Sunday, September 19, 2010

ಬೆಳಗಾಗ ನಾನೆದ್ದು ಯಾರ್ ಯಾರ ನೆನೆಯಲಿ......

ಶ್ರವಣ ಮನಕಾನಂದವೀವುದು| ಭವ ಜನಿತ ದು:ಖಗಳ ಪರಿಹರಿಪುದು|
ವಿವಿಧ ಭೋಗಗಳ ಇಹಪರಂಗಳಲಿತ್ತು ಸಲಹುವುದು||
ಭುವನಪಾವನವೆನಿಪ ಲಕ್ಷ್ಮೀ| ರಮಣನ ಮಂಗಳ ಕಥೆಯ ಪರಮೋ |
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ.....


ಬೆಳಗಾಗ ನಾನೆದ್ದು ಯಾರ್ ಯಾರ ನೆನಯಲೀ... ಎಳ್ಳು ಜೀರಿಗೆ ಬೆಳೆಯೋರ ಎಂಬ ನಮ್ಮ ಜಾನಪದ ಉಕ್ತಿಯಂತೇ... ಶ್ರೀ ಜಗನ್ನಾಥ ದಾಸರು ಮಾಡಿರುವ ಸುಭಾಷಿತದ ಅರ್ಥವೂ..... ಚಿಕ್ಕ ವಯಸ್ಸಿನಿಂದಲೂ ನಮಗೆಲ್ಲಾ ಅಮ್ಮ ಬೆಳಿಗ್ಗೆ ಏಳುವಾಗಲಿಂದಲೇ ಭಗವಂತನ ಚಿಂತನೆಯನ್ನುಮಾಡಿಸ ತೊಡಗುತ್ತಾರೆ. ಬಲಗಡೆಗೇ ತಿರುಗಿ ಎದ್ದೇಳು... ಎದ್ದು ಹಾಸಿಗೆಯ ಮೇಲೆ ಪದ್ಮಾಸನದಲ್ಲಿ ಕುಳಿತುಕೋ... ಕಣ್ಣು ಬಿಡಬೇಡ... ಎರಡು ಕರಗಳನ್ನೂ ಬೇಡುವಂತೆ ತೆರೆದು ಜೋಡಿಸಿಟ್ಟುಕೋ... ಕಣ್ಣು ಮುಚ್ಚಿಯೇ... ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ... ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ.. ಎಂದು ಹೇಳಿಕೊಂಡು, ನಿಧಾನವಾಗಿ ಕಣ್ಣು ತೆರೆದು ಮೊದಲು ಕರಗಳನ್ನು ನೋಡು.... ! ಪ್ರಭಾತೇ ಕರದರ್ಶನಂ ಮಾಡುವುದರಿಂದ, ನಮ್ಮಕರಗಳಲ್ಲೇ ನೆಲೆಸಿರುವರೆಂದು ನಾವು ನಂಬಿರುವ ಮುವ್ವತ್ತು ಮೂರು ಕೋಟಿ ದೇವರುಗಳ ದರ್ಶನದಿಂದ ನಮ್ಮ ದಿನ ಉತ್ತಮವಾಗಿ ಆರಂಭವಾಗಲೀ ಎಂಬುದರ ಸಂಕೇತ..... ಅಂದರೆ ನಾವು ನಿದ್ದೆಯಿಂದ ತಿಳಿವು ತಿಳಿದಾಕ್ಷಣ ಸದ್ವಿಚಾರ ಚಿಂತನೆಯಿಂದ ನಮ್ಮ ದಿನಚರಿ ಶುರುವಾಗಲಿ ಎಂಬುದೇ ಇದರ ಉದ್ದೇಶ. ಇದರ ನಂತರ ಸಮುದ್ರವಸನೇ ದೇವಿ ಪರ್ವತಸ್ಥನ ಮಂಡಲೇ.. ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶ ಕ್ಷಮಸ್ವಮೇ.. ಎಂದು ಹೇಳುತ್ತಾ ನಾವು ತುಳಿಯಲಿರುವ ಭೂದೇವಿಯ ಕ್ಷಮೆ ಯಾಚಿಸು... ದಿನ ಪೂರ್ತಿ ಕಾಲಲ್ಲಿ ತುಳಿದು ನೋವು ಕೊಡುವೆಯಾದ್ದರಿಂದ ಭೂಮಾತೆಯನ್ನು ಒಳ್ಳೆಯ ಮನದಿಂದ ನೆನೆದು, ನನ್ನನ್ನು ಸಹಿಸಿಕೋ ಎಂದು ಪ್ರಾರ್ಥಿಸಿ ನಂತರ ಅಡಿ ಎತ್ತಿ ಇಡು.... ಹೀಗೆ ಎಲ್ಲದರಲ್ಲೂ, ಎಲ್ಲರಲ್ಲೂ ಭಗವಂತನನ್ನು ಕಾಣುವ ನಮ್ಮ ಆಚಾರ, ಸಂಸ್ಕೃತಿ ಎಷ್ಟೊಂದು ಶ್ರೀಮಂತವಾಗಿದೆ....

ಮೇಲಿನ ಸುಭಾಷಿತವನ್ನು ನಾನು ಶ್ರೀ ಅರಳು ಮಲ್ಲಿಗೆ ಪಾರ್ಥಸಾರಥಿಯವರ ವಾಚನದಲ್ಲಿ ಕೇಳಿದೆ. ಜಗನ್ನಾಥದಾಸರು ಪರಿಶುದ್ಧ ಮನಸ್ಸಿನಿಂದ ಭಗವಂತನ ಸಾಕ್ಷಾತ್ಕಾರ ಪಡೆದ ದಾಸವರೇಣ್ಯರು... ದಿನಾ ಬೆಳಿಗ್ಗೆ ಏಳುತ್ತಲೇ ಶ್ರೀಪುರುಷೋತ್ತಮನ, ಲಕ್ಷ್ಮೀ ರಮಣನ ಪುಣ್ಯ ನಾಮಸ್ಮರಣೆ ಮಾಡುತ್ತಾ, ಪುಣ್ಯ ಕಥೆಗಳನ್ನು ಕೇಳುತ್ತಾ ದಿನಚರಿ ಆರಂಭಿಸುವುದರಿಂದ, ನಮ್ಮ ಇಡಿಯ ದಿವಸ ಚೆನ್ನಾಗಿ ಒಳ್ಳೆಯ ಕೆಲಸ ಮಾಡುವುದರಲ್ಲಿಯೂ, ಸತ್ ಚಿಂತನೆಗಳಲ್ಲೂ ಕಳೆಯುವುದೆಂಬ ಆದೇಶ..... ನಮ್ಮ ಬದುಕಿನ, ಸಂಸಾರದ ಜಂಝಟಗಳೆಲ್ಲಾ ಕಳೆಯುವುದೂ, ನಾವು ಅಪೇಕ್ಷೆಯೇ ಪಡಲಾರದಷ್ಟು ಸುಖ, ಭೋಗಗಳನ್ನು ಮಹಾಮಹಿಮನು ನಮಗೆ ದಯಪಾಲಿಸುವನು...

ಅತ್ಯಂತ ಒತ್ತಡದ ಬದುಕು ಬದುಕುವ ನಾವು ಹರಿ ಚಿಂತನೆಯಿಂದಲೂ, ಸಕಾರಾತ್ಮಕ ವಿಚಾರಗಳಿಂದಲೂ ದಿನಚರಿ ಆರಂಭಿಸಿದರೆ, ನಾವು ತೆಗೆದುಕೊಳ್ಳಬೇಕಾದ ಮಹತ್ವದ ನಿರ್ಣಯಗಳು ಮತ್ತು ಕೆಲಸಗಳೂ ಸುಗಮವಾಗಿ ಮಾಡುವ ಅವಕಾಶ ಲಭಿಸುತ್ತದೆನ್ನುವುದು ಇದರ ಅರ್ಥ.

ದಾಸರು ಬರಿಯ ಇಹದ ಭೋಗ, ನೆಮ್ಮದಿ, ಸುಖಗಳ ಬಗ್ಗೆ ಹೇಳಿಲ್ಲ. ಅವರು "ಇಹ ಪರ" ಎರಡರ ಮಾತನ್ನೂ ಇಲ್ಲಿ

ಆಡಿದ್ದಾರೆ. ನಮ್ಮ ವಿಚಾರಗಳೇನಿದ್ದರೂ ಕೊನೆಗೆ, ಒಂದೇ ವ್ಯಾಪ್ತಿಗೆ ತಲುಪಬೇಕು.... ಅದೇ "ಶರಣಾಗತಿ". ನಮ್ಮ ಇಲ್ಲಿಯ ಎಲ್ಲಾ ಕರ್ಮಗಳೂ ಮುಂದಿನ ಜನ್ಮಕ್ಕೆ ಬುತ್ತಿ ಎಂದಾಗ, ಅರಿವು ಉಂಟಾಗಿರುವ ಜೀವನ ಸಾರ್ಥಕ್ಯ ಪಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕಲಿಯುಗದಲ್ಲಿ ನಮಸ್ಕಾರ ಮತ್ತು ನಾಮ ಸಂಕೀರ್ತನೆಗಳೆರಡೇ ಸಾಕು ಸದ್ಗತಿ ಹೊಂದಲು ಎಂಬ ಮಾತಿದೆ. ಅದರಂತೆ ನಾವು ಬೆಳಗಾಗುತ್ತಲೇ ಹರಿಸ್ಮರಣೆ ಮಾಡುತ್ತಾ ಶುಭ ಮಂಗಳಕರವಾಗಿರುವ ಲಕ್ಷ್ಮೀ ರಮಣನ ಕಥೆ ಕೇಳುತ್ತಾ ಮನಕಾನಂದ ಪಡೆಯೋಣ ಎಂಬುದೇ ಇದರ ಅರ್ಥ. ಪ್ರಾಥ: ಕಾಲವೇ ಮನಸ್ಸು ಆನಂದ ಹೊಂದಿದರೆ, ದಿನವೆಲ್ಲಾ ಖಂಡಿತಾ ಆನಂದವಾಗಿ ಕಳೆಯಲು ಒಳ್ಳೆಯ ಬುನಾದಿ ಆಗುತ್ತದೆಂಬುದನ್ನು ಸುಭಾಷಿತ ಸೂಚಿಸುತ್ತದೆ. ಒಳ್ಳೆಯ ಮಾತುಗಳನ್ನೂ, ಕಥೆಗಳನ್ನೂ, ಸಂಗೀತವನ್ನೂ, ಕೇಳುವುದರಿಂದ ಮನವೆಂಬ ವನದಲ್ಲಿರುವ ಜೀವ ಕುಸುಮವು ವಿಕಸಿತಗೊಳ್ಳುತ್ತದೆ......


ಚಿತ್ರಕೃಪೆ : ಅಂತರ್ಜಾಲ

Friday, September 10, 2010

ಗೌರಿ ಗಣೇಶನ ಹಬ್ಬದ, ಆಚರಣೆಯ ಸಿಹಿ ನೆನಪುಗಳು ತುಂಬಾ ಇವೆ. ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಗಣೇಶನ ವಿಗ್ರಹ ತಂದು ಪೂಜಿಸುವ ಪದ್ಧತಿಯನ್ನು ನೋಡಿದ್ದೆವು. ಹಬ್ಬಕ್ಕೆ ಇನ್ನೂ ಒಂದು ತಿಂಗಳಿರುವಾಗಲೇ ಅಮ್ಮ ಹಬ್ಬ ಬರ್ತಿದೆ... ಎಷ್ಟೊಂದು ಕೆಲಸಗಳಿವೆ ಎಂಬ ಹಾಡು ಶುರು ಮಾಡಿರುತ್ತಿದ್ದರು. ಹತ್ತಿ ಬಿಡಿಸುತ್ತಾ, ಹೂಬತ್ತಿಗಳನ್ನು ಮಾಡುತ್ತಾ ನಮಗೂ ಆದೇಶಗಳನ್ನು ಕೊಡುತ್ತಿದ್ದರು. ಒಂದು ಗುಂಡಾದ.. ತಳ ಮಟ್ಟಸವಾಗಿದ್ದ ಸುಮಾರು ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಒಂದು ಡಬರಿಯಂತಹದ್ದಕ್ಕೆ ಅಮ್ಮ ಬಿಳಿಯ ಬಟ್ಟೆಯನ್ನು ಚಿಕ್ಕದಾದ, ತೆಳುವಾದ ಹೊಸ ಟವೆಲ್ಲು) ಎಳೆದು ಬಿಗಿಯಾಗಿ ಕಟ್ಟಿ ಇಟ್ಟುಕೊಂಡಿರುತ್ತಿದ್ದರು. ಕಾಳು, ಕಸ ಎಲ್ಲಾ ತೆಗೆದು ಬಿಡಿಸಿದ ಶುಭ್ರವಾದ ಹತ್ತಿಯನ್ನು.. ಕೈಗೆ ಹಾಲು ಅಥವಾ ವಿಭೂತಿ ಹಚ್ಚಿಕೊಳ್ಳುತ್ತಾ.. ಎಡಗೈಯಲ್ಲಿ ಸ್ವಲ್ಪ ಮೇಲೆ ಹಿಡಿದುಕೊಂಡು ಬಲಗೈಯಿಂದ ತೆಳುವಾಗಿ, ನಾಜೂಕಾಗಿ ಎಳೆಯುತ್ತಾ, ಸಣ್ಣಗೆ, ಉದ್ದಕ್ಕೆ ಎಳೆ ಎಳೆದು ಸುತ್ತಿ ಇಡುತ್ತಿದ್ದರು. ಅದನ್ನು ಆಮೇಲೆ ತಮ್ಮ ಮನಸ್ಸಿಗೆ ಬಂದ ಹೊಸಾ ಹೊಸಾ ಅದ್ಭುತವಾದ ಚಿತ್ರಗಳಂತೆ ಒಂದನ್ನೊಂದು ಇಲ್ಲಿ - ಅಲ್ಲಿ ಸೇರಿಸಿ ಅದನ್ನು ಹೂವು, ಹಾರ ಎಲ್ಲಾ ಮಾಡುತ್ತಿದ್ದರು. ಅವರು ಹೀಗೆ ಎಳೆದಿಟ್ಟ ಎಳೆಯನ್ನು ವಿಧ ವಿಧವಾದ ಹಾರಗಳಾಗಿ ಪರಿವರ್ತಿಸುವಾಗ, ನನಗೊಂದು ಪುಟ್ಟ ಕೆಲಸ ಕೊಟ್ಟು ಕೂರಿಸುತ್ತಿದ್ದರು. ಅವರು ಹೇಳಿದ ಬಣ್ಣದ ಕಾಗದ (ವರ್ತರೇಕು ಅಂತಿದ್ವಿ)ವನ್ನು ಹೇಳಿದಂತೆ ಚಿಕ್ಕ ಚಿಕ್ಕದಾಗಿ, ಕೇಳಿದಷ್ಟು ಉದ್ದಕ್ಕೆ ಕತ್ತರಿಸಿಕೊಡಬೇಕಿತ್ತು.. ಕಾಗದ ಎಷ್ಟು ನಾಜೂಕಾಗಿತ್ತೆಂದರೆ... ಸ್ವಲ್ಪ ಜೋರಾಗಿ ಮುಟ್ಟಿದರೂ ಹರಿದು ಹೋಗುತ್ತಿತ್ತು. ಆಗೆಲ್ಲಾ ಅಮ್ಮನ ಕೆಂಗಣ್ಣಿಗೆ ಗುರಿಯಾಗ ಬೇಕಿತ್ತು. ಅಮ್ಮ ಎಳೆದಿಟ್ಟ ಎಳೆಯನ್ನು ನಾಜೂಕಾಗಿ, ಕ್ರೋಶಾ ಕಡ್ಡಿಯಿಂದ ಒಂದು ಬೆರಳಿನಷ್ಟು ಅಗಲಹೆಣೆದು ಅದರ ಕೆಳಗೆ ಚಿಕ್ಕ ಚಿಕ್ಕ ಗುಂಡಗಿನ ಹತ್ತಿಯ ಪದಕಗಳನ್ನು ಮಾಡಿ ಅಂಟಿಸಿ, ಚಮಕಿಗಳಿಂದ ಅಲಂಕರಿಸಿ, ಕಾಸಿನ ಸರ, ಗೆಜ್ಜೆಯ ಸರ ಎಲ್ಲಾ ಮಾಡುತ್ತಿದ್ದೆವು. ನಾನೂ ನನ್ನಕ್ಕ ಇಬ್ಬರಿಗೂ ಯಾವಾಗಲೂ ಪೂಜೆಗೆ ಎಲ್ಲವನ್ನೂ ರೆಡಿ ಮಾಡುವ ಕೆಲಸ. ಸಂಭ್ರಮವೆಲ್ಲಾ ಹಿಂದಿನ ದಿನವೇ ಶುರುವಾಗಿ ಬಿಟ್ಟಿರುತ್ತಿತ್ತು. ಅಪ್ಪ ಹಿಂದಿನ ರಾತ್ರಿ .೩೦ - ಘಂಟೆಗೆ ಗಣೇಶನನ್ನು ತರಲು ಹೋಗುತ್ತಿದ್ದರು. ನಾನು ಅಕ್ಕ ಇಬ್ಬರೂ ಸಾಯಂಕಾಲದಿಂದಲೇ ಗಣೇಶ ಇಡುವ ಜಾಗವೆಲ್ಲಾ ಗುಡಿಸಿ, ಒರೆಸಿ, ರಂಗೋಲಿಹಾಕಿರುತ್ತಿದ್ದೆವು. ನಮ್ಮನೆಯಲ್ಲಿ ಒಂದು ತುಂಬಾ ಹಳೆಯ ಮರದ ಕುರ್ಚಿ ಇತ್ತು. ಅದನ್ನೂ ತೊಳೆದು, ಅದಕ್ಕೆ ಬಾಳೆಯ ಕಂಬ ಕಟ್ಟಿ, ಮಾವಿನ ಸೊಪ್ಪಿನ ತೋರಣ ಕಟ್ಟಿರುತ್ತಿದ್ದೆವು. ಅದರ ಮುಂದೆ ಒಂದು ಚಿಕ್ಕ ಮಂದಾಸನ ಹಾಕಿರುತ್ತಿದ್ದೆವು. ಮಂದಾಸನದ ಮೇಲೆಅಮ್ಮ ತಟ್ಟೆ ಇಟ್ಟು, ಕುಂಕುಮಾರ್ಚನೆ ಎಲ್ಲಾ ಮಾಡುತ್ತಿದ್ದರು. ಮಂದಾಸನಕ್ಕೂ, ಕುರ್ಚಿಗೂ ಒಗೆದ, ಕಸೂತಿ ಮಾಡಿದ ಬಟ್ಟೆ ಹಾಸಿ, ಅರಿಸಿನ ಕುಂಕುಮಗಳಿಂದ ಅವು ಕರೆಯಾಗಬಾರದೆಂದು, ಅದರ ಮೇಲೆ ಕಾಗದ ಹಾಸಿ... ಬಾಳೆಕಂಬಕ್ಕೂ ಸೇರಿಸಿ ಸುತ್ತಿ, ಸೀರಿಯಲ್ ಬಲ್ಬುಗಳ ದೀಪಾಲಂಕಾರ ಮಾಡುತ್ತಿದ್ದೆವು. ಕುರ್ಚಿಯ ಅಕ್ಕ ಪಕ್ಕದಲ್ಲಿ ಎತ್ತರದ ದೊಡ್ಡ ದೊಡ್ಡ ದೀಪದ ಕಂಭಗಳನ್ನುಇಟ್ಟು ತುಂಬಾ ಎಣ್ಣೆ ಹಾಕಿ ದೀಪ ಹಚ್ಚುತ್ತಿದ್ದೆವು.

ಮೊದಲು ಗೌರಮ್ಮನ ವಿಗ್ರಹ ತರುವ ಅಭ್ಯಾಸ ಇರಲಿಲ್ಲ. ಆದರೆ ನಾನು - ೩ನೇ ತರಗತಿಗೆ ಬಂದಾಗಿನಿಂದ ಅಪ್ಪನ ಜೊತೆ ಗಣೇಶನನ್ನು ತರಲು ಹೋಗುತ್ತಿದ್ದೆ. ಕುಂಬಾರ ಕೇರಿಯಲ್ಲಿ ಸಾಲು ಸಾಲು ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಮಾಡುತ್ತಿದ್ದರು. ಜೊತೆಗೆ ವಿಧ ವಿಧದ ಸಣ್ಣ ದೊಡ್ದ ಬಣ್ಣ ಬಣ್ಣದ ಗೌರಮ್ಮನ ವಿಗ್ರಹಗಳೂ ಇರುತ್ತಿದ್ದವು. ನಮಗೆ ಪರಿಚಿತರಾದ ಒಬ್ಬರ ಮನೆಯಿಂದಲೇ ಅಪ್ಪ ಯಾವಾಗಲೂ ತರುತ್ತಿದ್ದದ್ದು. ಅಲ್ಲಿ ಹೋಗಿ ನೋಡಿದಾಗ ಸುಂದರವಾದ, ಮುದ್ದಾದ ಗೌರಮ್ಮನ ವಿಗ್ರಹಗಳು ನನ್ನನ್ನು ತುಂಬಾ ಆಕರ್ಷಿಸುತ್ತಿದ್ದವು. ನಮ್ಮ ಮನೆಯಲ್ಲಿ ತರುವ ಪದ್ಧತಿ ಇಲ್ಲವೆಂದಾಗ ನನ್ನ ಸಪ್ಪೆ ಮುಖ ನೋಡಲಾರದೆ ಅಪ್ಪ ಪುಟ್ಟ ಗೌರಮ್ಮನನ್ನು ನನಗೆ ಆಟವಾಡಲು ಕೊಡಿಸ ತೊಡಗಿದರು. ಆದರೆ ನಾನದನ್ನು ಹಟಮಾಡಿ ಗಣೇಶನ ಜೊತೆಗೇ ಇಟ್ಟು ಪೂಜಿಸುತ್ತಿದ್ದೆ... ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿ ಹಾಕಿಕೊಂಡು, ಅಪ್ಪ ಗಣೇಶನನ್ನು ಕರೆದುಕೊಂಡು ಬರಲು ಹೊರಡುವುದೇ ಒಂದು ಸೊಗಸಾದ ನೋಟವಾಗಿತ್ತು ನನಗೆ. ವಾಪಸ್ಸು ಬಂದಾಗ ಅಮ್ಮ ಬೀದಿಯ ಬಾಗಿಲಿನಲ್ಲೇ ಅಪ್ಪನಿಗೂ, ಗಣೇಶನಿಗೂ ಸೇರಿಸಿ ಆರತಿ ಮಾಡಿಯೇ ಒಳಗೆ ಕರೆದುಕೊಳ್ಳುತ್ತಿದ್ದರು. ಅಷ್ಟರಲ್ಲಿ ನಾವು ಅಲಂಕರಿಸಿಟ್ಟಿರುತ್ತಿದ್ದ ಖುರ್ಚಿಯಲ್ಲಿ ಗಣೇಶ . ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಹೂವಿನ ಹಾರ ಹಾಕಿ ಎಲ್ಲಾ ಅಲಂಕಾರವೂ ಹಿಂದಿನ ರಾತ್ರಿಯೇ ಮುಗಿದಿರುತ್ತಿತ್ತು. ಬೇರೆ ಬೇರೆ ತಟ್ಟೆಗಳಲ್ಲಿ ವಿಧ ವಿಧದ ಹೂಗಳನ್ನು ಜೋಡಿಸಿಡುತ್ತಿದ್ದೆವು. ನಮ್ಮನೆಯ ಹಿಂದುಗಡೆ ದೊಡ್ಡ ತೋಟವೇ ಇತ್ತು. ಅಪ್ಪ ತುಂಬಾ ಹೂವಿನ ಗಿಡಗಳನ್ನೂ ಬೆಳೆಸಿದ್ದರು. ಹಬ್ಬದ ಹಿಂದಿನ ದಿನ ಸಾಯಂಕಾಲ - ಘಂಟೆಗೆಲ್ಲಾ ಅಮ್ಮ ಎಲ್ಲಾ ಹೂವಿನ ಗಿಡಗಳಿಂದಲೂ ಎರಡೆರಡು ಎಲೆಗಳನ್ನು ಕಿತ್ತು ತರಲು ಹೇಳುತ್ತಿದ್ದರು. ಜೊತೆಗೆ ಗರಿಕೆಯ ಹುಡುಕಾಟ ಕೂಡ ಆಗಲೇ ಆಗುತ್ತಿತ್ತು. ಕನಿಷ್ಠ ೨೧ ಆದರೂ ಇರಬೇಕು... ಸರಿಯಾಗಿ ಹುಡುಕ್ರೇ... ಅಂತ ಅಮ್ಮ ನನಗೂ ನನ್ನಕ್ಕನಿಗೂ ಬಹಳ strict ಆದೇಶ ಕೊಡುತ್ತಿದ್ದರು.....!

ಗೌರಿ ಹಾಗೂ ಗಣೇಶನ ಪೂಜೆ ಎರಡೂ ಒಂದೇ ದಿನ ಬಂದರಂತೂ ನಮ್ಮಮ್ಮನ ಧಾವಂತಕ್ಕೆ ಕೊನೆಯೇ ಇರುತ್ತಿರಲಿಲ್ಲ. ನಮ್ಮನೆಯಲ್ಲಿ ಗೌರಿಯನ್ನು ಕೂಡಿಸುತ್ತಿರಲಿಲ್ಲವಾಗಿ, ನಾವು ಹತ್ತಿರದಲ್ಲೇ ಇದ್ದ ರಾಮದೇವರ ದೇವಸ್ಥಾನದಲ್ಲಿ ಬೆಳಗಿನ ಮೊದಲ ಪೂಜೆಗೆ ಅಂದರೆ .೩೦ಕ್ಕೆ ಶುರುವಾಗುವ ಪೂಜೆಗೆ ಹೋಗಬೇಕಾಗಿತ್ತು. ಅದಕ್ಕೂ ಅರ್ಧ ಘಂಟೆ ಮೊದಲೇ ಹೋದರೆ ನಮಗೆ ಗೌರಮ್ಮನ ಹತ್ತಿರ, ಪಕ್ಕದಲ್ಲೇ ಕುಳಿತು ಪೂಜಿಸುವ ಅವಕಾಶ ಸಿಕ್ಕುತ್ತಿತ್ತು. ಹಾಗಾಗಿ ಘಂಟೆಗೆಲ್ಲಾ ಎದ್ದು, ಸ್ನಾನ ಮಾಡಿಕೊಂಡು, ಅಮ್ಮ ಕೊಟ್ಟ ಕಾಫಿ ಕುಡಿದು, ನಾನು, ಅಕ್ಕ ಮತ್ತು ಅಮ್ಮ ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನೂ ತಟ್ಟೆಗಳಲ್ಲಿ ಜೋಡಿಸಿಟ್ಟುಕೊಂಡು ಹೊರಡುತ್ತಿದ್ದೆವು. ಅಪ್ಪ ನಾವು ಕರೆದಾಗ ಎದ್ದು ಬಂದು ನಾವು ದೇವಸ್ಥಾನದ ತಿರುವಿನಲ್ಲಿ ಮರೆಯಾಗುವವರೆಗೂ ರಸ್ತೆಯಲ್ಲಿ ನಿಂತುನೋಡುತ್ತಿದ್ದರು. .೩೦ ಹೊತ್ತಿಗೆ ಪೂಜೆ ಮುಗಿಸಿಕೊಂಡು ಬಂದರೆ ಅಪ್ಪನ ಜೊತೆ ಮತ್ತೊಂದು ಸಲ ಕಾಫಿ ಕುಡಿದು, ನಾವು ಅಮ್ಮನ
ಆಜ್ಞೆಗಳನ್ನು ಪಾಲಿಸಲು ರೆಡಿಯಾಗುತ್ತಿದ್ದೆವು. ನಮ್ಮ ಮನೆಗೇ ಭಟ್ಟರು ಬಂದು ಅಪ್ಪನ ಹತ್ತಿರ ಗಣೇಶನ ಪೂಜೆ ಮಾಡಿಸುತ್ತಿದ್ದರು. ಅಪ್ಪ ಅಲ್ಲಿ ಕುಳಿತು ಬಿಟ್ಟರೆ, ಅವರು ಕೇಳಿದ್ದೆಲ್ಲಾ ತೆಗೆದು ಕೊಡುತ್ತಾ, ಅಮ್ಮನ ಆದೇಶಗಳನ್ನೂ ಪಾಲಿಸುತ್ತ ಅಡಿಗೆ ಮನೆ ಹಾಗೂ ಪೂಜೆಯ ಹಾಲ್ ಗೆ ಸಂಭ್ರಮದಿಂದ ಓಡಾಡುತ್ತಿದ್ದೆವು. ಪೂಜೆ ಮುಗಿದು, ಅಮ್ಮ ನೈವೇದ್ಯಕ್ಕೆ ತಂದಿಟ್ಟು, ಮಂಗಳಾರತಿ ಆದ ಮೇಲೆ, ನಮಗೆ ಪೂಜೆ ಮಾಡುವ ಅವಕಾಶ. ಎಲ್ಲಾ ಮುಗಿಸಿ, ಭಕ್ತಿಯಿಂದ ಪ್ರದಕ್ಷಿಣೆ ನಮಸ್ಕಾರ ಹಾಕಿ, ಪಂಚಾಮೃತಕ್ಕೆ ಕೈಯೊಡ್ಡಿದರೆ, ಗಣೇಶನ ಪೂಜೆ ಮುಗಿಸಿದ ಸಮಾಧಾನ. ಭಟ್ಟರು ದಿನ ತುಂಬಾ ಮನೆಗಳಿಗೆ ಪೂಜೆಗೆ ಹೋಗುತ್ತಿದ್ದರೆಂದು, ಕಥೆಯನ್ನು ನಾನೇ ಓದುತ್ತಿದ್ದೆ. ಕಥೆ ಕೇಳಿದ ನಂತರ, ನಮಗೆ ಅಲ್ಲೆಲ್ಲಾ ಮತ್ತೆ ಶುಚಿಗೊಳಿಸುವ ಕೆಲಸ.

ಅಮ್ಮನ ಅಡಿಗೆ ಆಗಿ, ಹಬ್ಬದೂಟಕ್ಕೆ ಕರೆ ಬರುವಷ್ಟರಲ್ಲಿ, ನಾವು ಅಲ್ಲಿ ಒರೆಸಿ, ಹೊಸದಾಗಿ ದೊಡ್ಡದಾಗಿ ರಂಗವಲ್ಲಿ ಬಿಡಿಸಿ, ಬಣ್ಣತುಂಬಿ ಹೂವಿಟ್ಟು ಅಲಂಕರಿಸುತ್ತಿದ್ದೆವು. ಗಣೇಶನ ಹಬ್ಬಕ್ಕೆಂದೇ ಸುಧಾ ಪತ್ರಿಕೆಯಲ್ಲಿ ಚುಕ್ಕಿ ರಂಗವಲ್ಲಿಯಲ್ಲಿ ಬಂದಿರುತ್ತಿದ್ದ ಹೊಸಾ ವಿಧದ ಗಣೇಶನನ್ನು ಬಿಡಿಸಿ, ಅದಕ್ಕೂ ಬಣ್ಣ ತುಂಬಿ, ದೀಪಗಳಿಗೆ ಎಣ್ಣೆ ಹಾಕಿ ಹಚ್ಚಿಡುತ್ತಿದ್ದೆವು. ಊಟ ಆದ ತಕ್ಷಣವೇ... ಪುರುಸೊತ್ತಿಲ್ಲದಂತೆ "ರೀ ನಿಮ್ಮನೇಲಿ ಗಣೇಶನ್ನ ಕೂಡ್ಸಿದೀರಾ" ಅಂತ ಬರುವ ಹುಡುಗರ ಹಿಂಡನ್ನು ಅಂಕೆಯಲ್ಲಿಡುವುದೇ ದೊಡ್ಡ ಕೆಲಸವಾಗುತ್ತಿತ್ತು. ಅಲ್ಲಿ ರಂಗೋಲಿ ಹಾಕಿದೀನಿ ತುಳೀಬೇಡ್ರೋ... ಕಡೆಯಿಂದಾನೆ ಬನ್ರೋ... ಅಂತ ಕೂಗೋದೇ ನನ್ನ ಕೆಲಸವಾಗಿತ್ತು. ೧೦೮ ಗಣೇಶಗಳನ್ನು ನೋಡಲು ಹೊರಟ ಹುಡುಗರು, ರಂಗವಲ್ಲಿಯ ಗಣೇಶನನ್ನೂ ಎಣಿಸಿಕೊಂಡು ಬಿಡುತ್ತಿದ್ದರು...!

ಸಾಯಂಕಾಲ ಗಣೇಶನಿಗೆ ಮತ್ತೆ ಭಟ್ಟರ ಸಹಾಯದಿಂದ ಪುನರ್ ಪೂಜೆ ಮಾಡಿ, ಮೊಸರವಲಕ್ಕಿ ತೆಗೆದುಕೊಂಡು, ಬೀಳ್ಕೊಡುವ ಸಮಾರಂಭ. ದಾರಿಯುದ್ದಕ್ಕೂ ಘಂಟೆಯ ಶಬ್ದ ಮಾಡುತ್ತಾ ಮನೆಯ ಹತ್ತಿರವೇ ಇದ್ದ ಭದ್ರಾ ನದಿಯಲ್ಲಿ ಗಣೇಶನ ಬೀಳ್ಕೊಡುಗೆಗೆ ಹೋಗುತ್ತಿದ್ದೆವು. ನದಿಯ ಮೆಟ್ಟಿಲುಗಳ ಮೇಲೆ ಗಣೇಶನಿಗೆ ಮತ್ತೆ ಪೂಜಿಸಿ, ಮೊಸರವಲಕ್ಕಿಯ ಬುತ್ತಿ ಕೊಟ್ಟ ನಂತರ, ಅಪ್ಪ ನದಿಯಲ್ಲಿ ಇಳಿದು ವಿಸರ್ಜಿಸಲು ಹೊರಡುತ್ತಿದ್ದರೆ, ನಾವು ಅಪ್ಪಾ ತುಂಬಾ ಮುಂದೆ ಹೋಗ್ಬೇಡಿ... ಇಲ್ಲೇ ಬಿಡಿ ಸಾಕು... ಅಂತ ಆತಂಕದಿಂದ ನೋಡುತ್ತಾ ಕಾಯುತ್ತಿದ್ದೆವು. ಅಪ್ಪ ಬಂದ ನಂತರ ಮಿಕ್ಕಿದ್ದ ಮೊಸರವಲಕ್ಕಿ ಎಲ್ಲಾ ತಿಂದು ಮುಗಿದೇ ಹೋಯಿತಲ್ಲಾ ಗೌರಿ ಗಣೇಶನ ಹಬ್ಬ ಎಂದು ಸಪ್ಪೆ ಮುಖದಿಂದ ಮನೆಗೆ ವಾಪಸ್ಸು ಬರುತ್ತಿದ್ದೆವು. ಮತ್ತೆ ಮುಂದಿನ ವರ್ಷದ ಗೌರಿ ಗಣೇಶರ ಆಗಮನಕ್ಕಾಗಿ ಕಾಯುತ್ತಿದ್ದೆವು. ಇದೆಲ್ಲಾ ಸಂಭ್ರಮದಲ್ಲೂ ನಾನು ನನ್ನ ಪುಟ್ಟ ಗೌರಿಯನ್ನು ನೀರಿನಲ್ಲಿ ವಿಸರ್ಜಿಸುತ್ತಿರಲಿಲ್ಲ. ಹಾಗೇ ಎತ್ತಿಟ್ಟುಕೊಂಡಿರುತ್ತಿದ್ದೆ, ಮುಂದಿನ ವರ್ಷ ಹೊಸ ಗೌರಮ್ಮ ಬರುವವರೆಗೂ..... ಈಗ ನೆನಪುಗಳದೆಷ್ಟು ಮಧುರ, ಸುಂದರ ಮತ್ತು ಆಪ್ತ ಎನ್ನಿಸುತ್ತದೆ.....


ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.........


ಚಿತ್ರಕೃಪೆ : ಅಂತರ್ಜಾಲ

Saturday, September 4, 2010

ಬೆಕ್ಕಿನ ಕಣ್ಣು - ಮುಕ್ತಾಯ ......

ಚಿಕ್ಕಮ್ಮನ ತಮ್ಮ ರಾಜಶೇಖರನನ್ನು ತನ್ನ ತಂದೆಯ ಮದುವೆಯ ಸಮಯದಲ್ಲೇ ನೋಡಿರುತ್ತಾಳೆ ಕುಸುಮ. ತನ್ನತ್ತ ಸ್ನೇಹದ ನಗೆ ಬೀರಿದ್ದ ರಾಜನಲ್ಲಿ ಅವಳಿಗೆ ಸ್ವಲ್ಪ ವಿಶ್ವಾಸವಿರುತ್ತದೆ. ಮುಂದೆ ಹಲವು ವರ್ಷಗಳ ನಂತರ ಅಕ್ಕನ ಮನೆಗೆ ಬಂದ ಸ್ಫುರದ್ರೂಪಿ ಯುವಕ, ಮನ:ಶಾಸ್ತ್ರದ ವಿದ್ಯಾರ್ಥಿ ರಾಜನನ್ನು ನೋಡಿ ಲಜ್ಜೆ, ಸಂಕೋಚದಿಂದ ದೂರವೇ ಇರುತ್ತಾಳೆ. ಆದರೆ ಅವಳು ಉದ್ವೇಗದಿಂದ ಬೆಕ್ಕು ಪಾಲಿಗೆ ಕಲ್ಲು ಹೊಡೆಯುತ್ತಿದ್ದಾಗ, ಅನುನಯದ ಮಾತಾಡಿ, ಕಥೆ ಹೇಳಿ ರಾಜ ಅವಳ ವಿಶ್ವಾಸ ಗೆಲ್ಲುತ್ತಾನೆ. ಮಾನಸಿಕ ತಜ್ಞರಿಗೆ ತೋರಿಸುವಂತೆ ಕುಸುಮಳ ತಂದೆಗೆ ಹೇಳುತ್ತಾನೆ. ಆದರೆ ಅವರು ಅವಳನ್ನು ತಾಯಿಯ ದೆವ್ವ ಮೆಟ್ಟಿದೆಯೆಂದೂ, ಬಿಡಿಸಲು ಅಮಾವಾಸ್ಯೆಯಂದು ತಿಪ್ಪಯ್ಯನ ಬಳಿ ಕರೆದೊಯ್ಯುತ್ತಾರೆ. ಬರಲಾರೆನೆಂದು ಹಟ ಮಾಡುವ ಕುಸುಮ ರಾಜನೂ ಬರುತ್ತೇನೆಂದ ಮೇಲೆ ತನ್ನನ್ನು ಅವನು ರಕ್ಷಿಸುತ್ತಾನೆ, ಎಲ್ಲರಂತಲ್ಲ ಅವನು ಎಂದು ಅವನ ಮೇಲಿನ ವಿಶ್ವಾಸದಿಂದ ಹೊರಡುತ್ತಾಳೆ. ರೌದ್ರ ರೂಪದ ತಿಪ್ಪಯ್ಯನನ್ನು ಕಂಡು, ಕುಸುಮಳ ಜೊತೆ ರಾಜನೂ ಬೆಚ್ಚುತ್ತಾನೆ. ತಿಪ್ಪಯ್ಯ, ದೇವೀರಪ್ಪ ಇಬ್ಬರ ಭೂತ ಬಿಡಿಸುವ ಹಿಂಸೆಯ ಪರಿಯಿಂದ ನೊಂದ ಕುಸುಮ ನಿರಾಶೆ, ವಿಫಲತೆ, ಅಸಹಾಯಕತೆಯಿಂದ, ಬದುಕೇ ಬೇಡವೆಂದು ವಿರಕ್ತಿಯಲ್ಲಿ ಮುಳುಗುತ್ತಾಳೆ. ಎಲ್ಲರಂತೆ ಬದುಕಬೇಕೆನ್ನುವ ತನ್ನ ಕನಸು ಕಣ್ಣೆದುರೇ ನುಚ್ಚು ನೂರಾಗುವುದು ನೋಡಿ, ಬದುಕಿಗಿಂತ ಸಾವೇ ವಾಸಿ ಎಂದು ಕೊಳ್ಳುತ್ತಾ, ಗಂಟೆಗಟ್ಟಲೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ಕುಳಿತು ಬಿಡುತ್ತಾಳೆ......

ರಾಜ ಅವಳನ್ನು ಉಲ್ಲಾಸಗೊಳಿಸಲೋಸುಗ ಹೊರಗೆ ಕರೆದುಕೊಂಡು ಹೋದವನು, ಕುಸುಮಳನ್ನು ತಾವು ಪ್ರೀತಿಸುವುದಾಗಿಯೂ, ಅವಳು ತನಗಾಗಿ ಬದುಕಬೇಕೆಂದೂ ಹೇಳುತ್ತಾನೆ. ಎಂದೂ ಇಲ್ಲದ ಅನಂತ ಶಾಂತಿ ಮೂಡುತ್ತದೆ, ಕುಸುಮಳ ಕಣ್ಣುಗಳಲ್ಲಿ. ಆದರೆ....ಎಲ್ಲರಂತೆ ತಾನೂ ನೆಮ್ಮದಿಯ ಜೀವನ ನಡೆಸಬಹುದೆನ್ನುವ ಕುಸುಮಳ ಆಕಾಂಕ್ಷೆಗೆ, ಕನಸಿಗೆ ಪದ್ಮ ಕಲ್ಲೆಸೆದು, ಆಳವಾಗಿ ಕಲಕಿ ಬಿಡುತ್ತಾಳೆ. ರಾಜನ ಜೊತೆಯ ಕುಸುಮಳ ಸ್ನೇಹದ ಆಳ ಅತಿ ಹೆಚ್ಚಾಗುವುದು, ಪದ್ಮಳಿಗೆ ಇಷ್ಟವಿರುವುದಿಲ್ಲ. ಅವಳು ತುಸುವೇ ಚೇತರಿಸಿಕೊಂಡಿದ್ದ ಕುಸುಮಳ ಮೃದು ಅಂತರಂಗವನ್ನು ಮತ್ತೆ ಘಾಸಿಗೊಳಿಸಿಬಿಡುತ್ತಾಳೆ. ಅಕ್ಕ ಪಕ್ಕದವರೂ ಅವಳ ಪ್ರತಿಯೊಂದು ಚಲನವಲನಕ್ಕೂ ಸಂಶಯದ ಅರ್ಥ ಕೊಡಲಾರಂಭಿಸಿದಾಗ, ಕುಸುಮ ಮತ್ತೆ ಉನ್ಮಾದ ಸ್ಥಿತಿಗೆ ತಲುಪುತ್ತಾಳೆ. ಮನೆಯವರಿಗೆ ಗೊತ್ತಿಲ್ಲದಂತೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕುಸುಮಳನ್ನು ರಾಜ, ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ಸೇರಿಸಿ ಬಿಡುತ್ತಾನೆ. ಆಸ್ಪತ್ರೆಯಲ್ಲಿ ಕುಸುಮಳಿಗೆ ಒಂದು ಹೊಸ ಪ್ರಪಂಚವೇ ತೆರೆದುಕೊಳ್ಳತ್ತೆ. ಮಗಳಿಗಾಗಿ ಹಂಬಲಿಸುವ ಲಕ್ಷಮ್ಮ ಕುಸುಮಳಲ್ಲಿ ತನ್ನ ಮಗಳು ನಾಗುವನ್ನು ಕಾಣುತ್ತಾರೆ. ತಾಯಿ ಪ್ರೇಮದಿಂದ ವಂಚಿತಳಾಗಿದ್ದ ಕುಸುಮಳೂ ಅಮ್ಮಾ ಎಂದು ಹಚ್ಚಿಕೊಳ್ಳುತ್ತಾಳೆ. ಕೆಲವು ದಿನಗಳಲ್ಲಿ ಕುಸುಮ ಆಸ್ಪತ್ರೆಯ ವಾತಾವರಣಕ್ಕೆ ಹೊಂದಿ ಕೊಳ್ಳುತ್ತಾಳೆ. ಬಾಕಿಯಂತೆ ಅವಳು ಶಾಂತವಾಗಿದ್ದರೂ ಹಸಿರು ಬಣ್ಣದ ಮೇಲಿನ ದ್ವೇಷ ಅವಳ ಅಂತರಂಗಕ್ಕಿಳಿದಿರತ್ತೆ. ಅದು ಕೆಲವೊಮ್ಮೆ ಅವಳ ಕೆಲಸಗಳಲ್ಲಿ - ಅಂದರೆ ಕಸೂತಿಯ ಗುಲಾಬಿ ಹೂವಿನ ಜೊತೆ ನೀಲಿ ಎಲೆ ಮಾಡುವುದರಲ್ಲಿ... ಹೀಗೆ ವ್ಯಕ್ತವಾಗುತ್ತಿರುತ್ತದೆ...

ಆಸ್ಪತ್ರೆಯ ಡಾಕ್ಟರು ಕುಸುಮಳನ್ನು ನಾನಾ ಬಗೆಯಲ್ಲಿ ಅವಳಿಗೆ ತಿಳಿಯದಂತೆ ಕೂಡ ಪರೀಕ್ಷಿಸುತ್ತಾರೆ. ಇದರಲ್ಲಿ ಒಂದು ವಿಧವೆಂದರೆ.. ಕುಸುಮಳಿಗೆ ಅನೇಕ ಬೊಂಬೆಗಳನ್ನು ಆಡಲು ಕೊಟ್ಟು, ಅವಳಿಗರಿವಿಲ್ಲದಂತೆ ಅವಳನ್ನು ಗಮನಿಸುವುದು. ಕುಸುಮ ಆಟದಲ್ಲೂ... ಹೆಣ್ಣು ಬೊಂಬೆಯನ್ನು ತಂದೆಯ ಪಕ್ಕದಲ್ಲಿ ನಿಲ್ಲಿಸಿ, ಮತ್ತೆ ತೆಗೆದು ದೂರ ಎಸೆಯುತ್ತಾಳೆ, ಬೆಕ್ಕಿನ ಬೊಂಬೆಯನ್ನು ನೆಲಕ್ಕೆ ಬಿಸಾಕಿ, ಕೈಗೆ ಸಿಕ್ಕಿದ್ದು ತೆಗೆದುಕೊಂಡು ಚಚ್ಚುತ್ತಾಳೆ... ಹೀಗೆ ಅವಳ ಪರೀಕ್ಷೆಯನ್ನು ಮಾಡಿದ ಡಾಕ್ಟರ್ ಕುಸುಮಳ ತಂದೆಯನ್ನೂ, ಪದ್ಮಳನ್ನೂ ಕರೆಸಿ ಮಾತುಕತೆಯಾಡಿ, ತಿಳಿಸಿ ಹೇಳುತ್ತಾರೆ. ಜಗನ್ನಾಥರಿಗೆ ತಾವೆಂತಹ ತಪ್ಪು ಮಾಡಿ ತಮ್ಮ ಮುದ್ದು ಮಗಳ ಬದುಕು ಸಂಕಟಮಯವಾಗಲು ಕಾರಣರಾದೆವೆಂದು ಅರ್ಥವಾಗುತ್ತದೆ. ಅವರು ಡಾಕ್ಟರರ ಮಾತಿಗೆ ಸ್ಪಂದಿಸಿ, ಬದಲಾದ ಮನಸ್ಸಿನಿಂದ ಕುಸುಮಳನ್ನು ನೋಡಲು ಬರುತ್ತಾರೆ ಹಾಗೂ ಹೆಂಡತಿಗೂ ಸರಿಯಾಗಿ ಬೈದು ತಮ್ಮ ಕಳವಳ ತೋಡಿಕೊಳ್ಳುತ್ತಾರೆ.... ಪದ್ಮಳಿಗೂ ತನ್ನ ತಪ್ಪಿನ ಅರಿವಾಗುತ್ತದೆ. ಹೀಗೆ ಎಲ್ಲರೂ ಬದಲಾದ ಹೃದಯದಿಂದ, ತುಂಬಿದ ಪ್ರೀತಿಯಿಂದ, ಮತ್ತೆ ಮತ್ತೆ ಆಸ್ಪತ್ರೆಗೆ ಭೇಟಿ ನೀಡಿ ಕುಸುಮಳನ್ನು ಸಂತೈಸುತ್ತಾರೆ. ಅವಳ ಮನಸ್ಸಿನಲ್ಲಿ ಬದುಕಿನ ಬಗ್ಗೆ ಉತ್ಸಾಹ, ಮತ್ತು ಮೃದು ಭಾವನೆಗಳನ್ನು ಉದ್ದೀಪನಗೊಳಿಸುತ್ತಾರೆ. ರಾಜನ ಸಮಯೋಚಿತ ನಿರ್ಧಾರದಿಂದ ಕುಸುಮಳ ಬಾಳು ಬೆಳಗುತ್ತದೆ. ರಾಜ ತನ್ನ ಓದು ಮುಗಿಸಿದ ನಂತರ ರಾಜನಿಗೂ ಕುಸುಮಳಿಗೂ ಮದುವೆಯೆಂಬ ಮಾತು ಕೂಡ ನಿರ್ಧಾರದ ಆಕಾರ ಪಡೆಯುತ್ತದೆ. ಕುಸುಮಳಿಗೂ SSLC ಪಾಸು ಮಾಡುವಂತೆ ಹೇಳಬೇಕೆಂದುಕೊಳ್ಳುತ್ತಾನೆ ರಾಜ.......

ಕಥೆಯೇನೋ ಸುಖಾಂತ್ಯವಾಗಿ ಮುಗಿದುಹೋಗುತ್ತದೆ. ಆದರೆ ಅಲ್ಲಿನ ಪಾತ್ರಗಳು ನಮ್ಮನ್ನು ಬಿಡದೇ ಕಾಡುತ್ತವೆ. ಹೆಂಡತಿಯನ್ನು ಕಳೆದುಕೊಂಡು, ಮನೆ-ವ್ಯಾಪಾರ ಎರಡನ್ನೂ ತೂಗಿಸಲಾಗದೇ, ವಯಸ್ಸಿನ ಸಹಜ ಕಾಮನೆಗಳನ್ನೂ ಗೆಲ್ಲಲಾಗದೇ, ಎರಡನೆಯ ಮದುವೆಗೆ ಒಪ್ಪುವ ಜಗನ್ನಾಥನ ವ್ಯಕ್ತಿತ್ವ ನಿಶ್ಯಕ್ತವಾಗಿದೆ ಎನ್ನಿಸುತ್ತದೆ. ತನಗಿಂತ ತುಸು ಹೆಚ್ಚೇ ವಯಸ್ಸಿನ, ೧೦ವರ್ಷದ ಮಗಳ ತಂದೆಯನ್ನು ಮದುವೆಯಾಗ ಬೇಕೆನ್ನುವ ಒತ್ತಡಕ್ಕೆ ಸಿಲುಕಿ, ಆಕ್ರೋಶದ ಮನಸ್ಥಿತಿಯಲ್ಲಿನ ಪದ್ಮ ಓದುಗರ ಮನದಲ್ಲಿ ಕರಾಳವಾಗಿ ಬಿಂಬಿಸಲ್ಪಡುತ್ತಾಳೆ. ಕೊನೆಗೆ ಅವಳು ಬದಲಾದರೂ ಕೂಡ, ಅವಳ ಒಳ್ಳೆಯ ಮುಖದ ಪರಿಚಯಕ್ಕೆ ಇಲ್ಲಿ ಅವಕಾಶವಿಲ್ಲದಿರುವುದರಿಂದ, ಅವಳು ನಮ್ಮ ಮನದಲ್ಲಿ ಭೀಕರವಾಗಿಯೇ ಉಳಿದುಬಿಡುತ್ತಾಳೆ. ಮುಂಚಿನಿಂದಲೂ ಮನ:ಶಾಸ್ತ್ರದಲ್ಲಿ ಆಸಕ್ತಿಯುಳ್ಳವನಾಗಿ, ಕುಸುಮಳಿಗೆ ಪ್ರೀತಿ, ಭರವಸೆ, ಧೈರ್ಯ ಕೊಟ್ಟು, ಸಕಾಲದಲ್ಲಿ ಚಿಕಿತ್ಸೆ ಒದಗಿಸಿ, ಅವಳ ಬಾಳು ಚಿಗುರುವಂತೆ ಮಾಡುವ, ಅವಳ ಹೃದಯದಲ್ಲಿ ಅನುರಾಗದ ಅಲೆ ಹುಟ್ಟಿಸುವ ರಾಜ ಸ್ವಾಭಾವಿಕವಾಗಿಯೇ ನಾಯಕನಾಗುತ್ತಾನೆ.

ದುಕಿನಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆಗಳೂ ಕೂಡ ತೀವ್ರತರವಾಗಿ ನಮ್ಮ ಅಂತರಂಗವನ್ನು ಕಲಕಿ ಜೀವನದ ಗತಿಯನ್ನೇ ಬದಲಿಸಿ ಬಿಡಬಹುದೆಂಬ ಒಂದು ಎಳೆಯ ಮೇಲೆ ಈ ಕಾದಂಬರಿ ರಚಿಸಿದ ಲೇಖಕಿ, ತಾನೇ ಸ್ವತ: case study ಮಾಡಿಯೇ ಕಥೆಯ ಹಂದರ ನಿರ್ಮಿಸಿದ್ದಾರೆ. ಎಂದಿನಂತೆ ತಮ್ಮದೇ ಶೈಲಿಯಲ್ಲಿ ತ್ರಿವೇಣಿಯವರು ಛಾಪು ಒತ್ತಿ ಕಥೆಗೆ ಒಂದು ನಿರ್ದಿಷ್ಟ ವೇಗ ಕೊಟ್ಟಿದ್ದಾರೆ. ಓದಿದ ಹಲವಾರು ತಿಂಗಳುಗಳವರೆಗೂ, ವರ್ಷಗಳವರೆಗೂ ನಮ್ಮ ಮನಸ್ಸು ಕಲಕಬಲ್ಲ ಕಥೆ ಮತ್ತು ನಿರೂಪಣೆ.....

ಚಿತ್ರಕೃಪೆ : ಅಂತರ್ಜಾಲ