Friday, June 10, 2016

ಪ್ರವಾಸ ಕಥನ - ಅಮೆರಿಕ (ಎರಡನೆಯ ಕಂತು)

ಬೆಂಗಳೂರಿನಲ್ಲಿಯ ಹವಾಮಾನದಿಂದ ಫೀನಿಕ್ಸ್ ನಗರಕ್ಕೆ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ತುಸು ಹೆಚ್ಚಾದ ಸಮಯವೇ ಹಿಡಿಯಿತು.  ಫೀನಿಕ್ಸ್ ನಲ್ಲಿ ಜನರು ರಾತ್ರಿ ೮.೩೦/೯ ಕ್ಕೆಲ್ಲಾ ಮನೆಯ ದೀಪಗಳನ್ನು ಆರಿಸಿಬಿಡುತ್ತಾರೆ.  ನಮ್ಮೂರಲ್ಲಿರುವ ಗಿಜಿಗಿಜಿ ಸಂಜೆಗಳು ಇಲ್ಲಿ ನೋಡಲು ಸಿಗುವುದಿಲ್ಲ.  ಯಾವಾಗಲೂ ಬರಿಯ ವಾಹನಗಳ ಓಡಾಟವಷ್ಟೇ ಕಾಣುವುದು.  ರಸ್ತೆಗಳಲ್ಲಿ ಪಾದಚಾರಿಗಳೂ ಇಲ್ಲ ಮತ್ತು ರಸ್ತೆಯ ದೀಪಗಳೂ ಕೂಡ ನಮ್ಮಲ್ಲಿಯಂತೆ ಪ್ರಜ್ವಲವಾಗಿಲ್ಲ.


ಮಂದವಾದ ಬೆಳಕಿನ ದೀಪಗಳಲ್ಲಿ, ನಿಶ್ಯಬ್ದವಾದ ರಸ್ತೆಗಳನ್ನು ಕಿಟಕಿಗಳ ಮೂಲಕ ನೋಡಿದರೆ ಎಲ್ಲಿ ನೋಡಿದರೂ ಬರೀ ಶಬ್ದರಹಿತವಾಗಿರುವುದು.  ಎಲ್ಲವೂ ಅತೀ ಶುಭ್ರವಾಗಿರುವುದು. ಸ್ವಲ್ಪ ಮಟ್ಟಿಗೆ ಜನಗಳ ಗಿಜಿಬಿಜಿ ನೋಡಬೇಕೆಂದರೆ ’ಮಾಲ್’ ಗಳಿಗೆ ಹೋಗಬೇಕು.  ಅಲ್ಲೂ ಕೂಡ ಅತಿಯಾದ ಗಲಾಟೆ, ಅಬ್ಬರದ ಮಾತುಗಳು, ಸಿನಿಮಾ ಹಾಡಿನ ಕಿರಿಚಾಟ ಯಾವುದೂ ಇಲ್ಲ.  ಎಲ್ಲಾ ಮಾಲ್ ಗಳೂ ನಿಗದಿತ ಸಮಯಕ್ಕೆ ಸರಿಯಾಗಿ ವ್ಯಾಪಾರ ನಿಲ್ಲಿಸಿ, ಬಾಗಿಲು ಹಾಕುತ್ತಾರೆ.   ಬೆಳಿಗ್ಗೆ ೬ ಘಂಟೆಗೆಲ್ಲಾ ಕಸದ ಲಾರಿ ಬಂದು ಎಲ್ಲರ ಮನೆಯ ಹೊರಗಡೆ ಇಟ್ಟಿರುವ ದೊಡ್ಡ ದೊಡ್ಡ ಡಬ್ಬಿಗಳಿಂದ ಕಸವನ್ನು ತೆಗೆದುಕೊಂಡು ಹೋಗುತ್ತದೆ.  ಕಸವನ್ನು ವಿಂಗಡಿಸಿಡಬೇಕು.  ವಾರದಲ್ಲಿ ಒಂದು ದಿನ ಮರುಪಯೋಗಿ ಪರಿಸರ ಸ್ನೇಹಿ ಕಸ ತೆಗೆದುಕೊಂಡು ಹೋಗಲು ಹಸಿರು ಬಣ್ಣದ, ಹಸಿರು ಬಣ್ಣದ ಚಿತ್ರಗಳೇ ತುಂಬಿರುವ ದೊಡ್ಡ ವಾಹನ ಬರುತ್ತದೆ.  ವಾರದ ಮತ್ತೊಂದು ದಿನ ಮಾಮೂಲಿ ಕಸದ ವಿಲೇವಾರಿ.  ದೊಡ್ಡ ಪ್ಲಾಸ್ಟಿಕ್ ಕವರ್ ನಲ್ಲಿ ಕಸವನ್ನು ತುಂಬಿ, ಅದರ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಕಟ್ಟಿ, ಕಸದ ಡಬ್ಬಿಯಲ್ಲಿಟ್ಟು, ಮನೆಯ ಹೊರಗೆ ರಸ್ತೆಯಲ್ಲಿ ಇಟ್ಟಿರಬೇಕು. ಹೀಗೆ ಹೊರಗಡೆ ಇಡುವ ದೊಡ್ಡ ಕಸದ ಡಬ್ಬಿಗೆ, ಉರುಳಿಸಿಕೊಂಡು ಹೋಗಲು ಗಾಲಿಗಳಿರುತ್ತವೆ.  ಎಲ್ಲವೂ ಅಚ್ಚುಕಟ್ಟಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯುತ್ತದೆ.  ರಸ್ತೆ ಗುಡಿಸಲು ಒಂದು ದೊಡ್ಡ ವಾಹನ ಬರುತ್ತದೆ.  ವಾಹನದ ಕೆಳಗೆ ಗುಂಡನೆಯ ಅಗಲವಾದ ದೊಡ್ಡ ಬ್ರಶ್ ಗಳಿರುತ್ತವೆ.  ಗುಂಡಿ ಅದುಮಿದ ಕೂಡಲೆ ಆ ಬ್ರಶ್ ಗಳು ವೇಗವಾಗಿ ರಸ್ತೆಯ ಮೇಲೆ ಸುತ್ತುತ್ತಾ ಕಸವನ್ನು ಒಗ್ಗೂಡಿಸುತ್ತಾ ಗುಡಿಸುತ್ತವೆ.  ಹೀಗೆ ಒಂದೊಂದು ರಸ್ತೆಯನ್ನು ಸುಮಾರು ಅರ್ಧ ಘಂಟೆಯಲ್ಲಿ ಗುಡಿಸಿ, ವಾಹನ ಹೊರಟು ಹೋಗುತ್ತದೆ.

ಮನೆಗಳೂ ಕೂಡ ಮುಂದುಗಡೆಗೆ ಹೆಂಚುಗಳನ್ನು ಹಾಕಿ ವಿನ್ಯಾಯ ಮಾಡಲಾಗಿರುತ್ತದೆ.  ಬೀದಿಬಾಗಿಲ ಪಕ್ಕದಲ್ಲೇ ಮೋಟಾರು ನಿಲ್ಲಿಸುವ ಲಾಯ (garage)ದ ಬಾಗಿಲಿರುತ್ತದೆ.  ಕೆಲವರು ಬೀದಿ ಬಾಗಿಲುಗಳನ್ನು ತಿಂಗಳಾನುಗಟ್ಟಲೆ ತೆಗೆಯುವುದೇ ಇಲ್ಲ. 
ಈ ಜಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆಂದು ಬಸ್ಸುಗಳಾಗಲಿ, ಸುರಂಗ ರೈಲುಗಳಾಗಲೀ ಏನೂ ಇಲ್ಲ.  ಅರಿಜೋನ ವಿಶ್ವವಿದ್ಯಾಲಯವಿರುವ ಕಡೆಗೆ ರೈಲುಗಳ ಓಡಾಟವಿದೆ.  ಕೆಲವು ಕಡೆ ನಾವು ಓಡಾಡುವಾಗ ಕೆಲವು ಬಸ್ಸುಗಳನ್ನು ನೋಡಿದೆವು ಅಷ್ಟೆ.  ಬಾಕಿಯಂತೆ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲೇ ಎಲ್ಲ ಕಡೆಗೂ ಓಡಾಡಬೇಕು.  ಕೆಲವೊಮ್ಮೆ ಕೆಲಸಕ್ಕೆ ಹೋಗುವಾಗ ಒಂದೇ ಕಡೆ ವಾಸವಿರುವ ಕೆಲವರು ಒಂದೊಂದು ದಿನ ಒಬ್ಬೊಬ್ಬರ ಕಾರಿನಲ್ಲಿ ಹೋಗಿ ಇಂಧನ ಉಳಿಸುತ್ತಾರೆ.  ಮೋಟಾರು ಲಾಯದಲ್ಲಿಯೇ ಚಪ್ಪಲಿಗಳನ್ನು ಬಿಡುವ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಾದ್ದರಿಂದ, ಯಾವಾಗ ಮನೆಯಿಂದ ಹೊರಗೆ ಹೋಗಬೇಕಾದರೂ ಮೋಟಾರು ಲಾಯದ ಬಾಗಿಲನ್ನೇ ಉಪಯೋಗಿಸುತ್ತಾರೆ.  ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗ ಈ ಆಚರಣೆಗಳು ಮನಸ್ಸಿಗೆ ಸ್ವಲ್ಪ ಕಸಿವಿಸಿ ಮಾಡುವುದು. 
  
ಬಾಡಿಗೆ ಮನೆಗಳಲ್ಲಿ  ವಿದ್ಯುತ್ ಒಲೆಗಳು, ಪಾತ್ರೆ ತೊಳೆಯುವ ಯಂತ್ರ, ಬಟ್ಟೆ ಒಗೆಯುವ ಯಂತ್ರ, ನೀರು ಶುದ್ಧೀಕರಿಸುವ ಯಂತ್ರ (ಫೀನಿಕ್ಸ್ ನಲ್ಲಿ ಒರಟು ನೀರು ಸಿಕ್ಕುವುದರಿಂದ ಅದನ್ನು ಪರಿಷ್ಕರಿಸಿ ಉಪಯೋಗಿಸಬೇಕಾಗುವುದು) ಎಂದು ಎಲ್ಲವನ್ನೂ ಅಳವಡಿಸಿಯೇ ಬಾಡಿಗೆಗೆ ಕೊಡುತ್ತಾರೆ.  ನನ್ನ ಮಗ ಬಾಡಿಗೆಗೆ ಇದ್ದ ಮನೆಯಲ್ಲಿ ನಾವು ಹೋದಾಗ ಪಾತ್ರೆ ತೊಳೆಯುವ ಯಂತ್ರ ಕೆಟ್ಟಿತ್ತು.  ಅದನ್ನು ಬದಲಾಯಿಸಲು ಒಬ್ಬರನ್ನು ಮನೆಯ ಒಡತಿ ಕಳುಹಿಸಿದ್ದಳು.  ಆ ಭಾರೀ ಗಾತ್ರದ, ಕುಳ್ಳಗಿನ ಮನುಷ್ಯ ಯಾರ ಸಹಾಯವೂ ಇಲ್ಲದೆ ಮಣ ತೂಕದ ಯಂತ್ರವನ್ನು ಒಂದು ಗಾಡಿಯಲ್ಲಿ ತಂದಿದ್ದನು.  ಅದನ್ನು ಗಾಲಿಯಿರುವ ಪುಟ್ಟ ಕಬ್ಬಿಣದ ಸರಳುಗಳ ಸಹಾಯದಿಂದ ಮನೆಯ ಒಳಗಡೆ ತಂದನು.  ತಾನೊಬ್ಬನೇ ಬಗ್ಗಿ, ಎದ್ದು, ಕುಳಿತು, ಮಲಗಿ, ಎಲ್ಲಾ ತರಹದ ಕಸರತ್ತನ್ನೂ ಮಾಡಿ, ಹಳೆಯ ಯಂತ್ರವನ್ನು ಹೊರಗೆ ತೆಗೆದು, ಹೊಸತನ್ನು ಅಳವಡಿಸಿ, ಅಲ್ಲಿ ಚೆಲ್ಲಿದ್ದ ನೀರನ್ನೆಲ್ಲಾ ಒರೆಸಿ, ನೆಲದ ಹಂಚಿನ ಮೇಲಾಗಿದ್ದ ಕಲೆಯನ್ನೆಲ್ಲಾ ಉಜ್ಜಿ, ಶುಚಿಗೊಳಿಸಿ (ಅದಕ್ಕೂ ಏನೋ ಒಂದು ಲೋಷನ್ ತಂದಿದ್ದ), ಓಕೆ ಬಾಯ್ ಎಂದು ಅರ್ಧಗಂಟೆಯಲ್ಲಿ ಹೊರಟೇ ಹೋದನು.  ನಾವು ನೋಡುತ್ತಾ ಕುಳಿತವರು, ಅವನಿಗೆ ಏನಾದರೂ ಸಹಾಯ ಬೇಕೆ ಎಂದು ಕೇಳಿ ಪೆಚ್ಚಾದೆವು ಅಷ್ಟೆ.  

ಮನೆಯ ಮುಂದುಗಡೆ ಬೆಳೆದ ಹುಲ್ಲನ್ನು ಕತ್ತರಿಸಲು ಕೂಡ ಜನಗಳು ಸಿಗುತ್ತಾರೆ.  ಅವರ ಜಂಗಮ ದೂರವಾಣಿಗೆ ಕರೆ ಮಾಡಿದರೆ ಬಂದು ಎಲ್ಲವನ್ನೂ ಕತ್ತರಿಸಿ, ಗುಡಿಸಿ ಹೋಗುತ್ತಾರೆ.  ನನ್ನ ಮಗ ಬಾಡಿಗೆಗೆ ಇದ್ದ ಮನೆಯ ಹುಲ್ಲು ಕತ್ತರಿಸಲು ಒಬ್ಬ ದಂಪತಿಗಳು ತಮ್ಮ ವಾಹನದಲ್ಲಿ ಬಂದಿದ್ದರು.  ಗಂಡ ಹೆಂಡತಿ ಇಬ್ಬರೂ ಅದೆಷ್ಟು ಚಾಕಚಕ್ಯತೆಯಿಂದ ಒಬ್ಬೊಬ್ಬರು ಒಂದೊಂದು ಕಡೆಯಿಂದ ಪ್ರಾರಂಭಿಸಿ ಕೇವಲ ಅರ್ಧ ಗಂಟೆಯಲ್ಲಿ ಕೆಲಸ ಮಾಡಿ ಮುಗಿಸಿದರು.  ಎಲ್ಲದಕ್ಕೂ ಬೇಕಾದಂತಹ ತರಹೇವಾರಿ ಉಪಕರಣಗಳು ಇರುತ್ತವೆ.  ನಮ್ಮ ದೇಶದಂತೆ ಇಲ್ಲಿ ಎಲ್ಲ ಕೆಲಸವನ್ನೂ ಕೈಯಲ್ಲಿ ಮಾಡಿ ಶ್ರಮ ಪಡಬೇಕಾಗಿಲ್ಲ.  ಉಪಕರಣಗಳ ಸಹಾಯದಿಂದ ಪ್ರತೀ ಕೆಲಸವನ್ನೂ ಅತಿ ಕಡಿಮೆ ಸಮಯದಲ್ಲಿ, ಅಚ್ಚುಕಟ್ಟಾಗಿ ಮಾಡಿಬಿಟ್ಟು, ಕಸವನ್ನೂ ತೆಗೆದು ಸ್ವಚ್ಛ ಮಾಡಿ,  ತಮ್ಮ ಹಣ ಪಡೆದು "ಶುಭದಿನ" ಎಂದು ಹಾರೈಸಿ ಹೊರಟುಹೋಗುವರು. 

 
ಮನೆಯ ಹಿತ್ತಲಲ್ಲಿ ಮಡಿಲ ತುಂಬಾ ಮಕ್ಕಳನ್ನೇ ಹೊತ್ತು ನಿಂತಿರುವ ಕಿತ್ತಳೆ ಹಣ್ಣಿನ ಗಿಡ, ನಮ್ಮ ಊರಿನ ನಿಂಬೆ ಹಣ್ಣಿಗಿಂತ ದೊಡ್ಡ ಗಾತ್ರದ ನಿಂಬೆ ಹಣ್ಣುಗಳನ್ನು ಹೊತ್ತು ನಿಂತಿರುವ ನಿಂಬೆಗಿಡ ನಮ್ಮ ಗಮನವನ್ನು ಸೆಳೆಯುತ್ತದೆ.  ಆದರೆ ಯಾರೊಬ್ಬರೂ ಒಂದೇ ಒಂದು ಹಣ್ಣನ್ನೂ ಕೀಳುವುದೂ ಇಲ್ಲ, ಉಪಯೋಗಿಸುವುದೂ ಇಲ್ಲ.  ಮಗನ ಮನೆಯ ಪಕ್ಕದ ಮನೆಯಲ್ಲಿ ನಿಂಬೆ ಗಿಡವಿರುವುದು.  ಕೆಲವು ರೆಂಬೆಗಳು ಅವರ ಮನೆಯ ಗೋಡೆಯಿಂದಾಚೆ ಈ ಮನೆಯ ಕಡೆ ಬಗ್ಗಿ ಮೈತುಂಬಾ ಕಡು ಹಳದಿ ಬಣ್ಣದ ಹಣ್ಣುಗಳನ್ನು ಹೊತ್ತು, ಗಾಳಿಯಲ್ಲಿ ಈ ಕಡೆ ಆ ಕಡೆ ತೂಗುತ್ತಾ ಕೈಬೀಸಿ ಕರೆಯುವುದು.  ಗಿಡ ಅವರ ಮನೆಯಲ್ಲಿ ಇದ್ದರೂ, ಗೋಡೆಯಿಂದೀಚೆಗೆ ಬಾಗಿರುವ ಕೊಂಬೆಗಳಿಂದ ನಾವು ಹಣ್ಣುಗಳನ್ನು ತೆಗೆದುಕೊಳ್ಳಬಹುದೆಂದು ತಿಳಿಯಿತು.  ನಾನು ಕೆಲವು ಹಣ್ಣುಗಳನ್ನು ತಂದು ಉಪಯೋಗಿಸಿದೆ.  


 ದಪ್ಪನಾದ ಹೊರಕವಚವಿರುವುದರಿಂದ ರಸ ತೆಗೆಯಲು ಸ್ವಲ್ಪ ಶ್ರಮ ಪಡಬೇಕಾದರೂ ಕೂಡ, ಹಣ್ಣಿನ ತುಂಬಾ ರಸ ಹೊತ್ತ ನಿಂಬೆ ರುಚಿಯಾಗಿತ್ತು.  ಮಾತು ಮಾತಿಗೂ ಕಾಯ್ದೆ ಕಾನೂನುಗಳನ್ನು ಅನುಸರಿಸಬೇಕಾದಂತಹ ಅತಿ ಶಿಸ್ತು ಕೆಲವೊಮ್ಮೆ ನಮ್ಮನ್ನು ಪೇಚಿಗೆ ಸಿಲುಕಿಸುವುದು.   ಎಲ್ಲವೂ ಮುಕ್ತವಾಗಿ, ಯಾರ ಅಂಕೆಯೂ ಇಲ್ಲದೆ ಇರುವ ನಮ್ಮ ಊರು, ದೇಶ ಎಷ್ಟು ಹಿತ ಎನ್ನುವುದು ಹೊರಗೆ ಹೋದಾಗ ಮಾತ್ರವೇ ತಿಳಿಯುವುದು.  ಪ್ರಕೃತಿದತ್ತವಾದ ಸಕಲ ಸೌಲಭ್ಯಗಳಿಗೂ ನಾವೇ ಒಡೆಯರು, ಎಲ್ಲವೂ ನಮಗಾಗಿಯೇ, ನಮ್ಮದೇ ಎನ್ನುವ ಭಾವದಲ್ಲಿ ಬದುಕುವ ನಾವು ಎಲ್ಲದಕ್ಕೂ ಅದರದೇ ಆದ ಒಂದು ಬೆಲೆಯಿದೆಯೆಂಬ ಸತ್ಯ ನಮಗೆ ತಿಳಿಯುವುದು ನಾವು ನಮ್ಮ ದೇಶದಿಂದ ಹೊರಗಡೆ ಹೋದಾಗ ಮಾತ್ರ.

ಫೀನಿಕ್ಸ್ ನಗರವು ತುಂಬಾ ಆಸ್ತೆಯಿಂದ ನಕ್ಷೆ, ನಕಾಶೆಗಳ ಸಹಾಯದಿಂದ ಕಟ್ಟಲ್ಪಟ್ಟಿದೆ.  ನೈಸರ್ಗಿಕ ಸೌಂದರ್ಯ ಹಾಳಾಗದಂತೆ ಕಾಪಾಡಲಾಗಿದೆ.  ತುಂಬಾ ಹೆಚ್ಚೆನಿಸುವ ಬಹು ಮಹಡಿ ಕಟ್ಟಡಗಳು ಕಾಣಸಿಗುವುದಿಲ್ಲ.    ಅರಿಜೋನ ವಿಶ್ವವಿದ್ಯಾಲಯದಲ್ಲಿಯೇ ನನ್ನ ಮಗ ತನ್ನ MS ಪದವಿ ಮಾಡಿದ್ದು.  ಒಳಗೆಲ್ಲಾ ನಮ್ಮನ್ನು ಕಾರಿನಲ್ಲಿಯೇ ಕರೆದುಕೊಂಡು ಹೋಗಿ ತೋರಿಸಿದಾಗ ಅಲ್ಲಿ ಓದಲು ಬರುವ ವಿದ್ಯಾರ್ಥಿಗಳ ಸಂಕಷ್ಟಗಳು ನಮಗೆ ಅರ್ಥವಾಯಿತು.  ವಿಸ್ತಾರವಾಗಿ ಹಬ್ಬಿರುವ ವಿಶ್ವವಿದ್ಯಾಲಯದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪ್ರತಿ ವರ್ಷವೂ ಇರುತ್ತಾರಂತೆ.  ವಿದ್ಯಾರ್ಥಿಗಳಿಗೆ ಬರಿಯ ತಂಗುವ ಮನೆಗಳು ಸಿಗುತ್ತವೆ.  ಅಲ್ಲಿಯೇ ಸುಮಾರು ೪-೫ರ ಗುಂಪು ಅಥವಾ ಮನೆ ದೊಡ್ಡದಿದ್ದರೆ ಇನ್ನೂ ಕೆಲವು ಜನ ಸೇರಿಕೊಂಡು ಊಟದ ಖರ್ಚನ್ನು ಎಲ್ಲರೂ ಹಂಚಿಕೊಳ್ಳುತ್ತಾ ವಿದ್ಯಾಭ್ಯಾಸ ಮಾಡುತ್ತಾರೆ.  ಹೀಗೆ ವಿದ್ಯಾರ್ಥಿಗಳಾಗಿರುವವರ ಅನುಕೂಲಕ್ಕಾಗಿ ಬಟ್ಟೆ ಒಗೆಯುವ  ಯಂತ್ರಗಳನ್ನು ಅನೇಕ ಕಡೆ ಇರಿಸಲಾಗಿದೆ.  ಇವು ವಿದ್ಯಾರ್ಥಿಗಳಿಗಾಗಿಯೇ ಮಾಡಿಕೊಟ್ಟಿರುವ ಅನುಕೂಲ.  ಅಲ್ಲಿ ಬಟ್ಟೆ ಒಗೆಯುವ ಯಂತ್ರದಲ್ಲಿ ಬಟ್ಟೆಗಳನ್ನು ಹಾಕಿ ಅದಕ್ಕೆಷ್ಟು ದುಡ್ಡು ಕಟ್ಟಬೇಕೋ ಅದನ್ನು ಹಾಕಿದರೆ ಮಾತ್ರ ಯಂತ್ರ ಕೆಲಸ ಮಾಡುತ್ತದೆ.  ಸುಮಾರು ಮುಕ್ಕಾಲು ಗಂಟೆ ಬಟ್ಟೆ ಒಗೆದ ನಂತರ ಅದನ್ನು ತೆಗೆದು ಒಣಗಿಸುವ ಯಂತ್ರದಲ್ಲಿ ಹಾಕಬೇಕು.  ಕೆಲಸ ಆದ ನಂತರ ತೆಗೆದುಕೊಂಡು ಹೋಗಬೇಕು.  ಇದು ವಾರದಲ್ಲಿ ಒಂದು ಸಲ ಮಾಡುವ ವಾರಾಂತ್ಯದ ಕಾರ್ಯಕ್ರಮ.  ಕೈಯಲ್ಲಿ ಹೆಚ್ಚು ದುಡ್ಡಿಲ್ಲದೆ, ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡು ಓದಲು ಬರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.  ಆದ್ದರಿಂದ ಖರ್ಚು ಮಾಡುವ ಒಂದೊಂದು ಡಾಲರ್ ಕೂಡ ಯೋಚಿಸಿಯೇ ಮಾಡಬೇಕು.  ಕೆಲವು ಅದೃಷ್ಟವಂತ ಹುಡುಗರಿಗೆ ಓದುವಾಗಲೇ ಸಂಜೆ ಸಮಯ ಕೆಲಸ ಮಾಡಲು ಸಿಕ್ಕುತ್ತದೆ.  ಅಂತಹ ಸಮಯದಲ್ಲಿ ಹಣದ ಅಡಚಣೆ ಸ್ವಲ್ಪ ಕಡಿಮೆಯಾಗುವುದು.  ಆದರೆ ಕೆಲವು ಮಕ್ಕಳಿಗೆ ಓದು ಮುಗಿದರೂ ಕೆಲಸ ಸಿಕ್ಕಿರುವುದಿಲ್ಲ.  ನಮ್ಮ ದೇಶದಿಂದ ದೂರ ದೇಶಕ್ಕೆ ಓದಲು ಹೋದಾಗ ಒಬ್ಬರಿಗೊಬ್ಬರು ತುಂಬಾ ಸಹಾಯ ಮಾಡಿಕೊಳ್ಳುತ್ತಾರೆ.  ಕೆಲಸ ಸಿಗುವವರೆಗೂ ಊಟ, ತಿಂಡಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.  ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಲ್ಲಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕೂಡ ತುಂಬಾ ಸಹಾಯ ಮಾಡುತ್ತಾರೆ.  ವಾರಾಂತ್ಯಗಳಲ್ಲಿ ಊಟಕ್ಕೆ ಕರೆಯುವುದು, ಹೊಸದಾಗಿ ಹೋದಾಗ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡುವುದು, ವಿಶ್ವವಿದ್ಯಾಲಯದಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ಪರಿಚಯಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಗುಂಪಿನಲ್ಲಿರುವ ಇತರ ಭಾರತೀಯರನ್ನು ಪರಿಚಯಿಸುವುದನ್ನು ತುಂಬಾ ಕಾಳಜಿಯಿಂದ ಮಾಡುತ್ತಾರೆ.   ವಿಶ್ವವಿದ್ಯಾಲಯದ ಸುತ್ತಮುತ್ತಲಲ್ಲೇ ಮನೆಗಳು ಬಾಡಿಗೆಗೆ ಸಿಗುತ್ತವೆಯಾದ್ದರಿಂದ ವಿದ್ಯಾರ್ಥಿಗಳು ಓದು ಮುಗಿಯುವವರೆಗೂ ಅಲ್ಲಿಯೇ ಇರುತ್ತಾರೆ.  ಕೆಲಸ ಸಿಕ್ಕ ಕೂಡಲೆ ಸ್ವಲ್ಪ ಅನುಕೂಲಕರವಾದ ಮನೆ ನೋಡಿಕೊಂಡು ಹೊರಡುತ್ತಾರೆ.
 

Wednesday, June 1, 2016

ಪ್ರವಾಸ ಕಥನ - ಅಮೆರಿಕ

ರಷ್ಯಾ ದೇಶಕ್ಕೆ ಹೋಗಿ ಬಂದು ಸುಮಾರು ೨೩ ವರ್ಷಗಳ ನಂತರ ಮತ್ತೆ ಸಮುದ್ರಲಂಘನ ಮಾಡಿ ಅಮೆರಿಕಾಗೆ ಹೋಗುವ ಅವಕಾಶ, ಸಮಯ ಬಂದಾಗ ಮನಸ್ಸು ಅಷ್ಟೇನೂ ಸಂಭ್ರಮಿಸಿರಲಿಲ್ಲ.  ಅತ್ತೆಯವರ ದೀರ್ಘ ಅನಾರೋಗ್ಯ, ಹೊರಡುವ ಮುಂಚಿನ ತಯ್ಯಾರಿ, ಮನೆದೇವರ ದರ್ಶನ, ಚಾಮುಂಡಿ ಬೆಟ್ಟದ ಪ್ರಯಾಣ ಎಲ್ಲವೂ ಸಿಕ್ಕಾಪಟ್ಟೆ ಸುಸ್ತು ಮಾಡಿಯಾಗಿತ್ತು.  ಇನ್ನು ವಿಮಾನ ಏರಿ ಕುಳಿತಾಗಲೇ ನೆಮ್ಮದಿ ಹಾಗೂ ವಿಶ್ರಾಂತಿ ಎನ್ನುವ ಮಟ್ಟಿಗೆ ತಲುಪಿದ್ದೆವು.  ಫೆಬ್ರುವರಿ ೧೩ನೆಯ ತಾರೀಖು ಬೆಳಗಿನ ಜಾವ ೩ ಗಂಟೆಗೆ ಜಂಗಮ ದೂರವಾಣಿ ಹಾಡಲಾರಂಭಿಸಿದಾಗ, ಆಗ ತಾನೆ ಇನ್ನೂ ನಿದ್ದೆಯ ಮಂಪರು ಶುರುವಾಗಿತ್ತು.  ದಡಬಡಿಸಿ ಎದ್ದು ಹೊರಟೆವು.  ಎಲ್ಲಾ ತರಹದ ತಡೆಗಳನ್ನೂ ಯಶಸ್ವಿಯಾಗಿ ದಾಟಿ ನಾವು ವಿಮಾನ ನಿಲ್ದಾಣದಲ್ಲಿ ಮಹಡಿಯ ಮೇಲೆ ನಿಂತಿದ್ದೆವು.  ಅಲ್ಲಿಯೇ ತಿಂಡಿ ತಿಂದು, ಕಾಯುತ್ತಾ ಕುಳಿತೆವು.  ಬೆಳಗಿನ ೬ ಗಂಟೆಗೆ ವಿಮಾನವೇರಲು ಕರೆ ಬಂದಿತು.  ಏರುವಾಗ ತಿಳಿಯಿತು ನಮ್ಮ ಟಿಕೇಟುಗಳನ್ನು ಜನೂ ಮೇಲ್ದರ್ಜೆಗೆ ವರ್ಗಾಯಿಸಿದ್ದಾರೆ ಎಂದು.  ಮೊದಲನೆಯ ಸಾಲಿನಲ್ಲಿಯೇ ಕಾಯ್ದಿರಿಸಲಾಗಿದ್ದ ಜಾಗದಲ್ಲಿ ಕುಳಿತಾಗ ಮುಂದೆ ಯಾರೂ ಕುಳಿತಿಲ್ಲದೆ, ಕಾಲುಗಳನ್ನು ಉದ್ದವಾಗಿ ನೀಟಿಕೊಳ್ಳಲು ಜಾಗವಿರುವುದು ಖುಷಿಯಾಯಿತು.  ಎಲ್ಲಾ ತಪಾಸಣೆಗಳೂ, ನಿರ್ದೇಶನಗಳೂ ಮುಗಿದು, ಕೊನೆಗೂ ವಿಮಾನ ಮೇಲಕ್ಕೇರಿತು.  ನೆಮ್ಮದಿಯ ನಿದ್ದೆಗೆ ಜಾರಿದ್ದೆ.  ಆದರೆ ಎಲ್ಲಿ ನೆಮ್ಮದಿ..? ಸ್ವಲ್ಪ ಹೊತ್ತಿನಲ್ಲೇ ಬೆಳಗಿನ ಉಪಹಾರಕ್ಕೆಂದು ಕರೆದು ಎಬ್ಬಿಸಲಾಯಿತು.   ಹೇಗೋ ಕುಳಿತೂ ಕುಳಿತೂ ಬೇಸರವಾಗುವ ಹೊತ್ತಿಗೆ ನಾವು ಲಂಡನ್ ತಲುಪಿದ್ದೆವು.  ೧೧ ಘಂಟೆಗಳ ಕಾಲ ಸುಮ್ಮನೆ ಕೂರುವ ಪ್ರಥಮ ಹಂತದ ಶಿಕ್ಷೆ ಮುಗಿದಿತ್ತು.  ಹೀತ್ರೂ ವಿಮಾನ ನಿಲ್ದಾಣದ ವಿಷಯ ಅನೇಕರು ಅನೇಕ ರೀತಿಯಲ್ಲಿ ತಿಳಿಸಿ ನಮಗೆ ಒಂದು ತರಹದ ಆತಂಕ ಸೃಷ್ಟಿಯಾಗಿತ್ತು.  ಅತೀ ದೊಡ್ಡದಾದರೂ ಎಲ್ಲವೂ ಸಂಪೂರ್ಣವಾಗಿ ಮಾಹಿತಿ ಭರಿತ ನಿಲ್ದಾಣವಾಗಿದೆ.  ಮುಂದಕ್ಕೆ ಪಯಣಿಸಬೇಕಾಗಿರುವವರು ಯಾವ ಸಾಲಿನಲ್ಲಿ ಹೋಗಬೇಕು ಎಂಬ ವಿವರಗಳು ಹೆಜ್ಜೆ ಹೆಜ್ಜೆಗೂ ತುಂಬಿವೆ.  ನಮಗೆ ಫೀನಿಕ್ಸ್ ವಿಮಾನವನ್ನು ಏರಲು ಕೇವಲ ೨ ಘಂಟೆಗಳ ಸಮಯವಿತ್ತು.  ಆತಂಕದಿಂದಲೇ ನಮ್ಮ ಸಾಮಾನಿನ ಗಾಡಿಯನ್ನು ತಳ್ಳುತ್ತಾ, ಫಲಕಗಳನ್ನು ಓದಿಕೊಳ್ಳುತ್ತಾ ಒಂದೇ ಉಸಿರಿಗೆ ಓಡಿದಂತೆ ನಡೆಯಲಾರಂಭಿಸಿದೆವು.  ಸುಮಾರು ಅರ್ಧ ಘಂಟೆ ಹಾಗೆ ನಡೆದು,  ಚಲಿಸುವ ಸೋಪಾನಗಳ  ಸಹಾಯದಿಂದ ಹತ್ತಿ, ಇಳಿದು, ನಡೆದು ಸುಸ್ತಾಗುವ ಹೊತ್ತಿಗೆ  ಒಂದು ಬಾಗಿಲ ಹತ್ತಿರ ಬಂದಿದ್ದೆವು.  ಅಲ್ಲಿ ಐದು ನಿಮಿಷಗಳು ಕಾಯುವಷ್ಟರಲ್ಲಿ ದೊಡ್ಡದೊಂದು  ಬಸ್ ಬಂದಿತು.  ಅದರ ಚಾಲಕ ಇಳಿದು ಬಂದು ತಾನು ಕತ್ತಿನಲ್ಲಿ ಧರಿಸಿದ್ದ ಉದ್ದನೆಯ ಹಗ್ಗದ ಕೊನೆಗೆ ತೂಗಾಡುತ್ತಿದ್ದ ತನ್ನ ಗುರುತಿನ ಚೀಟಿಯನ್ನು ಬಾಗಿಲಿನ ಹೊರಗಡೆ ಇದ್ದ ಬೀಗಕ್ಕೆ ತೋರಿಸಿದಾಗ, ಬಾಗಿಲು ತೆರೆದುಕೊಂಡಿತು.  ನಾವು ಆ ಬಸ್ಸಿನಲ್ಲಿ ಹತ್ತಿಕೊಂಡು ಅಲ್ಲಿಂದ ಹೊರಟೆವು.  ಬಸ್ಸು ಕೂಡ ಅನೇಕ ಕಡೆ ತಿರುಗುತ್ತಾ ಸುರಂಗದಲ್ಲೆಲ್ಲಾ ಚಲಿಸುತ್ತಾ ಸುಮಾರು ೧೫ ನಿಮಿಷಗಳ ನಂತರ ಒಂದು ಕಡೆ ನಿಂತಾಗ ನಾವು ಇಳಿದು ಮತ್ತೆ ಸ್ವಲ್ಪ ದೂರ ಒಳಗಡೆಗೆ ನಡೆದು ಹೋದೆವು.  ಕೊನೆಗೂ ನಾವು ನಮ್ಮ ಪ್ರಯಾಣ ಮುಂದುವರೆಸಬೇಕಾಗಿದ್ದ ಫೀನಿಕ್ಸ್ ವಿಮಾನ ಏರುವ ಮುಂಚೆ ಆಗುವ ತಪಾಸಣೆಯ ಜಾಗಕ್ಕೆ ಬಂದಿದ್ದೆವು.  ಭದ್ರತಾ ತಪಾಸಣೆಯಲ್ಲಿ ಕೈಯಲ್ಲಿರುವ ಬಳೆಗಳು, ಗಡಿಯಾರ, ಉಂಗುರ ಎಲ್ಲವನ್ನೂ ತೆಗೆದು ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಇಡಬೇಕು.  ಚಪ್ಪಲಿ ಕಳಚಿ ಇನ್ನೊಂದು ಬುಟ್ಟಿಯಲ್ಲಿಡಬೇಕು.  ಇಷ್ಟೆಲ್ಲಾ ಸಂಭ್ರಮದಲ್ಲಿ ನಮ್ಮ ಬ್ಯಾಗ್, ಅದರಲ್ಲಿನ ಜಂಗಮ ದೂರವಾಣಿ, ಇನ್ನೂ ಏನೇನು ಎಲೆಕ್ಟ್ರಾನಿಕ್ಸ್ ವಸ್ತುಗಳು ಇವೆಯೋ ಅವೆಲ್ಲವನ್ನೂ ಬಿಡಿಬಿಡಿಯಾಗಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಇಟ್ಟು, ನಮ್ಮ ದೈಹಿಕ ತಪಾಸಣೆಗೆ ಸಾಲಿನಲ್ಲಿ ನಿಲ್ಲಬೇಕು.  ಎಲ್ಲವೂ ಮುಗಿಯುವ ಹೊತ್ತಿಗೆ ನಿಜಕ್ಕೂ ಸುಸ್ತಾಗಿಬಿಡುವುದು.  ನಂತರ ಅಲ್ಲಿ ಸುಮಾರು ಅರ್ಧ ಘಂಟೆ ಕುಳಿತ ನಂತರ  ವಿಮಾನ ಏರುವ ಪ್ರಕ್ರಿಯೆ ಪ್ರಾರಂಭವಾಯಿತು.  ಯಾವ ಯಾವ ಸಾಲಿನ ಸಂಖ್ಯೆಗಳು ಘೋಷಣೆ ಆಗುವುದೋ ಆ ಸಾಲಿನವರು ಹೋಗಲು ಪ್ರಾರಂಭಿಸಿದರು.  ಇಷ್ಟು ಹೊತ್ತಿಗೆ ಸಾಕಷ್ಟು ದಣಿದಿದ್ದ ನಾವು ನಮ್ಮ ಸರತಿ ಬಂದಾಗ ವಿಮಾನವೇರಿ ಕುಳಿತೆವು.  ಮತ್ತೆ ೧೧ - ೧೨ ಘಂಟೆಗಳ ದೀರ್ಘ ಪ್ರಯಾಣ.  ಮಾಡಲು ಏನೂ ಇಲ್ಲದೇ ಸುಮ್ಮನೆ ಕೂಡಿಸಿದರೂ ನಾವು ನೆಮ್ಮದಿಯಾಗಿ ಇರಲಾರೆವೆಂಬ ಅನುಭವವಾಯಿತು.  ಒಂದೇ ಸಮನೆ ಅಲ್ಲಾಡಲೂ ಜಾಗವಿರದೆ ಕುರ್ಚಿಯ ಪಟ್ಟಿಯನ್ನು ಬಿಗಿದುಕೊಂಡು ಕುಳಿತಿರುವುದು ಕೂಡ ಒಂದು ರೀತಿಯ ಶಿಕ್ಷೆ ಎಂಬುದು ಅರಿವಾಯಿತು.  ಸ್ವಲ್ಪ ನಿದ್ದೆ, ಸ್ವಲ್ಪ ಎಚ್ಚರ ಹೀಗೆ ಸಮಯ ಕಳೆದಾಗ ಫೀನಿಕ್ಸ್ ಹತ್ತಿರ ಬಂದಿದ್ದೆವು.  ಸಾಯಂಕಾರ ಸೂರ್ಯ ಅಸ್ತಮಿಸಲು ಸಜ್ಜಾಗಿರುವ ಸಮಯದಲ್ಲಿ ವಿಮಾನ ಪ್ರಯಾಣ ಅತ್ಯಂತ ರೋಮಾಂಚನಕರವಾಗಿರುತ್ತದೆ.  ಕೆಂಪು, ಹಳದಿ, ಹಸಿರು, ನೀಲಿ ಎಂಬ ಬಣ್ಣಗಳ ಮಿಶ್ರಣದಲ್ಲಿ ಬಂಗಾರದ ತಟ್ಟೆಯಂತೆ ಕಂಗೊಳಿಸುವ ಸೂರ್ಯ ನಮ್ಮನ್ನು ಬೇರೆಯೇ ಲೋಕಕ್ಕೆ ಸೆಳೆದೊಯ್ಯುತ್ತಾನೆ.  



ಫೀನಿಕ್ಸ್ ನ ಬೆಟ್ಟ ಗುಡ್ಡಗಳು, ಕೆಲವು ಎತ್ತರದ ಕಟ್ಟಡಗಳು ಎಂದು ನೋಡುತ್ತಾ ನೋಡುತ್ತಾ ನಾವು ಇಳಿಯುವ ಸಮಯವಾಯಿತು.  ಕೊನೆಗೂ ದೀ....ರ್ಘ ಪ್ರಯಾಣ ಮುಗಿಯುವ ನೆಮ್ಮದಿ ಸಿಕ್ಕಹಾಗಾಯಿತು.  ಅಂತೂ ಇಂತೂ ನಾವು ಶನಿವಾರ  ಬೆಳಗ್ಗೆ ೭ ಘಂಟೆಗೆ ಇಲ್ಲಿಂದ ಹೊರಟು ಶನಿವಾರ ಸಾಯಂಕಾಲ ೭.೧೫ಕ್ಕೆ ಫೀನಿಕ್ಸ್ ತಲುಪಿದೆವು.  ಫೀನಿಕ್ಸ್ ಸಮಯ ನಮ್ಮ ಸಮಯಕ್ಕಿಂತ ಅಂದಾಜು ೧೧.೩೦ ಘಂಟೆಗಳಷ್ಟು ಹಿಂದಿದೆ.  ನಾವು ಪಯಣಿಸುವಾಗ ನಮಗೆ ೧೨ ಘಂಟೆಗಳ ಕಾಲದಷ್ಟು ಸಮಯ ಲಾಭವಾಗಿತ್ತು.  ಹಾಗಾಗಿ ನಾವು ಶನಿವಾರ ಹೊರಟು ಅಲ್ಲಿ ಶನಿವಾರವೇ ತಲುಪಿದ್ದೆವು.    ಫೀನಿಕ್ಸ್ ಸುಂದರವಾದ ಪ್ರದೇಶ.  ತುಂಬಾ ಆಸಕ್ತಿಯಿಂದ ಕಟ್ಟಲ್ಪಟ್ಟಿರುವ ಜಾಗ.  ಪ್ರತಿಯೊಂದು ರಸ್ತೆಗಳೂ ನಯವಾಗಿ, ಅಗಲವಾಗಿ, ಜಾರುವಂತೆ ಸಾಗುತ್ತಿರುವಾಗ ರಸ್ತೆಗಳ ಅಕ್ಕ ಪಕ್ಕದ ಗೋಡೆಗಳಲ್ಲಿ ಮರುಭೂಮಿಯಲ್ಲಿ ವಾಸಿಸುವಂತಹ ಪ್ರಾಣಿಗಳ ಚಿತ್ರಗಳು, ನಮ್ಮ ಜೊತೆಗೇ ಪ್ರಯಾಣಿಸುತ್ತಿರುವುವೋ ಎಂಬ ಭಾವನೆ ಕೊಡುವಂತಿರುವುದು.  ಗೋಡೆಯಿಂದ ರಸ್ತೆಯ ಕಡೆಗೆ ಇಳಿಜಾರು ಪ್ರದೇಶವನ್ನಾಗಿ ಮಾಡಿ, ಪುಟ್ಟ ಪುಟ್ಟ ಪಾತಿಗಳಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು ಬೆಳೆಸಿರುವರು.  ನಾವು ಅಲ್ಲಿದ್ದ ಸಮಯ ಚಳಿ ಮುಗಿದು, ಬೇಸಿಗೆ ಕಾಲ ಪ್ರಾರಂಭವಾಗುವ ಮೊದಲ ಸಂಧಿಯ ಸಮಯವಾಗಿತ್ತು.  ಎಳೆ ಬಿಸಿಲಿನ ಸಂಪರ್ಕದಿಂದಾಗಿ ಗಿಡಗಳು ಚಿಗುರಿ, ಹಸಿರು ಬಣ್ಣಗಳಲ್ಲೇ, ನಾನಾ ವಿಧದ ರಂಗುಗಳನ್ನು ಸೃಷ್ಟಿಸಿರುವುದು.  ಮಂದ ಕೆಂಪು ಬಣ್ಣವು  ಪ್ರಧಾನವಾಗಿ ಬಳಸಲ್ಪಟ್ಟು, ಮರಳು ಹಾಗೂ ಸಣ್ಣ ಸಣ್ಣ ನುಣ್ಣನೆಯ ಕಲ್ಲುಗಳ ರಾಶಿಯ ಹಿಂಭಾಗದಲ್ಲಿ ನಾವಿರುವುದು ಮರುಭೂಮಿ ಪ್ರದೇಶ ಎನ್ನುವುದನ್ನು ನೆನಪಿಸುವಂತಿರುವುದು.

ರಸ್ತೆಗಳಲ್ಲಿ  ದೊಡ್ಡ ದೊಡ್ಡ ಫಲಕಗಳ ಮೂಲಕ ಯಾವ ರಸ್ತೆ ಎಲ್ಲಿಗೆ, ಯಾವ ದಿಕ್ಕಿಗೆ, ಯಾವ ಮುಖ್ಯ ರಸ್ತೆಗೆ ಕೊಂಡಿ ಕೊಡುವುದು, ಎಷ್ಟು ದೂರದಲ್ಲಿ ಮುಖ್ಯ ರಸ್ತೆ ಇದೆ ಎನ್ನುವುದನ್ನೆಲ್ಲಾ ತಿಳಿಸಲಾಗಿದೆ.  ಬೋಗನ್ವಿಲ್ಲಾ ಹೂವಿನಂತಹ ಅನೇಕ ಬಣ್ಣಗಳ ಹೂ ಗಿಡಗಳು ರಸ್ತೆಗಳ ಮಧ್ಯದಲ್ಲಿಯೂ ಎರಡೂ ಪಕ್ಕಗಳಲ್ಲಿಯೂ ಸುಂದರವಾಗಿ ಅರಳಿಕೊಂಡು ನಮ್ಮೂರ ವಸಂತ ಮಾಸವನ್ನು ನೆನಪಿಸುತ್ತಿರುವಂತಿವೆ....  



ಕಣ್ಣು ಹಾಯಿಸಿದಷ್ಟೂ ದೂರ ಸಾಗುವ ರಸ್ತೆಗಳು ದೂರದಲ್ಲಿ ಹೆಚ್ಚೇನೂ ಎತ್ತರವಿಲ್ಲವೇನೋ ಎಂಬಂತಿರುವ ಕೆಂಪು, ಕಪ್ಪು ಮಿಶ್ರಿತ ಮಣ್ಣಿನ ಗುಡ್ಡಗಳು, ಚೊಕ್ಕವಾದ ಆಗಸ, ಶುಭ್ರವಾದ ಬೆಳಕು ಎಲ್ಲವೂ ನಮ್ಮ ರಾಷ್ಟ್ರಕವಿ ಕುವೆಂಪು ಅವರ  "ದೂರ ಬಹುದೂರ ಹೋಗುವ ಬಾರಾ...." ಎಂಬ ಒಂದು ಕವನವನ್ನು ನೆನಪಿಸುವುದು.  ದಿವಂಗತ ಮೈಸೂರು ಅನಂತಸ್ವಾಮಿಯವರು ಸಂಗೀತ ನಿರ್ದೇಶನ ಮಾಡಿರುವ ಹಾಡಿನ ಕೊಂಡಿ https://www.youtube.com/watch?v=j9Fnzd6kVcw ....  ಈಗ ತಾನೆ ಚುರುಕಾಗುತ್ತಿರುವ ಬಿಸಿಲಿಗೆ ಮಂಜೆಲ್ಲಾ ಕರಗಿ ಗುಡ್ಡಗಳು ತಮ್ಮ ನಿಜ ಸ್ವರೂಪ ಅನಾವರಣಗೊಳಿಸುತ್ತಿವೆ.  ಶಿರದಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ಹಿಮದ ಟೊಪ್ಪಿಗೆಯನ್ನಿಟ್ಟುಕೊಂಡು ನೋಡುಗರನ್ನು ಆಕರ್ಷಿಸುತ್ತಿರುವಂತಿವೆ.



ಚಿತ್ರಕೃಪೆ : ಶ್ರೀ ಜನಾರ್ದನನ್