಿ ಲಲಿತಾ ತಾನು ಮಾಡಿಲ್ಲದ ತಪ್ಪಿಗಾಗಿ, ತನ್ನ ಸ್ವಮರ್ಯಾದೆ ಬಿಟ್ಟು ಕೊಡದೆ, ಸ್ವಾಭಿಮಾನ ಮೆರೆಸುವುದು, ಸಮಾಧಾನಕರವಾಗಿದೆ.

೭. ಮೂರನೆಯ ಕಣ್ಣು ಕೂಡ ತಾಯ ಮಮತೆಯನ್ನು ಬಿಂಬಿಸುತ್ತದೆ. ಹೆಣ್ಣು ಹೇಗೆ ಎಲ್ಲರನ್ನೂ ತಾಯಿಯಂತೆ ಕಾಣಬಲ್ಲಳೆಂಬುದಕ್ಕೆ ಈ ಕಥೆ ಸಾಕ್ಷಿ.

೮. ನರಬಲಿ : ಇದರಲ್ಲಿ ಲೇಖಕಿ ಕಥಾ ನಾಯಕಿ ರತ್ನ ಯಾರಿಂದಲೋ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದಾಗ ಪಡುವ ಮಾನಸಿಕ ಹಿಂಸೆಯನ್ನು ಚಿತ್ರಿಸಲಾಗಿದೆ. ತಾನು ಅತಿಯಾಗಿ ಪ್ರೀತಿಸಿದ ತನ್ನ ಗಂಡನ ಹೋಲಿಕೆಯದೇ ಮಗು ಹುಟ್ಟಿದಾಗ ಅದು ತಮ್ಮಿಬ್ಬರದೇ ಎಂದು ಉದ್ವೇಗದಿಂದು ಕಿರುಚಿ ಅಪ್ಪಿ ಹಿಡಿಯುತ್ತಾಳೆ, ಹಾಗೇ ಕೊನೆಯುಸಿರೆಳೆಯುತ್ತಾಳೆ.

ಈ ಕಥಾ ಸಂಕಲದ ಕೆಲವು ಕಥೆಗಳ ಬಗ್ಗೆ ನಾನು ಏನನ್ನೂ ಬರೆದಿಲ್ಲ. ಸೌಂದರ್ಯ ನೋಡಿ ಮೋಹಿಸಿ ಮದುವೆಯಾಗಲಿಚ್ಛಿಸುವ ಇಬ್ಬರು ಹುಡುಗರು, ಅವಳು ಬಾಲ ವಿಧವೆಯೆಂದು ತಿಳಿದೊಡನೆ ಹಿಂತೆಗೆಯುವ ಕಥೆ ಈಗಿನ ಕಾಲಕ್ಕೆ ಪ್ರಸ್ತುತವೆಂದು ನನಗನ್ನಿಸಲಿಲ್ಲ. ವಯಸ್ಸಾದ ಸಿನಿಮಾ ನಟಿ ಸಾಯುವವರೆಗೂ ನಾಯಕಿಯ ಪಾತ್ರವನ್ನೇ ಮಾಡಬೇಕೆಂದು ಆಶಿಸುವುದು ಮತ್ತು ಸಿಗಲಿಲ್ಲವೆಂದ ಆತ್ಮಹತ್ಯೆ ಮಾಡಿಕೊಳ್ಳುವುದು, ಎಲ್ಲಾ ಕಾಲಕ್ಕೂ ಸಲ್ಲುತ್ತದಾದರೂ, ಓದಿದ ನನ್ನ ಮನಸ್ಸನ್ನೇನು ಸೆಳೆಯಲಿಲ್ಲವಾದ್ದರಿಂದ ಇಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಿಲ್ಲ.

ಒಟ್ಟು ೧೫ ಕಥೆಗಳನ್ನೊಳಗೊಂಡ ಈ ಕಥಾ ಸಂಕಲನ, ಅದ್ಭುತವಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯವನ್ನು ಮನಮುಟ್ಟುವಂತೆ ಸರಳ ಶಬ್ದಗಳನ್ನುಪಯೋಗಿಸಿ, ಎತ್ತಿಕಟ್ಟುವ ತ್ರಿವೇಣಿಯವರ ಕಲೆ ಅದ್ಭುತ. ಅವರ ಶೈಲಿ, ಲೀಲಾಜಾಲ ಬರವಣಿಗೆ ನಮ್ಮನ್ನು ಸುಖಾಸನದಲ್ಲಿ ಕುಳಿತು, ಅನುಭವಿಸುತ್ತಾ, ಓದುವಂತೆ ಪ್ರೇರೇಪಿಸುತ್ತದೆ.

ಎರಡು ದಶಕಗಳ ನಂತರ ಮತ್ತೆ ಓದಿದ ಈ ಪುಸ್ತಕ, ಹಲವು ಒಳ್ಳೆಯ ವಿಷಯಗಳಾಧಾರಿತ ಕಥೆಗಳನ್ನು ಹೊಂದಿದೆ. ಒಟ್ಟಿನಲ್ಲಿ ಒಂದು ಸಂಜೆ ಸುಖವಾಗಿ ಒಳ್ಳೆಯ ಓದಿನಿಂದ ಕಾಲ ಕಳೆಯಬಹುದಾದ ಪುಸ್ತಕ. ಕೆಲವು ಕಥೆಗಳನ್ನು ಸುಲಭದಲ್ಲಿ ಮರೆಯಲಾಗುವುದಿಲ್ಲ, ಕಾಡುತ್ತವೆ, ಕಾಡುತ್ತಲೇ ಇರುತ್ತವೆ........ ಮತ್ತೆ.......... ಮತ್ತೆ...........

Wednesday, November 4, 2009

ನವಾವರಣ ಕೃತಿಗಳು - ೪

ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯ ನಂತರ, ನಾವು ದೇವಿ ಕಮಲಾಂಬಿಕೆಯನ್ನೇ ಧ್ಯಾನಿಸುತ್ತೇವೆ. ಈ ಧ್ಯಾನ ಕೃತಿಯನ್ನು ದೀಕ್ಷಿತರು ೮ನೇ ಮೇಳ ಹನುಮ ತೋಡಿ ರಾಗದಲ್ಲಿ ರಚಿಸಿದ್ದಾರೆ. ಈ ಕೃತಿಯು ತೋಡಿ ರಾಗದ ನಿಷಾದ ಸ್ವರದಿಂದ ಆರಂಭವಾಗುವುದು ಮತ್ತು ಗಾಯಕರನ್ನು ಶುರುವಿನಿಂದಲೇ ಭಕ್ತಿಯ ದಾರಿಗೆ ಎಳೆದುಕೊಂಡುಬಿಡುತ್ತದೆ... ಸ್ವರ ಪ್ರಸ್ತಾರ ಇಡೀ ಕೃತಿಯಲ್ಲಿ, ತೋಡಿ ರಾಗದ ಸಾರವನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ. ಸಂಗೀತಗಾರರಿಗೆ ಈ ಕೃತಿ ಹಾಡುವುದೊಂಥರಾ ಆತ್ಮ ತೃಪ್ತಿಕೊಡುತ್ತದೆ.

ಪಲ್ಲವಿ

ಕಮಲಾಂಬಿಕೆಯೇ... ಅಂಬ.... ಕಮಲಾಂಬಿಕೇ ಆಶೃತ ಕಲ್ಪಲತಿಕೇ... ಚಂಡಿಕೇ...
ಕಮನೀಯಾರುಣಾಂಶುಕೇ..... ಕರವಿಧೃತ ಶುಕೇ ಮಾಮವ..... ||

ಅನುಪಲ್ಲವಿ

ಕಮಲಾಸನಾನಿ ಪೂಜಿತ... ಕಮಲಪದೇ... ಬಹು ವರದೇ....
ಕಮಲಾಲಯ ತೀರ್ಥವೈಭವೇ... ಶಿವೇ.... ಕರುಣಾರ್ಣವೇ...... ||

ಚರಣ

ಸಕಲಲೋಕ ನಾಯಿಕೇ... ಸಂಗೀತ ರಸಿಕೇ... ಸುಕವಿತ್ವ ಪ್ರದಾಯಿಕೇ...
ಸುಂದರಿಗತ ಮಾಯಿಕೇ.... ವಿಕಳೇ... ಬರಮುಕ್ತಿದಾನ ನಿಪುಣೇ....
ಅಘಹರಣೇ..... ವಿಯದಾದಿ ಭೂತ ಕಿರಣೇ... ವಿನೋದ ಚರಣೇ... ಅರುಣೇ...
ಸಕಲೇ ಗುರುಗುಹ ಚರಣೇ..... ಸದಾಶಿವಾಂತ:ಕರಣೇ.....
ಅಕಚಟತಪಾದಿವರ್ಣೇ.... ಅಖಂಡೈಕರಸಪೂರ್ಣೇ..... ||


ಭಕ್ತರಿಗೆ ಮತ್ತು ನಿನ್ನನ್ನು ಆಶ್ರಯಿಸಿದವರಿಗೆ ಕಲ್ಪಲತೆಯಂತೆ, ಬೇಡಿದ್ದನ್ನೆಲ್ಲಾ, ಇಷ್ಟಾರ್ಥಗಳನ್ನೆಲ್ಲಾ ಕೊಡುವವಳೇ, ಚಂಡಿಕಾರೂಪದಿಂದ ದುಷ್ಟರನ್ನು ಸಂಹರಿಸುವವಳೇ, ಸುಂದರವಾದ ಕೆಂಪು ವಸ್ತ್ರವನ್ನುಟ್ಟಿರುವವಳೇ, ಕೈಯಲ್ಲಿ ಗಿಣಿಯನ್ನು ಹಿಡಿದು, ಅತ್ಯಂತ ಸೌಂದರ್ಯವತಿಯಾದವಳೇ, ಪ್ರಜ್ವಲಿಸುತ್ತಿರುವವಳೇ, ಕಮಲಾಂಬಿಕೆಯೇ... ನನ್ನನ್ನು ರಕ್ಷಿಸು, ಸಂರಕ್ಷಿಸು ಎಂದು ಆರಂಭಿಸುತ್ತಾರೆ ದೀಕ್ಷಿತರು...

ಬ್ರಹ್ಮಾದಿ ಮೊದಲುಗೊಂಡು ಇಡೀ ದೇವತಾ ಸಮೂಹದಿಂದಲೇ ಪುಜಿಸಲ್ಪಡುವವಳೇ... ಪಾದ ಕಮಲಗಳುಳ್ಳವಳೇ.. ನಾವು ಬೇಡಿದ್ದಕ್ಕಿನಾ ಹೆಚ್ಚಾಗಿಯೇ ವರವನ್ನು ಕರುಣಿಸುವಂಥಹ, ಕರುಣಾಮಯಿಯೇ.. ಮಾತೆಯೇ.. ತಿರುವಾರೂರಿನಲ್ಲಿರುವ ಕಮಲಾಂಬಾ ದೇವಸ್ಥಾನದ ಸರೋವರವಾದ ಬ್ರಹ್ಮತೀರ್ಥದ ವೈಭವವುಳ್ಳವಳೇ, ಶಿವೇ... ಮಂಗಳ ಸ್ವರೂಪಿಣಿಯೇ... ನನ್ನನ್ನು ರಕ್ಷಿಸು... ಸಂರಕ್ಷಿಸು ತಾಯೇ...

ಚರಣದಲ್ಲಿ ದೀಕ್ಷಿತರು ದೇವಿಯನ್ನು ಸಕಲ ಲೋಕದ ನಾಯಕಿಯೇ.. ಜಗನ್ಮಾತೆಯೇ... ಜಗತ್ತಿಗೇ ಒಡೆಯಳೇ... ಸಂಗೀತವನ್ನು ರಸಿಕತೆಯಿಂದ ಅನುಭವಿಸುವವಳೇ... ಗಾನಪ್ರಿಯಳೇ... ಸುಖವನ್ನು ದಯಪಾಲಿಸುವವಳೇ.. ವಾಕ್ಚಾತುರ್ಯ ನೀಡುವವಳೇ... ಸುಂದರೇಶ್ವರನನ್ನು ಮೋಹಿಸಿದ, ಅತ್ಯಂತ ಮೋಹಕಳಾದ, ಸುಂದರಾಂಗಿಯೇ... ವಿದೇಹ ಮುಕ್ತಿದಾನವನ್ನು ದಯಪಾಲಿಸುವಲ್ಲಿ ನಿಪುಣಳೇ ಆಗಿರುವ ದೇವಿ ಕಮಲಾಂಬಿಕೆಯೇ ರಕ್ಷಿಸು... ಓ ದೇವಿಯೇ ನೀನು ಪಾಪಗಳನ್ನು ಪರಿಹರಿಸುವವಳೂ, ಪಂಚಭೂತಗಳನ್ನು ಹಿಡಿತದಲ್ಲಿಟ್ಟುಕೊಂಡಿರುವವಳೂ, ಪ್ರಕಾಶಿಸುವಂತೆ ಮಾಡುವವಳೂ, ವಿನೋದಶೀಲಳೂ, ಸಕಲ ಚರಾಚರಗಳನ್ನೂ ನಿಯಂತ್ರಿಸುವವಳೂ... ಸ್ಕಂದನ ಮಾತೆಯೂ... ಸದಾಶಿವನ ಸತಿಯೂ.. ಜಗತ್ಸ್ವರೂಪಿಣಿಯೂ, ಸೌಂದರ್ಯವತಿಯೂ... ಕಮಲಾಂಬಿಕೆಯೂ ಆದ ತಾಯಿಯೇ ನನ್ನನ್ನು ರಕ್ಷಿಸು ಎಂದು ದೇವಿಯಲ್ಲಿ ಮೊರೆಯಿಡುತ್ತಾರೆ...


ಪ್ರಥಮಾವರಣ ಕೃತಿ :

ಆನಂದಭೈರವಿ ರಾಗದಲ್ಲಿ ರಚಿಸಲ್ಪಟ್ಟಿದೆ. ಮುದ ನೀಡುವ ಆನಂದಭೈರವಿ ರಾಗ ಈ ಕೃತಿಯನ್ನು ಹಾಡಿದಾಗ ಮನಸ್ಸಿಗೆ ಸಮಾಧಾನ ತಂದುಕೊಡುತ್ತದೆ. ಶಾಂತವಾದ, ಧೃಡ ಮನಸ್ಸನ್ನು ದೇವಿಯ ಪಾದಾರವಿಂದಗಳಲ್ಲಿ ನೆಲೆಗೊಳಿಸರು ವೇದಿಕೆ ಸಿದ್ಧಪಡಿಸುವಂತೆ ಮಾಡುತ್ತದೆ. ಮೊದಲನೆಯ ಆವರಣ ಪೂಜೆ ಮಾಡಲು ಆರಂಭಿಸಿದೊಡನೆಯೇ ಆರಾಧಕನ ಮನಸ್ಸು ಪಕ್ವಗೊಂಡು, ದೇವಿಯ ಆರಾಧನೆಯಲ್ಲಿ ತಲ್ಲೀನವಾಗಿ ಬಿಡುತ್ತದೆ.

ಪಲ್ಲವಿ

ಕಮಲಾಂಬಾ ಸಂರಕ್ಷತು ಮಾಂ.... ಹೃತ್ಕಮಲಾ ನಗರ ನಿವಾಸಿನೀ... ಅಂಬ... ||

ಅನುಪಲ್ಲವಿ

ಸುಮನ ಸಾರಾಧಿತಾಬ್ಜಮುಖೀ... ಸುಂದರಮನ: ಪ್ರಿಯಕರ ಸಖೀ...
ಕಮಲಜಾನಂದ ಬೋಧಸುಖೀ... ಕಾಂತಾಧಾರ ಪಂಜರಶುಕೀ..... ||

ಚರಣ

ತ್ರಿಪುರಾದಿ ಚಕ್ರೇಶ್ವರೀ... ಅಣಿಮಾದಿ ಸಿದ್ಧೀಶ್ವರೀ... ನಿತ್ಯಕಾಮೇಶ್ವರೀ...
ಕ್ಷಿತಿಪುರ ತ್ರೈಲೋಕ್ಯಮೋಹನ ಚಕ್ರವರ್ತಿನೀ... ಪ್ರಕಟಯೋಗಿನೀ...
ಸುರರಿಪು ಮಹಿಷಾಸುರಾದಿ ಮರ್ಧಿನೀ... ನಿಗಮಪುರಾಣಾದಿ ಸಂವೇದಿನೀ.. ||

ಮಧ್ಯಮಕಾಲದ ಸಾಹಿತ್ಯ

ತ್ರಿಪುರೇಶೀ ಗುರುಗುಹ ಜನನೀ... ತ್ರಿಪುರ ಭಂಜನ ರಂಜನೀ..
ಮಧುರಿಪು ಸಹೋದರೀ ತಲೋದರೀ... ತ್ರಿಪುರಸುಂದರೀ ಮಹೇಶ್ವರೀ.... ||

ನನ್ನ ಹೃದಯಕಮಲದಲ್ಲಿ ನೆಲೆಸಿರುವವಳೇ ಮತ್ತು ತಿರುವಾರೂರು ಜಿಲ್ಲೆಯ ಕಮಲಾನಗರವೆಂಬ ಜಾಗದಲ್ಲಿ ನೆಲೆಸಿರುವ ಓ ಕಮಲಾಂಬಿಕೆಯೇ.. ನನ್ನನ್ನು ರಕ್ಷಿಸಲಿ ಎಂದು ದೀಕ್ಷಿತರು ದೇವಿಯನ್ನು ಪ್ರಾರ್ಥಿಸುತ್ತಾ ಈ ಪ್ರಥಮಾವರಣ ಕೃತಿಯನ್ನು ಶುರುಮಾಡುತ್ತಾರೆ...

ಅನುಪಲ್ಲವಿಯಲ್ಲಿ ಮುಂದುವರೆಯುತ್ತಾ ದೀಕ್ಷಿತರು ಕಮಲದಂತೆ ಸುಂದರ ಮುಖಾರವಿಂದವುಳ್ಳವಳೇ... ಸಕಲ ದೇವತೆಗಳಿಂದಲೂ ಪೂಜಿಸಲ್ಪಡುವವಳೇ... ಸುಂದರೇಶನ ಪ್ರಿಯಕರಿಯೇ.. ಬ್ರಹ್ಮಾನಂದಾನುಭವದಿಂದ ಸುಖಿಸುವವಳೇ... ಓಂಕಾರವೆಂಬ ಸುಂದರವಾದ ಪಂಜರದಲ್ಲಿ ವಿಹರಿಸುತ್ತಿರುವ ಗಿಳಿಯೂ ಆದ ಓ ಕಮಲಾಂಬಿಕೆಯೇ ನನ್ನನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾರೆ...

ದೇವಿಯನ್ನು ತ್ರಿಪುರಾದಿ ಚಕ್ರೇಶ್ವರೀ ಎಂದೆನ್ನುತ್ತಾರೆ, ಅಂದರೆ ನವಚಕ್ರಗಳಾದ ೧) ತ್ರೈಲೋಕ್ಯ ಮೋಹನ ಚಕ್ರ.. ೨) ಸರ್ವಾಶಾಪರಿಪೂರಕ ಚಕ್ರ... ೩) ಸರ್ವ ಸಂಕ್ಷೋಭಣ ಚಕ್ರ... ೪) ಸರ್ವ ಸೌಭಾಗ್ಯದಾಯಕ ಚಕ್ರ... ೫) ಸರ್ವಾರ್ಥ ಸಾಧಕ ಚಕ್ರ.. ೬) ಸರ್ವ ರಕ್ಷಾಕರ ಚಕ್ರ... ೭) ಸರ್ವ ರೋಗಹರ ಚಕ್ರ... ೮) ಸರ್ವ ಸಿದ್ಧಿ ಪ್ರದಾಯಕ ಚಕ್ರ... ೯) ಸರ್ವಾನಂದಮಯ ಚಕ್ರ... ಇವುಗಳ ಅಂದರೆ ಈ ಚಕ್ರಗಳಿಗೆಲ್ಲಾ ಸಾಮ್ರಾಜ್ಞೀ ಎನ್ನುತ್ತಾರೆ. ಇಷ್ಟೇ ಅಲ್ಲ ಅಣಿಮಾದಿಯಾದ ಅಷ್ಟ ಸಿದ್ಧಿಗಳಿಗೆ ಅಂದರೆ .. ೧) ಅಣಿಮಾ.. ೨) ಮಹಿಮಾ.. ೩) ಈಶಿತ್ವ.. ೪) ವಶಿತ್ವ... ೫) ಪ್ರಾಕಾಮ್ಯ... ೬) ಭಕ್ತಿ... ೭) ಇಚ್ಛಾ... ೮) ಪ್ರಾಪ್ತಿ... ಸಿದ್ಧಿಗಳಿಗೆಲ್ಲಾ ಈ ದೇವಿ ಕಮಲಾಂಬಿಕೆಯೇ ಅಧೀಶ್ವರಿ.... ಒಡೆಯಳು..... ಕಾರಣ ಕರ್ತಳು....
ನಿತ್ಯ ಕಾಮೇಶ್ವರಿ ಎಂಬ ೧೫ ನಿತ್ಯೆಗಳಿಗೂ... ಅಂದರೆ.. ೧) ಕಾಮೇಶ್ವರಿ... ೨) ಭಗಮಾಲಿನಿ... ೩) ನಿತ್ಯಕ್ಲಿನ್ನಾ... ೪) ಭೇರುಂಡಾ... ೫) ವಹ್ನಿ ವಾಹಿನಿ.... ೬)
ಮಹಾ ವಿದ್ಯೇಶ್ವರಿ... ೭) ಶಿವದೂತಿ... ೮) ತ್ವರಿತಾ... ೯) ಕುಳ ಸುಂದರಿ... ೧೦) ನಿತ್ಯಾ... ೧೧) ನೀಲಪತಾಕಾ... ೧೨) ವಿಜಯಾ... ೧೩) ಸರ್ವ ಮಂಗಳ... ೧೪) ಜ್ವಾಲಾಮಾಲಿನಿ... ಮತ್ತು ೧೫) ಚಿತ್ರಾ... ಮೊದಲಾದವುಗಳಿಗೆ ಯಜಮಾನಿಯೂ... ಒಡೆಯಳೂ.... ತ್ರೈಲೋಕ್ಯ ಅಥವಾ ಭೂಪುರವೆಂಬ ಮೂರು ಲೋಕಗಳಿಗೂ... ಮೋಹನರೂಪಳಾದ, ಚಕ್ರವರ್ತಿನಿಯೂ... ಸಾಮ್ರಾಜ್ಞಿಯೂ, ಪ್ರಕಟಯೋಗಿನೀ ಎಂಬ ಹೆಸರು ಗಳಿಸಿದವಳೂ... ಸುರರ ಶತೃಗಳಾದ ಮಹಿಷಾಸುರ ಮುಂತಾದ ಅಸುರರನ್ನು ಸಂಹರಿಸಿದವಳೂ.... ವೇದ ಪುರಾಣಾದಿ ಸಕಲ ಶಾಸ್ತ್ರಗಳನ್ನು ಬಲ್ಲವಳೂ.... ಪರಶಿವನ ಮಡದಿಯೂ... ಗುರುಗುಹ / ಷಣ್ಮುಖನ ಮಾತೆಯೂ... ತ್ರಿಪುರಾಸುರನನ್ನು ನಿಗ್ರಹಿಸಿ ತುಷ್ಟಿ ಪಡೆದವಳೂ.... ಮಹಾ ವಿಷ್ಣುವಿನ ಪ್ರಿಯ ಸಹೋದರಿಯೂ ಆದ ಕಮಲಾಂಬಿಕೆಯು ನನ್ನನ್ನು ಪಾಲಿಸಲಿ ಎಂದು ಪ್ರಾರ್ಥಿಸುತ್ತಾರೆ....


ಶ್ರೀ ವಾಮಕೇಶ್ವರ ತಂತ್ರದಲ್ಲಿ ಬರುವ ಶ್ರೀ ಉಮಾ ಮಹೇಶ್ವರರ ಸಂವಾದ, ದೇವಿ ಖಡ್ಗಮಾಲಾ ಸ್ತೋತ್ರದಲ್ಲಿ, ದೇವಿಯ ಒಡೆತನದ ನವ ಚಕ್ರಗಳು, ನವ ಸಿದ್ಧಿಗಳು, ೧೫ ನಿತ್ಯೆಗಳೂ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ದೇವಿಯನ್ನು ಅತಿ ರಹಸ್ಯಯೋಗಿನಿ, ತ್ರಿಪುರೇ, ತ್ರಿಪುರೇಶಿ, ತ್ರಿಪುರ ಸುಂದರಿ, ತ್ರಿಪುರವಾಸಿನಿ, ತ್ರಿಪುರಾಶ್ರೀ:, ತ್ರಿಪುರಮಾಲಿನಿ, ತ್ರಿಪುರಾಸಿದ್ಧೇ, ತ್ರಿಪುರಾಂಬಾ, ಮಹಾತ್ರಿಪುರಸುಂದರಿ, ಮಹಾಮಹೇಶ್ವರಿ, ಮಹಾಮಹಾರಾಜ್ಞೀ, ಮಹಾಮಹಾ ಶಕ್ತೇ, ಮಹಾಮಹಾ ಸ್ಕಂದೇ, ಮಹಾಮಹಾಶಯೇ, ಮಹಾಮಹಾ ಶ್ರೀ ಚಕ್ರನಗರ ಸಾಮ್ರಾಜ್ಞೀ.... ನಮಸ್ತೇ... ನಮಸ್ತೇ... ಎಂದೆಲ್ಲಾ ವರ್ಣಿಸುತ್ತಾರೆ. ಈ ದೇವಿ ಖಡ್ಗಮಾಲಾ ಸ್ತೋತ್ರವನ್ನು ದಿನವೂ ಪಠಿಸುವುದರಿಂದ ನಮ್ಮ ಎಲ್ಲಾ ಕಷ್ಟಗಳನ್ನೂ ದೇವಿಯ ಖಡ್ಗ ಕತ್ತರಿಸಿ ಎಸೆಯುತ್ತದೆಂಬ ನಂಬಿಕೆ ಕೂಡ ಇದೆ....






Thursday, October 22, 2009

ನವಾವರಣ ಕೃತಿಗಳು - ೩

ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ನವಾವರಣ ಕೃತಿಗಳನ್ನು ಹಾಡಲು ಸಂಗೀತಗಾರರು ಒಂದು ಪದ್ಧತಿಯನ್ನು ಅನುಸರಿಸುತ್ತಾರೆ. ನಾವು ಯಾವುದೇ ಕೆಲಸ ಮಾಡಬೇಕಾದರೂ ನಿರ್ವಿಘ್ನವಾಗಿ ನೆರವೇರುವಂತೆ, ಅಗ್ರ ಪೂಜೆಯನ್ನು ವಿಘ್ನೇಶ್ವರನಿಗೆ ಸಲ್ಲಿಸಿ ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ನೆರವೇರಿಸು ಎಂದು ಹೇಗೆ ಪ್ರಾರ್ಥಿಸುತ್ತೇವೋ, ಹಾಗೇ ಇಲ್ಲೂ ಅಗ್ರಸ್ಥಾನ ನಮ್ಮ ಗಜಾನನನಿಗೇ ಮೀಸಲು. ನಾವು ದೀಕ್ಷಿತರ ಶ್ರೀ ಮಹಾಗಣಪತಿ ರವತುಮಾಂ... ಎಂಬ ಗೌಳ ರಾಗದಲ್ಲಿ ರಚಿಸಲ್ಪಟ್ಟಿರುವ ಮಿಶ್ರಛಾಪುತಾಳದ ಕೃತಿಯೊಂದಿಗೆ ಆರಂಭಿಸುತ್ತೇವೆ. ಕೃತಿಯ ಸಾಹಿತ್ಯ........

ಪಲ್ಲವಿ

ಶ್ರೀ ಮಹಾಗಣಪತಿ ರವತುಮಾಂ... - ಸಿದ್ಧಿ ವಿನಾಯಕೋ..
ಮಾತಂಗಮುಖ:
||

ಅನುಪಲ್ಲವಿ


ಕಾಮಜಕ ವಿಧೀಂದ್ರ ಸನ್ನುತ... ಕಮಲಾಲಯ ತಟನಿವಾಸೋ..

ಕೋಮಳಕರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ:.................
||

ಚರಣ

ಸುವರ್ಣಾಕರ್ಷಣ ವಿಘ್ನರಾಜೋ.... ಪಾದಾಂಬುಜೋ....
ಗೌರವರ್ಣ ವಸನಧರೋ.... ಫಾಲಚಂದ್ರೋ.... ನರಾದಿವಿನುತ ಲಂಬೋದರೋ... ಕುವಲಯ ಸ್ವವಿಷಾಣ ಪಾಶಾಂಕುಶ ಮೋದಕ ಪ್ರಕಾಶಕರೋ... ಭವ ಜಲಧಿ ನಾವೋ..... ಮೂಲ ಪ್ರಕೃತಿ ಸ್ವಭಾವಸ್ಸುಖತರೋ... ರವಿಸಹಸ್ರ ಸನ್ನಿಭ ದೇಹೋ.... ಕವಿಜನನುತ ಮೂಷಿಕ ವಾಹೋ.. ಅವನತ ದೇವತಾ ಸಮೂಹೋ.... ಅವಿನಾಶ ಕೈವಲ್ಯ ಗೇಹೋ..... ||

ಈ ಕೃತಿಯಲ್ಲಿ ದೀಕ್ಷಿತರು ವಿಘ್ನರಾಜನನ್ನು ಹೊಗಳಿ ಸಿದ್ಧಿ ವಿನಾಯಕನೇ.... ಆನೆಯ ಮುಖದವನೇ..... ನನ್ನನ್ನು ರಕ್ಷಿಸು..... ಮನ್ಮಥನ ತಂದೆಯಾದ ವಿಷ್ಣು, ಬ್ರಹ್ಮ ಮತ್ತು ದೇವೇಂದ್ರರಿಂದ ಪೂಜೆಗೊಳ್ಳುವವನೇ...... ಅತ್ಯಂತ ಮೃದುವಾದ ಕೈಗಳೂ, ಕಾಲುಗಳನ್ನೂ ಹೊಂದಿದವನೇ. ..... ತಿರುವಾರೂರು ಎಂಬ ಕ್ಷೇತ್ರದ ಕಮಲಾಂಬಾ ದೇವಾಲಯದ ಸರೋವರದ ದಡದಲ್ಲಿರುವವನೇ..... ಸುಬ್ರಹ್ಮಣ್ಯನ ಮೊದಲು ಜನಿಸಿ ಅಣ್ಣನಾದವನೇ... ಶ್ರೀ ಮಹಾಗಣಪತಿಯೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ.

ಮುಂದುವರೆಯುತ್ತಾ ಚಿನ್ನವನ್ನು ಒರೆಹಚ್ಚಿದ ವಿಘ್ನರಾಜನೆಂದು ಪ್ರಸಿದ್ಧಿಯಾದವನೇ ಕಮಲ ಪುಷ್ಪದಷ್ಟು ಮೃದು ಮತ್ತು ಸುಂದರವಾದ ಪಾದಗಳುಳ್ಳವನೇ..... ಹಣೆಯಲ್ಲಿ ಚಂದ್ರನನ್ನು ಧರಿಸಿದವನೇ.... ಶುಭ್ರ ಬಿಳುಪು ವಸ್ತ್ರಧರಿಸಿದವನೇ... ನರರು ಸುರರು ಎಲ್ಲರಿಂದಲೂ ಸ್ತುತಿಸಲ್ಪಡುವವನೇ.... ಇಡೀ ಜಗತ್ತನ್ನೇ ಅಡಗಿಸಿಕೊಂಡ ದೊಡ್ಡ ಹೊಟ್ಟೆಯವನೇ.... ಪಾಶ-ಅಂಕುಶಧಾರನೇ..... ಕನ್ನೈದಿಲೆ ಪುಷ್ಪವನ್ನು ಕೈಯಲ್ಲಿ ಹಿಡಿದಿರುವವನೇ....... ಮೂಲ ಪ್ರಕೃತಿಯ ಸ್ವಭಾವದವನೇ..... ಸಹಸ್ರಾರು ಸೂರ್ಯರ ಕಾಂತಿಯಷ್ಟು ಕಂಗೊಳಿಸುವ ದೇಹದವನೇ...... ಕವಿ - ಸುರ - ನರರೆಲ್ಲರ ಅತ್ಯಂತ ಪ್ರಿಯನಾದವನೇ..... ಇಲಿಯನ್ನು ವಾಹನವನ್ನಾಗಿಸಿಕೊಂಡವನೇ..... ನಾಶವೇ ಇಲ್ಲದವನೇ.... ಮೋಕ್ಷದಾಯಕನೇ..... ಎಲ್ಲರಿಂದಲೂ ನಮಸ್ಕರಿಸಲ್ಪಡುವವನೇ..... ನನ್ನನ್ನು ರಕ್ಷಿಸು ಎನ್ನುತ್ತಾರೆ.

ಗಣೇಶನ ಪ್ರಾರ್ಥನೆಯ ನಂತರ ನಾವು ದೀಕ್ಷಿತರ ಸುರುಟಿ ರಾಗದ, ಆದಿತಾಳದ ರಚನೆ, ಬಾಲಸುಬ್ರಹ್ಮಣ್ಯಂ ಹಾಡಿ ಷಣ್ಮುಖನನ್ನು ಪ್ರಾರ್ಥಿಸುತ್ತೇವೆ......

ಪಲ್ಲವಿ

ಬಾಲಸುಬ್ರಹ್ಮಣ್ಯಂ ಭಜೇಹಂ...... ಭಕ್ತ ಕಲ್ಪ ಭೂರುಹಂ ಶ್ರೀ..........||

ಅನುಪಲ್ಲವಿ

ನೀಲ ಕಂಠ ಹೃದಾನಂದಕರಂ......... ನಿತ್ಯ ಶುದ್ಧ ಬುದ್ಧ ಮುಕ್ತಾಂಬರಂ............||

ಚರಣ

ವೇಲಾಯುಧ ಧರಂ....... ಸುಂದರಂ...... ವೇದಾಂತಾರ್ಥ ಬೋಧ ಚತುರಂ...........
ಫಾಲಕ್ಷ ಗುರುಗುಹಾವತಾರಂ........ ಪರಾಶಕ್ತಿ ಸುಕುಮಾರಂ ಧೀರಂ..........

ಪಾಲಿತ ಗೀರ್ವಾಣಾದಿ ಸಮೂಹಂ........ ಪಂಚಭೂತಮಯ ಮಾಯಾಮೋಹಂ........
ನೀಲಕಂಠ ವಾಹಂ.......... ಸುದೇಹಂ......... ನಿರತಿಶಯಾನಂದ ಪ್ರವಾಹಂ..........||

ದೀಕ್ಷಿತರು ಈ ಕೃತಿಯಲ್ಲಿ ಬಾಲಸುಬ್ರಹ್ಮಣ್ಯನೇ.... ಭಕ್ತರು ಕೇಳಿದ್ದನ್ನೆಲ್ಲಾ ಕರುಣಿಸುವ ಕಲ್ಪವೃಕ್ಷವೇ ನಿನ್ನನ್ನು ನಾನು ಭಜಿಸುತ್ತೇನೆ, ಪೂಜಿಸುತ್ತೇನೆ, ನಿನಗೆ ನನ್ನ ನಮಸ್ಕಾರಗಳು ಎಂದು ಆರಂಭಿಸಿ.... ಅನುಪಲ್ಲವಿಯಲ್ಲಿ ... ಷಣ್ಮುಖನೇ ನೀನು ನೀಲಕಂಠನಾದ ನಿನ್ನ ತಂದೆ ಈಶ್ವರನಿಗೆ ಆನಂದ ಕೊಡುವವನೂ, ಪರಿಶುದ್ಧತೆಗೆ ಹೆಸರಾದವನೂ, ಅತಿಜ್ಞಾನಿಯೂ - ನಮಗೆ ಜ್ಞಾನವನ್ನು ದಯಪಾಲಿಸುವವನೂ, ಮೋಕ್ಷಸ್ವರೂಪಿಯೂ ಅಂದರೆ ಮುಕ್ತಿಯನ್ನು ಕೊಡುವವನೂ, ಅಂಬರದಲ್ಲೆಲ್ಲಾ ವ್ಯಾಪಿಸಿಕೊಂಡಿರುವವನೂ... ನಿನಗೆ ಇದೋ ನನ್ನ ಪ್ರಣಾಮಗಳು.........ಎನ್ನುತ್ತಾರೆ.

ಮುಂದುವರೆಯುತ್ತಾ ಚರಣದಲ್ಲಿ ಷಣ್ಮುಖನನ್ನು ವರ್ಣಿಸುತ್ತಾ.... ನಿನ್ನ ಕೈಯಲ್ಲಿ ವೇಲಾಯುಧವನ್ನು ಹಿಡಿರುವವನೂ, ಮುದ್ದು ಮುಖದವನು, ಸುಂದರ ದೇಹದವನು, ವೇದ ಉಪನಿಷತ್ತುಗಳ ಅರ್ಥವನ್ನು ತಿಳಿದಿರುವವನೂ ಅಂದರೆ ’ಓಂ’ ಕಾರದ ಅರ್ಥವನ್ನು ನಿನ್ನ ತಂದೆಗೇ ಬೋಧಿಸಿದವನು... ತುಂಬಾ ಧೈರ್ಯವಂತನೂ, ಪಾರ್ವತಿಯ ಸುಕುಮಾರನೂ... ಮಯೂರ ವಾಹನನೂ... ಸದೃಡಕಾಯನೂ.... ಅತಿಶಯವಾದ ಆನಂದವನ್ನು ಕೊಡುವವನೂ ಗುರುವಾದ ಗುಹನ ಅವತಾರವನ್ನು ತಾಳಿದವನೂ ಆದ ಶ್ರೀ ಸುಬ್ರಹ್ಮಣ್ಯನೇ ನಿನಗೇ ನಮೋ ನಮ: ಎನ್ನುತ್ತಾರೆ.

ದೀಕ್ಷಿತರು ತಮ್ಮ ಸುಬ್ರಹ್ಮಣ್ಯನ ಕುರಿತಾದ ಎಲ್ಲಾ ಕೃತಿಗಳಲ್ಲೂ ಷಣ್ಮುಖನ ಆರಾಧನೆ ಮಾಡುವವರು ಎಲ್ಲಾ ಜಂಜಾಟಗಳಿಂದಲೂ ಮುಕ್ತಿಹೊಂದಿ ಮೋಕ್ಷ ಸಾಧನೆ ಮಾಡಬಹುದೆಂದು ತಿಳಿಸುತ್ತಾರೆ. ಅವರ ಕೃತಿಗಳಲ್ಲಿನ ಷಣ್ಮುಖನ ವರ್ಣನೆ ಅತಿಶಯವಾಗಿರುತ್ತದೆ. ಅವರ ಇನ್ನೊಂದು ರಚನೆ... ಸಮಷ್ಠಿ ಚರಣವನ್ನೊಳಗೊಂಡ, ನಾಟ ರಾಗದ "ಸ್ವಾಮಿನಾಥ ಪರಿಪಾಲಯ ಶುಮಾಂ"... ಕೂಡ ಸುಂದರವಾದ ಕೃತಿ. ಎಲ್ಲಾ ರಚನೆಗಳಲ್ಲೂ ಅವರ ಗುರುಗುಹನ ಮೇಲಿನ ಭಕ್ತಿ ಉತ್ಕಟವಾಗಿ ತೋರಿಸಲ್ಪಟ್ಟಿದೆ.

Friday, October 16, 2009

ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು - 2

ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸ ಬೇಕಾಗುತ್ತದೆ. ಇದರಲ್ಲಿ ಒಂಭತ್ತು ಆವರಣಗಳನ್ನು ಪೂಜಿಸಬೇಕಾಗುತ್ತದೆ. ಪ್ರತಿಯೊಂದು ವೃತ್ತದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಶಕ್ತಿಯೂ ಇದೆ. ಇಲ್ಲಿರುವ ಒಂಭತ್ತು ಚಕ್ರಗಳನ್ನೂ ಪೂಜಿಸಿದ ನಂತರವೇ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀ ಚಕ್ರ"ದ ಉಪಾಸನೆಯೇ "ಶ್ರೀ ವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಈ ನವಾವರನ ಕೃತಿಗಳಲ್ಲಿ ದೀಕ್ಷಿತರು ದೇವಿಯ ಆರಾಧನೆಯನ್ನೂ, ದೇವಿಯ ಸೌಂದರ್ಯವನ್ನೂ ಅತ್ಯಂತ ಮನೋಹರವಾಗಿ ವರ್ಣಿಸಿದ್ದಾರೆ.....

ಆಶ್ವೀಜ ಬಹುಳ ಚತುರ್ದಶಿ - ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ "ಮೀನಾಕ್ಷಿ ಮುದಂ ದೇಹಿ" ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. "ಮೀನಲೋಚನಿ ಪಾಶಮೋಚನಿ....." ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ... ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ...... ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ..... ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ........

ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದೇ ಆಚರಿಸಲಾಗುತ್ತದೆ. ದೀಕ್ಷಿತರ್ಯ್ ಸಂಗೀತದ ಜ್ಯೋತಿಯನ್ನು ಬೆಳಗಿ, ನಮಗಾಗಿ ಇಂತಹ ಅಪೂರ್ವ ಹಾಗೂ ಅಮೂಲ್ಯ ಸಂಪತ್ತನ್ನು ಅನುಗ್ರಹಿಸಿದ್ದಾರೆ. ಮಹಾನ್ ಚೇತನವಾದ ದೀಕ್ಷಿತರನ್ನು, ನಾವು ಅವರ ರಚನೆಗಳನ್ನು ಹಾಡುತ್ತಾ, ಅವರು ಹಚ್ಚಿದ ನಾದ ಜ್ಯೋತಿಯನ್ನು ನಿರಂತರವಾಗಿ ಬೆಳಗುತ್ತಾ, ತಲೆಬಾಗಿ ನಮಿಸೋಣ............


ಮುಂದುವರೆಯುವುದು........

Wednesday, October 14, 2009

ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು

ಅತ್ಯಂತ ವಿದ್ವತ್ತ್ ಪೂರ್ಣ ಮತ್ತು ಶ್ರೇಷ್ಠವಾದ ನವಾವರಣ ಕೃತಿಗಳ ಬಗ್ಗೆ ನನಗೆ ತಿಳಿದ ಅರ್ಥ ಹಾಗೂ ಅನಿಸಿಕೆಗಳನ್ನು ನಿಮ್ಮ ಜೊತೆ ವಿನಿಮಯ ಮಾಡಿಕೊಳ್ಳುವ ಮೊದಲು ಈ ಕೃತಿಗಳ ಕರ್ತೃ, ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಜೀವನದ ಬಗ್ಗೆ ಒಂದು ಚಿಕ್ಕ ಇಣುಕು ನೋಟ ಅಥವಾ ಪೀಠಿಕೆ :..........


ಒಂದು ಶತಮಾನ ಕ್ರಿ.ಶ.೧೭೫೦ ರಿಂದ ೧೮೫೦ ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸುವರ್ಣಯುಗ. ಶ್ರೀ ಮುತ್ತುಸ್ವಾಮಿ ದೀಕ್ಷಿತರು ಶಾಸ್ತ್ರೀಯ ಸಂಗೀತದ ರತ್ನತ್ರಯರೂ, ತ್ರಿಮೂರ್ತಿಗಳಲ್ಲೂ ಒಬ್ಬರು. ಇವರು ಹಂಸಧ್ವನಿ ರಾಗದ ಕರ್ತೃಗಳಾದ ಶ್ರೀ ರಾಮಸ್ವಾಮಿ ದೀಕ್ಷಿತರು ಮತ್ತು ತಾಯಿ ಸುಬ್ಬಲಕ್ಷ್ಮಿ ಅಮ್ಮಾಳ್ ರವರ ಸುಪುತ್ರರಾಗಿ ತಿರುವಾರೂರಿನಲ್ಲಿ ೧೭೭೫ರಲ್ಲಿ ಜನಿಸಿದರು. ತಂದೆ ತಾಯಿಯರ ಭಕ್ತಿಗೆ ಒಲಿದ ವೈದೀಶ್ವರ ಕೋಯಿಲ್ ಮುತ್ತು ಕುಮರಸ್ವಾಮಿಯ ಅನುಗ್ರಹಿತ ಮಗು ದೀಕ್ಷಿತರು. ೧೬ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಇವರು ತಮ್ಮ ಗುರುಗಳ ಆಣತಿಯಂತೆ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಗಿತ್ತು. ನಿಷ್ಣಾತ ವೈಣಿಕರಾದ ದೀಕ್ಷಿತರು ಪಂಚದಶ ಗಮಕಗಳನ್ನು ಪ್ರಯೋಗಮಾಡಿ ತೋರಿಸಿದ್ದರು. ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕರಿಸಿದ್ದನು. ತಾವು ಈ ’ಗುರುಗುಹ’ನ ದಾಸ, ಅವನ ಕಾಲಿನ ಕಸವೆಂಬ ಭಾವನೆಯಿಂದ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ಎಂದು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಇವರು ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಭಾವ ವ್ಯಕ್ತಪಡಿಸಿದ್ದಾರೆ.

ದೀಕ್ಷಿತರು ಶ್ರೀ ವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಅತ್ಯಂತ ಶ್ರೇಷ್ಠ ಕೃತಿಗಳಲ್ಲಿ ಅವರ ಪಾಂಡಿತ್ಯ ಮತ್ತು ವಿದ್ವತ್ತ್ ಗಳ ಅನುಭವ ನಮಗಾಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಅವರ ವಿಶೇಷತೆಯೇ....

ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ..... ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ, ಸ್ಥಾನ ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ.......

ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು. ತಮ್ಮದೇ ರಚನೆ "ಮಾಯೆ ತ್ವಂ ಯಾಹಿ, ಮಾಂ ಬಾದಿತುಂ ಕಾಹಿ".... ಎಂಬ ಕೃತಿಯಲ್ಲಿ ಎಲೈ ಮಾಯೆಯೇ ನನ್ನನ್ನು ತ್ಯಜಿಸು, ಬಾಧಿಸಬೇಡವೆಂದು ಹೇಳುತ್ತಾರೆ...... ದೀಕ್ಷಿತರು ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ರಚಿಸಿದ್ದಾರೆ.


ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ದೇವರನ್ನು ಪೂಜಿಸುತ್ತಿದ್ದರು. ಅವರು ಬಹಳ ಮೃದು ಹೃದಯದವರೂ, ಕರುಣೆಯುಳ್ಳವರೂ ಆಗಿದ್ದರು. ಬರದಿಂದ ಬಸವಳಿದ ಜೀವಿಗಳನ್ನು ನೋಡಿ, ಮರುಗಿ... "ಆನಂದಾಮೃತ ಕರ್ಷಿಣೀ... ಅಮೃತ ವರ್ಷಿಣೀ...." ಎಂದು ಬೇಡಿದರು. ನನ್ನ ಮನಸ್ಸಿನಲ್ಲಿ ಸಂತೋಷದ / ಆನಂದದ ಮಳೆಗರೆದ ತಾಯೇ... "ಸಲಿಲಂ ವರ್ಷಯ ವರ್ಷಯ".... ಎಂದು ಹಾಡಿದರು.........


ರ‍ಾಗ : ಅಮೃತವರ್ಷಿಣಿ ತಾಳ : ಆದಿತಾಳ

ಪಲ್ಲವಿ

ಆನಂದಾಮೃತ ಕರ್ಷಿಣಿ.. ಅಮೃತ ವರ್ಷಿಣಿ....
ಹರಾದಿ ಪೂಜಿತೇ ಶಿವೇ ಭವಾನಿ.......||

ಸಮಷ್ಟಿ ಚರಣ

ಶ್ರೀನಂದಾದಿ ಸಂರಕ್ಷಿಣಿ...... ಶ್ರೀ ಗುರುಗುಹ ಜನನಿ ಚಿದ್ರೂಪಿಣಿ...
ಸಾನಂದ ಹೃದಯ ನಿಲಯೇ ಸದ್ಯ ಸ್ಸುವೃಷ್ಟಿ ಹೇತವೇ ತ್ವಾಂ.....
ಸಂತತಂ ಚಿಂತಯೇ ಅಮೃತೇಶ್ವರಿ......
ಸಲಿಲಂ ವರ್ಷಯ ವರ್ಷಯ ವರ್ಷಯ............ ||


ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರು. ಹೀನ ಕುಲದವನಾದ ಅವನು ನವಗ್ರಹ ಶಾಂತಿ ಮಾಡಲಾಗುವುದಿಲ್ಲವೆಂದು, ಅವನಿಗೆ ಈ ಕೃತಿಗಳನ್ನು ಸ್ವತ: ಹೇಳಿಕೊಟ್ಟರು. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಹಾಗೆ ಸಂಗೀತದಿಂದಲೂ ಸಾಧ್ಯವೆಂದು ಶಿಷ್ಯನಿಗೆ ಉಪದೇಶಿಸಿದರು. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು.... ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಟ ಕೃತಿಗಳಾಗಿವೆ.........

ಮುಂದುವರೆಯುವುದು.............

ಕೊನೆಯ ಮಾತು : ಆನಂದಾಮೃತಕರ್ಷಿಣಿ ಕೃತಿಯ ಕೊಂಡಿ ಹಂಸಾನಂದಿಯವರ ಬ್ಲಾಗ್ ಮೂಲಕ ಸಿಕ್ಕಿತ್ತು. ಅವರಿಗೆ ಧನ್ಯವಾದಗಳು....

Tuesday, October 6, 2009

ಆನಂದ..ಬ್ರಹ್ಮಾನಂದ..ಪರಮಾನಂದ.. ಸಂಗೀತವೇ........

ಶ್ರೀ ಕೃಷ್ಣರಾಜೇಂದ್ರ ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜ ತನ್ನ ೪೧ನೇ ಸಂಗೀತ ಸಮ್ಮೇಳನವನ್ನು ಈ ತಿಂಗಳ ೪ನೇ ತಾರೀಖಿನಿಂದ ನಡೆಸುತ್ತಿದೆ. ಪ್ರತಿದಿನ ಬೆಳಿಗ್ಗೆ ವಿದ್ವತ್ ಘೋಷ್ಟಿಗಳು ನಡೆಯುತ್ತಿವೆ. ಸಂಜೆ ೪.೧೫ರಿಂದ ೫.೪೫ರವರೆಗೆ ಯುವ ಉದಯೋನ್ಮುಖ ಕಲಾವಿದರುಗಳ ಸಂಗೀತ ಕಛೇರಿಗಳು ನಡೆಯುತ್ತಿವೆ. ಸಾಯಂಕಾಲ ೬ ಘಂಟೆಯಿಂದ ರಾತ್ರಿ ೯ ಘಂಟೆಯವರೆಗೆ ಭವ್ಯ ಸಂಗೀತ ಕಛೇರಿಗಳು ನಡೆಯುತ್ತಿವೆ.

ನಿನ್ನೆ ೬ನೇ ತಾರೀಖು ಸಾಯಂಕಾಲ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಏರ್ಪಡಿಸಿದ್ದರು. ಸರಿಯಾಗಿ ೬ ಘಂಟೆಗೆ ಕಛೇರಿ ನಠಭೈರವಿ ರಾಗದ, ಅವರ ಸ್ವಂತ ರಚನೆಯಾದ ವರ್ಣದಿಂದ ಆರಂಭವಾಯಿತು. ಈ ವರ್ಣ ಈ ಕಛೇರಿಗೆಂದೇ ಮಾಡಿದ ಮತ್ತು ಅರ್ಪಿಸಲ್ಪಟ್ಟ ಕೃತಿ ಎಂದು ಶ್ರೀ ಪದ್ಮನಾಭನ್ ಹೇಳಿದರು. ಮುಂದುವರೆದು ಮಾಮವಸದಾವಂದೇ...... ಭಾವಯಾಚ್ಯುತಂ ವಾಸುದೇವಂ, ಪೂರ್ವಿ ಕಲ್ಯಾಣಿ ರಾಗದಲ್ಲಿ...... ಕೃತಿಗೆ ಸೊಗಸಾದ ನೆರವಲ್ ಹಾಡಿ, ಕಲ್ಪನಾ ಸ್ವರಗಳನ್ನು ಹಾಡಿದರು. ಕೃತಿ ಆರಂಭಿಸುವ ಮೊದಲು ಮಾಡಿದ ಪೂರ್ವಿ ಕಲ್ಯಾಣಿ ರಾಗದ ಆಲಾಪನೆ ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿತ್ತು.

ಇದರ ನಂತರ ಅವರು ಹಾಡಿದ್ದು ಚಪಲವಿರಬೇಕು... ನಮಗೆ ಗಾನ ಹೋಳಿಗೆ ತಿಂದು ತೇಗುವಂತಾ, ವೈಕುಂಠ ತೋರಿಸುವ ಗಾಯನ (ಗಾನದ) ಚಪಲವಿರಬೇಕು..... ಎಂಬ ಸ್ವಂತ ರಚನೆ ಹಾಡಿದರು. ಈ ಕೃತಿಯ ಸಾಹಿತ್ಯ ನನಗೆ ಬರೆದುಕೊಳ್ಳಲಾಗದಿದ್ದರೂ ಅದರ ಭಾವಾರ್ಥ ಮಾತ್ರ ನನ್ನನ್ನು ಆಶ್ಚರ್ಯಗೊಳಿಸಿತು. ಶ್ರೀ ಪದ್ಮನಾಭನ್ ರವರು ಈ ರಚನೆಯಲ್ಲಿ ಗಾನದ ಹೋಳಿಗೆ ತಿನ್ನಲು ಅನಿಲದ ಅಡಚಣೆಯಿಲ್ಲ, ಅನ್ನ ವರ್ಜ್ಯವಿಲ್ಲ.... ಎಂದು ಸೊಗಸಾಗಿ ಹಾಡುತ್ತಾ ಹೋದಂತೆ, ನಮಗೆ ಅರ್ಥ ತಿಳಿಯಾಗಿ ನಮ್ಮ ಮನಮುಟ್ಟುವಂತಾಯಿತು. ಒಟ್ಟಿನಲ್ಲಿ ಅವರು ಹೂರಣದ ಒಬ್ಬಟ್ಟನ್ನು ವರ್ಣಿಸುತ್ತಾ... ಒಳಗಿರುವ ಹೂರಣ ಸಂಗೀತದ ಸಾಹಿತ್ಯ.... ಹೋಳಿಗೆಯ ಬಣ್ಣವೇ ನಾವು ಹಾಡುವ ’ವರ್ಣ’.... ಸಕ್ಕರೆಯ ಒಬ್ಬಟ್ಟಿಗೆ ಮತ್ತೆ ಮೇಲೆ ಹಾಕಿಕೊಳ್ಳುವ ಸ್ವಲ್ಪ ಸಕ್ಕರೆಯೇ ಸಂಗೀತದ ಲಯ, ತಾಳ, ಭಾವ ಎಲ್ಲವನ್ನೂ ಹೋಳಿಗೆಗೆ ರುಚಿ ಹೆಚ್ಚಾಗಲು ಸೇರಿಸುವ ಕ್ಷೀರ (ಹಾಲು) ಮತ್ತು ಅಭಿಗಾರ (ತುಪ್ಪ) ಎಂದು ಮನತುಂಬಿ ಹಾಡುತ್ತಾ ಹೋದಂತೆ, ಕೇಳುವವರಿಗೆ ನಿಜವಾಗಲೂ ಹೋಳಿಗೆ ಸವಿದದ್ದಕ್ಕಿಂತ ಹೆಚ್ಚು ಆನಂದ ಉಂಟಾಯಿತು.

ಕಛೇರಿ ಮುಂದುವರೆಸುತ್ತಾ.. ಎಂತವೇಡುಕೊಂದೂ ರಾಘವಾ.....ಹಾಡಿದ ನಂತರ ಮತ್ತೊಂದು ಕೃತಿ ನನ್ನನ್ನು ಅತಿಯಾಗಿ ಸೆಳೆದಿದ್ದು ಅವರು ಹಾಡಿದ ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ.... ಎಂಬ ಸಾಹಿತ್ಯ. ಇದರ ಚರಣದಲ್ಲಿ ಅವರು ಹೇಳುತ್ತಾರೆ...
ದಾನ ಧರ್ಮ ಮಾಡಲಿಲ್ಲ.. ದಯಬುದ್ಧಿ ಹುಟ್ಟಲಿಲ್ಲ... ಜ್ಞಾನ ಅರಿತೂ ಹರಿ ಪೂಜೆ ಮಾಡಲಿಲ್ಲ... ಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ... ನಿರ್ಮಲ ಮನದಲ್ಲಿ ಒಂದೂ ದಿನವಿರಲಿಲ್ಲ... ಉಂಡು ಸುಖಿಯಲ್ಲ.. ಉಟ್ಟು ತೊಟ್ಟು ಹರಿನಾಮವಿಲ್ಲ... ದುಡ್ಡು ಕೊಟ್ಟು ಹರಿಸೇವೆ ಮಾಡಲಿಲ್ಲ... ಗುಂಡು ನಾಯಿಯಂತೆ ಮನೆ ಮನೆಗಳ ತಿರುಗಿ ಇದ್ದೆ... ಮೊಂಡು ಜೋಗಿಗಳ ಗುಣಗಳ ಬಿಡಿಸೋ ದಯವ ಮಾಡೋ.....

ಹಾಡಿ ಮುಗಿಸಿ ಮತ್ತೆ ದಾನ ಧರ್ಮ ಮಾಡಲಿಲ್ಲ ಎಂಬ ಕಡೆ ನೆರವೆಲ್ ಮಾಡಿದರು.. ನಂತರ ಹಾಡಿದ್ದೇ ಬಂಟುರೀತಿ ಕೊಲುವು ವಿಯವಯ್ಯ ರಾಮಾ...., ಇದರ ನಂತರ ಬಂದಿದ್ದು ಸರ್ವಕಾಲಕ್ಕೂ ಅತ್ಯಂತ ಜನಪ್ರಿಯವಾದ ದ್ವಿಜಾವಂತಿ ರಾಗದ ಅಖಿಲಾಂಡೇಶ್ವರಿ ರಕ್ಷಮಾಂ........ ಇದಾದ ಮೇಲೆ ಹಾಡಿದ್ದೇ ಕಛೇರಿಯ ವಿಶೇಷ ಘಟ್ಟ... ನಠ ಭೈರವಿಯ ರಾಗಾಲಾಪನೆ... ತಾನ... ಪಲ್ಲವಿ "ಆನಂದ.... ಬ್ರಹ್ಮಾನಂದ..... ಪರಮಾನಂದ.... ಸಂಗೀತವೇ.....". ಇದಂತೂ ನಿಜವಾಗಿ ಶ್ರೋತೃಗಳಿಗೆಲ್ಲಾ ಸಂಗೀತದ ಪರಮಾನಂದವನ್ನೇ ಉಣಬಡಿಸಿತು. ಶ್ರೀ ಪದ್ಮನಾಭನ್ ರವರ ಕಛೇರಿಗಳಲ್ಲಿ ಅವರು ಪ್ರಯೋಗಿಸುವ ಕಲ್ಪನಾ ಸ್ವರಗಳು, ಆಲಾಪನೆಗಳು, ನೆರವೆಲ್ ಮಾಡುವ ಹೊಸ ಹೊಸ ವಿಧಾನಗಳು ನಮ್ಮನ್ನು ಖಂಡಿತಾ ಸ್ವರ್ಗಕ್ಕೇ ಕರೆದುಕೊಂಡು ಹೋಗಿಬಿಡತ್ತೆ. ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಲೇ ಇರೋಣ ಎನ್ನಿಸುವಷ್ಟು ಅದ್ಭುತವಾಗಿರುತ್ತದೆ.

ನಂತರ ಹಾಡಿದ್ದು ಪಾರ್ಥಸಾರಥಿ ರುಕ್ಮಿಣೀಪತಿ.....ಸ್ವಯಂ ರಚನೆ ಮಾಡಿದ್ದು.... ಕೊನೆಯ ಘಟ್ಟ ಮುಟ್ಟಿದ್ದ ಈ ಸಾಯಂಕಾಲದ ಕಛೇರಿಗೆ ಶ್ರೀ ಪದ್ಮನಾಭರ್ ರವರು ಭಕ್ತಿಯ ಸಿಂಚನ ಲೇಪಿಸಿದ್ದು ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮವ್ರತಾಯಚ, ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೆ... ಎಂಬ ಗುರುರಾಯರ ಸ್ತುತಿಯನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಿದ್ದು.....

ಕಛೇರಿ ಮುಕ್ತಾಯದ ಹಂತ ತಲುಪುತ್ತಿದ್ದಂತೆ ನನ್ನೊಳಗಿನ ಚಡಪಡಿಕೆ ಮಿತಿ ಮೀರಿತ್ತು... ಯಾವ ತಿಲ್ಲಾನ ಹಾಡಿ ಮುಗಿಸುತ್ತಾರೆಂಬ ಕುತೂಹಲ.... ನೆನೆಸಿದ್ದಂತೆಯೇ.. ಸಿಂಧೂಭೈರವಿಯ ತಿಲ್ಲಾನ ಶುರು ಮಾಡಿದರು. ಮಧ್ಯದ ಸಾಹಿತ್ಯ ಕೂಡ ಅವರ ಸ್ವಂತ ರಚನೆಯೇ.... ಅವರು ತಿಲ್ಲಾನ ಹಾಡಿದ ವೇಗ ಯಾವ ಯುವ ಕಲಾವಿದನನ್ನೂ ಪೋಟಿಗೊಡ್ಡಬಹುದಾಗಿತ್ತು. ಮೂರು ಘಂಟೆಗಳ ಕಾಲ ಸುಶ್ರಾವ್ಯವಾಗಿ ಗಾನದ ಅಮೃತವನ್ನೇ ಸುರಿಸುವ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಎಷ್ಟು ಕೇಳಿದರೂ, ಇನ್ನೂ ಗಾನಾಮೃತಕ್ಕಾಗಿ ತಹತಹಿಸುವಂತೆ ಮಾಡುತ್ತದೆ. ಸಂಗೀತವನ್ನೇ ಜೀವ, ಸರ್ವಸ್ವವೆಂದುಕೊಂಡು, ಅದೊಂದು ಪೂಜೆಯೇನೋ ಎಂಬಂತೆ ಹಾಡುತ್ತಾ ಮೋಡಿ ಮಾಡುವ ಈ ಕಲಾವಿದರನ್ನು ಹೋಲಿಸಲು ಅಥವಾ ವರ್ಣಿಸಲು ನನಗೆ ಶಬ್ದ ಭಂಡಾರ ಸಾಲದು..... ಕಛೇರಿ ಮುಗಿಸಿ ಹೊರಗೆ ಬಂದರೆ, ಯಾವುದೋ ದಿವ್ಯವಾದ ಗಾನ ಲೋಕದಿಂದ ಧರೆಗಿಳಿದು ಬಂದಂತೆ ಅನ್ನಿಸುತ್ತದೆ.........

ಬೆಂಗಳೂರು ಗಾಯನ ಸಮಾಜ ಪ್ರತೀ ವರ್ಷ ನಡೆಸುವ ಈ ಸಮ್ಮೇಳನದಲ್ಲಿ ವಾರದ ದಿನಗಳು ಶ್ರೋತೃಗಳ ಹಾಜರಾತಿ ಸ್ವಲ್ಪ ಕಮ್ಮಿಯಾಗೇ ಇರತ್ತೆ. ಇಂಥಹ ಸತ್ಕಾರ್ಯ ಮಾಡುತ್ತಿರುವ ಒಂದು ಸಂಸ್ಥೆಯನ್ನು ನಾವು ಪ್ರೋತ್ಸಾಹಿಸಲೇ ಬೇಕು, ನಮ್ಮ ಅತ್ಯಮೂಲ್ಯವಾದ ಕರ್ನಾಟಕ ಸಂಗೀತವನ್ನು ಉಳಿಸಲೇ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಂಥಹ ಅಪರೂಪದ ಕಲಾವಿದರು ತಮ್ಮನ್ನೇ ಮರೆತು ಅಮೃತಧಾರೆಯನ್ನೇ ಹರಿಸುವಾಗ ನಾವು ಕನಿಷ್ಠ ಕೇಳಿಯಾದರೂ ನಮ್ಮ ಜನ್ಮ ಸಾರ್ಥಕ್ಯ ಪಡೆಯಬಹುದಲ್ವಾ?............

Friday, October 2, 2009

ಎರಡು ಸಾವಿನ ಸುತ್ತ.........

ಮೊದಲನೆಯ ಸಂದರ್ಭ :

ಸಾವು ಮನುಷ್ಯನ ಗತ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ ಎಂಬ ಚಿಕ್ಕ ಸತ್ಯ ನಿನ್ನೆ ನನ್ನ ಅನುಭವಕ್ಕೆ ಬಂತು. ನಮ್ಮ ಕಟ್ಟಡದಲ್ಲಿ ಕಾವಲುಪಡೆಯ ಸದಸ್ಯನಾದ ಒಬ್ಬ ವ್ಯಕ್ತಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಮರಳಲು ಸಮವಸ್ತ್ರ ಬದಲಿಸಿ ಬಂದಾಗ, ಸುಸ್ತಾಗುತ್ತಿದೆ ಎಂದನಂತೆ. ಬೆಳಿಗ್ಗೆ ಕೆಲಸಕ್ಕೆ ಬಂದವರು ಮತ್ತು ಅಲ್ಲಿದ್ದ ಮತ್ತಿತರು, ಆ ವ್ಯಕ್ತಿಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಕಾಫಿ ತರಿಸಿ ಕುಡಿಸಿ, ಚಾಕೊಲೇಟ್ ಕೊಟ್ಟು, ಮಾತನಾಡಿಸಿ ಉಪಚರಿಸಿದ್ದಾರೆ. ಆದರೆ ತೀವ್ರ ಹೃದಯಾಘಾತದಿಂದ ಆ ವ್ಯಕ್ತಿ ಕುಳಿತಲ್ಲೇ ನಿಧನ ಹೊಂದಿದ್ದ. ಮನೆಗೆ ತಲುಪಿಸುವ ಏರ್ಪಾಟು ಮಾಡಿದಾಗ, ವ್ಯಕ್ತಿಯ ಮನೆಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳು ಸ್ವೀಕರಿಸಲು ನಿರಾಕರಿಸಿಬಿಟ್ಟಿದ್ದಾರೆ. ಕಾರಣವೇನೆಂದರೆ ಸತ್ತ ವ್ಯಕ್ತಿ ಒಂದು ವರುಷದ ಹಿಂದೆ ಮನೆಯವರ ಜೊತೆ ಜಗಳವಾಡಿಕೊಂಡು, ಮನೆ ಬಿಟ್ಟು ಬಂದಿದ್ದನಂತೆ....... ಕೊನೆಗೆ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಆ ವ್ಯಕ್ತಿಯ ಮಗ ಬಂದು ತಂದೆಯ ಶವವನ್ನು ತೆಗೆದುಕೊಂಡು ಹೋದ.....

ಮನುಷ್ಯ ಬದುಕಿರುವಾಗ ಮಾಡುವ ಎಲ್ಲಾ ಕಾರ್ಯಗಳಿಗೂ ಅವನ ಸಾವಿನ ನಂತರದಲ್ಲಿ ಅವನ ಸಂಬಂಧಿಕರಿಂದಾಗಲಿ ಅಥವಾ ಅವನ ಸಹವಾಸಕ್ಕೆ ಬಂದ ಇತರರಿಂದಾಗಲಿ ಅರ್ಥ ಹುಡುಕುವಂತಾಗುತ್ತದೆ. ಈ ವ್ಯಕ್ತಿ ಬದುಕಿದ್ದಾಗ ಹೇಗಿದ್ದ, ತನ್ನ ಸಂಸಾರವನ್ನು ಹೇಗೆ ಪಾಲಿಸಿದ ಅಥವಾ ಹೆಂಡತಿ ಮಕ್ಕಳೊಂದಿಗೆ ಯಾವ ರೀತಿಯ ಬಾಂಧವ್ಯ ಹೊಂದಿದ್ದ ಎಂಬ ವಿಚಾರ ನನಗೆ ತಿಳಿದಿಲ್ಲ. ತಿಳಿದುಕೊಳ್ಳುವ ಅವಶ್ಯಕತೆಯೂ ಇಲ್ಲಿ ಇಲ್ಲ. ಆದರೆ ಈ ಸಂದರ್ಭದಲ್ಲಿ ಆ ಮೃತ ವ್ಯಕ್ತಿಯ ಕುಟುಂಬ ನಡೆದುಕೊಂಡ ರೀತಿ ನನಗೆ ಗೊಂದಲವನ್ನುಂಟುಮಾಡಿದೆ. ಮರಣದಲ್ಲಿ ನಮ್ಮ ಆಕ್ರೋಶ, ಸಿಟ್ಟು, ದ್ವೇಷ, ಹತಾಶೆ ಎಂಬ ಭಾವೋದ್ವೇಗಗಳನ್ನು ಹರಿಯ ಬಿಡಬಹುದೋ - ಬಾರದೋ ಎಂಬುದೇ ನನ್ನ ತರ್ಕಕ್ಕೆ ನಿಲುಕದ ವಿಷಯವಾಗಿದೆ. ಜೀವ ದೇಹವನ್ನು ಬಿಟ್ಟು ಹೋದ ನಂತರ ನಮ್ಮ ಸಂಸ್ಕೃತಿಯ ಪ್ರಕಾರ ಅದಕ್ಕೆ ಸಂಸ್ಕಾರ ಮಾಡಬೇಕದದ್ದು ಮಗನ ಅಥವಾ ಕುಟುಂಬದ ಇತರ ಸದಸ್ಯರ ಕರ್ತವ್ಯ. ಆದರೆ ಮನೆಬಾಗಿಲಿಗೆ ಬಂದ ಶವವನ್ನು ನಿರಾಕರಿಸುವುದರಿಂದ ಏನನ್ನು ಸಾಧಿಸಿದಂತಾಗಿದೆ? ಬದುಕಿದ್ದಾಗ ಆ ವ್ಯಕ್ತಿ ನಡೆದುಕೊಂಡಿದ್ದಿಕ್ಕಿಂತ ಕೀಳ್ತನದಲ್ಲಿ, ಕುಟುಂಬದವರು ನಡೆದುಕೊಂಡರೆಂದು ನನಗನ್ನಿಸಿತು. ದೇಹವನ್ನು ಸಂಸ್ಕಾರ ಮಾಡದೆ ಬಿಡುವುದರಿಂದ, ನಾವು ಪರಿಸರನಾಶಕ್ಕೆ ಕಾರಣರಾಗಬಹುದೇ ಹೊರತು, ಸತ್ತ ಆ ವ್ಯಕ್ತಿಗೆ ಅವನು ಮಾಡಿದ ತಪ್ಪುಗಳನ್ನು ಯಾವ ರೀತಿ ಅರ್ಥಮಾಡಿಸಿದಂತಾಯಿತು ?

ಎರಡನೆಯ ಸಂದರ್ಭ :

ಕೆಲವು ದಿನಗಳ ಕೆಳಗೆ ನಮಗೆ ತುಂಬಾ ತಿಳಿದವರ ಸಾವು ಘಟಿಸಿತ್ತು. ಮೃತರಾದ ವ್ಯಕ್ತಿ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಎಂದಿಗೂ ಗೌರವಿಸಲೇಯಿಲ್ಲ. ಒಬ್ಬನೇ ಮಗನನ್ನು ಆದರಿಸಲೇ ಇಲ್ಲ. ಬದುಕಿದ್ದಷ್ಟೂ ದಿನವೂ ಹೆಂಡತಿಯನ್ನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹಿಂಸಿಸಿದ ಆತ, ಸಾಯುವ ಕಾಲಕ್ಕೆ ಒಂದು ಅಪರೂಪದ ಲಿವರ್ ಕ್ಯಾನ್ಸರ್ ನಿಂದ ನರಳುತ್ತಿದ್ದರು. ಆದರೆ ತನಗೆ ಈ ಮಾರಕ ರೋಗ ಇರುವ ವಿಷಯ ಅವರಿಗೆ ತಿಳಿಯಲೇ ಇಲ್ಲ. ಜಾಂಡೀಸ್ ಎಂದು ಆಸ್ಪತ್ರೆ ಸೇರಿದವರಿಗೆ ೪ನೇ ಹಂತದಲ್ಲಿದ್ದ ಕ್ಯಾನ್ಸರ್ ರೋಗ ಕಂಡುಹಿಡಿಯಲ್ಪಟ್ಟಿತ್ತು. ಕೆಮೋ ಥೆರಪಿ ಬೇಡವೆಂದ ಹೆಂಡತಿ, ಊರಿಗೆ ಕರೆದುಕೊಂಡು ಹೋಗಿ ಅಲ್ಲಿಯ ಆಸ್ಪತ್ರೆಗೆ ಸೇರಿಸಿ, ವೈದ್ಯ ಮಾಡಿಸಿ, ಬದುಕಿದ್ದ ಹದಿನೈದು ದಿನಗಳು ಆರೈಕೆ ಮಾಡಿದರು. ತನಗೆ ಆತ ಮಾಡಿದ ಎಲ್ಲಾ ಅನ್ಯಾಯ-ಅಕ್ರಮವನ್ನೂ ಮರೆತು ಮಾನವೀಯತೆ ಮೆರೆದರು.

ಮರಣಾನಂತರವೂ ಈ ವ್ಯಕ್ತಿಯ ಅಂತ್ಯ ಸಂಸ್ಕಾರ ಎದುರು ನೋಡದಿದ್ದ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ತಂದೆ ಪ್ರೀತಿಯನ್ನೇ ಪಡೆಯದೆ ಬರಿಯ ಅಪಮಾನಗಳನ್ನೇ ಸಹಿಸಿದ ಮಗ ಕೂಡ ಶದ್ಧೆಯಿಂದ, ಪಾಂಗಿತವಾಗಿ ಎಲ್ಲವನ್ನೂ ಮಾಡಿದ. ಯಾವುದೋ ಜಾತಿಯಲ್ಲಿ ಹುಟ್ಟಿದ್ದರೂ ಕೂಡ ಉತ್ತಮ ರೀತಿಯಲ್ಲಿ ಸಂಸ್ಕಾರ ಪಡೆದ ಈ ವ್ಯಕ್ತಿ ನಿಜವಾಗಿ ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿದ್ದಿರಬೇಕೆಂಬ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡಿತ್ತು !!!

ಇಷ್ಟೆಲ್ಲಾ ಮಾಡಿ ಮುಗಿಸುವಾಗ ಹೆಂಡತಿಯ ಮನದಲ್ಲಿ ಏನು ಭಾವನೆಗಳಿದ್ದವೋ ಗೊತ್ತಿಲ್ಲ ಆದರೆ ನಾನು ನನ್ನ ಕರ್ತವ್ಯ ಮಾಡಿದೆ ಎಂಬಂಥ ಮಾತುಗಳನ್ನು ಆಡಿದ್ದರು ಆಕೆ.

ಮೇಲಿನ ಘಟನೆಗೆ ವಿರುದ್ಧವಾದ ಈ ಪ್ರಸಂಗ ಈ ವ್ಯಕ್ತಿಯ ಗತಜೀವನದತ್ತ ಬೆಳಕು ಚೆಲ್ಲಲೇಯಿಲ್ಲ. ಬಾಹ್ಯ ಪ್ರಪಂಚಕ್ಕೆ ಎಲ್ಲಾ ಒಳ್ಳೆಯತನವನ್ನೂ ಹೊಂದಿದ್ದ ವ್ಯಕ್ತಿ ಕೀಳರಿಮೆಯಿಂದ ನರಳುತ್ತಿದ್ದರೆಂಬ ನನ್ನ ನಂಬಿಕೆ ಧೃಡಪಟ್ಟಿತ್ತು. ಇಂತಹ ಕೀಳರಿಮೆಯಿಂದ ನರಳುವ ಗಂಡಸರು ನಮ್ಮ ಸಮಾಜದಲ್ಲಿ ಇನ್ನೂ ಅನೇಕರಿದ್ದಾರೆ. ಹೆಂಡತಿಯ ಏಳಿಗೆ ಸಹಿಸದ, ತನ್ನನ್ನು ಉದ್ಧರಿಸಿಕೊಳ್ಳಲು ಅರಿಯದ ಜನರು, ಸ್ವಲ್ಪ ಗಮನ ಇಟ್ಟು ನೋಡಿದರೆ, ನಮ್ಮ ಮಧ್ಯೆ ಇನ್ನೂ ಅನೇಕರು ಇದ್ದಾರೆ.

Tuesday, September 29, 2009

ಕೆಲಸದವರಿಗೊಂದು ಧನ್ಯವಾದಾರ್ಪಣೆ.........

೧೯೮೩ರಲ್ಲಿ ನನ್ನವರ ಉದ್ಯೋಗ ನಿಮಿತ್ತ ನಾವು ಕೊಲ್ಕತ್ತಾದಲ್ಲಿ ನೆಲೆಸ ಬೇಕಾಯ್ತು. ಊರು, ಭಾಷೆ ಎರಡೂ ಹೊಸದು. ನಮ್ಮ ಜೊತೆಗೇ ಕಾಲೇಜ್ ನಲ್ಲಿ ಓದಿದ್ದ ನಮ್ಮ ಸ್ನೇಹಿತರು ಅದೇ ಕಛೇರಿಯಲ್ಲೇ ಇದ್ದಿದ್ದರಿಂದ, ನನ್ನವರು ಧೈರ್ಯವಾಗಿ, ನಮ್ಮ ಭಾವನ ಜೊತೆ ಹೋಗಿ, ಕೆಲಸ ಶುರು ಮಾಡಿ, ೬ ತಿಂಗಳ ನಂತರ ಒಂದು ಮನೆ ಮಾಡಿದರು. ನಾನು ಹೋಗಿ ನೆಲೆಸಿದೆನಾದರೂ ಬಂಗಾಲಿ ಭಾಷೆ ಸ್ವಲ್ಪ ಕೂಡ ತಿಳಿಯದೆ, ಕಕ್ಕಾಬಿಕ್ಕಿಯಾಗುವಂತೆ ಮಾಡಿತ್ತು. ಬೆಂಗಾಲಿ ಜನಗಳು ಒಳ್ಳೆಯವರಾದರೂ, ಭಾಷೆಯ ತೊಡಕಿನಿಂದ ನನಗ್ಯಾರೂ ಸ್ನೇಹಿತರಿರಲಿಲ್ಲ. ಅಲ್ಲಿ ಬ್ಯಾಂಕ್ ಉದ್ಯೋಗಿಗಳು, ಕರ್ನಾಟಕದಿಂದ ಬಂದವರು, ಮೈಸೂರು ಅಸೋಸಿಯೇಷನ್ ಮೂಲಕ ಪರಿಚಿತರಾಗಿ, ಬರಿಯ ಕನ್ನಡದವರ ಕೂಟವೇ ಇತ್ತು. ಹೊರಗೆ ಸಾಮಾನು ತರಲು ಅಂಗಡಿಗಳಿಗೆ ಹೋದಾಗ ಕೂಡ , ಅಲ್ಲಿ ಇಟ್ಟಿರುವ ಪದಾರ್ಥಗಳನ್ನು ತೋರಿಸಿ, ಮೂಕವಾಗಿ ಅಭಿನಯಿಸಿ, ಸಂಭಾಷಣೆ ನಡೆಸಿ, ಕೊಂಡು ತರುತ್ತಿದ್ದೆವು. ಕೆಲವೊಮ್ಮೆ, ನಮಗೆ ಬೇಕಾದ ಪದಾರ್ಥಗಳು ಹೊರಗೆ ಇಟ್ಟಿರದಿದ್ದರೆ, ಫಜೀತಿಯಾಗಿ ಬಿಡುತ್ತಿತ್ತು.. ಅಂಗಡಿಯವನಿಗೆ ಹಿಂದಿ ಬರೋಲ್ಲ, ನಮಗೆ ಬೆಂಗಾಲಿ ತಿಳಿಯೋಲ್ಲ... ಹೀಗೇ ಅನೇಕ ಸಲ ನಗೆಪಾಟಲಿಗೆ ಗುರಿಯಾಗಿ, ಹೇಗೋ ಅಂತೂ ಸಂಸಾರ ನಡೆಸುತ್ತಿದ್ದೆವು. ಇದರಲ್ಲಿ ಕೆಲಸದವರು ಬೇರೆ ಬೇಡವೆಂದು {(ಸಂಬಳ ಕೊಡಲು ದುಡ್ಡೂ ಇರಲಿಲ್ಲ ಅನ್ನಿ :-)} ಎಲ್ಲಾ ಕೆಲಸ ನಾನೇ ಮಾಡಿಕೊಳ್ಳುತ್ತಿದ್ದೆ. ೬ ತಿಂಗಳ ನಂತರ ನಮ್ಮ ಪರಿಚಯದವರ ಮೂಲಕ ನಮಗೆ ಲೇಕ್ ಮಾರ್ಕೆಟ್ ಎಂಬ ಬಡಾವಣೆಯಲ್ಲಿ ಒಂದು ಮನೆ ಸಿಕ್ಕಿತ್ತು. ಅಷ್ಟು ಹೊತ್ತಿಗೆ ನಾನು ನನ್ನ ಮಗುವಿನ ತಾಯಿಯಾಗುವವಳಿದ್ದೆ..... ಹೊಸ ಮನೆಯಲ್ಲಿ ನನ್ನ ಜೊತೆಗೆಂದು ’ದುಕುನಿ’ ಎಂಬ ಹೆಸರಿನ, ಬಿಹಾರಿ ಹುಡುಗಿ ಕೆಲಸಕ್ಕೆ ಬಂದಳು.... ಅವಳಿಗೆ ಹಿಂದಿ ಅರ್ಥ ಆಗುತ್ತಿದ್ದಿದ್ದರಿಂದ ನನಗೆ ಸ್ವಲ್ಪ ನೆಮ್ಮದಿಯಾಗಿತ್ತು..... ದುಕುನಿ ದಿನವೂ ಮಧ್ಯಾನ್ಹ ೧೧.೩೦ಗೆ ಬಂದು ಕೆಲಸವೆಲ್ಲಾ ಮಾಡಿ ೧ ಘಂಟೆಯವರೆಗೆ ನನ್ನ ಜೊತೆ ಇದ್ದು ಹೋಗುತ್ತಿದ್ದಳು. ೧.೩೦ಗೆ ನನ್ನವರು ಬಂದು ಊಟ ಮಾಡಿ ಹೋಗುತ್ತಿದ್ದರು. ಮಧ್ಯಾನ್ಹ ಮತ್ತೆ ದುಕುನಿ ೩.೩೦ಗೆ ಬಂದು ೫ ಘಂಟೆಯವರೆಗೆ ಇರುತ್ತಿದ್ದಳು. ನನ್ನವರು ಸಾಯಂಕಾಲ ೬ ಘಂಟೆಯ ನಂತರ ಬರುತ್ತಿದ್ದರು. ನಾನು ಆಸ್ಪತ್ರೆಗೆ ಹೋಗಬೇಕಾದ ಸಮಯದಲ್ಲಿ, ಆ ಹುಡುಗಿ ನನಗೆ ತುಂಬಾ ಸಹಾಯ ಮಾಡಿದ್ದಳು. ನನಗೆ ತಾಯಿಯಂತೆ ಪ್ರೀತಿ ತೋರಿದ ಜಯಾಮಾಮಿಯನ್ನು ಕರೆದುಕೊಂಡು ಬಂದಿದ್ದಳು ಮತ್ತು ಟ್ಯಾಕ್ಸಿಯನ್ನೂ ತಂದು ಕೊಟ್ಟಿದ್ದಳು. ಮುಂದೆ ಅವಳಿಗೆ ಮದುವೆಯಾದಾಗ ನಾವು ಸ್ವಲ್ಪ ದುಡ್ಡು ಕೊಟ್ಟೆವಾದರೂ... ಮನ:ಪೂರ್ವಕವಾಗಿ ಒಂದು ಧನ್ಯವಾದವನ್ನು ಮಾತ್ರ ಹೇಳಲೇಯಿಲ್ಲ.......

ಆಸ್ಪತ್ರೆಯಿಂದ ಮನೆಗೆ ಮಗನನ್ನು ಕರೆದುಕೊಂಡು ಬಂದಾಗ, ನನ್ನ ಸಹಾಯಕ್ಕೆ ಮನೆಯವರ್ಯಾರೂ ಇಲ್ಲದಿದ್ದಿದ್ದರಿಂದ, ಜಯಾಮಾಮಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ’ಪುಷ್ಪಾ’ ಎಂಬಾಕೆಯನ್ನು ನಮ್ಮನೆಗೂ ಕಳುಹಿಸಿದರು. ಆಕೆ ಬಂದು ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಸ್ನಾನ ಮಾಡಿಸಿ ಹೋಗುತ್ತಿದ್ದರು. ಅವರ ಮಗಳು ’ರೀಟಾ’ ಎಂಬ ಹುಡುಗಿ ಬಂದು ನನ್ನ ಜೊತೆ ಕುಳಿತಿರುತ್ತಿದ್ದಳು. ಮಗು ಅತ್ತಾಗ ಎತ್ತಿಕೊಳ್ಳುವುದು, ಬಟ್ಟೆ ಬದಲಿಸುವುದು ಮತ್ತು ಇತರ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಳು. ಹೀಗೆ ನಮ್ಮ ಮನೆಗೆ ಬಂದ ಪುಷ್ಪಾಜೀ (ನಾವು ಆಕೆಯನ್ನು ಹಾಗೆಂದೇ ಕರೆಯುತ್ತಿದ್ದೆವು) ನನ್ನ ಮಗನಿಗೆ ನಿಜವಾಗಲೂ ತುಂಬಾ ಪ್ರೀತಿ, ಆದರ ತೋರಿಸಿದರು. ನಾವು ದುಡ್ಡು ಕೊಟ್ಟಿದ್ದು ಏನೂ ಲೆಕ್ಖ ಇಲ್ಲ ಆದರೆ ಆ ಪ್ರೀತಿಗೆ ಬೆಲೆ ಕಟ್ಟುವುದಾಗಲೇ ಇಲ್ಲ. ಮಗು ೩ ತಿಂಗಳಿನವನಾದಾಗ ಅವನನ್ನು ಬೇಬಿ ಕೇರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ಕೆಲಸದ ಒತ್ತಡ ತುಂಬಾ ಇರುತ್ತಿದ್ದರಿಂದ ನನಗೆ ಸಮಯಕ್ಕೆ ಸರಿಯಾಗಿ ೫.೩೦ಕ್ಕೆ ಬಂದು ಮಗುವನ್ನು ಮನೆಗೆ ಕರೆತರಲಾಗುತ್ತಿರಲಿಲ್ಲ. ಆದ್ದರಿಂದ ಆ ಜವಾಬ್ದಾರಿಯನ್ನೂ ಪುಷ್ಪಾಜಿ, ಖುಶಿಯಿಂದಲೇ ತೆಗೆದುಕೊಂಡರು. ನಾನು ಕಛೇರಿಯಿಂದ ಬರುವವರೆಗೆ ಪುಷ್ಪಾಜಿಯ ಎರಡನೆಯ ಮಗಳಾದ ’ಗೀತಾ’ ಬಂದು ಮನೆಯಲ್ಲಿ ಮಗುವಿನ ಜೊತೆ ಇರುತ್ತಿದ್ದಳು. ಹೀಗೆ ನಮ್ಮ ಮನೆಗೆ ಗೀತಾಳ ಆಗಮನವಾಯಿತು. ಕೆಲವು ವರ್ಷಗಳ ನಂತರ ಪುಷ್ಪಾಜಿಯ ತಂಗಿ ಚಿಕ್ಕ ಹುಡುಗಿ ’ಚಂಚಲಾ’ ಕೂಡ ಬಂದು ಅಕ್ಕನ ಮನೆಯಲ್ಲಿರತೊಡಗಿದಳು. ಈಗ ನನ್ನ ಮಗನಿಗೆ ಗೀತಾ ಮತ್ತು ಚಂಚಲಾ (ಚಂಚೂ...) ಇಬ್ಬರೂ ಕೇರ್ ಟೇಕರ್ಸ್ + ಆಟ ಆಡುವ ಸ್ನೇಹಿತೆಯರು + ಹಸಿವಾದಾಗ ರೊಟ್ಟಿ, ಬ್ರೆಡ್ ಟೋಸ್ಟ್ ಮಾಡಿಕೊಡುವ ಅಡಿಗೆಯವರೂ ಎಲ್ಲವೂ ಆದರು. ಅವನ ಇತರ ಚಟುವಟಿಕೆಗಳಿಗೆಲ್ಲಾ ಗೀತಾ+ಚಂಚೂ ಜೊತೆಗಾರರಾದರು. ಅವನನ್ನು ಚಿತ್ರಶಾಲೆಗೆ, ಈಜು ಕಲಿಯಲು, ಕರಾಟೆ ಕಲಿಯಲು... ಎಲ್ಲಾ ಕಡೆ ಕರೆದುಕೊಂಡು ಹೋಗುವುದೂ ಅವರಿಬ್ಬರದೇ ಕೆಲಸವಾಗಿ ಬಿಟ್ಟಿತು. ನಿಜವಾಗಿ ಈ ಹುಡುಗಿಯರ ಸಹಾಯವಿಲ್ಲದಿದ್ದರೆ ನಾನು ಹೇಗೆ ನಿಭಾಯಿಸುತ್ತಿದ್ದೆನೆಂದು ಈಗ ಯೋಚಿಸಿದರೇ ಭಯವಾಗುತ್ತದೆ. ಪುಷ್ಪಾ ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು, ಕರೆದು ಕೊಂಡು ಬರುವುದು ಮಾಡುತ್ತಿದ್ದರು, ಆದರೆ ಮನೆಗೆ ಬಂದ ತಕ್ಷಣ ಗೀತಾ....... ಚಂಚೂ........ ಎಂದೇ ಅರಚುತ್ತಾ ಬರುತ್ತಿದ್ದ ನನ್ನ ಮಗ.

ಮಧ್ಯದಲ್ಲಿ ಗೀತಾ ಯಾರನ್ನೋ ಪ್ರೀತಿಸಿ ಮದುವೆ ಮಾಡಿಕೊಂಡು ಹೋಗಿದ್ದರಿಂದ, ಚಂಚೂ ನನ್ನ ಮಗನಿಗೆ ದೊಡ್ಡ ಅಕ್ಕನ ತರಹ ಆತ್ಮ ಸಖಿಯಾಗಿ ಬಿಟ್ಟಳು. ಇಷ್ಟು ಹೊತ್ತಿಗಾಗಲೇ ನನ್ನ ಮಗ ೫ನೇ ಕ್ಲಾಸ್ ವರೆಗೂ ಬಂದಾಗಿತ್ತು. ಆ ಹುಡುಗಿ ತೋರಿದ ಪ್ರೀತಿಗೆ ನಾನು ಚಿರಋಣಿ..... ನಮಗೆ ಯಾವ ರೀತಿಯಿಂದಲೂ ಸಂಬಂಧಿಕಳಲ್ಲದಿದ್ದರೂ, ಅವಳು ತೋರಿದ ಅಂತ:ಕರಣ ಬೇರೆಲ್ಲಾ ಸಂಬಂಧಗಳನ್ನೂ ಮೀರಿ ಇವತ್ತಿಗೂ ಉನ್ನತವಾಗಿ ನಿಂತಿದೆ.

ನಾವು ಕೊಲ್ಕತ್ತಾದಲ್ಲಿ ಮನೆ ಕೊಂಡು, ಹೊಸ ಮನೆಗೆ ವಾಸಕ್ಕೆ ಹೋದಾಗ ಚಂಚಲಾ ನಮ್ಮ ಜೊತೆ ಬರಲಾಗಲಿಲ್ಲ. ಆದರೂ ನಾವು ಲೇಕ್ ಮಾರ್ಕೆಟ್ ನಲ್ಲೇ ತರಕಾರಿ, ದಿನಸಿ, ಸಮಸ್ತವನ್ನೂ ಕೊಳ್ಳುತ್ತಿದ್ದರಿಂದ, ಅವಳ ಭೇಟಿ ಆಗುತ್ತಲೇ ಇತ್ತು. ಮನೆ ತುಂಬಾ ದೂರವಾಗಿದ್ದರಿಂದ, ನನ್ನ ಮಗನನ್ನು ಮನೆಯ ಹತ್ತಿರದಲ್ಲೇ ಶಾಲೆಗೆ ಸೇರಿಸಿದೆವು. ಆಗ ನಮಗೆ ಮನೆಕೆಲಸಕ್ಕೆ ಸಹಾಯಕ್ಕೆಂದು ’ಲಕ್ಷ್ಮೀ’ - ’ಲೊಕ್ಕೀ’ ಎಂಬಾಕೆ ಬಂದರು. ವಯಸ್ಸಿಗೆ ಬಂದಿದ್ದ ಮಗಳನ್ನು ಕಳೆದುಕೊಂಡ ದು:ಖದಲ್ಲಿ ಮುಳುಗಿದ್ದ ನಮ್ಮ ಲೊಕ್ಕೀಗೆ ನನ್ನ ಮಗನ ಸಾಂಗತ್ಯ ಅತ್ಯಂತ ಸಮಾಧಾನ ಕೊಟ್ಟಿತ್ತು. ಬೆಂಗಾಲಿಗಳ ಧಾಟಿಯಲ್ಲಿ ಅವನನ್ನು ’ಮನ್ನಾ’(ಮುನ್ನಾ) ಎಂದು ಕರೆಯುತ್ತಿದ್ದ ಈಕೆ ಕೂಡ ಒಳ್ಳೆಯ ನಡತೆ, ಸಂಸ್ಕಾರವಿದ್ದ ಹೆಂಗಸು. ಆಕೆಯ ಗಂಡ ರಿಕ್ಷಾ ಎಳೆಯುತ್ತಿದ್ದ. ಹೆಂಡತಿ ೨.೩೦ ಕಿಲೋಮೀಟರ್ ನಡೆದು ಕೆಲಸಕ್ಕೆ ಬರುತ್ತಾಳೆಂದು, ಬೆಳಿಗ್ಗೆ ೬ ಘಂಟೆಗೇ ಅವಳನ್ನು, ರಿಕ್ಷಾದಲ್ಲಿ ಕೂರಿಸಿಕೊಂಡು ಬಂದು ನಮ್ಮ ಮನೆಯ ಹತ್ತಿರ ಬಿಟ್ಟು ಹೋಗುತ್ತಿದ್ದ. ಹೀಗೆ ಲೊಕ್ಕಿಯ ಸಹಾಯ ನಮಗೆ ೩ ವರ್ಷಗಳು ಸಿಕ್ಕಿತ್ತು. ನನ್ನ ಮಗನನ್ನು ಬೆಂಗಳೂರಿನಲ್ಲಿ ೯ನೇ ಇಯತ್ತೆಗೆ ಶಾಲೆಗೆ ಸೇರಿಸಿ, ಮನೆ ಮಾರಿಬಿಟ್ಟು ಖಾಲಿ ಮಾಡಿದಾಗ, ಲೊಕ್ಕಿಯ ಗೋಳು ನೋಡಲಾಗಿರಲಿಲ್ಲ..... ನನಗೂ ಅವಳನ್ನು ಬಿಟ್ಟು ಬರುವುದು ಅತ್ಯಂತ ದು:ಖದ ವಿಚಾರವಾಗಿತ್ತು.

ನಾವು ವಾಪಸ್ಸು ಲೇಕ್ ಮಾರ್ಕೆಟ್ ಬಡಾವಣೆಗೇ ಬಂದಿದ್ದರಿಂದ, ಚಂಚಲಾ ನಮ್ಮನೆಗೆ ಮತ್ತೆ ಬಂದಳು..... ಅಲ್ಲಿಂದ ನಾನು ೨೦೦೦ನೇ ಇಸವಿಯಲ್ಲಿ ಕೊಲ್ಕತ್ತಾ ಬಿಡುವವರೆಗೂ ಮತ್ತು ಆಮೇಲೂ ಸ್ವಲ್ಪ ದಿನ ನನ್ನವರಿರುವವರೆಗೂ ನಮ್ಮ ಜೊತೆ ಚಂಚಲಾ ಇದ್ದಳು. ಅವಳು ಮುಂಚಿನಿಂದಲೂ ಬಹಳ ಕಷ್ಟ ಜೀವಿ. ಈಗವಳು ಮದುವೆಯಾಗಿ, ಮಗಳ ತಾಯಾಗಿ, ಮನೆಯಲ್ಲೇ ಅಡುಗೆ ಮಾಡಿ ಊಟ ಕ್ಯಾರಿಯರ್ ನಲ್ಲಿ ಕಳಿಸುವ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಸೀರೆಗಳಿಗೆ ಚಿತ್ತಾರ ಬಿಡಿಸುವ ಕೆಲಸ ಕೂಡ ಮಾಡುತ್ತಾಳೆ. ಯಾವಾಗಲಾದರೊಮ್ಮೆ ದೂರವಾಣಿಯ ಮೂಲಕ ನಾವು ಅವಳ ಜೊತೆ ಈಗಲೂ ಮಾತನಾಡುತ್ತೇವೆ.....

ಕೊಲ್ಕತ್ತಾ ಬಿಟ್ಟ ನಂತರ ನಾನು ಅಲ್ಲಿಗೆ ಹೋಗಿಯೇ ಇರಲಿಲ್ಲ.... ಈಗ ೨೦೦೮ರ ಜನವರಿಯಲ್ಲಿ ಶಿಲ್ಲಾಂಗ್ ಮತ್ತು ಕಾಮಾಕ್ಯ ದೇವಸ್ಥಾನ ನೋಡಲು ಹೋದಾಗ, ನಾವು ಪುಷ್ಪಾಜಿಯನ್ನೂ ಭೇಟಿ ಮಾಡಿದೆವು. ಈಗ ಮಗನೂ ಕೆಲಸ ಮಾಡುತ್ತಿರುವುದರಿಂದ, ಪುಷ್ಪಾಜಿ ಮನೆ ಕೆಲಸಗಳಿಗೆ ಹೋಗುತ್ತಿಲ್ಲವೆಂದೂ, ಮನೆಯಲ್ಲೇ ಇದ್ದೇನೆಂದೂ ಹೇಳಿದರು. ತುಂಬಾ ಕಷ್ಟಪಟ್ಟ ದೇಹವಾದ್ದರಿಂದ, ಈಗ ಶಕ್ತಿಯೂ ಕಮ್ಮಿಯಾಗಿದೆ. ಆದರೆ ನನ್ನ ಮಗನ ಮೇಲಿರುವ ಅವರ ಪ್ರೀತಿ ಮಾತ್ರ ಎಳ್ಳಷ್ಟೂ ಕಮ್ಮಿಯಾಗಿಲ್ಲ... ೬ ಅಡಿಗಿಂತ ಎತ್ತರ ಬೆಳೆದಿರುವ ಹುಡುಗ, ಇಂಜಿನಿಯರಿಂಗ್ ಓದುತ್ತಿದ್ದಾನೆಂದು ಕೇಳಿ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ.... ಮರೆಯದೆ ತನ್ನನ್ನು ನೋಡಲು ಬಂದ ನಮ್ಮೆಲ್ಲರನ್ನೂ ಕಂಡು ಆಕೆ ಕಣ್ಣೀರಿಟ್ಟಳು. ನಮಗಾಗಿ ದುಡಿದ ಆ ಸಂಸಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿದೆವು......

ಈಗ ಬೆಂಗಳೂರಿನಲ್ಲಿ ೨೦೦೧ನೇ ಫೆಬ್ರವರಿಯಿಂದ, ಈಗಲೂ ಇನ್ನೂ ನಮ್ಮ ಜೊತೆಯೇ ಇರುವವರ ಹೆಸರು ’ರಾಣಿ’. ಚಿಕ್ಕ ಚಿಕ್ಕ ಮಕ್ಕಳನ್ನು ಹೊಂದಿದ್ದ ರಾಣಿಯಮ್ಮ, ಮಗಳ ಮದುವೆ ಮಾಡಿ, ಈಗ ಅಜ್ಜಿ ಕೂಡ ಆಗಿದ್ದಾರೆ (ಆದರೆ ವಯಸ್ಸೇನೂ ಹೆಚ್ಚಿಲ್ಲ). ನಮ್ಮ ಕಷ್ಟ ಸುಖಗಳಲ್ಲಿ ಒಂದಾಗಿ... ನಮ್ಮ ಎಲ್ಲಾ ತರಹದ ಬೇಡಿಕೆಗಳಿಗೂ ಯಾವಾಗಲೂ ಇಲ್ಲವೆನ್ನದೇ, ಕಷ್ಟ ಪಡುವ ಮತ್ತೊಂದು ಜೀವ ನಮ್ಮಜೊತೆಗಿದೆ. ಇವರೆಲ್ಲರ ಸಹಾಯ ನನ್ನ ಜೀವನದಲ್ಲಿ ಸಿಗದೇ ಹೋಗಿದ್ದರೆ.... ಅಬ್ಬಾ ಊಹಿಸಿಕೊಳ್ಳುವುದೂ ಸಾಧ್ಯವಿಲ್ಲವೆನ್ನಿಸುತ್ತದೆ. ಹೊರಗೆ ದುಡಿಯುವ ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಸಹಾಯವಿಲ್ಲದಿದ್ದರೆ ಕಾರ್ಯ ನಿರ್ವಹಣೆ ಅಸಾಧ್ಯವಾಗಿಬಿಡುತ್ತದೆ.

ಈ ಬ್ಲಾಗ್ ಬರಹವನ್ನು ನನಗೆ ಸಹಾಯ ಮಾಡಿದ, ಮಾಡುತ್ತಿರುವ ಈ ಎಲ್ಲರಿಗೂ ಅರ್ಪಿಸಿ, ನನ್ನ ಹೃದಯ ಹಗುರ ಮಾಡಿಕೊಳ್ಳುತ್ತಿದ್ದೇನೆ. ಇವರೆಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ.......

Saturday, September 19, 2009

ನವದುರ್ಗಾ....... ಪೂಜೆ.....



ಶರನ್ನವರಾತ್ರಿ, ದಸರಾ, ದುರ್ಗಾಪೂಜೆ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಒಂಭತ್ತು ದಿನಗಳ ಹಬ್ಬ, ದೇವಿಯ ಆರಾಧನೆಗೆಂದೇ ಮೀಸಲಾಗಿದೆ........ ದೇವಿಯನ್ನು ನವ ರೂಪದಲ್ಲಿ ಒಂದೊಂದು ದಿನ ಒಂದೊಂದು ವಿಧದಲ್ಲಿ, ಪೂಜಿಸಲ್ಪಡುವುದೇ ಈ ಹಬ್ಬದ ವೈಶಿಷ್ಟ್ಯ... ದೇವಿ ಪಾರ್ವತಿ ಅಥವಾ ದುರ್ಗಾ ಅತ್ಯಂತ ಲೋಕಪ್ರಿಯಳು ಮತ್ತು ಶಕ್ತಿದೇವತೆ ಕೂಡ. ದೇವಿಯ ಶಕ್ತಿಯನ್ನೂ, ಸೌಂದರ್ಯವನ್ನೂ ವರ್ಣಿಸಲು, ಅವಳಿಗಾಗಿಯೇ ರಚಿಸಲ್ಪಟ್ಟಿರುವುದು "ದೇವಿ ಭಾಗವತಮ್". ಇದಲ್ಲದೆ ದೇವಿಯನ್ನು ವರ್ಣಿಸುವ ಅನೇಕ ಸಣ್ಣ ಸಣ್ಣ ಕೃತಿಗಳು... ’ದೇವಿ ಮಹಾತ್ಮೆ’, ’ದುರ್ಗಾ ಸಪ್ತಶತೀ’ಮತ್ತು ಇನ್ನೂ ಹಲವು... ದೇವಿ ಮಹಾತ್ಮೆ ಎಂಬುದು ನಮ್ಮ ಪುರಾಣಗಳಲ್ಲಿ ಪ್ರಸಿದ್ಧವಾದ ’ಮಾರ್ಕಾಂಡೇಯ ಪುರಾಣ’ದ ಭಾಗವಾಗಿದೆ. ಇದು ಎಷ್ಟೊಂದು ಜನಪ್ರಿಯ ಹಾಗೂ ಪೂಜನೀಯವೆನಿಸಿದೆಯೆಂದರೆ, ಇದರ ಒಂದೊಂದು ಶ್ಲೋಕವೂ ’ಮಂತ್ರ’ವೆಂದೂ, ಇದರ ಪಾರಾಯಣೆ, ಜಪ ಮಾಡುವುದರಿಂದ, ನಮ್ಮ ಅಭೀಷ್ಟಗಳೆಲ್ಲಾ ನೆರವೇರುವುದೆಂದೂ ನಂಬಿಕೆಯಿದೆ.

ದುರ್ಗಾ ಎಂದರೆ ಹತ್ತಿರ ಸುಳಿಯಲೂ, ಅರ್ಥ ಮಾಡಿಕೊಳ್ಳಲೂ ಕಷ್ಟಸಾಧ್ಯಳು ಎಂದು ಅರ್ಥ. ಎಲ್ಲಾ ದೇವತೆಗಳ ಶಕ್ತಿಯನ್ನೂ ಪಡೆದ ನಾರೀರೂಪಳಾದ ದೇವಿ, ಲೋಕಮಾತೆ, ಭಕ್ತರ ಪರಮ ಭಕ್ತಿಗೆ ಕರಗುವವಳು, ಆರಾಧನೆಗೆ ಒಲಿಯುವವಳು, ಮಾತೃಸ್ವರೂಪಳು ಎಂದೇ ಅರ್ಥ. ದೇವಿಯೇ ಪರಮ ಶಕ್ತಿ, ಜಗತ್ತಿನ ಸೃಷ್ಟಿ ಮತ್ತು ಸ್ಥಿತಿಗೆ ಕಾರಣಳು, ಜ್ಞಾನದ ಸಂಕೇತಳು, ಮೋಹಕಳೂ, ಸೌಂದರ್ಯಸ್ವರೂಪಳು, ರೌದ್ರಳೂ, ಕೋಮಲೆಯೂ, ಭೀಕರಳೂ, ಮೃದು ಮನದವಳೂ ಎಂದು, ಒಟ್ಟಾರೆ ಸಕಲವೂ ಅವಳೇ ಎಂದು ಬಿಂಬಿಸುವ ಅನೇಕ ದೃಷ್ಟಾಂತಗಳನ್ನು ನಾವು ಪುರಾಣಗಳಲ್ಲಿ ಓದಬಹುದು.

ಜಗನ್ಮಾತೆಯೇ ಸಕಲ ಐಶ್ವರ್ಯ ಕೊಡುವವಳೂ, ಸುಖ ಸಮಾಧಾನಗಳನ್ನು ಕೊಡುವವಳೂ ಎಂದು ವರ್ಣಿಸುತ್ತಾ, ವಿಶೇಷವಾಗಿ ಈ ಒಂಭತ್ತು ದಿನಗಳಲ್ಲಿ, ನಾವು ದೇವಿಯನ್ನು ಆರಾಧಿಸುತ್ತೇವೆ.
ಮೊದಲನೆಯ ದಿನ ಶೈಲಪುತ್ರಿಯ ರೂಪದಲ್ಲಿ....

" ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ |"

ಪರ್ವತ ರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿ ಶೈಲಪುತ್ರೀ ಎಂದು ಕರೆಯಲ್ಪಡುತ್ತಾಳೆ. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಇವೆ. ಇವಳನ್ನು ಪಾರ್ವತೀ, ಹೈಮವತೀ ಎಂದೂ ಕರೆಯುತ್ತಾರೆ. ಈ ಮೊದಲನೆಯ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ’ಮೂಲಾಧಾರ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗ ಸಾಧನೆಯು ಪ್ರಾರಂಭವಾಗುತ್ತದೆ..

ಶೈಲಪುತ್ರಿಯನ್ನು ನಾವು.... ಶ್ಯಾಮಾಶಾಸ್ತ್ರಿಗಳ ಕಲ್ಯಾಣಿ ರಾಗದ ರಚನೆ ಹಿಮಾದ್ರಿ ಸುತೆ ಪಾಹಿಮಾಂ.. ಮತ್ತು ಸರೋಜದಳನೇತ್ರಿ ಹಿಮಗಿರಿ ಪುತ್ರೀ......ಎಂದೂ ಆರಾಧಿಸಬಹುದು. ಶ್ರೀ ಸ್ವಾತಿ ತಿರುನಾಳ್ ಮಹರಾಜರು ಸಹ ದೇವಿಯನ್ನು ಒಂಭತ್ತು ಅತ್ಯಮೂಲ್ಯ ಕೃತಿಗಳಿಂದ ವರ್ಣಿಸಿ ಹಾಡಿದ್ದಾರೆ. ಈ ಕೃತಿ ಗುಚ್ಛವನ್ನು ನವರಾತ್ರಿ ಕೃತಿಗಳು ಎಂದು ಕರೆಯಲ್ಪಡುತ್ತದೆ. ಮೊದಲನೆಯ ದಿನದ ಕೃತಿ, ಶಂಕರಾಭರಣ ರಾಗದಲ್ಲಿ ದೇವಿ ಜಗಜ್ಜನನೀ....

ಎರಡನೆಯ ದಿನ ಬ್ರಹ್ಮಚಾರಿಣೀ ರೂಪದಲ್ಲಿ........

"ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ |"

ಇಲ್ಲಿ ’ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮ ಚಾರಿಣಿ ಅರ್ಥಾತ್ ತಪಸ್ಸನ್ನು ಆಚರಿಸುವವಳು. ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲು ಇರುತ್ತದೆ. ಇವಳನ್ನು ’ಅಪರ್ಣಾ’ ’ಉಮಾ’ ಎಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಸಿದ್ಧಿಸುತ್ತದೆ. ಈ ಎರಡನೆಯ ದಿನ ಸಾಧಕರು ಮನಸ್ಸನ್ನು ’ಸ್ವಾಧಿಷ್ಠಾನ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.

ಬ್ರಹ್ಮಚಾರಿಣಿ, ಅಪರ್ಣಾ, ಉಮಾಳನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿಮಾಂ ಶ್ರೀ ವಾಗೀಶ್ವರಿ ಎಂದು ಕಲ್ಯಾಣಿ ರಾಗದಲ್ಲಿ ಸ್ತುತಿಸುತ್ತಾರೆ.

ಮೂರನೆಯ ದಿನ ಚಂದ್ರಘಂಟಾ ರೂಪದಲ್ಲಿ ........

"ಪಿಂಡಜಪ್ರವರಾರೂಢಾ ಚಂಡಕೊಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ" |

ಮೂರನೆಯ ದಿನವಾದ ಇಂದು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾದ ದೇವಿ ಚಂದ್ರಘಂಟಾ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ದೇವಿಯ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನಾದ್ದರಿಂದ ಇವಳನ್ನು ಚಂದ್ರಘಂಟಾದೇವಿಯೆಂದು ಹೇಳಲಾಗುತ್ತದೆ. ಶರೀರವು ಚಿನ್ನದಂತೆ ಹೊಳೆಯುತ್ತಿದ್ದು, ಹತ್ತು ಕೈಗಳಲ್ಲಿ ಖಡ್ಗ ಹಾಗೂ ವಿವಿಧ ಆಯುಧಗಳಿವೆ. ಘಂಟೆಯಂತೆ ಭಯಾನಕ ಚಂಡಿ ಧ್ವನಿ ಹೊಂದಿದವಳು. ಈ ದಿನ ಸಾಧಕನ ಮನಸ್ಸು ’ಮಣಿಪೂರ’ ಚಕ್ರ ಪ್ರವೇಶ ಮಾಡುತ್ತದೆ.

ಚಂದ್ರಘಂಟಾದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ಮೂರನೆಯ ದಿನ ದೇವಿ ಪಾವನೆ... ಎಂದು ಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.

ನಾಲ್ಕನೆಯ ದಿನ ಕೂಷ್ಮಾಂಡಾ ರೂಪದಲ್ಲಿ ........

"ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ " |

ದೇವಿ ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುತ್ತಾರೆ. ದೇವಿಯು ತನ್ನ ’ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು, ಅದಕ್ಕಿಂತ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ. ಇವಳಿಗೆ ಎಂಟು ಭುಜಗಳಿದ್ದು, ಅಷ್ಟಭುಜಾದೇವಿ ಎಂದು ಖ್ಯಾತಳು. ಸಿಂಹವಾಹಿನಿಯಾಗಿ, ಏಳು ಕೈಗಳಲ್ಲಿ ಕ್ರಮಶ: ಕಮಂಡಲ, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಹಿಡಿದಿದ್ದಾಳೆ. ಈ ದಿನ ಸಾಧಕನ ಮನಸ್ಸು ’ಅನಾಹತ’ ಚಕ್ರದಲ್ಲಿ ನೆಲೆಸುತ್ತದೆ.

ಕೂಷ್ಮಾಂಡಾದೇವಿಯನ್ನು, ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ನಾಲ್ಕನೆಯ ದಿನ ಭಾರತೀ ಮಾಮವ ಎಂದು ತೋಡಿ ರಾಗದಲ್ಲಿ ಸ್ತುತಿಸುತ್ತಾರೆ.

ಐದನೆಯ ದಿನ ಸ್ಕಂದಮಾತಾ ರೂಪದಲ್ಲಿ.......

"ಸಿಂಹಾಸನಗತಾ ನಿತ್ಯಂ ಪದ್ಮಾಶಿತಕರದ್ವಯಮ್ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಶಯಸ್ವಿನೀ "|

ಸ್ಕಂದ, ಕುಮಾರ ಕಾರ್ತಿಕೇಯನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದ ಮಾತಾ ಎಂದು ಕರೆಯುತ್ತಾರೆ. ಈ ದಿನ ಸಾಧಕನ ಮನಸ್ಸು ’ವಿಶುದ್ಧ’ ಚಕ್ರದಲ್ಲಿ ನೆಲೆಸುತ್ತದೆ. ದೇವಿಯ ತೊಡೆಯಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಕುಳಿತಿರುತ್ತಾನೆ. ದೇವಿಯ ಎರಡು ಕೈಗಳಲ್ಲಿ ಕಮಲದ ಹೂವಿದ್ದು, ಶರೀರವು ಬಿಳಿಯ ಬಣ್ಣದ್ದಾಗಿದ್ದು, ಕಮಲದ ಮೇಲೇ ಆಸೀನಳಾಗಿರುತ್ತಾಳೆ.

ಸ್ಕಂದಮಾತಾ ರೂಪದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಐದನೆಯ ದಿನ ಜನನೀ ಮಾಮವ ಎಂದು ಭೈರವಿ ರಾಗದಲ್ಲಿ ಸ್ತುತಿಸುತ್ತಾರೆ.

ಆರನೆಯ ದಿನ ಕಾತ್ಯಾಯಿನಿ ರೂಪದಲ್ಲಿ.......

"ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯಿನೀ ಶುಭಂ ದದ್ಯಾದ್ದೇವೀ ದಾನವಘಾತಿನೀ "|

ದಾನವ ಮಹಿಷಾಸುರನ ಅತ್ಯಾಚಾರವು ಮಿತಿಮೀರಿದಾಗ, ಬ್ರಹ್ಮಾ - ವಿಷ್ಣು - ಮಹೇಶ್ವರರು ಮತ್ತು ಎಲ್ಲಾ ದೇವತೆಗಳೂ ತಮ್ಮ ತಮ್ಮ ತೇಜದ ಅಂಶವನ್ನಿತ್ತು ಓರ್ವ ದೇವಿಯನ್ನು ಉತ್ಪನ್ನ ಮಾಡಿದರು. ಮಹರ್ಷಿ ಕಾತ್ಯಾಯನರು ಮೊಟ್ಟ ಮೊದಲು ಇವಳ ಪೂಜೆ ಮಾಡಿದ ಕಾರಣದಿಂದ, ಇವಳು ಕಾತ್ಯಾಯನೀ ಎಂದು ಕರೆಯಲ್ಪಟ್ಟಳು. ಭವ್ಯ ಹಾಗೂ ದಿವ್ಯ ಸ್ವರೂಪಳಾದ ಇವಳು ಬಂಗಾರದ ಬಣ್ಣದವಳೂ, ನಾಲ್ಕು ಭುಜದವಳೂ ಆಗಿದ್ದಾಳೆ. ಒಂದು ಕೈಯಲ್ಲಿ ಕಮಲ, ಇನ್ನೊಂದರಲ್ಲಿ ಖಡ್ಗ ಹಿಡಿದಿದ್ದಾಳೆ. ಈ ಆರನೆಯ ದಿನ ಸಾಧಕನು ಮನಸ್ಸನ್ನು ’ಆಜ್ಞಾ’ ಚಕ್ರದಲ್ಲಿ ನೆಲೆಸುತ್ತಾನೆ. ಇವಳು ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ | ಪಾತು ನ: ಸರ್ವಭೀತಿಭ್ಯ: ಕಾತ್ಯಾಯನಿ ನಮೋಸ್ತುತೇ... ಎಂದು ಕೂಡ ಸ್ತುತಿಸಲ್ಪಡುತ್ತಾಳೆ.

ಕಾತ್ಯಾಯನೀ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಆರನೆಯ ದಿನ ಸರೋರುಹಾಸನ ಜಾಯೇ...ಎಂದು ಪಂತುವರಾಳಿ ರಾಗದಲ್ಲಿ ಸ್ತುತಿಸುತ್ತಾರೆ.

ಏಳನೆಯ ದಿನ ಕಾಲರಾತ್ರಿ ರೂಪದಲ್ಲಿ.......

"ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ರೈಲಾಬ್ಯಕ್ರಶರೀರಿಣೀ ||
ವಾಮಪಾದೋಲ್ಲಸಲ್ಲೋಹಲ್ತಾಕಂಟಕಭೂಷಣಾ |
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ" ||

ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರವು ದಟ್ಟ ಕಪ್ಪು, ಬಿಚ್ಚಿ ಹರಡಿದ ತಲೆ ಕೂದಲು, ಕತ್ತಲಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ, ಮೂರು ಕಣ್ಣುಗಳಿವೆ. ಇವಳ ಉಚ್ಛಾಸ-ನಿ:ಚ್ಛಾಸದಿಂದ ಅಗ್ನಿಯ ಭಯಂಕರ ಜ್ವಾಲೆಗಳು ಹೊರಡುತ್ತವೆ ಮತ್ತು ಇವಳ ವಾಹನ ಕತ್ತೆಯಾಗಿದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಇವಳು ನೋಡಲು ಭಯಂಕರವಾದರೂ, ಯಾವಾಗಲೂ ಶುಭ ಫಲವನ್ನೇ ಕೊಡುವವಳಾದ್ದರಿಂದ ಶುಭಂಕರೀ ಎಂದೂ ಕರೆಯಲ್ಪಡುತ್ತಾಳೆ. ಈ ದಿನ ಸಾಧಕನ ಮನಸ್ಸು ’ಸಹಸ್ರಾರ’ ಚಕ್ರದಲ್ಲಿ ಲೀನವಾಗುತ್ತದೆ. ಇವಳನ್ನು ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚ ದಾರುಣಾ | ತ್ವಂ ಶ್ರೀಸ್ತ್ವಮೀಶ್ವರೀ ತ್ವಂ ಹ್ರೀಸ್ತ್ವಂ ಬುದ್ದಿರ್ಬೋಧಲಕ್ಷಣಾ || ಎಂದೂ ಸ್ತುತಿಸಬಹುದು.

ಜಗನ್ಮಾತೆಯನ್ನು ಏಳನೆಯ ದಿನ ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಜನನೀ ಪಾಹಿ ಸದಾ... ಎಂದು ಶುದ್ಧಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.

ಎಂಟನೆಯ ದಿನ ಮಹಾಗೌರೀ ರೂಪದಲ್ಲಿ......

"ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿ: |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ" ||

ದೇವಿಯು ಎಂಟನೆಯ ದಿನ ಮಹಾಗೌರಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಇವಳ ವಯಸ್ಸು ಕೇವಲ ೮ ವರ್ಷಗಳೆಂದೂ, ಶಂಖ-ಚಂದ್ರ-ಕುಂದ ಪುಷ್ಪದಷ್ಟು ಬೆಳ್ಳಗಿರುವಳೆಂದೂ ಹೇಳಲಾಗಿದೆ. ಇವಳು "ಅಷ್ಟವರ್ಷಾ ಭವೇದ್ ಗೌರೀ - ಎಂದರೆ ಎಲ್ಲ ವಸ್ತ್ರ ಹಾಗೂ ಆಭರಣಗಳು ಬೆಳ್ಳಗಿವೆ. ಇವಳು ಅತ್ಯಂತ ಶಾಂತ ಮುದ್ರೆಯವಳು. ಇವಳು ಶಿವನನ್ನು ವರಿಸುವುದಕ್ಕಾಗಿ ಕಠೋರ ತಪಸ್ಸು ಮಾಡಿದ ಕಾರಣ ಶರೀರವು ಪೂರ್ಣವಾಗಿ ಕಪ್ಪಾಗಿತ್ತು ಮತ್ತು ಸಂತುಷ್ಟನಾದ ಶಿವನು ಪವಿತ್ರ ಗಂಗೆಯ ಜಲದಿಂದ ತೊಳೆದಾಗ, ವಿದ್ಯುತ್ತಿನಂತೆ ಅತ್ಯಂತ ಪ್ರಕಾಶಮಾನವಾಗಿ ಬೆಳ್ಳಗಾಯಿತು ಮತ್ತು ಆಗಿನಿಂದ ಇವಳು ಗೌರಿ ಎಂದು ಕರೆಯಲ್ಪಟ್ಟಳು. ದೇವಿಯನ್ನು ನಾವು ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ...|| ಎಂದೂ ಸ್ತುತಿಸುತ್ತೇವೆ.

ಎಂಟನೆಯ ದಿನವಾದ ಈ ದಿನ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಜನನೀ...ಎಂದು ನಾಟಕುರಂಜಿ ರಾಗದಲ್ಲಿ ಸ್ತುತಿಸುತ್ತಾರೆ.

ಒಂಭತ್ತನೆಯ ದಿನ ಸಿದ್ಧಿದಾತ್ರಿ ರೂಪದಲ್ಲಿ.......

"ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ" ||

ಜಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿಯ ಹೆಸರು ಸಿದ್ಧಿದಾತ್ರಿ. ಇವಳು ಎಲ್ಲಾ ಪ್ರಕಾರದ ಸಿದ್ಧಿಗಳನ್ನೂ ಅನುಗ್ರಹಿಸುವವಳು. ಬ್ರಹ್ಮವೈವರ್ತಪುರಾಣದ ಶ್ರೀ ಕೃಷ್ಣಜನ್ಮಖಂಡದಲ್ಲಿ ಬರುವ ೧೮ ಸಿದ್ಧಿಗಳಾದ : ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರ ಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ... ಎಲ್ಲವನ್ನೂ ಕೊಡುವವಳು. ಇವಳ ಕೈಗಳಲ್ಲಿ ಚಕ್ರ, ಗದೆ, ಶಂಖ ಮತ್ತು ಕಮಲ ಪುಷ್ಪಗಳಿವೆ. ನಾಲ್ಕು ಭುಜಗಳನ್ನು ಹೊಂದಿದವಳಾಗಿದ್ದಾಳೆ. ಇವಳನ್ನು ಆರಾಧಿಸುವುದರಿಂದ ಸಾಧಕರಿಗೆ ಎಲ್ಲಾ ಸಿದ್ಧಿಗಳೂ ಲಭಿಸುತ್ತವೆ.

ಒಂಭತ್ತನೇ ದಿನದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಪರ್ವತ ನಂದಿನಿ... ಎಂದು ಆರಭಿ ರಾಗದಲ್ಲಿ ಸ್ತುತಿಸುತ್ತಾರೆ.

ನವದುರ್ಗೆಯರಲ್ಲಿ ಸಿದ್ಧಿದಾತ್ರೀ ಕೊನೆಯವಳಾಗಿದ್ದಾಳೆ. ಎಂಟು ದಿನಗಳು ಬೇರೆ ಬೇರೆ ರೂಪದಲ್ಲಿ ದೇವಿಯನ್ನು ಆರಾಧಿಸಿದ ಭಕ್ತರು ಒಂಭತ್ತನೆಯ ದಿನ ಸಿದ್ಧಿದಾತ್ರಿಯನ್ನು ಭಕ್ತಿಯಿಂದ ಆರಾಧಿಸಿ, ಮೋಕ್ಷವನ್ನು ಪಡೆಯುತ್ತಾರೆ.

ವಿವರಣೆ ಆಧಾರ : "ನವದುರ್ಗಾ", ಗೀತಾ ಪ್ರೆಸ್, ಗೋರಖಪುರ
ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು.