Wednesday, January 20, 2021

ಅಂಬಾಬಾಯಿಯವರು ಹಾಗೂ ಭದ್ರಾವತಿ :

ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟ ಮಹಿಳೆಯರಲ್ಲಿ ಅಂಬಾಬಾಯಿಯವರೂ ಪ್ರಮುಖರಾಗಿರುವರು.  ಇವರು ಬಹುದಾನ ಸಂವತ್ಸರದ ವಿಜಯದಾಸರ ಆರಾಧನೆಯ ದಿನದಂದು ತಮಗೆ ೩೬ ವರ್ಷಗಳು ತುಂಬಿದವೆಂದು ತಾವೇ ತಮ್ಮ ಒಂದು ರಚನೆಯಲ್ಲಿ ತಿಳಿಸಿರುವರು.  ಅಂದರೆ ಅಂಬಾಬಾಯಿಯವರು ಶೋಭನಕೃತ ಸಂವತ್ಸರದ ಕಾರ್ತೀಕ ಶುದ್ಧ ದಶಮಿ (೧೯೦೨)ಯಂದು ಚಿತ್ರದುರ್ಗದಲ್ಲಿ ತಂದೆ ಭೀಮಸೇನರಾಯರು ಹಾಗೂ ತಾಯಿ ಭಾರತೀಬಾಯಿಯವರಿಗೆ ಪುತ್ರಿಯಾಗಿ ಜನಿಸಿದರು.  ಆಗಿನ ಕಾಲದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ಪ್ರೋತ್ಸಾಹವೂ ಇಲ್ಲದಿದ್ದರೂ, ಅತಿ ಬುದ್ಧಿವಂತೆಯಾದ ತಮ್ಮ ಮಗಳು ಅಂಬಾಬಾಯಿಯವರನ್ನು ಅವರ ತಂದೆ ಭೀಮರಾಯರು ೪ನೆಯ ತರಗತಿಯವರೆಗೂ ಓದಿಸಿದರು.  ೧೦ ವರ್ಷಕ್ಕೆ ಗೋಪಾಲಪುರದ ಹನುಮಂತಾಚಾರ್ಯ ಎಂಬುವವರೊಂದಿಗೆ ವಿವಾಹವಾಯಿತು.  ಅಲ್ಲಿಗೆ ವಿದ್ಯಾಭ್ಯಾಸವೂ ಮುಗಿಯಿತು.  ೧೨ನೆಯ ವಯಸ್ಸಿನಲ್ಲಿ ಗಂಡನ ಮನೆಗೆ ಹೋದರು.  ಆದರೆ ದುರದೃಷ್ಟವಶಾತ್ ಊರಿಗೆ ಮಾರಿಯಂತೆ ಬಂದ ಪ್ಲೇಗ್ ಖಾಯಿಲೆಯಿಂದಾಗಿ ಗಂಡನನ್ನೂ ಹಾಗೂ ತನ್ನ ತಂದೆಯನ್ನೂ ಒಂದೇ ದಿನ ಕಳೆದುಕೊಂಡರು.  ಗಂಡನ ಮನೆಯವರು ಕೇಶಮುಂಡನ ಮಾಡಿಸಿ, ತವರಿಗೆ ಅಟ್ಟಿಬಿಟ್ಟರು.  ಸಾಕಷ್ಟು ಸ್ಥಿತಿವಂತರಾಗಿದ್ದರೂ ಕೂಡಾ, ಪುಟ್ಟ ಬಾಲಕಿಗೆ ಏನೂ ಕೊಡದೆ, ಅನಾಥರನ್ನಾಗಿಸಿ, ಒಂದು ಹೊತ್ತಿನ ಊಟಕ್ಕೂ ತಮ್ಮ ತಂಗಿಯರ ಮನೆಯ ಆಶ್ರಯ ಪಡೆಯುವಂತೆ ಮಾಡಿಬಿಟ್ಟರು.


ತಂಗಿಯ ಮನೆ ಹಾಗೂ ತಮ್ಮನ ಮನೆಗಳಲ್ಲಿ ಮನೆಕೆಲಸಗಳನ್ನು ಮಾಡುತ್ತಾ ೧೬ ವರ್ಷಗಳನ್ನು ಕಷ್ಟದಲ್ಲಿಯೇ ಕಳೆದರು ಅಂಬಾಬಾಯಿಯವರು.  ಆದರೆ ತಮ್ಮೊಳಗಿನ ಧಾರ್ಮಿಕ ಪ್ರಜ್ಞೆಯನ್ನು ಚೆನ್ನಾಗಿ ಬೆಳೆಸಿಕೊಂಡರು.  ತಮ್ಮ ಮನೋಬಲವನ್ನು ಕುಸಿಯದಂತೆ ಈ ಧಾರ್ಮಿಕ ಪ್ರವೃತ್ತಿಯಿಂದ ಕಾಪಾಡಿಕೊಂಡರು.  ಹೀಗಿರುವಾಗಲೇ ತಂದೆ ಮುದ್ದುಮೋಹನ ದಾಸರಿಂದ "ಗೋಪಾಲಕೃಷ್ಣ ವಿಠಲ" ಎಂಬ ಅಂಕಿತವನ್ನು ೧೯೩೧ ಪ್ರಜೋತ್ಪತ್ತಿ ಸಂವತ್ಸರದ ಚೈತ್ರ ಶುದ್ಧ ಶ್ರೀರಾಮ ನವಮಿಯ ದಿನದಂದು ಪಡೆದರು.    "ಜೋ ಜೋ ಶ್ರೀಗೋಪಾಲಕೃಷ್ಣ ಮೂರುತಿಯೆ" ಎಂಬ ರಚನೆಯಲ್ಲಿ ಅಂಕಿತ ಪಡೆದ ವಿಚಾರವನ್ನು ತಿಳಿಸಿದ್ದಾರೆ.  ಅಂಬಾಬಾಯಿಯವರ ಕುಟುಂಬದ ಅನೇಕರು ಅಂಕಿತ ಸ್ವೀಕರಿಸಿದ ಹರಿದಾಸರೇ ಆಗಿದ್ದರು.  ಅವರ ಅಜ್ಜಿ ’ಸೀತಾಪತಿವಿಠಲ’, ತಾಯಿ ’ಯಾದವೇಂದ್ರವಿಠಲ’, ತಮ್ಮ ’ರಮಾಕಾಂತವಿಠಲ’, ತಮ್ಮನ ಪತ್ನಿ ’ಸುರೇಶವಿಠಲ’, ತಂಗಿ ’ಪರಮಾನಂದವಿಠಲ’, ತಂಗಿಯ ಗಂಡ ’ನಿತ್ಯಾನಂದವಿಠಲ’ ಹೀಗೆ.....


ಅಂಬಾಬಾಯಿಯವರ ಬದುಕಿನ ರೀತಿ - ನೀತಿಗಳು ಅಂಕಿತ ಪಡೆದ ನಂತರ ಸಂಪೂರ್ಣ ಬದಲಾಯಿತು.  ಲೌಕಿಕದಲ್ಲಿ ಕಳೆದುಕೊಂಡ ಎಲ್ಲಾ ಸುಖವನ್ನೂ ಗುರುಪಾದಗಳ ಸ್ಮರಣೆ, ಭಗವಂತನ ಆರಾಧನೆಯಲ್ಲಿ ಕಂಡುಕೊಂಡರು.  ಕಾಲಿಗೆ ಗೆಜ್ಜೆ ಕಟ್ಟಿ, ತಾಳ - ತಂಬೂರಿ ಹಿಡಿದು, ಜೋಳಿಗೆ ಹಾಕಿಕೊಂಡು, ಸಂಪೂರ್ಣವಾಗಿ ತಮ್ಮನ್ನು ತಾವು ಹರಿದಾಸ ವೃತ್ತಿಗೆ ಸಮರ್ಪಣೆ ಮಾಡಿಕೊಂಡರು.  ಹರಿದಾಸ ವೃತ್ತಿ ಅವರಿಗೆ ವಿಠಲನ ಸೇವೆಯಾಯಿತು.  ಸದಾಕಾಲವೂ "ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ ಉನ್ನಂತ ಅಭಿಲಾಷೆ"ಯನ್ನು ನೆರವೇರಿಸೆಂದು ಪ್ರಾರ್ಥಿಸುತ್ತಿದ್ದರು.  ದಾಸತ್ವವನ್ನು ಅವರು, ಆಸೆಯಿಂದ, ಶ್ರದ್ಧೆಯಿಂದ ಸ್ವೀಕರಿಸಿದರು.


ಅಂಬಾಬಾಯಿಯವರು ತಮಗೆ ಕೇಶಮುಂಡನ ಮಾಡಿಸಿ, ಅತ್ತೆಮನೆಯಿಂದ ಹೊರಗೆ ದಬ್ಬಿದಾಗ, ಅವರ ಮನೆಯಲ್ಲಿದ್ದ ಪುಟ್ಟ ಆರು ಇಂಚಿನ ಗೋಪಾಲಕೃಷ್ಣನ ಕಂಚಿನ ವಿಗ್ರಹವನ್ನು ಬೇಡಿ ಪಡೆದಿದ್ದರು.  ಆ ಪುಟ್ಟ ಕೃಷ್ಣನ ವಿಗ್ರಹವೇ ಅವರ ಆರಾಧ್ಯ ದೈವವಾಯಿತು.  ಜೀವನವನ್ನು ನೋಡುವ ಅವರ ದೃಷ್ಟಿಯೇ ಸಂಪೂರ್ಣ ಬದಲಾಯಿತು.  ಕಳೆದುಹೋದ ತನ್ನ ಸೌಮಾಂಗಲ್ಯದ ಎಲ್ಲಾ ಸಂಕೇತಗಳೂ ಗುರು ಕರುಣೆಯಿಂದ ತಮಗೆ ಮತ್ತೆ ಸಿಕ್ಕಿದವೆಂದು ಸಂತೋಷಿಸುತ್ತಾ "ಅಂಕಿತವೇ ಮಾಂಗಲ್ಯ, ನಾಮವೇ ತಿಲಕ, ಗುರುಕರುಣವೇ ಕವಚ, ಗುರು ಪ್ರೀತಿಯೇ ವಸನ, ಭಕ್ತಿ - ಜ್ಞಾನ - ವೈರಾಗ್ಯಗಳೇ ಮೂರು ಕಾಲಿನ ಜಡೆ, ತತ್ವಗಳೇ ಚೌರಿ, ರಾಗುಟೆ, ಗೊಂಡುಗಳು, ಶ್ರವಣವೇ ಕರ್ಣಕುಂಡಲ, ನಿರ್ಮಾಲ್ಯವೇ ನಾಸಿಕಾಭರಣ, ಭಕ್ತಿಯೇ ನಡುವಿನೊಡ್ಯಾಣ, ಸದ್ಗುಣಗಳೇ ಪಾದಾಭರಣ, ಗುರುವಿನ ಅನುಗ್ರಹವೇ ಮಂಗಳ ದ್ರವ್ಯಗಳೆನ್ನುತ್ತಾ, ಹೀಗೆ ಸಾಲಂಕೃತಳಾದ ತನ್ನನ್ನು ಶ್ರೀಹರಿಗೆ ಧಾರೆಯೆರೆದು ಕೊಡಲಾಯಿತೆಂದು "ಮುತ್ತೈದೆಯಾದೆ ನಾ ಮುರವೈರಿ ದಯದಿ, ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ" ಎಂಬ ರಚನೆಯಲ್ಲಿ ವಿವರಿಸಿದ್ದಾರೆ.


ಸಂಪೂರ್ಣ ಹರಿದಾಸರಾಗಿ, ದೇಹಾಭಿಮಾನಗಳನ್ನು ಪೂರ್ಣವಾಗಿ ತ್ಯಜಿಸಿ, ತಂಬೂರಿಯೇ ಶ್ರೀಹರಿಯನ್ನು ಒಲಿಸಿಕೊಳ್ಳುವ ಸಾಧನವೆಂದು ಭಾವಿಸಿದರು.  "ಹರಿಗುರು ಕರುಣದಿ ದೊರಕಿದುದೆನಗೀ.. ಪರಮ ಪಾವನ ತಂಬೂರಿ" ಎಂಬ ರಚನೆಯಲ್ಲಿ ತಂಬೂರಿಯ ಮಹತ್ವವನ್ನು ತಿಳಿಸುತ್ತಾ...

ಬಲು ಬಲು ಪರಿಯಲಿ ಹರಿದಾಸತ್ವಕೆ

ಬರುವಂತೆ ಮಾಡಿದ ತಂಬೂರಿ

ನೆಲೆಯಾದೆನು ಹರಿದಾಸರ ಮಾರ್ಗದಿ

ಕಲುಷವ ಕಳೆದಿತು ತಂಬೂರಿ.... ಎಂದಿದ್ದಾರೆ.  ಹೀಗೆ ತಂಬೂರಿ ಹಿಡಿದು, ಹರಿದಾಸರಾಗಿ, ಗೋಪಾಳ ಧರಿಸಿ, ಭಕ್ತರ ಮನೆಗಳಿಗೆ ಊಂಛವೃತ್ತಿಗೆ ಹೋಗುವುದನ್ನು ನಿತ್ಯ ನಿಯಮವಾಗಿ ಪಾಲಿಸಿದರು ಅಂಬಾಬಾಯಿಯವರು.


ಅಂಬಾಬಾಯಿಯವರು ತಮ್ಮ ಸಂಚಾರ ಕಾಲದಲ್ಲಿ ಪ್ರತಿನಿತ್ಯವೂ ಹೊಸ ಹೊಸ ಹಾಡುಗಳನ್ನು ರಚಿಸಿ, ಹಾಡಿ, ಅದನ್ನು ಸುತ್ತಲಿನ ಮಹಿಳೆಯರಿಗೆ ಹೇಳಿಕೊಡುತ್ತಿದ್ದರು.  ಅವರ ರಚನೆಗಳು ಭಗವಂತನ ಹಾಗೂ ತಮ್ಮ ಗುರುಗಳ ಪ್ರೇರಣೆಯಿಂದ ಹೇಗೆ ರಚನೆಯಾಗುತ್ತಿತ್ತು ಎಂಬುದನ್ನು ಈ ಒಂದು ಚಿಕ್ಕ ದೃಷ್ಟಾಂತದ ಮೂಲಕ ಹೇಳಬಹುದು.  ಒಮ್ಮೆ ಅಂಬಾಬಾಯಿಯವರು ತಮ್ಮ ತಂಗಿಯ ಮನೆಯಲ್ಲಿದ್ದಾಗ, ಪಕ್ಕದ ಮನೆಯ ಮಹಿಳೆಯು ಲಾಲಿಹಾಡು ಹಾಡುತ್ತಿದ್ದುದನ್ನು ಕೇಳಿ, ತನಗೂ ಅದನ್ನು ಬರೆದುಕೊಡಿರೆಂದು ಅಂಬಾಬಾಯಿಯವರ ತಂಗಿಯು ಆಸೆಯಿಂದ ಕೇಳಿದರು.  ಆದರೆ ಆ ಗೃಹಿಣಿ ಅದನ್ನು ತಿರಸ್ಕರಿಸಲು, ಅಂಬಾಬಾಯಿಯವರ ತಂಗಿಯ ಮನಸ್ಸಿಗೆ ನೋವಾಗಿತ್ತು.  ಅವರು ಅಕ್ಕನ ಹತ್ತಿರ ದುಃಖ ಹೇಳಿಕೊಂಡಿದ್ದರು.  ಅಂದು ಮಧ್ಯರಾತ್ರಿ ಅಂಬಾಬಾಯಿಯವರಿಗೆ ನಿದ್ದೆಯಿಂದ ಎಚ್ಚರಿಕೆಯಾಗಿ, ಅವರೆದ್ದು ಸ್ನಾನ ಮಾಡಿ, ದೇವರ ಮುಂದೆ ಕುಳಿತು ಲಾಲಿ ಹಾಡನ್ನು ರಚಿಸಿದರು.  ಅದೂ ಕೂಡ ವಿಶೇಷವಾಗಿ, ಸುವ್ವಾಲೆ ಧಾಟಿಯಲ್ಲಿ, ದೀರ್ಘವಾಗಿ ೩೮೯ ನುಡಿಗಳ ಅದ್ಭುತ ರಚನೆಯಾಗಿತ್ತು.  ವಸುದೇವ - ದೇವಕಿಯರ ಸೆರೆವಾಸದಿಂದ ಶುರುವಾಗಿ ಶ್ರೀಕೃಷ್ಣನ ಬಾಲಲೀಲೆಗಳ ವರ್ಣನೆ ಅತೀ ಸುಂದರವಾಗಿ ಮೂಡಿತ್ತು.


ಅಂಬಾಬಾಯಿಯವರು ಹೋದಲ್ಲೆಲ್ಲಾ ಹೆಣ್ಣು ಮಕ್ಕಳಿಗೆ ಹಾಡುಗಳನ್ನು ಹೇಳಿಕೊಡುತ್ತಿದ್ದದ್ದು ಅಷ್ಟೇ ಅಲ್ಲ, ಜೊತೆಗೆ ತಾವೇ ಬರೆದ ರಾಮಾಯಣದ ಸುಂದರಕಾಂಡವನ್ನೂ ಹಾಡಿ ಪ್ರವಚನವನ್ನು ಮಾಡುತ್ತಿದ್ದರಂತೆ.  ಅವರನ್ನು ಮನೆಗೆ ಕರೆಸಿ ಸುಂದರಕಾಂಡ ಹಾಡಿಸಿದರೆ, ಎಲ್ಲವೂ ಶುಭವಾಗುವುದೆಂಬ ನಂಬಿಕೆಯೊಂದಿಗೆ, ಗುರುಗಳ ಶಿಷ್ಯವಲಯದಲ್ಲಿ ಆಕೆ ಸುಂದರಕಾಂಡದ ಅಂಬಾಬಾಯಿ ಎಂದೇ ಗುರುತಿಸಲ್ಪಡುತ್ತಿದ್ದರು.......


ಅಂಬಾಬಾಯಿಯವರಿಗೆ ತೀರ್ಥಯಾತ್ರೆ ಮಾಡುವುದೆಂದರೆ ಅತೀ ಪ್ರಿಯವಾಗಿತ್ತು.  ತಂಗಿ ಹಾಗೂ ನಾದಿನಿಯರಿಗೆ ಬಾಣಂತನ ಮಾಡಿದಾಗ ಅವರು ಸೀರೆ ಕೊಡಿಸುವೆನೆಂದರೆ, ಬೇಡವೆಂದು ಹಣ ಪಡೆಯುತ್ತಿದ್ದರಂತೆ.  ಅದೆಲ್ಲವನ್ನೂ ಕೂಡಿಸಿಟ್ಟುಕೊಂಡು, ತಿಂಗಳುಗಟ್ಟಲೆ ತೀರ್ಥಯಾತ್ರೆಗೆ ಹೊರಟುಬಿಡುತ್ತಿದ್ದರಂತೆ.  ತೀರ್ಥಯಾತ್ರೆಗೆ ಹೊರಡುವ ಮುನ್ನ ಶಾಸ್ತ್ರೋಕ್ತವಾಗಿ ಗುರುಗಳ ಅನುಮತಿ ಪಡೆಯುತ್ತಿದ್ದರಂತೆ.  ದಾಸತ್ವದ ಸಾಮಗ್ರಿಗಳಾದ ಅಕ್ಷಯಪಾತ್ರೆ, ಕೋಲು, ತಾಳ, ಗೆಜ್ಜೆ ಹಾಗೂ ಶ್ರೀವಿಜಯದಾಸರ ಫೋಟೋಕ್ಕೆ ಪೂಜೆ, ನೈವೇದ್ಯ, ಮಂಗಳಾರತಿ ಎಲ್ಲಾ ಸಾಂಗೋಪಾಂಗವಾಗಿ ನಡೆಸುತ್ತಿದ್ದರು.  ಪೂಜೆಯ ನಂತರ ದಾಸತ್ವದ ಸಾಮಗ್ರಿಗಳನ್ನು ಗುರುಗಳಿಂದ ಸ್ವೀಕರಿಸಿ, ಆ ದಿನ ಬೆಳಿಗ್ಗೆಯೇ ರಚಿಸಿದ ದೇವರ ನಾಮಗಳನ್ನು ಪಠಿಸಿ, ಗುರುಗಳಿಗೆ ಒಪ್ಪಿಸಿ, ಗುರುದಂಪತಿಗಳಿಗೆ ನಮಸ್ಕರಿಸಿ, ಅಪರಾಧ ಕ್ಷಮಾಪಣೆ ಯಾಚಿಸಿ, ಫಲಮಂತ್ರಾಕ್ಷತೆ ಪಡೆದು ಹೊರಡುತ್ತಿದ್ದರಂತೆ.


ಅಂಬಾಬಾಯಿಯವರಿಗೆ ಆಗಿನ ಕಾಲದಲ್ಲಿಯೇ ದಿನಚರಿಯನ್ನು ಬರೆಯುವ ಅಭ್ಯಾಸವಿದ್ದಿತು.  ಅವರ ತೀರ್ಥಯಾತ್ರೆಗಳೆಲ್ಲವೂ ಬಹಳ ಸರಳವಾದ ಏರ್ಪಾಟುಗಳೊಂದಿಗಿರುತ್ತಿತ್ತು.  ಯಾರ ಮನೆಯಲ್ಲೂ ತಂಗದೆ, ದೇವಸ್ಥಾನದ ಕಟ್ಟೆಯ ಮೇಲೆ ವಾಸ್ತವ್ಯ ಹೂಡಿ, ಗೋಪಾಳ ವೃತ್ತಿಯಿಂದ ಆ ದಿನ ದೊರೆತದ್ದನ್ನು, ಯಾರಾದರೂ ಗೃಹಸ್ಥರ ಮನೆಯಲ್ಲಿ ಸ್ವಯಂಪಾಕ ತಯಾರಿಸಿ ಊಟಮಾಡುತ್ತಿದ್ದರು.  ಮತ್ತೆಲ್ಲಾ ಸಮಯ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಹಾಡಲು ಪ್ರಾರಂಭಿಸಿ ಬಿಡುತ್ತಿದ್ದರು.  ಅವರ ಸುಶ್ರಾವ್ಯ ಕಂಠದಿಂದ ಹೊಮ್ಮುವ ಹೊಸ ಹೊಸ ದೇವರನಾಮಗಳನ್ನು ಕೇಳಿ ಊರಿನ ಹೆಂಗೆಳೆಯರು ಬೆರಗಾಗಿ, ಇದು ಯಾವ ದಾಸರ ರಚನೆ, ನಮಗೂ ಬರೆದುಕೊಡಿ ಎಂದು ಕೇಳುತ್ತಿದ್ದರು.  ರಚನೆಗಳು ತಮ್ಮದೆಂದು ಎಲ್ಲೂ ಹೇಳಿಕೊಳ್ಳದೆ "ಗೋಪಾಲಕೃಷ್ಣ ದಾಸ"ರ ರಚನೆಗಳೆಂದು ಹೇಳುತ್ತಾ, ಒಂದು ಕೇಳಿದರೆ ನಾಲ್ಕು ದೇವರನಾಮಗಳನ್ನು ಬರೆದುಕೊಡುತ್ತಿದ್ದರಂತೆ.  ಸದಾ ಕಾಗದ, ಲೇಖನಿಯ ಸಹಿತವೇ ತೀರ್ಥಯಾತ್ರೆ ಹೊರಡುತ್ತಿದ್ದರಂತೆ.


ಅಂಬಾಬಾಯಿಯವರು ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾಗ, ಅವರಿಗೆ ತಂದೆ ಮುದ್ದು ಮೋಹನದಾಸರು, ಅಂಕಿತಕೊಟ್ಟು ದಾಸಪಂಥದ ದಾರಿ ತೋರಿಸಿದರು.  ಆದ್ದರಿಂದ ಅಂಬಾಬಾಯಿಯವರಿಗೆ ತಮ್ಮ ಗುರುಗಳ ಮೇಲೆ ಅಪಾರವಾದ ಗೌರವ, ಪ್ರೀತಿ ಹಾಗೂ ಪ್ರಭಾವ ಇದ್ದಿತು.  ತಮ್ಮ ಗುರುಗಳನ್ನು ಕುರಿತು ಅಂಬಾಬಾಯಿಯವರು ಸುಮಾರು ೫೦ ಕೃತಿಗಳನ್ನಾದರೂ ರಚಿಸಿರುವರು.  "ತೋರೆನಗೆ ಶ್ರೀಕೃಷ್ಣ  ತೋಯಜಾಂಬ" ಎಂಬ ಒಂದು ರಚನೆಯಲ್ಲಿ, ಅಂಬಾಬಾಯಿಯವರು ತಮ್ಮ ಗುರುಗಳಾದ ಮುದ್ದುಮೋಹನದಾಸರು ತಮ್ಮ ಪ್ರಿಯಶಿಷ್ಯರಿಗೆ ನೀಡಿದ ೧೬೧ ಅಂಕಿತಗಳು (ಶ್ರೀಹರಿಯ ನಾಮಗಳು) ಉಲ್ಲೇಖಿಸಲ್ಪಟ್ಟಿವೆ.  ಈ ಎಲ್ಲಾ ಹರಿದಾಸರುಗಳ ಪರಿಚಯವೂ ಬಹುಶಃ ಅಂಬಾಬಾಯಿಯವರಿಗಿತ್ತು.  ಅವರು ಉಲ್ಲೇಖಿಸಿರುವಂತಹ ಹರಿದಾಸರುಗಳಲ್ಲಿ ಅನೇಕರು ಅಜ್ಞಾತವಾಗಿಯೇ ಉಳಿದುಬಿಟ್ಟಿರುವರು.


ಸುಮಾರು ಹತ್ತು ವರ್ಷಗಳ ಕಾಲ, ದಾಸತ್ವದಿಂದ, ಬದುಕಿನಲ್ಲಿ ಅರ್ಥವನ್ನು ಕಂಡುಕೊಂಡಿದ್ದ ಅಂಬಾಬಾಯಿಯವರಿಗೆ, ಅವರ ಗುರುಗಳ ನಿಧನದಿಂದ, ಬಹಳ ದೊಡ್ಡ ಪೆಟ್ಟು ಬೀಳುವುದು.  ಅವರಿಗೆ ಅದೊಂದು ಆಘಾತವಾಗುವುದು.  ಗುರುಗಳ ಅಗಲಿಕೆಯ ನೋವನ್ನು ದೂರವಾಗಿಸಿಕೊಳ್ಳಲು, ಅಂಬಾಬಾಯಿಯವರು ತಮ್ಮ ಉಳಿದ ದಿನಗಳನ್ನು ತೀರ್ಥಯಾತ್ರೆಯಲ್ಲಿಯೇ ಕಳೆಯುತ್ತಾರೆ.  ೪೦ ವಯಸ್ಸಿನ ವಿರಾಗಿಣಿ, ಹರಿದಾಸಿ, ಗೊತ್ತು ಗುರಿಯಿಲ್ಲದ ಅಲೆದಾಟದಲ್ಲಿ ಎಲ್ಲಿ, ಹೇಗೆ, ತೀರಿಕೊಂಡರು ಎಂಬುದು ದಾಖಲಾಗಿಲ್ಲ.  ೪೩ನೆಯ ವಯಸ್ಸಿನಲ್ಲಿ ಅವರು ಕಾವೇರಿ ನದಿಯಲ್ಲಿ ಜಲಸಮಾಧಿಯಾದರೆಂದು, ಯಾರೋ ಹೇಳಿದ್ದನ್ನು ರಮಾಕಾಂತ ವಿಠಲರು ಹಾಗೂ ನಿತ್ಯಾನಂದ ವಿಠಲರು, ಅಂಬಾಬಾಯಿಯವರ ಸಂಬಂಧಿಗಳಿಗೆ ತಿಳಿಸಿದರಂತೆ.  ಆದರೆ ಸತ್ಯ ಏನೆಂದು ಯಾರಿಗೂ ತಿಳಿದಿಲ್ಲ.


ಅಂಬಾಬಾಯಿಯವರು ಸಾಹಿತ್ಯದ ರಚನೆಯನ್ನು ಪ್ರಾರಂಭಿಸಿದ ನಂತರ ಜೀವಿಸಿದ್ದ ಕಾಲವು ಹೆಚ್ಚೇನೂ ಇಲ್ಲ.  ಕೇವಲ ಒಂದೂವರೆ ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ ಅವರು ರಚಿಸಿದ್ದ ಸುಮಾರು ೩೦೦ ಕೃತಿಗಳ ಹಸ್ತಪ್ರತಿಗಳು ದೊರಕಿವೆಯಂತೆ.  ಅವರ ಅನೇಕ ರಚನೆಗಳು ಬೇರೆಯವರ ಅಂಕಿತಗಳಿಂದಲೂ ಪ್ರಕಟವಾಗಿರಬಹುದು (ಅಂಕಿತಗಳಲ್ಲಿನ ಸಾಮ್ಯತೆಯಿಂದಾಗಿ) ಎಂಬುದನ್ನು ಅವರ ಹಸ್ತಪ್ರತಿಗಳನ್ನು ಸಂಪಾದಿಸಿದ ಡಾ. ಅನಂತಪದ್ಮನಾಭರಾವ್ ಅವರು ದಾಖಲಿಸಿರುವರು.  ಅಂಬಾಬಾಯಿಯವರು ಆಶುಕವಿಯಿತ್ರಿಯಂತೆ ಹಾಡುಗಳನ್ನು ರಚಿಸುತ್ತಿದ್ದರು.  ಅಪಾರವಾದ ಸಾಹಿತ್ಯದ ಹಸ್ತಪ್ರತಿಗಳು ಎಲ್ಲೆಲ್ಲಿಯೋ ಹಂಚಿಹೋಗಿರಬಹುದು, ಆದ್ದರಿಂದ ಇಂತಹ ಪ್ರತಿಭಾವಂತ ಹರಿದಾಸಿಯಾದ ಅಂಬಾಬಾಯಿಯವರು ಅಜ್ಞಾತರಾಗಿಯೇ ಉಳಿದುಬಿಟ್ಟರು.  ೧೯೪೦ಕ್ಕಿಂತ ಮುಂಚಿನ ದಿನಗಳಲ್ಲಿ "ಪರಮಾರ್ಥ ಪತ್ರಿಕೆ"ಯಲ್ಲಿ ಇವರ ರಚನೆಗಳು ಕೆಲವು ಪ್ರಕಟವಾಗಿದ್ದವಂತೆ.  ಅದು ಬಿಟ್ಟರೆ, ಅಂಬಾಬಾಯಿಯವರ ರಚನೆಗಳು ಜನರ ಬಾಯಲ್ಲಿ ಉಳಿದು, ಹಾಗೇ ಪ್ರಚಾರವಾಗಿರುವುದೇ ಹೆಚ್ಚು. 


ಅಂಬಾಬಾಯಿಯವರು ತಮ್ಮ ರಚನೆಗಳಲ್ಲಿ ಕ್ರಮಬದ್ಧವಾದ ಶಿಸ್ತು ಪಾಲಿಸಿರುವುದನ್ನು ನಾವು ಕಾಣಬಹುದಾಗಿದೆ.  ಪಲ್ಲವಿ, ಅನುಪಲ್ಲವಿಗಳ ನಂತರ ಪ್ರತಿ ಚರಣವೂ ಒಂದೇ ಗಾತ್ರದಲ್ಲಿ, ಪ್ರಾಸಬದ್ಧವಾಗಿ, ಲಾಲಿತ್ಯಮಯವಾಗಿ, ಸುಲಭ ಹಾಗೂ ಸುಲಲಿತ ಉಚ್ಛಾರಣೆಯೊಂದಿಗೆ ಸಾಗುವುದು.  ರಾಗ ಸಂಯೋಜನೆಯನ್ನು ಮಾಡದಿದ್ದರೂ ಕೂಡ, ಯಾರು ಬೇಕಾದರೂ ಸರಳವಾಗಿ ಒಂದು ರೀತಿಯ, ತಮ್ಮ ಮನಕ್ಕೆ ಮುದಕೊಡುವಂತಹ ಲಯದಲ್ಲಿ ಪಠಿಸುತ್ತಾ ಸಾಗಬಹುದು.  ಇವರ ರಚನೆಗಳಲ್ಲಿ ಅನೇಕ ವಿಶೇಷತೆಗಳಿರುವುವು.  ದಾಸ ಸಾಹಿತ್ಯಕ್ಕೂ, ನಮ್ಮ ಕಸ್ತೂರಿ ಕನ್ನಡ ಭಾಷೆಗೂ ಇವರ ಕೊಡುಗೆ ಅತ್ಯಂತ ಸ್ಮರಣೀಯವಾಗಿರುವುದು.  


ಇಲ್ಲಿ ನಾನು ಅತ್ಯಂತ ಸಂತೋಷ ಹಾಗೂ ಹೆಮ್ಮೆಯಿಂದ ತಿಳಿಸುವ ಒಂದು ಕೃತಿ ಯಾವುದೆಂದರೆ, ಅಂಬಾಬಾಯಿಯವರು ನಮ್ಮೂರು ಭದ್ರಾವತಿಯ ಕುರಿತು ರಚಿಸಿರುವುದು.  "ಕೇಶವ ಮಾಧವತೀರ್ಥ ಯತಿ, ವಾಸಿಪ ವೃಂದಾವನದಲ್ಲಿ ಖ್ಯಾತಿ" ಎಂದು ಪ್ರಾರಂಭವಾಗುವ ರಚನೆಯಲ್ಲಿ ಭದ್ರಾವತಿಯ ವರ್ಣನೆ ಅತ್ಯಂತ ಮನೋಹರವಾಗಿ ಮೂಡಿ ಬಂದಿದೆ.....


ಕೇಶವ ಮಾಧವತೀರ್ಥ ಯತಿ, 

ವಾಸಿಪ ವೃಂದಾವನದಲ್ಲಿ ಖ್ಯಾತಿ   (ಪಲ್ಲವಿ)


ವಾಸುದೇವನ ಭಕ್ತ ಸುಜನಕೆ ಪ್ರೀತಿ

ಸೂಸುತ ಪೊರೆಯುವ ಕರುಣಿ ಪ್ರತೀತಿ    (ಅನುಪಲ್ಲವಿ)


ಭದ್ರಾವತಿಯ ತೀರ ನರಸಿಂಹ ಕ್ಷೇತ್ರ

ಭದ್ರಾವತೀ ಪುರ ಮಠದಿ ಸತ್ಪಾತ್ರಾ

ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ

ಪೊದ್ದಿಸಿಕೊಂಡಿಪ್ಪ ಶಿರದಿ ಪವಿತ್ರ   || ೧ ||


ಸ್ವಪ್ನದಿ ತೋರಿದ ಯತಿರೂಪದಿಂದ

ವಪ್ಪದಿ ದರ್ಶನಕೆ ಬಾರೆಂದು ನುಡಿದಾ

ಅಪ್ಪ ತಿಮ್ಮಪ್ಪನ ಸ್ತುತಿಯನಾಲಿಸಿದಾ

ಬಪ್ಪ ನರ ದರ್ಶನಕೆ ಮುಂದೆ ನಿಲ್ಲಿಸಿದಾ  || ೨ ||


ಎನ್ನಿಂದ ಸಾರೋದ್ಧಾರ ಪದವನ್ನು

ಎನ್ನಲ್ಲೆ ನಿಂತು ತಾ ಬರಸಿದ ಘನ್ನ

ತನ್ನ ದೇವತ್ವವ ತೋರ್ದ ಪ್ರಸನ್ನ

ಇನ್ನಿಂಥ ಕರುಣಿಯ ಕಾಣೆ ನಾ ಮುನ್ನ  || ೩ ||


ಮಧ್ವಕರ ಸಂಜಾತ ಮಾಧವರಂತೇ

ಶುದ್ಧ ಈ ಯತಿಕುಲ ಸಂಜಾತನಂತೇ

ಭದ್ರಾವತೀ ಪುರದಲ್ಲಿ ವಾಸಂತೇ

ಮುದ್ದು ಕೇಶವ ಮಾಧವಾತೀರ್ಥನಂತೆ  || ೪ ||


ಕಾಮಿತಾರ್ಥವ ನಂಬೆ ಕೊಡುತಿಪ್ಪನಂತೆ

ಕಾಮಚಾರಿಗಳೀಗೆ ತೋರ್ಪನಲ್ಲಂತೆ

ಸ್ವಾಮಿ ರಾಮನ ಜಪಮೌನ ವ್ರತವಂತೆ

ಈ ಮಹಿಯಲಿ ಯೋಗಿ ಅವಧೂತನಂತೆ  || ೫ ||


ಭಾಗವತಾದಲ್ಲಿ ಬಹು ದೀಕ್ಷಾಯುತರು

ಬಾಗಿದ ಜನರಿಗೆ ಪ್ರೇಮ ತೋರುವರು

ಭಾಗವತವ ರಾಜಗ್ ಹೇಳಿದರಿವರು

ಬೇಗರಿತುಕೊಳ್ಳಿರಿ ಬಹುಗೋಪ್ಯಯುತರು  || ೬ ||


ನಂಬಿದ ಜನರಿಂದ ಹಂಬಲೊಂದಿಲ್ಲ

ತುಂಬಿದ ಭಕ್ತಿ ಆತ್ಮಾರ್ಪಣೆ ಬಲ್ಲ

ಸಂಬ್ರಹ್ಮದಿಂ ನಲಿವ ಗುರುಭಕ್ತಿ ಬೆಲ್ಲ

ಕುಂಭಿಣಿ ಮೂಢರಿಗೀವನು ಬಲ್ಯಾ  || ೭ ||


ಎನ್ನ ಶ್ರೀ ಗುರು ತಂದೆ ಮುದ್ದುಮೋಹನ್ನ

ಘನ್ನರ ಕೃಪೆಯಿಂದ ಈ ಮುನಿವರನಾ

ಸನ್ನುತ ಸುಗುಣವ ಕಂಡ ನಾ ನಿನ್ನ

ಚನ್ನ ಶ್ರೀ ಲಕ್ಷ್ಮೀ ನರಸಿಂಹ ತೋರ್ದರನಾ  || ೮ ||


ಸ್ವಾಪರೋಕ್ಷಿಯ ವೃಂದಾವನಸ್ಥಾ

ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ

ಗೋಪಾಲಕೃಷ್ಣವಿಠಲನ ಕೃಪಾ ಪಾತ್ರಾ

ಕಾಪಾಡು ತವ ದಾಸದಾಸರ ನಿರುತಾ  || ೯ ||


ಕೇಶವ ಮಾಧವತೀರ್ಥ ಯತಿ, 

ವಾಸಿಪ ವೃಂದಾವನದಲ್ಲಿ ಖ್ಯಾತಿ  -  ಶ್ರೀ ಕೇಶವ ಮಾಧವತೀರ್ಥರು, ಪ್ರಶಾಂತ ಪರಿಸರವಾದ,  ಶ್ರೀಮದ್ ಅಕ್ಷೋಭ್ಯತೀರ್ಥರು ತಪಗೈದ ಗ್ರಾಮದ ಸಮೀಪದಲ್ಲಿರುವ ಮಜ್ಜಿಗೇನ ಹಳ್ಳಿಯನ್ನು ತಮ್ಮ ವಾಸಕ್ಕೆ ಆಯ್ದುಕೊಂಡಿದ್ದರು.  ಅಲ್ಲಿಂದ ಶ್ರೀಗಳವರು ಭದ್ರಾವತಿಗೆ ಬಂದು ಭದ್ರಾದಂಡೆಯ ಮೇಲೆ ತಮ್ಮ ಮಠವನ್ನು ಕಟ್ಟಿಕೊಂಡು ಜಪ, ತಪಾನುಷ್ಠಾನ ಮಾಡುತ್ತಲಿದ್ದು ಅಲ್ಲಿ ತಮ್ಮ ಶೇಷಾಯುಸ್ಯವನ್ನು ಕಳೆದು ತಮ್ಮ ಶಿಷ್ಯರಲ್ಲಿ ಒಬ್ಬರನ್ನು ತಮ್ಮ ಪೀಠಕ್ಕೆ ನೇಮಿಸಿ ತುರಿಯಾಶ್ರಮವನ್ನಿತ್ತು ಶ್ರೀಪ್ರಾಜ್ಞಮಾಧತೀರ್ಥರೆಂದು ನಾಮಕರಣ ಮಾಡಿದರು.


ಮಧ್ವಕರ ಸಂಜಾತ ಮಾಧವರಂತೇ

ಶುದ್ಧ ಈ ಯತಿಕುಲ ಸಂಜಾತನಂತೇ

ಭದ್ರಾವತೀ ಪುರದಲ್ಲಿ ವಾಸಂತೇ

ಮುದ್ದು ಕೇಶವ ಮಾಧವಾತೀರ್ಥನಂತೆ  - ಶ್ರೀಕೇಶವ ಮಾಧವತೀರ್ಥರು ಭದ್ರಾವತಿಯಲ್ಲಿ ಶ್ರೀ ರಾಮಧ್ಯಾನತತ್ಪರರಾದರು.  ಇವರ ವೃಂದಾವನವನ್ನು ಕೋಟೆಯಲ್ಲಿ ಭದ್ರಾನದಿ ದಡದಲ್ಲಿ ಶ್ರೀಪ್ರಾಜ್ಞ ಮಾಧವತೀರ್ಥರು ಪ್ರತಿಷ್ಠಾಪಿಸಿದರು.  ಮುಂದೆ ಅವರು ಸಂಚಾರ ಕೈಗೊಂಡರು.  ಶ್ರೀ ಕೇಶವ ಮಾಧವತೀರ್ಥರು ಆಷಾಢ ಶುಕ್ಲ ಷಷ್ಠಿಯಂದು ಶ್ರೀ ರಾಮಧ್ಯಾನತತ್ಪರರಾದರು.  ಅವರ ಶ್ರೀ ವೀರರಾಮನು ಅವರನ್ನು ತನ್ನಲ್ಲಿಗೆ ಕರೆಸಿಕೊಂಡು ತನ್ನ ಕರುಣಾ ಪ್ರವಾಹವನ್ನು ಅವರ ಮೇಲೆ ಹರಿಸಿದನು.  ಭದ್ರಾನದಿಯ ದಂಡೆಯ ಮೇಲೆ ಬೃಂದಾವನಸ್ಥರಾಗಿ ವಿರಾಜಮಾನರಾಗಿರುವರು.


ಭದ್ರಾವತಿಯ ತೀರ ನರಸಿಂಹ ಕ್ಷೇತ್ರ

ಭದ್ರಾವತೀ ಪುರ ಮಠದಿ ಸತ್ಪಾತ್ರಾ

ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ

ಪೊದ್ದಿಸಿಕೊಂಡಿಪ್ಪ ಶಿರದಿ ಪತಿತ್ರ   -    ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ಸಹ್ಯಾದ್ರಿಯ ಒಡಲಲ್ಲಿ ತನ್ನ ಉಗಮಸ್ಥಾನ ಹೊಂದಿರುವ ಭದ್ರಾನದಿಯು ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣ ದಿಕ್ಕಿನಿಂದ ಪ್ರವೇಶಿಸುತ್ತದೆ.  ಹೀಗೆ ಪ್ರವೇಶಿಸುವಾಗ, ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಎಡಕ್ಕೆ ತಿರುಗಿ ಪಶ್ಚಿಮ ವಾಹಿನಿಯಾಗುತ್ತದೆ. ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ತಿರುಗುವ ಈ ತಿರುವಿಗೆ ಚಕ್ರತೀರ್ಥ ಎನ್ನುತ್ತಾರೆ. ಈ ಚಕ್ರತೀರ್ಥದ ಬಳಿ ಪುರಾಣ ಪ್ರಸಿದ್ಧ ವಂಕೀ ಮಹರ್ಷಿಗಳ ಆಶ್ರಮವಿತ್ತಂತೆ. ಈ ವಂಕೀ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ (ವಿಕಿ ಪಿಡಿಯ ಕೃಪೆ).  ಸ್ಥಳ ಪುರಾಣದಂತೆ  ಶ್ರೀ ವಂಕಿ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹದೇವರನ್ನು ಪ್ರತ್ಯಕ್ಷಿಸಿಕೊಂಡರೆಂದು ಪ್ರತೀತಿ.  ವಂಕಿ ಮಹರ್ಷಿಗಳು ಇಲ್ಲಿ ವಾಸಿಸುತ್ತಿದ್ದರಿಂದ ಈ ಸ್ಥಳಕ್ಕೆ ’ವಂಕಿಪುರ’ವೆಂದು ಹೆಸರು ಬಂದಿತ್ತು.  ಶ್ರೀ ವಾದಿರಾಜ ಸ್ವಾಮಿಗಳು ಭದ್ರಾ ನದಿಯನ್ನು ತಮ್ಮ ’ತೀರ್ಥಪ್ರಬಂಧ’ದಲ್ಲಿ "ಹೃತಪಾಪನಿದ್ರಾಂ ವಿಮುಕ್ತಿ ಪದ್ಯಾಂ ವಿಮಲೈಕ ಸಾಧ್ಯಾಂ ಶ್ರಿತೋಸ್ಮಿ" - ಪರಿಹರಿಸಲ್ಪಟ್ಟ ಪಾಪವೆಂಬ ನಿದ್ರೆಯುಳ್ಳ, ಮೋಕ್ಷದ ಸೋಪಾನ ರೂಪಳಾದ, ನಿರ್ಮಲರಿಂದ ಮಾತ್ರವೇ ಹೊಂದಲು ಯೋಗ್ಯಳಾದ, ಭದ್ರಾ ನದಿಯನ್ನು ಆಶ್ರಯಿಸಿದ್ದೇವೆ ಎಂದು ಉಲ್ಲೇಖಿಸಿರುವರು.


ಮುಂದೆ ಹದಿಮೂರನೇ ಶತಮಾನದಲ್ಲಿ ಹೊಯ್ಸಳರ ವೀರನರಸಿಂಹನು (ವಿಷ್ಣುವರ್ಧನನ ಮೊಮ್ಮಗ ಮತ್ತು ಎರಡನೇ ಬಲ್ಲಾಳನ ಮಗ) ವಂಕೀ ಮಹರ್ಷಿ ಮತ್ತು ಲಕ್ಷ್ಮೀನರಸಿಂಹ ಸ್ಥಳ ಪುರಾಣವಿದ್ದ ಈ ಪ್ರದೇಶದಲ್ಲಿ ಭವ್ಯವಾದ ಲಕ್ಷ್ಮೀನರಸಿಂಹ ದೇವಾಲಯವನ್ನು ಹೊಯ್ಸಳ ಶಿಲ್ಪಕಲಾ ಮಾದರಿಯಲ್ಲಿ ಕಟ್ಟಿಸಿ ಕ್ರಿ.ಶ. ೧೨೨೪ ನೇ ಇಸವಿಯ ವ್ಯಯನಾಮ ಸಂವತ್ಸರದ ದ್ವಿತೀಯ ಶುದ್ಧ ತ್ರಯೋದಶಿಯಂದು ಲೋಕಾರ್ಪಣೆ ಮಾಡಿದನು. ಇಂದಿಗೂ ಈ ದೇವಾಲಯ ಭದ್ರಾವತಿಯ ಹಳೇನಗರದಲ್ಲಿದ್ದು ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ (ವಿಕಿ ಪಿಡಿಯಾ ಕೃಪೆ).


ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಇಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಿದ ನಂತರ ವಂಕಿಪುರವು ಶ್ರೀ ನಾಲ್ವಡಿ ಕೃಷ್ಣರಾಜ ವಡೆಯರ್ ಆಳ್ವಿಕೆಯಲ್ಲಿ  "ಭದ್ರಾವತಿ"ಯಾಗಿ ಮರು ನಾಮಕರಣಗೊಂಡಿದೆ.  ಭದ್ರಾ ನದಿಯ ತೀರದಲ್ಲಿರುವ ಭದ್ರಾವತಿಯಲ್ಲಿ ನಂತರದ ದಿನಗಳಲ್ಲಿ ಕಾಗದ ಕಾರ್ಖಾನೆಯೂ ಕೂಡ ಸ್ಥಾಪಿಸಲ್ಪಟ್ಟಿತು.  ಹಿಂದೆ ವಶಿಷ್ಟ ಋಷಿಗಳಿಂದ ಭದ್ರಾನದಿಯ ಮಹಾತ್ಮ್ಯವನ್ನು ತಿಳಿದ ಶ್ರೀ ರಾಮಚಂದ್ರನು ಪಶ್ಚಿಮವಾಹಿನಿಯಾದ ಭದ್ರಾನದಿಯಲ್ಲಿ ಸ್ನಾನ ಮಾಡಿದನಂತೆ.  ಸ್ನಾನಾನಂತರ ಕಲ್ಯಾಣ ಗುಣಪರಿಪೂರ್ಣನಾದ ಶ್ರೀ ದಾಶರಥಿ ಶ್ರೀ ರಾಮಚಂದ್ರ ಸ್ವಾಮಿಯ ವಂಕಿಋಷಿಗಳಿಗೆ ಪ್ರತ್ಯಕ್ಷನಾದ ಶ್ರೀ ನರಸಿಂಹನನ್ನು ಆರಾಧಿಸಿದನಂತೆ.  ಭದ್ರಾವತಿಯಲ್ಲಿ ಶ್ರೀರಾಮಚಂದ್ರ ಸೀತಾ, ಲಕ್ಷ್ಮಣ ಸಮೇತ ಇರುವ ದೇವಸ್ಥಾನವೂ ಇದೆ.  ಇಲ್ಲೇ ಈಶ್ವರ ಕೂಡ ಲಿಂಗರೂಪಿಯಾಗಿ ಇದ್ದಾನೆ.  ಜೊತೆಗೆ ಸುಬ್ರಹ್ಮಣ್ಯನ ಸನ್ನಿಧಾನವೂ ಇದೆ. 


ಮಧ್ವಕರ ಸಂಜಾತ ಮಾಧವರಂತೇ

ಶುದ್ಧ ಈ ಯತಿಕುಲ ಸಂಜಾತನಂತೇ

ಭದ್ರಾವತೀ ಪುರದಲ್ಲಿ ವಾಸಂತೇ

ಮುದ್ದು ಕೇಶವ ಮಾಧವತೀರ್ಥನಂತೆ  - ಶ್ರೀ ಮಾಧವ ತೀರ್ಥರ ಕರಕಮಲಸಂಜಾತರಾದ ಶ್ರೀ ಕೇಶವ ಮಾಧವ ತೀರ್ಥರ ಮಠವು ಉತ್ತರಾಭಿಮುಖವಾಗಿದೆ.  ರಸ್ತೆಗೆ ಹೊಂದಿಕೊಂಡಿದೆ.  ಬೃಂದಾವನವನ್ನು ಹಿಂದೆ ಮೈಸೂರ್ ಸಂಸ್ಥಾನದ ದಿವಾನರಾಗಿದ್ದ ಶ್ರೀ ಮಿರ್ಜಾ ಇಸ್ಮಾಯಿಲ್ ಅವರು ಕಟ್ಟಿಸಿಕೊಟ್ಟಿರುತ್ತಾರೆ.  ಮಠದ ಮುಂಬಾಗಿಲಿನಲ್ಲಿ ನಿಂತರೆ ಶ್ರೀ ಕೇಶವ ಮಾಧವತೀರ್ಥರ ಬೃಂದಾವನ ಹಾಗೂ ಬೃಂದಾವನದ ಹಿಂಬದಿಯಲ್ಲಿ ಮುಖ್ಯಪ್ರಾಣನ ವಿಗ್ರಹವಿರುವುದು ಗೋಚರವಾಗುತ್ತದೆ.  ಪಾರ್ಶ್ವಮುಖ ಪ್ರಾಣದೇವರ ವಿಗ್ರಹವು ಸುಂದರವಾಗಿದೆ. ಬೃಂದಾವನದಲ್ಲಿ ಯತಿಗಳು ಸಾಕ್ಷಾತ್ ನೆಲೆಸಿದ್ದಾರೆ ಎಂಬ ಪ್ರತೀತಿಯಿದೆ.  ಬ್ರಾಹ್ಮೀ ಮುಹೂರ್ತದಲ್ಲಿ ಯತಿಗಳು ಸಾಕಾರವಾಗಿ ನದಿಯಲ್ಲಿ ಸ್ನಾನ ಮಾಡಿ ಬರುವುದನ್ನು ಕಂಡವರಿದ್ದಾರೆ.  ದಾರಿಗೆ ಅಡ್ಡಲಾಗಿ ಮಲಗಿದ್ದವರನ್ನು ಎಚ್ಚರಿಸಿ ಹೋಗಿರುವ ಅನುಭವ ಅನೇಕರಿಗೆ ಆಗಿದೆ.  ನಂಬಿಕೆಯಿಂದ ಯತಿಗಳಿಗೆ ಶರಣಾಗಿ, ಸೇವೆ ಮಾಡಿದ ಅನೇಕರಿಗೆ ಅವರ ಸಮಸ್ಯೆಗಳು ಪರಿಹಾರವಾಗಿರುವುದು.  ಅಂಬಾಬಾಯಿಯವರ ಈ ಸಾಲುಗಳು "ಸ್ವಾಪರೋಕ್ಷಿಯ ವೃಂದಾವನಸ್ಥಾ ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ" ಯತಿಗಳು ಸಾಕ್ಷತ್ ನೆಲೆಸಿರುವರೆಂಬುದನ್ನೇ ಸೂಚಿಸುತ್ತದೆ.


ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಅಂಬಾಬಾಯಿಯವರು ನಮ್ಮೂರು ಭದ್ರಾವತಿಗೂ ಬಂದಿದ್ದರು ಮತ್ತು ನಮ್ಮೂರಿನ ಮಹಿಮೆಯನ್ನು ಕುರಿತು ಹಾಡು ರಚಿಸಿರುವರೆಂಬುದೇ ನನಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ.  ಎಂಥಹ ಮಹಿಮೆಯುಳ್ಳ ಸ್ಥಳ ನಮ್ಮ "ಭದ್ರಾವತಿ".





ಆಧಾರ ಪುಸ್ತಕಗಳು :

೧) ಸಮಗ್ರ ದಾಸ ಸಾಹಿತ್ಯ  - ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ

೨) ಶ್ರೀ ಕೇಶವ ಮಾಧವತೀರ್ಥರು - ಎಸ್ ಕೆ ಬದರೀನಾಥ್ 


Monday, February 17, 2020

ಗಾನ ಯಜ್ಞ

ಕರ್ನಾಟಕ ಗಾನಕಲಾ ಪರಿಷತ್ತಿನ ಸುವರ್ಣ ಮಹೋತ್ಸವ ನರಸಿಂಹರಾಜ ಕಾಲೋನಿ ರಾಮಮಂದಿರದಲ್ಲಿ ಒಂದು ವಾರದಿಂದ ನಡೆಯುತ್ತಿದೆ.  ೫೦ ವರ್ಷಗಳನ್ನು ಪೂರೈಸಿರುವ ಸಂಸ್ಠೆಯು ಈ ವಿಶೇಷ ಸಮಾರಂಭವನ್ನು ಬಹಳ ಅದ್ಧೂರಿಯಿಂದ ಆಚರಿಸಿದೆ.  ಕರ್ನಾಟಕ ಸಂಗೀತದ ಭೂರೀ ಭೋಜನವನ್ನು ಬಡಿಸಿದೆ.  ಅತ್ಯಂತ ಆಸಕ್ತಿಯಿಂದ ಹಮ್ಮಿಕೊಂಡಿರುವ ಅನೇಕ ವಿಧವಾದ ಕಾರ್ಯಕ್ರಮಗಳು ಸಂಗೀತ ಪ್ರಿಯರನ್ನೂ, ಸಂಗೀತ ವಿದ್ಯಾರ್ಥಿಗಳನ್ನೂ, ಆಸಕ್ತರನ್ನೂ ಸೆಳೆದಿದೆ.  ಸುವರ್ಣ ಮಹೋತ್ಸವಕ್ಕೆಂದೇ ವಿಶೇಷವಾಗಿ ಆಹ್ವಾನ ಪತ್ರಿಕೆಯನ್ನು ಪಿಟೀಲಿನಾಕರದಲ್ಲಿ ಮಾಡಿಸಲಾಗಿತ್ತು.  ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳು, ಸಂಸ್ಥೆಯನ್ನು ಪ್ರಾರಂಭಿಸಿದ ದಿಗ್ಗಜರ ಭಾವಚಿತ್ರಗಳ ಜೊತೆಗೆ ವಿವರವಾಗಿ ಕಾರ್ಯಕ್ರಮಗಳ ಪಟ್ಟಿಯನ್ನೂ ಮುದ್ರಿಸಲಾಗಿತ್ತು.  ವಿವಿಧ ವಿದ್ವತ್ತ್ ಗೋಷ್ಠಿಗಳನ್ನು ಪ್ರತಿದಿನವೂ ನಡೆಸಲಾಯಿತು.  ಯುವ ಪ್ರತಿಭೆಗಳಿಗೆ ಅವಕಾಶಗಳನ್ನೂ, ಹಿರಿಯ ಸಾಧಕರಿಗೆ ಗೌರವವನ್ನೂ, ಪ್ರಚಲಿತದಲ್ಲಿರುವ ಹಿರಿಯ ಕಲಾವಿದರ ಕಛೇರಿಗಳನ್ನೂ ಏರ್ಪಡಿಸಲಾಗಿತ್ತು.

ನಾನು ಪರಿಷತ್ತಿನ ಆಜೀವ ಸದಸ್ಯೆ.  ನನಗೆ ಆಹ್ವಾನ ಪತ್ರಿಕೆ ತಲುಪಿದಾಗಲೇ ತುಂಬಾ ಸಂತೋಷವಾಯಿತು.  ನಿಧಾನವಾಗಿ ತೆರೆದು ನೋಡಿದಾಗ ಮೊದಲ ನೋಟಕ್ಕೇ ನನ್ನನ್ನು ಆಕರ್ಷಿಸಿದ ಕಾರ್ಯಕ್ರಮವೆಂದರೆ ಪ್ರತಿದಿನವೂ ಬೆಳಿಗ್ಗೆ ೯ ರಿಂದ ೧೦ ಗಂಟೆಯವರೆಗೆ ನಡೆಯುವ "ಗಾನಯಜ್ಞ".  ನಾನು ಇದುವರೆಗೂ ಗಾನಯಜ್ಞವೆಂಬ ಕಾರ್ಯಕ್ರಮವನ್ನು ನೋಡಿರಲೂ ಇಲ್ಲ, ಕೇಳಿರಲೂ ಇಲ್ಲ.  ಪ್ರತಿದಿನವೂ ಒಬ್ಬೊಬ್ಬ ವಾಗ್ಗೇಯಕಾರರ ರಚನೆಗಳ ಗಾನಯಜ್ಞ ನಡೆಯಿತು.  ೭ನೆಯ ತಾರೀಖಿನ ಕಾರ್ಯಕ್ರಮ ನಮ್ಮ ಮೈಸೂರು ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ವಡೆಯರ್ ಅವರ ರಚನೆಗಳ ಕುರಿತಾದದ್ದು.  ಮಹಾರಾಜರು ಶ್ರೀವಿದ್ಯ ಉಪಾಸಕರಾಗಿದ್ದರು ಮತ್ತು ಅವರ ರಚನೆಗಳಲ್ಲಿ "ಶ್ರೀವಿದ್ಯಾ" ಎಂಬ ಅಂಕಿತವನ್ನು ಬಳಸುತ್ತಿದ್ದರು.  ಅವರ ಎಲ್ಲಾ ಕೃತಿಗಳೂ ವಿಶೇಷವಾದ ರಾಗಗಳು ಹಾಗೂ ತಾಳಗಳಲ್ಲಿ ರಚಿಸಲ್ಪಟ್ಟಿವೆ.  ಆಹ್ವಾನ ಪತ್ರಿಕೆಯಲ್ಲಿ ಯಾವ ವಾಗ್ಗೇಯಕಾರರ, ಯಾವ ಯಾವ ರಚನೆಗಳನ್ನು ಹಾಡಲ್ಪಡುವುದು ಎಂಬ ಪಟ್ಟಿ ಕೂಡ ಪ್ರಕಟಿಸಲಾಗಿತ್ತು.  ವಿದ್ವತ್ಪೂರ್ಣವಾದ ಮಹಾರಾಜರ ಕೃತಿಗಳು ನನಗೆ ಬಹಳ ಇಷ್ಟವಾಗಿದ್ದರಿಂದ ನಾನು ಮಹಾರಾಜರ ವಿರಚಿತ ಕೃತಿಗಳ ಒಂದು ಪುಸ್ತಕವನ್ನು ಕೊಂಡುಕೊಂಡಿದ್ದೆ.  ಪುಸ್ತಕವನ್ನು ಸಂಗೀತ ಕಲಾರತ್ನ ಎಸ್ ಕೃಷ್ಣಮೂರ್ತಿಯವರು ಸಂಪಾದಿಸಿರುವರು.  ಸ್ವರ ಸಮೇತ ಹೊಂದಿರುವ ಕೃತಿಗಳ ಈ ಪುಸ್ತಕ, ಆಸಕ್ತರಿಗೆ ಕಲಿಯಲು ಅನುಕೂಲಕರವಾಗಿದೆ.  ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಪಟ್ಟಿಯನ್ನು ನೋಡಿ ನಾನು ಪುಸ್ತಕದಲ್ಲಿ ಅಂದು ಹಾಡಲ್ಪಡುವ ಕೃತಿಗಳನ್ನು ಗುರುತಿಸಿಕೊಂಡಿದ್ದೆ.  ಸಮಯಾಭಾವದಿಂದಾಗಿ ಕಾರ್ಯಕ್ರಮವನ್ನು  ಪ್ರಾರಂಭದಿಂದ ವೀಕ್ಷಿಸಲು ಸಾಧ್ಯವಾಗಲಿಲ್ಲ.  ಆದರೆ ನಾನು ಅಲ್ಲಿ ತಲುಪಿದಾಗ ಯದುಕುಲ ಕಾಂಬೋಧಿ ರಾಗದಲ್ಲಿ "ಪದ್ಮನಾಭಂ ಭಜೇಹಂ" ಹಾಡುತ್ತಿದ್ದರು.  ಕೃತಿ ಹಾಡಿ ಮುಗಿದಾಗ ನನಗೊಂದು ಅಚ್ಚರಿ ಕಾದಿತ್ತು.  ಅಲ್ಲಿ ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ಅವರು ತಮ್ಮ ಶಿಷ್ಯರೊಂದಿಕೆ ವೇದಿಕೆಯಲ್ಲಿ ಕುಳಿತು ಹಾಡುತ್ತಿದ್ದರು.  ಅವರ ಎಡ ಪಕ್ಕದಲ್ಲಿ ಅನೇಕ ಕಲಶಗಳ ಸ್ಥಾಪನೆಯಾಗಿತ್ತು.  ಅದಕ್ಕೆ ಎದುರಲ್ಲಿ ೪ - ೫ ಜನ ಋತ್ವಿಕರು ಯಜ್ಞಕುಂಡದಲ್ಲಿ ಅಗ್ನಿದೇವನನ್ನು ಪ್ರಚೋದಿಸುತ್ತಾ ಕುಳಿತಿದ್ದರು.  ಪದ್ಮನಾಭಂ ಭಜೇಹಂ ಕೃತಿ ಹಾಡಿ ಮುಗಿದ ಕೂಡಲೇ ಋತ್ವಿಕರು ಯದುಕುಲ ಕಾಂಬೋಧಿ ರಾಗದ ವಿವರಣೆಯನ್ನು ಹೇಳಲಾರಂಭಿಸಿದರು.  ೨೮ನೆಯ ಮೇಳ ಹರಿಕಾಂಬೋಧಿ ಸಂಜಾತ ಯದುಕುಲ ಕಾಂಬೋಧಿ ರಾಗ..... ಆರೋಹಣ ಹಾಗೂ ಅವರೋಹಣದಲ್ಲಿ ಬರುವ ಸ್ವರ ಸಂಚಾರಗಳ ವಿವರಣೆ ಹೇಳಿ ಸ್ವಾಮಿ ಪದ್ಮನಾಭನನ್ನು ಸ್ತುತಿಸುತ್ತಾ.... ವಾಗ್ಗೇಯಕಾರರಾದ ಮಹಾರಾಜ ಶ್ರೀ ಜಯಚಾಮರಾಜೇಂದ್ರ ವಡೆಯರ್ ಅವರನ್ನು ಸ್ಮರಿಸುತ್ತಾ ಕೊನೆಗೆ ಸ್ವಾಹಾ... ಎಂದು ಯಜ್ಞದ ಕ್ರಿಯೆಯನ್ನು ಪೂರ್ಣಗೊಳಿಸಿದರು.   ನಾನು ಚಕಿತಳಾಗಿ ನೋಡುತ್ತಿದ್ದೆ.

ಮಹಾರಾಜರ ರಚನೆಗಳಲ್ಲಿ ನನಗೆ ನನ್ನ ಗುರುಗಳಿಂದ ಪಾಠವಾಗಿದ್ದು ಎರಡು ಕೃತಿಗಳು.  ಆರ್ ಕೆ ಪಿ ಗುರುಗಳು ಮುಂದಿನ ಕೃತಿ ಹಿಂದೋಳ ರಾಗದ "ಚಿಂತಯಾಮಿ ಜಗದಂಬಾ" ಎಂದು ಪ್ರಕಟಿಸಿದಾಗ ನನಗೆ ಅತ್ಯಂತ ಸಂತಸವಾಯಿತು.  ಏಕೆಂದರೆ ನಾನು ಕಲಿತಿರುವ ಎರಡೇ ಎರಡು ಕೃತಿಗಳಲ್ಲಿ ಇದು ಎರಡನೆಯದು.  ಹಿಂದೋಳ ರಾಗದಲ್ಲಿ, ಮಿಶ್ರ ಝಂಪೆ ತಾಳದಲ್ಲಿ ರಚಿಸಲ್ಪಟ್ಟಿರುವ ಕೃತಿ ತಾಯಿ ಜಗದಂಬೆಯನ್ನು ಸ್ತುತಿಸಿರುವುದು.  ಚಿಕ್ಕದಾಗಿ ಹಿಂದೋಳ ರಾಗದ ಆಲಾಪನೆಯಿಂದ ಪ್ರಾರಂಭಿಸಿ ಗುರುಗಳು ವಿಸ್ತಾರವಾಗಿ ಕೃತಿಯನ್ನುಹಾಡಿದರು.  ಹಾಡುವುದು ಮುಗಿದ ತಕ್ಷಣ ಋತ್ವಿಕರು ಶಂಕರಾಭರಣ ಸಂಜಾತ ಹಿಂದೋಳ ರಾಗವೆಂದೂ, ಆರೋಹಣ ಅವರೋಹಣದ ಸ್ವರಗಳ ವಿವರಣೆಯನ್ನೂ ಕೊಡುತ್ತಾ, ರಚನೆಯಲ್ಲಿ ಬರುವ ಜಗದಂಬಿಕೆಯನ್ನು ಲಲಿತಾ ಸಹಸ್ರನಾಮದ ಕೆಲವು ನಾಮಗಳೊಂದಿಗೆ ಪಠಿಸುತ್ತಾ ..... ಕೊನೆಗೆ ಸ್ವಾಹಾ ಎಂದು ಯಜ್ಞ ಪೂರೈಸಿದರು.  ಮುಂದಿನ ಹಾಗೂ ಕೊನೆಯ ಕೃತಿಯಾಗಿ ಮಾಂಡ್ ರಾಗದ "ಬ್ರಹ್ಮಾಂಡವಲಯೇ ಮಾಯೆ" ಎಂದು ಪ್ರಕಟಿಸಿದಾಗ ನನಗೆ ಅತ್ಯಂತ ಸಂತೋಷ ಹಾಗೂ ರೋಮಾಂಚನವಾಗಿತ್ತು.  ಏಕೆಂದರೆ ನಾನು ಕಲಿತ ಮಹಾರಾಜರ ಮೊದಲ ರಚನೆಯೇ ಬ್ರಹ್ಮಾಂಡವಲಯೇ ಆಗಿತ್ತು.  ಇದನ್ನು ನನಗೆ ನನ್ನ ಗುರುಗಳು ನಾನು ಜೂನಿಯರ್ ಸಂಗೀತ ಪರೀಕ್ಷೆ ಕಟ್ಟಿದ್ದಾಗ ಅಂದರೆ ಸುಮಾರು ೪೫ ವರ್ಷಗಳ ಹಿಂದೆ ಹೇಳಿಕೊಟ್ಟಿದ್ದರು.  ಈ ಕೃತಿ ನನ್ನ ತಂದೆ ತಾಯಿಯವರಿಗೂ ತುಂಬಾ ಪ್ರಿಯವಾಗಿತ್ತು.  ಅದೇ ರಚನೆ ಈಗ ಹಾಡಲ್ಪಡುವುದು ಎಂದು ಕೇಳಿದಾಗ ನನಗೆ ರೋಮಾಂಚನದ ಜೊತೆಗೆ ಹಳೆಯ ಎಲ್ಲಾ ನೆನಪುಗಳೂ, ಅಪ್ಪ ಅಮ್ಮನ ನೆನಪುಗಳೂ ಎಲ್ಲವೂ ಒಟ್ಟಿಗೆ ಧಾವಿಸಿ ಬಂದು ಪುಳಕಗೊಳಿಸಿತು.  ಮಾಂಡ್ ರಾಗದ ಚಿಕ್ಕ ಆಲಾಪನೆ ಕೃತಿಯ ಪ್ರಾರಂಭವನ್ನು ಸೂಚಿಸಿ ಮುದಗೊಳಿಸಿತು.  ಚೊಕ್ಕವಾಗಿ ಹಾಡಲ್ಪಟ್ಟ ಕೀರ್ತನೆ ಸುಶ್ರಾವ್ಯವಾಗಿತ್ತು.  ಕೃತಿ ಮುಗಿದ ನಂತರ ಮತ್ತೆ ಅದೇ ರೀರಿಯಾಗಿ ಶಂಕರಾಭರಣ ಸಂಜಾತ ಎಂದು ಮಾಂಡ್ ರಾಗವನ್ನು ವರ್ಣಿಸಿ, ಆರೋಹಣ ಹಾಗೂ ಅವರೋಹಣದ ಸ್ವರಗಳನ್ನು ಪರಿಚಯಿಸಿ, ಮಹಾರಾಜರನ್ನು ಸ್ಮರಿಸಿ, ಲಲಿತಾ ಸಹಸ್ರನಾಮದಲ್ಲಿಯ ಬ್ರಹ್ಮಾಂಡವಲಯೆಯನ್ನು ಸ್ತುತಿಸಿ ಸ್ವಾಹಾ ಎಂದು ಯಜ್ಞ ಪೂರ್ಣಗೊಳಿಸಲಾಯಿತು.

ಜೀವನದಲ್ಲಿ ಹೀಗೆ ಪ್ರಥಮ ಬಾರಿ ನಾನು "ಗಾನಯಜ್ಞ"ವನ್ನು ನೋಡಿದೆ.  ಇನ್ನೊಂದು ಮುಖ್ಯವಾದ ವಿಷಯವನ್ನು ಆರ್ ಕೆ ಪಿ ಗುರುಗಳು ತಿಳಿಸಿದರು.  ಅಲ್ಲಿ ಈಗಾಗಲೇ ೧೧ / ೧೨ ಕಲಶಗಳ ಸ್ಥಾಪನೆಯಾಗಿತ್ತು.  ಜೊತೆಗೆ ಆ ದಿನವೇ ಮತ್ತೆ ಹನ್ನೆರಡು ಕಲಶಗಳ ಸ್ಥಾಪನೆ ಮಾಡಲಾಗಿತ್ತು ಏಕೆಂದರೆ ಅದಕ್ಕೆ ಅಷ್ತು ಬೇಡಿಕೆ ಬಂದಿತ್ತು.  ಕಲಶಗಳ ವಿಶೇಷತೆ ಏನೆಂದರೆ ಸಂಗೀತದ ಸಪ್ತ ಸ್ವರಗಳ ಶಕ್ತಿಯನ್ನು ಆ ಕಲಶಗಳಲ್ಲಿ ಆವಾಹನೆ ಮಾಡಲಾಗಿತ್ತು.  ಯಜ್ಞದ ಉದ್ದೇಶವೂ, ಕಲಶಗಳ ಸ್ಥಾಪನೆಯ ಉದ್ದೇಶವೂ ಲೋಕದಲ್ಲಿ ಸಪ್ತ ಸ್ವರಗಳ ನಾದ ತುಂಬಿಕೊಳ್ಳಬೇಕು ಎಂಬ ಉನ್ನತವಾದ ವಿಚಾರವಾಗಿತ್ತು.  ಲೋಕ ನಾದಮಯವಾದಲ್ಲಿ ಪರಿಸರ ಶುದ್ಧಿಯಾಗಿ, ಗುಣಾತ್ಮಕ ಭಾವಗಳ ಲಹರಿ ಹಬ್ಬುವುದು ಹಾಗೂ ಲೋಕ ಕಲ್ಯಾಣವಾಗುವುದು ಎಂಬುದು ಪರಿಷತ್ತಿನ ಉದ್ದೇಶವಾಗಿತ್ತು.  ಸಂಗೀತವೂ ಭಗವಂತನ, ಜಗನ್ಮಾತೆಯ ಆರಾಧನೆ ಎಂದು ಸಾರುವುದು ಅತ್ಯಂತ ಉನ್ನತ ಚಿಂತನೆಯಾಗಿರುವುದು.

ತಡವಾಗಿಯಾದರೂ ಕಾರ್ಯಕ್ರಮಕ್ಕೆ ತಲುಪಿ ನನಗೆ ತಿಳಿದಿದ್ದ ಎರಡು ಕೃತಿಗಳನ್ನು ಕೇಳಿದ್ದು ನನ್ನ ಅದೃಷ್ಟವೆಂದೇ ಭಾವಿಸಿರುವೆ..... 

Friday, February 23, 2018

ನಮಸ್ಕರಿಸು, ಶರಣಾಗು ಮತ್ತು ಅನುಗ್ರಹಿಸಲ್ಪಡು

Prostrate, Surrender and Become Blessed :  An article of His Holiness Jagadguru Sri Abhinava Vidyathreertha Mahaswamigal

ಕನ್ನಡ ಅವತರಣಿಕೆ




ವಿನೀತನಾದ ಭಕ್ತನೊಬ್ಬನು ಭಗವಂತನಲ್ಲಿ ತನ್ನ ಅತಿ ದೊಡ್ಡದಾದ ಎರಡು ಪಾಪಗಳನ್ನು ಮನ್ನಿಸಬೇಕೆಂದು ಕೇಳಿ ಕೊಳ್ಳುತ್ತಿದ್ದನು.  ಯಾವುದಂತಹ ಘೋರ ಪಾಪಗಳು ?

ಭಕ್ತನು ತನ್ನ ಮನದ ವಿಚಾರಗಳನ್ನು ಬಿಡಿಸಿ ಹೇಳತೊಡಗಿದನು.  ಮೊದಲನೆಯ ಪಾಪವೆಂದರೆ ತಾನು ತನ್ನ ಹಿಂದಿನ ಜನ್ಮಗಳಲ್ಲಿ ಒಂದೇ ಒಂದು ಬಾರಿಯಾದರೂ ಭಗವಂತನನ್ನು ಸ್ಮರಿಸಿ ನಮಸ್ಕರಿಸದಿರುವುದು.  ಇದು ಈ ಜನ್ಮದಲ್ಲಿ ಭಕ್ತನಿಗೆ ಹೇಗೆ ತಿಳಿಯಿತೆನ್ನುವುದೇ ವಿಷಯ.  ಭಕ್ತ ತನ್ನ ತಿಳುವಳಿಕೆ ಜ್ಞಾನಗಳಿಂದ ತಾನು ತಿಳಿದಿರುವುದೇನೆಂದರೆ ಭಗವಂತನನ್ನು ಸ್ಮರಿಸಿ, ನಮಿಸುವಂತಹವನಿಗೆ ಪುನರ್ಜನ್ಮ ಖಂಡಿತವಾಗಿಯೂ ಇರುವುದಿಲ್ಲ ಎನ್ನುವುದು.  ತನಗೆ ಮತ್ತೆ ಜನ್ಮವಾಗಿದೆಯೆಂದರೆ, ಅದು ತಾನು ಹಿಂದಿನ ಜನ್ಮಗಳಲ್ಲಿ ಭಗವಂತನಿಗೆ ನಮಸ್ಕರಿಸದಿರುವುದರಿಂದಲೇ ಆಗಿದೆ.  ಸ್ವಾಮಿಯಲ್ಲಿ ಶರಣಾರ್ಥಿಯಾಗಿ, ದೀರ್ಘದಂಡ ನಮಸ್ಕಾರ ಮಾಡದಿದ್ದ ಪಾಪವೇ ತನ್ನ ಈ ಜನ್ಮಕ್ಕೆ ಕಾರಣವಾಗಿದೆ.

ಎರಡನೆಯ ಪಾಪವೆಂದರೆ ಭಕ್ತನು ಈಗ ಪಡೆದಿರುವ ಜನ್ಮದಲ್ಲಿ ಭಗವಂತನಿಗೆ ನಮಸ್ಕರಿಸುತ್ತ, ತನ್ನ ಭಕ್ತಿಯನ್ನು ಸಮರ್ಪಣೆ ಮಾಡಿಕೊಳ್ಳುತ್ತಿರುವುದು.  ಇದು ಹೇಗೆ ಪಾಪವಾಯಿತೆಂದರೆ ಈ ಜನ್ಮದಲ್ಲಿ ಹೀಗೆ ಮಾಡುವುದರಿಂದ, ತನಗೆ ಮುಂದೆ ಜನ್ಮಗಳಿರುವುದಿಲ್ಲವೆಂಬ ನಂಬಿಕೆ.  ಮುಂದೆ ಜನ್ಮಗಳೇ ಇಲ್ಲದಿದ್ದಲ್ಲಿ, ತಾನು ಸ್ವಾಮಿಯನ್ನು ನಮಸ್ಕರಿಸಲು ಆಗುವುದೇ ಇಲ್ಲ.  ಆದ್ದರಿಂದ ಈ ಜನ್ಮದಲ್ಲಿ ತನಗೆ ಪುನರ್ಜನ್ಮ ಬೇಡವೆಂದು ಬಯಸುವುದು ಭಕ್ತನು ಮಾಡುತ್ತಿರುವ ಎರಡನೆಯ ಘೋರ ಪಾಪವಾಗಿದೆ.  ಹೀಗಾಗಿ ಈ ಎರಡೂ ಮಹಾಪರಾಧಗಳು ಅಥವಾ ಪಾಪಗಳನ್ನು ಮನ್ನಿಸುವಂತೆ ಭಕ್ತನು ಭಗವಂತನಲ್ಲಿ ಆರ್ತನಾಗಿ ಬೇಡುತ್ತಿರುವನು.

ಇಲ್ಲಿ ಭಕ್ತನ ಪ್ರಾರ್ಥನೆಯು ನಮ್ಮನ್ನು ಚಿಂತನೆಗೆ ಹಚ್ಚುವುದು.  ಪ್ರಾರ್ಥನೆ/ಬಿನ್ನಪ ಎನ್ನುವುದು ಎಷ್ಟು ಮುಖ್ಯವಾದದ್ದು ಎಂಬುದನ್ನು ತಿಳಿಯಬೇಕಾಗಿದೆ.  ನಮ್ಮಲ್ಲಿ ಅನೇಕರು ಪ್ರತಿದಿನವೂ ಭಗವಂತನಿಗೆ ತನು-ಶಿರ ಬಾಗಿಸಿ ನಮಸ್ಕರಿಸುತ್ತಾರೆ.  ಆದರೆ ಅದೊಂದು ಯಾಂತ್ರಿಕ ಕ್ರಿಯೆಯಾಗಿರುತ್ತದೆ.  ಇದೇ ನಾವು ಮಾಡುವ ಅಪರಾಧವಾಗಿದೆ.  ಈಗ ಸಿಕ್ಕಿರುವ ಮಾನವ ಜನ್ಮದಲ್ಲಿ ಭಗವಂತನಿಗೆ ನಮಸ್ಕರಿಸುವುದು ನಮಗೆ ಸಿಕ್ಕಿರುವ ಮಹಾಪ್ರಸಾದ/ಅವಕಾಶ ಎಂದು ಪರಿಗಣಿಸಿ, ತನು-ಮನ, ಪಂಚೇಂದ್ರಿಯಗಳು, ಪಂಚತನ್ಮಾತ್ರೆಗಳು ಎಲ್ಲವನ್ನೂ ಸಮಷ್ಟಿಯಾಗಿಸಿ, ಸ್ವಾಮಿಯ ಮುಂದೆ ದೀರ್ಘದಂಡ ಪ್ರಣಾಮ ಮಾಡಬೇಕು.  ಪುನರ್ಜನ್ಮ ಪರಮಾತ್ಮನ ಕರುಣೆಯಿಂದಲೇ ನಮಗೆ ಸಿಕ್ಕಿರುವ ಸದವಕಾಶ ಎಂದು ತಿಳಿಯಬೇಕು.  ಸ್ವಾಮಿಯು ನಾವೇನನ್ನೂ ಕೇಳದೆಯೇ ನಮ್ಮನ್ನು ತಾಯಿಯ ಗರ್ಭದಿಂದಲೇ ಪೊರೆದು ರಕ್ಷಿಸುವನು.  ಜನಿಸಿದ ನಂತರ ಕನಿಷ್ಠ ನಾವು ನಮ್ಮ ಕೃತಜ್ಞತೆಯನ್ನು ಹೃದಯ ಪೂರ್ವಕವಾಗಿ, ನಮಸ್ಕಾರ ಮಾಡುವುದರ ಮೂಲಕ ಸಲ್ಲಿಸಬೇಕು.  ಇದಕ್ಕಿಂತ ಹೆಚ್ಚೇನನ್ನೂ ನಾವು ಭಗವಂತನಿಗಾಗಿ ಮಾಡಲಾರೆವು.

ಪರಮೇಶ್ವರನಿಗೆ ಪ್ರಿಯವಾಗುವಂತೆ ನಡೆದುಕೊಳ್ಳದ ನಮ್ಮನ್ನು ಸ್ವಾಮಿ ತಿರಸ್ಕರಿಸುವನೇ ಎಂಬ ಸಂದೇಹ ಕೂಡ ಬರುತ್ತದೆ.  ಸದಾ ಆಹಾರದ ಹುಡುಕಾಟ ಹಾಗೂ ಇಂದ್ರಿಯ ಸುಖಗಳ ವಿಚಾರವನ್ನೇ ಮಾಡುತ್ತ, ಉಳಿದ ಸಮಯದಲ್ಲೆಲ್ಲಾ ನಿದ್ರಿಸುವ ನಮ್ಮ ಈ ಜೀವನ ಪ್ರಾಣಿಗಳಿಗಿಂತ ಯಾವ ರೀತಿಯಲ್ಲಿ ಮೇಲಾಗಿದೆ? ಇಂತಹ ನಮ್ಮನ್ನು ಭಗವಂತ ಸ್ವೀಕರಿಸುವನೇ?

ಶ್ರೀ ಶಂಕರ ಭಗವತ್ಪಾದರು ತಮ್ಮ "ಶಿವಭುಜಂಗ ಸ್ತೋತ್ರ"ದಲ್ಲಿ ನಮ್ಮ ಈ ಸಂದೇಹಕ್ಕೆ ಉತ್ತರ ಕೊಡುತ್ತಾರೆ.  ಭಕ್ತನಾದವನು ಸಂಪೂರ್ಣ ಶರಣಾಗತನಾಗಿ ಪ್ರಭುವನ್ನು ಪ್ರಾರ್ಥಿಸಬೇಕು, ತನ್ನ ನೀಚ ಅಭ್ಯಾಸಗಳನ್ನು ಮುಕ್ತವಾಗಿ ಒಪ್ಪಿಕೊಂಡು, ಸರ್ವ ಸಮರ್ಪಣೆ ಮಾಡುತ್ತಾ ಯಾಚಿಸಬೇಕು.  ಶಿವಭುಜಂಗದ ೧೨ನೆಯ ಶ್ಲೋಕದಲ್ಲಿ "ಪಶುಂ ವೇತ್ಸಿ ಚೋನ್ಮಾಂ ತಮೇವಾಧಿರೂಡಃ....." - ಭಗವತ್ಪಾದರು ಹೇ ಪ್ರಭುವೇ ನೀನು ನನ್ನನ್ನು ಪಶುವೆಂದು ತಿಳಿದಿರುವೆಯಾದರೆ, ನೀನು ಪಶುವಾದ ನಂದಿಯನ್ನೇ ನಿನ್ನ ವಾಹನವಾಗಿಸಿಕೊಂಡಿರುವೆ.  ನನ್ನನ್ನು ಕಲಂಕಿತನು ಎಂದು ತಿಳಿದರೆ ಕಲಂಕಿತನಾದ ಚಂದ್ರನನ್ನು ನಿನ್ನ ಶಿರದಲ್ಲಿ ಧರಿಸಿರುವೆ, ನಾನು ಎರಡು ನಾಲಿಗೆಯವನು ಎಂದು ತಿಳಿದರೆ, ಸರ್ಪವನ್ನು ನಿನ್ನ ಕಂಠಕ್ಕೇ ಆಭರಣವಾಗಿ ಧರಿಸಿರುವೆ, ನಾನೆಂತಹವನಾಗಿದ್ದರೂ, ನನ್ನನ್ನು ಮನ್ನಿಸಿ ಸ್ವೀಕರಿಸಬೇಕೆನ್ನುತ್ತಾರೆ.  ೧೯ನೆಯ ಶ್ಲೋಕದಲ್ಲಿ "ಭವದ್ಗೌರವಂ ಮಲ್ಲಘುತ್ವಂ ವಿದಿತ್ವಾ....." - ಭವ್ಯ ಗೌರವ ಹೊಂದಿರುವ ನೀನು ನನ್ನ ಅಲ್ಪತನವನ್ನೂ, ಪಶುತ್ವವನ್ನೂ ಅರಿತು, ನಿನ್ನ ಕರುಣಾಕಟಾಕ್ಷವನ್ನು ನನ್ನೆಡೆಗೆ ಹರಿಸು.  ನಾನು ದರಿದ್ರನು, ಅಮಂಗಲನು, ತಪ್ಪಿತಸ್ಥನು, ಆದರೆ ಪ್ರಭುವೇ ನೀನು ಸುಮಂಗಲನು, ಅಂತರಾತ್ಮನು.  ನಿನ್ನನ್ನು ಸ್ವಶಕ್ತಿಯಿಂದ ಸ್ತುತಿಸಲೂ ಕೂಡ ಅನರ್ಹನಾಗಿರುವ ನನ್ನನ್ನು ನನ್ನ "ಅಪರಾಧ ಕೋಟಿಗಳನ್ನು" ಮನ್ನಿಸಿ ರಕ್ಷಿಸು ಎನ್ನುತ್ತಾರೆ.

ಭಕ್ತನಾದವನು ಎಂತಹ ಪಶುತ್ವವನ್ನು ಹೊಂದಿದ್ದರೂ, ಕ್ಷುಲ್ಲಕಿಯಾಗಿದ್ದರೂ ಕೂಡ, ಭಗವಂತನೇ ನಿನ್ನ ಕರುಣಾ ಕಟಾಕ್ಷದ ಸ್ಪರ್ಶಮಾತ್ರದಿಂದಲೇ ಅವನು ಸದ್ಗತಿ ಹೊಂದುತ್ತಾನೆ ಎಂದು ಆಚಾರ್ಯರು ಶಿವಭುಜಂಗ ಸ್ತೋತ್ರದಲ್ಲಿ ಸ್ಪಷ್ಟ ಪಡಿಸಿರುವರು.

ಪ್ರಾರ್ಥನೆಯ ಉದ್ದೇಶವೇ ಪರಮೇಶ್ವರನ ಕೃಪಾ ಕಟಾಕ್ಷವನ್ನು ಬಯಸುವುದು.  ಅಪಾರ ಕರುಣಾಮಯಿಯಾದ ಸ್ವಾಮಿಯ ಕರುಣೆಗೆ ಸೀಮೆಯಿಲ್ಲವಾದ್ದರಿಂದಲೇ ಶರಣಾಗತರಾಗಿ ಬಂದ ಭಕ್ತರನ್ನು ಅವನು ಸ್ವೀಕರಿಸುವನು.  ತ್ರಿಕರಣ ಪೂರ್ವಕವಾಗಿ ನಮ್ಮನ್ನು ನಾವು ಭಗವಂತನಿಗೆ ಸಮರ್ಪಿಸಿಕೊಂಡಾಗ, ಸ್ವಾಮಿಯು ಖಂಡಿತವಾಗಿ ನಮ್ಮನ್ನು ರಕ್ಷಿಸುವನು.  ಶರಣಾಗತರಾಗುವುದು ಮಾತ್ರವೇ ನಮ್ಮ ಕರ್ತವ್ಯವಾಗುವುದು ಮತ್ತು ಕರುಣಾಸಿಂಧುವಾದ ಪರಮೇಶ್ವರನು ನಂಬಿದ ಭಕ್ತನನ್ನು ಖಂಡಿತವಾಗಿಯೂ ಪೊರೆಯುವನು.



"ಮಲ್ಲೇಶ್ವರಂ ಹಿರಿಯ ನಾಗರೀಕರ ವೇದಿಕೆ" ಯ ಫೆಬ್ರವರಿ ತಿಂಗಳ ’ಮಲ್ಲೇಶ್ವರಂ ಸೀನಿಯರ್ಸ್ ನ್ಯೂಸ್" ನಲ್ಲಿ ಪ್ರಕಟಗೊಂಡಿದೆ.

Wednesday, November 23, 2016

ಪ್ರವಾಸ ಕಥನ - ಅಮೆರಿಕ ( ಐದನೆಯ ಕಂತು)

ಗ್ರ್ಯಾಂಡ್ ಕ್ಯಾನ್ಯನ್ ಸುಮಾರು ೪೪೬ ಕಿಲೋಮೀಟರ್ ಅಥವಾ ೨೭೭ ಮೈಲಿಗಳಷ್ಟು ವಿಸ್ತಾರವಾಗಿದೆ.  ಇದರ ಮೇಲ್ಭಾಗದ ೯೬ ಕಿಲೋಮೀಟರ್ ಅಥವಾ ೬೦ ಮೈಲಿಗಳಷ್ಟು ಹಾಲುಗಲ್ಲಿನಿಂದ (ಮಾರ್ಬಲ್ ಕಲ್ಲು) ರಚಿತವಾಗಿರುವ ಭಾಗವಾಗಿದೆ.  ಗ್ರ್ಯಾಡ್ ಕ್ಯಾನ್ಯನ್ ಸುಮಾರು ೧೮೬೯ರಲ್ಲಿ ಭೂಗರ್ಭ ಶಾಸ್ತ್ರಜ್ಞನಾದ ಜಾನ್ ವೆಸ್ಲಿ ಪೋವೆಲ್ ನ ಮೊಟ್ಟ ಮೊದಲ ಸಾಹಸಪ್ರಿಯವಾದ ಕೊಲರಾಡೋ ನದಿಯ ಪಾತ್ರವನ್ನನುಸರಿಸಿ ಮಾಡಿದ ಸಂಚಾರದಿಂದಾಗಿ ಬೆಳಕಿಗೆ ಬಂದ  ಪ್ರಕೃತಿ ನಿರ್ಮಿತ ಉತ್ಕೃಷ್ಠ  ಕಲೆಯಾಗಿದೆ.   ಅಲ್ಲಿಂದ ಇಲ್ಲಿಯವರೆಗೆ ಬಂದ ಅನೇಕ ಭೂಗರ್ಭ ಶಾಸ್ತ್ರಜ್ಞರನ್ನು ಆಕರ್ಷಿಸುತ್ತಲೇ ಇದೆ.  ಸಾವಿರಾರು ಭೂಗರ್ಭ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ.  ಹೊಸ ಹೊಸ ಆಯಾಮಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ.
















ಅರಿಜೋನ ಪ್ರದೇಶದ ಉತ್ತರದ ಕಡೆ ಇರುವ ಈ ಕ್ಯಾನ್ಯನ್ ಎಂಬ ಪ್ರಕೃತಿಯ ಪವಾಡ ಕೊಲರಾಡೋ ನದಿಯ ದಕ್ಷಿಣ ತಪ್ಪಲು ಪ್ರದೇಶದ ಕಡೆಯಿಂದ ರಚಿತವಾಗಿದೆ.  ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತವು ಯಾವ ರಾಸಾಯನಿಕ ಕ್ರಿಯೆಗಳಿಂದ ರಚಿಸಲ್ಪಟ್ಟಿದೆ ಎಂಬುದು ಕುತೂಹಲಕರ ವಿಷಯವಾಗಿದೆ.  ಮಳಲು ಕಲ್ಲು (sand stone), ಸುಣ್ಣದ ಕಲ್ಲು (lime stone) ಮುಂತಾದವುಗಳ ಗಷ್ಟು ಅಥವಾ ಚರಟಗಳ ಪದರಗಳಿಂದಲೂ, ಬೆಂಕಿ ಹತ್ತಿಕೊಳ್ಳಬಲ್ಲ ಗ್ರಾನೈಟ್ ಕಲ್ಲುಗಳಿಂದಲೂ ರಚಿತವಾಗಿದೆ.  ನಿರಂತರವಾಗಿ ನೀರಿನೊಂದಿಗೆ ಸಂಭವಿಸಿದ ಘರ್ಷಣೆಯಿಂದಾಗಿ ಪ್ರಕೃತಿಯ ಕುಶಲತೆಯು ಮೆರೆದಿದೆ.  ಅಪಾರವಾದ ’ಜಲಶಕ್ತಿ’ಯ ಪ್ರದರ್ಶನ ಸುಂದರವಾದ ಕಲೆಯಾಗಿ ಅರಳಿದೆ.
 

ಸಾವಿರಾರು ಮೈಲುಗಳಿಂದ ನೀರಿನೊಂದಿಗೆ ಅಲೆಗಳ/ಪ್ರವಾಹದ ಮೂಲಕ ಹರಿದು ಬಂದ ರಾಸಾಯನಿಕ ವಸ್ತುಗಳು ಸಂಗ್ರಹಿಸಲ್ಪಟ್ಟು, ಅಡಿಪಾಯವಾಗಿರುವ ಕ್ಯಾನನ್ ನಲ್ಲಿ ನೀರಿನ ಘರ್ಷಣೆಯಿಂದ ರಾಸಾಯನಿಕ ಬದಲಾವಣೆಗಳು ಉಂಟಾದಾಗ ಹೀಗೆ ಚಿತ್ರ-ವಿಚಿತ್ರ ಹಾಗೂ ಅತ್ಯಂತ ಕುತೂಹಲಕಾರಕ ಕ್ಯಾನ್ಯನ್ ರಚಿತವಾಗಿದೆ.  ಇಲ್ಲಿ ಕೆಂಪು ಬಣ್ಣದ ಛಾಯೆ ಹೆಚ್ಚು ದಟ್ಟವಾಗಿದೆ.  ಕೊಲರಾಡೋ ನದಿಯ ಅದ್ಭುತವು ಕೊಲರಾಡೋ ತಪ್ಪಲು ಪ್ರಾಂತದ ನಾಲ್ಕು ಭಾಗಗಳಾಗಿ ರಚಿತವಾಗಿದೆ.  ಸರಿ ಸುಮಾರು ೪೦ ತರಹದ, ಗುರುತಿಸಲ್ಪಟ್ಟ ಕಲ್ಲುಗಳ ಪದರಗಳು ಇಲ್ಲಿ ಅಡಕವಾಗಿವೆ ಎಂಬ ಮಾಹಿತಿಯಿದೆ.  ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಲೇ ಇದ್ದಾರೆ ಮತ್ತು ಹೊಸ ಹೊಸ ಪದರಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ.

ಕ್ಯಾನ್ಯನ್  ಅಡಿಯಲ್ಲಿ ಮರುಭೂಮಿಯ ಬೋಗುಣಿಯಾಗಿರುವಂತಿದೆ.  ಮೇಲು ಮೇಲೆ ಅರಣ್ಯದ ಭಾಗವೂ ಇರುವಂತಿದೆ.  ನದಿಯು ತನ್ನ ಪ್ರಯಾಣವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮುಂದುವರೆಸಿದ್ದರೂ ಕೂಡ "ಗ್ರ್ಯಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್" ಅರಿಜೋನ ರಾಜ್ಯದಲ್ಲಿದೆ.  ಅಂಕಿ - ಸಂಖ್ಯೆಗಳ ಪ್ರಕಾರ ಸುಮಾರು ೧೫೦೦-೨೦೦೦ ವೃಕ್ಷ ಸಮೂಹವೂ ಅನೇಕ ತರಹದ ಪಕ್ಷಿ, ಪ್ರಾಣಿ, ಭೂಜಲಚರ ಪ್ರಾಣಿಗಳು ಹಾಗೂ ಅನೇಕ ಜಾತಿಯ ಮೀನುಗಳನ್ನು ಇಲ್ಲಿ ನೋಡಬಹುದಾಗಿದೆ.  ಈ ಉದ್ಯಾನವನಕ್ಕೆ ವರ್ಷಕ್ಕೆ ಸರಿ ಸುಮಾರು ೫೦ ಲಕ್ಷ ಜನರು ಬರುತ್ತಾರೆಂಬ ಅಂದಾಜು ಮಾಡಲಾಗಿದೆ.   ಕ್ಯಾನ್ಯನ್ ಉತ್ತರ ಹಾಗೂ ದಕ್ಷಿಣ ಅಂಚುಕಟ್ಟು (rim) ಎಂದು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ.  ಉತ್ತರ ಅಂಚುಕಟ್ಟು ಉಠಾ (Utah) ಎಂಬ ಜಾಗಕ್ಕೆ ಹತ್ತಿರವಾಗಿದೆ ಮತ್ತು ಇಲ್ಲಿ ಉಸಿರು ಬಿಗಿ ಹಿಡಿದು ನೋಡಿ ರೋಮಾಂಚನವಾಗುವಂತಹ ದೃಶ್ಯಗಳಿವೆಯಂತೆ.  ಆದರೆ ದಕ್ಷಿಣ ಅಂಚುಕಟ್ಟಿನಲ್ಲಿರುವಷ್ಟು ಸುಲಭ ಪ್ರವೇಶ ಇಲ್ಲವೆಂಬ ಉಲ್ಲೇಖವಿದೆ.  ಎರಡನ್ನೂ ಸೇರಿಸುವ ಒಂದು ಸೇತುವೆ ಕೂಡ ಇದೆ.  ಇದು ಚಾರಣಿಗರಿಗೆ ನಿಜವಾದ ಸವಾಲಾಗಿದೆ.  ಸವಾಲನ್ನು ಸ್ವೀಕರಿಸುವ ಉತ್ಸಾಹೀ ಚಾರಣಿಗರಿಗೇನೂ ಕಡಿಮೆಯಿಲ್ಲ.

ಗ್ರ್ಯಾಂಡ್ ಕ್ಯಾನ್ಯನ್ ನ ಪಶ್ಚಿಮ ಅಂಚುಕಟ್ಟು "ಲಾಸ್ ವೇಗಾಸ್" ಎಂಬ ನಗರಕ್ಕೆ ಹತ್ತಿರವಾಗಿದೆ.  ಈ ನಗರ ಪಕ್ಕದ "ನೇವಡ ರಾಜ್ಯ"ದಲ್ಲಿದೆ.  ಲಾಸ್ ವೇಗಾಸ್ ಊರಿನಿಂದ ಸುಮಾರು ೩ ೧/೨ ಘಂಟೆಗಳ ಪಯಣದಲ್ಲಿ ನಾವು ಗ್ರ್ಯಾಂಡ್ ಕ್ಯಾನ್ಯನ್ ನ ಪಶ್ಚಿಮ ಅಂಚು (West Rim) ತಲುಪಲು ಹೋಗಬೇಕಾದ ರಸ್ತೆಗೆ ತಲುಪುತ್ತೇವೆ.  ಮುಖ್ಯ ರಸ್ತೆಯಿಂದ ನಾವು ಅತಿಕ್ರಮಿಸಿ ಕ್ಯಾನ್ಯನ್ ರಸ್ತೆಗೆ ಹೊರಳಬೇಕು.  ಇಲ್ಲಿಂದ ನಾವು ಕ್ಯಾನ್ಯನ್ ನ ಪಶ್ಚಿಮ ಅಂಚಿನ ಪ್ರವೇಶ ದ್ವಾರಕ್ಕೆ ಬರುತ್ತೇವೆ.  ಇಲ್ಲಿ Haulapai Indians ನಡೆಸುವ ಬಸ್ಸುಗಳಲ್ಲಿ ಮುಂದಿನ ಪ್ರಯಾಣ ಮಾಡಬೇಕು.  
 
ಬಸ್ಸಿಗಾಗಿ ಪಾಸ್ ತೆಗೆದುಕೊಂಡು ಏರಿದರೆ ನಮ್ಮನ್ನು ಪ್ರಸಿದ್ಧವಾದ "Eagle Point" ಅಥವಾ "ಗರುಡ ನೋಟ (ದೃಷ್ಟಿ)"ಗೆ ತಲುಪಿಸುತ್ತದೆ.  ಇಲ್ಲಿ ಬಸ್ಸಿನಿಂದಿಳಿದು ನಿಧಾನವಾಗಿ ಸುತ್ತಾಡುತ್ತಾ ಅದ್ಭುತ ದೃಶ್ಯಗಳನ್ನು ನೋಡುವಾಗ ಒಂದು ಕಡೆ ಕ್ಯಾನ್ಯನ್ ಗರುಡ ಪಕ್ಷಿಯಂತೆ ರಚಿತವಾಗಿರುವುದು ಕಾಣುತ್ತದೆ.  ರೆಕ್ಕೆಗಳನ್ನು ಅಗಲಿಸಿರುವ ಗರುಡ ಪಕ್ಷಿಯಂತೆ ಕಾಣುತ್ತದೆ.
 
 
ಮುಖದ ರಚನೆ, ಮೂಗು ಕೂಡ ತುಂಬಾ ಆಕಾರವಾಗಿದೆ.  ಇಲ್ಲಿಯೂ ಕೂಡ ಉಸಿರು ಬಿಗಿಹಿಡಿದು ನೋಡುವಂತಹ ಪ್ರಕೃತಿ ನಿರ್ಮಿತ ದೃಶ್ಯಾವಳಿಗಳು ಮನಸ್ಸಿಗೆ ಮುದ ಕೊಡುತ್ತವೆ.  ಇಲ್ಲಿಂದ ಇನ್ನೂ ಒಳಗೆ ಹೋದರೆ ನಮಗೆ ಗಾಜಿನ "ಸ್ಕೈ ವಾಕ್" ಸಿಗುತ್ತದೆ.  ಇಲ್ಲಿಗೆ ಹೋಗಲು ನಾವು ನಮ್ಮ ಚಪ್ಪಲಿಗಳ ಮೇಲೆ ಮೃದುವಾದ ವಿನಿಯೋಗ ಮಾಡುವಂತಹ ಕಾಲುಚೀಲದಂತಹ ಹೊದಿಕೆಯನ್ನು ಧರಿಸಬೇಕಾಗುವುದು.  ಈ ಗಾಜು ಅಶ್ವಪಾದ ಅಥವಾ ಆಂಗ್ಲ ಅಕ್ಷರ "U" ನಂತಿದೆ.  ಸುಮಾರು ೫೦೦-೮೦೦ ಅಡಿಗಳಷ್ಟು ಎತ್ತರದಲ್ಲಿದೆ.  ಮಾರ್ಚ್ ತಿಂಗಳು ೨೦೦೭ರಲ್ಲಿ ಅನಾವರಣಗೊಂಡಿತ್ತು.  ಈ ಗಾಜಿನ ಮೇಲೆ ಉದ್ದಕ್ಕೂ ನಡೆಯುತ್ತಾ ಹೋದರೆ ಅನೇಕ ಕಡೆಗಳಿಂದ ಕ್ಯಾನ್ಯನ್ ಸೌಂದರ್ಯವನ್ನು ನೋಡಬಹುದು.  ಕೆಳಗಡೆ ಗಾಜಿನ ಮೂಲಕವೂ ಕಾಣುವ ಕ್ಯಾನ್ಯನ್ ನ ಆಳವಾದ ಕಣಿವೆಗಳು ಒಂಥರಾ ಸಣ್ಣ ಭಯ ಹಾಗೂ ಅಚ್ಚರಿಯನ್ನುಂಟು ಮಾಡುವುದು.  ಎಲ್ಲೆಲ್ಲಿ ನೋಡಿದರೂ ಪ್ರಕೃತಿಯ ವಿಸ್ಮಯ ಅಷ್ಟೇ...!!!!




ಚಿ ತ್ರ ಕೃ ಪೆ  : ಅಂ ತ ರ್ಜಾ ಲ 

ಸುಂದರ ಚಿತ್ರಗಳಿಗಾಗಿ ಈ ಕೊಂಡಿ : https://www.google.co.in/search?q=grand+canyon+eagle+point+photo&client=firefox-b-ab&tbm=isch&imgil=o1LP3hSht0_OYM%253A%253BRTd0zWu5OW9iLM%253Bhttp%25253A%25252F%25252Fwww.gokingman.com%25252Fday-trip-Grand-Canyon-West-Home-of-the-Skywalk&source=iu&pf=m&fir=o1LP3hSht0_OYM%253A%252CRTd0zWu5OW9iLM%252C_&usg=__MQjz-rRey8f2SrsMiPhN-P8V5Lw%3D&biw=1118&bih=566&dpr=1.25&ved=0ahUKEwiu37XVq7_QAhXBro8KHcinBqsQyjcIMw&ei=jck1WO7kBsHdvgTIz5rYCg#imgdii=ObiP1HitmSpW6M%3A%3BObiP1HitmSpW6M%3A%3Bo1LP3hSht0_OYM%3A&imgrc=ObiP1HitmSpW6M%3A


Wednesday, August 17, 2016

ಬೇರೆ ಬೇರೆ ಕೋನಗಳಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ನ ವಿಸ್ಮಯ ಚೆಲುವು....









Friday, July 22, 2016

ಪ್ರವಾಸ ಕಥನ - ಅಮೆರಿಕ (ನಾಲ್ಕನೆಯ ಕಂತು)

ನಾವು ಒಂದು ವಾರಾಂತ್ಯದಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತ ವಿಚಿತ್ರವನ್ನು ನೋಡಲು ಹೋದೆವು.  ಗ್ರ್ಯಾಂಡ್ ಕ್ಯಾನ್ಯನ್ ಗೆ ಹೋಗುವ ರಸ್ತೆ.....

ಫೆಬ್ರವರಿ - ಮಾರ್ಚ್ ತಿಂಗಳು ಅಮೆರಿಕದಲ್ಲಿ ಛಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುವ ಸಂಧಿ ಕಾಲದ ಸಮಯ.  ಎತ್ತರದ ಪರ್ವತಗಳ ಶಿಖರಗಳಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ಹಿಮ ಉಳಿದಿರುವುದು ನೋಡಲು ಸುಂದರ ದೃಶ್ಯ.



 
ಹಾದಿಯಲ್ಲಿ ಕಣ್ಮನ ತಣಿಸುವ ಮರಗಳ ಗುಂಪಿನ ದೃಶ್ಯ ನಮ್ಮ ದೇಶದ ಅನೇಕ ಸುಂದರ ತಾಣಗಳ ನೆನಪು ತರುವುದು. 

ಮರಗಳ ಮಧ್ಯದಲ್ಲಿ ಕಾಣುವ ಹಾಲು ಬಿಳುಪು ಇನ್ನೂ ಪೂರ್ತಿಯಾಗಿ ಕರಗದೆ ಉಳಿದಿರುವ ಹಿಮದ ಹಾಸು.



ಅಮೆರಿಕದಲ್ಲಿ ಪ್ರವಾಸ ಹೋಗುವಾಗ ಹೊರಗೆ ಸಿಕ್ಕುವ ಆಹಾರದ ಜೊತೆ ಮನೆಯಿಂದಲೂ ಏನಾದರೂ ಮಾಡಿಕೊಂಡು ಹೋಗುವುದು ಹೆಚ್ಚು ಸೂಕ್ತವಾಗುತ್ತದೆ.  ನಾವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ತಯಾರಿ ಮಾಡಿಕೊಂಡೇ ಹೊರಟಿದ್ದೆವು.  ಉದ್ದುದ್ದ ರಸ್ತೆಗಳಲ್ಲಿ ಎಲ್ಲೂ ನಿಲ್ಲಿಸುವ ಅವಕಾಶವಿಲ್ಲ.  ಆದರೆ ಹೀಗೆ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ಅಲ್ಲೊಂದು ಉಪಯುಕ್ತ ವ್ಯವಸ್ಥೆಯಿದೆ.  ದಾರಿಯಲ್ಲಿ ಒಂದು ಚಿಕ್ಕ ತಿರುವ ತೆಗೆದುಕೊಂಡರೆ ನಮಗೆ ವಾಹನಕ್ಕೆ ಇಂಧನವೂ ಸಿಕ್ಕುತ್ತದೆ ಜೊತೆಗೆ ಅಲ್ಲಿ ನಮ್ಮ ವಾಹನವನ್ನು ನಿಲ್ಲಿಸಿಕೊಂಡು, ಒಳಗೇ ಕುಳಿತು ನಾವು ತಂದುಕೊಂಡ ಆಹಾರವನ್ನು ತಿನ್ನಬಹುದು.  ಹೀಗೆ ಮಾಡುವುದರಿಂದ ದಾರಿಯಲ್ಲಿ ವೇಗವಾಗಿ ಚಲಿಸುವ ಇತರ ವಾಹನಗಳಿಗೆ ತೊಂದರೆಯಿಲ್ಲದೆ, ನಾವೂ ನೆಮ್ಮದಿಯಾಗಿ ವಿಶ್ರಮಿಸಲು ಅವಕಾಶವಾಗುವುದು.  ರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡದಾಗಿ ಚಿಹ್ನೆಗಳನ್ನೂ, ಫಲಕಗಳನ್ನೂ ಹಾಕಿ, ಮುಂದೆ ಇನ್ನೆಷ್ಟು ದೂರದಲ್ಲಿ ಈ ತರಹದ ವ್ಯವಸ್ಥೆಯಿದೆ ಎಂಬುದನ್ನು ಪ್ರದರ್ಶಿಸಿರುತ್ತಾರೆ.  

ಕ್ಯಾನ್ಯನ್ ಹತ್ತಿರ ಬರುವಾಗ ನಮಗೆ ಅಲ್ಲಿ ಒಂದು ವಿಮಾನ ನಿಲ್ದಾಣವಿರುವುದು ಕಾಣುವುದು.  ಪುಟ್ಟ ಪುಟ್ಟ ವಿಮಾನಗಳು ಕ್ಯಾನ್ಯನ್ ಮೇಲೆ ಹಾರಿಸಲಾಗುತ್ತದೆ.  ಇದಲ್ಲದೆ ಹೆಲಿಕಾಪ್ಟರ್ ನಲ್ಲಿ ಸುತ್ತುವ ವ್ಯವಸ್ಥೆ ಕೂಡ ಇದೆಯಂತೆ.
 
ಕ್ಯಾನ್ಯನ್ ನೋಡಲು ಹೋಗುವ ಮೊದಲು ಒಂದು ಚಿತ್ರಮಂದಿರದಲ್ಲಿ ನಾವು ಕ್ಯಾನ್ಯನ್ ರಚನೆಯಾದ ಕಾಲ, ಅಲ್ಲಿದ್ದ ಬುಡಕಟ್ಟು ಜನಾಂಗದವರ ಜೀವನದ ವಿವರಣೆ ತಿಳಿಸುವ ಒಂದು ಚಿತ್ರವನ್ನೂ ನೋಡಿದೆವು.
















ಕ್ಯಾನ್ಯನ್ ನೋಡಲು ಬಂದ ಪ್ರವಾಸಿಗರು ತಂಗಲು ಇಲ್ಲಿ ಹೋಟೆಲುಗಳೂ ಇವೆ.  
ಅಂತಹ ಒಂದು ಹೋಟೆಲ್ ಆಕಾರ ನಮ್ಮ ಗಮನ ಸೆಳೆದಿತ್ತು.  ಅದು ಗೋಪುರಾಕೃತಿಯ ಕಟ್ಟಡವಾಗಿತ್ತು.





ಸಾವಿರಾರು ವರ್ಷಗಳಲ್ಲಿ ಒಂದು ನದಿಯು ಎಷ್ಟೆಲ್ಲಾ ಕೌಶ್ಯಲ್ಯವನ್ನು ಸೃಷ್ಟಿಸಿದೆ ಎಂದು ಚಿಂತಿಸುವಾಗ, ಆಶ್ಚರ್ಯವಾಗುವುದು.  ಸುಮಾರು ೪೫೬ ಅಡಿಗಳವರೆಗೆ ಆಳದಲ್ಲಿ ಕಮರಿಗಳನ್ನು ಕಾಣಬಹುದಾಗಿದೆ.  ಎಲ್ಲಿ ನೋಡಿದರೂ, ಎತ್ತ ತಿರುಗಿದರೂ, ಕೆಂಪು ಮಿಶ್ರಿತ ಬಣ್ಣದಲ್ಲಿ ಕೊರೆದ ಶಿಲ್ಪ ಕಣ್ಮನ ತಣಿಸುವುದು.  ಚಿತ್ರ ವಿಚಿತ್ರವಾದ ನಮೂನೆಗಳನ್ನು ನೋಡುತ್ತಾ ನೋಡುತ್ತಾ ಮನಸ್ಸು ಕಲ್ಪನಾ ಲೋಕದಲ್ಲಿ ವಿಹರಿಸಲಾರಂಭಿಸುವುದು.  ನಮ್ಮ ಅಲ್ಪ ಆಯುಶ್ಯ ಹಾಗೂ ಬುದ್ಧಿಯಲ್ಲಿ ಏನೇನೆಲ್ಲವನ್ನೂ ಕಂಡಿರುವೆವೋ ಅದಕ್ಕೆಲ್ಲಾ ಈ ನಮೂನೆಗಳನ್ನು ಹೋಲಿಸುವ ಪ್ರಯತ್ನ ಮಾಡಲಾರಂಭಿಸುವೆವು.  ಉಬ್ಬು ತಗ್ಗುಗಳು, ಎತ್ತರ ಇಳಿತಗಳು ನಿಜಕ್ಕೂ ಅತಿ ರಮ್ಯವಾದ ನೋಟವನ್ನು ಕಾಣುವೆವು.  ಒಂದು ಕಡೆ ಒಟ್ಟಾಗಿ ಐದು ಕಲಶಗಳನ್ನು ಜೋಡಿಸಿರುವರೇನೋ ಎಂಬಂತೆ ಕಾಣುವುದು, ಇನ್ನೊಂದು ಕಡೆ ಯಾವುದೋ ದೇವತೆಯ ಹೋಲಿಕೆ ಕಾಣುವುದು.  ಕೈಯಲ್ಲಿ ಶಂಖ ಚಕ್ರ ಗಧಾ ಪದ್ಮಗಳಿರುವ ಮಹಾವಿಷ್ಣುವೇನೋ ಎಂದು ಭ್ರಮಿಸುವಂತಾಗುವುದು.

ಉದ್ದಕ್ಕೂ ನಡೆಯುತ್ತಾ ನೋಡುತ್ತಾ ಹೋಗಲು ಮಾರ್ಗವನ್ನು ಮಾಡಿ, ಅಲ್ಲಲ್ಲೇ ವ್ಯೂ ಪಾಯಿಂಟುಗಳನ್ನು ಮಾಡಿರುವರು.  ಅನಾವಶ್ಯಕ ಸಾಹಸ ಮಾಡಿ ಸಂಭ್ರಮಿಸುವ ಕೆಲ ಯುವಕ ಯುವತಿಯರು, ನಿಷಿದ್ಧವಾದ ಪ್ರದೇಶಗಳವರೆಗೂ ಹೋಗಿ ಅಲ್ಲಿ ವಿವಿಧ ರೀತಿಯಲ್ಲಿ ನಿಂತು, ಕುಳಿತು ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ನೋಡಿ ಸ್ವಲ್ಪ ಬೇಸರವಾಯಿತು.  ಅದ್ಭುತ ಕಲೆಯನ್ನು ಕಾಣಲು ಬಂದಾಗಲೂ, ಅದನ್ನು ಪ್ರಶಂಸಿಸುವ ಬದಲು ಎಲ್ಲೆಂದರಲ್ಲಿ ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ಕಂಡು ನಗಬೇಕೋ ಅಳಬೇಕೋ ತಿಳಿಯದಾಯಿತು.  ಎಷ್ಟೋ ಅಡಿಗಳ ಆಳದಲ್ಲಿ, ಸಣ್ಣಗೆ ತೊರೆಯಂತೆ ಹರಿಯುತ್ತಿರುವುದೇ  ಪ್ರಖ್ಯಾತ ಕೊಲರೇಡೋ ನದಿಯೆಂದು ಮಗ ಬೆಟ್ಟು ಮಾಡಿ ತೋರಿಸಿದಾಗ, ಎಳೆ ಬಿಸಿಲಿನಲ್ಲಿ ಫಳಫಳಿಸುತ್ತಿದ್ದ ಗುಲಾಬಿ ಬಣ್ಣದ ಮಣ್ಣಿನ ಆಕೃತಿಗಳಲ್ಲಿ ನದಿ ಕಾಣಿಸಲೇ ಇಲ್ಲ.  ಕೊನೆಗೂ ೪-೫ ಬಾರಿ ಬೆಟ್ಟು ಮಾಡಿ, ಬೇರೆ ಬೇರೆ ಜಾಗದಲ್ಲಿ ತೋರಿಸಿದಾಗ ಅಲ್ಲಿ ಸಣ್ಣ ತೊರೆಯೊಂದು ಇದೆಯೆಂಬುದು ತಿಳಿಯಿತು.  ಗುಲಾಬಿ ಬಣ್ಣದ ವಿನ್ಯಾಸಗಳ ಮಧ್ಯದಲ್ಲಿ ಬಿಳಿಯ ಹಾಲಿನಂತೆ ಗೋಚರಿಸುವುದೇ ನದಿಯೆಂದು ಅರ್ಥವಾಗಲು ಸ್ವಲ್ಪ ಸಮಯವಾಯಿತು.



Tuesday, July 5, 2016

ಪ್ರವಾಸ ಕಥನ - ಅಮೆರಿಕ (ಮೂರನೆಯ ಕಂತು)

 
 
 
ಫೀನಿಕ್ಸ್ ನಲ್ಲಿನ ಇನ್ನೊಂದು ತುಂಬಾ ಸೆಳೆಯುವಂತಹ ಜಾಗವೆಂದರೆ ಪುತ್ತಿಗೆ ಮಠದವರ ಶ್ರೀ ವೇಂಕಟರಮಣ ಸ್ವಾಮಿ ದೇವಸ್ಥಾನ.  ಇದು ನನ್ನ ಮಗನ ಮನೆಗೆ ಸುಮಾರು ೭ ಮೈಲಿಯಷ್ಟು ದೂರವಿದೆ.  ಮೊದಲ ಸಲ ನಾವು ಅಲ್ಲಿಗೆ ಹೋದಾಗ, ಅದು ದೇವಸ್ಥಾನ ಎಂದೇ ತಿಳಿಯಲಿಲ್ಲ.  ದೊಡ್ಡದಾಗ ಜಾಗದಲ್ಲಿ ಮುಂದುಗಡೆ ಗಾಡಿಗಳು ನಿಲ್ಲಲು ಜಾಗ ಮಾಡಿ, ದೇವಸ್ಥಾನ ಕಟ್ಟಿದ್ದಾರೆ.  ಎತ್ತರವಾದ ಬಾಗಿಲುಗಳು, ಯಾವಾಗಲೂ ಸುಮ್ಮನೆ ಮುಚ್ಚಿಯೇ ಇರುತ್ತದೆ.  ನಾವು ತೆರೆದುಕೊಂಡು ಒಳಗೆ ಹೋಗಬೇಕು.  ನಮ್ಮಲ್ಲಿಯ ದೇವಾಲಯಗಳಂತೇ ಹೊರಗೆ ಚಪ್ಪಲಿ ಬಿಡಲು ಜಾಗ, ಕಾಲು ತೊಳೆಯಲು ನಲ್ಲಿ ಇದೆ.  ಒಳಗೆ ಪ್ರವೇಶಿಸಲು ಮುಂದು ಮಾಡಿರುವ ಬಾಗಿಲು ತೆರೆದ ಕೂಡಲೆ ಎದುರಿಗೇ ಭವ್ಯವಾಗಿ ಸ್ವಾಮಿ ಅಷ್ಟೆತ್ತರಕ್ಕೆ ನಿಂತುಬಿಟ್ಟಿದ್ದಾನೆ.  ನಿಜಕ್ಕೂ ತುಂಬಾ ಆಕರ್ಷಕವಾಗಿದೆ.  ಮೈ ತುಂಬಾ ಬರಿಯ ಬಿಳಿಯ ಕಲ್ಲಿನ ಆಭರಣಗಳನ್ನು ಧರಿಸಿಕೊಂಡು ಅಗಲವಾದ ಸುಂದರವಾದ ಅಂಚು ಇರುವಂತಹ ಪಂಚೆ ಉಟ್ಟು, ಅಂಚನ್ನು ಕಲಾತ್ಮಕವಾಗಿ ಮಡಿಸಿ, ಪಂಚೆಗೆ ಹೊಂದುವಂತೆ ಹೊದಿಸಿರುವ ಶಲ್ಯ, ಅದರ ಮೇಲೆ ವಿವಿಧ ರೀತಿಯ ಆಭರಣಗಳನ್ನು ಧರಿಸಿ ನಿಂತಿರುವನು.   ಸ್ವಾಮಿಯ ವಿಶೇಷತೆ ಎಂದರೆ ಧರಿಸಿರುವ ಎಲ್ಲಾ ಒಡವೆಗಳೂ ಸ್ವಚ್ಛ ಬಿಳುಪು ಕಲ್ಲಿನಲ್ಲಿ ಮಾಡಲ್ಪಟ್ಟಿರುವುದು.  ದೊಡ್ಡದಾದ ಹಜಾರದ ಒಳಗೆ ಗರ್ಭಗುಡಿ ಇರುವುದು.  ಹಜಾರದಲ್ಲಿ ಹೆಚ್ಚು ಬೆಳಕು ಇದ್ದರೂ ಕೂಡ, ಗರ್ಭಗುಡಿಯಲ್ಲಿ ಎಣ್ಣೆ ದೀಪದ ಬೆಳಕಿನಲ್ಲಿ ಸ್ವಾಮಿಯನ್ನು ನೋಡುವುದೇ ರೋಮಾಂಚಕಾರಿ ಅನುಭವವಾಗುವುದು.  ಗರ್ಭಗುಡಿಗೆ ತುಂಬಾ ಹತ್ತಿರದಲ್ಲಿಯೇ ನಿಂತು ದರ್ಶನ ಪಡೆಯುವ ಅವಕಾಶವಿರುವುದು.  ತಲೆಯೆತ್ತಿ ಸ್ವಾಮಿಯನ್ನು ನೋಡುತ್ತಾ ನಿಂತರೆ, ಸುತ್ತಲ ಪರಿಸರವೂ ಮರೆಯುವಂತಹ ಅನುಭವವಾಗುವುದು.  ಕೆಲವೇ ಕೆಲವು ಹೂಗಳಿಂದ ಅಲಂಕೃತನಾಗಿರುತ್ತಾನೆ ಸ್ವಾಮಿ.  ದೇವಲಯವಂತೂ ಅತ್ಯಂತ ಸ್ವಚ್ಛವಾಗಿರುತ್ತದೆ.  ಎಲ್ಲೂ ಒಂದು ಚೂರು ಕಸ ಕಡ್ಡಿ ಏನೂ ಇಲ್ಲ. 

ಸ್ವಾಮಿಯ ಬಲಪಕ್ಕದಲ್ಲಿ ಅಮ್ಮನವನ ಸನ್ನಿಧಾನವಿದೆ.  ಕೆನ್ನೆಗೆ ಅರಿಸಿನ ಹಚ್ಚಿಕೊಂಡು, ಮಂಗಳಮಯವಾಗಿ, ರೇಷ್ಮೆ ಸೀರೆಯುಟ್ಟು, ಒಡವೆಗಳನ್ನು ಧರಿಸಿ ಕುಳಿತಿರುವ ತಾಯಿ ಲಕ್ಷ್ಮೀದೇವಿ ಗೊಂದಲಗೊಂಡ ಮನಸ್ಸನ್ನು ಕ್ಷಣದಲ್ಲೇ ಸ್ಥಿಮಿತಗೊಳಿಸುವಳು.  ಅಮ್ಮನವರ ದರ್ಶನ ಪಡೆದುಕೊಂಡು ಹಾಗೇ ಪ್ರದಕ್ಷಿಣೆ ಬಂದರೆ ಅಮ್ಮನವರ ಸನ್ನಿಧಾನದ ಹಿಂದುಗಡೆಗೇ ನವಗ್ರಹಗಳ ದರ್ಶನ ಪಡೆಯಬಹುದು.  ಅಲ್ಲಿಂದ ಮುಂದೆ ೫-೬ ಹೆಜ್ಜೆ ಬಂದರೆ ಸರಿಯಾಗಿ ಸ್ವಾಮಿಯ ಹಿಂದೆ ಎಡಗಡೆಗೆ ರಾಯರ ಬೃಂದಾವನವಿದೆ.  ಪುಟ್ಟದಾದ ಪ್ರತ್ಯೇಕವಾದ  ಸನ್ನಿಧಾನದಲ್ಲಿ ರಾಯರು ನೆಲೆಸಿದ್ದಾರೆ.  ಒಳಗೆ ಒಬ್ಬರು ಮಾತ್ರ ಪ್ರದಕ್ಷಿಣೆ ಮಾಡುವಷ್ಟು ಜಾಗವಿದೆ.  ಗೋಡೆಯ ಮೇಲೆ ರಾಯರ ಜೀವನದ ಕೆಲವು ಪ್ರಮುಖ ಘಟನೆಗಳ ಚಿತ್ರ, ಅವರ ಜನನ, ಸಂನ್ಯಾಸ ಸ್ವೀಕಾರದ ದಿನಾಂಕಗಳನ್ನು ಪ್ರದರ್ಶಿಸಿದ್ದಾರೆ.   ರಾಯರಿಗೆ ವಂದಿಸಿ ಮುಂದೆ ಬಂದರೆ, ಪ್ರದಕ್ಷಿಣೆಯ ಕೊನೆಯ ಹಂತದಲ್ಲಿ, ಸ್ವಾಮಿಯ ಎಡಗಡೆಗೆ ಪ್ರತ್ಯೇಕವಾದ ಸ್ಥಾನವಿದೆ.  ಅದರಲ್ಲಿ ಮೇಲುಗಡೆಗೆ ಲಿಂಗರೂಪಿ ಈಶ್ವರನ ಸನ್ನಿಧಾನವಿದೆ.  ತಂದೆಯ ಜೊತೆಗೆಂಬಂತೆ, ಕೆಳಗಡೆಗೆ ವಿಘ್ನೇಶ್ವರನ ಸನ್ನಿಧಾನವಿದೆ.  ಸ್ವಾಮಿಗೆ ಒಂದು ಪ್ರದಕ್ಷಿಣೆ ಬರಲು ಹೆಚ್ಚೆಂದರೆ ೨ ನಿಮಿಷವಾಗಬಹುದು.  ಅಷ್ಟರಲ್ಲಿ ನಮಗೆ ಅಮ್ಮನವರ ದರ್ಶನ, ನವಗ್ರಹಗಳ ದರ್ಶನ, ರಾಯರ ಬೃಂದಾವನ ಹಾಗೂ ಕೊನೆಗೆ ಲಿಂಗರೂಪಿ ಈಶ್ವರ ಹಾಗೂ ವಿಘ್ನೇಶ್ವರನ ದರ್ಶನವಾಗುತ್ತದೆ.  ಪ್ರದಕ್ಷಿಣೆ ಬಂದು ಸ್ವಾಮಿಯ ಮುಂದುಗಡೆ ಹಾಸಿರುವ ಜಮಖಾನದ ಮೇಲೆ ಕಣ್ಮುಚ್ಚಿ ಕುಳಿತರೆ ಅಲ್ಲಿ ದೊರೆಯುವ ಪ್ರಶಾಂತತೆ ಎಂತಹ ಗೊಂದಲ, ಕಳವಳವನ್ನೂ ಕಳೆದು ಬಿಡುವುದು.  ಭಕ್ತಾದಿಗಳು ಯಾರೂ ಜೋರಾಗಿ ಮಾತನಾಡದೆ, ತಮ್ಮ ಪಾಡಿಗೆ ತಾವು ದರ್ಶನ ಮಾಡಿಕೊಂಡು, ನಿಶ್ಯಬ್ದವಾಗಿ ಕುಳಿತು, ಧ್ಯಾನಿಸುತ್ತಾರೆ.  ಮಂದಿರದ ಅಕ್ಕ ಪಕ್ಕಗಳಲ್ಲಿ ಕೋಣೆಗಳನ್ನು ಕಟ್ಟಿಸಿದ್ದಾರೆ.  ಪ್ರತಿ ಹುಣ್ಣಿಮೆಯಲ್ಲೂ ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ.  ಪೂಜೆ, ಹೋಮ ಹವನಗಳನ್ನು ಮಾಡಲು ಎಲ್ಲಾ ಅನುಕೂಲಗಳನ್ನೂ ಕಲ್ಪಿಸಿದ್ದಾರೆ.   

ಮಗನ ಮನೆಯ ಗೃಹಪ್ರವೇಶ ಮಾಡಿಸಲು ಪುತ್ತಿಗೆ ಮಠದವರೇ ಬಂದಿದ್ದರು.  ಮಠದಲ್ಲಿಯೇ ಊಟಕ್ಕೂ ತಿಳಿಸಿದ್ದರು.  ಪೂಜೆ ಮುಗಿದ ನಂತರ ಊಟವನ್ನು ತರಲು ನಾವೇ ಹೋಗಿದ್ದೆವು.  ದೇವಸ್ಥಾನದ ಬಲಪಕ್ಕದಲ್ಲಿಯೇ ಪಾಕಶಾಲೆಯಿದೆ.  ದೇವರ ದರ್ಶನ ಮಾಡಿಕೊಂಡು ನಾವು ಪಾಕಶಾಲೆಗೆ ಹೋದೆವು.  ಅದಾಗಲೇ ನಮಗಾಗಿ ಊಟ ತಯಾರಾಗಿತ್ತು.  ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅನ್ನ, ಸಾರು, ಮಿಶ್ರ ತರಕಾರಿಗಳ ಕೂಟು ಮತ್ತು ಪಾಯಸವನ್ನು ತುಂಬಿಸಿ ಅಲ್ಯೂಮಿನಿಯಮ್ ಹಾಳೆಗಳಿಂದ ಮುಚ್ಚಿಟ್ಟಿದ್ದರು.  ಎರಡು ತರಹದ ಪಲ್ಯಗಳು, ಕೋಸುಂಬರಿಯನ್ನು ಅಲ್ಯೂಮಿನಿಯಂನ ಉಪಯೋಗಿಸಿ ತ್ಯಾಜ್ಯಕ್ಕೆ ಹಾಕುವಂತಹ ಅಗಲವಾದ ತಟ್ಟೆಗಳಲ್ಲಿ ತುಂಬಿಸಿ, ಅದಕ್ಕೂ ಮೇಲೆ ಅಲ್ಯುಮಿನಿಯಂ ಹಾಳೆಗಳನ್ನು ಮುಚ್ಚಿದ್ದರು.  ಎಲ್ಲವನ್ನೂ ಅಚ್ಚುಕಟ್ಟಾಗಿ ಎರಡು ಕಾರುಗಳಲ್ಲಿ ಜೋಡಿಸಿಕೊಂಡು ನಾವು ಮನೆಗೆ ತಂದೆವು.  ಒಂದೊಂದು ಪದಾರ್ಥವೂ ಅಷ್ಟೊಂದು ರುಚಿಯಾಗಿತ್ತು.  ಮಧ್ಯಾಹ್ನದ ಊಟವಾಗಿ, ರಾತ್ರಿ ಮತ್ತೆ ಎಲ್ಲರೂ ವಾಪಸ್ಸು ಬಂದು ಊಟ ಮಾಡಿದರೂ ಕೂಡ ಇನ್ನೂ ಮಿಕ್ಕುವಷ್ಟು ಧಾರಾಳವಾಗಿ ಕೊಟ್ಟಿದ್ದರು.  ಲಾಡು ಮತ್ತು ಖಾರಶೇವೆ ೧೫ ದಿನಗಳಾದರೂ ಕೆಡದೆ ಚೆನ್ನಾಗಿತ್ತು.  ಪರಮಾತ್ಮನ ಪ್ರಸಾದವೆಂದರೆ ಅದೆಷ್ಟು ರುಚಿಯಾಗಿರುವುದು ಜೊತೆಗೆ ಇಲ್ಲಿ ಶುಚಿಯಾಗಿಯೂ ಮಾಡಿದ್ದರು.  ಪಾಕಶಾಲೆಯ ಒಳಗೆ ನಾವು ಹೋಗಿ ನೋಡಿದಾಗ ಎಲ್ಲೂ ಸ್ವಲ್ಪವೂ ಪದಾರ್ಥಗಳು ಚೆಲ್ಲಿರಲಿಲ್ಲ.  ಎಲ್ಲಾ ತುಂಬಾ ವ್ಯವಸ್ಥಿತವಾಗಿತ್ತು.  ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ.  ನೋಡಿದರೆ ಸಂತೋಷವಾಗುವಂತಿರುವುದು.

ಶಿವರಾತ್ರಿಯ ದಿನ ನಾವು ದೇವಸ್ಥಾನಕ್ಕೆ ಹೋದಾಗ, ಸಾಯಂಕಾಲ ರುದ್ರಾಭಿಷೇಕ ನಡೆಯುತ್ತಿತ್ತು.  ೫-೬ ಜನ ಋತ್ವಿಕರು ಕುಳಿತು ರುದ್ರ ಪಾರಾಯಣ ಮಾಡುತ್ತಿದ್ದರು.  ಅಭಿಷೇಕ ಮಾಡಿದ ಹಾಲು ಎಲ್ಲೂ ಕೆಳಗೆ ಸೋರಿ ಕೊಚ್ಚೆಯಾಗದಂತೆ ಶಿಸ್ತಿನಿಂದ ಅಭಿಷೇಕ ನಡೆಯುತ್ತಿತ್ತು.  ಪಕ್ಕದ ಹಜಾರದಲ್ಲಿ ಲಿಂಗರೂಪಿ ಈಶ್ವರನನ್ನು ಕುಳ್ಳಿರಿಸಿ, ಪಕ್ಕದಲ್ಲಿಯೇ ಕೊಳಗದಲ್ಲಿ ಹಾಲು, ನೀರು ಇಟ್ಟಿದ್ದರು.  ದೇವಸ್ಥಾನಕ್ಕೆ ಹೋದವರೆಲ್ಲಾ, ಅರ್ಧ ಹಾಲು ಅರ್ಧ ನೀರು ಬೆರೆಸಿಕೊಂಡು ಸ್ವತಃ ಈಶ್ವರನಿಗೆ ಅಭಿಷೇಕ ಮಾಡುವ ವ್ಯವಸ್ಥೆ ಮಾಡಲಾಗಿತ್ತು.  ಅಲ್ಲೂ ಕೂಡ ಯಾರೂ ಹೊರಗೆಲ್ಲಾ ಚೆಲ್ಲದೆ ಅಚ್ಚುಕಟ್ಟಾಗಿ ಕೆಲಸ ಪೂರೈಸಿ, ಮನೋನಿಯಾಮಕ ರುದ್ರದೇವರಿಗೆ ನಮಿಸಿ, ನಿಶ್ಯಬ್ದವಾಗಿ ಹೊರಡುತ್ತಿದ್ದರು.  ನಾವುಗಳೂ ಧನ್ಯೋಸ್ಮಿ ಎಂದುಕೊಳ್ಳುತ್ತಾ,  ಶಿವನಿಗೆ ಅಭಿಷೇಕ ಮಾಡಿ, ಮನಸಾರ ನಮಸ್ಕರಿಸಿ ಹೊರಟೆವು.  ೮.೩೦ ತನಕ ದೇವಸ್ಥಾನದಲ್ಲಿಯೇ ಇದ್ದಿದ್ದರೆ, ಊಟವನ್ನೂ ಕೊಡುತ್ತಿದ್ದರೆಂಬುದು ತಿಳಿಯಿತು.  ಸ್ವಾಮಿಯ ನೆನಪಿನಲ್ಲಿಯೇ ಮನೆಗೆ ವಾಪಸಾದೆವು. ಎಲ್ಲೂ, ಕೊಳೆತ ಹೂವುಗಳು, ಓಡಾಡುವ ಜಾಗದಲ್ಲಿ ಚೆಲ್ಲಿದ ಹಾಲು, ಕೊಚ್ಚೆ, ರಾಡಿ ಯಾವುದೂ ಇಲ್ಲದೆ ದೇವಸ್ಥಾನ, ಎಂದಿನಂತೇ ಅತ್ಯಂತ ಶುಚಿಯಾಗಿತ್ತು.  ಇನ್ನೂ ಸ್ವಲ್ಪ ಹೊತ್ತು ಕುಳಿತು ರುದ್ರಾಭಿಷೇಕ ನೋಡಬೇಕೆಂಬ ಆಸೆ ಇದ್ದರೂ, ಮನಸ್ಸಿಲ್ಲದ ಮನಸ್ಸಿನಿಂದ ಹೊರಡಲೇ ಬೇಕಾಯಿತು.  ಆದರೆ ಅಲ್ಲಿನ ಶಿಸ್ತು, ಶುಭ್ರತೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಸುಂದರ ದೃಶ್ಯವಾಗಿ ನಿಂತಿರುವುದು.  
 
ಅಂತರ್ಜಾಲದಲ್ಲಿ ದೇವಸ್ಥಾನ :  http://aztemple.org/
 
 
 ಚಿ ತ್ರ ಕೃ ಪೆ  : ಅಂ ತ ರ್ಜಾ ಲ