Sunday, September 6, 2015

ಶ್ರೀಕೃಷ್ಣನ ಲೀಲೆಗಳು - ನಲಕೂಬ ಮತ್ತು ಮಣಿಗ್ರೀವರ ಶಾಪ ವಿಮೋಚನೆ

ಭಗವಂತನಾದ ಶ್ರೀಕೃಷ್ಣನ ಬಾಲ್ಯ ಲೀಲೆಗಳು ಅತ್ಯಂತ ರೋಚಕವೆನಿಸುವುದು.  ತನ್ನ ಲೀಲಾ ವಿನೋದಗಳ ಮೂಲಕ ಸಮಸ್ತ ಜೀವಿಗಳನ್ನೂ ತನ್ನತ್ತ ಕರ್ಷಿಸುವ ಕೃಷ್ಣ ಒಂದು ಸುಂದರವಾದ ಭಾವ.  ಪುಟ್ಟ ಶಿಶುವಾಗಿ ತನ್ನ ತುಂಟಾಟಗಳನ್ನು ಪ್ರದರ್ಶಿಸುತ್ತಾ, ಅನೇಕ ದುಷ್ಟ ದಾನವರನ್ನು ಸಂಹರಿಸುತ್ತಾನೆ.  ಶಾಪಗ್ರಸ್ತರಾದ ದೇವ, ಗಂಧರ್ವರನ್ನು ಉದ್ಧರಿಸುತ್ತಾನೆ.  ಭಾಗವತದ ದಶಮಸ್ಕಂಧದಲ್ಲಿ ಮುದ್ದು ಕೃಷ್ಣನ ಇಂತಹ ತುಂಟಾಟಗಳ ದೃಷ್ಟಾಂತಗಳೂ, ವಿವರಣೆಗಳೂ ವರ್ಣರಂಜಿತವಾಗಿ ವಿವರಿಸಲ್ಪಟ್ಟಿವೆ.  ಕೃಷ್ಣನು ಕೇವಲ ಭಕ್ತರನ್ನು ಮಾತ್ರ ಸೆಳೆಯುವವನಲ್ಲ.  ಪ್ರತೀ ಜೀವಿಯನ್ನೂ ತನ್ನತ್ತ ಸೆಳೆಯುವಂತಹ ಅದ್ಭುತ ಶಕ್ತಿ.  ಬಾಲ ಕೃಷ್ಣನ ಆಟಗಳ ರಂಜನೀಯ ಕಥೆಗಳನ್ನು ಕೇಳುತ್ತಾ, ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ ಕೃಷ್ಣನನ್ನೇ ಕಾಣುವಳು.  ಕೇಳುವ ತಾಯಿಯರಿಗೇ ಇಷ್ಟು ಮುದ್ದು ಬರಿಸುವ ಪುಟ್ಟ ಕೃಷ್ಣ ತನ್ನ ತಾಯಿ ಯಶೋದೆಗೆ ಅದಿನ್ನೆಷ್ಟು ಪ್ರಿಯನಾಗಿರುವನೆಂಬುದು ನಮ್ಮ ಊಹೆಗೂ ನಿಲುಕದ ಭಾವವಾಗುವುದು. 

ಒಮ್ಮೆ ಯಶೋದೆಯು ಶ್ರೀಕೃಷ್ಣನ ಬಾಲಲೀಲೆಗಳನ್ನು ಹೇಳುತ್ತಾ ಮೊಸರು ಕಡೆಯುತ್ತಾ ಕುಳಿತಿರುವಳು.   ಪುಟ್ಟ ಕೃಷ್ಣನು ತಾಯಿಯ ಸ್ತನ್ಯಪಾನ ಮಾಡಬೇಕೆಂಬ ಇಚ್ಛೆಯಿಂದ, ಆ ತಾಯಿಯ ಹೃದಯದಲ್ಲಿ ಮಾತೃಪ್ರೇಮವನ್ನು ಉಕ್ಕಿಸುವಂತೆ, ಮೋಹಕ ನಗು ನಗುತ್ತಾ ಬರುವನು.  ಮುದ್ದು ಮುಖದ ಕಂದನ ಮುಖವನ್ನೇ ನೋಡುತ್ತಾ ಮೈಮರೆತಿದ್ದ ಯಶೋದೆಗೆ ಒಲೆಯ ಮೇಲೆ ಕಾಯಿಸಲಿಟ್ಟಿದ್ದ ಹಾಲುಕ್ಕಿ ವಾಸನೆಯು ಬಂದಾಗ, ಮಗುವನ್ನು ಕೆಳಗಿಳಿಸಿ, ಒಳಗೆ ಹೊರಟು ಹೋಗುವಳು.  ತಾಯಿಯ ಮಡಿಲಿನಿಂದ ಕೆಳಗಿಳಿಸಲ್ಪಟ್ಟ ಮಗುವಿಗೆ ಕೋಪ ಬರುವುದು.  ಹತ್ತಿರದಲ್ಲಿಯೇ ಇದ್ದ ಮೊಸರಿನ ಮಡಿಕೆಯನ್ನು ಒಡೆದು, ಕಳ್ಳ ಅಳು ಅಳುತ್ತಾ, ಅಬ್ಬರ ಮಾಡುವನು.  ತಾಯಿ ಬಾರದಿರುವುದರಿಂದ ಮೆಲ್ಲಗೆ ಒಳಮನೆಗೆ ನುಸುಳಿ ಬೆಣ್ಣೆಯನ್ನು ತಿನ್ನಲಾರಂಭಿಸುವನು.  ಹೊರಗೆ ಬಂದ ಯಶೋದೆ ಗಡಿಗೆ ಒಡೆದು, ಮೊಸರು ಚೆಲ್ಲಿರುವುದನ್ನು ಕಂಡು, ಕೃಷ್ಣನ ತುಂಟಾಟದಿಂದ ಹುಸಿನಗುತ್ತಾ ಮಗುವನ್ನು ಹುಡುಕುವಳು.  ಇನ್ನೊಂದು ಕೊಠಡಿಯಲ್ಲಿ  ಶಬ್ದವೇ ಇಲ್ಲದಂತೆ ಮೌನವಾಗಿ ಪುಟ್ಟ ಕೃಷ್ಣನು ಬೆಣ್ಣೆ ಮೆಲ್ಲುತ್ತಾ ನಿಂತಿರುವನು.  ಅಲ್ಲಿದ್ದ ಒರಳು ಕಲ್ಲನ್ನು ಬೋರಲು ಹಾಕಿ ಅದರ ಮೇಲೆ ಹತ್ತಿ ನಿಂತು ಬೆಣ್ಣೆಯನ್ನು ಎಟುಕಿಸಿಕೊಂಡು, ತಾನು ತಿನ್ನುವುದಲ್ಲದೇ ಸುತ್ತಲೂ ನಿಂತಿದ್ದ ಕೋತಿಗಳಿಗೂ ಯಥೇಚ್ಛವಾಗಿ ತಿನ್ನಿಸುತ್ತಿರುವನು.  ತಾಯಿ ಕೈಯಲ್ಲಿ ಕೋಲು ಹಿಡಿದುಕೊಂಡು, ತನ್ನ ಕಡೆಯೇ ಬರುತ್ತಿರುವುದನ್ನು ಕಂಡು, ಹೆದರಿದಂತೆ ನಟಿಸುತ್ತಾ ಒರಳುಕಲ್ಲಿನ ಮೇಲಿಂದ ಧುಮುಕಿ ಪುಟ್ಟ ಕೃಷ್ಣನು ಓಡುವನು.  ಜಗನ್ನಿಯಾಮಕನಾದ ಪರಮಾತ್ಮನು ತನ್ನ ತಾಯಿಗೆ ಹೆದರಿದಂತೆ ನಟಿಸುತ್ತಾ ಓಡುವನು.  ಓಡಲು ಆಗದಿದ್ದರೂ, ಕಷ್ಟಪಟ್ಟು ಮಗುವಿನ ಹಿಂದೆ ಓಡಿ ಆಯಾಸಗೊಳ್ಳುತ್ತಿದ್ದ ತಾಯಿಯ ಕೈಗೆ, ಕೊನೆಗೂ ಮಗ ಸಿಕ್ಕಿ ಬಿಡುವನು.  ತಾಯಿಯ ಕಷ್ಟ ನೋಡಲಾರದೆ, ಕರುಣೆಯಿಂದ ಭಗವಂತನೇ ತನ್ನನ್ನು ತಾನು ಒಪ್ಪಿಸಿಕೊಂಡನೆಂದು ತಿಳಿಯಬಹುದು.   ಕೈಗೆ ಸಿಕ್ಕಿದ ತುಂಟ ಮಗುವನ್ನು ಯಶೋದೆ ತಾಯಿಯು ತೋಳು ಹಿಡಿದು ಗದರಿಸಿದರೆ, ಎಲ್ಲಿ ತಾಯಿ ಹೊಡೆಯುವಳೋ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ, ಕಣ್ಣಿನ ಕಾಡಿಗೆಯನ್ನೆಲ್ಲಾ ಕೆನ್ನೆಗೆ ಒರೆಸಿಕೊಳ್ಳುವನು.  ಭಯಗೊಂಡ ಮಗುವನ್ನು ಕಂಡು ಯಶೋದೆ ಕೋಲನ್ನು ದೂರ ಬಿಸಾಡುವಳು.  ಪಕಪಕನೆ ನಗುವ ಮುದ್ದು ಮಗನನ್ನು ಓಡಿ ಹೋಗದಂತೆ ತಡೆಯಬೇಕೆಂದು ತಾಯಿಯು ಮಗನನ್ನು ಒರಳು ಕಲ್ಲಿಗೆ ಕಟ್ಟಿ ಹಾಕುವ ಪ್ರಯತ್ನ ಮಾಡುವಳು.  ಎಷ್ಟು ಹಗ್ಗಗಳನ್ನು ಜೋಡಿಸಿದರೂ ಪುಟ್ಟ ಕೃಷ್ಣನ ಸೊಂಟಕ್ಕೆ ಹಗ್ಗ ಬಿಗಿಯಲಾಗುವುದಿಲ್ಲ.  ಆಶ್ಚರ್ಯ, ಆಯಾಸದಿಂದ ಕಂಗೆಟ್ಟಿದ್ದ ಯಶೋದೆಯ ಮುಖವನ್ನು ಕಂಡು ಭಗವಂತನು ಕರುಣೆಯಿಂದ ತನ್ನನ್ನು ತಾನೇ ಕಟ್ಟಿ ಹಾಕಿಸಿಕೊಳ್ಳುವನು.   ಒರಳು ಕಲ್ಲಿಗೆ ಕಟ್ಟಿಹಾಕಿರುವುದರಿಂದ ಇನ್ನು ಕಂದನ ತಂಟೆಯಿರುವುದಿಲ್ಲವೆಂದು ತಿಳಿದು ಗೃಹಕೃತ್ಯದಲ್ಲಿ ತೊಡಗುವಳು. 

ತಾಯಿಯ ಗಮನ ತನ್ನ ಕಡೆ ಇಲ್ಲದಿರುವುದನ್ನು ಕಂಡು ಶ್ರೀಕೃಷ್ಣನು ಶಾಪದಿಂದ ವ್ರಜಭೂಮಿಯಲ್ಲಿಯೇ ಜೋಡಿ ಮತ್ತಿಯ ಮರಗಳಾಗಿ  ಹುಟ್ಟಿ ಬೆಳೆದಿರುವ ಯಕ್ಷರಾಜನಾದ ಕುಬೇರನ ಪುತ್ರರಿಗೆ ಶಾಪ ವಿಮೋಚನೆಯನ್ನು ಮಾಡಬೇಕು ಎಂದು ಸಂಕಲ್ಪಿಸುವನು.  ನಲಕೂಬ ಮತ್ತು ಮಣಿಗ್ರೀವ ಎಂಬ ಕುಬೇರನ ಮಕ್ಕಳು ಅಪಾರವಾದ ಐಶ್ವರ್ಯ, ಸೌಂದರ್ಯ ಹಾಗೂ ಅಹಂಕಾರಗಳಿಂದ ನಾರದ ಮಹರ್ಷಿಗಳಿಂದ ಶಾಪಕ್ಕೆ ಒಳಗಾಗಿರುವರು.




ನಲಕೂಬ ಮತ್ತು ಮಣಿಗ್ರೀವರಿಬ್ಬರೂ ಈಶ್ವರನ ಅನುಚರರಾಗಿದ್ದರೂ ಕೂಡ ಅತ್ಯಂತ ದರ್ಪಿಷ್ಠರಾಗಿದ್ದರು.  ಒಮ್ಮೆ ಮಂದಾಕಿನೀ ನದಿಯ ತೀರದಲ್ಲಿ ಕೈಲಾಸದ ರಮಣೀಯವಾದ ಉಪವನದಲ್ಲಿ ’ವಾರುಣೀ’ ಎಂಬ ಮದಿರೆಯನ್ನು ಕುಡಿದು, ಮತ್ತರಾಗಿ ಗಂಗಾನದಿಯಲ್ಲಿ ಅನೇಕ ಸ್ತ್ರೀಯರೊಡನೆ ಜಲಕ್ರೀಡೆಯಾಡುವರು.  ಆ ಸಮಯದಲ್ಲಿ, ಅದೇ ಮಾರ್ಗವಾಗಿ ನಾರದ ಮಹರ್ಷಿಗಳು ಬರುವರು.  ಮಹರ್ಷಿಗಳನ್ನು ಕಂಡು, ನಾಚಿಕೆ ಮತ್ತು ಭಯದಿಂದ ಸ್ತ್ರೀಯರೆಲ್ಲಾ ವಸ್ತ್ರ ಧರಿಸಿದರೆ, ಕುಬೇರ ಪುತ್ರರು ಮಾತ್ರ ವಿಚಲಿತರಾಗದೆ, ನಗ್ನವಾಗಿಯೇ ಇರುವರು.  ಧನಮದದಿಂದ ಕುರುಡರಾಗಿರುವ ಕುಬೇರ ಪುತ್ರರು, ಇಂದ್ರಿಯಗಳ ಚಾಪಲ್ಯಕ್ಕೆ ಸಿಲುಕಿ ಮದ್ಯಪಾನವನ್ನು ಮಾಡಿರುವರು, ಸ್ತ್ರೀಲಂಪಟರಾಗಿರುವರು, ಬುದ್ಧಿಕೆಟ್ಟಿರುವರು.  ಪರರ ಎದುರಲ್ಲಿ ತಾವು ನಗ್ನರಾಗಿರುವೆವೆಂಬ ಅರಿವೂ ಇಲ್ಲದ ಇವರುಗಳು ವೃಕ್ಷಯೋನಿಯನ್ನು ಹೊಂದಲು ಯೋಗ್ಯರಾಗಿರುವರು.  ವೃಕ್ಷಗಳಾಗಿ ಹುಟ್ಟುವುದರಿಂದ ಯಾವ ದುರಭಿಮಾನವೂ ಇರುವುದಿಲ್ಲ ಮತ್ತು ನನ್ನ ಅನುಗ್ರಹದಿಂದ ಇವರಿಗೆ ಭಗವಂತನ ವಿಸ್ಮರಣೆಯಾಗುವುದಿಲ್ಲ.  ನನ್ನ ಅನುಗ್ರಹದಿಂದಲೇ ದೇವಮಾನದ ೧೦೦ ವರ್ಷಗಳು ಕಳೆದ ನಂತರ ಭಗವಾನ್ ಶ್ರೀಕೃಷ್ಣನ ಸಾನಿಧ್ಯವು ಪ್ರಾಪ್ತವಾಗಿ, ಶಾಪ ಮುಕ್ತರಾಗುವರು.  ಭಗವಂತನಲ್ಲಿ ಪರಮ ಭಕ್ತಿಯುಳ್ಳವರಾಗಿ ಪುನಃ ಸ್ವರ್ಗಕ್ಕೆ ತೆರಳುವರು ಎಂದು ಯೋಚಿಸಿ, ಕುಬೇರ ಪುತ್ರರಿಗೆ ಶಾಪ ಕೊಟ್ಟು ಬದರಿಕಾಶ್ರಮಕ್ಕೆ ಹೊರಟುಹೋಗುವರು.  ಕುಬೇರ ಪುತ್ರರಾದ ನಲಕೂಬ ಮತ್ತು ಮಣಿಗ್ರೀವರು ಒಡನೆಯೇ ಮತ್ತಿ ಮರಗಳಾಗಿ ಹುಟ್ಟಿ "ಯಮಾರ್ಜುನ ವೃಕ್ಷ"ಗಳೆಂಬ ಹೆಸರಿನಿಂದ ಪ್ರಸಿದ್ಧರಾಗುವರು.  ಪರಮ ಭಕ್ತರಾದ ನಾರದ ಮಹರ್ಷಿಗಳ ಮಾತುಗಳನ್ನು ಸತ್ಯವಾಗಿಸುವುದಕ್ಕಾಗಿಯೇ ಭಗವಂತನಾದ ಪುಟ್ಟ ಕೃಷ್ಣನು ಇಷ್ಟೆಲ್ಲಾ ನಾಟಕವಾಡಿ, ತನ್ನನ್ನು ಕಟ್ಟಿ ಹಾಕಿದ್ದ ಒರಳು ಕಲ್ಲನ್ನು ಎಳೆಯುತ್ತಾ ಮತ್ತಿ ಮರಗಳ ಮಧ್ಯದಲ್ಲಿ ನುಸುಳುವನು.  ಎರಡು ವೃಕ್ಷಗಳ ಮಧ್ಯದಲ್ಲಿ ತೂರಲು ಸಾಧ್ಯವಾಗದೆ ನಿಂತಿದ್ದ ಒರಳು ಕಲ್ಲಿನ ಹಗ್ಗವನ್ನು ಶ್ರೀಕೃಷ್ಣನು ಬಲಪೂರ್ವಕವಾಗಿ ಸೆಳೆಯುವನು.  ದೊಡ್ಡ, ಚಿಕ್ಕ ರೆಂಬೆಗಳು, ಎಲೆಗಳು, ಚಿಗುರುಗಳು ಎಲ್ಲವೂ ಕಂಪಿಸುತ್ತಾ ಎರಡೂ ಮಹಾವೃಕ್ಷಗಳು ಬುಡ ಸಮೇತವಾಗಿ ಸಿಡಿಲಿನಂತೆ ಆರ್ಭಟಿಸುತ್ತಾ ಕೆಳಗುರುಳುವುವು.  ಧರೆಗುರುಳಿದ ವೃಕ್ಷಗಳಿಂದ ಅಗ್ನಿಗೆ ಸಮಾನ ತೇಜಸ್ಸಿನಿಂದ ಕೂಡಿರುವ ಇಬ್ಬರು ಪುರುಷರು ಹೊರಬಂದು ಭಗವಂತನ ಪಾದಗಳಲ್ಲಿ ತಮ್ಮ ತಲೆಯಿರಿಸಿ ನಮಸ್ಕರಿಸಿ ಪ್ರಾರ್ಥಿಸುವರು.  ತಮ್ಮೆಲ್ಲಾ ತಪ್ಪುಗಳನ್ನೂ ಮನ್ನಿಸಿ ಸದಾ ಭಗವಂತನಲ್ಲಿ ಪರಮ ಪ್ರೇಮಯುಕ್ತವಾದ ಭಕ್ತಿಭಾವವು ತಮ್ಮ ಮನಸ್ಸಿನಲ್ಲಿ ನೆಲೆಸುವಂತೆ ಅನುಗ್ರಹಿಸೆಂದು ಕೇಳಿಕೊಳ್ಳುವರು.  ಸುಪ್ರೀತನಾದ ಭಗವಂತನು ಅನನ್ಯವಾದ ಭಕ್ತಿ ಭಾವದಿಂದ ನನ್ನನ್ನೇ ಪರಮಾಶ್ರಯನನ್ನಾಗಿ ಭಾವಿಸಿಕೊಂಡು ನಿಮ್ಮ ಲೋಕಗಳಿಗೆ ತೆರಳಿ ಎಂದು ಆದೇಶಿಸುವನು.  ಭಗವಂತನ ಮಾತುಗಳನ್ನು ಕೇಳಿ ಸಹೋದರರು ಶ್ರೀಕೃಷ್ಣನಿಗೆ ಪುನಃ ಪುನಃ ಪ್ರದಕ್ಷಿಣೆ ಬಂದು ನಮಸ್ಕರಿಸುತ್ತಾ ಹೊರಡುವರು.

ಶ್ರೀಕೃಷ್ಣನ ಅವತಾರವು ಭೂ ಭಾರ ಹರಣಕ್ಕಾಗಿಯೇ ಆಗಿರುವುದೆಂಬುದು ಈ ತರಹದ ನಾನಾ ದೃಷ್ಟಾಂತಗಳಿಂದ ತಿಳಿಯಬಹುದಾಗಿದೆ.  ವಸುದೇವ-ದೇವಕಿಯರ ಪುತ್ರನಾಗಿ ಅವತರಿಸಿದಾಗಿನಿಂದಲೂ, ದುಷ್ಟರನ್ನು ಶಿಕ್ಷಿಸುತ್ತಾ, ಶಿಷ್ಟರನ್ನು ರಕ್ಷಿಸುತ್ತಾ, ಅನೇಕ ಶಾಪಗ್ರಸ್ತರನ್ನು ಉದ್ಧರಿಸುತ್ತಾ, ಪ್ರತಿ ಹೆಜ್ಜೆಯಲ್ಲೂ ತಾನು ಭಗವಂತನೆಂಬುದನ್ನು ತೋರಿಸಿಕೊಡುವನು.  ಇದು ಶ್ರೀಕೃಷ್ಣನ ಲೀಲಾ ವಿನೋದವಾಗಿದೆ.



 

ಚಿತ್ರಕೃಪೆ : ಅಂತರ್ಜಾಲ