Friday, April 29, 2011

ನನ್ನೂರು - ಭದ್ರಾವತಿ.....


ಹಿಂದಿನ ವಾರದ ಕೊನೆಗೆ ನಾನು ಮತ್ತೆ ನನ್ನೂರು ಭದ್ರಾವತಿಗೆ ಹೋಗುವಾಗ ನನ್ನ ಮನಸ್ಸು ಅದೇಕೋ ತುಂಬಾ ಸಂತಸದಿಂದಿತ್ತು. ನಾ ಹುಟ್ಟಿದ್ದು ಬೆಂಗಳೂರಿನಲ್ಲೇ ದರೂ... ಬೆಳೆದಿದ್ದು, ವಿದ್ಯಾಭ್ಯಾಸ, ಮದುವೆ ಎಲ್ಲಾ ಭದ್ರಾವತಿಯಲ್ಲೇ ಆಗಿದ್ದು. ಜೀವನದ ಒಂದು ಘಟ್ಟ ಮುಗಿದು, ಮಹತ್ತರ ಘಟ್ಟ ಆರಂಭವಾಗಲು.. ಮದುವೆಯೆಂಬ ಅಡಿಪಾಯ ನನಗೆ ನನ್ನೂರಲ್ಲೇ ಹಾಕಿದ್ದು. ನಮ್ಮ ಮನೆ ಭದ್ರಾನದಿಯ ಪಕ್ಕದಲ್ಲೇ ಇತ್ತು. ನಮ್ಮ ಮನೆ ಸೇತುವೆಗೆ ಹತ್ತಿರ, ನದೀ ತೀರದಲ್ಲಿ, ಆರಕ್ಷಕ ಠಾಣೆಯ ಸಾಲಿನಲ್ಲಿ, ಮಠದ ಹತ್ತಿರ, ಶಾಲೆಗೆ ಹತ್ತಿರ.. ಮನೆಯ ಹಿಂದುಗಡೆಯೇ ಬಸವೇಶ್ವರ ಸಿನಿಮಾ ಮಂದಿರ, ತರಕಾರಿ ಮಾರುಕಟ್ಟೆ, ಅಲ್ಲಿಂದ ಸ್ವಲ್ಪವೇ ಮುಂದೆ ಸರಕಾರಿ ಆಸ್ಪತ್ರೆ... ಈ ಕಡೆ ಬಂದರೆ... ನಮ್ಮೂರ ಹಳೇನಗರದ ಬಯಲು.. ’ಕನಕ ಮಂಟಪ’.. ಅದಕ್ಕೆ ಎದುರಿಗೇ ಪ್ರಾಥಮಿಕ ಶಾಲೆ, ಪಕ್ಕದಲ್ಲೇ ಪ್ರೌಢ ಶಾಲೆ... ಕೆಲವೇ ಹೆಜ್ಜೆಗಳು ಮುಂದೆ ಹೋದರೆ ನಿರ್ಮಲಾ ಆಸ್ಪತ್ರೆ, ಕೈ ಮುರುಕ ಆಂಜನೇಯನ ಗುಡಿ.. ಅಲ್ಲಿಂದ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಸಿಕ್ಕುವುದೇ.. ಗ್ರಾಮ ದೇವತೆ ಹಳದಮ್ಮ ತನ್ನ ತಂಗಿಯರ ಜೊತೆಗೂಡಿ ನೆಲೆಸಿರುವ ದೇವಸ್ಥಾನ.. ಅಲ್ಲಿಂದ ಹಾಗೇ... ಸ್ವಲ್ಪ ಮುಂದೆ ಬಂದರೆ ಇರುವುದೇ... ಭದ್ರಾವತಿಯ ವಿಶೇಷ.. ಹೊಯ್ಸಳರ ಕಾಲದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ನಕ್ಷತ್ರಾಕಾರದ ಪ್ರಾಕಾರವಿರುವ ದೇವಸ್ಥಾನ.... ಇದೆಲ್ಲಾ ಬರೀ ಹಳೇನಗರದ ವಿಶೇಷತೆಗಳು... ನಾ ಈ ಸಲ ನನ್ನ ಭಾವುಕತೆಯ ಜೋಡಣೆಯನ್ನು ಹಳೇನಗರಕ್ಕೇ ಮೀಸಲಿಡುತ್ತೇನೆ ರೈಲು ಕೆಳಗಿನ ಸೇತುವೆ ದಾಟಿ ಮುಂದೆ ನಾ ಹೋಗೋಲ್ಲ. ಮುಂದಿನ ಬಾರಿ ಹೋದಾಗಿನ ಅನುಭವಗಳ ಜೊತೆಗೆ... ಹೊಸನಗರ, ಕಾಗದ ನಗರ, ಮಿಲಿಟರಿ ಕ್ಯಾಂಪ್, ಹೀಗೆ ಬಾಕಿ ಉಳಿದ ಪ್ರದೇಶಗಳ ವಿವರಗಳನ್ನು ಹೇಳ್ತೀನಿ.

ನಾವು ಅಲ್ಲಿಗೆ ಗುರುವಾರ ರಾತ್ರಿ ಹೋಗಿ ತಲುಪಿದೆವು. ದಾರಿಯುದ್ದಕ್ಕೂ ಜಿಟಿ ಜಿಟಿ ಮಳೆ ಬರುತ್ತಲೇ ಇತ್ತು. ಭದ್ರಾವತಿಯಲ್ಲಿ ಇಳಿದಾಗ ನಮ್ಮನ್ನು ಎದುರ್ಗೊಳ್ಳಲು ನನ್ನ ಭಾವ ಹಾಗೂ ಅಳಿಯ ಬಂದಿದ್ದರು. ಇದು ನನಗೆ ತೀರಾ ಆಶ್ಚರ್ಯದ ಖುಷಿ ಕೊಟ್ಟಿತ್ತು. ರೈಲು ನಿಲ್ದಾಣದಲ್ಲೆಲ್ಲಾ ಸಿಮೆಂಟು ಹಾಕಿ ಜಗುಲಿಯನ್ನು ದುರಸ್ತಿ ಮಾಡುತ್ತಿದ್ದಾರೆ. ನಿಲ್ದಾಣದ ಮುಂಭಾಗವನ್ನೆಲ್ಲಾ ಹೊಸ ವಿನ್ಯಾಸಗೊಳಿಸಿ, ಬಣ್ಣ ಹಚ್ಚಿಸಿ ಸುಂದರವಾಗಿಸಿದ್ದಾರೆ. ರೈಲು ನಿಲ್ದಾಣ ನಮ್ಮೂರ ದೊಡ್ಡ ಮಾರುಕಟ್ಟೆ ಕಟ್ಟಡದ ಹಿಂಭಾಗದಲ್ಲಿತ್ತು. ಆ ಮಾರುಕಟ್ಟೆ ಕಟ್ಟಡ ಒಡೆದು ಹಾಕಿದ್ದಾರೆ. ಈಗ ನಿಲ್ದಾಣ ರಸ್ತೆಗೇ ಕಾಣುತ್ತದೆ.... ರಸ್ತೆಗಳು ಅಗಲೀಕರಿಸಲ್ಪಟ್ಟಿವೆ.. ಒಟ್ಟಿನಲ್ಲಿ ನನ್ನೂರು ಭದ್ರಾವತಿ ಒಂಥರಾ ಹೊಸ ಹಾಗೂ ಹಳೆಯ ಮಿಶ್ರಣದ ಘಮದಲ್ಲಿ ತೇಲುತ್ತಿದೆ.

ತರೀಕೆರೆ ದಾಟುತ್ತಿದ್ದಂತೇ... ಮೈ ಮನ ಅರಳಿ... ಅದೇನೋ ಒಂದು ಹೇಳಲಾರದ ನಿರಾಳ ಭಾವ, ನಾನೀ ಸ್ಥಳಕ್ಕೆ ಸೇರಿದವಳೆಂಬ ’ಅಂಟಿಕೊಳ್ಳುವ’ ಒಂದು ಎಳೆ.. ತಪ್ಪಿಸಿಕೊಂಡ ಪುಟ್ಟ ಕರು.. ಅಮ್ಮನ ಮಡಿಲಿಗೆ ಬಂದಾಗ ಆಗುವ ಬೆಚ್ಚನೆಯ ಅನುಭವ... ಅಬ್ಬಾ.. ವರ್ಣಿಸಲಾಗದಷ್ಟು ಭರಪೂರ ಮನಸ್ಸು.... ರೈಲಿಳಿದು ನನ್ನೂರ ಮಣ್ಣಿನಲ್ಲಿ ಕಾಲಿಟ್ಟ ಕೂಡಲೇ ರೋಮಾಂಚನ....

ಎಲ್ಲಾ ಸುಂದರವಾದ ಮಾತುಗಳೊಂದಿಗೆ ನಮ್ಮೂರ ಕೆಲವು ಬದಲಾವಣೆಗಳ ಬಗ್ಗೆಯೂ ಮಾತನಾಡಲೇ ಬೇಕಾಗುತ್ತದೆ. ಎಲ್ಲಕ್ಕಿಂತ ಮೊತ್ತ ಮೊದಲನೆಯದು... ಆಟೋರಿಕ್ಷಾ ಚಾಲಕರ ಅಟಾಟೋಪ... ಅಲ್ಲಿ ಮೀಟರ್ ಹಾಕಿ ಓಡಿಸುವ ಪದ್ಧತಿ ಇಲ್ಲದಿರುವುದರಿಂದ... ಅವರು ಕೇಳಿದ್ದೇ ರೇಟು. ನಾವೂ ಏನೂ ಕಮ್ಮಿ ಇಲ್ಲವೆನ್ನುವಂತೆ.. ಇದೇನ್ರಿ.. ಇದು... ನಾವೂ ಈ ಊರಿನವರೆ... ಈ ಪಾಟಿ ದುಡ್ಡು ಕೇಳ್ತೀರಾ ಎಂದರೆ ಸಾಕು... ಏನ್ ಮೇಡಂ ಇಷ್ಟು ಕಮ್ಮಿ ಕೇಳಿದ್ರೂ ಹೀಗಂತಿರಲ್ಲಾ... ಎಲ್ಲದರ ಬೆಲೆ ಜಾಸ್ತಿ ಆಗಿದೆ... ಅಂತ ನಮ್ಮನ್ನೇ ದಬಾಯಿಸುತ್ತಾರೆ. ಇರಲಿ ಬಿಡಿ... ಇದೆಲ್ಲಾ ಸಣ್ಣ ಪುಟ್ಟ ಕಿರಿಕಿರಿಗಳು ಇದ್ದಿದ್ದೆ... ಅದು ನನ್ನ ಉತ್ಸಾಹವನ್ನೇನು ಕಮ್ಮಿ ಮಾಡೋಲ್ಲ...

ಇಡೀ ಹಳೆನಗರಕ್ಕೆ.. ದೊಡ್ಡ ಮೈದಾನವೆಂದರೆ.. ಕನಕ ಮಂಟಪ ಒಂದೇ... ನಮ್ಮ ಶಾಲೆಗಳ ಎಲ್ಲಾ ಕಾರ್ಯಕ್ರಮಗಳು.. ಮಹಿಳಾ ಸಮಾಜದ ವಾರ್ಷಿಕೋತ್ಸವಗಳು, ಯಕ್ಷಗಾನಗಳು ಎಲ್ಲವು... ಅಲ್ಲೇ ಅದೇ ಮೈದಾನದಲ್ಲೇ ನಡೆಯುತ್ತಿತ್ತು. ಮಧ್ಯದಲ್ಲಿ ಒಂದು ಧ್ವಜ ಸ್ಥಂಬ ಇತ್ತು. ನಮ್ಮ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಗುತ್ತಿದ್ದ ಸ್ವಾತಂತ್ರ ದಿನೋತ್ಸವ, ಆಟೋಟಗಳು ಎಲ್ಲದಕ್ಕೂ ಈಗಲೂ ಸಾಕ್ಷಿಯಾಗಿ ನಿಂತಿರುವುದು ಈ ನಮ್ಮ ಮೈದಾನವೇ. ಈಗ ಅದಕ್ಕೆ ಸುತ್ತಲಿನ ಗೋಡೆ ಕಟ್ಟಿದ್ದಾರೆ.. ನಾವು ಚಿಕ್ಕವರಿದ್ದಾಗ ಅದು ತೆರೆದ ಬಯಲು ಪ್ರದೇಶ. ಅಲ್ಲಿ ಕೋಳಿ ಜಗಳದ ಮರಗಳು ಅನೇಕವಿದ್ದವು... ಎಲ್ಲಕ್ಕಿಂತ ವಿಶೇಷ ಕಾರ್ಯಕ್ರಮ ಈ ಮೈದಾನದಲ್ಲಿ ನಡೆಯುತ್ತಿದ್ದದ್ದು... “ಬನ್ನಿ ಮುಡಿಯುವ ಕಾರ್ಯಕ್ರಮ.” ಊರಿನ ಎಲ್ಲಾ ದೇವರುಗಳ ಉತ್ಸಾವವೂ ಅಲ್ಲಿಗೆ ಬರುತ್ತಿತ್ತು. ವಿಜಯದಶಮಿಯ ಸಾಯಂಕಾಲ ೬.೩೦ರ ನಂತರ... ಒಂದೊಂದೇ ದೇವರು-ದೇವತೆಗಳು ಮೆರವಣಿಗೆಯಲ್ಲಿ ಬಂದು ಅಲ್ಲಿ ಬೀಡು ಬಿಟ್ಟ ಕೂಡಲೇ ಈ ಕಾರ್ಯಕ್ರಮ ನಡೆಯುತ್ತಿತ್ತು. ಅಪ್ಪ ಪತ್ರಕರ್ತರಾಗಿಯೂ, ಊರಿನ ಹಿರಿಯರಾಗಿಯೂ ಉಪಸ್ಥಿತರಿರುತ್ತಿದ್ದರು. ವಾಪಸ್ಸು ಬರುವಾಗ ಶಮಿ ವೃಕ್ಷದ ಎಲೆಗಳನ್ನು ತಂದು ಕೊಡುತ್ತಿದ್ದರು. ಇದು ಆ ದಿನಗಳ ಮರೆಯಲಾಗದ ವಿಶೇಷ ನನಗೆ. ನಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ.. ಬಾವುಟ ಹಿಡಿದು ನಾವೂ ಕವಾಯಿತು ಮಾಡುತ್ತಾ ನಡೆದು ಬಂದು ತಹಸಿಲ್ದಾರರಿಗೂ, ಧ್ವಜ ಸ್ಥಂಬದಲ್ಲಿ ಹಾರಾಡುತ್ತಿದ್ದ ಹೆಮ್ಮೆಯ ಬಾವುಟಕ್ಕೂ ಸೆಲ್ಯೂಟ್ ಮಾಡುತ್ತಿದ್ದ ದೃಶ್ಯ ಮರೆಯಲಾಗದ್ದು. ಅಲ್ಲಿಂದ ಎಲ್ಲರೂ.. ಸಾಲು ಸಾಲಾಗಿ ಮುನಿಸಿಪಲ್ ಕಚೇರಿಗೆ ಹೋಗಿ ಸಿಹಿ ಇಸ್ಕೊಂಡು ಮನೆಗೆ ಹೋಗುತ್ತಿದ್ದೆವು.

ತುಂಬಿ ಹರಿಯುತ್ತಿದ್ದ ಭದ್ರೆಯ ಒಡಲು ಈಗ ಬರಿದಾಗಿದೆ. ಅವಳ ಮಡಿಲಲ್ಲಿ ಇದ್ದ ಒಂದು ಪುಟ್ಟ ಮಂಟಪದಲ್ಲಿ ಈಶ್ವರ ನೆಲೆಸಿದ್ದ. ಈಗ ಬದಲಾದ ಕಾಲಕ್ಕೆ ತಕ್ಕಂತೆ... ಈಶ್ವರನಿಗೂ ಹೊಸ ಮಂಟಪ ಕಟ್ಟಿ.. ಗಾಢ ಬಣ್ಣಗಳಿಂದ ಅಲಂಕರಿಸಿದ್ದಾರೆ. ಒಡಲಲ್ಲಿನ ಹೆಚ್ಚು ನೀರು ಇಲ್ಲದಿರುವುದರಿಂದ ನನ್ನಮ್ಮ ಭದ್ರೆ ತನ್ನ ಮಾತೃ ಭಾವದ ಸಂಕೇತವಾಗಿ... ಅನೇಕ ಬೇಕಾದ.. ಬೇಡಾದ ಬಳ್ಳಿ.. ಗಿಡಗಳಿಗೆ ವಾತ್ಸಲ್ಯದ ಆಸರೆ ಕೊಟ್ಟಿದ್ದಾಳೆ.. ತನ್ನ ಮೊದಲ ಕಂದ (ಹಳೇ ಸೇತುವೆ) ವಯಸ್ಸಿನ ಭಾರದಿಂದ ಕುಗ್ಗುತ್ತಿರುವುದು... ಭಾರ ತೆಗೆದುಕೊಳ್ಳಲಾಗದು ಎಂದು ಅರಿತು... ಮತ್ತೊಂದು ಹೊಸ ಸೇತುವೆಯನ್ನೂ ಮಡಿಲಿನಲ್ಲಿ ಸೇರಿಸಿಕೊಂಡಿದ್ದಾಳೆ. ತಾಯಿಯಲ್ಲವೆ... ಸಹನಾಮಯಿ... ಕಾರ್ಖಾನೆಗಳಿಂದ ಹೊರಬಂದ ತ್ಯಾಜ್ಯಗಳನ್ನೆಲ್ಲಾ ಸಹಿಸಿದಳು... ನನ್ನಮ್ಮೆ ಭದ್ರೆ...

ನಾನು ನನ್ನ ಬಾಲ್ಯದ ಬಹುಭಾಗ ಕಳೆದ ರಾಮದೇವರ ದೇವಸ್ಥಾನ ಹಾಗೂ ಗುರು ರಾಘವೇಂದ್ರರ ಮಠ ಹೊರಗಿನಿಂದ ಅನೇಕ ಬದಲಾವಣೆಗಳನ್ನು ಕಂಡರೂ.. ನನ್ನೊಳಗಿನ ಅವಿನಾಭಾವ ಸಂಬಂಧದ ಎಳೆ ಮಾತ್ರ ಯಾವ ಬದಲಾವಣೆಯನ್ನೂ ಕಂಡಿಲ್ಲ.... ನನ್ನ ಮದುವೆ ನನ್ನ ಗುರು ರಾಘವೇಂದ್ರರ ಸನ್ನಿಧಿಯಲ್ಲೇ ನಡೆದಿದ್ದು...

ಗ್ರಾಮ ದೇವತೆ ಮಾರಿಯಮ್ಮದೇವಾಲಯ ಕೂಡ ಪೂರ್ತಿಯಾಗಿ ನವೀಕರಿಸಲ್ಪಟ್ಟಿದೆ.

ಹೊಯ್ಸಳರ ಕಾಲದ ನರಸಿಂಹ ಸ್ವಾಮಿಯ ಗುಡಿಯಲ್ಲಿ ಪ್ರತಿ ವರ್ಷವೂ ರಥೋತ್ಸವ ನಡೆಯುತ್ತದೆ. ವರ್ಷ ಕೂಡ ಮುಂದಿನ ತಿಂಗಳು - ನೇ ತಾರೀಖು ಇರಬೇಕು...

ತರೀಕೆರೆ ರಸ್ತೆಯಲ್ಲಿ ಹುಡುಗರ ಪ್ರೌಢ ಶಾಲೆಯ ಎದುರಿಗೆ ಅಪ್ಪ ಒಂದು ವೃತ್ತ ಕಟ್ಟಿಸಿದ್ದರು. ಅದರಲ್ಲಿ ಅಪ್ಪನ ಹಾಗೂ ಅಣ್ಣನ ಹೆಸರುಗಳೂ

ಇದ್ದವು.. (ಈಗಲೂ ಇವೆ, ಪೂರ್ತಿ ಹಾಳಾಗಿಲ್ಲ) ಆದರೆ ಕಾಲ ಸರಿದಂತೆ ಈಗ ಅದಕ್ಕೆ “ಗಾಂಧಿ ವೃತ್ತ” ಎಂದೋ ಏನೋ ಹೆಸರು ಬದಲಾಯಿಸಿದ್ದಾರೆ.. ಈ ಸಾರಿ ಅವರ ಹೆಸರುಗಳ ಚಿತ್ರ ತೆಗೆದುಕೊಂಡು ಬಂದೆ.. ಏನೋ ಮುದವೆನಿಸುತ್ತದೆ ಅಪ್ಪನ ಹೆಸರು ಓದುವಾಗ...

ನಾವಿದ್ದಾಗ ಇದ್ದದ್ದು ೪ ಸಿನಿಮಾ ಮಂದಿರಗಳು ಮಾತ್ರ. ನಮ್ಮನೆ ಹಿಂದುಗಡೆ ಇದ್ದ ಬಸವೇಶ್ವರ ಚಿತ್ರ ಮಂದಿರ ಈಗ ಕಲ್ಯಾಣ ಮಂಟಪ ಆಗಿದೆ. ನಮಗೆ ಪರಿಚಯವಿದ್ದ ಅನೇಕರು ಬೆಂಗಳುರಿನಲ್ಲಿ ಕೆಲಸ ಹುಡುಕಿಕೊಂಡು ಬಂದು ಬಿಟ್ಟಿದ್ದಾರೆ. ಈಗ ಹೋದರೆ... ನನ್ನಪ್ಪನಿಗೆ ಪರಿಚಯವಿದ್ದವರು ಸಿಕ್ಕುವುದು ತುಂಬಾ ವಿರಳವೇ ಆಗಿದೆ. ಇಷ್ಟುಸಾರಿ ಹೋದರೂ ನಾನು ಯಾವಾಗಲೂ ನನ್ನಪ್ಪನ ಸ್ನೇಹಿತರನ್ನು ಭೇಟಿ ಮಾಡಲು ಹೋಗಿರಲೇ ಇಲ್ಲ. ಸಾರಿ ನಾನು ಒಬ್ಬ ಹಿರಿಯರನ್ನು ನೋಡಲು ಹೋಗಿದ್ದೆ. ಅವರು ಡಾಕ್ಟರ್ ಕರುಣಾಕರ ಶೆಟ್ಟಿ.. ನನ್ನಪ್ಪನ ಜೊತೆ ಲಯನ್ಸ್ ಕ್ಲಬ್ ನಲ್ಲಿ ಕೆಲಸ ಮಾಡಿದ್ದರು... ಅವರು ಈಗಲೂ ಅದೆಲ್ಲಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ... ಜೊತೆಗೇ ತಮ್ಮದೇ ಕ್ಲಿನಿಕ್ ಕೂಡ ಇಟ್ಟುಕೊಂಡಿದ್ದಾರೆ. ಸ್ವಲ್ಪ ಆಶ್ಚರ್ಯದಿಂದಲೇ.. ನನ್ನೊಡನೆ ಮಾತಿಗೆ ತೊಡಗಿದರು. ಮೆಲ್ಲಗೆ ನನ್ನ ಪರಿಚಯ ಹೇಳಿಕೊಂಡು... ಸಾರ್ ನಿಮಗೆ ಅಪ್ಪನ ನೆನಪು ಸ್ವಲ್ಪ ಇರಬಹುದಲ್ಲವೇ..? ಎಂದು ಕೇಳಿದಾಗ. ಇದ್ಯಾಕಮ್ಮ ಹೀಗೆ ಹೇಳ್ತೀರಿ... ಸ್ವಲ್ಪ ಅಲ್ಲ... ಚೆನ್ನಾಗಿಯೇ ಇದೇ. ಅವರನ್ನು ಯಾರು ಮರೆಯಲು ಸಾಧ್ಯ..? ಬಿಳಿಯ ಕಚ್ಚೆ ಪಂಚೆ ಉಟ್ಟು... ಯಾವಾಗಲೂ ಕರಿಯ ಕೋಟ್ ತೊಟ್ಟು ಬರುತ್ತಿದ್ದರು. ನಾವೆಲ್ಲಾ ಸೇರಿ... ಡಾಕ್ಟರ್ ಮೋದಿಯವರನ್ನು ಕರೆಸಿದ್ದೆವು... ಎಷ್ಟೊಂದು ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳನ್ನು ಮಾಡುತ್ತಿದ್ದೆವು... ಎಂದೆನ್ನುತ್ತಾ... ಸುಮಾರು ಅರ್ಧ ಘಂಟೆ ಆತ್ಮೀಯವಾಗಿ ಮಾತನಾಡಿ... ಇನ್ನು ಭದ್ರಾವತಿಗೆ ಬಂದಾಗೆಲ್ಲಾ ನನ್ನನ್ನು ಭೇಟಿ ಮಾಡಲು ಬನ್ನಿ... ನಂಗೆ ತುಂಬಾ ಸಂತೋಷವಾಯಿತು ಎನ್ನುತ್ತಾ.. ಭಾವುಕರಾಗಿ ಬೀಳ್ಕೊಟ್ಟರು. ಡಾಕ್ಟರ್ ಯು (ಉಪ್ಪೂರು) ಕರುಣಾಕರ ಶೆಟ್ಟಿಯವರು... ನಮ್ಮ ನಿಮ್ಮೆಲ್ಲರ ಬ್ಲಾಗ್ ಮಿತ್ರಆಸುಮನ ಶ್ರೀ ಸುರೇಶ್ ಹೆಗ್ಡೆಯವರ ಚಿಕ್ಕಪ್ಪನವರು.....

ಈ ಸಲದ ನನ್ನ ಊರಿನ ಭೇಟಿ.. ಅನೇಕ ಭಾವನೆಗಳ ಸಂಗಮವಾಗಿತ್ತು. ಬಾಲ್ಯದ ನೆನಪಿನ ಜಾಗಗಳಲ್ಲಿ ಓಡಾಡಿ... ಮನಸ್ಸು ಅರಳಿತ್ತು... ವಾಪಸ್ಸು ಬರುವಾಗ ಅದೇನೋ ಹೊಸತನ ಮೈ ಮನದಲ್ಲಿ ತುಂಬಿದ್ದರೂ ಕೂಡ... ಅದೇಕೋ.. ಅಗಲಿಕೆಯ ವಿಷಾದ ಕೂಡ ಸ್ವಲ್ಪವೇ ಸ್ವಲ್ಪ ಇಣುಕಿತ್ತು...!!!

Monday, April 4, 2011

"ಖರ"ನಾಮ ಸಂವತ್ಸರ - ಯುಗಾದಿ ಒಂದು ನೆನಪು...


"ಯುಗಾದಿ" ಬರುವ.. ಹೊಸ ಸಂವತ್ಸರ ಆರಂಭವಾಗುವ ಹಲವಾರು ದಿನಗಳ ಮೊದಲೇ ನಮಗೆ ವಸಂತನಾಗಮನದ ಅರಿವು ಮಾಡಿಸಿಕೊಡುವುದು ನಮ್ಮ ಪ್ರಿಯ ಪಕ್ಷಿ "ಕೋಗಿಲೆ"..... !! ತನ್ನೆಲ್ಲಾ ಎಲೆಗಳೂ ಉದುರಿ... ಹೊಸ ಹಚ್ಚ ಹಸುರಿನ ಎಲೆಗಳ ಬಟ್ಟೆ ಧರಿಸುವ ಮರ ಗಿಡಗಳು... ಮೊದಲ ಮಳೆಯ ಸಿಂಚನ... ಹಸಿ ಮಣ್ಣಿನ ಘಮ... ಹಿನ್ನೆಲೆಯಲ್ಲಿ ಕೋಗಿಲೆಗಳ "ಕುಹೂ ಕುಹೂ" ಗಾನ, ಎಲ್ಲವೂ ನಮ್ಮನ್ನು ಉಲ್ಲಾಸಗೊಳಿಸುತ್ತಾ... ಹೊಸ ವರ್ಷದ, ಹೊಸ ಚಿಗುರಿನ, ವಸಂತನಾಗಮನವನ್ನ ಎದುರು ನೋಡುವಂತೆ ಮಾಡುತ್ತದೆ. ಯುಗಾದಿಯ ಬೆಳಿಗ್ಗೆ ರೇಡಿಯೋನಲ್ಲಿ ಬರುವ ಅದೇ.. ಹಳೇ ಹಾಡು (ಹಾಡು ಎಷ್ಟು ಹಳೆಯದಾದರೇನು.. ಅದರ ಭಾವ ನವನವೀನ...) ಬೇಂದ್ರೆ ಅಜ್ಜನ ಅತ್ಯಂತ ಸುಂದರ ಹಾಗೂ ಅಂದಿಗೂ.. ಇಂದಿಗೂ.. ಮುಂದಿಗೂ.. ಎಂದಿಗೂ ಸಲ್ಲುವ ಅದೇ "ಯುಗಯುಗಾದಿ ಕಳೆದರೂ... ಯುಗಾದಿ ಮರಳಿ ಬರುತಿದೆ... ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ"...... ನಮ್ಮನ್ನು ಮುದಗೊಳಿಸುತ್ತದೆ. ನನ್ನ ಬಾಲ್ಯದಿಂದಲೂ ಕೇಳುತ್ತಲೇ ಬಂದಿರುವ ಹಾಡು... ನನ್ನ ಮನದಲ್ಲಿ ವಸಂತನಾಗಮನದ ಹುರುಪನ್ನು, ನವೋಲ್ಲಾಸವನ್ನು ಇಷ್ಟು ವರ್ಷಗಳ ನಂತರವೂ ಒಂದಿನಿತೂ ಕಮ್ಮಿಯಾಗದೇ ತುಂಬುತ್ತಲೇ ಇದೆ. ಹಾಡು ನನ್ನ ಜೀವನದಲ್ಲಿ ಹೇಗೆ ಹಾಸು ಹೊಕ್ಕಾಗಿ ಬಿಟ್ಟಿದೆಯೆಂದರೆ.. ಇವತ್ತು ಯುಗಾದಿಯ ದಿನ ಹಾಡು ಕೇಳದಿದ್ದರೆ, ನನಗೆ ಯುಗಾದಿ ಹಬ್ಬವೆಂದೇ ಅನಿಸುವುದಿಲ್ಲ. ಹಾಗೇ.. ಯುಗಾದಿಯಲ್ಲದೆ ವರ್ಷದಲ್ಲಿ ಬೇರೆಂದಾದರೂ ಹಾಡು ಕಿವಿಗೆ ಬಿದ್ದರೆ ಸಾಕು ತಕ್ಷಣ ನನ್ನ ಮನಸ್ಸು ಅನಾಯಾಸವಾಗಿ ಅದೇ ಭಾವಕ್ಕೆ ಒಮ್ಮೆಲೇ ತೆರಳಿಬಿಡುತ್ತದೆ. ಮತ್ತೆ ಮನ ಅದೇ ಕೋಗಿಲೆಗಳ ಕುಹೂ ಕುಹೂ ಕೇಳತೊಡಗುತ್ತದೆ... ಅದೇ ಮಳೆ ತುಂತುರಿನ ಸಿಂಚನ ಅನುಭೂತಿಸತೊಡಗುತ್ತದೆ... ಅದೇ ಹೊಸ ಮಳೆಯಿಂದ ತೊಯ್ದು ಘಮಘಮಿಸುವ ಮಣ್ವಾಸನೆ... ಮೈತುಂಬ ಹಸಿರುಟ್ಟು ನಳ ನಳಿಸುವ ಪ್ರಕೃತಿ.... ಅಬ್ಬಾ... ಬೇಂದ್ರೆಯವರ ಸಾಹಿತ್ಯ ನಮ್ಮ ಭಾವನೆಗಳ ಜೊತೆ ಬೆಸೆಯುವ ಶಕ್ತಿ ಅದ್ಭುತ ಎನಿಸಿಬಿಡುತ್ತದೆ.

ಹೊಸ ಸಂವತ್ಸರವೆಂದರೆ ಬರಿಯ ಒಂದು ವರುಷದ ಅಂತ್ಯ ಮತ್ತು ಇನ್ನೊಂದು ವರುಷದ ಆದಿ ಎಂಬ ಅರ್ಥವೇ...? ಪ್ರಕೃತಿ ಹೇಗೆ ತನ್ನ ಕೆಲಸವನ್ನು ಎಷ್ಟು ಅಚ್ಚುಕಟ್ಟಾಗಿ, ಕರಾರುವಾಕ್ಕಾಗಿ ಮಾಡುತ್ತಲಿದೆಯೆಂಬ ಅಚ್ಚರಿ ನನಗೆ... ಎಲ್ಲವೂ ಪ್ರಾಣಿ ಸಂಕುಲವೂ ಸೇರಿದಂತೆ ಅದೆಷ್ಟು ನಿಷ್ಠೆಯಿಂದ ತಮ್ಮ ಪಾಲಿನ ಕೆಲಸಗಳನ್ನು ಅತ್ಯಂತ ಕಾಳಜಿಯಿಂದ, ನಿರ್ವಂಚನೆಯಿಂದ ನಿರ್ವಹಿಸುವಂತೆ ಸೃಷ್ಟಿ ಮಾಡಿದ್ದಾನಲ್ಲವೇ ಭಗವಂತ. ಯಾರಿಗೂ ಕಾಯದೆ, ಯಾರಿಂದಲೂ ಹೇಳಿಸಿಕೊಳ್ಳದೇ, ಯಾರ ಸಹಾಯವೂ ಇಲ್ಲದೆ ನಮ್ಮ ಸುತ್ತಲೂ ಎಲ್ಲವೂ ನಡೆಯುತ್ತಿದ್ದರೂ... ನಾವು ಮಾತ್ರ ಅದೇಕೆ ನಮ್ಮ ಜೀವನವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ರೂಪಿಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ ? ಪ್ರಕೃತಿ ಮಾತೆ ಹೇಗೆ ತನ್ನ ಹಳೆಯ ರೂಪವನ್ನು ಕೊಡವಿಕೊಂಡು.. ಹೊಸ ದಿರಿಸು ಧರಿಸಿ ವಸಂತನಾಗಮನಕ್ಕೆ ನವ ವಧುವಿನಂತೆ ಸಜ್ಜಾಗಿ ಬಿಡುತ್ತಾಳಲ್ಲವೇ! ಯುಗಾದಿ ಬಂತೆಂದರೆ ಬರಿಯ ಹೊಸ ಸಂವತ್ಸರದ ಆರಂಭವೊಂದೇ ಅಲ್ಲ... ನಾವು ಆಚರಿಸುವ ಮೊತ್ತ ಮೊದಲ ಹಬ್ಬವೂ ಹೌದು. ಇಲ್ಲಿಂದ ಮುಂದೆ ಒಂದೊಂದು ಋತುವಿನಲ್ಲೂ, ಒಂದೊಂದು ಮಾಸದಲ್ಲೂ ನಾವು ಅನೇಕ ಪೂಜೆ, ವ್ರತ ಎಂದು ಧಾರ್ಮಿಕ ಆಚರಣೆಗಳನ್ನು ಮಾಡುತ್ತೇವೆ. ಪ್ರಕೃತಿ ಮಾತೆ ಹೇಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಂಡು ಸಿಂಗರಿಸಿಕೊಳ್ಳುತ್ತಾಳೋ ಹಾಗೆ ನಾವೂ ಕೂಡ ನಮ್ಮ ಭಾವನೆಗಳನ್ನು ಒಂದು ಸುಂದರವಾದ ಚೌಕಟ್ಟಿನಲ್ಲಿ ಜೋಡಿಸಿಕೊಂಡು, ಅದಕ್ಕೊಂದು ಹೊಸ ರೂಪ ಕೊಡುವುದರ ಮೂಲಕ ಹೊಸ ರೀತಿಯ ಬದುಕು, ಹೊಸ ಧಾಟಿಯ ಚಿಂತನೆಯನ್ನು ಅಳವಡಿಸಿಕೊಳ್ಳುವ ಅಭ್ಯಾ ಮಾಡಿಕೊಳ್ಳ ಬೇಕೆಂದು ನನ್ನ ಮನಸ್ಸು ಯೋಚಿಸುತ್ತಿದೆ. ಪ್ರತಿ ವರ್ಷವೂ... ಅದೇನೋ ಒಂದು ಹಬ್ಬ ಎಂಬ ಭಾವವೇ ಇರುತ್ತಿತ್ತೇ ಹೊರತು... ನವಿರಾದ ಸೂಕ್ಷ್ಮ ಭಾವಗಳು ನನ್ನೊಳಗೆ ಉದಯಿಸಿರಲೇ ಇಲ್ಲ.

ಬೇಂದ್ರೆಯವರು "ತನುವೆಂಬ ವನದಲ್ಲಿ.... ಮನವೆಂಬ ಮರದಲ್ಲಿ... ಕೊನೆ ಎಲೆಯಲ್ಲಿ ಕುಳಿತ ಕೋಗಿಲೇ..." ಎಂಬ ಹಾಡಿನಲ್ಲಿ "ಹುಂಬನಿ ಹಾಡು ಸ್ವಯಂಭು ಸ್ಫೂರ್ತಿಯು ನಿನಗೇ.. ಇಂಬುಕೊಟ್ಟಂತಾಡು ಕೋಗಿಲೇ".... ಎನ್ನುತ್ತಾರೆ. ಮಾತು ಅದೆಷ್ಟು ಮಧುರ ಹಾಗೂ ಸತ್ಯವಾಗಿದೆ. ನಿಜಕ್ಕೂ ಕೋಗಿಲೆಗಳಿಗೆ ಯಾರಾದರೂ ಹೇಳಿ ಕೊಡುತ್ತಾರೆಯೇ.. ಯಾರಾದರೂ ಸ್ಫೂರ್ತಿ ಉಕ್ಕಿಸುತ್ತಾರೆಯೇ... ಅದ್ಯಾವುದೂ ಲ್ಲದೇ ತಮ್ಮ ಪಾಡಿಗೆ ತಾವು.. ಯಾವ ಹಮ್ಮೂ-ಬಿಮ್ಮೂ ಇಲ್ಲದೆ, ಯಾರ ಹಂಗೂ ಇಲ್ಲದೆ ವಸಂತನಾಗಮನದ ಅರಿವು ಮೂಡಿಸುತ್ತವೆ. ಪ್ರಕೃತಿಯಿಂದ ನಾವು ಕಲಿಯ ಬೇಕಾದ ಮೊದಲನೇ ಪಾಠವಿದಲ್ಲವೇ..? ನಾವೂ ಕೂಡ ಬೇಂದ್ರೆಯವರ ಮಾತಿನಂತೆ ಪ್ರತಿ ಯುಗಾದಿಗೊಮ್ಮೆಯಾದರೂ... "ಇನ್ನು ನಿದ್ದೆಯ ತಳೆದು... ತನ್ನ ತಾನವನೊಲಿದು... ಭಿನ್ನ ಭಾವವ ಬಿಟ್ಟು.." ಹೊಸ ಹೊಸ ಚಿಂತನೆಗಳನ್ನು ಹುಟ್ಟು ಹಾಕುವುದನ್ನು ಪ್ರಾರಂಭಿಸಬೇಕಾಗಿದೆ.

ಹೊಸ ಸಂವತ್ಸರದ ಜೊತೆಗೇ... ಶ್ರೀ ರಾಮ ನವಮಿಯ ಆಚರಣೆಯೂ ಇದೆಯಲ್ಲವೇ. ಹೊಲದಲ್ಲಿ ಉಳುವಾಗ ನೇಗಿಲಿನ ತುತ್ತ ತುದಿಯಲ್ಲಿರುವ ಉದ್ದನೆಯ ಕಬ್ಬಿಣದ ಒಂದು ಮೊಳೆಗೆ "ಸೀತ" ಎಂದು ಹೆಸರಂತೆ. ಅದೇ ಮೊದಲು ಭೂಮಿ ಸ್ಪರ್ಶ ಮಾಡುವುದಂತೆ. ಆದ್ದರಿಂದಲೇ.. ಸೀತಾಮಾತೆಗೆ ಅಷ್ಟು ಸಂಯಮವಿತ್ತೆಂಬುದು ನಂಬಿಕೆಯ ಮಾತು. ತಾನು ಕಷ್ಟ ಸಹಿಸಿದ್ದರಿಂದಲೇ.. ಭೂಮಿಯ ಉತ್ತುವಿಕೆಯಾಗಿ, ಬೆಳೆಯಾಗಿ, ನಮಗೆ ಆಹಾರ ಸಿಗುವಂತಾಯಿತು. ಯುಗಾದಿಯ ಬೆಳಿಗ್ಗೆ ನನ್ನ ಮನಸ್ಸಿಗೇಕೋ ವಿಷಯ ತುಂಬಾ ಆಳವಾಗಿ ಬಂದು ಕೂತಿತ್ತು. ಭೂಮಿಯ ಉತ್ತುವಿಕೆಯಂತೆಯೇ... ನಾವೂ ನಮ್ಮ ಮನಸ್ಸನ್ನೂ ಉತ್ತಿ... ಒಳ್ಳೆಯ ವಿಚಾರಗಳನ್ನು, ಒಳ್ಳೊಳ್ಳೆಯ ಚಿಂತನೆಗಳನ್ನು ಬಿತ್ತಿದರೆ... ನಿಜಕ್ಕೂ ನಮ್ಮ ಭಾವನೆಗಳಲ್ಲಿ ಬದಲಾವಣೆಯನ್ನು ತರಬಹುದಲ್ಲವೇ.. ಒಂದು ಪಕ್ವವಾದ, ಸಂತೋಷಕರವಾದ, ಬಲಯುಕ್ತವಾದ ವಿಚಾರ ಧಾರೆಯನ್ನು ಒಳಹರಿಯ ಬಿಟ್ಟು.. ನಮ್ಮ ಬದುಕಿನ ದಾರಿಯನ್ನು ಸುಗಮವಾಗಿಸಿಕೊಳ್ಳಬಹುದಲ್ಲವೇ..?

ನನಗೆ ಬಾಲ್ಯದ ಯುಗಾದಿ ಆಚರಣೆ ಇಂದು ತುಂಬಾ ನೆನಪಾಗುತ್ತಿದೆ. ಅದೇನು ಸಂಭ್ರಮ, ಸಂತೋಷವಿರುತ್ತಿತ್ತು. ಬೆಳಿಗ್ಗೆ ಮನೆ ಮಂದಿಯೆಲ್ಲಾ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಬಂದಾಗ... ಅಮ್ಮ ಪೂಜೆ ಮುಗಿಸಿ ಮಂಗಳಾರತಿ ಮಾಡಲು ಕಾಯುತ್ತಿರುತ್ತಿದ್ದರು. ನಂತರ ನಾವು ಮಕ್ಕಳು ಅಪ್ಪ ಅಮ್ಮನಿಗೆ ನಮಸ್ಕರಿಸಿದಾಗ, ಅಮ್ಮ ಆಶೀರ್ವಾದದ ಜೊತೆಗೆ ಬೇವು-ಬೆಲ್ಲವನ್ನೂ ಕೈಲಿಡುತ್ತಿದ್ದರು. ನಾನೂ ನನ್ನ ಅಣ್ಣನೂ ನಮಗೆ ಬೆಲ್ಲವೇ ಹೆಚ್ಚು ಬೇಕೆಂದು ಕಾಡಿದಾಗ, ಅಮ್ಮ... ಹಾಗೆಲ್ಲಾ ಆರಿಸಿ ಬೇವು ತೆಗೆಯಬಾರದು. ಜೀವನವೆಂದರೆ ಅದೇ... ಸಿಹಿ-ಕಹಿ ಎರಡೂ ಇರುತ್ತದೆ. ಸಮಾನ ಚಿತ್ತದಿಂದ ಬದುಕು ಹಸನಾಗಿಸಿಕೊಳ್ಳಬೇಕೆಂಬ ಮಾತು ಹೇಳುತ್ತಿದ್ದರು. ಆದರೆ ಅದರ ಅರ್ಥ, ವ್ಯಾಪ್ತಿ ಒಂದೂ ತಿಳಿಯದಾಗಿತ್ತು ನಮಗೆ. ಮನೆಯಲ್ಲಿ ಪೂಜೆ ಮುಗಿಸಿಕೊಂಡು ಎಲ್ಲರೂ ನಮ್ಮ ಊರಿನ ಶ್ರೀ ರಾಮದೇವರ ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಅಲ್ಲಿ ಯುಗಾದಿಯ ವಿಶೇಷ ಪೂಜೆ ಇರುತ್ತಿತ್ತು. ಅಪ್ಪ ಕಮಿಟಿಯ ಅಧ್ಯಕ್ಷರು.. ಹಾಗಾಗಿ ಸ್ವಲ್ಪ ವಿಶೇಷವೇ ಎನ್ನುವಂತಹ ಗಮನ ನಮಗೆ. ತುಂಬಾ ಹೂವುಗಳಿಂದ ಅಲಂಕರಿಸಿಕೊಂಡು ದಿವ್ಯವಾಗಿರುತ್ತಿದ್ದ ಶ್ರೀ ರಾಮಚಂದ್ರ ಸೀತಾ ಲಕ್ಷ್ಮಣರ ಸಮೇತ.. ಜೊತೆಗೆ ಈಶ್ವರ.. ಉತ್ಸಾಹ ಉಕ್ಕಿಸುವ ವಾತಾವರಣ, ದುಬತ್ತಿಯ ಸುಗಂಧ ಅದೇನೋ ಆಪ್ಯಾಯವಾಗಿರುತ್ತಿತ್ತು. ದೇವಸ್ಥಾನಕ್ಕೆ ಬಂದಿದ್ದ ಎಲ್ಲಾ ಪರಿಚಿತರೂ ಒಬ್ಬರಿಗೊಬ್ಬರು ಹೊಸ ವರ್ಷದ ಶುಭಾಶಯಗಳ ವಿನಿಮಯ ಮಾಡಿಕೊಳ್ಳುವುದು... ದೊನ್ನೆಗಳಲ್ಲಿ ಪ್ರಸಾದದ ರೂಪದಲ್ಲಿ ಹಂಚುತ್ತಿದ್ದ ರಸಾಯನ, ಕೋಸಂಬರಿ..!! ದೇವಸ್ಥಾನದಿಂದ ಹೊರ ಬಂದೊಡನೆಯೇ ಅರ್ಚಕರ ಮನೆ. ಅವರ ಮನೆಯಲ್ಲಿ ಪಾನಕ ಸೇವಿಸಿ... ಪಕ್ಕದಲ್ಲೇ ದ್ದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಮಸ್ಕರಿಸಿ ಮನೆಗ ವಾಪಸ್ಸು ಬರುತ್ತಿದ್ದೆವು. ಸಾಯಂಕಾಲ ಚಂದ್ರ ದರ್ಶನಕ್ಕಾಗಿ ಕಾಯುತ್ತಿದ್ದ ಪರಿಯಂತೂ ತುಂಬಾ ನೆನಪಾಗುತ್ತದೆ. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಜನರೆಲ್ಲಾ ಒಟ್ಟಿಗೇ.... ಹೋ ಎಂದು ಅರಚಿದಾಕ್ಷಣ ಅಮ್ಮ..... ನೋಡ್ರೇ.. ಚಂದ್ರ ಕಾಣಿಸಿರಬೇಕು.. ಬೇಗ ಬನ್ರೇ... ಅಂತ ದಡಬಡಿಸಿ ಆಚೆ ಹೋಗಿ.. ರಸ್ತೆಯಲ್ಲಾಗಲೇ ನಿಂತು ಗುಲ್ಲೆಬ್ಬಿಸುತ್ತಿದ್ದ ಜನರನ್ನು ಕಂಡು... "ಎಲ್ಲಿ... ಎಲ್ಲಿ..." ಎಂದಾಗ. ಅವರುಗಳು ಕೈ ತೋರಿಸಿ... "ಅಗೋ.. ಅಲ್ಲಿ... ಸಣ್ಣದಾಗಿ... ಕಾಣಿಸ್ತಾ..."? ಎಂದು ಪ್ರಶ್ನೆ ಮಾಡುವ ಪರಿ..... ನಿಜವಾಗಿ... ನಮ್ಮೂರಿನ.. ನನ್ನ ಬಾಲ್ಯದ ದಿನಗಳ ವಿಶೇಷಗಳು ಎಲ್ಲೋ ಕಳೆದುಹೋಗಿವೆ ಎನಿಸುತ್ತದೆ. ಆಚರಣೆಗಳೆಲ್ಲಾ ಸುಂದರ ನೆನಪಿನ ಬುತ್ತಿಯಾಗಿ ಮನದಲ್ಲಿ ಉಳಿದಿವೆ. ಪ್ರತಿಯೊಂದು ಹಬ್ಬದಲ್ಲೂ... ಮನಸ್ಸು ಮತ್ತೆ ಮತ್ತೆ ಅದೇ ಹಳೆಯ ಪುಸ್ತಕದ ಹಾಳೆಗಳನ್ನು ತೆರೆದು... ಮತ್ತದೇ ಚಿತ್ರಗಳನ್ನು... ಹೊಸದೇನೋ ಎಂಬಂತೆ ಬಲು ಪ್ರೀತಿಯಿಂದ ನೋಡುವಾಗ... ನೆನಪುಗಳು ಒಂದರ ಹಿಂದೆ ಒಂದು ಸಾಲುಗಟ್ಟುತ್ತವೆ....

ನಿನ್ನೆಯ ದಿನ ನಾನೊಂದು ಪ್ರವಚನ ಕೇಳಲು ಹೋಗಿದ್ದೆ. ಅಲ್ಲಿ ಪ್ರವಚನಕಾರರು... "ಯುಗಾದಿ" ಪದವನ್ನು ಬಿಡಿಸಿ ಅರ್ಥ ಹೇಳುತ್ತಿದ್ದರು. "ಯುಗ" ಎಂದರೆ ಜೋಡಿ.. "ಆದಿ" ಎಂದರೆ ಶುರು ಅಥವಾ ಮೊಟ್ಟ ಮೊದಲು. ಅಂದರೆ... ಇಡೀ ಬ್ರಹ್ಮಾಂಡದಲ್ಲೇ... ಮೊಟ್ಟ ಮೊದಲ ಜೋಡಿ... ನಮ್ಮೆಲ್ಲರ ಆರಾಧ್ಯ ದೈವ.. "ಲಕ್ಷ್ಮೀ ನಾರಾಯಣ". ಯುಗಾದಿ ಎಂದರೆ... ಜೋಡಿ "ಲಕ್ಷ್ಮೀ ನಾರಾಯಣ"ರನ್ನು ಪೂಜಿಸುವ, ಆರಾಧಿಸುವ, ನೆನಪಿಸಿಕೊಳ್ಳುವ ದಿನವನ್ನಾಗಿ ಆಚರಿಸಬೇಕೆಂದು ಹೇಳುತ್ತಿದ್ದರು. ಅದೇಕೋ ವಿಶ್ಲೇಷಣೆ ನನಗೆ ತುಂಬಾ ಇಷ್ಟವಾಯಿತು. ಪ್ರಕೃತಿಯಲ್ಲಿ ಬದಲಾವಣೆ... ವಸಂತನಾಗಮನ ಎಲ್ಲವೂ ಇದೇ ಅರ್ಥವನ್ನೇ ಹೇಳುತ್ತದಲ್ಲವೇ... ಪ್ರಕೃತಿ-ಪುರುಷ.... !!

ನಿಮಗೆಲ್ಲರಿಗೂ "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು........