Wednesday, November 23, 2016

ಪ್ರವಾಸ ಕಥನ - ಅಮೆರಿಕ ( ಐದನೆಯ ಕಂತು)

ಗ್ರ್ಯಾಂಡ್ ಕ್ಯಾನ್ಯನ್ ಸುಮಾರು ೪೪೬ ಕಿಲೋಮೀಟರ್ ಅಥವಾ ೨೭೭ ಮೈಲಿಗಳಷ್ಟು ವಿಸ್ತಾರವಾಗಿದೆ.  ಇದರ ಮೇಲ್ಭಾಗದ ೯೬ ಕಿಲೋಮೀಟರ್ ಅಥವಾ ೬೦ ಮೈಲಿಗಳಷ್ಟು ಹಾಲುಗಲ್ಲಿನಿಂದ (ಮಾರ್ಬಲ್ ಕಲ್ಲು) ರಚಿತವಾಗಿರುವ ಭಾಗವಾಗಿದೆ.  ಗ್ರ್ಯಾಡ್ ಕ್ಯಾನ್ಯನ್ ಸುಮಾರು ೧೮೬೯ರಲ್ಲಿ ಭೂಗರ್ಭ ಶಾಸ್ತ್ರಜ್ಞನಾದ ಜಾನ್ ವೆಸ್ಲಿ ಪೋವೆಲ್ ನ ಮೊಟ್ಟ ಮೊದಲ ಸಾಹಸಪ್ರಿಯವಾದ ಕೊಲರಾಡೋ ನದಿಯ ಪಾತ್ರವನ್ನನುಸರಿಸಿ ಮಾಡಿದ ಸಂಚಾರದಿಂದಾಗಿ ಬೆಳಕಿಗೆ ಬಂದ  ಪ್ರಕೃತಿ ನಿರ್ಮಿತ ಉತ್ಕೃಷ್ಠ  ಕಲೆಯಾಗಿದೆ.   ಅಲ್ಲಿಂದ ಇಲ್ಲಿಯವರೆಗೆ ಬಂದ ಅನೇಕ ಭೂಗರ್ಭ ಶಾಸ್ತ್ರಜ್ಞರನ್ನು ಆಕರ್ಷಿಸುತ್ತಲೇ ಇದೆ.  ಸಾವಿರಾರು ಭೂಗರ್ಭ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ.  ಹೊಸ ಹೊಸ ಆಯಾಮಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ.
















ಅರಿಜೋನ ಪ್ರದೇಶದ ಉತ್ತರದ ಕಡೆ ಇರುವ ಈ ಕ್ಯಾನ್ಯನ್ ಎಂಬ ಪ್ರಕೃತಿಯ ಪವಾಡ ಕೊಲರಾಡೋ ನದಿಯ ದಕ್ಷಿಣ ತಪ್ಪಲು ಪ್ರದೇಶದ ಕಡೆಯಿಂದ ರಚಿತವಾಗಿದೆ.  ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತವು ಯಾವ ರಾಸಾಯನಿಕ ಕ್ರಿಯೆಗಳಿಂದ ರಚಿಸಲ್ಪಟ್ಟಿದೆ ಎಂಬುದು ಕುತೂಹಲಕರ ವಿಷಯವಾಗಿದೆ.  ಮಳಲು ಕಲ್ಲು (sand stone), ಸುಣ್ಣದ ಕಲ್ಲು (lime stone) ಮುಂತಾದವುಗಳ ಗಷ್ಟು ಅಥವಾ ಚರಟಗಳ ಪದರಗಳಿಂದಲೂ, ಬೆಂಕಿ ಹತ್ತಿಕೊಳ್ಳಬಲ್ಲ ಗ್ರಾನೈಟ್ ಕಲ್ಲುಗಳಿಂದಲೂ ರಚಿತವಾಗಿದೆ.  ನಿರಂತರವಾಗಿ ನೀರಿನೊಂದಿಗೆ ಸಂಭವಿಸಿದ ಘರ್ಷಣೆಯಿಂದಾಗಿ ಪ್ರಕೃತಿಯ ಕುಶಲತೆಯು ಮೆರೆದಿದೆ.  ಅಪಾರವಾದ ’ಜಲಶಕ್ತಿ’ಯ ಪ್ರದರ್ಶನ ಸುಂದರವಾದ ಕಲೆಯಾಗಿ ಅರಳಿದೆ.
 

ಸಾವಿರಾರು ಮೈಲುಗಳಿಂದ ನೀರಿನೊಂದಿಗೆ ಅಲೆಗಳ/ಪ್ರವಾಹದ ಮೂಲಕ ಹರಿದು ಬಂದ ರಾಸಾಯನಿಕ ವಸ್ತುಗಳು ಸಂಗ್ರಹಿಸಲ್ಪಟ್ಟು, ಅಡಿಪಾಯವಾಗಿರುವ ಕ್ಯಾನನ್ ನಲ್ಲಿ ನೀರಿನ ಘರ್ಷಣೆಯಿಂದ ರಾಸಾಯನಿಕ ಬದಲಾವಣೆಗಳು ಉಂಟಾದಾಗ ಹೀಗೆ ಚಿತ್ರ-ವಿಚಿತ್ರ ಹಾಗೂ ಅತ್ಯಂತ ಕುತೂಹಲಕಾರಕ ಕ್ಯಾನ್ಯನ್ ರಚಿತವಾಗಿದೆ.  ಇಲ್ಲಿ ಕೆಂಪು ಬಣ್ಣದ ಛಾಯೆ ಹೆಚ್ಚು ದಟ್ಟವಾಗಿದೆ.  ಕೊಲರಾಡೋ ನದಿಯ ಅದ್ಭುತವು ಕೊಲರಾಡೋ ತಪ್ಪಲು ಪ್ರಾಂತದ ನಾಲ್ಕು ಭಾಗಗಳಾಗಿ ರಚಿತವಾಗಿದೆ.  ಸರಿ ಸುಮಾರು ೪೦ ತರಹದ, ಗುರುತಿಸಲ್ಪಟ್ಟ ಕಲ್ಲುಗಳ ಪದರಗಳು ಇಲ್ಲಿ ಅಡಕವಾಗಿವೆ ಎಂಬ ಮಾಹಿತಿಯಿದೆ.  ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಲೇ ಇದ್ದಾರೆ ಮತ್ತು ಹೊಸ ಹೊಸ ಪದರಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ.

ಕ್ಯಾನ್ಯನ್  ಅಡಿಯಲ್ಲಿ ಮರುಭೂಮಿಯ ಬೋಗುಣಿಯಾಗಿರುವಂತಿದೆ.  ಮೇಲು ಮೇಲೆ ಅರಣ್ಯದ ಭಾಗವೂ ಇರುವಂತಿದೆ.  ನದಿಯು ತನ್ನ ಪ್ರಯಾಣವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮುಂದುವರೆಸಿದ್ದರೂ ಕೂಡ "ಗ್ರ್ಯಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್" ಅರಿಜೋನ ರಾಜ್ಯದಲ್ಲಿದೆ.  ಅಂಕಿ - ಸಂಖ್ಯೆಗಳ ಪ್ರಕಾರ ಸುಮಾರು ೧೫೦೦-೨೦೦೦ ವೃಕ್ಷ ಸಮೂಹವೂ ಅನೇಕ ತರಹದ ಪಕ್ಷಿ, ಪ್ರಾಣಿ, ಭೂಜಲಚರ ಪ್ರಾಣಿಗಳು ಹಾಗೂ ಅನೇಕ ಜಾತಿಯ ಮೀನುಗಳನ್ನು ಇಲ್ಲಿ ನೋಡಬಹುದಾಗಿದೆ.  ಈ ಉದ್ಯಾನವನಕ್ಕೆ ವರ್ಷಕ್ಕೆ ಸರಿ ಸುಮಾರು ೫೦ ಲಕ್ಷ ಜನರು ಬರುತ್ತಾರೆಂಬ ಅಂದಾಜು ಮಾಡಲಾಗಿದೆ.   ಕ್ಯಾನ್ಯನ್ ಉತ್ತರ ಹಾಗೂ ದಕ್ಷಿಣ ಅಂಚುಕಟ್ಟು (rim) ಎಂದು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ.  ಉತ್ತರ ಅಂಚುಕಟ್ಟು ಉಠಾ (Utah) ಎಂಬ ಜಾಗಕ್ಕೆ ಹತ್ತಿರವಾಗಿದೆ ಮತ್ತು ಇಲ್ಲಿ ಉಸಿರು ಬಿಗಿ ಹಿಡಿದು ನೋಡಿ ರೋಮಾಂಚನವಾಗುವಂತಹ ದೃಶ್ಯಗಳಿವೆಯಂತೆ.  ಆದರೆ ದಕ್ಷಿಣ ಅಂಚುಕಟ್ಟಿನಲ್ಲಿರುವಷ್ಟು ಸುಲಭ ಪ್ರವೇಶ ಇಲ್ಲವೆಂಬ ಉಲ್ಲೇಖವಿದೆ.  ಎರಡನ್ನೂ ಸೇರಿಸುವ ಒಂದು ಸೇತುವೆ ಕೂಡ ಇದೆ.  ಇದು ಚಾರಣಿಗರಿಗೆ ನಿಜವಾದ ಸವಾಲಾಗಿದೆ.  ಸವಾಲನ್ನು ಸ್ವೀಕರಿಸುವ ಉತ್ಸಾಹೀ ಚಾರಣಿಗರಿಗೇನೂ ಕಡಿಮೆಯಿಲ್ಲ.

ಗ್ರ್ಯಾಂಡ್ ಕ್ಯಾನ್ಯನ್ ನ ಪಶ್ಚಿಮ ಅಂಚುಕಟ್ಟು "ಲಾಸ್ ವೇಗಾಸ್" ಎಂಬ ನಗರಕ್ಕೆ ಹತ್ತಿರವಾಗಿದೆ.  ಈ ನಗರ ಪಕ್ಕದ "ನೇವಡ ರಾಜ್ಯ"ದಲ್ಲಿದೆ.  ಲಾಸ್ ವೇಗಾಸ್ ಊರಿನಿಂದ ಸುಮಾರು ೩ ೧/೨ ಘಂಟೆಗಳ ಪಯಣದಲ್ಲಿ ನಾವು ಗ್ರ್ಯಾಂಡ್ ಕ್ಯಾನ್ಯನ್ ನ ಪಶ್ಚಿಮ ಅಂಚು (West Rim) ತಲುಪಲು ಹೋಗಬೇಕಾದ ರಸ್ತೆಗೆ ತಲುಪುತ್ತೇವೆ.  ಮುಖ್ಯ ರಸ್ತೆಯಿಂದ ನಾವು ಅತಿಕ್ರಮಿಸಿ ಕ್ಯಾನ್ಯನ್ ರಸ್ತೆಗೆ ಹೊರಳಬೇಕು.  ಇಲ್ಲಿಂದ ನಾವು ಕ್ಯಾನ್ಯನ್ ನ ಪಶ್ಚಿಮ ಅಂಚಿನ ಪ್ರವೇಶ ದ್ವಾರಕ್ಕೆ ಬರುತ್ತೇವೆ.  ಇಲ್ಲಿ Haulapai Indians ನಡೆಸುವ ಬಸ್ಸುಗಳಲ್ಲಿ ಮುಂದಿನ ಪ್ರಯಾಣ ಮಾಡಬೇಕು.  
 
ಬಸ್ಸಿಗಾಗಿ ಪಾಸ್ ತೆಗೆದುಕೊಂಡು ಏರಿದರೆ ನಮ್ಮನ್ನು ಪ್ರಸಿದ್ಧವಾದ "Eagle Point" ಅಥವಾ "ಗರುಡ ನೋಟ (ದೃಷ್ಟಿ)"ಗೆ ತಲುಪಿಸುತ್ತದೆ.  ಇಲ್ಲಿ ಬಸ್ಸಿನಿಂದಿಳಿದು ನಿಧಾನವಾಗಿ ಸುತ್ತಾಡುತ್ತಾ ಅದ್ಭುತ ದೃಶ್ಯಗಳನ್ನು ನೋಡುವಾಗ ಒಂದು ಕಡೆ ಕ್ಯಾನ್ಯನ್ ಗರುಡ ಪಕ್ಷಿಯಂತೆ ರಚಿತವಾಗಿರುವುದು ಕಾಣುತ್ತದೆ.  ರೆಕ್ಕೆಗಳನ್ನು ಅಗಲಿಸಿರುವ ಗರುಡ ಪಕ್ಷಿಯಂತೆ ಕಾಣುತ್ತದೆ.
 
 
ಮುಖದ ರಚನೆ, ಮೂಗು ಕೂಡ ತುಂಬಾ ಆಕಾರವಾಗಿದೆ.  ಇಲ್ಲಿಯೂ ಕೂಡ ಉಸಿರು ಬಿಗಿಹಿಡಿದು ನೋಡುವಂತಹ ಪ್ರಕೃತಿ ನಿರ್ಮಿತ ದೃಶ್ಯಾವಳಿಗಳು ಮನಸ್ಸಿಗೆ ಮುದ ಕೊಡುತ್ತವೆ.  ಇಲ್ಲಿಂದ ಇನ್ನೂ ಒಳಗೆ ಹೋದರೆ ನಮಗೆ ಗಾಜಿನ "ಸ್ಕೈ ವಾಕ್" ಸಿಗುತ್ತದೆ.  ಇಲ್ಲಿಗೆ ಹೋಗಲು ನಾವು ನಮ್ಮ ಚಪ್ಪಲಿಗಳ ಮೇಲೆ ಮೃದುವಾದ ವಿನಿಯೋಗ ಮಾಡುವಂತಹ ಕಾಲುಚೀಲದಂತಹ ಹೊದಿಕೆಯನ್ನು ಧರಿಸಬೇಕಾಗುವುದು.  ಈ ಗಾಜು ಅಶ್ವಪಾದ ಅಥವಾ ಆಂಗ್ಲ ಅಕ್ಷರ "U" ನಂತಿದೆ.  ಸುಮಾರು ೫೦೦-೮೦೦ ಅಡಿಗಳಷ್ಟು ಎತ್ತರದಲ್ಲಿದೆ.  ಮಾರ್ಚ್ ತಿಂಗಳು ೨೦೦೭ರಲ್ಲಿ ಅನಾವರಣಗೊಂಡಿತ್ತು.  ಈ ಗಾಜಿನ ಮೇಲೆ ಉದ್ದಕ್ಕೂ ನಡೆಯುತ್ತಾ ಹೋದರೆ ಅನೇಕ ಕಡೆಗಳಿಂದ ಕ್ಯಾನ್ಯನ್ ಸೌಂದರ್ಯವನ್ನು ನೋಡಬಹುದು.  ಕೆಳಗಡೆ ಗಾಜಿನ ಮೂಲಕವೂ ಕಾಣುವ ಕ್ಯಾನ್ಯನ್ ನ ಆಳವಾದ ಕಣಿವೆಗಳು ಒಂಥರಾ ಸಣ್ಣ ಭಯ ಹಾಗೂ ಅಚ್ಚರಿಯನ್ನುಂಟು ಮಾಡುವುದು.  ಎಲ್ಲೆಲ್ಲಿ ನೋಡಿದರೂ ಪ್ರಕೃತಿಯ ವಿಸ್ಮಯ ಅಷ್ಟೇ...!!!!




ಚಿ ತ್ರ ಕೃ ಪೆ  : ಅಂ ತ ರ್ಜಾ ಲ 

ಸುಂದರ ಚಿತ್ರಗಳಿಗಾಗಿ ಈ ಕೊಂಡಿ : https://www.google.co.in/search?q=grand+canyon+eagle+point+photo&client=firefox-b-ab&tbm=isch&imgil=o1LP3hSht0_OYM%253A%253BRTd0zWu5OW9iLM%253Bhttp%25253A%25252F%25252Fwww.gokingman.com%25252Fday-trip-Grand-Canyon-West-Home-of-the-Skywalk&source=iu&pf=m&fir=o1LP3hSht0_OYM%253A%252CRTd0zWu5OW9iLM%252C_&usg=__MQjz-rRey8f2SrsMiPhN-P8V5Lw%3D&biw=1118&bih=566&dpr=1.25&ved=0ahUKEwiu37XVq7_QAhXBro8KHcinBqsQyjcIMw&ei=jck1WO7kBsHdvgTIz5rYCg#imgdii=ObiP1HitmSpW6M%3A%3BObiP1HitmSpW6M%3A%3Bo1LP3hSht0_OYM%3A&imgrc=ObiP1HitmSpW6M%3A


Wednesday, August 17, 2016

ಬೇರೆ ಬೇರೆ ಕೋನಗಳಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ನ ವಿಸ್ಮಯ ಚೆಲುವು....









Friday, July 22, 2016

ಪ್ರವಾಸ ಕಥನ - ಅಮೆರಿಕ (ನಾಲ್ಕನೆಯ ಕಂತು)

ನಾವು ಒಂದು ವಾರಾಂತ್ಯದಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತ ವಿಚಿತ್ರವನ್ನು ನೋಡಲು ಹೋದೆವು.  ಗ್ರ್ಯಾಂಡ್ ಕ್ಯಾನ್ಯನ್ ಗೆ ಹೋಗುವ ರಸ್ತೆ.....

ಫೆಬ್ರವರಿ - ಮಾರ್ಚ್ ತಿಂಗಳು ಅಮೆರಿಕದಲ್ಲಿ ಛಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುವ ಸಂಧಿ ಕಾಲದ ಸಮಯ.  ಎತ್ತರದ ಪರ್ವತಗಳ ಶಿಖರಗಳಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ಹಿಮ ಉಳಿದಿರುವುದು ನೋಡಲು ಸುಂದರ ದೃಶ್ಯ.



 
ಹಾದಿಯಲ್ಲಿ ಕಣ್ಮನ ತಣಿಸುವ ಮರಗಳ ಗುಂಪಿನ ದೃಶ್ಯ ನಮ್ಮ ದೇಶದ ಅನೇಕ ಸುಂದರ ತಾಣಗಳ ನೆನಪು ತರುವುದು. 

ಮರಗಳ ಮಧ್ಯದಲ್ಲಿ ಕಾಣುವ ಹಾಲು ಬಿಳುಪು ಇನ್ನೂ ಪೂರ್ತಿಯಾಗಿ ಕರಗದೆ ಉಳಿದಿರುವ ಹಿಮದ ಹಾಸು.



ಅಮೆರಿಕದಲ್ಲಿ ಪ್ರವಾಸ ಹೋಗುವಾಗ ಹೊರಗೆ ಸಿಕ್ಕುವ ಆಹಾರದ ಜೊತೆ ಮನೆಯಿಂದಲೂ ಏನಾದರೂ ಮಾಡಿಕೊಂಡು ಹೋಗುವುದು ಹೆಚ್ಚು ಸೂಕ್ತವಾಗುತ್ತದೆ.  ನಾವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ತಯಾರಿ ಮಾಡಿಕೊಂಡೇ ಹೊರಟಿದ್ದೆವು.  ಉದ್ದುದ್ದ ರಸ್ತೆಗಳಲ್ಲಿ ಎಲ್ಲೂ ನಿಲ್ಲಿಸುವ ಅವಕಾಶವಿಲ್ಲ.  ಆದರೆ ಹೀಗೆ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ಅಲ್ಲೊಂದು ಉಪಯುಕ್ತ ವ್ಯವಸ್ಥೆಯಿದೆ.  ದಾರಿಯಲ್ಲಿ ಒಂದು ಚಿಕ್ಕ ತಿರುವ ತೆಗೆದುಕೊಂಡರೆ ನಮಗೆ ವಾಹನಕ್ಕೆ ಇಂಧನವೂ ಸಿಕ್ಕುತ್ತದೆ ಜೊತೆಗೆ ಅಲ್ಲಿ ನಮ್ಮ ವಾಹನವನ್ನು ನಿಲ್ಲಿಸಿಕೊಂಡು, ಒಳಗೇ ಕುಳಿತು ನಾವು ತಂದುಕೊಂಡ ಆಹಾರವನ್ನು ತಿನ್ನಬಹುದು.  ಹೀಗೆ ಮಾಡುವುದರಿಂದ ದಾರಿಯಲ್ಲಿ ವೇಗವಾಗಿ ಚಲಿಸುವ ಇತರ ವಾಹನಗಳಿಗೆ ತೊಂದರೆಯಿಲ್ಲದೆ, ನಾವೂ ನೆಮ್ಮದಿಯಾಗಿ ವಿಶ್ರಮಿಸಲು ಅವಕಾಶವಾಗುವುದು.  ರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡದಾಗಿ ಚಿಹ್ನೆಗಳನ್ನೂ, ಫಲಕಗಳನ್ನೂ ಹಾಕಿ, ಮುಂದೆ ಇನ್ನೆಷ್ಟು ದೂರದಲ್ಲಿ ಈ ತರಹದ ವ್ಯವಸ್ಥೆಯಿದೆ ಎಂಬುದನ್ನು ಪ್ರದರ್ಶಿಸಿರುತ್ತಾರೆ.  

ಕ್ಯಾನ್ಯನ್ ಹತ್ತಿರ ಬರುವಾಗ ನಮಗೆ ಅಲ್ಲಿ ಒಂದು ವಿಮಾನ ನಿಲ್ದಾಣವಿರುವುದು ಕಾಣುವುದು.  ಪುಟ್ಟ ಪುಟ್ಟ ವಿಮಾನಗಳು ಕ್ಯಾನ್ಯನ್ ಮೇಲೆ ಹಾರಿಸಲಾಗುತ್ತದೆ.  ಇದಲ್ಲದೆ ಹೆಲಿಕಾಪ್ಟರ್ ನಲ್ಲಿ ಸುತ್ತುವ ವ್ಯವಸ್ಥೆ ಕೂಡ ಇದೆಯಂತೆ.
 
ಕ್ಯಾನ್ಯನ್ ನೋಡಲು ಹೋಗುವ ಮೊದಲು ಒಂದು ಚಿತ್ರಮಂದಿರದಲ್ಲಿ ನಾವು ಕ್ಯಾನ್ಯನ್ ರಚನೆಯಾದ ಕಾಲ, ಅಲ್ಲಿದ್ದ ಬುಡಕಟ್ಟು ಜನಾಂಗದವರ ಜೀವನದ ವಿವರಣೆ ತಿಳಿಸುವ ಒಂದು ಚಿತ್ರವನ್ನೂ ನೋಡಿದೆವು.
















ಕ್ಯಾನ್ಯನ್ ನೋಡಲು ಬಂದ ಪ್ರವಾಸಿಗರು ತಂಗಲು ಇಲ್ಲಿ ಹೋಟೆಲುಗಳೂ ಇವೆ.  
ಅಂತಹ ಒಂದು ಹೋಟೆಲ್ ಆಕಾರ ನಮ್ಮ ಗಮನ ಸೆಳೆದಿತ್ತು.  ಅದು ಗೋಪುರಾಕೃತಿಯ ಕಟ್ಟಡವಾಗಿತ್ತು.





ಸಾವಿರಾರು ವರ್ಷಗಳಲ್ಲಿ ಒಂದು ನದಿಯು ಎಷ್ಟೆಲ್ಲಾ ಕೌಶ್ಯಲ್ಯವನ್ನು ಸೃಷ್ಟಿಸಿದೆ ಎಂದು ಚಿಂತಿಸುವಾಗ, ಆಶ್ಚರ್ಯವಾಗುವುದು.  ಸುಮಾರು ೪೫೬ ಅಡಿಗಳವರೆಗೆ ಆಳದಲ್ಲಿ ಕಮರಿಗಳನ್ನು ಕಾಣಬಹುದಾಗಿದೆ.  ಎಲ್ಲಿ ನೋಡಿದರೂ, ಎತ್ತ ತಿರುಗಿದರೂ, ಕೆಂಪು ಮಿಶ್ರಿತ ಬಣ್ಣದಲ್ಲಿ ಕೊರೆದ ಶಿಲ್ಪ ಕಣ್ಮನ ತಣಿಸುವುದು.  ಚಿತ್ರ ವಿಚಿತ್ರವಾದ ನಮೂನೆಗಳನ್ನು ನೋಡುತ್ತಾ ನೋಡುತ್ತಾ ಮನಸ್ಸು ಕಲ್ಪನಾ ಲೋಕದಲ್ಲಿ ವಿಹರಿಸಲಾರಂಭಿಸುವುದು.  ನಮ್ಮ ಅಲ್ಪ ಆಯುಶ್ಯ ಹಾಗೂ ಬುದ್ಧಿಯಲ್ಲಿ ಏನೇನೆಲ್ಲವನ್ನೂ ಕಂಡಿರುವೆವೋ ಅದಕ್ಕೆಲ್ಲಾ ಈ ನಮೂನೆಗಳನ್ನು ಹೋಲಿಸುವ ಪ್ರಯತ್ನ ಮಾಡಲಾರಂಭಿಸುವೆವು.  ಉಬ್ಬು ತಗ್ಗುಗಳು, ಎತ್ತರ ಇಳಿತಗಳು ನಿಜಕ್ಕೂ ಅತಿ ರಮ್ಯವಾದ ನೋಟವನ್ನು ಕಾಣುವೆವು.  ಒಂದು ಕಡೆ ಒಟ್ಟಾಗಿ ಐದು ಕಲಶಗಳನ್ನು ಜೋಡಿಸಿರುವರೇನೋ ಎಂಬಂತೆ ಕಾಣುವುದು, ಇನ್ನೊಂದು ಕಡೆ ಯಾವುದೋ ದೇವತೆಯ ಹೋಲಿಕೆ ಕಾಣುವುದು.  ಕೈಯಲ್ಲಿ ಶಂಖ ಚಕ್ರ ಗಧಾ ಪದ್ಮಗಳಿರುವ ಮಹಾವಿಷ್ಣುವೇನೋ ಎಂದು ಭ್ರಮಿಸುವಂತಾಗುವುದು.

ಉದ್ದಕ್ಕೂ ನಡೆಯುತ್ತಾ ನೋಡುತ್ತಾ ಹೋಗಲು ಮಾರ್ಗವನ್ನು ಮಾಡಿ, ಅಲ್ಲಲ್ಲೇ ವ್ಯೂ ಪಾಯಿಂಟುಗಳನ್ನು ಮಾಡಿರುವರು.  ಅನಾವಶ್ಯಕ ಸಾಹಸ ಮಾಡಿ ಸಂಭ್ರಮಿಸುವ ಕೆಲ ಯುವಕ ಯುವತಿಯರು, ನಿಷಿದ್ಧವಾದ ಪ್ರದೇಶಗಳವರೆಗೂ ಹೋಗಿ ಅಲ್ಲಿ ವಿವಿಧ ರೀತಿಯಲ್ಲಿ ನಿಂತು, ಕುಳಿತು ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ನೋಡಿ ಸ್ವಲ್ಪ ಬೇಸರವಾಯಿತು.  ಅದ್ಭುತ ಕಲೆಯನ್ನು ಕಾಣಲು ಬಂದಾಗಲೂ, ಅದನ್ನು ಪ್ರಶಂಸಿಸುವ ಬದಲು ಎಲ್ಲೆಂದರಲ್ಲಿ ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ಕಂಡು ನಗಬೇಕೋ ಅಳಬೇಕೋ ತಿಳಿಯದಾಯಿತು.  ಎಷ್ಟೋ ಅಡಿಗಳ ಆಳದಲ್ಲಿ, ಸಣ್ಣಗೆ ತೊರೆಯಂತೆ ಹರಿಯುತ್ತಿರುವುದೇ  ಪ್ರಖ್ಯಾತ ಕೊಲರೇಡೋ ನದಿಯೆಂದು ಮಗ ಬೆಟ್ಟು ಮಾಡಿ ತೋರಿಸಿದಾಗ, ಎಳೆ ಬಿಸಿಲಿನಲ್ಲಿ ಫಳಫಳಿಸುತ್ತಿದ್ದ ಗುಲಾಬಿ ಬಣ್ಣದ ಮಣ್ಣಿನ ಆಕೃತಿಗಳಲ್ಲಿ ನದಿ ಕಾಣಿಸಲೇ ಇಲ್ಲ.  ಕೊನೆಗೂ ೪-೫ ಬಾರಿ ಬೆಟ್ಟು ಮಾಡಿ, ಬೇರೆ ಬೇರೆ ಜಾಗದಲ್ಲಿ ತೋರಿಸಿದಾಗ ಅಲ್ಲಿ ಸಣ್ಣ ತೊರೆಯೊಂದು ಇದೆಯೆಂಬುದು ತಿಳಿಯಿತು.  ಗುಲಾಬಿ ಬಣ್ಣದ ವಿನ್ಯಾಸಗಳ ಮಧ್ಯದಲ್ಲಿ ಬಿಳಿಯ ಹಾಲಿನಂತೆ ಗೋಚರಿಸುವುದೇ ನದಿಯೆಂದು ಅರ್ಥವಾಗಲು ಸ್ವಲ್ಪ ಸಮಯವಾಯಿತು.



Tuesday, July 5, 2016

ಪ್ರವಾಸ ಕಥನ - ಅಮೆರಿಕ (ಮೂರನೆಯ ಕಂತು)

 
 
 
ಫೀನಿಕ್ಸ್ ನಲ್ಲಿನ ಇನ್ನೊಂದು ತುಂಬಾ ಸೆಳೆಯುವಂತಹ ಜಾಗವೆಂದರೆ ಪುತ್ತಿಗೆ ಮಠದವರ ಶ್ರೀ ವೇಂಕಟರಮಣ ಸ್ವಾಮಿ ದೇವಸ್ಥಾನ.  ಇದು ನನ್ನ ಮಗನ ಮನೆಗೆ ಸುಮಾರು ೭ ಮೈಲಿಯಷ್ಟು ದೂರವಿದೆ.  ಮೊದಲ ಸಲ ನಾವು ಅಲ್ಲಿಗೆ ಹೋದಾಗ, ಅದು ದೇವಸ್ಥಾನ ಎಂದೇ ತಿಳಿಯಲಿಲ್ಲ.  ದೊಡ್ಡದಾಗ ಜಾಗದಲ್ಲಿ ಮುಂದುಗಡೆ ಗಾಡಿಗಳು ನಿಲ್ಲಲು ಜಾಗ ಮಾಡಿ, ದೇವಸ್ಥಾನ ಕಟ್ಟಿದ್ದಾರೆ.  ಎತ್ತರವಾದ ಬಾಗಿಲುಗಳು, ಯಾವಾಗಲೂ ಸುಮ್ಮನೆ ಮುಚ್ಚಿಯೇ ಇರುತ್ತದೆ.  ನಾವು ತೆರೆದುಕೊಂಡು ಒಳಗೆ ಹೋಗಬೇಕು.  ನಮ್ಮಲ್ಲಿಯ ದೇವಾಲಯಗಳಂತೇ ಹೊರಗೆ ಚಪ್ಪಲಿ ಬಿಡಲು ಜಾಗ, ಕಾಲು ತೊಳೆಯಲು ನಲ್ಲಿ ಇದೆ.  ಒಳಗೆ ಪ್ರವೇಶಿಸಲು ಮುಂದು ಮಾಡಿರುವ ಬಾಗಿಲು ತೆರೆದ ಕೂಡಲೆ ಎದುರಿಗೇ ಭವ್ಯವಾಗಿ ಸ್ವಾಮಿ ಅಷ್ಟೆತ್ತರಕ್ಕೆ ನಿಂತುಬಿಟ್ಟಿದ್ದಾನೆ.  ನಿಜಕ್ಕೂ ತುಂಬಾ ಆಕರ್ಷಕವಾಗಿದೆ.  ಮೈ ತುಂಬಾ ಬರಿಯ ಬಿಳಿಯ ಕಲ್ಲಿನ ಆಭರಣಗಳನ್ನು ಧರಿಸಿಕೊಂಡು ಅಗಲವಾದ ಸುಂದರವಾದ ಅಂಚು ಇರುವಂತಹ ಪಂಚೆ ಉಟ್ಟು, ಅಂಚನ್ನು ಕಲಾತ್ಮಕವಾಗಿ ಮಡಿಸಿ, ಪಂಚೆಗೆ ಹೊಂದುವಂತೆ ಹೊದಿಸಿರುವ ಶಲ್ಯ, ಅದರ ಮೇಲೆ ವಿವಿಧ ರೀತಿಯ ಆಭರಣಗಳನ್ನು ಧರಿಸಿ ನಿಂತಿರುವನು.   ಸ್ವಾಮಿಯ ವಿಶೇಷತೆ ಎಂದರೆ ಧರಿಸಿರುವ ಎಲ್ಲಾ ಒಡವೆಗಳೂ ಸ್ವಚ್ಛ ಬಿಳುಪು ಕಲ್ಲಿನಲ್ಲಿ ಮಾಡಲ್ಪಟ್ಟಿರುವುದು.  ದೊಡ್ಡದಾದ ಹಜಾರದ ಒಳಗೆ ಗರ್ಭಗುಡಿ ಇರುವುದು.  ಹಜಾರದಲ್ಲಿ ಹೆಚ್ಚು ಬೆಳಕು ಇದ್ದರೂ ಕೂಡ, ಗರ್ಭಗುಡಿಯಲ್ಲಿ ಎಣ್ಣೆ ದೀಪದ ಬೆಳಕಿನಲ್ಲಿ ಸ್ವಾಮಿಯನ್ನು ನೋಡುವುದೇ ರೋಮಾಂಚಕಾರಿ ಅನುಭವವಾಗುವುದು.  ಗರ್ಭಗುಡಿಗೆ ತುಂಬಾ ಹತ್ತಿರದಲ್ಲಿಯೇ ನಿಂತು ದರ್ಶನ ಪಡೆಯುವ ಅವಕಾಶವಿರುವುದು.  ತಲೆಯೆತ್ತಿ ಸ್ವಾಮಿಯನ್ನು ನೋಡುತ್ತಾ ನಿಂತರೆ, ಸುತ್ತಲ ಪರಿಸರವೂ ಮರೆಯುವಂತಹ ಅನುಭವವಾಗುವುದು.  ಕೆಲವೇ ಕೆಲವು ಹೂಗಳಿಂದ ಅಲಂಕೃತನಾಗಿರುತ್ತಾನೆ ಸ್ವಾಮಿ.  ದೇವಲಯವಂತೂ ಅತ್ಯಂತ ಸ್ವಚ್ಛವಾಗಿರುತ್ತದೆ.  ಎಲ್ಲೂ ಒಂದು ಚೂರು ಕಸ ಕಡ್ಡಿ ಏನೂ ಇಲ್ಲ. 

ಸ್ವಾಮಿಯ ಬಲಪಕ್ಕದಲ್ಲಿ ಅಮ್ಮನವನ ಸನ್ನಿಧಾನವಿದೆ.  ಕೆನ್ನೆಗೆ ಅರಿಸಿನ ಹಚ್ಚಿಕೊಂಡು, ಮಂಗಳಮಯವಾಗಿ, ರೇಷ್ಮೆ ಸೀರೆಯುಟ್ಟು, ಒಡವೆಗಳನ್ನು ಧರಿಸಿ ಕುಳಿತಿರುವ ತಾಯಿ ಲಕ್ಷ್ಮೀದೇವಿ ಗೊಂದಲಗೊಂಡ ಮನಸ್ಸನ್ನು ಕ್ಷಣದಲ್ಲೇ ಸ್ಥಿಮಿತಗೊಳಿಸುವಳು.  ಅಮ್ಮನವರ ದರ್ಶನ ಪಡೆದುಕೊಂಡು ಹಾಗೇ ಪ್ರದಕ್ಷಿಣೆ ಬಂದರೆ ಅಮ್ಮನವರ ಸನ್ನಿಧಾನದ ಹಿಂದುಗಡೆಗೇ ನವಗ್ರಹಗಳ ದರ್ಶನ ಪಡೆಯಬಹುದು.  ಅಲ್ಲಿಂದ ಮುಂದೆ ೫-೬ ಹೆಜ್ಜೆ ಬಂದರೆ ಸರಿಯಾಗಿ ಸ್ವಾಮಿಯ ಹಿಂದೆ ಎಡಗಡೆಗೆ ರಾಯರ ಬೃಂದಾವನವಿದೆ.  ಪುಟ್ಟದಾದ ಪ್ರತ್ಯೇಕವಾದ  ಸನ್ನಿಧಾನದಲ್ಲಿ ರಾಯರು ನೆಲೆಸಿದ್ದಾರೆ.  ಒಳಗೆ ಒಬ್ಬರು ಮಾತ್ರ ಪ್ರದಕ್ಷಿಣೆ ಮಾಡುವಷ್ಟು ಜಾಗವಿದೆ.  ಗೋಡೆಯ ಮೇಲೆ ರಾಯರ ಜೀವನದ ಕೆಲವು ಪ್ರಮುಖ ಘಟನೆಗಳ ಚಿತ್ರ, ಅವರ ಜನನ, ಸಂನ್ಯಾಸ ಸ್ವೀಕಾರದ ದಿನಾಂಕಗಳನ್ನು ಪ್ರದರ್ಶಿಸಿದ್ದಾರೆ.   ರಾಯರಿಗೆ ವಂದಿಸಿ ಮುಂದೆ ಬಂದರೆ, ಪ್ರದಕ್ಷಿಣೆಯ ಕೊನೆಯ ಹಂತದಲ್ಲಿ, ಸ್ವಾಮಿಯ ಎಡಗಡೆಗೆ ಪ್ರತ್ಯೇಕವಾದ ಸ್ಥಾನವಿದೆ.  ಅದರಲ್ಲಿ ಮೇಲುಗಡೆಗೆ ಲಿಂಗರೂಪಿ ಈಶ್ವರನ ಸನ್ನಿಧಾನವಿದೆ.  ತಂದೆಯ ಜೊತೆಗೆಂಬಂತೆ, ಕೆಳಗಡೆಗೆ ವಿಘ್ನೇಶ್ವರನ ಸನ್ನಿಧಾನವಿದೆ.  ಸ್ವಾಮಿಗೆ ಒಂದು ಪ್ರದಕ್ಷಿಣೆ ಬರಲು ಹೆಚ್ಚೆಂದರೆ ೨ ನಿಮಿಷವಾಗಬಹುದು.  ಅಷ್ಟರಲ್ಲಿ ನಮಗೆ ಅಮ್ಮನವರ ದರ್ಶನ, ನವಗ್ರಹಗಳ ದರ್ಶನ, ರಾಯರ ಬೃಂದಾವನ ಹಾಗೂ ಕೊನೆಗೆ ಲಿಂಗರೂಪಿ ಈಶ್ವರ ಹಾಗೂ ವಿಘ್ನೇಶ್ವರನ ದರ್ಶನವಾಗುತ್ತದೆ.  ಪ್ರದಕ್ಷಿಣೆ ಬಂದು ಸ್ವಾಮಿಯ ಮುಂದುಗಡೆ ಹಾಸಿರುವ ಜಮಖಾನದ ಮೇಲೆ ಕಣ್ಮುಚ್ಚಿ ಕುಳಿತರೆ ಅಲ್ಲಿ ದೊರೆಯುವ ಪ್ರಶಾಂತತೆ ಎಂತಹ ಗೊಂದಲ, ಕಳವಳವನ್ನೂ ಕಳೆದು ಬಿಡುವುದು.  ಭಕ್ತಾದಿಗಳು ಯಾರೂ ಜೋರಾಗಿ ಮಾತನಾಡದೆ, ತಮ್ಮ ಪಾಡಿಗೆ ತಾವು ದರ್ಶನ ಮಾಡಿಕೊಂಡು, ನಿಶ್ಯಬ್ದವಾಗಿ ಕುಳಿತು, ಧ್ಯಾನಿಸುತ್ತಾರೆ.  ಮಂದಿರದ ಅಕ್ಕ ಪಕ್ಕಗಳಲ್ಲಿ ಕೋಣೆಗಳನ್ನು ಕಟ್ಟಿಸಿದ್ದಾರೆ.  ಪ್ರತಿ ಹುಣ್ಣಿಮೆಯಲ್ಲೂ ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ.  ಪೂಜೆ, ಹೋಮ ಹವನಗಳನ್ನು ಮಾಡಲು ಎಲ್ಲಾ ಅನುಕೂಲಗಳನ್ನೂ ಕಲ್ಪಿಸಿದ್ದಾರೆ.   

ಮಗನ ಮನೆಯ ಗೃಹಪ್ರವೇಶ ಮಾಡಿಸಲು ಪುತ್ತಿಗೆ ಮಠದವರೇ ಬಂದಿದ್ದರು.  ಮಠದಲ್ಲಿಯೇ ಊಟಕ್ಕೂ ತಿಳಿಸಿದ್ದರು.  ಪೂಜೆ ಮುಗಿದ ನಂತರ ಊಟವನ್ನು ತರಲು ನಾವೇ ಹೋಗಿದ್ದೆವು.  ದೇವಸ್ಥಾನದ ಬಲಪಕ್ಕದಲ್ಲಿಯೇ ಪಾಕಶಾಲೆಯಿದೆ.  ದೇವರ ದರ್ಶನ ಮಾಡಿಕೊಂಡು ನಾವು ಪಾಕಶಾಲೆಗೆ ಹೋದೆವು.  ಅದಾಗಲೇ ನಮಗಾಗಿ ಊಟ ತಯಾರಾಗಿತ್ತು.  ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅನ್ನ, ಸಾರು, ಮಿಶ್ರ ತರಕಾರಿಗಳ ಕೂಟು ಮತ್ತು ಪಾಯಸವನ್ನು ತುಂಬಿಸಿ ಅಲ್ಯೂಮಿನಿಯಮ್ ಹಾಳೆಗಳಿಂದ ಮುಚ್ಚಿಟ್ಟಿದ್ದರು.  ಎರಡು ತರಹದ ಪಲ್ಯಗಳು, ಕೋಸುಂಬರಿಯನ್ನು ಅಲ್ಯೂಮಿನಿಯಂನ ಉಪಯೋಗಿಸಿ ತ್ಯಾಜ್ಯಕ್ಕೆ ಹಾಕುವಂತಹ ಅಗಲವಾದ ತಟ್ಟೆಗಳಲ್ಲಿ ತುಂಬಿಸಿ, ಅದಕ್ಕೂ ಮೇಲೆ ಅಲ್ಯುಮಿನಿಯಂ ಹಾಳೆಗಳನ್ನು ಮುಚ್ಚಿದ್ದರು.  ಎಲ್ಲವನ್ನೂ ಅಚ್ಚುಕಟ್ಟಾಗಿ ಎರಡು ಕಾರುಗಳಲ್ಲಿ ಜೋಡಿಸಿಕೊಂಡು ನಾವು ಮನೆಗೆ ತಂದೆವು.  ಒಂದೊಂದು ಪದಾರ್ಥವೂ ಅಷ್ಟೊಂದು ರುಚಿಯಾಗಿತ್ತು.  ಮಧ್ಯಾಹ್ನದ ಊಟವಾಗಿ, ರಾತ್ರಿ ಮತ್ತೆ ಎಲ್ಲರೂ ವಾಪಸ್ಸು ಬಂದು ಊಟ ಮಾಡಿದರೂ ಕೂಡ ಇನ್ನೂ ಮಿಕ್ಕುವಷ್ಟು ಧಾರಾಳವಾಗಿ ಕೊಟ್ಟಿದ್ದರು.  ಲಾಡು ಮತ್ತು ಖಾರಶೇವೆ ೧೫ ದಿನಗಳಾದರೂ ಕೆಡದೆ ಚೆನ್ನಾಗಿತ್ತು.  ಪರಮಾತ್ಮನ ಪ್ರಸಾದವೆಂದರೆ ಅದೆಷ್ಟು ರುಚಿಯಾಗಿರುವುದು ಜೊತೆಗೆ ಇಲ್ಲಿ ಶುಚಿಯಾಗಿಯೂ ಮಾಡಿದ್ದರು.  ಪಾಕಶಾಲೆಯ ಒಳಗೆ ನಾವು ಹೋಗಿ ನೋಡಿದಾಗ ಎಲ್ಲೂ ಸ್ವಲ್ಪವೂ ಪದಾರ್ಥಗಳು ಚೆಲ್ಲಿರಲಿಲ್ಲ.  ಎಲ್ಲಾ ತುಂಬಾ ವ್ಯವಸ್ಥಿತವಾಗಿತ್ತು.  ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ.  ನೋಡಿದರೆ ಸಂತೋಷವಾಗುವಂತಿರುವುದು.

ಶಿವರಾತ್ರಿಯ ದಿನ ನಾವು ದೇವಸ್ಥಾನಕ್ಕೆ ಹೋದಾಗ, ಸಾಯಂಕಾಲ ರುದ್ರಾಭಿಷೇಕ ನಡೆಯುತ್ತಿತ್ತು.  ೫-೬ ಜನ ಋತ್ವಿಕರು ಕುಳಿತು ರುದ್ರ ಪಾರಾಯಣ ಮಾಡುತ್ತಿದ್ದರು.  ಅಭಿಷೇಕ ಮಾಡಿದ ಹಾಲು ಎಲ್ಲೂ ಕೆಳಗೆ ಸೋರಿ ಕೊಚ್ಚೆಯಾಗದಂತೆ ಶಿಸ್ತಿನಿಂದ ಅಭಿಷೇಕ ನಡೆಯುತ್ತಿತ್ತು.  ಪಕ್ಕದ ಹಜಾರದಲ್ಲಿ ಲಿಂಗರೂಪಿ ಈಶ್ವರನನ್ನು ಕುಳ್ಳಿರಿಸಿ, ಪಕ್ಕದಲ್ಲಿಯೇ ಕೊಳಗದಲ್ಲಿ ಹಾಲು, ನೀರು ಇಟ್ಟಿದ್ದರು.  ದೇವಸ್ಥಾನಕ್ಕೆ ಹೋದವರೆಲ್ಲಾ, ಅರ್ಧ ಹಾಲು ಅರ್ಧ ನೀರು ಬೆರೆಸಿಕೊಂಡು ಸ್ವತಃ ಈಶ್ವರನಿಗೆ ಅಭಿಷೇಕ ಮಾಡುವ ವ್ಯವಸ್ಥೆ ಮಾಡಲಾಗಿತ್ತು.  ಅಲ್ಲೂ ಕೂಡ ಯಾರೂ ಹೊರಗೆಲ್ಲಾ ಚೆಲ್ಲದೆ ಅಚ್ಚುಕಟ್ಟಾಗಿ ಕೆಲಸ ಪೂರೈಸಿ, ಮನೋನಿಯಾಮಕ ರುದ್ರದೇವರಿಗೆ ನಮಿಸಿ, ನಿಶ್ಯಬ್ದವಾಗಿ ಹೊರಡುತ್ತಿದ್ದರು.  ನಾವುಗಳೂ ಧನ್ಯೋಸ್ಮಿ ಎಂದುಕೊಳ್ಳುತ್ತಾ,  ಶಿವನಿಗೆ ಅಭಿಷೇಕ ಮಾಡಿ, ಮನಸಾರ ನಮಸ್ಕರಿಸಿ ಹೊರಟೆವು.  ೮.೩೦ ತನಕ ದೇವಸ್ಥಾನದಲ್ಲಿಯೇ ಇದ್ದಿದ್ದರೆ, ಊಟವನ್ನೂ ಕೊಡುತ್ತಿದ್ದರೆಂಬುದು ತಿಳಿಯಿತು.  ಸ್ವಾಮಿಯ ನೆನಪಿನಲ್ಲಿಯೇ ಮನೆಗೆ ವಾಪಸಾದೆವು. ಎಲ್ಲೂ, ಕೊಳೆತ ಹೂವುಗಳು, ಓಡಾಡುವ ಜಾಗದಲ್ಲಿ ಚೆಲ್ಲಿದ ಹಾಲು, ಕೊಚ್ಚೆ, ರಾಡಿ ಯಾವುದೂ ಇಲ್ಲದೆ ದೇವಸ್ಥಾನ, ಎಂದಿನಂತೇ ಅತ್ಯಂತ ಶುಚಿಯಾಗಿತ್ತು.  ಇನ್ನೂ ಸ್ವಲ್ಪ ಹೊತ್ತು ಕುಳಿತು ರುದ್ರಾಭಿಷೇಕ ನೋಡಬೇಕೆಂಬ ಆಸೆ ಇದ್ದರೂ, ಮನಸ್ಸಿಲ್ಲದ ಮನಸ್ಸಿನಿಂದ ಹೊರಡಲೇ ಬೇಕಾಯಿತು.  ಆದರೆ ಅಲ್ಲಿನ ಶಿಸ್ತು, ಶುಭ್ರತೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಸುಂದರ ದೃಶ್ಯವಾಗಿ ನಿಂತಿರುವುದು.  
 
ಅಂತರ್ಜಾಲದಲ್ಲಿ ದೇವಸ್ಥಾನ :  http://aztemple.org/
 
 
 ಚಿ ತ್ರ ಕೃ ಪೆ  : ಅಂ ತ ರ್ಜಾ ಲ

Friday, June 10, 2016

ಪ್ರವಾಸ ಕಥನ - ಅಮೆರಿಕ (ಎರಡನೆಯ ಕಂತು)

ಬೆಂಗಳೂರಿನಲ್ಲಿಯ ಹವಾಮಾನದಿಂದ ಫೀನಿಕ್ಸ್ ನಗರಕ್ಕೆ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ತುಸು ಹೆಚ್ಚಾದ ಸಮಯವೇ ಹಿಡಿಯಿತು.  ಫೀನಿಕ್ಸ್ ನಲ್ಲಿ ಜನರು ರಾತ್ರಿ ೮.೩೦/೯ ಕ್ಕೆಲ್ಲಾ ಮನೆಯ ದೀಪಗಳನ್ನು ಆರಿಸಿಬಿಡುತ್ತಾರೆ.  ನಮ್ಮೂರಲ್ಲಿರುವ ಗಿಜಿಗಿಜಿ ಸಂಜೆಗಳು ಇಲ್ಲಿ ನೋಡಲು ಸಿಗುವುದಿಲ್ಲ.  ಯಾವಾಗಲೂ ಬರಿಯ ವಾಹನಗಳ ಓಡಾಟವಷ್ಟೇ ಕಾಣುವುದು.  ರಸ್ತೆಗಳಲ್ಲಿ ಪಾದಚಾರಿಗಳೂ ಇಲ್ಲ ಮತ್ತು ರಸ್ತೆಯ ದೀಪಗಳೂ ಕೂಡ ನಮ್ಮಲ್ಲಿಯಂತೆ ಪ್ರಜ್ವಲವಾಗಿಲ್ಲ.


ಮಂದವಾದ ಬೆಳಕಿನ ದೀಪಗಳಲ್ಲಿ, ನಿಶ್ಯಬ್ದವಾದ ರಸ್ತೆಗಳನ್ನು ಕಿಟಕಿಗಳ ಮೂಲಕ ನೋಡಿದರೆ ಎಲ್ಲಿ ನೋಡಿದರೂ ಬರೀ ಶಬ್ದರಹಿತವಾಗಿರುವುದು.  ಎಲ್ಲವೂ ಅತೀ ಶುಭ್ರವಾಗಿರುವುದು. ಸ್ವಲ್ಪ ಮಟ್ಟಿಗೆ ಜನಗಳ ಗಿಜಿಬಿಜಿ ನೋಡಬೇಕೆಂದರೆ ’ಮಾಲ್’ ಗಳಿಗೆ ಹೋಗಬೇಕು.  ಅಲ್ಲೂ ಕೂಡ ಅತಿಯಾದ ಗಲಾಟೆ, ಅಬ್ಬರದ ಮಾತುಗಳು, ಸಿನಿಮಾ ಹಾಡಿನ ಕಿರಿಚಾಟ ಯಾವುದೂ ಇಲ್ಲ.  ಎಲ್ಲಾ ಮಾಲ್ ಗಳೂ ನಿಗದಿತ ಸಮಯಕ್ಕೆ ಸರಿಯಾಗಿ ವ್ಯಾಪಾರ ನಿಲ್ಲಿಸಿ, ಬಾಗಿಲು ಹಾಕುತ್ತಾರೆ.   ಬೆಳಿಗ್ಗೆ ೬ ಘಂಟೆಗೆಲ್ಲಾ ಕಸದ ಲಾರಿ ಬಂದು ಎಲ್ಲರ ಮನೆಯ ಹೊರಗಡೆ ಇಟ್ಟಿರುವ ದೊಡ್ಡ ದೊಡ್ಡ ಡಬ್ಬಿಗಳಿಂದ ಕಸವನ್ನು ತೆಗೆದುಕೊಂಡು ಹೋಗುತ್ತದೆ.  ಕಸವನ್ನು ವಿಂಗಡಿಸಿಡಬೇಕು.  ವಾರದಲ್ಲಿ ಒಂದು ದಿನ ಮರುಪಯೋಗಿ ಪರಿಸರ ಸ್ನೇಹಿ ಕಸ ತೆಗೆದುಕೊಂಡು ಹೋಗಲು ಹಸಿರು ಬಣ್ಣದ, ಹಸಿರು ಬಣ್ಣದ ಚಿತ್ರಗಳೇ ತುಂಬಿರುವ ದೊಡ್ಡ ವಾಹನ ಬರುತ್ತದೆ.  ವಾರದ ಮತ್ತೊಂದು ದಿನ ಮಾಮೂಲಿ ಕಸದ ವಿಲೇವಾರಿ.  ದೊಡ್ಡ ಪ್ಲಾಸ್ಟಿಕ್ ಕವರ್ ನಲ್ಲಿ ಕಸವನ್ನು ತುಂಬಿ, ಅದರ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಕಟ್ಟಿ, ಕಸದ ಡಬ್ಬಿಯಲ್ಲಿಟ್ಟು, ಮನೆಯ ಹೊರಗೆ ರಸ್ತೆಯಲ್ಲಿ ಇಟ್ಟಿರಬೇಕು. ಹೀಗೆ ಹೊರಗಡೆ ಇಡುವ ದೊಡ್ಡ ಕಸದ ಡಬ್ಬಿಗೆ, ಉರುಳಿಸಿಕೊಂಡು ಹೋಗಲು ಗಾಲಿಗಳಿರುತ್ತವೆ.  ಎಲ್ಲವೂ ಅಚ್ಚುಕಟ್ಟಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯುತ್ತದೆ.  ರಸ್ತೆ ಗುಡಿಸಲು ಒಂದು ದೊಡ್ಡ ವಾಹನ ಬರುತ್ತದೆ.  ವಾಹನದ ಕೆಳಗೆ ಗುಂಡನೆಯ ಅಗಲವಾದ ದೊಡ್ಡ ಬ್ರಶ್ ಗಳಿರುತ್ತವೆ.  ಗುಂಡಿ ಅದುಮಿದ ಕೂಡಲೆ ಆ ಬ್ರಶ್ ಗಳು ವೇಗವಾಗಿ ರಸ್ತೆಯ ಮೇಲೆ ಸುತ್ತುತ್ತಾ ಕಸವನ್ನು ಒಗ್ಗೂಡಿಸುತ್ತಾ ಗುಡಿಸುತ್ತವೆ.  ಹೀಗೆ ಒಂದೊಂದು ರಸ್ತೆಯನ್ನು ಸುಮಾರು ಅರ್ಧ ಘಂಟೆಯಲ್ಲಿ ಗುಡಿಸಿ, ವಾಹನ ಹೊರಟು ಹೋಗುತ್ತದೆ.

ಮನೆಗಳೂ ಕೂಡ ಮುಂದುಗಡೆಗೆ ಹೆಂಚುಗಳನ್ನು ಹಾಕಿ ವಿನ್ಯಾಯ ಮಾಡಲಾಗಿರುತ್ತದೆ.  ಬೀದಿಬಾಗಿಲ ಪಕ್ಕದಲ್ಲೇ ಮೋಟಾರು ನಿಲ್ಲಿಸುವ ಲಾಯ (garage)ದ ಬಾಗಿಲಿರುತ್ತದೆ.  ಕೆಲವರು ಬೀದಿ ಬಾಗಿಲುಗಳನ್ನು ತಿಂಗಳಾನುಗಟ್ಟಲೆ ತೆಗೆಯುವುದೇ ಇಲ್ಲ. 
ಈ ಜಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆಂದು ಬಸ್ಸುಗಳಾಗಲಿ, ಸುರಂಗ ರೈಲುಗಳಾಗಲೀ ಏನೂ ಇಲ್ಲ.  ಅರಿಜೋನ ವಿಶ್ವವಿದ್ಯಾಲಯವಿರುವ ಕಡೆಗೆ ರೈಲುಗಳ ಓಡಾಟವಿದೆ.  ಕೆಲವು ಕಡೆ ನಾವು ಓಡಾಡುವಾಗ ಕೆಲವು ಬಸ್ಸುಗಳನ್ನು ನೋಡಿದೆವು ಅಷ್ಟೆ.  ಬಾಕಿಯಂತೆ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲೇ ಎಲ್ಲ ಕಡೆಗೂ ಓಡಾಡಬೇಕು.  ಕೆಲವೊಮ್ಮೆ ಕೆಲಸಕ್ಕೆ ಹೋಗುವಾಗ ಒಂದೇ ಕಡೆ ವಾಸವಿರುವ ಕೆಲವರು ಒಂದೊಂದು ದಿನ ಒಬ್ಬೊಬ್ಬರ ಕಾರಿನಲ್ಲಿ ಹೋಗಿ ಇಂಧನ ಉಳಿಸುತ್ತಾರೆ.  ಮೋಟಾರು ಲಾಯದಲ್ಲಿಯೇ ಚಪ್ಪಲಿಗಳನ್ನು ಬಿಡುವ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಾದ್ದರಿಂದ, ಯಾವಾಗ ಮನೆಯಿಂದ ಹೊರಗೆ ಹೋಗಬೇಕಾದರೂ ಮೋಟಾರು ಲಾಯದ ಬಾಗಿಲನ್ನೇ ಉಪಯೋಗಿಸುತ್ತಾರೆ.  ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗ ಈ ಆಚರಣೆಗಳು ಮನಸ್ಸಿಗೆ ಸ್ವಲ್ಪ ಕಸಿವಿಸಿ ಮಾಡುವುದು. 
  
ಬಾಡಿಗೆ ಮನೆಗಳಲ್ಲಿ  ವಿದ್ಯುತ್ ಒಲೆಗಳು, ಪಾತ್ರೆ ತೊಳೆಯುವ ಯಂತ್ರ, ಬಟ್ಟೆ ಒಗೆಯುವ ಯಂತ್ರ, ನೀರು ಶುದ್ಧೀಕರಿಸುವ ಯಂತ್ರ (ಫೀನಿಕ್ಸ್ ನಲ್ಲಿ ಒರಟು ನೀರು ಸಿಕ್ಕುವುದರಿಂದ ಅದನ್ನು ಪರಿಷ್ಕರಿಸಿ ಉಪಯೋಗಿಸಬೇಕಾಗುವುದು) ಎಂದು ಎಲ್ಲವನ್ನೂ ಅಳವಡಿಸಿಯೇ ಬಾಡಿಗೆಗೆ ಕೊಡುತ್ತಾರೆ.  ನನ್ನ ಮಗ ಬಾಡಿಗೆಗೆ ಇದ್ದ ಮನೆಯಲ್ಲಿ ನಾವು ಹೋದಾಗ ಪಾತ್ರೆ ತೊಳೆಯುವ ಯಂತ್ರ ಕೆಟ್ಟಿತ್ತು.  ಅದನ್ನು ಬದಲಾಯಿಸಲು ಒಬ್ಬರನ್ನು ಮನೆಯ ಒಡತಿ ಕಳುಹಿಸಿದ್ದಳು.  ಆ ಭಾರೀ ಗಾತ್ರದ, ಕುಳ್ಳಗಿನ ಮನುಷ್ಯ ಯಾರ ಸಹಾಯವೂ ಇಲ್ಲದೆ ಮಣ ತೂಕದ ಯಂತ್ರವನ್ನು ಒಂದು ಗಾಡಿಯಲ್ಲಿ ತಂದಿದ್ದನು.  ಅದನ್ನು ಗಾಲಿಯಿರುವ ಪುಟ್ಟ ಕಬ್ಬಿಣದ ಸರಳುಗಳ ಸಹಾಯದಿಂದ ಮನೆಯ ಒಳಗಡೆ ತಂದನು.  ತಾನೊಬ್ಬನೇ ಬಗ್ಗಿ, ಎದ್ದು, ಕುಳಿತು, ಮಲಗಿ, ಎಲ್ಲಾ ತರಹದ ಕಸರತ್ತನ್ನೂ ಮಾಡಿ, ಹಳೆಯ ಯಂತ್ರವನ್ನು ಹೊರಗೆ ತೆಗೆದು, ಹೊಸತನ್ನು ಅಳವಡಿಸಿ, ಅಲ್ಲಿ ಚೆಲ್ಲಿದ್ದ ನೀರನ್ನೆಲ್ಲಾ ಒರೆಸಿ, ನೆಲದ ಹಂಚಿನ ಮೇಲಾಗಿದ್ದ ಕಲೆಯನ್ನೆಲ್ಲಾ ಉಜ್ಜಿ, ಶುಚಿಗೊಳಿಸಿ (ಅದಕ್ಕೂ ಏನೋ ಒಂದು ಲೋಷನ್ ತಂದಿದ್ದ), ಓಕೆ ಬಾಯ್ ಎಂದು ಅರ್ಧಗಂಟೆಯಲ್ಲಿ ಹೊರಟೇ ಹೋದನು.  ನಾವು ನೋಡುತ್ತಾ ಕುಳಿತವರು, ಅವನಿಗೆ ಏನಾದರೂ ಸಹಾಯ ಬೇಕೆ ಎಂದು ಕೇಳಿ ಪೆಚ್ಚಾದೆವು ಅಷ್ಟೆ.  

ಮನೆಯ ಮುಂದುಗಡೆ ಬೆಳೆದ ಹುಲ್ಲನ್ನು ಕತ್ತರಿಸಲು ಕೂಡ ಜನಗಳು ಸಿಗುತ್ತಾರೆ.  ಅವರ ಜಂಗಮ ದೂರವಾಣಿಗೆ ಕರೆ ಮಾಡಿದರೆ ಬಂದು ಎಲ್ಲವನ್ನೂ ಕತ್ತರಿಸಿ, ಗುಡಿಸಿ ಹೋಗುತ್ತಾರೆ.  ನನ್ನ ಮಗ ಬಾಡಿಗೆಗೆ ಇದ್ದ ಮನೆಯ ಹುಲ್ಲು ಕತ್ತರಿಸಲು ಒಬ್ಬ ದಂಪತಿಗಳು ತಮ್ಮ ವಾಹನದಲ್ಲಿ ಬಂದಿದ್ದರು.  ಗಂಡ ಹೆಂಡತಿ ಇಬ್ಬರೂ ಅದೆಷ್ಟು ಚಾಕಚಕ್ಯತೆಯಿಂದ ಒಬ್ಬೊಬ್ಬರು ಒಂದೊಂದು ಕಡೆಯಿಂದ ಪ್ರಾರಂಭಿಸಿ ಕೇವಲ ಅರ್ಧ ಗಂಟೆಯಲ್ಲಿ ಕೆಲಸ ಮಾಡಿ ಮುಗಿಸಿದರು.  ಎಲ್ಲದಕ್ಕೂ ಬೇಕಾದಂತಹ ತರಹೇವಾರಿ ಉಪಕರಣಗಳು ಇರುತ್ತವೆ.  ನಮ್ಮ ದೇಶದಂತೆ ಇಲ್ಲಿ ಎಲ್ಲ ಕೆಲಸವನ್ನೂ ಕೈಯಲ್ಲಿ ಮಾಡಿ ಶ್ರಮ ಪಡಬೇಕಾಗಿಲ್ಲ.  ಉಪಕರಣಗಳ ಸಹಾಯದಿಂದ ಪ್ರತೀ ಕೆಲಸವನ್ನೂ ಅತಿ ಕಡಿಮೆ ಸಮಯದಲ್ಲಿ, ಅಚ್ಚುಕಟ್ಟಾಗಿ ಮಾಡಿಬಿಟ್ಟು, ಕಸವನ್ನೂ ತೆಗೆದು ಸ್ವಚ್ಛ ಮಾಡಿ,  ತಮ್ಮ ಹಣ ಪಡೆದು "ಶುಭದಿನ" ಎಂದು ಹಾರೈಸಿ ಹೊರಟುಹೋಗುವರು. 

 
ಮನೆಯ ಹಿತ್ತಲಲ್ಲಿ ಮಡಿಲ ತುಂಬಾ ಮಕ್ಕಳನ್ನೇ ಹೊತ್ತು ನಿಂತಿರುವ ಕಿತ್ತಳೆ ಹಣ್ಣಿನ ಗಿಡ, ನಮ್ಮ ಊರಿನ ನಿಂಬೆ ಹಣ್ಣಿಗಿಂತ ದೊಡ್ಡ ಗಾತ್ರದ ನಿಂಬೆ ಹಣ್ಣುಗಳನ್ನು ಹೊತ್ತು ನಿಂತಿರುವ ನಿಂಬೆಗಿಡ ನಮ್ಮ ಗಮನವನ್ನು ಸೆಳೆಯುತ್ತದೆ.  ಆದರೆ ಯಾರೊಬ್ಬರೂ ಒಂದೇ ಒಂದು ಹಣ್ಣನ್ನೂ ಕೀಳುವುದೂ ಇಲ್ಲ, ಉಪಯೋಗಿಸುವುದೂ ಇಲ್ಲ.  ಮಗನ ಮನೆಯ ಪಕ್ಕದ ಮನೆಯಲ್ಲಿ ನಿಂಬೆ ಗಿಡವಿರುವುದು.  ಕೆಲವು ರೆಂಬೆಗಳು ಅವರ ಮನೆಯ ಗೋಡೆಯಿಂದಾಚೆ ಈ ಮನೆಯ ಕಡೆ ಬಗ್ಗಿ ಮೈತುಂಬಾ ಕಡು ಹಳದಿ ಬಣ್ಣದ ಹಣ್ಣುಗಳನ್ನು ಹೊತ್ತು, ಗಾಳಿಯಲ್ಲಿ ಈ ಕಡೆ ಆ ಕಡೆ ತೂಗುತ್ತಾ ಕೈಬೀಸಿ ಕರೆಯುವುದು.  ಗಿಡ ಅವರ ಮನೆಯಲ್ಲಿ ಇದ್ದರೂ, ಗೋಡೆಯಿಂದೀಚೆಗೆ ಬಾಗಿರುವ ಕೊಂಬೆಗಳಿಂದ ನಾವು ಹಣ್ಣುಗಳನ್ನು ತೆಗೆದುಕೊಳ್ಳಬಹುದೆಂದು ತಿಳಿಯಿತು.  ನಾನು ಕೆಲವು ಹಣ್ಣುಗಳನ್ನು ತಂದು ಉಪಯೋಗಿಸಿದೆ.  


 ದಪ್ಪನಾದ ಹೊರಕವಚವಿರುವುದರಿಂದ ರಸ ತೆಗೆಯಲು ಸ್ವಲ್ಪ ಶ್ರಮ ಪಡಬೇಕಾದರೂ ಕೂಡ, ಹಣ್ಣಿನ ತುಂಬಾ ರಸ ಹೊತ್ತ ನಿಂಬೆ ರುಚಿಯಾಗಿತ್ತು.  ಮಾತು ಮಾತಿಗೂ ಕಾಯ್ದೆ ಕಾನೂನುಗಳನ್ನು ಅನುಸರಿಸಬೇಕಾದಂತಹ ಅತಿ ಶಿಸ್ತು ಕೆಲವೊಮ್ಮೆ ನಮ್ಮನ್ನು ಪೇಚಿಗೆ ಸಿಲುಕಿಸುವುದು.   ಎಲ್ಲವೂ ಮುಕ್ತವಾಗಿ, ಯಾರ ಅಂಕೆಯೂ ಇಲ್ಲದೆ ಇರುವ ನಮ್ಮ ಊರು, ದೇಶ ಎಷ್ಟು ಹಿತ ಎನ್ನುವುದು ಹೊರಗೆ ಹೋದಾಗ ಮಾತ್ರವೇ ತಿಳಿಯುವುದು.  ಪ್ರಕೃತಿದತ್ತವಾದ ಸಕಲ ಸೌಲಭ್ಯಗಳಿಗೂ ನಾವೇ ಒಡೆಯರು, ಎಲ್ಲವೂ ನಮಗಾಗಿಯೇ, ನಮ್ಮದೇ ಎನ್ನುವ ಭಾವದಲ್ಲಿ ಬದುಕುವ ನಾವು ಎಲ್ಲದಕ್ಕೂ ಅದರದೇ ಆದ ಒಂದು ಬೆಲೆಯಿದೆಯೆಂಬ ಸತ್ಯ ನಮಗೆ ತಿಳಿಯುವುದು ನಾವು ನಮ್ಮ ದೇಶದಿಂದ ಹೊರಗಡೆ ಹೋದಾಗ ಮಾತ್ರ.

ಫೀನಿಕ್ಸ್ ನಗರವು ತುಂಬಾ ಆಸ್ತೆಯಿಂದ ನಕ್ಷೆ, ನಕಾಶೆಗಳ ಸಹಾಯದಿಂದ ಕಟ್ಟಲ್ಪಟ್ಟಿದೆ.  ನೈಸರ್ಗಿಕ ಸೌಂದರ್ಯ ಹಾಳಾಗದಂತೆ ಕಾಪಾಡಲಾಗಿದೆ.  ತುಂಬಾ ಹೆಚ್ಚೆನಿಸುವ ಬಹು ಮಹಡಿ ಕಟ್ಟಡಗಳು ಕಾಣಸಿಗುವುದಿಲ್ಲ.    ಅರಿಜೋನ ವಿಶ್ವವಿದ್ಯಾಲಯದಲ್ಲಿಯೇ ನನ್ನ ಮಗ ತನ್ನ MS ಪದವಿ ಮಾಡಿದ್ದು.  ಒಳಗೆಲ್ಲಾ ನಮ್ಮನ್ನು ಕಾರಿನಲ್ಲಿಯೇ ಕರೆದುಕೊಂಡು ಹೋಗಿ ತೋರಿಸಿದಾಗ ಅಲ್ಲಿ ಓದಲು ಬರುವ ವಿದ್ಯಾರ್ಥಿಗಳ ಸಂಕಷ್ಟಗಳು ನಮಗೆ ಅರ್ಥವಾಯಿತು.  ವಿಸ್ತಾರವಾಗಿ ಹಬ್ಬಿರುವ ವಿಶ್ವವಿದ್ಯಾಲಯದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪ್ರತಿ ವರ್ಷವೂ ಇರುತ್ತಾರಂತೆ.  ವಿದ್ಯಾರ್ಥಿಗಳಿಗೆ ಬರಿಯ ತಂಗುವ ಮನೆಗಳು ಸಿಗುತ್ತವೆ.  ಅಲ್ಲಿಯೇ ಸುಮಾರು ೪-೫ರ ಗುಂಪು ಅಥವಾ ಮನೆ ದೊಡ್ಡದಿದ್ದರೆ ಇನ್ನೂ ಕೆಲವು ಜನ ಸೇರಿಕೊಂಡು ಊಟದ ಖರ್ಚನ್ನು ಎಲ್ಲರೂ ಹಂಚಿಕೊಳ್ಳುತ್ತಾ ವಿದ್ಯಾಭ್ಯಾಸ ಮಾಡುತ್ತಾರೆ.  ಹೀಗೆ ವಿದ್ಯಾರ್ಥಿಗಳಾಗಿರುವವರ ಅನುಕೂಲಕ್ಕಾಗಿ ಬಟ್ಟೆ ಒಗೆಯುವ  ಯಂತ್ರಗಳನ್ನು ಅನೇಕ ಕಡೆ ಇರಿಸಲಾಗಿದೆ.  ಇವು ವಿದ್ಯಾರ್ಥಿಗಳಿಗಾಗಿಯೇ ಮಾಡಿಕೊಟ್ಟಿರುವ ಅನುಕೂಲ.  ಅಲ್ಲಿ ಬಟ್ಟೆ ಒಗೆಯುವ ಯಂತ್ರದಲ್ಲಿ ಬಟ್ಟೆಗಳನ್ನು ಹಾಕಿ ಅದಕ್ಕೆಷ್ಟು ದುಡ್ಡು ಕಟ್ಟಬೇಕೋ ಅದನ್ನು ಹಾಕಿದರೆ ಮಾತ್ರ ಯಂತ್ರ ಕೆಲಸ ಮಾಡುತ್ತದೆ.  ಸುಮಾರು ಮುಕ್ಕಾಲು ಗಂಟೆ ಬಟ್ಟೆ ಒಗೆದ ನಂತರ ಅದನ್ನು ತೆಗೆದು ಒಣಗಿಸುವ ಯಂತ್ರದಲ್ಲಿ ಹಾಕಬೇಕು.  ಕೆಲಸ ಆದ ನಂತರ ತೆಗೆದುಕೊಂಡು ಹೋಗಬೇಕು.  ಇದು ವಾರದಲ್ಲಿ ಒಂದು ಸಲ ಮಾಡುವ ವಾರಾಂತ್ಯದ ಕಾರ್ಯಕ್ರಮ.  ಕೈಯಲ್ಲಿ ಹೆಚ್ಚು ದುಡ್ಡಿಲ್ಲದೆ, ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡು ಓದಲು ಬರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.  ಆದ್ದರಿಂದ ಖರ್ಚು ಮಾಡುವ ಒಂದೊಂದು ಡಾಲರ್ ಕೂಡ ಯೋಚಿಸಿಯೇ ಮಾಡಬೇಕು.  ಕೆಲವು ಅದೃಷ್ಟವಂತ ಹುಡುಗರಿಗೆ ಓದುವಾಗಲೇ ಸಂಜೆ ಸಮಯ ಕೆಲಸ ಮಾಡಲು ಸಿಕ್ಕುತ್ತದೆ.  ಅಂತಹ ಸಮಯದಲ್ಲಿ ಹಣದ ಅಡಚಣೆ ಸ್ವಲ್ಪ ಕಡಿಮೆಯಾಗುವುದು.  ಆದರೆ ಕೆಲವು ಮಕ್ಕಳಿಗೆ ಓದು ಮುಗಿದರೂ ಕೆಲಸ ಸಿಕ್ಕಿರುವುದಿಲ್ಲ.  ನಮ್ಮ ದೇಶದಿಂದ ದೂರ ದೇಶಕ್ಕೆ ಓದಲು ಹೋದಾಗ ಒಬ್ಬರಿಗೊಬ್ಬರು ತುಂಬಾ ಸಹಾಯ ಮಾಡಿಕೊಳ್ಳುತ್ತಾರೆ.  ಕೆಲಸ ಸಿಗುವವರೆಗೂ ಊಟ, ತಿಂಡಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.  ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಲ್ಲಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕೂಡ ತುಂಬಾ ಸಹಾಯ ಮಾಡುತ್ತಾರೆ.  ವಾರಾಂತ್ಯಗಳಲ್ಲಿ ಊಟಕ್ಕೆ ಕರೆಯುವುದು, ಹೊಸದಾಗಿ ಹೋದಾಗ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡುವುದು, ವಿಶ್ವವಿದ್ಯಾಲಯದಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ಪರಿಚಯಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಗುಂಪಿನಲ್ಲಿರುವ ಇತರ ಭಾರತೀಯರನ್ನು ಪರಿಚಯಿಸುವುದನ್ನು ತುಂಬಾ ಕಾಳಜಿಯಿಂದ ಮಾಡುತ್ತಾರೆ.   ವಿಶ್ವವಿದ್ಯಾಲಯದ ಸುತ್ತಮುತ್ತಲಲ್ಲೇ ಮನೆಗಳು ಬಾಡಿಗೆಗೆ ಸಿಗುತ್ತವೆಯಾದ್ದರಿಂದ ವಿದ್ಯಾರ್ಥಿಗಳು ಓದು ಮುಗಿಯುವವರೆಗೂ ಅಲ್ಲಿಯೇ ಇರುತ್ತಾರೆ.  ಕೆಲಸ ಸಿಕ್ಕ ಕೂಡಲೆ ಸ್ವಲ್ಪ ಅನುಕೂಲಕರವಾದ ಮನೆ ನೋಡಿಕೊಂಡು ಹೊರಡುತ್ತಾರೆ.
 

Wednesday, June 1, 2016

ಪ್ರವಾಸ ಕಥನ - ಅಮೆರಿಕ

ರಷ್ಯಾ ದೇಶಕ್ಕೆ ಹೋಗಿ ಬಂದು ಸುಮಾರು ೨೩ ವರ್ಷಗಳ ನಂತರ ಮತ್ತೆ ಸಮುದ್ರಲಂಘನ ಮಾಡಿ ಅಮೆರಿಕಾಗೆ ಹೋಗುವ ಅವಕಾಶ, ಸಮಯ ಬಂದಾಗ ಮನಸ್ಸು ಅಷ್ಟೇನೂ ಸಂಭ್ರಮಿಸಿರಲಿಲ್ಲ.  ಅತ್ತೆಯವರ ದೀರ್ಘ ಅನಾರೋಗ್ಯ, ಹೊರಡುವ ಮುಂಚಿನ ತಯ್ಯಾರಿ, ಮನೆದೇವರ ದರ್ಶನ, ಚಾಮುಂಡಿ ಬೆಟ್ಟದ ಪ್ರಯಾಣ ಎಲ್ಲವೂ ಸಿಕ್ಕಾಪಟ್ಟೆ ಸುಸ್ತು ಮಾಡಿಯಾಗಿತ್ತು.  ಇನ್ನು ವಿಮಾನ ಏರಿ ಕುಳಿತಾಗಲೇ ನೆಮ್ಮದಿ ಹಾಗೂ ವಿಶ್ರಾಂತಿ ಎನ್ನುವ ಮಟ್ಟಿಗೆ ತಲುಪಿದ್ದೆವು.  ಫೆಬ್ರುವರಿ ೧೩ನೆಯ ತಾರೀಖು ಬೆಳಗಿನ ಜಾವ ೩ ಗಂಟೆಗೆ ಜಂಗಮ ದೂರವಾಣಿ ಹಾಡಲಾರಂಭಿಸಿದಾಗ, ಆಗ ತಾನೆ ಇನ್ನೂ ನಿದ್ದೆಯ ಮಂಪರು ಶುರುವಾಗಿತ್ತು.  ದಡಬಡಿಸಿ ಎದ್ದು ಹೊರಟೆವು.  ಎಲ್ಲಾ ತರಹದ ತಡೆಗಳನ್ನೂ ಯಶಸ್ವಿಯಾಗಿ ದಾಟಿ ನಾವು ವಿಮಾನ ನಿಲ್ದಾಣದಲ್ಲಿ ಮಹಡಿಯ ಮೇಲೆ ನಿಂತಿದ್ದೆವು.  ಅಲ್ಲಿಯೇ ತಿಂಡಿ ತಿಂದು, ಕಾಯುತ್ತಾ ಕುಳಿತೆವು.  ಬೆಳಗಿನ ೬ ಗಂಟೆಗೆ ವಿಮಾನವೇರಲು ಕರೆ ಬಂದಿತು.  ಏರುವಾಗ ತಿಳಿಯಿತು ನಮ್ಮ ಟಿಕೇಟುಗಳನ್ನು ಜನೂ ಮೇಲ್ದರ್ಜೆಗೆ ವರ್ಗಾಯಿಸಿದ್ದಾರೆ ಎಂದು.  ಮೊದಲನೆಯ ಸಾಲಿನಲ್ಲಿಯೇ ಕಾಯ್ದಿರಿಸಲಾಗಿದ್ದ ಜಾಗದಲ್ಲಿ ಕುಳಿತಾಗ ಮುಂದೆ ಯಾರೂ ಕುಳಿತಿಲ್ಲದೆ, ಕಾಲುಗಳನ್ನು ಉದ್ದವಾಗಿ ನೀಟಿಕೊಳ್ಳಲು ಜಾಗವಿರುವುದು ಖುಷಿಯಾಯಿತು.  ಎಲ್ಲಾ ತಪಾಸಣೆಗಳೂ, ನಿರ್ದೇಶನಗಳೂ ಮುಗಿದು, ಕೊನೆಗೂ ವಿಮಾನ ಮೇಲಕ್ಕೇರಿತು.  ನೆಮ್ಮದಿಯ ನಿದ್ದೆಗೆ ಜಾರಿದ್ದೆ.  ಆದರೆ ಎಲ್ಲಿ ನೆಮ್ಮದಿ..? ಸ್ವಲ್ಪ ಹೊತ್ತಿನಲ್ಲೇ ಬೆಳಗಿನ ಉಪಹಾರಕ್ಕೆಂದು ಕರೆದು ಎಬ್ಬಿಸಲಾಯಿತು.   ಹೇಗೋ ಕುಳಿತೂ ಕುಳಿತೂ ಬೇಸರವಾಗುವ ಹೊತ್ತಿಗೆ ನಾವು ಲಂಡನ್ ತಲುಪಿದ್ದೆವು.  ೧೧ ಘಂಟೆಗಳ ಕಾಲ ಸುಮ್ಮನೆ ಕೂರುವ ಪ್ರಥಮ ಹಂತದ ಶಿಕ್ಷೆ ಮುಗಿದಿತ್ತು.  ಹೀತ್ರೂ ವಿಮಾನ ನಿಲ್ದಾಣದ ವಿಷಯ ಅನೇಕರು ಅನೇಕ ರೀತಿಯಲ್ಲಿ ತಿಳಿಸಿ ನಮಗೆ ಒಂದು ತರಹದ ಆತಂಕ ಸೃಷ್ಟಿಯಾಗಿತ್ತು.  ಅತೀ ದೊಡ್ಡದಾದರೂ ಎಲ್ಲವೂ ಸಂಪೂರ್ಣವಾಗಿ ಮಾಹಿತಿ ಭರಿತ ನಿಲ್ದಾಣವಾಗಿದೆ.  ಮುಂದಕ್ಕೆ ಪಯಣಿಸಬೇಕಾಗಿರುವವರು ಯಾವ ಸಾಲಿನಲ್ಲಿ ಹೋಗಬೇಕು ಎಂಬ ವಿವರಗಳು ಹೆಜ್ಜೆ ಹೆಜ್ಜೆಗೂ ತುಂಬಿವೆ.  ನಮಗೆ ಫೀನಿಕ್ಸ್ ವಿಮಾನವನ್ನು ಏರಲು ಕೇವಲ ೨ ಘಂಟೆಗಳ ಸಮಯವಿತ್ತು.  ಆತಂಕದಿಂದಲೇ ನಮ್ಮ ಸಾಮಾನಿನ ಗಾಡಿಯನ್ನು ತಳ್ಳುತ್ತಾ, ಫಲಕಗಳನ್ನು ಓದಿಕೊಳ್ಳುತ್ತಾ ಒಂದೇ ಉಸಿರಿಗೆ ಓಡಿದಂತೆ ನಡೆಯಲಾರಂಭಿಸಿದೆವು.  ಸುಮಾರು ಅರ್ಧ ಘಂಟೆ ಹಾಗೆ ನಡೆದು,  ಚಲಿಸುವ ಸೋಪಾನಗಳ  ಸಹಾಯದಿಂದ ಹತ್ತಿ, ಇಳಿದು, ನಡೆದು ಸುಸ್ತಾಗುವ ಹೊತ್ತಿಗೆ  ಒಂದು ಬಾಗಿಲ ಹತ್ತಿರ ಬಂದಿದ್ದೆವು.  ಅಲ್ಲಿ ಐದು ನಿಮಿಷಗಳು ಕಾಯುವಷ್ಟರಲ್ಲಿ ದೊಡ್ಡದೊಂದು  ಬಸ್ ಬಂದಿತು.  ಅದರ ಚಾಲಕ ಇಳಿದು ಬಂದು ತಾನು ಕತ್ತಿನಲ್ಲಿ ಧರಿಸಿದ್ದ ಉದ್ದನೆಯ ಹಗ್ಗದ ಕೊನೆಗೆ ತೂಗಾಡುತ್ತಿದ್ದ ತನ್ನ ಗುರುತಿನ ಚೀಟಿಯನ್ನು ಬಾಗಿಲಿನ ಹೊರಗಡೆ ಇದ್ದ ಬೀಗಕ್ಕೆ ತೋರಿಸಿದಾಗ, ಬಾಗಿಲು ತೆರೆದುಕೊಂಡಿತು.  ನಾವು ಆ ಬಸ್ಸಿನಲ್ಲಿ ಹತ್ತಿಕೊಂಡು ಅಲ್ಲಿಂದ ಹೊರಟೆವು.  ಬಸ್ಸು ಕೂಡ ಅನೇಕ ಕಡೆ ತಿರುಗುತ್ತಾ ಸುರಂಗದಲ್ಲೆಲ್ಲಾ ಚಲಿಸುತ್ತಾ ಸುಮಾರು ೧೫ ನಿಮಿಷಗಳ ನಂತರ ಒಂದು ಕಡೆ ನಿಂತಾಗ ನಾವು ಇಳಿದು ಮತ್ತೆ ಸ್ವಲ್ಪ ದೂರ ಒಳಗಡೆಗೆ ನಡೆದು ಹೋದೆವು.  ಕೊನೆಗೂ ನಾವು ನಮ್ಮ ಪ್ರಯಾಣ ಮುಂದುವರೆಸಬೇಕಾಗಿದ್ದ ಫೀನಿಕ್ಸ್ ವಿಮಾನ ಏರುವ ಮುಂಚೆ ಆಗುವ ತಪಾಸಣೆಯ ಜಾಗಕ್ಕೆ ಬಂದಿದ್ದೆವು.  ಭದ್ರತಾ ತಪಾಸಣೆಯಲ್ಲಿ ಕೈಯಲ್ಲಿರುವ ಬಳೆಗಳು, ಗಡಿಯಾರ, ಉಂಗುರ ಎಲ್ಲವನ್ನೂ ತೆಗೆದು ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಇಡಬೇಕು.  ಚಪ್ಪಲಿ ಕಳಚಿ ಇನ್ನೊಂದು ಬುಟ್ಟಿಯಲ್ಲಿಡಬೇಕು.  ಇಷ್ಟೆಲ್ಲಾ ಸಂಭ್ರಮದಲ್ಲಿ ನಮ್ಮ ಬ್ಯಾಗ್, ಅದರಲ್ಲಿನ ಜಂಗಮ ದೂರವಾಣಿ, ಇನ್ನೂ ಏನೇನು ಎಲೆಕ್ಟ್ರಾನಿಕ್ಸ್ ವಸ್ತುಗಳು ಇವೆಯೋ ಅವೆಲ್ಲವನ್ನೂ ಬಿಡಿಬಿಡಿಯಾಗಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಇಟ್ಟು, ನಮ್ಮ ದೈಹಿಕ ತಪಾಸಣೆಗೆ ಸಾಲಿನಲ್ಲಿ ನಿಲ್ಲಬೇಕು.  ಎಲ್ಲವೂ ಮುಗಿಯುವ ಹೊತ್ತಿಗೆ ನಿಜಕ್ಕೂ ಸುಸ್ತಾಗಿಬಿಡುವುದು.  ನಂತರ ಅಲ್ಲಿ ಸುಮಾರು ಅರ್ಧ ಘಂಟೆ ಕುಳಿತ ನಂತರ  ವಿಮಾನ ಏರುವ ಪ್ರಕ್ರಿಯೆ ಪ್ರಾರಂಭವಾಯಿತು.  ಯಾವ ಯಾವ ಸಾಲಿನ ಸಂಖ್ಯೆಗಳು ಘೋಷಣೆ ಆಗುವುದೋ ಆ ಸಾಲಿನವರು ಹೋಗಲು ಪ್ರಾರಂಭಿಸಿದರು.  ಇಷ್ಟು ಹೊತ್ತಿಗೆ ಸಾಕಷ್ಟು ದಣಿದಿದ್ದ ನಾವು ನಮ್ಮ ಸರತಿ ಬಂದಾಗ ವಿಮಾನವೇರಿ ಕುಳಿತೆವು.  ಮತ್ತೆ ೧೧ - ೧೨ ಘಂಟೆಗಳ ದೀರ್ಘ ಪ್ರಯಾಣ.  ಮಾಡಲು ಏನೂ ಇಲ್ಲದೇ ಸುಮ್ಮನೆ ಕೂಡಿಸಿದರೂ ನಾವು ನೆಮ್ಮದಿಯಾಗಿ ಇರಲಾರೆವೆಂಬ ಅನುಭವವಾಯಿತು.  ಒಂದೇ ಸಮನೆ ಅಲ್ಲಾಡಲೂ ಜಾಗವಿರದೆ ಕುರ್ಚಿಯ ಪಟ್ಟಿಯನ್ನು ಬಿಗಿದುಕೊಂಡು ಕುಳಿತಿರುವುದು ಕೂಡ ಒಂದು ರೀತಿಯ ಶಿಕ್ಷೆ ಎಂಬುದು ಅರಿವಾಯಿತು.  ಸ್ವಲ್ಪ ನಿದ್ದೆ, ಸ್ವಲ್ಪ ಎಚ್ಚರ ಹೀಗೆ ಸಮಯ ಕಳೆದಾಗ ಫೀನಿಕ್ಸ್ ಹತ್ತಿರ ಬಂದಿದ್ದೆವು.  ಸಾಯಂಕಾರ ಸೂರ್ಯ ಅಸ್ತಮಿಸಲು ಸಜ್ಜಾಗಿರುವ ಸಮಯದಲ್ಲಿ ವಿಮಾನ ಪ್ರಯಾಣ ಅತ್ಯಂತ ರೋಮಾಂಚನಕರವಾಗಿರುತ್ತದೆ.  ಕೆಂಪು, ಹಳದಿ, ಹಸಿರು, ನೀಲಿ ಎಂಬ ಬಣ್ಣಗಳ ಮಿಶ್ರಣದಲ್ಲಿ ಬಂಗಾರದ ತಟ್ಟೆಯಂತೆ ಕಂಗೊಳಿಸುವ ಸೂರ್ಯ ನಮ್ಮನ್ನು ಬೇರೆಯೇ ಲೋಕಕ್ಕೆ ಸೆಳೆದೊಯ್ಯುತ್ತಾನೆ.  



ಫೀನಿಕ್ಸ್ ನ ಬೆಟ್ಟ ಗುಡ್ಡಗಳು, ಕೆಲವು ಎತ್ತರದ ಕಟ್ಟಡಗಳು ಎಂದು ನೋಡುತ್ತಾ ನೋಡುತ್ತಾ ನಾವು ಇಳಿಯುವ ಸಮಯವಾಯಿತು.  ಕೊನೆಗೂ ದೀ....ರ್ಘ ಪ್ರಯಾಣ ಮುಗಿಯುವ ನೆಮ್ಮದಿ ಸಿಕ್ಕಹಾಗಾಯಿತು.  ಅಂತೂ ಇಂತೂ ನಾವು ಶನಿವಾರ  ಬೆಳಗ್ಗೆ ೭ ಘಂಟೆಗೆ ಇಲ್ಲಿಂದ ಹೊರಟು ಶನಿವಾರ ಸಾಯಂಕಾಲ ೭.೧೫ಕ್ಕೆ ಫೀನಿಕ್ಸ್ ತಲುಪಿದೆವು.  ಫೀನಿಕ್ಸ್ ಸಮಯ ನಮ್ಮ ಸಮಯಕ್ಕಿಂತ ಅಂದಾಜು ೧೧.೩೦ ಘಂಟೆಗಳಷ್ಟು ಹಿಂದಿದೆ.  ನಾವು ಪಯಣಿಸುವಾಗ ನಮಗೆ ೧೨ ಘಂಟೆಗಳ ಕಾಲದಷ್ಟು ಸಮಯ ಲಾಭವಾಗಿತ್ತು.  ಹಾಗಾಗಿ ನಾವು ಶನಿವಾರ ಹೊರಟು ಅಲ್ಲಿ ಶನಿವಾರವೇ ತಲುಪಿದ್ದೆವು.    ಫೀನಿಕ್ಸ್ ಸುಂದರವಾದ ಪ್ರದೇಶ.  ತುಂಬಾ ಆಸಕ್ತಿಯಿಂದ ಕಟ್ಟಲ್ಪಟ್ಟಿರುವ ಜಾಗ.  ಪ್ರತಿಯೊಂದು ರಸ್ತೆಗಳೂ ನಯವಾಗಿ, ಅಗಲವಾಗಿ, ಜಾರುವಂತೆ ಸಾಗುತ್ತಿರುವಾಗ ರಸ್ತೆಗಳ ಅಕ್ಕ ಪಕ್ಕದ ಗೋಡೆಗಳಲ್ಲಿ ಮರುಭೂಮಿಯಲ್ಲಿ ವಾಸಿಸುವಂತಹ ಪ್ರಾಣಿಗಳ ಚಿತ್ರಗಳು, ನಮ್ಮ ಜೊತೆಗೇ ಪ್ರಯಾಣಿಸುತ್ತಿರುವುವೋ ಎಂಬ ಭಾವನೆ ಕೊಡುವಂತಿರುವುದು.  ಗೋಡೆಯಿಂದ ರಸ್ತೆಯ ಕಡೆಗೆ ಇಳಿಜಾರು ಪ್ರದೇಶವನ್ನಾಗಿ ಮಾಡಿ, ಪುಟ್ಟ ಪುಟ್ಟ ಪಾತಿಗಳಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು ಬೆಳೆಸಿರುವರು.  ನಾವು ಅಲ್ಲಿದ್ದ ಸಮಯ ಚಳಿ ಮುಗಿದು, ಬೇಸಿಗೆ ಕಾಲ ಪ್ರಾರಂಭವಾಗುವ ಮೊದಲ ಸಂಧಿಯ ಸಮಯವಾಗಿತ್ತು.  ಎಳೆ ಬಿಸಿಲಿನ ಸಂಪರ್ಕದಿಂದಾಗಿ ಗಿಡಗಳು ಚಿಗುರಿ, ಹಸಿರು ಬಣ್ಣಗಳಲ್ಲೇ, ನಾನಾ ವಿಧದ ರಂಗುಗಳನ್ನು ಸೃಷ್ಟಿಸಿರುವುದು.  ಮಂದ ಕೆಂಪು ಬಣ್ಣವು  ಪ್ರಧಾನವಾಗಿ ಬಳಸಲ್ಪಟ್ಟು, ಮರಳು ಹಾಗೂ ಸಣ್ಣ ಸಣ್ಣ ನುಣ್ಣನೆಯ ಕಲ್ಲುಗಳ ರಾಶಿಯ ಹಿಂಭಾಗದಲ್ಲಿ ನಾವಿರುವುದು ಮರುಭೂಮಿ ಪ್ರದೇಶ ಎನ್ನುವುದನ್ನು ನೆನಪಿಸುವಂತಿರುವುದು.

ರಸ್ತೆಗಳಲ್ಲಿ  ದೊಡ್ಡ ದೊಡ್ಡ ಫಲಕಗಳ ಮೂಲಕ ಯಾವ ರಸ್ತೆ ಎಲ್ಲಿಗೆ, ಯಾವ ದಿಕ್ಕಿಗೆ, ಯಾವ ಮುಖ್ಯ ರಸ್ತೆಗೆ ಕೊಂಡಿ ಕೊಡುವುದು, ಎಷ್ಟು ದೂರದಲ್ಲಿ ಮುಖ್ಯ ರಸ್ತೆ ಇದೆ ಎನ್ನುವುದನ್ನೆಲ್ಲಾ ತಿಳಿಸಲಾಗಿದೆ.  ಬೋಗನ್ವಿಲ್ಲಾ ಹೂವಿನಂತಹ ಅನೇಕ ಬಣ್ಣಗಳ ಹೂ ಗಿಡಗಳು ರಸ್ತೆಗಳ ಮಧ್ಯದಲ್ಲಿಯೂ ಎರಡೂ ಪಕ್ಕಗಳಲ್ಲಿಯೂ ಸುಂದರವಾಗಿ ಅರಳಿಕೊಂಡು ನಮ್ಮೂರ ವಸಂತ ಮಾಸವನ್ನು ನೆನಪಿಸುತ್ತಿರುವಂತಿವೆ....  



ಕಣ್ಣು ಹಾಯಿಸಿದಷ್ಟೂ ದೂರ ಸಾಗುವ ರಸ್ತೆಗಳು ದೂರದಲ್ಲಿ ಹೆಚ್ಚೇನೂ ಎತ್ತರವಿಲ್ಲವೇನೋ ಎಂಬಂತಿರುವ ಕೆಂಪು, ಕಪ್ಪು ಮಿಶ್ರಿತ ಮಣ್ಣಿನ ಗುಡ್ಡಗಳು, ಚೊಕ್ಕವಾದ ಆಗಸ, ಶುಭ್ರವಾದ ಬೆಳಕು ಎಲ್ಲವೂ ನಮ್ಮ ರಾಷ್ಟ್ರಕವಿ ಕುವೆಂಪು ಅವರ  "ದೂರ ಬಹುದೂರ ಹೋಗುವ ಬಾರಾ...." ಎಂಬ ಒಂದು ಕವನವನ್ನು ನೆನಪಿಸುವುದು.  ದಿವಂಗತ ಮೈಸೂರು ಅನಂತಸ್ವಾಮಿಯವರು ಸಂಗೀತ ನಿರ್ದೇಶನ ಮಾಡಿರುವ ಹಾಡಿನ ಕೊಂಡಿ https://www.youtube.com/watch?v=j9Fnzd6kVcw ....  ಈಗ ತಾನೆ ಚುರುಕಾಗುತ್ತಿರುವ ಬಿಸಿಲಿಗೆ ಮಂಜೆಲ್ಲಾ ಕರಗಿ ಗುಡ್ಡಗಳು ತಮ್ಮ ನಿಜ ಸ್ವರೂಪ ಅನಾವರಣಗೊಳಿಸುತ್ತಿವೆ.  ಶಿರದಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ಹಿಮದ ಟೊಪ್ಪಿಗೆಯನ್ನಿಟ್ಟುಕೊಂಡು ನೋಡುಗರನ್ನು ಆಕರ್ಷಿಸುತ್ತಿರುವಂತಿವೆ.



ಚಿತ್ರಕೃಪೆ : ಶ್ರೀ ಜನಾರ್ದನನ್

Friday, April 15, 2016

ಶ್ರೀರಾಮ ನವಮಿ...


ಮತ್ತೆ ಯುಗಾದಿ ಬಂದಾಯಿತು.  ಹೊಸ ವರುಷ "ದುರ್ಮುಖ" ನಾಮದ ಸಂವತ್ಸರ ಪ್ರಾರಂಭವಾಗಿದೆ.  ವಸಂತ ಋತುವಿನ ಚೈತ್ರ ಮಾಸದ ಮೊದಲ ದಿನದಿಂದಲೇ ಎಲ್ಲರ ಮನದಲ್ಲಿ ಒಂದು ಹೊಸ ಹುರುಪು, ಸಂಭ್ರಮ ಅರಳುವುದು.  ಪಾಡ್ಯದಿಂದಲೇ ಕಾತುರದಿಂದ ಎದುರು ನೋಡುವ ದಿನವೇ ’ನವಮಿ’ಯಾಗಿದೆ.  ನವಮಿ ದಿನ ಬಂದೀತೇ, ರಾಮ ಬಂದಾನೇ ಎನ್ನುವ ಸುಖ-ಸಂಭ್ರಮ ಮಿಶ್ರಿತ ಕಾತುರ  ದಿನಗಳನ್ನೂ, ಕ್ಷಣಗಳನ್ನೂ, ಘಳಿಗೆಗಳನ್ನೂ ಎಣಿಸುವಂತೆ ಮಾಡುವುದು.

ವಸಂತ ಋತುವಿನ ರಾಜನ ಆಗಮನಕ್ಕಾಗಿ ವಸುಂದರೆಯು ತನ್ನ ಹಳೆಯ ಎಲೆಗಳನ್ನುದುರಿಸಿ, ಮೈ ಕೊಡವಿಕೊಂಡು ಹಸಿರು ಹೊದೆಯುತ್ತಾಳೆ.  ಹೂ ಮುಡಿದು ಚಿಕ್ಕ-ಪುಟ್ಟ-ದೊಡ್ಡ ಮಕ್ಕಳನ್ನು ಮಡಿಲ ತುಂಬಾ ತುಂಬಿಸಿಕೊಂಡು ಕಾಯುವಳು.  ನವಮಿ ದಿನದಲ್ಲಿ ರಾಮನ ಆಗಮನಕ್ಕಾಗಿ ಅವನಿದೇವಿ ಸಿಂಗರಿಕೊಳ್ಳುವಳು.  ನವವಧುವಿನಂತೆ ಆಕರ್ಷಕವಾಗಿ ಅಲಂಕರಿಸಿಕೊಂಡಿರುವ ಅವನಿ ದೇವಿಯ ಚೆಲುವಿಗೆ ಸೊಬಗನ್ನು ತರುವವನು, ನವಮಿ ದಿನದಲ್ಲಿ ಧರೆಗಿಳಿಯುವ ಶ್ರೀರಾಮಚಂದ್ರನಾಗಿರುವನು.  ಯುಗಾದಿಯ ದಿನದಿಂದಲೇ ಮನೆಮನೆಗಳಲ್ಲೂ ಪ್ರಾರಂಭವಾಗುವ ಸಂಭ್ರಮ, ಉತ್ಸಾಹ ನವಮಿ ದಿನದಂದು ಶ್ರೀರಾಮನ ಆಗಮನದ ಸಂಕೇತವಾದ ಆಚರಣೆಯಾಗುವುದು.  ರಾಮನ ಆಗಮನ ಕವಿ ಮನಸ್ಸಿನಲ್ಲಿ ಹೊಸಹೊಸ ಕವಿತೆಯ ಸಾಲುಗಳನ್ನು ಮೂಡಿಸುವುದು.  ಶ್ರೀರಾಮನ ಆಗಮನವನ್ನು ಕವಿಯೊಬ್ಬರು ಅತೀ ಸುಂದರವಾಗಿ ಬಿಚ್ಚಿದ ಕುಸುಮದ ಒಂದೊಂದು ಎಸಳಿನಲ್ಲೂ, ಹಚ್ಚ ಹಸಿರು ಬಣ್ಣ ಹೊದ್ದಿರುವ, ಆಗತಾನೆ ಚಿಗುರಿರುವ ಎಳಸಾದ ಎಲೆಎಲೆಯಲ್ಲೂ ಚೆಲುವಿಕೆಯನ್ನು ತುಂಬಿಸುತ್ತಾ ರಾಮನು ಬರುವನೆಂದು ವರ್ಣಿಸುವರು.    ನಲಿನಲಿದು ಉಲಿಯುವ ಇಂಪು ಗಾನವು ಮಂದಮಂದವಾಗಿ ಬರುವ ಮರುತನ ತಂಪಾದ ಸ್ಪರ್ಶವು, ಮಂದ್ರ ರಾಗದಲ್ಲಿ ಭಾವದ  ಅಲೆಗಳನ್ನೆಬ್ಬಿಸುವುದು ಎಂದಿದ್ದಾರೆ.  ವಸುಂಧರೆಯ ಸೊಬಗನ್ನೂ ಸೌಂದರ್ಯವನ್ನೂ ವರ್ಣಿಸುತ್ತಾ ಹಸಿರು ಶಾಲನ್ನು ಹರಡಿಕೊಂಡಿರುವಳು, ತನ್ನ ಗೆಳೆಯನಾದ ಗಗನವು ತಿಳಿ ನೀಲಿ ಬಣ್ಣದ ಸ್ವಚ್ಛ ಹೊದಿಕೆಯನ್ನು ಹೊದ್ದಿರುವ ಸಮಯದಲ್ಲಿ, ತಂಪು ತರುವ ಮಳೆಯ ಮೇಘವು ಬಾನಂಗಳವನ್ನು ಪ್ರೇಮದಿಂದ ಚುಂಬಿಸಿದಾಗ, ರಾಮ ಬರುವನು, ’ಅವನಿ’ಗೆ ಚೆಲುವನ್ನು ತರುವನು ಎಂದಿದ್ದಾರೆ.  ಕೊನೆಯ ಚರಣದಲ್ಲಿ ಗಿರಿಯ ಸಾಲುಗಳ ನಡುವೆ ಹರಿಯುವ ತೊರೆಯೂ ಕೂಡ ಮುದಗೊಂಡು ಬಳುಕುತ್ತಾ, ಹರುಷ ಉಕ್ಕಿಸುತ್ತಾ, ವಸುಂಧರೆಯ ಒಡಲಿನ ತುಂಬೆಲ್ಲಾ ಬಿಡದೇ ಬಳಸುತ್ತಾ ಹರಿಯುವ ಸಮಯದಲ್ಲಿ ಶ್ರೀರಾಮಚಂದ್ರನು ಧರೆಗಿಳಿಯುವನು ಎಂದಿದ್ದಾರೆ.  ಸಮಸ್ತ ಭೂಮಂಡಲವೇ ಹರುಷದಿಂದ, ಸಂಭ್ರಮದಿಂದ ನಲಿಯುತ್ತಾ ಭಗವಂತನು ರಾಮಚಂದ್ರನಾಗಿ ಬರುವ ಕಾಲವನ್ನು ಎದುರು ನೋಡುವುದೆಂಬ ಭಾವನೆಯಲ್ಲಿ ಮೈ ಮನಗಳನ್ನು ತೇಲಿಸುವ ಸಮಯವೇ ವಸಂತ ಋತು, ಚೈತ್ರ ಶುದ್ಧ ನವಮಿಯ ದಿನವಾಗಿದೆ.   ಸುಲಲಿತವಾದ ಸುಂದರ, ಸರಳ ಪದಗಳಿಂದ ಮೋಡಿ ಮಾಡುವ ಕವನದ ಸಾಲುಗಳು :

ನವಮಿ ದಿನದಲಿ ರಾಮ ಬಂದನು | ಅವನಿಗೆಲ್ಲಾ ಚೆಲುವ ತಂದನು...||

ಬಿಚ್ಚಿ ಕುಸುಮದ ಎಸಳು ಎಸಳಲಿ | ಹಚ್ಚ ಹಸುರಿನ ಚಿಗುರು ಎಲೆಯಲಿ |
ಸ್ವಚ್ಛ ತರುವಿನ ದಟ್ಟ ನೆರಳಲಿ | ಅವನಿಗೆಲ್ಲಾ ಚೆಲುವ ತಂದನು... ||

ನಲಿದು ಉಲಿಯುವ ಇಂಪು ಗಾನದಿ | ಮಂದ ಮರುತನ ತಂಪು ಸ್ಪರ್ಶದಿ |
ಮಂದ್ರ ರಾಗದ ಭಾವ ಅಲೆಯಲಿ | ಅವನಿಗೆಲ್ಲಾ ಚೆಲುವ ತಂದನು... ||

ಚಂದ್ರ ಶೀತಲ ತನುವು ಕೋಮಲ | ಸಾಂದ್ರ ಚೆಲುವಿಗೆ ಮೆರುಗು ಅಸದಳ |
ನಲಿದ ಭೃಂಗದ ಒಲವ ಒಸಗೆಲಿ | ಅವನಿಗೆಲ್ಲಾ ಚೆಲುವ ತಂದನು... ||

ಇಳೆಯು ಹರಡಿದ ಹಸಿರು ಶಾಲಿಗೆ | ಗೆಳೆಯ ಗಗನಕೆ ನೀಲ ಹೊದ್ದಿಕೆ |
ಮಳೆಯ ಮೇಘವು ಬಾನ ಚುಂಬಿಸೆ | ಅವನಿಗೆಲ್ಲಾ ಚೆಲುವ ತಂದನು... ||

ಗಿರಿಯ ಸಾಲಿನ ನಡುವೆ ಬಳುಕುತ | ತೊರೆಯು ಹರಿಯಿತು ಹರುಷ ಉಕ್ಕುತ |
ಧರೆಯ ಒಡಲನು ಬಿಡದೆ ಬಳಸುತ | ಅವನಿಗೆಲ್ಲಾ ಚೆಲುವ ತಂದನು... ||
(ಅನಂತರಾಜ್ ನಾಯಕ್)
https://soundcloud.com/shyamalarao/navamidinadali

ಅಯೋಧ್ಯೆಯ ಮಹಾರಾಜನಾದ ಇಕ್ಷ್ವಾಕು ವಂಶದ ದಶರಥನು ಪುತ್ರ ಸಂತಾನಕ್ಕಾಗಿ ಹಂಬಲಿಸುತ್ತಿರುವನು.  ಸಂತಾನಾಪೇಕ್ಷೆಯಿಂದ ಸಂಕಲ್ಪ ಮಾಡಿ ಅಶ್ವಮೇಧಯಾಗವನ್ನು ಮಾಡಬೇಕೆಂಬ ಆಲೋಚನೆಯು ಮನಸ್ಸಿನಲ್ಲಿ ಮೂಡಿದಾಗ ಮಂತ್ರಿಗಳಾದ ಸುಮಂತ್ರನ ಮೂಲಕ ತನ್ನ ಗುರುಗಳಾದ ವಸಿಷ್ಠರು ಹಾಗೂ ವಾಮದೇವಾದಿ ಪುರೋಹಿತರನ್ನು ಕರೆಸುವನು.  ಅಶ್ವಮೇಧಯಾಗವನ್ನು ಮಾಡುವುದೆಂದು ನಿಶ್ಚಯಿಸಲಾಗುವುದು.  ಸರ್ವ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಾ ದಶರಥ ಮಹಾರಾಜನು ವಸಿಷ್ಠರನ್ನು ಅಶ್ವಮೇಧ ಯಾಗವನ್ನು ಮಾಡಿಸುವಂತೆ ಪ್ರಾರ್ಥಿಸುವನು.  ವಸಿಷ್ಠರು ಭರದಿಂದ ಯಾಗವನ್ನು ಮಾಡಿಸುವರು.  ಇಷ್ಟರಿಂದಲೇ ಪುತ್ರೋತ್ಪತ್ತಿಯಾಗುವುದಿಲ್ಲವೆಂದೂ,  ಋಷ್ಯಶೃಂಗರ ವರಪ್ರಸಾದದಿಂದಲೇ ಅದು ನೆರವೇರಬೇಕೆಂದೂ ತಿಳಿದಿದ್ದ  ದಶರಥ ಮಹಾರಾಜನು ಋಷ್ಯಶೃಂಗರನ್ನು ಅನುಗ್ರಹಿಸಬೇಕೆಂದು ಕೇಳಿಕೊಳ್ಳುವನು.  ವಿಭಂಡಕ ಮಹರ್ಷಿಗಳ ಔರಸ ಪುತ್ರರಾದ ಋಷ್ಯಶೃಂಗರು ಸಂತೋಷದಿಂದಲೇ ದಶರಥ ಮಹಾರಾಜನಿಂದ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸುವರು.  ಯಜ್ಞ ಕುಂಡದಿಂದ ಆವಿರ್ಭವಿಸಿದ ಅತ್ಯಂತ ತೇಜೋಪೂರ್ಣನಾದ ಪ್ರಾಜಾಪತ್ಯ ಪುರುಷನಿಂದ ಪಡೆದ ಪಾಯಸದ ಸೇವನೆಯಿಂದ ದಶರಥ ಮಹಾರಾಜನ ಪತ್ನಿಯರಾದ ಕೌಸಲ್ಯ, ಸುಮಿತ್ರ ಹಾಗೂ ಕೈಕೇಯಿಯರಿಗೆ ನಾಲ್ವರು ಪುತ್ರರು ಜನಿಸುವರು. 

ದುಷ್ಟನಾದ ರಾವಣನ  ಸಂಹಾರಕ್ಕಾಗಿ ದೇವತೆಗಳ  ಪ್ರಾರ್ಥನೆಯನ್ನು  ಆಲಿಸಿ  ಭಗವಂತನು  ವೇದಿಕೆಯನ್ನು    ಸಿದ್ಧಪಡಿಸಿರುವನು.  ದೇವಾನು ದೇವತೆಗಳೆಲ್ಲರೂ ಸ್ವಾಮಿಯ ಲೀಲಾ ವಿನೋದದಲ್ಲಿ ಪಾಲ್ಗೊಳ್ಳಲು ಆಗಲೇ ಅನೇಕ ರೂಪಗಳಲ್ಲಿ ಭೂಮಿಯಲ್ಲಿ ಜನಿಸಿರುವರು.  ಭಗವಂತನು ಮಾನವ ರೂಪದಲ್ಲಿ ಶ್ರೀರಾಮನಾಗಿ ಅವತರಿಸಲು ವಸುಂಧರೆಯ ಸಹಿತ ಸಮಸ್ತ ದೇವತೆಗಳೂ ಸಿದ್ಧರಾಗಿರುವರು.  ಪರಮಾತ್ಮನ ಲೀಲೆಯಲ್ಲಿ ಕಿಂಚಿತ್ ಪಾತ್ರ ಧರಿಸುವ, ಸೇವೆ ಮಾಡುವ ಅವಕಾಶಕ್ಕಾಗಿ, ಕಾತುರ, ಸಂಭ್ರಮಗಳಿಂದ ಕಾಯುವರು. 

ಅಶ್ವಮೇಧ ಯಾಗ ಸಮಾಪ್ತಿಗೊಂಡು ಒಂದು ವರ್ಷದ ನಂತರ ಚೈತ್ರಮಾಸ, ಶುಕ್ಲನವಮಿಯ ದಿನದಂದು ಪುನರ್ವಸು ನಕ್ಷತ್ರದಲ್ಲಿ ರವಿ, ಕುಜ, ಶನಿ, ಗುರು ಮತ್ತು ಶುಕ್ರ ಎಂಬ ಐದು ಗ್ರಹಗಳು ಉಚ್ಚರಾಶಿಗಳಲ್ಲಿರುವಾಗ, ಕರ್ಕಾಟಕ ಲಗ್ನವು ಚಂದ್ರ - ಬೃಹಸ್ಪತಿಗಳೊಡನೆ ವಿಜೃಂಭಿಸುತ್ತಿರುವಾಗ, ಸರ್ವಲೋಕ ನಮಸೃತನಾದ ಭಗವಂತನು ಕೌಸಲ್ಯಾ ದೇವಿಯ ಗರ್ಭಸಂಜಾತನಾಗಿ ಅವತರಿಸುವನು.  ಭಗವಂತನ ಆಗಮನದ ಸೂಚಕವಾಗಿ ಪುಷ್ಪವೃಷ್ಟಿಯಾಗುವುದು, ಗಂಧರ್ವರು ಮಧುರಗಾಯನ ಮಾಡುವರು.  ಸಾಲಂಕೃತೆಯಾದ ವಸುಂಧರೆಯು ಕಂಗೊಳಿಸುವಳು.  ಇಕ್ಷ್ವಾಕು ವಂಶದ ಕುಲತಿಲಕನ ಉದಯವಾಗುವುದು.

ಸಂಗೀತ ಪ್ರಪಂಚದಲ್ಲಿ ಶ್ರೀರಾಮಚಂದ್ರನನ್ನು ಸ್ತುತಿಸುವ ಸಾವಿರಾರು ಕೃತಿಗಳಿವೆ.  ಪ್ರತಿಯೊಬ್ಬ ವಾಗ್ಗೇಯಕಾರರೂ ಶ್ರೀರಾಮಚಂದ್ರನ ಕುರಿತಾದ ಕೃತಿಗಳನ್ನು ರಚಿಸಿದ್ದಾರೆ.  ಶ್ರೀರಾಮನು ಎಲ್ಲರಿಗೂ ಇಷ್ಟದೈವ ಹಾಗೂ ಆರಾಧ್ಯದೈವನಾಗಿರುವನು.  ರಾಮನ ಬಾಲ್ಯವನ್ನು ವರ್ಣಿಸುವ, ಷೋಡಶೋಪಚಾರಗಳನ್ನು ಮಾಡುವ, ಲಾಲಿ ಹಾಡಿ ಶಯನೋತ್ಸವವನ್ನು ಮಾಡಿಸುವಂತಹ ಮಧುರವಾದ ರಚನೆಗಳನ್ನು ರಚಿಸಲಾಗಿದೆ.  ಶ್ರೀ ಪ್ರಯಾಗ ರಂಗದಾಸ ಎಂಬ ರಚನೆಕಾರರು (ಇವರು ಶ್ರೀ ಎಂ ಬಾಲಮುರಳೀಕೃಷ್ಣ ರವರ ತಾತಯ್ಯನವರು) ತೆಲುಗಿನಲ್ಲಿ ಸುಂದರವಾದ ರಚನೆಯನ್ನು ಮಾಡಿದ್ದಾರೆ.  "ರಾಮುಡುದ್ಭವಿಂಚಿನಾಡು ರಘುಕುಲಂಬುನಾ" ಎಂಬ ಕೃತಿಯಲ್ಲಿ ತಾಮಸರನ್ನು ನಿಗ್ರಹಿಸಿ ಸ್ತೋಮ ಜನರ ಕ್ಷೇಮಾಭಿವೃದ್ಧಿಗಾಗಿ ರಘುಕುಲದಲ್ಲಿ ಕೋಮಲೆಯಾದ ಕೌಸಲ್ಯೆಯಲ್ಲಿ ಶ್ರೀರಾಮನು ಉದ್ಭವಿಸಿರುವನು ಎನ್ನುತ್ತಾರೆ.  ಮುಂದುವರೆಯುತ್ತಾ ವಸುಮತಿಯ ದುರ್ಭರವನ್ನು ಕಡಿಮೆಗೊಳಿಸಲು ರಾಮನು ಉದ್ಭವಿಸಿರುವನು ಎಂದಿದ್ದಾರೆ.  ಕಿಲಕಿಲನೆ ನಗುತ್ತಾ ಆಣಿಮುತ್ತಿನಂತಹ ಮುದ್ದು ಕುವರನು ಮಿಂಚಿನ ಕಾಂತಿಯಿಂದ ಮಿನುಗುತ್ತಾ ರಾಮನು ಉದ್ಭವಿಸಿರುವನು, ಭಕ್ತಾಗ್ರೇಸರರು ಕೋರಿದ ವರಗಳನ್ನೆಲ್ಲಾ ಕೊಡುವುದಕ್ಕಾಗಿ ರಾಮನು ಉದ್ಭವಿಸಿರುವನು ಎನ್ನುತ್ತಾ ಶ್ರೀರಾಮಚಂದ್ರನ ಆಗಮನವನ್ನು ಸರಳ ಹಾಗೂ ಸುಂದರವಾಗಿ ವಿವರಿಸುತ್ತಾರೆ.

ಎಲ್ಲರಿಗೂ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು..




ಚಿ ತ್ರ ಕೃ ಪೆ  : ಅಂ ತ ರ್ಜಾ ಲ
http://ananthadimdigantha.blogspot.in/2012/03/blog-post_22.html
 https://soundcloud.com/shyamalarao/navamidinadali