Monday, July 2, 2012

ಸರ್ವಜ್ಞನ ವಚನಗಳಲ್ಲಿ "ಗುರುವಿನ ಮಹಿಮೆ" :



ಗುರು ಪೂರ್ಣಿಮೆಯಂದು ಸರ್ವಜ್ಞನ ಮಾತುಗಳಲ್ಲಿ  ಗುರುವಿನ ಮಹಿಮೆ ತಿಳಿಯುತ್ತಾ  "ಶ್ರೀ ಗುರುಭ್ಯೋ ನಮ:"

ಗುರುರಾಯನುಪದೇಶ ದೊರಕೊಂಡಿತಾದೆಡೆ
ಹರಿವುದು ಪಾಪವೆಂತೆನಲು ವಜ್ರದಿಂ
ಗಿರಿಯ ಹೊಯಿದಂತೆ ಸರ್ವಜ್ಞ  ||
ಗುರುವಿನ ಉಪದೇಶದಿಂದಲೇ ಸರ್ವ ಪಾಪವೂ ನಾಶವಾಗುವುದು.  ವಜ್ರದ ಸಹಾಯದಿಂದ ಬೆಟ್ಟವನ್ನು ಚೂರು ಚೂರ್ ಮಾಡಿದಂತೆ ಆಗುವುದು

ಗುರುವಿಂದ ಬಂಧುಗಳು ಗುರುವಿಂದ ಪರದೈವ
ಗುರುವಿಂದಲಾದುದು ಪುಣ್ಯ ಲೋಕಕ್ಕೆ
ಗುರುವಿಂದ ಮುಕ್ತಿ ಸರ್ವಜ್ಞ  ||
ಗುರುವಿನಿಂದಲೇ ಎಲ್ಲಾ ಬಂಧುಗಳು ಅಥವಾ ಗುರುವೇ ಸರ್ವ ಬಂಧುಗಳಿಗೆ ಸಮಾನ, ಗುರುವಿಂದಲೇ ಪರದೈವವೆಂದರೆ ಆತ್ಮ ಜ್ಞಾನದ ಅರಿವು, ಗುರುವಿನಿಂದಲೇ ನಮಗೆ ಸಾಧನೆಯ ಮಾರ್ಗ ತಿಳಿಯುವುದು, ಪುಣ್ಯ ಲೋಕದ ಹಾದಿಯಲ್ಲಿ ನಡೆಯುವುದು, ಗುರುವಿನಿಂದಲೇ ಜನ್ಮದ ಮುಕ್ತಿಯಾಗುವುದು

ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರು ಗುರುವಿಂದ
ಬಂಧುಗಳು ಉಂಟೇ ಸರ್ವಜ್ಞ  ||
ನಮ್ಮ ಕರ್ಮಗಳಿಗನುಸಾರವಾಗಿ ನಮ್ಮ ಜೊತೆ ಬಂದ ಬಂಧುಗಳು ಎಂಬುವರು ಮನೆಗೆ ಬಂದು ಉಂಡು ಹೋಗುವುದಕ್ಕಷ್ಟೇ ಬಂದವರು ಮತ್ತು ಕೆಲವೊಮ್ಮೆ ನಮ್ಮ ಭಾವಗಳನ್ನು ಘಾಸಿಗೊಳಿಸುವವರು.  ಅವರಿಗೆ ನಮ್ಮ ಕಷ್ಟಗಳು, ದು:ಖಗಳು ಕಳೆಯುವ ಯಾವ ವಿದ್ಯೆಯೂ ಗೊತ್ತಿಲ್ಲ.  ಆದರೆ ನಮ್ಮ ಎಲ್ಲಾ ಕ್ಲೇಶಗಳನ್ನೂ ತೊಡೆದು ನಮ್ಮನ್ನು ಶ್ರೀಹರಿಯ ಧ್ಯಾನದಲ್ಲಿ ಮುಳುಗುವಂತೆ ಮಾಡಿ ಮೋಕ್ಷದ ಹಾದಿಗೆ ಹಚ್ಚುವವನು ಗುರು

ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ ಗುರುರಾಯ
ಬಂಧನವ ಕಳೆವ ಸರ್ವಜ್ಞ  ||
ಒಬ್ಬ ತಂದೆಗೆ ಸದ್ಗುರುವನ್ನು ತೋರಿಸುವುದು ಮಾತ್ರ ಸಾಧ್ಯವಾಗುತ್ತದೆ.  ಆದರೆ ಗುರು ಈ ಲೋಕದಿಂದಲೇ ಬಿಡುಗಡೆ ಹೊಂದುವ ದಾರಿ ತೋರುವನಾದ್ದರಿಂದ ತಂದೆಗಿಂತಲೂ ಶ್ರೇಷ್ಠನಾಗುತ್ತಾನೆ

ಗುರುವೆ ನಿಮ್ಮನ್ನು ನೆನೆದು ಉರಿವ ಕಿಚ್ಚನು ಹೊಗಲು
ಉರಿತಗ್ಗಿ ಉದಕ ಕಂಡಂತೆ ನಿಮ್ಮಯ
ಕರುಣವುಳ್ಳವರಿಗೆ ಸರ್ವಜ್ಞ  ||
ಗುರು ಅದೆಂತಹ ಕರುಣಾಮಯಿ ಎಂದರೆ, ಗುರುವಿನ ಸ್ಮರಣೆ ಮಾಡಿಕೊಂಡು ಉರಿಯುವ ಬೆಂಕಿಯನ್ನು ಹೊಕ್ಕರೂ ಕೂಡ ಅದು ತಣ್ಣಗಿನ ನೀರಿನಂತೆ ಆಗುವುದು.  ಇದು ಗುರುವಿನ ಕರುಣೆಯ ವಿಶೇಷ.

ಮೂರು ಕಣ್ಣೀಶ್ವರನ ತೋರಿ ಕೊಡಬಲ್ಲ ಗುರು
ಬೇರರಿವುದೊಂದು ತೆರನಿಲ್ಲ ಗುರುಕರುಣ
ತೋರುವದು ಹರನ ಸರ್ವಜ್ಞ  ||
ಮೂರು ಕಣ್ಣಿನ ಈಶ್ವರನನ್ನು ತೋರಿಸಿಕೊಡುವುದೇ ಗುರು.  ಗುರುವನ್ನು ಅರಿಯುವುದನ್ನು ಬಿಟ್ಟು ಬೇರೆ ಏನೂ ತಿಳಿಯಲೇ ಬೇಕಾಗಿಲ್ಲ.  ಗುರುವಿನ ಕರುಣೆ ನಮಗೆ ಹರನನ್ನು ತೋರಿಸುವುದು.