Monday, June 14, 2010

ಸಂಪದಿಗರ 'ಸಮ್ಮಿಲನ'

ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ ಆರಂಭವಾಗಿ ಬಿಟ್ಟಿತು. ಭಾನುವಾರ (13.06.2010)ಬೆಳಿಗ್ಗೆ ೭.೩೦ಕ್ಕೇ ಹರಿ ಕರೆ ಮಾಡಿ ರೆಡೀನಾ... ಎಂದಾಗ
ನನಗೆ ಭಯವೇ ಆಗಿತ್ತು. ಇಷ್ಟು ಬೇಗನಾ...? ಏನಪ್ಪಾ ಇದು ಎಂದರೆ... ನಾನಾಗಲೇ ಬಸ್ ನಿಲ್ದಾಣದಲ್ಲಿದ್ದೇನೆ, ನಿನ್ನೆ ಮಳೆಯಲ್ಲಿ ಸಿಕ್ಕಿಕೊಂಡೆ, ಹೋಗಲಾಗಲಿಲ್ಲ. ಈಗ ಬೇಗ ಎಲ್ಲರಿಗಿಂತ ಮೊದಲು ಹೋದರೆ ಸ್ವಲ್ಪ ಏನಾದರೂ ತಯಾರಿ ಮಾಡಬಹುದು ಮತ್ತು ಬಂದವರನ್ನು ಸ್ವಾಗತಿಸಬಹುದು ಎಂದರು. ಸರಿ ನೀವು ಹೊರಡಿ ನಾ ಬರ್ತೀನಿ ಎಂದೆ. ಹಾಗೂ ಹೀಗೂ ಬೆಳಗಿನ ಅವಸರದ ಕೆಲಸಗಳನ್ನು ಮುಗಿಸಿ, ನಾನು ರೆಡಿಯಾದಾಗ ಆಗಲೇ ೯.೧೫. ಇನ್ನೂ ನಮ್ಮ ಮನೆ ಗಲ್ಲಿಯನ್ನೂ ದಾಟಿರಲಿಲ್ಲ, ಆಗಲೇ ಹರಿಯ ಕರೆ.... ಈಗ ಮನೆಯಿಂದ ಹೊರಟ್ರಾ... ಅಯ್ಯೋ ಎಷ್ಟೊತ್ತಿಗಪ್ಪಾ ನೀವು ಬರೋದು ಅಂದ್ರು.... ಟ್ರಾಫಿಕ್ ಇರಲ್ಲ ಹರಿ, ಭಾನುವಾರ ೨೦ ನಿಮಿಷದಲ್ಲಿ ಅಲ್ಲಿರ್ತೀನಿ.... ಯಾರು ಬಂದಿದ್ದಾರೆ ಅಂದೆ. ಹರಿ ಒಂದು ಪುಟ್ಟ ಪಟ್ಟಿಯನ್ನೇ ಕೊಟ್ಟಾಗ... ನನಗೆ ಅತ್ಯಂತ ಸಂತೋಷವಾಗಿತ್ತು. ಮನೆಯಿಂದ ದೊಮ್ಮಲೂರು ತಲುಪಿದ್ದೇನೋ ನಾನೆಂದಂತೆ ಬರೀ ೧೫ ನಿಮಿಷದಲ್ಲೇ... ಆದರೆ ಆ ನೀರಿನ ತೊಟ್ಟಿಯ ಗುರುತು ಇಟ್ಟುಕೊಂಡು ಸಿಐಎಸ್ ಕಟ್ಟಡ ಹುಡುಕುವಲ್ಲಿ ಇನ್ನರ್ಧ ಘಂಟೆಯಾಗಿ ಹೋಗಿತ್ತು. ೩೦ ನಿಮಿಷದಲ್ಲಿ ೪ ಸಲ ಹರಿಗೆ ಕರೆ ಮಾಡಿ, ಅವರ ತಲೆಯೂ ತಿಂದಿದ್ದಾಯ್ತು.... :-) ಕೊನೆಗೂ ಹರಿ ಮುಖ್ಯ ರಸ್ತೆಗೆ ಬಂದು ಕಾದಿದ್ದು, ನನ್ನನ್ನು ಕರೆದುಕೊಂಡು ಹೋದಾಗ, ಅಲ್ಲಾಗಲೇ ಸಂಪದಿಗರ ಕಲರವ ಶುರುವಾಗಿ ಬಿಟ್ಟಿತ್ತು.

ಸಿಐಎಸ್ ಕಟ್ಟಡ ಸುಂದರವಾಗಿದೆ. ಹೊರಗೆ ಹಸಿರು ವಾತಾವರಣ... ಕೋಗಿಲೆಯ ಎಡಬಿಡದ ಕುಹೂ ಗಾನ, ಮನಕ್ಕೆ ನಿಜಕ್ಕೂ ಮುದಕೊಟ್ಟಿತ್ತು. ಅತ್ಯಂತ ಪ್ರಶಸ್ಥವಾದ ಜಾಗವಾಗಿತ್ತು ಅದು ನಮ್ಮ ಸಂಮಿಲನಕ್ಕೆ... ನಾಗರಾಜ್ ರ ಚಿತ್ರ ನೋಡಿದ್ದ ಕಾರಣ ನಾನವರನ್ನು ಗುರುತು ಹಿಡಿದೆ. ಪಕ್ಕಕ್ಕೆ ತಿರುಗೆ ಕಾಫಿ ಲೋಟ ಹಿಡಿದಿರುವ ಚಿಕ್ಕೂ... ಎದುರಿಗೇ ಕುಳಿತಿದ್ದರೂ ನನಗೆ ಗುರುತು ಹಿಡಿಯುವುದಾಗಲಿಲ್ಲ... ಅಷ್ಟರಲ್ಲಿ ಪಕ್ಕದ ಸೋಫಾದಲ್ಲಿ ಕುಳಿತಿದ್ದವರು... ನಮಸ್ಕಾರ ಎಂದು ಜೋರು ದನಿಯಲ್ಲೆಂದಾಗ, ನಾ ಬೆಚ್ಚಿ ತಿರುಗಿದರೆ... ಯಾವ ಸಂಶಯವೂ ಇಲ್ಲ... ನಮ್ಮೆಲ್ಲರ ಮಿತ್ರ ಆತ್ರಾಡಿ ಸುರೇಶ್... ಅಬ್ಬ ಅಂತೂ ಒಬ್ಬರಾದರೂ ಪರಿಚಿತರಿದ್ದಾರೆಂದು ಸಮಾಧಾನದ ನಿಟ್ಟುಸಿರಿಡುವಷ್ಟರಲ್ಲಿ ಸುರೇಶ್, ಗೋಪಿನಾಥ್ ಮತ್ತು ಕುಟುಂಬ, ಮಂಜುನಾಥ್ ಮತ್ತು ಕುಟುಂಬದವರನ್ನು ಪರಿಚಯಿಸಿದರು. ಮಂಜುನಾಥ್ ರ ಮಗ, ಮಗಳೂ ಬಂದಿದ್ದರು. ಜೊತೆಗೆ ಒಬ್ಬ ಪುಟ್ಟ ಅತಿಥಿಯೂ ಇದ್ದಳು.... ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತಾ ಇರುವಾಗ ಆಗಲೇ ಹರಿ "ಸಂಪದ ಸಂಮಿಲನ" ಎಂಬ ದೊಡ್ಡ ಅಚ್ಚು ಹಾಕಿದ ಫಲಕದಂತಹುದನ್ನು ಅಂಟಿಸಿ, ಕುರ್ಚಿಗಳನ್ನು ಈ ಕಡೆ, ಆ ಕಡೆ ಸರಿಸಿ ವೇದಿಕೆ ಸಜ್ಜುಗೊಳಿಸುತ್ತಿದ್ದರು. ಅಷ್ಟುಹೊತ್ತಿಗೆ ಕವಿ ನಾಗರಾಜ್, ಅಂಜನ್ ಕುಮಾರ್ ಅವರೂ ಬಂದು ಸೇರಿದರು.

ಪ್ರಾರ್ಥನೆಯಾದ ನಂತರ ನಮ್ಮ ಕಾರ್ಯಕ್ರಮ ತೇಜಸ್ವಿ ಅವರ ಕವಿತಾ ವಾಚನದಿಂದ ಆರಂಭವಾಯಿತು. ಅವರು ತಾವು ಬರೆದ ಮೊಟ್ಟ ಮೊದಲ ಕವನ - ತಮ್ಮ ಭಗ್ನ ಪ್ರೇಮದ ಬಗೆಗೆ ಓದಿದರು. ನಂತರ ಎರಡನೆಯದಾಗಿ ಓದಿದ ಕವನ ’ತನ್ನನ್ನು ಮೊದಲು ಪ್ರೀತಿಸು’.... ಇದರಲ್ಲಿನ ಸಾಲುಗಳು "ನಿಲ್ಲು... ಓಡುತ್ತಿರುವ ಗೆಳೆಯನೆ... ಮರೆತೆಯೇನು ಪ್ರೀತಿಸಲು ತನ್ನನೇ".. ನನ್ನನ್ನು ತುಂಬಾ ಸೆಳೆಯಿತು. ಮತ್ತೂ ಮುಂದುವರೆದು ತೇಜಸ್ವಿ ಅವರು ’ಗುರಿ ಮುಟ್ಟುವ ಬಗ್ಗೆ’, ’ಉತ್ತಮ ಅಭ್ಯಾಸಗಳ ಬಗ್ಗೆ’’ವಾಸ್ತವವ ಅರಿಮನವೇ’.. ಕವನಗಳನ್ನು ಓದಿದರು. ತುಂಬಾ ಚೆನ್ನಾಗಿದ್ದವು ಅವರ ಶೈಲಿ. ತಾವು ಕವನ ಬರೆಯುವ ಪರಿಯನ್ನೂ ಕೂಡ ನಮ್ಮ ಯುವ ಕವಿ ವರ್ಣಿಸಿದರು. ಘಟನೆಗಳನ್ನು ವಿವರಿಸುತ್ತಾ ಕವನ ಬರೆಯುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಪ್ರಾಸಕ್ಕಾಗಿ ನಿಘಂಟನ್ನು ತೆರೆದಿಟ್ಟುಕೊಂಡು, ಪದಗಳನ್ನು ಹುಡುಕಿ, ಪ್ರಾಸ ಜೋಡಿಸಿ, ತಮ್ಮ ಭಾವ ಕೂಡ ಸೇರಿಸಿ ಕವನ ರಚಿಸುತ್ತಾರಂತೆ.

ಎರಡನೆಯದಾಗಿ ನಾಗರಾಜ್ ಸಂಪದ ಸೇರಿದ ಬಗ್ಗೆ ಹಾಗೂ ತಮ್ಮ ಮಳೆನೀರು ಕೊಯಿಲಿನ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡಿದರು. ಯಾವುದೋ ತುರ್ತು ಮೀಟಿಂಗ್ ಗಾಗಿ ಹೋಗಲೇ ಬೇಕಾದ ಅನಿವಾರ್ಯವಿದೆಯೆಂದು ಬೇಸರದಿಂದಲೇ ಅವರು ಹೊರಟು ಬಿಟ್ಟರು.

ಗೋಪಿನಾಥ್ ಬೆಳ್ಳಾಳ್ ರವರು ತಮ್ಮ ಕವನಗಳನ್ನು ಅತ್ಯಂತ ಸುಂದರವಾಗಿ ವಾಚಿಸಿದರು. ೮೦ರ ಇಳಿವಯಸ್ಸಿನಲ್ಲೂ ಹೊಸತು ಕಲಿಯಬೇಕೆನ್ನುವ ತುಡಿತ ಇರುವ ತಮ್ಮ ತಾಯಿಯವರ ಬಗ್ಗೆ ಎರಡು ಮಾತುಗಳನ್ನು ಅವರು ಆಡಿದಾಗ ನನಗೆ ಅವರೂ ಬಂದಿದ್ದರೆ ಭೇಟಿಯಾಗಬಹುದಿತ್ತಲ್ಲವೇ ಎಂದನ್ನಿಸಿತು. ಅವರ ವಯಸ್ಸಿಗೆ ಅವರು ಉತ್ಸಾಹದ ಚಿಲುಮೆಯಂತಿದ್ದಾರೆಂದರೆ ಖಂಡಿತಾ ಅವರು ನಮಗೆಲ್ಲರಿಗೂ ಆದರ್ಶಪ್ರಾಯರು.... ಗೋಪಿನಾಥ್ ಸಾರ್... ಒಮ್ಮೆ ಖಂಡಿತಾ ಭೇಟಿ ಮಾಡಿಸಿ ತಾಯಿಯವರನ್ನು (ಬಹುಶ: ಮುಂದಿನ ಸಂಮಿಲನದಲ್ಲಿ)....
ರೈತ ಮತ್ತು ಸೈನಿಕನ ಮಧ್ಯೆ ಸಾಮ್ಯತೆ ವಿವರಿಸುವ ಕವನ ನಮ್ಮ ಮನಗಳನ್ನು ಚಿಂತಿಸುವಂತೆ ಮಾಡಿತ್ತು..

ಹೊಳೆನರಸೀಪುರ ಮಂಜುನಾಥ್ ಅವರು ತಮ್ಮ ಬಾಲ್ಯ, ಜೀವನದ ಬಗ್ಗೆ ಎರಡು ಮಾತನಾಡಿ, ’ಅಪಘಾತ’ ಕಥೆ ಮನ ಮುಟ್ಟುವಂತೆ ಓದಿದರು. ಅವರ ಶೈಲಿ, ಓದುವ ರೀತಿ ಎಲ್ಲಾ ತುಂಬಾ ಚೆನ್ನಾಗಿತ್ತು. ಆದರೆ ಕಥೆಯ ವಿಷಯ ಸ್ವಲ್ಪ ಮಟ್ಟಿಗೆ ಮನಸ್ಸನ್ನು ಆವರಿಸಿದ್ದಂತೂ ನಿಜ...

ಈಗ ಬಂತು ನಮ್ಮ ಆತ್ರಾಡಿ ಸುರೇಶ ಹೆಗ್ಡೆಯವರ ಸರದಿ... ಚಿತ್ರದಲ್ಲೂ, ಎದುರಿಗೂ ನೋಡಲು ಸ್ವಲ್ಪ ಹೆಚ್ಚೇ ಎನಿಸುವ ಗಾಂಭೀರ್ಯವಿದ್ದರೂ, ಮಾತನಾಡಲು ಶುರು ಮಾಡಿದರೆ ಅತ್ಯಂತ ಸರಳವಾಗಿ ಮಾತನಾಡಿ, ಎಲ್ಲರನ್ನೂ ನಗಿಸಿ, ತಾವೂ ನಗುತ್ತಾರೆ... ಅವರು ’ನಾವು ಬೆಳೆಯುವುದೆಂತು’ ಎಂಬ ತಮ್ಮ ಕವನದಿಂದ ಆರಂಭಿಸಿ... ಒಳ್ಳೆಯದು ಬೆಳೆಯಲು ಅನವರತ ಶ್ರಮಬೇಕು ಎಂಬ ಸಂದೇಶವನ್ನೂ ಕೊಟ್ಟರು. ಜೊತೆಗೆ ’ಸಂಗಾತಿ ಯಾವಾಗ ನಮ್ಮೊಟ್ಟಿಗಿರಬೇಕು’, ’ಸ್ವಾತಂತ್ರ್ಯ’ .. ಇನ್ನೊಬ್ಬರು ಕಟ್ಟಿಕೊಟ್ಟ ಬುತ್ತಿ ಹೊತ್ತು ನಡೆಯುವ ನಮಗೆ ಎಲ್ಲಿದೆ ಸ್ವಾತಂತ್ರ್ಯ ಎಂಬ ಭಾವವುಳ್ಳ ಕವನಗಳನ್ನೂ ಓದಿದರು. ಕೊನೆಗೆ ಎಲ್ಲರನ್ನೂ ಉದ್ದೇಶಿಸಿ, ಈ ಸಂಮಿಲನಕ್ಕಾಗಿಯೇ ಬರೆದ "ಕಾಲೆಳೆದು ಕಾಲೆಳೆದು" ಎಂಬ ಕವನವನ್ನೂ ಪದ್ಯದ ಧಾಟಿಯಲ್ಲಿ ಓದಿ ನಮ್ಮನ್ನು ನಗೆಗಡಲಲ್ಲಿ ತೇಲಿಸಿದರು.

ಚಿಕ್ಕೂ ಚೇತನ್ ರವರ ಕವನಗಳೂ, ಚುರುಮುರಿಗಳೂ ಸಕತ್ತಾಗಿ ಚುರುಕಾಗಿದ್ದವು..

ರೂಪ ಅವರ ಸ್ಥಳದಲ್ಲೇ ಹೆಣೆದ ಕಥೆಯೂ ಸುಂದರವಾಗಿತ್ತು. ಯಶಿತಾಳ ಹಾಜರಿ ಸಂಮಿಲನಕ್ಕೊಂದು ಸುಂದರ ಕಂಪು ಮೂಡಿಸಿತ್ತು.

ಕವಿನಾಗರಾಜ್ ಅವರು ತಮ್ಮ ಕೆಲವು ಅನುಭವಗಳನ್ನೂ, ಸಂಪದ ಉಳಿವು, ಬೆಳವಣಿಗೆಯ ಬಗೆಗೂ ತಮ್ಮ ಅಭಿಪ್ರಾಯಗಳನ್ನು ನಮ್ಮೊಡನೆ ಹಂಚಿಕೊಂಡರು.

ಅಂಜರ್ ಕುಮಾರ್ ಅವರ ಬ್ಯಾಂಕಿನಲ್ಲಿ ನಡೆಯುವ ಹಾಸ್ಯ ಪ್ರಸಂಗಗಳ ಮರು ಸೃಷ್ಟಿ ಚೆನ್ನಾಗಿತ್ತು. ಅವರು ತಾವು ಓದಿದ ’ಯೋಗಿಯ ಆತ್ಮ ಕಥೆ’ ಪುಸ್ತಕದಲ್ಲಿನ ಒಂದು ನುಡಿ "ಮರಳಿನ ಮಧ್ಯೆ ಸಕ್ಕರೆ ಕಣಗಳಿರುತ್ತವೆ. ಜೀವನ ಇದರ ಮಿಶ್ರಣ. ಸಕ್ಕರೆ ಮಾತ್ರವೇ ಆರಿಸಿಕೊಳ್ಳಬೇಕು" ಎಂಬ ಮಾತನ್ನು ನಮಗೂ ತಿಳಿಸಿದರು.

ಈಗ ನಾನು ಓದಿದ ಕಥೆ "ಸಂಬಂಧಗಳು" ಬಗ್ಗೆ ಎರಡು ಮಾತು.... ಕಥೆಯ ಲೇಖಕರು ನಮ್ಮ ಸಂಪದಿಗರೇ ಆದ ಶ್ರೀ ಅನಂತ್ ಅವರು. ನನಗೆ ಕಥೆ ಇಷ್ಟವಾಗಿದ್ದರಿಂದ ಅವರ ಅನುಮತಿ ಪಡೆದು ಅವರ ಪರವಾಗಿ ನಾ ಓದಿದೆ. ರೂಪ ಅವರು ಬರೆದಂತೆ ನಾನು ಅದರ ವಿಮರ್ಶೆ ಮಾಡಲಿಲ್ಲ. ಕಥೆಯ ಬಗ್ಗೆ ನಾ ಆಡಿದ ಎಲ್ಲಾ ಮಾತುಗಳೂ ನಾನು ಅನಂತ್ ಅವರೊಂದಿಗೆ ಚರ್ಚಿಸಿದ ಮಾತುಗಳು. ಇಲ್ಲಿ ವಿಮರ್ಶೆ ಮಾಡುವ ಉದ್ದೇಶ ನನಗಿರಲಿಲ್ಲ. ಕಥೆಯನ್ನು ಬೇರೊಬ್ಬರು ಓದಿದಾಗ ಕೆಲವೊಮ್ಮೆ ನಮಗೆ ಚಿಕ್ಕ ಪುಟ್ಟ ವಿವರಗಳು ಮರೆತುಹೋಗುವ ಸಂದರ್ಭ ಇರುತ್ತಾದ್ದರಿಂದ, ನಾನು ಅದರಲ್ಲಿ ಅನಂತ್ ಅವರು ಏನು ಹೇಳಿದ್ದಾರೆಂಬುದನ್ನೂ, ಕಥೆ ಬರೆಯುವಾಗಿನ ಅವರ ಮನಸ್ಥಿತಿಯನ್ನೂ, ಉದ್ದೇಶವನ್ನೂ, ಅದರಲ್ಲಿರುವ ಪಾತ್ರಗಳ ಹಾಗೂ ಕಥೆಯ ಮೌಲ್ಯವನ್ನೂ ನಿಮ್ಮಲ್ಲಿ ಹಂಚಿಕೊಳ್ಳುವುದಕ್ಕಾಗಿ ಮಾತ್ರವೇ ಹೇಳಿದ್ದು. ಆ ನಿಟ್ಟಿನಲ್ಲಿ ನಾನು ಸಫಲಳಾಗಿದ್ದೇನೆ ಮತ್ತು ಕಥೆಯ ಲೇಖಕರ ಮನೋಭಿಪ್ರಾಯವನ್ನು ಸರಿಯಾದ ರೀತಿಯಲ್ಲಿ ನಿಮಗೆ ತಲುಪಿಸಿದ್ದೇನೆಂದುಕೊಂಡಿದ್ದೇನೆ. ಕಥೆಯ ಮೆಚ್ಚುಗೆಯೆಲ್ಲಾ ಲೇಖಕರಿಗೇ ಸಲ್ಲಬೇಕು, ಓದಿದವರಿಗಲ್ಲವೆಂದು ನನ್ನ ಅಭಿಪ್ರಾಯ.

ಇನ್ನು ಕೊನೆಯದಾಗಿ ನಮ್ಮೆಲ್ಲರ ಆತ್ಮೀಯ ಮಿತ್ರ ಹರೀಶ್ ಆತ್ರೇಯರ ವಿಚಾರ. ಯಾರು ಯಾರು ಬರುತ್ತಾರೆಂದು ನೋಡಿಕೊಂಡು, ಪಟ್ಟಿ ಮಾಡಿಕೊಂಡು, ಅವರೆಲ್ಲರ ವ್ಯಕ್ತಿ ಪರಿಚಯಗಳನ್ನೂ, ಅವರು ಬರೆದಿರುವ ಲೇಖನಗಳನ್ನೂ ನೋಡಿ, ಓದಿ, ಒಬ್ಬೊಬ್ಬರನ್ನೂ ಪರಿಚರಿಯಿಸಿದ ರೀತಿ ನಿಜಕ್ಕೂ ಹರ್ಷ ತಂದಿತ್ತು. ಎಲ್ಲರಿಗೂ ಆಹಾ ಇದು ನಾನೇನಾ... ಇಷ್ಟೆಲ್ಲಾ ಬರೆದಿದ್ದೇನಾ ನಾನು ಎಂಬ ಭಾವನೆ ಬರುವಂತೆ ನಮ್ಮೆಲ್ಲರನ್ನೂ ಉಬ್ಬಿಸಿದರು. ಅದಕ್ಕಾಗಿ ಅವರಿಗೆ ಒಂದು ವಿಶೇಷ ಧನ್ಯವಾದ. ಆಸೆ ಅಕ್ಕರೆಯಿಂದ ನಮ್ಮೆಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶದಿಂದ ಈ ಸಂಮಿಲನಕ್ಕೆ ತಯ್ಯಾರಿ ನಡೆಸಿದ್ದಕ್ಕೆ ಎರಡನೇ ವಿಶೇಷ ಧನ್ಯವಾದ. ತಮ್ಮ ಸರದಿ ಬಂದಾಗ, ಅವರು ಎಲ್ಲರ ಬರಹಗಳಿಗೂ ಪ್ರತಿಕ್ರಿಯೆ ರೂಪದಲ್ಲಿ ಬರಿದಿದ್ದ ಕವನಗಳನ್ನು ಮಾತ್ರವೇ ಓದಿ ತಪ್ಪಿಸಿಕೊಂಡು ಬಿಡುವ ಸಂಚು ಮಾಡಿದ್ದರು. ಆದರೆ ಹಿಂದಿನ ದಿನವೇ ನನಗೆ ತಮ್ಮ ಕವನ ಓದಬೇಕೆಂದು ಒಂದು ಮಾತು ಹೇಳಿದ್ದರಿಂದ, ನಾನು ಅವರ ಯಾವ ಮಾತೂ ಕೇಳದೆ... ಒಂದೇ ಒಂದು ಕವನ ಓದುವ ಅವಕಾಶ ಪಡೆದೆ. ನಮ್ಮ ಯುವ ಕವಿ ನಿಜಕ್ಕೂ ಸುಂದರ ಕವನಗಳನ್ನು ಬರೆಯುತ್ತಾರೆ. ಜೊತೆಗೆ ನಮ್ಮೆಲ್ಲರಿಗೂ ತಿಳಿದಂತೆ ಅವರ ಬರಹಗಳೂ ಬಹಳ ಪ್ರಬುದ್ಧವಾಗಿವೆ. ನಾನೂ ಹರಿಯನ್ನು ಮೊದಲ್ ಬಾರಿ ಭೇಟಿಯಾದಾಗ ಆಘಾತಗೊಂಡಿದ್ದೆ :-) :-) ಏಕೆಂದರೆ ಅವರ ಬರಹಗಳನ್ನೋದಿ, ಕಮ್ಮಿಯೆಂದರೂ ೩೫ ವರ್ಷದ ಒಬ್ಬ ವ್ಯಕ್ತಿಯನ್ನು ಎದುರು ನೋಡಿದ್ದ ನನಗೆ, ಯುವ ಕವಿಯ ದರ್ಶನ ಸರಿಯಾಗಿ ಬೇಸ್ತು ಬೀಳಿಸಿತ್ತು.

ಸಂಮಿಲನಕ್ಕೆ ಬಂದ ಎಲ್ಲಾ ಸಂಪದ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳು...... ಬರದೇ ಒಳ್ಳೆಯ ಅವಕಾಶ ಕಳೆದುಕೊಂಡು ನಿರಾಶರಾದವರೆಲ್ಲರೂ ಮುಂದಿನ ಸಲ ತಪ್ಪದೇ ಬರುತ್ತಾರೆಂದು ಆಶಿಸೋಣವೇ....?

Tuesday, June 1, 2010

ಬೆಂಗಳೂರು ಗ್ರಾಮ ದೇವತೆಗಳ ಹಬ್ಬ..

ಕೆಲವು ದಿನಗಳ ಕೆಳಗೆ ಯಡಿಯೂರು, ಸಾಕಮ್ಮ ಗಾರ್ಡನ್ಸ್ ವ್ಯಾಪ್ತಿಯಲ್ಲಿ ದೇವಿ ಪಟಾಲಮ್ಮನ ವಾರ್ಷಿಕ ಕರಗ ಮಹೋತ್ಸವ ಮತ್ತು ಬೆಂಗಳೂರಿನ ಗ್ರಾಮ ದೇವತೆಗಳ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಹಬ್ಬದ ವಿಶೇಷತೆಯೆಂದರೆ, ಗ್ರಾಮ ದೇವತೆಗಳೆಲ್ಲ ಉತ್ಸವ ಮಾಡಿಕೊಂಡು ಸಾಕಮ್ಮ ಗಾರ್ಡನ್ಸ್ ನಲ್ಲಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಂದು ತಾಯಿಯನ್ನು ಭೇಟಿ ಮಾಡಿಕೊಂಡು ಹೋಗುವುದು. ವಾಡಿಕೆ ಪ್ರಕಾರ ಇದು ವರ್ಷದಲ್ಲಿ ಒಂದು ಸಾರಿ ನಡೆಯುವ ಅಕ್ಕ ತಂಗಿಯರ ಭೇಟಿ....ಸಮಾರಂಭ ಒಟ್ಟು ಮೂರು ದಿನ ನಡೆಯುತ್ತದೆ... ಯಡಿಯೂರು ಮತ್ತು ಸಾಕಮ್ಮ ಬಡಾವಣೆಯ ಎಲ್ಲಾ ಹೆಂಗೆಳೆಯರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಮೂರನೆಯ ಹಾಗೂ ಕೊನೆಯ ದಿನದಂದು ಈ ಅಕ್ಕ-ತಂಗಿಯರ ಭೇಟಿ... ಬೇರೆಲ್ಲಾ ಬಡಾವಣೆಗಳಿಂದ ದೇವಿಯರ ಉತ್ಸವಗಳು ಸಾಕಮ್ಮ ಗಾರ್ಡನ್ಸ್ ಗೆ ಬರುತ್ತವೆ... ಆ ದಿನ ಬೆಳಿಗ್ಗೆಯೇ ಈ ಬಡಾವಣೆಯ ಹೆಣ್ಣು ಮಕ್ಕಳು ಅಭ್ಯಂಜನ ಸ್ನಾನ ಮಾಡಿ, ತಮ್ಮಲ್ಲಿರುವ ಒಳ್ಳೆಯ ವಸ್ತ್ರಗಳನ್ನು ಧರಿಸಿ, ಮಂಗಳ ದ್ರವ್ಯಗಳೊಂದಿಗೆ ರಾಜರಾಜೇಶ್ವರಿ ದೇವಾಲಯಕ್ಕೆ ಬರುತ್ತಾರೆ. ಮೊದಲೇ ಹೆಸರು ನೋಂದಾಯಿಸಿಕೊಂಡ ಹೆಣ್ಣು ಮಕ್ಕಳು, ಹೂವಿನಿಂದ ವಿಧವಿಧವಾಗಿ ಅಲಂಕರಿಸಲ್ಪಟ್ಟ ಕಲಶಗಳನ್ನು ತಮ್ಮ ತಮ್ಮ ತಲೆಯ ಮೇಲೆ ಹೊರಲು ಸಿದ್ಧರಾಗುತ್ತಾರೆ. ಮಂಗಳ ವಾದ್ಯಗಳೊಂದಿಗೆ ಯಡಿಯೂರು ಕೆರೆಗೆ ಬಂದು ಅಭಿಷೇಕಕ್ಕೆ ನೀರು ತೆಗೆದುಕೊಂಡು ಹೋಗುತ್ತಾರೆ......

ಹೂವಿನಿಂದ ಪುಟ್ಟ ಪುಟ್ಟ ಪಲ್ಲಕ್ಕಿಗಳ ಥರಹದ, ಬೇರೆ ಬೇರೆ ಆಕಾರದ ಮಂಟಪಗಳಲ್ಲಿ ಕಲಶಗಳನ್ನು ಹೊತ್ತು, ಬಣ್ಣ ಬಣ್ಣದ ರೇಶಿಮೆ ಸೀರೆ, ಲಂಗಗಳನ್ನು ತೊಟ್ಟ...ಚಿಕ್ಕ - ದೊಡ್ಡ ಹೆಣ್ಣು ಮಕ್ಕಳ ಒಂದು ದೊಡ್ಡ ಕೂಟ, ಸಡಗರದಿಂದ ಮೆರವಣಿಗೆಯಲ್ಲಿ ಸಾಲು ಸಾಲಾಗಿ ಬರುತ್ತಾರೆ. ಯಡಿಯೂರು ಕೆರೆಯ ಎದುರು ಇರುವ ಚಿಕ್ಕ ಆಟದ ಮೈದಾನದ ಮಧ್ಯದಲ್ಲಿ ಪುಟ್ಟದಾದ ಒಂದು ಹಸಿರು ಚಪ್ಪರದ ಕೆಳಗೆ ಒಂದು ಕಲ್ಲನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಮಾವಿನ ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ. ಶಾಮಿಯಾನ ಹಾಕಿ ಅಲ್ಲಿ ಬಂದವರಿಗೆ ನೀರು, ಪಾನಕ, ಹಾಲು ಸರಬರಾಜು ಮಾಡುವ ವ್ಯವಸ್ಥೆಯೂ ಇರುತ್ತದೆ.

ಮೆರವಣಿಗೆಯ ಮುಂಚೂಣಿಯಲ್ಲಿ ಡೊಳ್ಳು ಕುಣಿತದವರು... ಎಲ್ಲರಿಗಿಂತ ಮೊದಲು ಬಂದು ಮೈದಾನದಲ್ಲಿ ತಮ್ಮ ಪ್ರದರ್ಶನ ಆರಂಭಿಸುತ್ತಾರೆ. ಸುಮಾರು ಒಂದು ಘಂಟೆಯ ಹೊತ್ತು, ಇವರು ತಮ್ಮ ಡೊಳ್ಳು ಕುಣಿತದ ಪ್ರದರ್ಶನದಿಂದ ಅಲ್ಲಿ ನೆರೆದವರ ಕಣ್ಣಿಗೆ ಹಬ್ಬವಾಗಿಸುತ್ತಾರೆ. ಇವರ ಜೊತೆಗೆ ಅದೇ ಮೆರವಣಿಗೆಯಲ್ಲಿ ಭಾಗವಹಿಸಿದ ಸಾರ್ವಜನಿಕರೂ ತಮ್ಮದೇ ಧಾಟಿಯ ಕುಣಿತ ಲಯಬದ್ಧವಾಗಿ ಆರಂಭಿಸಿ ಬಿಟ್ಟಿರುತ್ತಾರೆ.... ನಾವಿನ್ನೂ ಡೊಳ್ಳು ಕುಣಿತದ ಗುಂಗಿನಲ್ಲೇ ಇರುವಾಗಲೇ... ಮಂಗಳ ವಾದ್ಯಗಳ ಸಮೇತ ಕಲಶಗಳನ್ನು ಹೊತ್ತ ಹೆಂಗೆಳೆಯರ ದಂಡು ಮೈದಾನವನ್ನು ಪ್ರವೇಶಿಸಿ, ಅಲ್ಲಿ ಸ್ಥಾಪಿಸಿದ್ದ ಚಪ್ಪದರ ದೇವರಿಗೆ ನಮಿಸಿ, ಸುತ್ತಲೂ ಕಟ್ಟಿರುವ ಮೈದಾನದ ಮೆಟ್ಟಿಲುಗಳ ಮೇಲೆ ತಮ್ಮ ತಲೆಯ ಮೇಲೆ ಹೊತ್ತು ತಂದ ಮಂಟಪಗಳನ್ನು ಇಳಿಸಿ, ಕುಳಿತುಕೊಳ್ಳುತ್ತಾರೆ..

ಇಷ್ಟು ಹೊತ್ತಿಗಾಗಲೇ ವಾತಾವರಣ ಸೂರ್ಯನ ಪ್ರಖರತೆಯ ಜೊತೆಗೆ ಸ್ಪರ್ಧಿಸುವಂತೆ ಕಾವೇರಿರುತ್ತದೆ. ಆಗಲೇ... ಎಲ್ಲಿಂದಲೋ ಒಂದು ಚೆನ್ನಾಗಿ ಕೊಬ್ಬಿದ ಕುರಿಯನ್ನು ಹಗ್ಗ ಕಟ್ಟಿ ಎಳೆದು ತರುತ್ತಾರೆ. ಅದರ ಬಾಯುಗೂ ಹಗ್ಗ ಕಟ್ಟಿರುತ್ತಾರೆ. ಇವರ ಯಾವೊಂದು ಕೆಲಸವೂ ತನಗೆ ಏನೂ ಸಂಬಂಧಿಸಿದ್ದಲ್ಲವೆಂಬಂತೆ ಅದು ತಲೆ ಬಗ್ಗಿಸಿ ನಿಂತಿರುತ್ತದೆ. ಹಗ್ಗ ಹಿಡಿದು ಜಗ್ಗುತ್ತಾ.. ಅದನ್ನು ಆ ಕಡೆ ಈ ಕಡೆ ಎಳೆದಾಡುತ್ತಾ, ಅಲ್ಲಿಗೆ ಪೂಜಾದ್ರವ್ಯಗಳೊಂದಿಗೆ ಬಂದ ಪೂಜಾರಪ್ಪನಿಂದ ಕುರಿಗೆ ತಿಲಕ ಇಡಿಸಿ, ಹೂವಿನ ಹಾರ ಹಾಕಿಸಿ, ಪೂಜೆ ಮಾಡಿಸಲಾಗುತ್ತದೆ. ಪಾಪ ತನ್ನ ಸ್ಥಿತಿ-ಗತಿಯ ಅರಿವಿಲ್ಲದ ಆ ಕುರಿ ತಲೆ ಬಗ್ಗಿಸಿ ನಿಂತಿರುತ್ತದೆ. ಜೋರಾಗಿ ಘಂಟೆ ಬಾರಿಸುತ್ತಾ ದೇವರಿಗೆ ಮಂಗಳಾರತಿ ಮಾಡಿ, ಅದೇ ಆರತಿಯನ್ನು ಕುರಿಯ ಮೂತಿಗೂ ಎತ್ತಲಾಗುತ್ತದೆ.... ದೇವಿಯ ಹೆಸರು ಜೈಕಾರ ಕೂಗುತ್ತಾ ಎಲ್ಲರೂ ವಾತಾವರಣವನ್ನು ಇನ್ನಷ್ಟು ಉದ್ರಿಕ್ತಗೊಳಿಸುತ್ತಾರೆ.... ಇದ್ದಕಿದ್ದಂತೆ ಎಲ್ಲಿಂದಲೋ ಬಂದು ಮಧ್ಯದಲ್ಲಿ ಪ್ರತ್ಯಕ್ಷನಾದ ಒಬ್ಬ ಕಟುಕ, ಕೈಯಲ್ಲಿ ಮಚ್ಚು ಹಿಡಿದು, ದೂರ... ಎಲ್ಲರೂ ದೂರ... ಎಂದು ಅಬ್ಬರಿಸುತ್ತಾ... ಒಂದೇ ಏಟಿಗೆ... ಛಕ್ಕೆಂದು ಕುರಿಯ ತಲೆ ಕತ್ತರಿಸಿಯೇ ಬಿಡುತ್ತಾನೆ. ರಕ್ತ ಚಿಮ್ಮಿ, ಅದೇ ಕ್ಷಣ ಕುರಿಯ ದೇಹ ಧರೆಗುರುಳುತ್ತದೆ.... ಮುಂದಿನ ಕೇವಲ ೧೦ ನಿಮಿಷಗಳೊಳಗೆ, ಅದೇ ಮಂಗಳ ವಾದ್ಯಗಳ ಸಮೇತ, ಎಲ್ಲಾ ಹೆಣ್ಣು ಮಕ್ಕಳೂ ತಮ್ಮ ತಮ್ಮ ಪಲ್ಲಕ್ಕಿಗಳನ್ನು ಮತ್ತೆ ತಲೆಯ ಮೇಲೆ ಹೊತ್ತು... ಗಂಡಸರು ಕತ್ತರಿಸಿದ ಕುರಿಯ ದೇಹದ ಭಾಗಗಳನ್ನು ಹೊತ್ತು, ಮೆರವಣಿಗೆಯಲ್ಲಿ ಅಲ್ಲಿಂದ ನಿರ್ಗಮಿಸುತ್ತಾರೆ. ಇಷ್ಟರ ಮಧ್ಯದಲ್ಲಿ, ಅಲ್ಲಿ ಪುಟ್ಟ ಹಸಿರು ಚಪ್ಪರದ ಕೆಳಗ ಪ್ರತಿಷ್ಠಾಪಿಸಲ್ಪಟ್ಟ ದೇವರನ್ನೂ ವರ್ಗಾಯಿಸಿಬಿಟ್ಟಿರುತ್ತಾರೆ. ಚಪ್ಪರ ಹರಿದು.. ಅವಶೇಷಗಳು ಮಾತ್ರ, ಅಲ್ಲಿ ನಡೆದ ಬಲಿಗೆ ಸಾಕ್ಷಿಯಾಗಿ ನಿಂತಿರುತ್ತದೆ. ಇಡೀ ವಾತಾವರಣ ಒಮ್ಮೆಗೇ ಸ್ಥಬ್ಧವಾಗಿ ಬಿಟ್ಟಿರುತ್ತದೆ.......

ಗ್ರಾಮದೇವತೆಗಳ ಹಬ್ಬ ಎಂದು ಅತ್ಯಂತ ಸಂಭ್ರಮ, ಆಸಕ್ತಿಯಿಂದ ನೋಡುತ್ತಿದ್ದ ನಾನು, ಹಟಾತ್ತನೆ ನನ್ನೆದುರೇ ನಡೆದ ಈ ಬಲಿಯನ್ನು ನೋಡಿ ನಿಜಕ್ಕೂ ಆಘಾತಗೊಂಡಿದ್ದೆ. ಮೈದಾನದಲ್ಲಿ ಚೆಲ್ಲಿದ್ದ ರಕ್ತ ನಡೆದ ಘಟನೆಗೆ ಸಾಕ್ಷಿ.... ಎರಡು ದಿನಗಳ ನಂತರ ಹಾಗೇ ಮಣ್ಣಲ್ಲಿ ಬೆರೆತು ರಕ್ತ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲೇ ಇಲ್ಲವೇನೋ ಎಂಬಂತೆ ನೋಡುವವರಿಗೆ ಅನ್ನಿಸುತ್ತದೆ. ನಿರ್ಭಾವುಕತೆಯಿಂದ ನಿಂತ ಮೈದಾನ, ತನ್ನ ಮಡಿಲಲ್ಲಿ ನಡೆದ ಹತ್ಯೆಗೆ ನೊಂದಿತೋ.... ಇದು ಪ್ರತೀ ವರ್ಷ ನಡೆಯುವುದೇ.... ಎಷ್ಟೆಂದು ದು:ಖ ಪಡಲಿ ಎಂದು ಕೊಂಡಿತೋ ಗೊತ್ತಿಲ್ಲ. ಆದರೆ ಬಲಿಕೊಟ್ಟಿದ್ದನ್ನು ನೋಡಿದ ನನ್ನ ನಿದ್ದೆ ಮಾತ್ರ ಮಾರುದೂರ ಹಾರಿಹೋಗಿತ್ತು....

ಸರಕಾರ ಬಲಿಯನ್ನು ನಿಷೇಧಿಸಿದ್ದರೂ.... ಹೀಗೆ ಸಾರ್ವಜನಿಕವಾಗಿ ನಡೆಸುತ್ತಾರಲ್ಲಾ... ಎಂಬ ಮಾತು ನನಗೆ ನೋವು ತಂದಿತ್ತು... ದೇವರನ್ನು ಒಲಿಸಿಕೊಳ್ಳಲು ಈ ಮಾರ್ಗವೇ ಏಕೆ ಬೇಕು...? ಸಾತ್ವಿಕವಾಗಿ ಕರೆದರೆ ನಮ್ಮ ಕರೆಯನ್ನು ದೇವರು ಕೇಳಿಸಿಕೊಳ್ಳುವುದಿಲ್ಲವೇ...? ಹತ್ತಾರು ಪ್ರಶ್ನೆಗಳು ನನ್ನನ್ನು ಕಾಡತೊಡಗಿದ್ದವು....

Thursday, May 13, 2010

ಸುಪ್ರಭಾತ.... ಶುಭೋದಯ....

ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆಯ ಅಭಿಮುಖವಾಗಿ ಇದೆ. ದಿನವೂ ಬೆಳಿಗ್ಗೆ ಸೂರ್ಯೋದಯದ ಪ್ರಥಮ ಕಿರಣಗಳು ಭೂಮಿಯನ್ನು ಮುಟ್ಟುವ ತವಕದಲ್ಲಿ ಇರುವಾಗಲೇ... ಇಲ್ಲಿಯ ಮನೆಗಳ ಅಕ್ಕ ಪಕ್ಕದಲ್ಲಿ ಬೆಳಗಿನ ಸುಪ್ರಭಾತ ಆರಂಭವಾಗಿ ಬಿಡುತ್ತದೆ....... ಕೋಗಿಲೆಗಳ ಮಧುರ ಕಂಠದಿಂದ... ಕುಹೂ.... ಕುಹೂ.... ಎಂದು. ಬೆಳಗಿನ ಸೂರ್ಯೋದಯ ಯಡಿಯೂರು ಕೆರೆಯ ಹತ್ತಿರ ಅತ್ಯಂತ ಸುಂದರವಾದ, ಭಗವಂತನ ದೃಶ್ಯ ಸಂಯೋಜನೆಯಂತಿರುತ್ತದೆ. ನಿಧಾನವಾಗಿ ಪೂರ್ವ ದಿಕ್ಕು ತಿಳಿಯಾಗಿ... ಚಿನ್ನದ ಬಣ್ಣ ಕಣ್ಣನ್ನು ಕಿರಿದಾಗಿಸತೊಡಗುತ್ತದೆ.... ಜೊತೆ ಜೊತೆಗೇ ಸುಂದರವಾದ ಕೆಂಪು ಬಣ್ಣದ ಅತ್ಯಂತ ದೊಡ್ಡ ಚಿನ್ನದ ಮೆರುಗಿನ ದೊಡ್ಡ ತಟ್ಟೆ ಕಾಣತೊಡಗುತ್ತದೆ. ನೋಡು ನೋಡುತ್ತಿರುವಾಗಲೇ... ರಕ್ತ ವರ್ಣದಿಂದ ಕಂಗೊಳಿಸ ತೊಡಗುತ್ತದೆ..... ಮುಗಿಲು ತಿಳಿಯಾಗಲಾರಂಭವಾದೊಡನೇ ಶುರುವಾಗಿ ಬಿಟ್ಟಿರುತ್ತದೆ... ಕುಹೂ ಕುಹೂ ಕೋಗಿಲೆಯ ಸುಪ್ರಭಾತ..."ಇನ್ನು ನಿದ್ದೆಯ ತಳೆದು ತನ್ನ ತಾನವನೊಲಿದು... ಭಿನ್ನ ಭಾವವ ಬಿಟ್ಟ ಕೋಗಿಲೇ... ಎನ್ನ ಕನ್ನಡನಾಡ ಚೆನ್ನರಳೂವಂತೆ ಪಾಡುವೆಯಾ ಪೇಳು ಕೋಗಿಲೆ" ಎಂಬ ಸಾಲು ನೆನಪಿಸುತ್ತಾ..... ಹಿನ್ನೆಲೆ ಸಂಗೀತದ ಸಮೇತ ಎಲ್ಲರ ಮನೆ, ಮನ ಬೆಳಗಲು, ಜ್ಯೋತಿಯಂತೆ ಸೂರ್ಯನ ಉದಯ..... ಸ್ವಲ್ಪ ಮೇಲೆ ಬರುತ್ತಿದ್ದಂತೆ ಸೂರ್ಯನ ಬೆಳ್ಳಗಿನ ಪ್ರತಿಫಲನ ಕೆರೆಯ ನೀರನ್ನು ಬೆಳ್ಳಿಯಂತೆ ಬೆಳಗಿಸುತ್ತದೆ. ಸುಮಾರು ಅರ್ಧ ಕೆರೆಯಷ್ಟು ನೀರು ಮಿರ ಮಿರ ಮಿಂಚುತ್ತಿರುತ್ತದೆ. ಒಂದು ಕಡೆ ಪಕ್ಕದಲ್ಲಿ ಬೆಳೆದ ದೊಡ್ಡ ದೊಡ್ಡ ತಾವರೆ ಎಲೆಗಳ ಗುಂಪು... ನೀರಿನ ಒಂದು ಪಕ್ಕ ಬೆಳ್ಳಂಬೆಳ್ಳ ಬಣ್ಣ, ಈ ಕಡೆ ಪಕ್ಕದಲ್ಲಿ ದಟ್ಟ ಹಸಿರು ಮರಗಳ ಸಾಲು....ತಂಪಾದ ಗಾಳಿ...

ಕೆಲವು ತಿಂಗಳುಗಳ ಹಿಂದೆ ಯಡಿಯೂರು ಕೆರೆ ಸುಂದರಗೊಳಿಸಲ್ಪಟ್ಟಿತ್ತು. ಇಡೀ ಕೆರೆಯ ನೀರನ್ನು ತೆಗೆದು, ಹೂಳು ಎತ್ತಿ, ಹೊಸ ನೀರು ಹರಿಸಿ, ಬೇಕಾ ಬಿಟ್ಟಿ, ಅಡ್ಡಾದಿಡ್ಡಿ ಬೆಳೆದಿದ್ದ ಗಿಡಗಳೆಲ್ಲಾ ಸೌಂದರ್ಯ ತಜ್ಞರ ಕೈಯಲ್ಲಿನ ಕತ್ತರಿಯ ಹೊಡೆತಕ್ಕೆ ಸಿಕ್ಕು, ಸೌಂದರ್ಯ ಸ್ಪರ್ಧೆಗೆ ಹೊರಟವರಂತೆ ನೀಟಾಗಿದ್ದರು. ಹೊಸದಾಗಿ ತಂದು ನೆಟ್ಟಿದ್ದ, ಅನೇಕ ಜಾತಿಯ, ಬಣ್ಣದ, ಚಿಕ್ಕ - ದೊಡ್ಡ ಹೂ ಗಿಡಗಳು ಹೂವು ಬಿಡಲು ಆರಂಭಿಸಿದ್ದವು. ಒಂದು ಕಡೆ ಪಕ್ಕದಲ್ಲಿ ಚಿಕ್ಕ ನೀರಿನ ಕಾರಂಜಿಗೆ ಬಣ್ಣ ಬಣ್ಣದ ದೀಪದ ಸೊಬಗು ಕೂಡ ಸೇರಿತ್ತು. ಮಕ್ಕಳಿಗಾಗಿ ಆಟ ಆಡಲು ಪ್ರತ್ಯೇಕ ಜಾಗ, ನಗೆ ಸಂಘದ ಹಿರಿಯ-ಕಿರಿಯ ಸದಸ್ಯರುಗಳ ಕಲರವ... ಅಬ್ಬರದ ನಗೆ.... ದಿನವೂ ಮುಂಜಾವು ಮತ್ತು ಸಂಜೆ ಬೆಂಚುಗಳ ಮೇಲೆ ಕುಳಿತು ಪಿಸುಮಾತು ಹಂಚಿಕೊಳ್ಳುವ ಯುವ ಪ್ರೇಮಿಗಳು.... ವಾರಾಂತ್ಯಗಳಲ್ಲಿ ಬಸಿರಿ ಮನದನ್ನೆಯ ಜೊತೆ ನಿಧಾನವಾಗಿ ಹೆಜ್ಜೆ ಹಾಕುವ ಪತಿ..... ಆರೋಗ್ಯಕ್ಕಾಗಿ ನಡೆಯುವವರೂ..... ತಮ್ಮ ಸ್ಥೂಲ ಕಾಯವನ್ನು ಕರಗಿಸಲಾರದೆ, ಬೆವರಿಳಿಸುವವರು...... ಮಧ್ಯೆ ಮಧ್ಯೆ ಎಲ್ಲರ ಕಿರಿಕಿರಿಗೆ ಒಳಗಾಗುವಂತೆ ಹಾದಿಯಲ್ಲಿ ನಿಂತು ಏರೋಬಿಕ್ಸ್ ಮಾಡುವವರು...... ಓಯ್..ಓಡಬೇಡಾ... ನಿಲ್ಲು... ಬೀಳ್ತೀಯಾ ಎಂದು ಕೂಗುತ್ತಾ, ಮೊಮ್ಮಕ್ಕಳ ಹಿಂದೆ ಓಡಲಾರದೆ ಏದುಸಿರು ಬಿಡುವ ಅಜ್ಜ-ಅಜ್ಜಿಯರು.......... ಇದು ಬೆಂಗಳೂರಿನ ಅತ್ಯಂತ ಸುಂದರವಾದ, ಯಡಿಯೂರು ಕೆರೆಯ ಸುತ್ತ ಮುತ್ತ ಕಂಡುಬರುವ ಸಾಯಂಕಾಲದ ದೃಶ್ಯ.....

ಶುಭೋದಯದ ದೃಶ್ಯದ ಸಂಭ್ರಮ, ವೈಭವವೇ ಬೇರೆ.... ಆಗ ಮಕ್ಕಳ ಕಲರವ, ನಗೆ ಸಂಘದ ಅಬ್ಬರ ಇರುವುದಿಲ್ಲ.... ಆದರೆ ಆರೋಗ್ಯದ ಕಾಳಜಿಯಿರುವ ಚಿಕ್ಕ ದೊಡ್ಡ, ಗಿಡ್ಡ ಕುಳ್ಳ, ದಪ್ಪ ತೆಳ್ಳ, ಕರಿ ಬಿಳಿ, ವೆಂಕ ಸೀನ ನಾಣಿ, ಸರೋಜ, ಗಿರಿಜಾ, ಪಾರ್ವತಿ, ಲತಾ, ಶಕ್ಕೂ, ಶಾರಿ, .... ಎಲ್ಲಾ ಥರಹದ ಜನಗಳೂ ಬಿರುಸಿನಿಂದ, ನಿಧಾನವಾಗಿ, ಮೆಲ್ಲಗೆ ಓಡುತ್ತಾ, ಜೋರಾಗಿ ಓಡುತ್ತಾ.... ಸಂಚಾರಿ ದೂರವಾಣಿಯಲ್ಲಿ ಸುಪ್ರಭಾತ , ಎಫ್ ಎಂ ರೈನ್ ಬೋದಲ್ಲಿ ಬೆಳ್ಬೆಳಿಗ್ಗೇನೆ... ಮೈ ಇಕ್ ರಾಜಾ ಹೂಂ... ಎಂದು ಪ್ರೇಮ ಗೀತೆ ಕೇಳುತ್ತಾ, ಇನ್ನೂ ಕೆಲವರು ಐ ಪಾಡ್ ನಲ್ಲಿ ಭಕ್ತಿ, ಪ್ರೇಮ, ವಿರಹದ ಕಲಸು ಮೇಲೋಗರದ ಹಾಡುಗಳನ್ನು ಕೇಳುತ್ತಾ....., ಜೊತೆಗೆ ವಿಷ್ಣು / ಲಲಿತಾ ಸಹಸ್ರನಾಮಗಳನ್ನೂ ಕೇಳುತ್ತಾ....... ಥರಹೇವಾರಿ ಚಪ್ಪಲಿಗಳೂ, ಬ್ರ್ಯಾಂಡೆಡ್ ಶೂಗಳನ್ನು ಪ್ರದರ್ಶಿಸುತ್ತಾ....... ಕೆಲವರು ಕೆರೆಯ ಎಡಗಡೆಯಿಂದ ಬಲದಿಕ್ಕಿಗೂ.... ಇನ್ನೂ ಕೆಲವರು ಬಲಗಡೆಯಿಂದ ಎಡ ದಿಕ್ಕಿಗೂ... ನಡೆಯುತ್ತಾ... ಎದುರು ಕಂಡವರಿಗೆ ಒಂದು ಚಂದದ ಬೆಳಗಿನ ಮುಗುಳ್ನಗೆಯನ್ನು... ಹೋದರೆ ಹೋಗಲಿ ಪಾಪ ಅನ್ನೋ ಹಾಗೆ ಬಿಸಾಕಿ... ನಡೆಯುತ್ತಿರುತ್ತಾರೆ...... ಇನ್ನೂ ಕೆಲವರು ಎದ್ದ ಕೂಡಲೆ ಅದೇನು ಶೋಕಿಯೋ... ಅಥವಾ ಇನ್ಯಾವತೆರನಾದ ಸಮಸ್ಯೆಯೋ ಗೊತ್ತಿಲ್ಲ.... ಗಾಢವಾದ perfume ಹಾಕಿ ಎದುರುಗಡೆಯಿಂದ ಹತ್ತಿರ ಬರುವವರ ಉಸಿರು ಕಟ್ಟುವಂತೆ ಹಾದು ಹೋಗುತ್ತಾರೆ......

ಇದೆರಡೂ ವಿಭಿನ್ನ ಸನ್ನಿವೇಶಗಳಿಗೂ ಸಾಕ್ಷಿಯಾಗಿ, ತಮ್ಮದೇ ಲೋಕದಲ್ಲಿ ವಿಹರಿಸುತ್ತಾ.... ಸುತ್ತಲಿನ ಜನರ ಪರಿವೆಯೇ ಇಲ್ಲದೇ ಇರುವವರ.... ದೇಹದ ತೂಕ ಇಳಿಸುವ ಯಾವ ಚಿಂತೆಯೂ ಇಲ್ಲದವರ.... ಹಾಡು, ಸುಪ್ರಭಾತ ಕೇಳಲು ಯಾವುದೇ ಸಂಚಾರಿ ದೂರವಾಣಿಯ, ಐ ಪಾಡ್ ನ ಅವಶ್ಯಕತೆಯೇ ಎಂದಿಗೂ ಬೇಕಾಗದ......, ತಮ್ಮ ತಮ್ಮಲ್ಲೇ ಅತ್ಯಂತ ಸ್ನೇಹದಿಂದಿರುವ.... ಒಟ್ಟಿಗೇ ಅವಿಭಕ್ತ ಕುಟುಂಬದವರು family albumಗಾಗಿ ಫೋಸ್ ಕೊಡುವಂತೆ ಗುಂಪಾಗಿ ಬಹು ಮಹಡಿ ಕಟ್ಟಡಗಳ ಚಿತ್ರ ವಿಚಿತ್ರ ವಿನ್ಯಾಸದ ಬಿಸಿಲು ಮಹಡಿಯ ಪುಟ್ಟ ಗೋಡೆಯ ಮೇಲೋ... ಅಂದಕ್ಕಾಗಿ ಹಾಸಿರುವ ಥರಾವರಿ ಆಕಾರದ ಹಂಚುಗಳ ಮೇಲೋ ಕುಳಿತಿರುವ.... ಸೌಂದರ್ಯ ಸ್ಪರ್ಧೆ ನಡೆಯುತ್ತಿದೆಯೇನೋ ಎಂಬಂತೆ ವೈಯಾರದಿಂದ ಕತ್ತು ಕೊಂಕಿಸಿ ಈ ಕಡೆ ಆ ಕಡೆ ನೋಡುತ್ತಿರುವ..... ಒಂದು ದೊಡ್ಡ ಸಮುದಾಯವೇ ಕೆರೆಯ ಸುತ್ತ ಮುತ್ತ ಪರಿವಾರ ಸಮೇತ ಬೀಡು ಬಿಟ್ಟಿವೆ. ಇಲ್ಲಿಯ ಬಹು ಮಹಡಿ ಕಟ್ಟಡಗಳ ಜನರಂತೆ, ಅವರ ಜೊತೆಗೇ, ಭದ್ರವಾಗಿ ನೆಲೆಯೂರಿರುವ ಈ ಮಿತ್ರ ಸಮುದಾಯ... ಸುಂದರ ಪಾರಿವಾಳಗಳು....... ನೂರಾರು ಪಾರಿವಾಳಗಳು ವಾಸಿಸುವ ಈ ಬಡಾವಣೆ, ಬೆಳಗಿನ ಹೊತ್ತಿನಲ್ಲಿ ಈ ನಮ್ಮ ಮಿತ್ರರ ಕಲರವದಿಂದ, ಚೈತನ್ಯ ಪೂರ್ಣವಾಗಿ, ಚೇತೋಹಾರಿಯಾಗಿ ಇರುತ್ತದೆ...... ಇಲ್ಲಿನ ಬಹು ಮಹಡಿ ಕಟ್ಟಡಗಳ ನಿವಾಸಿಗಳು ಈ ಪಾರಿವಾಳಗಳಿಗೆ ತಮ್ಮ ತಮ್ಮ ಮಾಳಿಗೆಗಳಲ್ಲಿ ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರು ತುಂಬಿಸಿ ಇಟ್ಟಿರುತ್ತಾರೆ ಮತ್ತು ದಿನವೂ ಬೆಳಗಿನ ಹೊತ್ತು... ಗೋಧಿ, ಜೋಳದ ಕಾಳುಗಳನ್ನು ಹಾಕುತ್ತಾರೆ. ಆಗ ನೋಡಬೇಕು... ಈ ಅವಿಭಕ್ತ ಕುಟುಂಬದ ಒಗ್ಗಟ್ಟು..... ಮನೆಗೆ ಹಿರಿಯ ಅನ್ನಿಸಿಕೊಂಡವ ಬಂದನೆಂದರೆ ಮುಗಿಯಿತು..... ಬಾಕಿಯವರಿಗೆಲ್ಲಾ ಅರೆಹೊಟ್ಟೆ, ಬರಿಹೊಟ್ಟೆಯೇ ಗತಿ.... ಇವನು ತಾನೂ ತಿನ್ನವೊಲ್ಲ.... ಬೇರೆಯವರಿಗೆ ತಿನ್ನಲೂ ಬಿಡಲೊಲ್ಲ... ಈ ಕಾಳಗ ನೋಡುವಾಗ, ಇವರೇನಾ family albumಗೆ ಫೋಸ್ ಕೊಟ್ಟಿದ್ದೋರು ಅನ್ಕೋಬೇಕು..... !!! ಇದು ಬರೀ ಕಾಳು ಹೆಕ್ಕುವಾಗಿನ ಕದನ ಅಷ್ಟೆ... ಎಲ್ಲಾ ಮುಗಿದ ನಂತರ ಮತ್ತೆ ಇವರ ಫೋಸ್ ಕಟ್ಟಡದ ಮಹಡಿಯ ಮೇಲೆ....

ಪಾರಿವಾಳಗಳಂತೆಯೇ.. ಸಾಕ್ಷಿಯಾಗಿ ಇಲ್ಲಿ ಇನ್ನೊಂದು ಬಳಗ ಇದೆ..... ಅವುಗಳು ಮರಗಳ ಮರೆಯಲ್ಲಿ ಅವಿತು ಆಗಾಗ... ಒಮ್ಮೊಮ್ಮೆ... ಮನಬಂದಾಗ, ಮುದಗೊಂಡಾಗ, ಮೈ ಮುರಿಯುವಾಗ, ತನ್ನ ಮನದನ್ನೆಯನ್ನು ಮುದ್ದಿಸುವ ಇಚ್ಛೆಯಾದಾಗ, ಸುಂದರ ಹೂವುಗಳ ಪರಿಮಳ ಗಾಳಿಯಲ್ಲಿ ತೇಲಿ ಬಂದಾಗ...... ಹೀಗೆ ಒಂದೊಂದು ಸನ್ನಿವೇಶಗಳಲ್ಲಿ, ಒಟ್ಟಿನಲ್ಲಿ ತಮಗೆ mood ಬಂದಾಗ, ಲಹರಿ ಶುರು ಮಾಡುತ್ತವೆ.... "ಕುಹೂ ಕುಹೂ... ಬೋಲೇ ಕೋಯಲಿಯಾ..." ಎಂದು.... ಎಲ್ಲಕ್ಕಿಂತ ಮೊದಲು ಇಲ್ಲಿಯ ನಿವಾಸಿಗಳಿಗೆ ಸುಪ್ರಭಾತ ಹಾಡುವವರೇ ಈ ಕೋಗಿಲೆಗಳು.... ಮುಗಿಲು ಚೂರೇ ಚೂರು ತಿಳಿಯಾದ ತಕ್ಷಣವೇ ಅದೆಂತಹ ಸಂಭ್ರಮ ಈ ಬಳಗಕ್ಕೆ... ಸೂರ್ಯನನ್ನು ಎದಿರುಗೊಳ್ಳಲು.... ಪ್ರಥಮ ಕಿರಣಗಳು ವಸುಧೆಯನ್ನು ಮುತ್ತಿಕ್ಕುತ್ತಿದ್ದಂತೆಯೇ... ಧಾರಿಣಿ ಪುಳಕಗೊಳ್ಳುವಾಗಲೇ... ಈ ವಾದ್ಯ ಸಂಗೀತ ಮೇಳೈಸಿಬಿಟ್ಟಿರುತ್ತದೆ.... ಸೂರ್ಯ ರಶ್ಮಿ ಮತ್ತು ಧಾರಿಣಿಯ ಸಂಗಮಕ್ಕೆ... ರಾ ಬೇಂದ್ರೆಯವರ ವ್ಯೋಮ ಮಂಡಲ ಸುಖಧಾಮವಾಗುವಂತೆ... ಕಾಮರತಿಯ ಮೀರಿ ಕೋಗಿಲೇ... ಪ್ರೇಮ ಕವಿಯು ಕಂಡ ಸಾಮವೇದದ ಗಟ್ಟಿಮೇಳ ನುಡಿಸುವಂತೆ... ಒಮ್ಮೆಲೇ ಹತ್ತಾರು ಕಂಠಗಳು ಕುಹೂ ಕುಹೂ... ಕುಹೂ ಕುಹೂ.... ಎಂದು ಹಾಡಲಾರಂಭಿಸಿದಾಗ.... "ಅತ್ತವೋ ಕೋಗಿಲೇ...... ಇತ್ತವೋ ಕೋಗಿಲೇ...." ಎಂದು ನಮ್ಮ ಮನ ಹಾಡಲು ಆರಂಭಿಸಿರುತ್ತದೆ... ಇದು ಬರಿಯ ಬೆಳಗು ಜಾವದ ರವಿ-ಧರಿತ್ರಿಯ ಸಂಗಮದ ಸಂಗೀತವಲ್ಲಾ.... ಸಾಯಂಕಾಲವೂ ಸೂರ್ಯನ ಬೀಳ್ಕೊಡುಗೆಗೂ ಹೀಗೇ ನಿಸ್ಸಂಕೋಚವಾಗಿ, ನಿರ್ವಂಚನೆಯಿಂದ, ಸಂಜೆವೆಣ್ಣು ಬರುವಳೋ ಎಂದು ಸ್ವಾಗತಿಸುವಂತೆ "ದಿನವಿಲ್ಲ ನಿಶೆಯಿಲ್ಲ... ದನಿಗೈಯುತಲಿರುವೆ.. ನೀನ್ಯಾವ ಬಸಂತನ ಕೋಗಿಲೇ"... ಎಂಬಂತೆ ಮತ್ತೆ ಕುಹೂ....ಕುಹೂ ಕುಹೂ.... ಗಾಯನ... "ಮೃಣ್ಮಯ ದೇಹದಿ ಮನ್ಮಯನಾದೆ ನಾ..... ಸನ್ಮಯತೆಯ ಕಂಡು ಕೋಗಿಲೇ..... ಚಿನ್ಮಯಾನಂದದಿ ತನ್ಮಯವಾಗಿ ನೀ ಕುಹುಹೂ... ಕುಕಿಲುವೆ ಕೋಗಿಲೇ...." ಎನ್ನುವಂತೆ ನಿಶೆಯ ರಾಜ್ಯಭಾರ ಶುರುವಾಗುವವರೆಗೂ ಮುಂದುವರೆಯುತ್ತದೆ ಈ ಸಂಗೀತ ಕಛೇರಿ...... ಮತ್ತೆ ಬೆಳಗಿನ ಶುಭೋದಯಕ್ಕೆ ಪ್ರಾರಂಭ..... ಯಾವುದೇ ಸರಕಾರಿ ರಜೆ ಇಲ್ಲ.... ವಾರಾಂತ್ಯದ ವೆರೈಟಿ ಹುಡುಕೋಲ್ಲಾ.... ಸುಖ-ದು:ಖ, ಬೇಸರ-ಸಂತೋಷ, ಪ್ರಸನ್ನತೆ-ಖಿನ್ನತೆ, ಹುಟ್ಟು-ಸಾವು... ಯಾವುದೇ ಸಂದರ್ಭದಲ್ಲೂ ವಿಚಲಿತರಾಗದೆ... ಚಿನ್ಮಯಾನಂದ ಕೊಡುವುದಕ್ಕಾಗಿಯೇ ಹಾಡುವವರು ಈ ನಮ್ಮ ಕೋಗಿಲೆಗಳು.........

Tuesday, May 4, 2010

ವಿಮುಕ್ತಿ..... ಕನ್ನಡ ಚಿತ್ರ.....

ನವ್ಯ ಚಿತ್ರ ಕ್ರಿಯೇಷನ್ಸ್ ರವರ "ವಿಮುಕ್ತಿ" ಚಿತ್ರ ಉತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರ ಪ್ರಶಸ್ತಿಗಳಿಸಿದೆ. ಚಿತ್ರ ಅಪ್ಪ - ಮಗಳ ನವಿರಾದ ಸಂಬಂಧದ ಮೇಲೆ ನಿರ್ಮಿತವಾಗಿದೆ. ಕಥೆಯಲ್ಲಿ ಅಪ್ಪ ಕೇಶವ ಮೈಸೂರು ಶೈಲಿಯ ಚಿತ್ರಕಾರ. ಅವನ ಮಗಳು ಮಾಧವಿ. ಮಾಧವಿ ತಂದೆಯನ್ನು ಉತ್ಕಠವಾಗಿ ಪ್ರೀತಿಸುತ್ತಾಳೆ. ಹೆಣ್ಣು ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ತಮ್ಮ ತಂದೆಯನ್ನು ಆರಾಧಿಸುತ್ತಾರೆ. ಬೆಳೆಯುತ್ತಾ ಬೆಳೆಯುತ್ತಾ ಅದು ಪವಿತ್ರ ತಂದೆಯ ಪ್ರೀತಿಯಾಗಿ ಮಾರ್ಪಾಡಾಗುತ್ತದೆ. ಆದರೆ ಇಲ್ಲಿ ಮಾಧವಿ Electra Complex ಎನ್ನುವ, a kind of romantic feelings towards father ಎಂಬ ಭಾವನೆಗಳ ತೀವ್ರತೆಯಿಂದ ಹೊರಬರಲಾಗದೆ ಉಳಿದುಬಿಡುತ್ತಾಳೆ. ಅವಳಿಗೆ "ಅಪ್ಪ"ನೇ ಪ್ರಪಂಚ. ಎಷ್ಟು ಪ್ರೀತಿಸುತ್ತಾಳೆಂದರೆ, ಗಂಡನನ್ನೂ ನಿರ್ಲಕ್ಷಿಸುತ್ತಾಳೆ. ಅದಕ್ಕಾಗಿ ತನ್ನ ತಾಯಿಯನ್ನೂ ದ್ವೇಷಿಸುತ್ತಾಳೆ, ಎಲ್ಲರಲ್ಲೂ ಜಗಳವಾಡುತ್ತಾಳೆ...

ಕೇಶವನ ಹತ್ತಿರ ಮೈಸೂರು ಶೈಲಿಯ ಚಿತ್ರಕಲೆ ಕಲಿಯಲು "ನವಾ" ಎಂಬ ಇರಾನಿಯ ಹುಡುಗಿ ಬರುತ್ತಾಳೆ. ಯಾರಿಗೂ ತಾನು ಕಲಿಸುವುದಿಲ್ಲವೆಂದರೂ, ನವಾಳ ಆಸಕ್ತಿ ಹಾಗೂ ಇತರ ಶೈಲಿಯ ಚಿತ್ರಕಲೆಯಲ್ಲಿ ಪಳಗಿದ ಅವಳನ್ನು ಕಂಡು ಕೇಶವ ಕಲಿಸಲು ಒಪ್ಪುತ್ತಾನೆ. ನಿರಾತಂಕವಾಗಿ ತಂದೆಯ ಪ್ರೀತಿಯನ್ನು ತನ್ನದಾಗಿಸಿಕೊಂಡಿದ್ದ ಮಾಧವಿ ಹೊಟ್ಟೆಕಿಚ್ಚಿಗೊಳಗಾಗುತ್ತಾಳೆ. ರತಿ-ಮನ್ಮಥರ ಚಿತ್ರದಿಂದ ಪ್ರೇರಿತವಾಗಿ ಬರೆದ ಚಿತ್ರಕಲೆಯಲ್ಲಿ ಬೊಂಬೆಗಳ ಮುಖಕ್ಕೆ ಬದಲಾಗಿ ಮಾಧವಿ ತನ್ನ ಹಾಗೂ ತನ್ನ ತಂದೆಯ ಮುಖಗಳನ್ನು ಮಾಡಲು ಹೇಳಿದಾಗ, ಕೇಶವ ಮಾಧವಿ + ಅವಳ ಗಂಡ ವಿಭಿನ್ ನ ಮುಖಗಳನ್ನು ಅಂಟಿಸುತ್ತಾನೆ. ಇದು ನಿರ್ದೇಶಕರು ಪ್ರೇಕ್ಷಕರಿಗೆ ಪರಿಚಯಿಸುವ, ಮಾಧವಿಯ ತಂದೆಯೆಡೆಗಿರುವ ಆಳವಾದ possessivenessನ ಮೊದಲ ದೃಶ್ಯ. ಇದರ ನಂತರ ನವಾಳ ಪ್ರವೇಶವಾಗುತ್ತದೆ. ಈ ಚಿತ್ರ ಕಲೆಯನ್ನು ನವಾ ಕೊಂಡುಕೊಳ್ಳಲು ಇಚ್ಛಿಸಿದಾಗ ಕೇಶವ, ಮಾರಲು ಒಪ್ಪದೇ ಅವಳಿಗೇ giftಆಗಿ ಕೊಟ್ಟು ಬಿಡುತ್ತಾನೆ. ಇದು ಮಾಧವಿಯನ್ನು ಕೆರಳಿಸುತ್ತದೆ. ಕೇಶವ ತನ್ನ ಹೆಂಡತಿಯ ನೆನಪಿಗಾಗೆ ನಿಂತುಹೋದ ಗಡಿಯಾರವನ್ನು ಜೋಬಿನಲ್ಲಿಟ್ಟುಕೊಂಡಿರುತ್ತಾನೆ...

ನವಾಳ ಆಗಮನದಿಂದಾದ ಮಾಧವಿಯ ಭಾವನೆಗಳ ಏರುಪೇರುಗಳನ್ನು ಕೇಶವ ಗಮನಿಸುತ್ತಾನೆ ಮತ್ತು ತನ್ನ ಮಿತ್ರ ಡಾ.ಜನಾರ್ಧನರ ಹತ್ತಿರ ಹೇಳುತ್ತಾನೆ ಕೂಡ. ಡಾಕ್ಟರ್ ಮಾಧವಿಯ ಮನಸ್ಸು ಅತೀ ಸೂಕ್ಷ್ಮವಾಗಿದೆಯೆಂದೂ ಎಚ್ಚರಿಸುತ್ತಾರೆ.

ಈ ಮಧ್ಯೆ ಮೈಸೂರು ಶೈಲಿಯ ಚಿತ್ರಗಳನ್ನು ನೋಡಲು ಕೇಶವ ಮತ್ತು ನವಾ ಮೈಸೂರಿಗೆ ಹೊರಡುತ್ತಾರೆ. ಅವರು ಕಾರಿನಲ್ಲಿ ಶೃಂಗಾರ ರಸದ ಮಾತುಗಳನ್ನಾಡುತ್ತಿರಬಹುದು, ಸರಸವಾಡುತ್ತಿರಬಹುದೆಂದು ಸುಮ್ಮನೆ ಊಹಿಸಿಕೊಂಡು ಮಾಧವಿ ಕುದಿಯುತ್ತಾಳೆ. ತಂದೆಗೆ ಕರೆ ಮಾಡಿ ಅಷ್ಟು ಜೋರಾಗಿ ಇರಾನಿ ಸಂಗೀತ ಏಕೆ ಹಾಕಿದ್ದೀರಿ ಕಾರಲ್ಲಿ ಎಂದಾಗ ತಂದೆ ಯಾವ ಸಂಗೀತವೂ ಹಾಕಿಲ್ಲವಲ್ಲ ಎನ್ನುತ್ತಾನೆ.... ಇಲ್ಲಿ ಪ್ರತಿಯೊಂದು ಸಲ ಮಾಧವಿಯ ಹುಚ್ಚು ಭಾವನೆಗಳನ್ನು ತೋರಿಸುವಾಗಲೂ ನಿರ್ದೇಶಕ ಕೇಶವನ ಶಾಂತ ಚಿತ್ತ ಹಾಗೂ ಕಲ್ಮಶವಿಲ್ಲದ ಮನಸ್ಸನ್ನೂ ಕೂಡ ಅತ್ಯಂತ ಸೂಕ್ಷ್ಮವಾಗಿ ತೋರಿಸಿದ್ದಾರೆ. ತೀರಾ ತಳಮಳಗೊಂಡು ಮಧ್ಯ ರಾತ್ರಿ ನಿದ್ದೆ ಬಾರದೆ ಕೇಶವ, ಸ್ನೇಹಿತ ಡಾ ಜನಾರಿಗೆ ಕರೆಮಾಡಿದಾಗ, ಅವರು ತಮ್ಮ ತಂದೆಯ ಶಾದ್ಧ ಕರ್ಮ ನೆರವೇರಿಸಲು ಹೊರಟಿರುತ್ತಾರೆ. ಅದರಲ್ಲಿ ನಂಬಿಕೆಯೇ ಇಲ್ಲದಿದ್ದ ಡಾಕ್ಟರೂ ಕೂಡ ಇದನ್ನೆಲ್ಲಾ ಮಾಡುವುದನ್ನು ಕಂಡು ಕೇಶವ ಉದ್ವೇಗಗೊಳ್ಳುತ್ತಾನೆ. ಕೆಲವು ಕೆಲಸಗಳನ್ನು ಕೆಲವು ಕಾರಣಗಳಿಗೋಸ್ಕರ ಮಾಡಲೇ ಬೇಕಾಗುತ್ತದೆ ಮತ್ತು ಉತ್ತರ ಸಿಗದಿರುವ ಕೆಲವು ಪ್ರಶ್ನೆಗಳನ್ನು ಬಿಟ್ಟು ಬಿಡುವುದೇ ಮೇಲು ಎಂದುತ್ತರ ಕೊಡುವ ಸ್ನೇಹಿತನ ಮಾತುಗಳು ಕೇಶವನನ್ನು, ಮೈಯ ನೀರೆಲ್ಲ ಸೋರಿಹೋಗಿ, ಆಯಾಸಗೊಳ್ಳುವಂತೆ ಮಾಡುತ್ತದೆ. ೧೫ ವರ್ಷದ ಹಿಂದೆ ಸತ್ತ ತನ್ನ ತಂದೆಗೆ ಶ್ರಾದ್ಧ ಕರ್ಮಗಳನ್ನು ಮಾಡಬೇಕಿತ್ತೆಂದು ಬೇರಸಗೊಳ್ಳುತ್ತಾನೆ.

ಇರಾನಿಗೆ ಹೊರಟು ಹೋಗುವ ಮೊದಲು ಕೊನೆಯ ಬಾರಿಗೆ ತನ್ನನ್ನು ಭೇಟಿ ಮಾಡಲು ಬಂದಿದ್ದ ನವಾಳನ್ನು ಹಾಗೇ ವಾಪಸ್ಸು ಕಳಿಸಿಬಿಡುವ ಮಾಧವಿಯ ಹುಚ್ಚು ಮನಸ್ಸು, ಕೇಶವನಿಗೆ ಮನೆಯ ಹೊರಗಡೆ ಮುದುರಿ ಬಿಸುಟಿದ್ದ, ನವಾಳ ಕಾಗದದಿಂದ ತಿಳಿಯುತ್ತದೆ. ಬೇಸರಗೊಂಡು ಮಾಧವಿಯನ್ನು ಪ್ರಶ್ನಿಸಿದಾಗ, ತನಗೂ ನವಾಗೂ ಸಂಬಂಧ ಕಲ್ಪಿಸಿ ಕೀಳಾಗಿ ಮಾತನಾಡುವ ಮಾಧವಿಯ ಭಾವನೆಗಳ ತೀವ್ರತೆ ತಡೆದುಕೊಳ್ಳಲಾರದೆ, ತತ್ತರಿಸುತ್ತಾನೆ. ಯಾವುದೇ ಕಾರಣಕ್ಕೂ ತನ್ನನ್ನು ಹುಡುಕಿಕೊಂಡು ಹಿಂದೆ ಬರಬಾರದೆಂದು ಚೀಟಿ ಬರೆದಿಟ್ಟು, ಮನೆ ಬಿಟ್ಟು ಹೊರಟು ಹೋಗುತ್ತಾನೆ....

ತಂದೆಯ ನಿರ್ಗಮನದಿಂದ ತೀವ್ರವಾಗಿ ನೊಂದ ಮಾಧವಿ ಡಾ ಜನಾರ ಹತ್ತಿರ ಬಂದಾಗ, ಅವರು ಅವಳ ಭಾವನೆಗಳ ತೀವ್ರತೆಯ ಬಗ್ಗೆ ವಿವರಿಸಿ, ಖಂಡಿಸುತ್ತಾರೆ. ವಿವೇಕವೆಂಬ ಸೂರ್ಯನ ಕಿರಣಗಳ ಮುಂದೆ ಯಾವ ತರಹದ ಭಾವೋದ್ವೇಗಗಳೂ ಕತ್ತಲೆಯಲ್ಲಿ ಉಳಿಯಲು ಸಾಧ್ಯವಿಲ್ಲವೆಂದು ಉಪದೇಶಿಸುತ್ತಾರೆ. ಮನೆಗ ಬಂದ ಮಾಧವಿಗೆ ಗಂಡ ವಿಭಿನ್ ಅವಳು ತನ್ನನ್ನೂ ಕಳೆದುಕೊಳ್ಳುವ ಮೊದಲು, ಪರಿವರ್ತನೆಗೊಳ್ಳಲು ಸಹಾಯ ಮಾಡುವುದಾಗಿ ಹೇಳುತ್ತಾನೆ.

ಎಂಟು ವರ್ಷಗಳ ನಂತರ ಗಂಡನಿಂದ ಬೇರೆಯಾದ, ಹೆಣ್ಣು ಮಗುವಿನ ತಾಯಿಯಾಗಿ, ಕಾಲೇಜಿನಲ್ಲಿ ಅಧ್ಯಾಪಕಿಯಾದ ಮಾಧವಿಯ ಪುನರ್ಪವೇಶವಾಗುತ್ತದೆ. ಸ್ನಾನದ ತೊಟ್ಟಿಯಲ್ಲಿ ಕಾಗದದ ದೋಣಿ ಬಿಡುವ ಮಾಧವಿಯ ಮಗಳು ರಚನಾಳ ಮೂಲಕ, ಜೀವನದ ದೋಣಿ ತೇಲಿ ಮುಂದೆ ಬಂದಿದೆಯೆಂದೂ, ಮಾಧವಿಯ ಮುಂದಿನ ಬಾಳಿನಲ್ಲಿ ಈ ದೋಣಿಯೇ ಮುಖ್ಯ ನಿರ್ಧಾರಗಳ ನೆಲೆಯಾಗುತ್ತದೆಂದೂ ತೋರಿಸಲಾಗಿದೆ. ಇರಾನ್ ನಿಂದ ತಿರುಗಿ ಬರುವ ನವಾ ತನ್ನ ಗುರುಗಳನ್ನು ಕಾಣದೆ, ನೊಂದುಕೊಳ್ಳುತ್ತಾಳೆ. ಕೇಶವ ಹೆಂಡತಿಯ ನೆನಪಿಗೆಂದು ಇಟ್ಟುಕೊಂಡಿದ್ದ ನಿಂತು ಹೋಗಿದ್ದ ಗಡಿಯಾರವನ್ನು ರಿಪೇರಿ ಮಾಡಿಸಿ, ತಂದಿರುತ್ತಾಳೆ. ನವಾಳ ಹತ್ತಿರ ಮಾಧವಿ ತನ್ನ ತಪ್ಪು ಕಲ್ಪನೆಗಾಗಿ ಕ್ಷಮೆಯಾಚಿಸುತ್ತಾಳೆ. ನವಾಳ ನಿರ್ಗಮನದ ನಂತರ, ಪತ್ರಿಕೆಯಲ್ಲಿ ಬಂದ ಒಂದು ವಿಭಿನ್ನ ವರದಿಯು ಮಾಧವಿಯ ಕಣ್ಸೆಳೆಯುತ್ತದೆ. ವಾರಣಾಸಿಯಲ್ಲಿ ಮುಕ್ತಿ ಬಯಸಿದವರಿಗೆ ಜಾಗ ಕೊಡಲಾಗುತ್ತದೆಂದೂ - ಅಕಸ್ಮಾತ್ ೧೫ ದಿನದಲ್ಲಿ ಸಾಯದಿದ್ದರೆ, ಕೋಣೆ ಖಾಲಿ ಮಾಡಬೇಕೆಂದೂ ಬರೆದಿರುತ್ತದೆ. ಸಾಯುವ ಸಮಯದಲ್ಲಿ ವಾರಣಾಸಿಯಲ್ಲಿದ್ದರೆ, ಈಶ್ವರ ಸ್ವತ: ತಾರಕ ಮಂತ್ರವನ್ನು ಸಾಯುವವರ ಕಿವಿಯಲ್ಲಿ ಹೇಳುತ್ತಾನೆಂಬ ನಂಬಿಕೆಯಿಂದ ಜನ ಈ ಮುಕ್ತಿಧಾಮಕ್ಕೆ ಬರುತ್ತಿರುತ್ತಾರೆ... ಅಲ್ಲಿ ಮಲಗಿದ್ದ ವೃದ್ಧನ ಹಿಂದಿನ ಗೋಡೆಯ ಮೇಲಿನ ಈಶ್ವರನ ಮೈಸೂರು ಶೈಲಿಯ ಚಿತ್ರಕಲೆಯನ್ನು ನೋಡಿ ಮಾಧವಿ ಅದು ತನ್ನ ತಂದೆಯದೇ ಕಲೆಯೆಂದು ಗುರುತಿಸುತ್ತಾಳೆ ಹಾಗೂ ತಂದೆಯನ್ನು ಹುಡುಕಲು ಹೋಗುತ್ತಾಳೆ. ವಾರಣಾಸಿಯಲ್ಲಿ ಉರಿಯುವ ಚಿತೆಯನ್ನು ಮೊದಲ ಬಾರಿಗೆ ಕಂಡು, ಮಗು ರಚನಾ ಹೆದರುತ್ತಾಳೆ. ಮೋಕ್ಷ ಎಂದರೇನು ? ಮುಕ್ತಿ ಎಂದರೇನು ಎಂಬಂಥ ಪ್ರಶ್ನೆಗಳನ್ನು ಕೇಳುತ್ತಾಳೆ. ೧೩೦೦೦ ಜನರಿಗೆ ಮುಕ್ತಿ ಸಿಗುವುದನ್ನು ನೋಡಿದ್ದೇನೆನ್ನುವ ರಾಮ ನಾರಾಯಣ ಶರ್ಮ, ದಿನಕ್ಕೊಂದೇ ಒಂದು ಮಾತನಾಡುವ ಮುದುಕ, ಪ್ರೀತಿ ವ್ಯಾಮೋಹ ಆಗಿದ್ದು, ತಾನು ನಿರ್ಗತಿಕನಾದ ನಂತರ ತಿಳಿದು, ಕಾಶಿಗೆ ಬಂದಿದ್ದ ಇನ್ನೊಬ್ಬ ವೃಧ್ಧ, ಪ್ರೀತೀನೇ ಬೇರೆ ವ್ಯಾಮೋಹಾನೇ ಬೇರೆನ್ನುತ್ತಾನೆ. ಸಾಮ್ಯತೆ ಇಲ್ಲದ ತನ್ನವೇ ಆದ ವಿಚಾರಗಳನ್ನು ಹೇಳುವಂತಹ ವಿಭಿನ್ನ ಪಾತ್ರಗಳು..... ಮಗುವಿನ ಹೆಣ ಜಲಸಮಾಧಿ ಮಾಡುವುದನ್ನು ನೋಡಿ ರಚನಾ ಹೆದರಿ ಕಾಗದದ ದೋಣಿಯೇ ಚೆನ್ನ, ನಿಜವಾದ್ದು ಬೇಡವೆನ್ನುತ್ತಾಳೆ.

ಈ ಮಧ್ಯದಲ್ಲಿ ಗಂಗೆಯ ತಟದಲ್ಲಿ ಕುಳಿತು ದಿನವೂ ವೀಕ್ಷಿಸುತ್ತಿದ್ದ ರಚನಾ ತನಗರಿಯದಂತೆಯೇ ಕೇಶವನನ್ನು ಆಕರ್ಷಿಸಿ, ಸ್ನೇಹ ಬೆಳೆಸಿಕೊಳ್ಳುತ್ತಾಳೆ. ಸತ್ತ ಮೇಲೆ ನಾವೆಲ್ಲಾ ಎಲ್ಲಿಗೋಗ್ತೀವಿ ಎಂದು ಕೇಳುತ್ತಾಳೆ. ಯಾರೂ ಬಂದು ಹೇಳಿಲ್ಲವೆಂದಾಗ, ತಾತನಿಗೆ ನೀನು ಬಂದು ನಂಗೆ ಹೇಳ್ತೀನಿ ಅಂತ ಮಾತುಕೊಡು ಎನ್ನುತ್ತಾಳೆ. ಈ ಕಡೆ ಮಾಧವಿ ಕಾಶಿಯ ಎಲ್ಲಾ ಘಾಟಗಳಲ್ಲೂ ತಂದೆಯನ್ನು ಹುಡುಕಿಕೊಂಡು ಅಲೆಯುತ್ತಿದ್ದರೆ, ಆ ಕಡೆ ಗಂಗೆಯ ತಟದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ರಚನಾ ತಾತನ ಜೊತೆ ಹರಟುತ್ತಿರುತ್ತಾಳೆ.......ಕೈಗೆಟುಕಿದ್ದಾಗ ಕಳೆದುಕೊಂಡು, ಹುಡುಕಿ ಅಲೆದರೆ ಸಿಗುವುದಿಲ್ಲವೆಂದು ಮಾಧವಿ ಹಾಗೂ ರಚನಾಳ ಪಾತ್ರಗಳ ಮೂಲಕ ಪ್ರೇಕ್ಷಕ ಅರ್ಥೈಸಿಕೊಳ್ಳುವುದು ಅನಿವಾರ್ಯವಾಗಿ ಚಿತ್ರಿಸಲ್ಪಟ್ಟಿದೆ........

"ಆಕಾಶ ಇಲ್ಲಾನ್ನೋಕಾಗೋಲ್ಲ ಆದರೆ ಅದನ್ನು ಮುಟ್ಟೋಕೂ ಆಗೊಲ್ಲ. ಮನುಷ್ಯ ಸಂಬಂಧಗಳೂ ಅದೇ ರೀತಿ. ಇಲ್ಲದ್ದನ್ನು ಇದೇಂತ ಭಾವಿಸಿಕೊಂಡು ಬದುಕೋದು, ಅದಿಕ್ಕೇ ನೋವು / ಯಾತನೆ / ಕೊನೆಯಿಲ್ಲದ ಹುಡುಕಾಟ ಅನುಭವಿಸುವುದು" ಎಂದು ತನ್ನ ತಂದೆಯೇ ಆ ಶಾಸ್ತ್ರಿಗಳಿಗೆ ಹೇಳಿದ್ದರೆಂದು ತಿಳಿದು ಮಾಧವಿಯ ಕಣ್ಣುಗಳು ಕೊಳವಾಗತ್ತೆ. ನೀರಿನಲ್ಲಿ ತೇಲುತ್ತಿದ್ದ ಹೂವು ತೆಗೆದುಕೊಳ್ಳಲು ಹೋಗಿ ರಚನಾ ಕಾಲು ಜಾರುತ್ತಾಳೆ. ವಿಷಯ ತಿಳಿದು ಮಾಧವಿ ಓಡಿ ಬರುವಷ್ಟರಲ್ಲಿ ರಚನಾ ತನ್ನ ಕೈಯಲ್ಲಿ ಹೂವು ಹಿಡಿದು ಮೆಟ್ಟಿಲುಗಳಲ್ಲಿ ಕುಳಿತಿರುತ್ತಾಳೆ. ಮಾಧವಿ ಕೇಳಿದಾಗ ತಾತ ತನ್ನನ್ನು ಮೇಲೆತ್ತಿದರು ಎನ್ನುತ್ತಾಳೆ ಮತ್ತು ಮಾಧವಿಯ ಬ್ಯಾಗು ಕಳೆದುಹೋದಾಗ, ಅದರಲ್ಲಿದ್ದ ಅದೇ ಹಳೆಯ ಗಡಿಯಾರವನ್ನು ಮಾಧವಿಯ ಕೈಯಲ್ಲಿಟ್ಟು ಹೇಳುತ್ತಾಳೆ - ತಾತ ಹೇಳಿದರು, ಅವರು ಇನ್ನೆಂದೂ ಮತ್ತೆ ಸಿಗುವುದಿಲ್ಲವಂತೆ ಎಂದು. ರಚನಾ ಕೈ ತೋರಿದ ಕಡೆ ನೋಡಿದಾಗ ದೂರದಲ್ಲಿ ನದಿ ಮಧ್ಯದಲ್ಲಿ ದೋಣಿಯಲ್ಲಿ ನೀತು ಕೇಶವ ಮಾಧವಿಯ ಕಡೆಗೆ ತಿರುಗಿಯೂ ನೋಡದೇ ಹೊರಟು ಹೋಗುತ್ತಿರುತ್ತಾನೆ. ಮಗಳಿಗೆ ಕ್ಷಮೆ ಕೇಳುವ ಒಂದು ಅವಕಾಶವನ್ನೂ ಕೊಡುವುದಿಲ್ಲ. ತಂದೆ ಸಿಕ್ಕೂ ಸಿಗದಿದ್ದಾಗ ಮಾಧವಿಗೆ ವಾಸ್ತವ ಅರ್ಥವಾಗಿ ತನ್ನ ಮಗಳ ಕೈಯಲ್ಲಿ ಅವಳ ತಂದೆಗೆ (ತನ್ನ ಗಂಡನಿಗೆ) ಕರೆ ಮಾಡಿಸುತ್ತಾಳೆ.

ಚಿತ್ರಕಥೆ ಎಲ್ಲೂ ಅನವಶ್ಯಕವಾಗಿ ಎಳೆಯದೆ, ಚಿಕ್ಕ - ಚೊಕ್ಕವಾಗಿ ಹೇಳಲ್ಪಟ್ಟಿದೆ. ಲಕ್ಷ್ಮೀಪತೆ ಕೋಲಾರ ಅವರ ಚುರುಕುತನ ಕಥೆಯಲ್ಲಿ ಕಾಣುತ್ತದೆ ಮತ್ತು ಇಷ್ಟವಾಗುತ್ತದೆ. ಎಷ್ಟೋ ವಿಷಯಗಳನ್ನು ಹೇಳದೆಯೇ ಹೇಳಿಬಿಡುತ್ತಾರೆ. ಸನ್ನಿವೇಶಗಳೂ, ಪಾತ್ರಗಳೂ ತಾವೇ ತಾವಾಗಿ ಕಥೆಯನ್ನು ಹೆಣೆಯುತ್ತಾ ಹೋಗುತ್ತವೆ. ಅರ್ಥವತ್ತಾದ ಸಂಭಾಷಣೆಗಳು ಅತ್ಯಂತ ಮಾರ್ಮಿಕವಾಗಿ, ಸೂಕ್ತವಾಗಿ ಹೇಳಲ್ಪಟ್ಟಿವೆ. ಪ್ರವೀಣ್ ಗೋಡ್ಕಿಂಡಿಯವರ ಸಂಗೀತ ಇಂಪಾಗಿದೆ, ಮಧುರವಾಗಿದೆ. ರಾಮಚಂದ್ರ ಅಹಿಯಾಳರ ಸಿನಿಮಟೋಗ್ರಾಫಿ ಅದ್ಭುತವಾಗಿದೆ. ತುಂಬಿ ಹರಿಯುವ ನದಿ, ಸೇತುವೆ, ಸ್ಮಶಾನ ಘಟ್ಟ, ದೋಣಿ ಎಲ್ಲವನ್ನೂ ನಮ್ಮ ಜೀವನಕ್ಕೆ ಹೊಂದಿಸಿ ಅತ್ಯಂತ ಅರ್ಥಗರ್ಭಿತವಾಗಿ ತೋರಿಸಿದ್ದಾರೆ. ಎಲ್ಲರ / ಎಲ್ಲದರ ಜೊತೆಗೂ ಇದ್ದೂ, ವ್ಯಾಮೋಹ ಬೆಳೆಸಿಕೊಳ್ಳದೇ ಕಮಲದ ದಳದಮೇಲಿನ ನೀರಿನಂತಿರಬೇಕೆಂಬುದು ಸಂದೇಶ......

ಕೊನೆಯದಾಗಿ ಪಿ ಶೇಷಾದ್ರಿಯವರ ನಿರ್ದೇಶನ ಅತ್ಯಂತ ಯಶಸ್ವಿಯಾಗಿದೆ. ಎಲ್ಲೂ ಒಂದರೆ ಘಳಿಗೆಯೂ ಬೇಸರವಾಗದಂತೆ ನಿರೂಪಿಸಿದ್ದಾರೆ. ರ‍ಾಮಕೃಷ್ಣರ ನಟನೆ ಅಮೋಘವಾಗಿದೆ. ಭಾವನಾ ರಾಮ ಕೃಷ್ಣರ ಎದುರು ಸ್ವಲ್ಪ ಸಪ್ಪೆ ಎನಿಸಿದರೂ ಕೂಡ ಲವಲವಿಕೆಯ ಮಾತುಗಳಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಅಂತ್ಯ ಅತ್ಯಂತ ಭಾವುಕವಾಗಿ, ಅರ್ಥವತ್ತಾಗಿ, ಸುಂದರವಾಗಿ ಚಿತ್ರಿಸಲ್ಪಟ್ಟಿದೆ. ಭಾವನಾ ತಂದೆಯ ಪ್ರೀತಿಯನ್ನೂ ಪಡೆದುಕೊಳ್ಳುತ್ತಾಳೆ ಮತ್ತು ತನ್ನನ್ನು ತಾನು ಆ ಭಾವನೆಗಳ ತೀವ್ರತೆಯಿಂದ... Electra Complexನಿಂದ ಹೊರತರುವುದರಲ್ಲೂ ಯಶಸ್ವಿಯಾಗುತ್ತಾಳೆ.... ಮಗಳಿಗೆ ತಂದೆಯ ಪ್ರೀತಿ ದಕ್ಕುವಂತೆ ಮಾಡುತ್ತಾಳೆ. ಮಾಧವಿ ತಂದೆಯನ್ನು ಕಳೆದುಕೊಂಡೂ, ಜೀವನವನ್ನೂ ತಂದೆಯ ಪ್ರೀತಿಯನ್ನೂ ಮರಳಿ ಪಡೆದುಕೊಳ್ಳುತ್ತಾಳೆ. ಕೊನೆಗೂ ತನ್ನ ಮಗಳಿಗೆ ತಂದೆಯ ಪ್ರೀತಿ ದಕ್ಕುವಂತೆ ಮಾಡುತ್ತಾಳೆ...... ತುಂಬಾ ದಿನಗಳ ನಂತರ ನೋಡಿದ ಒಂದು ಅತ್ಯುತ್ತಮ ಚಿತ್ರ....

Thursday, April 29, 2010

ಬಯಕೆ........

ಮನೆಯಲ್ಲಿ ಸಡಗರ.....
ಮನದಲ್ಲಿ ದುಗುಡ.......


’ಬಯಕೆ’ ಕವನವನ್ನು ಓದಿದಾಗ ನನ್ನ ಮನಸ್ಸಿಗೆ ಬಂದ ಭಾವನೆಗಳು ನೂರಾರು.... ಸಾವಿರಾರು.... ವರ್ಣಿಸಲಸಾಧ್ಯವಾದ..... ಅಲೌಕಿಕವಾದ ಆನಂದ ಅನುಭವಿಸಿದೆ.... ನನ್ನ ಮನಸ್ಸಿಗೆ ತೋಚಿದ್ದು ಕೆಲವು ಮಾತುಗಳಲ್ಲಿ....

ಕವಿ "ಬಯಕೆ" ಕವನದಲ್ಲಿ ಎಷ್ಟು ನವಿರಾಗಿ ತನ್ನ ಪತ್ನಿಯ ಸೀಮಂತನವನ್ನು ಮೈದುಂಬಿ, ಮನದುಂಬಿ, ಭಾವ ಪರವಶತೆಯಿಂದ ನೋಡುತ್ತಾನೆಂಬುದನ್ನು ಚಿತ್ರಿಸಿದ್ದಾರೆ..... ಮನೆಯ ತುಂಬಾ ಸೇರಿರುವ ಜನ, ಆಪ್ತರು, ಬಂಧು - ಬಾಂಧವರು, ಸಡಗರದಿಂದ ಓಡಾಡುತ್ತಾ ಸಿದ್ಧತೆಗಳನ್ನು ಮಾಡುತ್ತಿದ್ದಾರೆ..... ತಳಿರು ತೋರಣದಿಂದ ಸಿಂಗರಿಸಲ್ಪಟ್ಟ ಮನೆ.... ಇಡೀ ವಾತಾವರಣವೇ ಅತ್ಯಂತ electrifying ಆಗಿರುವಾಗ..... ಪತಿಯ ಮನದಲ್ಲೇನೋ ದುಗುಡ.. ಮೋಡ ಕವಿದಂತಿದೆಯೇಕೋ..... ಮಡದಿಯ ತೀರಿಸದೆ ಉಳಿದ ಬಯಕೆಯೇನಾದರೂ ಇರಬಹುದೇ ಎಂಬ ಯೋಚನೆಯೇ.... ಇಂದಿನ ಶುಭಗಳಿಗೆಯಲ್ಲಿ ಮನದನ್ನೆಗೆ ಪ್ರೇಮದಿಂದ ಇನ್ನೇನಾದರೂ ಪರಿಸು ಕೊಡಬೇಕೆನ್ನುವ ಆಲೋಚನೆಯೇ.... ಏನೋ ಅಂತೂ ಪತಿಯ ಮುಖ ದುಗುಡದಿಂದ ಕೂಡಿದೆ... ಏಕೋ...

ಶ್ರೀಮತಿಗೆ ಸೀಮಂತನ...
ಹಸಿರು ಸೀರೆಯನುಟ್ಟು...
ಕುಸುರಿ ರವಿಕೆಯ ತೊಟ್ಟ...
ಬಸಿರಿ ಮನದನ್ನೆಗೆ....


ಶ್ರೀಮತಿಯ ಸೌಂದರ್ಯ ಶುಭ-ಮಂಗಳ ಸೂಚಕ ಹಸಿರು ಸೀರೆಯಿಂದ ನೂರ್ಮಡಿಸಿದೆ.... ಗೋಧಿ ಮೈ ಬಣ್ಣಕ್ಕೊಪ್ಪುವ ಕುಸುರಿ ಕೆಲಸ ಮಾಡಿದ ರವಿಕೆಯ ತೊಟ್ಟು, ಅಭ್ಯಂಗನ ಸ್ನಾನದಿಂದ ಮುಂಗುರುಳುಗಳು ಕೆದರಿ ಹಾರಾಡುತ್ತಾ, ಅರಿಸಿನ ಬಳಿದ ಕೆನ್ನೆಗಳನ್ನು ಮುತ್ತಿಡುತ್ತಾ... ಕಿವಿಯ ಝುಮುಕಿಯೊಂದಿಗೆ ಸ್ಪರ್ಧೆಗೆ ಇಳಿದಿವೆ.... ಮುಡಿಯ ತುಂಬಿದ ಮಲ್ಲಿಗೆಯ ಘಮ, ನೆತ್ತಿಯನ್ನಲಂಕರಿಸಿದ ದೇವರ ಪ್ರಸಾದದ ಕುಂಕುಮ, ಎರಡೂ ಕೈಗಳಲ್ಲೂ ಸುವಾಸಿನಿಯರು ಹರಸಿ ತೊಡಿಸಿದ ಹಸಿರು ಬಳೆಗಳು.... ಮುದ್ದಿನ ಮನ ಮೆಚ್ಚಿದ ಮಡದಿಯಿಂದ ನೋಟ ಕೀಳಲಾಗದೇ, ಕಡೆದ ಶಿಲ್ಪದಂತೆ ನಿಂತ ಪತಿಯನ್ನು ಕಂಡು ನಸು ನಾಚಿದ ತುಂಬಿದ ಬಸುರಿ....

ತುಸು ಸಮಯ ಸಾಧಿಸಿ...
ಪಿಸು ಮಾತಿನಲಿ...
ಬಯಕೆಯದೇನೆಂದು ಕೇಳೆ...


ಸಮಯ ಸಾಧಿಸಿ ಎಂಬ ಸಾಲು ಇಲ್ಲಿ ಪತಿ ಎಷ್ಟು ಕಾತುರದಿಂದ ತುಸುವೇ ತುಸು ಏಕಾಂತಕ್ಕಾಗಿ ಹಂಬಲಿಸುತ್ತಿದ್ದ ಎಂಬುದು ಮನದಟ್ಟು ಮಾಡಿಸುತ್ತೆ... ಸಿಕ್ಕ ಕೆಲವೇ ಕ್ಷಣಗಳ ಏಕಾಂತವನ್ನು ಬಿಡದೇ, ಉಪಯೋಗಿಸಿಕೊಂಡು, ಕಾತುರದಿಂದ, ಆಸೆಯಿಂದ... ಅತ್ತಿತ್ತ ನೋಡುತ್ತಾ, ತನ್ನನ್ನು ಯಾರೂ ಗಮನಿಸಿಲ್ಲವೆಂದು ಖಾತ್ರಿ ಮಾಡಿಕೊಳ್ಳುತ್ತಾ... ಮಡದಿಯ ಬಳಿ ಸಾರಿ... ಏಕಾಂತವಿದ್ದರೂ ಯಾರಿಗಾದರೂ ಕೇಳಿಸೀತೋ ಎಂಬ ಅಂಜಿಕೆಯಿಂದ... ಸ್ವಲ್ಪವೇ ಬಾಗಿ, ನೆತ್ತಿಯ ಘಮ ಆಸ್ವಾದಿಸುತ್ತಾ... ಪಿಸು ಮಾತಿನಲಿ, ಪ್ರಿಯೆ ಹೇಳು... ಏನು ನಿನ್ನ ಬಯಕೆಯೆಂದು, ಆಪ್ಯಾಯಮಾನವಾಗಿ ಕೇಳುವಾಗ....

ಮಡದಿಯ ಬಸಿರು, ಸೀಮಂತನ ಎಲ್ಲರ ಜೀವನದಲ್ಲೂ ನಡೆಯುವ ಒಂದು ಅತಿ ಮುಖ್ಯ ಸನ್ನಿವೇಶ. ಆದರೆ ಅದು ಎಲ್ಲರಿಗೂ ಒಂದೇ ತರಹದ ಅನುಭವ ಆಗಿರುವುದಿಲ್ಲ.... ಪ್ರೇಮಿಸಿ ಮದುವೆ ಮಾಡಿಕೊಂಡಾಗ, ಹೆತ್ತವರ ವಿರುದ್ಧ ನಿರ್ಣಯ ತೆಗೆದುಕೊಂಡಾಗ, ಎಷ್ಟೋ ಸನ್ನಿವೇಶಗಳಲ್ಲಿ ಸೀಮಂತನ ನಡೆಯುವುದೇ ಇಲ್ಲವೇನೋ...... ನಡೆದರೂ ಹೆತ್ತವರು ಭಾಗವಹಿಸದೆ ನೀರಸವಾಗಿಯೂ ಆಗಿರಬಹುದು......ಪತಿ ಮತ್ತು ಆತನ ಮನೆಯವರು ಮುನಿಸಿಕೊಂಡು ಸೀಮಂತನಕ್ಕೆ ಬರದೆಯೂ ಇರಬಹುದು... ನಾವು "ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹನು.. ಒಳಗೆ ಬರಲಪ್ಪಣೆಯೇ ದೊರೆಯೇ..." ಕವನದಲ್ಲಿ ಮಡದಿಯ ಆತಂಕ, ದುಗುಡಗಳನ್ನು ಚಿತ್ರಿಸಿರುವುದನ್ನು ನೆನಪಿಸಿಕೊಳ್ಳಬಹುದು....... ಆದರೆ ಇಲ್ಲಿ ಕವಿ ಅತ್ಯಂತ ಸುಂದರವಾದ ಒಂದು ಸನ್ನಿವೇಶವನ್ನು ಶಬ್ದಗಳಲ್ಲಿ ಹಿಡಿದಿಟ್ಟಿದ್ದಾರೆ.....

ಪತಿಯ ಸಾನಿಧ್ಯದಿಂದ ನಸು ನಾಚಿ ಕುಳಿತಿದ್ದ ಮಡದಿ, ಪಿಸುಮಾತ ಕೇಳಿ ತುಸು ಅಚ್ಚರಿಯಿಂದಲೇ ಮೊಗವೆತ್ತಿ ಪತಿಯನ್ನು ದಿಟ್ಟಿಸುತ್ತಾಳೆ.... ಮೆಲುದನಿಯಲ್ಲಿ...

ಬಯಕೆಯಿದೆ ದೊರೆಯೇ....
ಅದು ನಿಮ್ಮ ಬಾಯಿ ತುಂಬಾ ಹರಕೆ.....


ಎಂದುಸುರುತ್ತಾಳೆ... ಹಾಲು ಸಕ್ಕರೆಯಂತೆ ಬೆರೆತ ಎರಡು ಜೀವಗಳು, ತುಂಬು ಅಭಿಮಾನ - ಪ್ರೀತಿಯಿಂದ ಒಂದಾದ...... ರಸಘಳಿಗೆಗಳನ್ನು ಹಂಚಿಕೊಂಡು ಒಂದೇ ಜೀವವಾದ ಎರಡು ತನುಗಳು... ಒಬ್ಬರನ್ನೊಬ್ಬರು ದಿಟ್ಟಿಸುವಾಗ.....

ಭಾವನೆಗಳು ಉಮ್ಮಳಿಸಿದ.....

ಭಾವಾವೇಶದ ಮಹಾಪೂರದಲ್ಲಿ ತೇಲುತ್ತಾರೆ... ತಾಯ್ತನದ ಭಾರ ಹೊತ್ತ ಮಡದಿ ಧನ್ಯತೆಯ ಭಾವದಿಂದಲೂ, ತನ್ನನ್ನು ತಂದೆಯ ಪಟ್ಟಕ್ಕೇರಿಸುವ ಪುಟ್ಟ ಜೀವದ ನಿರೀಕ್ಷೆಯ ಕ್ಷಣಗಳಲ್ಲಿ ಪತಿಯೂ.... ಇಬ್ಬರೂ ತಮ್ಮ ಬದುಕಿನ ಸಾರ್ಥಕ ಕ್ಷಣಗಳಿಗಾಗಿ, ಭವಿಷ್ಯದ ಕನಸಿಗಾಗಿ, ಧನ್ಯವಾದಗಳನ್ನರ್ಪಿಸಿ ಕೊಳ್ಳುವಂತೆ... ಕಣ್ಣಲ್ಲಿ ಕಣ್ಣಿಟ್ಟು ನೋಟ ನೆಟ್ಟಾಗ, ಕಾಲದ ಪರಿವೆಯ ಅರಿವು ಇಬ್ಬರಿಗೂ ಇರುವುದಿಲ್ಲ....

ಬಟ್ಟಲು ಕಣ್ಣಾಲಿಗಳ ತುಂಬಾ....
ನನ್ನದೇ ಪ್ರತಿಬಿಂಬ......


ಮಡದಿಯ ಬಟ್ಟಲು ಕಣ್ಗಳಲ್ಲಿ ಪಸರಿದ್ದ ತೆಳು ನೀರಿನ ಪರೆಯಲ್ಲಿ..... ಪತಿ ತನ್ನದೇ ಪ್ರತಿಬಿಂಬ ಕಂಡು ಸಂತೋಷ್, ತೃಪ್ತಿ, ಸಂಭ್ರಮದಿಂದ ನಸು ನಗುತ್ತಾನೆ......

ಕೊನೆಯ ಎರಡು ಸಾಲುಗಳು ನನಗೆ ಬಹಳ ಇಷ್ಟವಾಯಿತು... ಕವನದ ಜೀವವೇ ಎರಡು ಸಾಲುಗಳಲ್ಲಿದೆಯೆಂದು ಅನ್ನಿಸಿತು... ಒಲವಿನ ಮಹಾಪೂರ ಹರಿಯುವಾಗ, ಮಡದಿಯ ಕಣ್ಗಳಲ್ಲಿ ತನ್ನದೇ ಪ್ರತಿಬಿಂಬ ಕಾಣುವ ಪತಿ..... ದಾಂಪತ್ಯ ಜೀವನದಲ್ಲಿ ತಾವಿಬ್ಬರೂ ಒಬ್ಬರ ಕಣ್ಣಲ್ಲಿ ಇನ್ನೊಬ್ಬರ ಪ್ರತಿಬಿಂಬದಂತೆ ಬಾಳುವೆವೆಂಬ ಸಂಕೇತ ಅನ್ನಿಸಿತು... ಪರಸ್ಪರ ಅರಿತು, ಭಿನ್ನಾಭಿಪ್ರಾಯಗಳಿಲ್ಲದಂತೆ ಬಾಳ್ವೆ ಮಾಡುವ ಜೋಡಿಯಿದೆಂದೂ.. ಕವನ ಓದುವ ನವ ದಂಪತಿಗಳ ಮನದಲ್ಲೂ.... ಪ್ರೀತಿಸುವ ಪ್ರತಿ ಹೃದಯದಲ್ಲೂ ಆಸೆ ಮೂಡಿಸುವಂತೆ..... ಆಪ್ತವಾಗಿದೆ. ಸರಳ ಪದಗಳ ಜೋಡಣೆ, ಕವನವನ್ನು ಓದಿದ ಪ್ರತಿಯೊಬ್ಬರಿಗೂ... ತಮ್ಮದೇ ಸ್ವಂತ ಎನ್ನುವ ಒಂದು ಭಾವನೆ ಮೂಡಿಸುತ್ತದೆ.....
-------------------------------------------
ಬಯಕೆ - ಒಂದು ಗುಕ್ಕಿನಲ್ಲಿ :
ಮನೆಯಲ್ಲಿ ಸಡಗರ.....
ಮನದಲ್ಲಿ ದುಗುಡ.......

ಶ್ರೀಮತಿಗೆ
ಸೀಮಂತನ...
ಹಸಿರು ಸೀರೆಯನುಟ್ಟು...
ಕುಸುರಿ ರವಿಕೆಯ ತೊಟ್ಟ...
ಬಸಿರಿ ಮನದನ್ನೆಗೆ....

ತುಸು
ಸಮಯ ಸಾಧಿಸಿ...
ಪಿಸು ಮಾತಿನಲಿ...
ಬಯಕೆಯದೇನೆಂದು ಕೇಳೆ...

ಉಸುರಿದಳು ಮುದ್ದಿನ ಮಡದಿ....
ಬಯಕೆಯಿದೆ ದೊರೆಯೇ....
ಅದು ನಿಮ್ಮ ಬಾಯಿ ತುಂಬಾ ಹರಕೆ.....

ಭಾವನೆಗಳು
ಉಮ್ಮಳಿಸಿದ.....

ಬಟ್ಟಲು ಕಣ್ಣಾಲಿಗಳ ತುಂಬಾ....
ನನ್ನದೇ ಪ್ರತಿಬಿಂಬ......


ನಮ್ಮೆಲ್ಲರ ಅಭಿಮಾನಕ್ಕೆ ಸ್ಪಂದಿಸಿ, ನಾನು ಬರೆದ ನನ್ನ ಮನದಾಳದ ಮಾತುಗಳನ್ನು ಇಷ್ಟಪಟ್ಟು ತಮ್ಮ ಹೆಸರು ಸೇರಿಸಲು ಅನುಮತಿಸಿದ ನನ್ನ ಆತ್ಮಿಯ ಬಂಧು ಶ್ರೀ ಅನಂತ್ ಅವರಿಗೆ..... ನಿಮ್ಮೆಲ್ಲರ ಮೆಚ್ಚುಗೆಯ ಜೊತೆ ನನ್ನ ನಮಸ್ಕಾರಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು.....

Monday, March 29, 2010

ಪುಸ್ತಕ ಪರಿಚಯ - ೫

ಮುಕ್ತಿ :

ಕಾದಂಬರಿ ಆರಂಭವೇ... "ನಾನು ಏನೂ ಮಾಡ್ತಿಲ್ಲ, ಮುದುಕಿಯಾಗ್ತಿದೀನಿ..." ಎಂದುಲಿಯುವ ಅಮೃತಾಳ ಮಾತು ಒಮ್ಮೆಲೇ ನನ್ನನ್ನು ದಿಗ್ಭ್ರಮೆಗೊಳಿಸಿತು... ತ್ರಿವೇಣಿಯವರೇನಾದರೂ ನನ್ನ ಮನಸ್ಸಿನ ತಾಕಲಾಟಗಳನ್ನೋದಿ ಬರೆದರಾ ಎಂಬಂತೆ......

ಕಪ್ಪಗಿದ್ದವರಿಗೆ ಚೇಳು ಕಡಿದರೆ ವಿಷವೇರುವುದಿಲ್ಲವೆಂಬ ರತ್ನಳ ಮಾತು ನಮ್ಮ ಸಮಾಜ, ಕಪ್ಪಗಿರುವವರನ್ನೂ, ಕುರೂಪಿಗಳನ್ನೂ ನಡೆಸಿಕೊಳ್ಳುವ ರೀತಿಯನ್ನು ಲೇಖಕಿ ಎಷ್ಟು ಚೆನ್ನಾಗಿ ಬಿಚ್ಚಿಟ್ಟಿದ್ದಾರೆ. ಬದುಕಿನಿಂದ ಏನನ್ನೂ ಬಯಸಬಾರದು. ಬದುಕು ಏನು ಕೊಟ್ಟರೂ ಸ್ವೀಕರಿಸುತ್ತೇನೆ... ಆಸೆಯೇ ಇಲ್ಲದಿದ್ದರೆ ನಿರಾಸೆ ಎಲ್ಲಿಂದ ಬರುವುದು?..... ಎಂಥಹ ಮುತ್ತಿನಂತಹ ಮಾತುಗಳನ್ನೂ ಹೇಳಿದ್ದಾರೆ ಕಥೆಯ ಪಾತ್ರದ ಮೂಲಕ.

ಎಷ್ಟೇ ಹಸಿವಾದರೂ ಉಪವಾಸವಾದರೂ ಸಾಯುತ್ತೇನೆ, ಆದರೆ ಕದ್ದು ಮಾತ್ರ ತಿನ್ನುವುದಿಲ್ಲ ಎಂದು ನಾಯಕಿ ಅಮೃತಾಳ ಹತ್ತಿರ ಹೇಳಿಸುವಾಗ ಲೇಖಕಿ, ನಮಗೆ ಅಮೃತಾಳ ದಿಟ್ಟತನ, ನೇರನುಡಿ, ಸ್ವಚ್ಛ ಮನಸ್ಸನ್ನು ಬಿಂಬಿಸುತ್ತಾರೆ.

ಮುವ್ವತ್ತು ದಾಟಿದರೂ ಮದುವೆಯಾಗದ ಅಮೃತಾ ತಮ್ಮನ ಸಂಸಾರದ ಜೊತೆ ಮುಂಬೈಗೆ ಬಂದು ನೌಕರಿ ಹುಡುಕಿಕೊಂಡು ಅಲ್ಲಿ ಕೇಶವನನ್ನು ಪ್ರೀತಿಸುತ್ತಾಳೆ. ಎಲ್ಲವೂ ಸರಾಗವಾಗಿ ಸಾಗುತ್ತಿರುವಾಗ, ಹಟಾತ್ತಾಗಿ ಕೇಶವ ತನಗೆ ಮದುವೆಯಾಗಿದೆಯೆಂದು ಹೇಳುವುದರ ಮುಖಾಂತರ ಕಥೆಗೊಂದು ತಿರುವು ಬರತ್ತೆ. ಮೋಸದಿಂದ ಕ್ಷಯ ರೋಗಿಯನ್ನು ಮದುವೆ ಮಾಡಿಬಿಟ್ಟು, ತಂದೆ - ಮಗಳಿಬ್ಬರೂ ಕೇಶವನ ಮನಸ್ಸಿಗೆ ಘಾಸಿ ಮಾಡಿರುತ್ತಾರೆ. ಆದರೆ ಕೇಶವನನ್ನು ಪ್ರೀತಿಸಿದ ಅಮೃತಾ ಹೆಂಡತಿ ಬದುಕಿರುವಾಗ, ತಾನು ಕೇಶವನನ್ನು ಮದುವೆಯಾಗುವುದಿಲ್ಲವೆಂದು ಬಿಡುತ್ತಾಳೆ. ಕೊನೆಯಲ್ಲಿ ಅಮೃತಾ ಬಯಸಿದಂತೆಯೇ, ಒಂಟಿಯಾಗಿ (ವಿಧುರನಾಗಿ)ಕೇಶವ ಅವಳ ಬಳಿ ತಿರುಗಿ ಬರುವುದರೊಂದಿಗೆ ಕಥೆ ಸುಖಾಂತ್ಯವಾಗುತ್ತದೆ.

ಕಥೆಯಲ್ಲಿ ಕೇಶವನಿಗೆ ಮೊದಲು ಮದುವೆಯಾಗಿತ್ತೆಂಬ ತಿರುವು ಅವಶ್ಯಕವಿತ್ತೋ ಇಲ್ಲವೋ... ಆದರೆ ಇದೇ ತಿರುವಿನಿಂದ ಅಮೃತ ಮದುವೆಗೆ ನಿರಾಕರಿಸುವುದರ ಮುಖಾಂತರ, ಮತ್ತೊಮ್ಮೆ ಲೇಖಕಿ, ನಾಯಕಿಯ ವ್ಯಕ್ತಿತ್ವವನ್ನು ಗಟ್ಟಿಯಾದ ಮತ್ತು ತುಂಬಾ ಸ್ವಾರ್ಥರಹಿತವೆಂಬಂತೆ ಚಿತ್ರಿಸಿದ್ದಾರೆ.


ಬೆಳ್ಳಿಮೋಡ :

ತ್ರಿವೇಣಿಯವರ ಪುಸ್ತಕಗಳೆಲ್ಲವು ಶ್ರೇಷ್ಠವಾದವುಗಳೇ ಆದರೂ, ಅದರಲ್ಲಿ ಚಲನಚಿತ್ರವಾಗಿ, ನಮ್ಮ ನೆನಪಿನಂಗಳದಲ್ಲಿ ಆಳವಾಗಿ ಬೇರೂರಿರುವ ಕೆಲವು ಕಥೆಗಳಲ್ಲಿ ಬೆಳ್ಳಿಮೋಡವೂ ಒಂದು.

ಇದರ ಕಥಾನಾಯಕಿ ಇಂದಿರಾ ಸಾಮಾನ್ಯ ರೂಪದವಳಾದರೂ, ಉನ್ನತ ವ್ಯಕ್ತಿತ್ವ ಹೊಂದಿದವಳು. ಅಕಸ್ಮಾತ್ತಾಗಿ ತುಂಬಾ ವರ್ಷಗಳ ನಂತರ ಹುಟ್ಟಿದ ತಮ್ಮನಿಗಾಗಿ ತನ್ನ ಜೀವನ ಮುಡಿಪಾಗಿಡ ಬಯಸುವ ಹೆಣ್ಣು. ತಾನು ಮನಸಾರ ಪ್ರೀತಿಸಿದ ಯುವಕನ ದುರ್ಬಲ ವ್ಯಕ್ತಿತ್ವ ಕಂಡು ಮದುವೆಯನ್ನು ನಿಲ್ಲಿಸಲು ತಾನೇ ತಂದೆಯ ಹತ್ತಿರ ಮಾತನಾಡುವ ದಾಷ್ಟೀಕದ ಹೆಣ್ಣು....

ಕಾಲು ಮುರಿದುಕೊಂಡು ಕುಳಿತ ನಾಯಕನ ಸೇವೆ ನಿರ್ವಂಚನೆಯಿಂದ ಮಾಡಿದಾಗ, ನಾಯಕ ಅವಳ ವ್ಯಕ್ತಿತ್ವಕ್ಕೆ ಮನಸೋತರೂ, ಅವನನ್ನು ವರಿಸಲು ಒಲ್ಲೆನೆಂದು ತನ್ನ ಧೃಡ ನಿರ್ಧಾರ, ಆತ್ಮ ಗೌರವ ಮೆರೆಸುವ ಹೆಣ್ಣು... ಸ್ವಾರ್ಥ ಮೆರೆದ ನಾಯಕ ಜೀವನದಲ್ಲಿ ಇಂದಿರಳಂತಹ ಅಪರಂಜಿಯನ್ನು ಕಳೆದುಕೊಂಡು ಬಿಡುತ್ತಾನೆ....

ಎರಡು ಕಥೆಗಳನ್ನೂ ಹೋಲಿಸಿದಾಗ ತ್ರಿವೇಣಿಯವರು ತಮ್ಮ ಕಾಲದಲ್ಲಿಯೇ ಹೆಣ್ಣು ದಿಟ್ಟೆ, ಬದುಕನ್ನು ಎದುರಿಸಬಲ್ಲ ಚಾಣಾಕ್ಷೆ, ಸ್ವತಂತ್ರ್ಯವಾಗಿ ವಿಚಾರ ಮಾಡಬಲ್ಲವಳು, ಸಮರ್ಪಕ ನಿರ್ಧಾರಗಳನ್ನು ತೆಗೆದು ಕೊಳ್ಳಬಲ್ಲವಳು ಎಂಬುದನ್ನು ಕಥಾ ಪಾತ್ರಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ತ್ರಿವೇಣಿಯವರ ಕಾಲ ಘಟ್ಟದಲ್ಲಿ ಈ ಪ್ರಯತ್ನ ಅತ್ಯಂತ ಶ್ಲಾಘನೀಯ........

Tuesday, March 9, 2010

ಸಂಬಂಧಗಳ ಸುಳಿಯಲ್ಲಿ...

ನಾವು ಕೊಲ್ಕತ್ತಾದಲ್ಲಿದ್ದಾಗ ಪ್ರತೀ ವರ್ಷ ಊರಿಗೆ ಬರುತ್ತಿದ್ದೆವು.... ೩೬ ಘಂಟೆಗಳು ರೈಲಿನಲ್ಲಿ ಪಯಣಿಸಿ ಬರುವಾಗ ಪ್ರತೀ ಬಾರಿಯೂ ಹೊಸ ಹೊಸ ಪರಿಚಯಗಳಾಗುತ್ತಿತ್ತು. ಹಾಗೇ ಒಂದು ಸಲ ನಾವು ವಾಪಸ್ಸು ಹೋಗುವಾಗ, ಮದ್ರಾಸಿನಲ್ಲಿ ಕೋರಮಂಡಲ್ ಎಕ್ಸ್ ಪ್ರೆಸ್ಸ್ ಹತ್ತಿ ಕೆಲವು ಘಂಟೆಗಳೊಳಗೆ ನಾನು ರೈಲು ಹತ್ತುವ ಮೊದಲು ನನ್ನ ಕೈಯಲ್ಲಿಟ್ಟುಕೊಂಡಿದ್ದ, ೨೫೦ ರೂಗಳನ್ನು ಕಳೆದುಕೊಂಡು ಬಿಟ್ಟಿದ್ದೆ. ನಾನು ಕುಳಿತಿದ್ದ ಆಸನದ ಕೆಳಗೆ, ಸಾಮಾನುಗಳನ್ನು ಸರಿಸಿ, ಆತಂಕದಿಂದ ಹುಡುಕುತ್ತಿದ್ದಾಗ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಒಂದು ಸಂಸಾರ (ತಮಿಳು ಮಾತನಾಡುತ್ತಿದ್ದರು - ಗಂಡ, ಹೆಂಡತಿ ಮತ್ತು ಎರಡು ಗಂಡು ಹುಡುಗರು), ಕರಿದ ಚಕ್ಕುಲಿಯಂತದೇನೋ ತಿನ್ನುತ್ತಾ, ನನ್ನನ್ನೇ ನೋಡುತ್ತಿದ್ದರು. ಕೊನೆಗೆ ಕಣ್ಣಲ್ಲಿ ನೀರು ತುಂಬಿ, ನಾನು ನಿರಾಸೆಯಿಂದ ಎದ್ದಾಗ, ಆ ಮಹಿಳೆ (ಮಾಮಿ) ನನ್ನನ್ನು "ಎನ್ನಮ್ಮಾ ತೇಡರೆ"? ಎಂದು ಕೇಳಿದರು.... ಸರಿ ನನ್ನ ಗಂಗಾ-ಕಾವೇರಿ ಪ್ರವಾಹ ಹರಿಯಲು ಯಾರಾದರೊಬ್ಬರ ಸಾಂತ್ವನ ನುಡಿ ಬೇಕಾಗಿತ್ತು.... ನಾನು ಕಥೆಯೆಲ್ಲಾ ಹೇಳಿದೆ. ಅವರು ನನ್ನನ್ನು ಮಾತನಾಡಿಸುತ್ತಾ, ನನ್ನ ದು:ಖ ಮರೆಸುವ ಪ್ರಯತ್ನ ಮಾಡುತ್ತಿದ್ದರು. ಮಾತಿನ ಮಧ್ಯದಲ್ಲಿ ನಾನು ಸೀಮೆ ಎಣ್ಣೆ ಸ್ಟೋವಿನಲ್ಲಿ ಅಡುಗೆ, ತಿಂಡಿ ಎಲ್ಲಾ ಮಾಡಿ, ಕೆಲಸಕ್ಕೆ ಹೋಗುತ್ತೇನೆಂಬ ವಿಷಯ ಕೇಳಿ, ಅವರು ತುಂಬಾ ಮರುಗಿದರು. ಆ ಮಾಮಿ ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಮನೆ ವಿಳಾಸ ಕೊಟ್ಟು ಕರೆದರು. ಊರಿಗೆ ಹಿಂತಿರುಗಿ ನಾನು ಅವರ ಕರೆ ಮರೆತೇ ಬಿಟ್ಟಿದ್ದೆ. ಒಂದು ದಿನ ಲೇಕ್ ಮಾರ್ಕೆಟ್ ನಲ್ಲಿ ಮಾಮಿಯ ಪತಿಯ ಭೇಟಿಯಾಯಿತು ಮತ್ತು ಅವರು ನಮ್ಮನ್ನು ಬಲವಂತದಿಂದ ಮನೆಗೆ ಕರೆದೊಯ್ದರು. ಮಾಮಿ ತನ್ನ ಹತ್ತಿರ ಇದ್ದ ಒಂದು ಗ್ಯಾಸ್ ಸಿಲಿಂಡರ್ ಕೂಡ ಕೊಟ್ಟರು. ಕೆಲಸಕ್ಕೆ ಹೋಗುವ ಹುಡುಗಿ, ಎಷ್ಟು ಕಷ್ಟ ಪಡುತ್ತೀ ಎಂದು ಅಕ್ಕರೆ ತೋರಿದರು.... ಅಲ್ಲಿಂದ ಸುಮಾರು ೫ ವರ್ಷಗಳ ಕಾಲ ನಾನು ಬೇರೆ ಹೊಸ ಗ್ಯಾಸ್ ಸಂಪರ್ಕ ತೆಗೆದುಕೊಳ್ಳದೆಲೇ (ರೇಷನ್ ಕಾರ್ಡ್ ಇಲ್ಲದೆ ಹೊಸ ಸಂಪರ್ಕ ಕೊಡುತ್ತಿರಲಿಲ್ಲ ಮತ್ತು ನಮಗೆ ಕೊಲ್ಕತ್ತದ ರೇಷನ್ ಕಾರ್ಡ್ ಇರಲಿಲ್ಲ) ಅವರ ಆ ಒಂದು ಸಿಲಿಂಡರ್ ನ್ನೇ ಇಟ್ಟುಕೊಂಡು, ಗ್ಯಾಸ್ ತರಿಸಿಕೊಂಡು ಉಪಯೋಗಿಸುತ್ತಿದ್ದೆ. ಹೀಗೆ ರೈಲಿನಲ್ಲಿ ಬರಿಯ ಕೆಲವು ಘಂಟೆಗಳಲ್ಲಿ ಆದ ಪರಿಚಯ, ಸ್ನೇಹ ಮುಂದೆ ಒಂದು ಆಪ್ತ ಸಂಬಂಧಕ್ಕೇ ತಳಪಾಯ ಹಾಕಿತ್ತು. ಅವರು ನನ್ನ ಮಗ ಹುಟ್ಟಿದಾಗ ಕೂಡ ನನಗೆ ತುಂಬಾ ಸಹಾಯ ಮಾಡಿದ್ದರು. ಇದನ್ನು ಮೊದಲು ಬರಿಯ ಸ್ನೇಹವೆಂದೇ ಅಂದುಕೊಂಡಿದ್ದರೂ ಕೂಡ ಆತ್ಮೀಯತೆ ಬೆಳೆದಂತೆ ಸ್ನೇಹ ಯಾವುದೋ ಒಂದು ಅವಿನಾಭಾವ ಸಂಬಂಧ ಕಲ್ಪಿಸಿಬಿಟ್ಟಿತ್ತು. ಈ ಆತ್ಮೀಯ ಬಂಧವು ಸ್ನೇಹವೇ ಆದರೂ, ಇದನ್ನು ಸಂಬಂಧದ ಚೌಕಟ್ಟಿಲ್ಲದೆ ನೋಡಲು ನನಗೆ ಸಾಧ್ಯವಾಗಲಿಲ್ಲ.... ಅವರು ನನಗೆ ತಾಯಿಯಂತೆಯೂ, ಹಿರಿಯಕ್ಕನಂತೆಯೂ ಪ್ರೀತಿ ತೋರಿದರು.... ಇಲ್ಲಿ ವಯಸ್ಸಿನ ಅಂತರವಿಲ್ಲದೆ ಶುದ್ಧ ಸ್ನೇಹವಿತ್ತು ಮತ್ತು ಆ ಸ್ನೇಹದ ಚೌಕಟ್ಟಿಗೆ ಪ್ರೀತಿಯ ಬಂಧನವಿತ್ತು, ಗೌರವವಿತ್ತು.....

ಮತ್ತೊಂದು ಪ್ರಸಂಗ ಮತ್ತು ನನ್ನ ಮತ್ತಿಬ್ಬರು ಬಸ್ ಸ್ನೇಹಿತರ ವಿಚಾರ ಹೇಳದಿದ್ದರೆ ಹೇಗೆ... ನಾನಾಗ ಗರ್ಭಿಣಿಯಾಗಿದ್ದೆ. ನನ್ನ ಕಛೇರಿ ನಮ್ಮ ಮನೆಯಿಂದ ಸುಮಾರು ೫ ಕಿ.ಮೀ ದೂರ ಇತ್ತು. ಮನೆಯಿಂದ ೫ ನಿಮಿಷದ ನಡಿಗೆ ಬಸ್ ನಿಲ್ದಾಣಕ್ಕೆ. ನಾನು ಪಾರ್ಕ್ ಸ್ಟ್ರೀಟ್ ಎಂಬ ಸ್ಥಳಕ್ಕೆ ಹೋಗ ಬೇಕಾಗಿತ್ತು, ದಿನವೂ.. ಮನೆ ಹತ್ತಿರದಿಂದ (ಲೇಕ್ ರೋಡ್ ಸ್ಟಾಪ್) ಒಂದು ಮಿನಿ ಬಸ್ ನೇರವಾಗಿ ನನ್ನನ್ನು ನನ್ನ ಕಛೇರಿಯ ಮುಂದೆ ಇಳಿಸುತ್ತಿತ್ತು.... ಎಷ್ಟೇ ಬೇಗ ಎದ್ದು ಒದ್ದಾಡಿದರೂ ನನಗೆ ೧೦ ನಿಮಿಷ ಮುಂಚೆ ಮನೆ ಬಿಡುವುದಾಗುತ್ತಿರಲಿಲ್ಲ ಮತ್ತು ದಿನವೂ ನಾನು ಬಸ್ ಸ್ಟಾಪ್ ತಲುಪುವ ವೇಳೆಗೆ, ಬಸ್ ತುಂಬಿರುತ್ತಿತ್ತು.... ನಾನು ನಿಂತೇ ೫ ಕಿ.ಮೀ ಪಯಣಿಸಬೇಕಾಗಿತ್ತು.... ಕೆಲವು ದಿನಗಳು ಇದನ್ನು ಗಮನಿಸುತ್ತಿದ್ದ ಒಬ್ಬರು ತಮಿಳು, ಮಧ್ಯವಯಸ್ಕರು, ನನ್ನನ್ನು ಕರೆದು ತಾವು ಕುಳಿತಿದ್ದ ಸೀಟು ಬಿಟ್ಟುಕೊಟ್ಟರು. ನಾನು ಸಂಕೋಚದಿಂದಲೇ ಕುಳಿತೆ.... ಅದೇ ಶುರು ನೋಡಿ... ಅಲ್ಲಿಂದ ಒಂದು ಶುಭ್ರ, ಸಪ್ರೇಮ ಸ್ನೇಹ ಆ ’ಮಾಮ’ನಿಗೂ ನನಗೂ ಏರ್ಪಟ್ಟಿತು. ಕೊಂಚ ಬೇಗ ಬರೋಕೇನಮ್ಮಾ ಎಂದು ದಿನವೂ ಅಕ್ಕರೆಯಿಂದ ರೇಗುವರು.... ಒಂದು ಸೀಟು ನನಗಾಗಿ ಕಾದಿರಿಸಿರುತ್ತಿದ್ದರು. ಇಲ್ಲದಿದ್ದರೆ ಆ ದಿನ ಅವರ ಪ್ರಯಾಣ ನಿಂತೇ ಆಗುತ್ತಿತ್ತು... ಕೆಲವು ದಿನಗಳ ನಂತರ ಇವರ ಜೊತೆ ಇನ್ನೊಬ್ಬರು ’ಮಾಮ’ ಕೂಡ ಸೇರಿದರು. ಇಬ್ಬರೂ ಸೇರಿ ಮೂವರು ಕುಳಿತುಕೊಳ್ಳುವ ಒಂದು ಸೀಟಿನಲ್ಲಿ ಜಾಗ ಹಿಡಿದು ಕುಳಿತಿರುತ್ತಿದ್ದರು.... ನಾನು ಮಹಾರಾಣಿಯಂತೆ ಬಸ್ ಹೊರಟ ನಂತರ ಬಂದು ಹತ್ತಿ ಕಾಯ್ದಿಟ್ಟ ಜಾಗದಲ್ಲಿ ಕುಳಿತು, ಅವರೊಡನೆ ಹರಟುತ್ತಾ ಪಯಣಿಸುತ್ತಿದ್ದೆ.... ಕೊನೆ ಕೊನೆಗೆ ನನಗಾಗಿ ಅವರು ಮೊದಲ ಬಸ್ ಬಿಟ್ಟು, ಎರಡನೆ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಿದ್ದರು..... ಇದೂ ನಿಷ್ಕಲ್ಮಶವಾದ ಸ್ನೇಹವೇ... ಆದರೆ ಸ್ನೇಹದಲ್ಲಿ ಎಲ್ಲೂ ಬರೆಯದ, ಮೇಲ್ಮುಖಕ್ಕೆ ಕಾಣಿಸದ, ಒಂದು ಅಜ್ಞಾತವಾದ ಸಂಬಂಧವಿತ್ತು. ಅವರು ನನ್ನನ್ನು ತಮ್ಮ ತಂಗಿಯಾಗಿ, ಮಗಳಾಗಿ ಪ್ರೀತಿಸಿದರು, ಅಕ್ಕರೆ ತೋರಿದರು... ಯಾವುದೇ ರಕ್ತ ಸಂಬಂಧವಲ್ಲವೆಂದರೂ ಅಲ್ಲೊಂದು ಸ್ನೇಹ ಸಂಬಂಧವಿತ್ತು.... ಈಗ ಅವರು ಎಲ್ಲಿದ್ದಾರೋ, ಏನೋ ನನಗೆ ಗೊತ್ತಿಲ್ಲ... ಆದರೆ ಅವರು ತೋರಿದ ಆ ಅಕ್ಕರೆ, ಆ ನಿಷ್ಕಲ್ಮಶವಾದ ಸ್ನೇಹ ನಾನೆಂದೂ ಮರೆಯಲಾಗುವುದೇ ಇಲ್ಲ.....

ಇದೆಲ್ಲಾ ಸಂಸಾರದ, ಬಳಗದವರಲ್ಲದವರ ಜೊತೆಗಿನ ಸ್ನೇಹ ಸಂಬಂಧಗಳಾದವು... ಆದರೆ ನಮ್ಮದೇ ಬಂಧು ಬಳಗಗಳಲ್ಲಿ... ಪುಟ್ಟ ಸಂಸಾರದಲ್ಲೇ ಸ್ನೇಹವಿದೆಯಲ್ಲವೇ..? ಎಲ್ಲಕಿಂತ ಮೊದಲು ತಾಯಿ-ಮಗುವಿನದು... ಗರ್ಭದಲ್ಲೇ ಹೇಗೆ ತಾಯಿ ತನ್ನ ಮಗುವಿನ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾಳೋ... ಹಾಗೇ ಅದರ ಜೊತೆಗೆ ಸ್ನೇಹ ಸಂಬಂಧವೂ ಬೆಳೆದುಬಿಟ್ಟಿರುತ್ತೆ.... ಮಗು ಹುಟ್ಟಿದಾಗಿನಿಂದಲೂ ತಾಯಿಯ ಸ್ಪರ್ಶವನ್ನು ಗುರುತಿಸುವಂತೆಯೇ, ತಾಯಿಯ ಮುಗುಳುನಗುವನ್ನೂ ಗುರುತಿಸುತ್ತದೆ. ನಗುವೇ ಸ್ನೇಹದ ಹಾಡು....ಅಲ್ಲವೇ? ಮಗು ಬೆಳೆಯುತ್ತಾ ಬಂದಂತೆ ಜೊತೆಗೇ ಬೆಳೆಯುವ ಪ್ರೀತಿಯೂ, ಬಂಧನವೂ ಸ್ನೇಹವೇ ಆಗಿರುತ್ತದೆ. ಇಲ್ಲಿ ತಾಯಿ ತನ್ನ ಮಗುವನ್ನು ತಾನು ಪೂಜಿಸುವ, ಆರಾಧಿಸುವ ಭಗವಂತನಂತೆ ಕಾಣುತ್ತಾಳೆ... ಮಕ್ಕಳು ದೊಡ್ಡವರಾದಂತೆಲ್ಲಾ ತಾಯಿಯಲ್ಲಿ ತನ್ನ ಅತ್ಯಂತ ಆಪ್ತ, ನಿಕಟ ಸ್ನೇಹಿತರನ್ನೇ ಕಾಣುತ್ತಾರೆ..... ತನ್ನ ಸ್ನೇಹಿತರ ಜೊತೆಗಿನ ಆಟ, ಶಾಲೆಯಲ್ಲಿನ ಪಾಠ, ತನ್ನ ಬೇಕು ಬೇಡವುಗಳೆಲ್ಲಕ್ಕೂ ತಾಯಿಯನ್ನೇ ಆಶ್ರಯಿಸುತ್ತಾ...ಅತ್ಯಂತ ನಿಕಟವಾದ ಸ್ನೇಹ ಬಂಧನ ಬೆಳೆಸಿಕೊಂಡು ಬಿಟ್ಟಿರುತ್ತೆ.... ಮಕ್ಕಳ ಬಾಲ ಲೀಲೆಗಳಲ್ಲಿ ತಾಯಿ ತನ್ನ ಬಾಲ್ಯವನ್ನೂ, ತಾರುಣ್ಯದಲ್ಲಿ ತನ್ನ ಭಾವನೆಗಳ ಏರುಪೇರಿನ ನೆರಳುಗಳನ್ನೂ ಕಾಣುತ್ತಾಳೆ.... ಎಲ್ಲಿ ಈ ಸಸ್ನೇಹ ಸಂಬಂಧವಿರುತ್ತದೋ ಅಲ್ಲಿ, ತಾಯಿ ಮಕ್ಕಳ ಸಂಬಂಧ ಗಟ್ಟಿಯಾದ ಅಡಿಪಾಯದ ಮೇಲೆ ಸುಭದ್ರವಾದ ಕಟ್ಟಡವಾಗಿರುತ್ತದೆ....ಹಾಗೇ ತಂದೆ-ಮಕ್ಕಳ ನಡುವೆ ಕೂಡ ಆರೋಗ್ಯಕರ, ನಿಕಟ ಸ್ನೇಹವಿಲ್ಲದಿದ್ದರೆ, ಸಂಬಂಧ ಗಟ್ಟಿಯಾಗುವುದಿಲ್ಲ.....

ಹೀಗೇ ಈ ಸ್ನೇಹ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಳ್ಳೆಯ ಸ್ನೇಹಿತರಾಗುವುದರ ಮೂಲಕ, ಅತ್ಯಂತ ಆತ್ಮೀಯವಾಗುತ್ತದೆ. ಅಣ್ಣ-ತಮ್ಮ, ಅಕ್ಕ-ತಂಗಿಯರ ಮಧ್ಯೆ ಪ್ರೀತಿಯಿಲ್ಲದಿರುವುದಿಲ್ಲ, ಆದರೆ ಎಲ್ಲಿ ಸ್ನೇಹವಿರುತ್ತದೋ ಅಲ್ಲಿ, ಸಂಬಂಧ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅಕ್ಕ ತನ್ನ ತಮ್ಮ, ತಂಗಿಯರ ವ್ಯಕ್ತಿತ್ವ ವಿಕಾಸಕ್ಕೂ, ಬೆಳವಣಿಗೆಗೂ ಯಾವಾಗಲೂ ಆಪ್ತ ಸೂಚನೆ, ಸಲಹೆಗಳನ್ನು ಕೊಟ್ಟು, ಸ್ನೇಹಿತೆಯಂತಿರಬಹುದು. ಇಲ್ಲಿ ಸಂಬಂಧಕ್ಕಿಂತ ಸ್ನೇಹ ಹೆಚ್ಚು ಮುಖ್ಯವಾಗುತ್ತದೆ..... ಈ ಥರಹದ ಸ್ನೇಹ ಸಂಬಂಧಗಳಲ್ಲಿ, ಅಣ್ಣ-ತಂಗಿಯರ ಸ್ನೇಹ ಮಾತ್ರ ಅತ್ಯಂತ ಅಪೂರ್ವವಾದದ್ದು... ಏಕೆಂದರೆ ತಂಗಿ ತನ್ನ ಅಣ್ಣನಲ್ಲಿ ಬರಿಯ ಅಣ್ಣ ಮಾತ್ರವಲ್ಲ, ತಂದೆ, ಮಾರ್ಗದರ್ಶಕ, ಅಧ್ಯಾಪಕ, ಆತ್ಮೀಯ ಮತ್ತು ತನ್ನ ಸಂದೇಹಗಳನ್ನು ನಿವಾರಿಸುವ ಒಬ್ಬ ಆರೋಗ್ಯಕರ ವ್ಯಕ್ತಿತ್ವವುಳ್ಳ, ಆದರ್ಶ ಭಾವನೆಗಳುಳ್ಳ ವ್ಯಕ್ತಿಯೆಂದು ನಂಬಿರುತ್ತಾಳೆ.... ಅಕ್ಕ ತಮ್ಮನ ಪ್ರೀತಿಯಲ್ಲಿ, ಸಂಬಂಧದಲ್ಲಿ ಒಂಥರಾ ತಾಯಿ-ಮಗುವಿನ ಛಾಯೆ ಮೇಲ್ನೋಟಕ್ಕೇ ಕಂಡ ಬರುತ್ತದೆ, ಆದರೆ ಅಣ್ಣ-ತಂಗಿಯರ ಸಂಬಂಧದಲ್ಲಿ ಅದು ಬೇರೆಯೇ ಇರುತ್ತದೆ. ಅಣ್ಣ-ತಂಗಿಯರ ಸಂಬಂಧ ಮಾತ್ರ ಅತ್ಯಂತ ಸೂಕ್ಷ್ಮವಾದ, ಮಧುರವಾದ, ಅನುರಾಗದಿಂದ ಕೂಡಿದ, ಎಲ್ಲಾ ಸಂಬಂಧಗಳಿಗೂ ಮೀರಿದ ಸ್ನೇಹದ ಸಂಬಂಧ....

ಕೊನೆಯದಾಗಿ ಸಂಬಂಧಗಳಲ್ಲಿಯ ಸ್ನೇಹದ ಮಾತು ಎಂದರೆ ಗಂಡ-ಹೆಂಡತಿಯರ ನಡುವಿನದು.... ಹಿರಿಯರೊಪ್ಪಿ ನಿಶ್ಚಯಿಸಿದ ಮದುವೆಯೋ, ಪ್ರೇಮ ವಿವಾಹವೋ.. ಮದುವೆಯ ವಿಧಾನ ಅಥವಾ ರೀತಿ ಇಲ್ಲಿ ಮುಖ್ಯವಾಗುವುದಿಲ್ಲ. ಮದುವೆಯ ನಂತರದ ಗಂಡ-ಹೆಂಡತಿಯರ ಸಂಬಂಧ ಬೆಸೆಯುವ ಸ್ನೇಹ ಮುಖ್ಯವಾಗುತ್ತದೆ. ಎಲ್ಲದಕ್ಕಿಂತ ಮೊದಲು ಇಬ್ಬರ ನಡುವೆ ಸ್ನೇಹ ತಂತು ಬೆಸೆಯಲೇಬೇಕು. ಒಬ್ಬರಲ್ಲಿ ಒಬ್ಬರು ತಮ್ಮ ಆತ್ಮೀಯ ಸ್ನೇಹಿತರನ್ನು ಕಂಡಾಗಷ್ಟೇ... ಸಂಬಂಧ ಹೆಚ್ಚು ಅರ್ಥಪೂರ್ಣವಾಗುವುದು. ಯಾವುದೇ ವಿಷಯಗಳ ಬಗ್ಗೆಯೂ ಕಟ್ಟುಪಾಡಿಲ್ಲದೇ ಚರ್ಚಿಸಬಹುದಾದರೆ ಅದು ಅಣ್ಣ-ತಂಗಿಯರ ಮಧ್ಯೆ ಮತ್ತು ಗಂಡ-ಹೆಂಡತಿಯರ ಮಧ್ಯೆ ಮಾತ್ರ.... ಹೆಣ್ಣು ತನ್ನ ಎಲ್ಲಾ ಬೇಕು ಬೇಡಗಳ ನಿಗಾ ವಹಿಸುವ, ತನ್ನ ಭಾವನೆಗಳನ್ನು ಗೌರವಿಸುವಂತಹ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಬಯಸುತ್ತಾಳೆ. ತನ್ನ ಸಂಗಾತಿ ಸಂದರ್ಭಗಳಿಗೆ ತಕ್ಕಂತೆ ತನ್ನನ್ನು, ಅಣ್ಣನಂತೆ ಅರ್ಥ ಮಾಡಿಕೊಂಡು - ತಂದೆಯಂತೆ ಸಂತೈಸಿ, ಗೆಳೆಯನಂತೆ ಚರ್ಚಿಸಬೇಕೆಂದು, ಬಯಸುತ್ತಾಳೆ... ಹೆಣ್ಣು ಮಾತ್ರ ತನ್ನ ಗಂಡನಿಗೆ, ಅಕ್ಕನಾಗಿ, ತಾಯಿಯಾಗಿ, ಗೆಳತಿಯಾಗಿ ವಿಧವಿಧ ಪಾತ್ರಗಳನ್ನು ನಿಭಾಯಿಸಬೇಕಾಗಿಲ್ಲ... ಗಂಡು ಕೂಡ ಹಾಗೇ ಮಾಡಿದಾಗಷ್ಟೇ ಸಂಬಂಧ ಕೊನೆತನಕ ಉಳಿಯುವುದು. ಸಂಬಂಧ ಉಳಿಯಬೇಕೆಂದರೆ ಎಲ್ಲಕ್ಕಿಂತ ಮೊದಲು ಇಬ್ಬರಲ್ಲೂ ಸ್ವಾರ್ಥ ರಹಿತ, ಯಾವುದೇ ನಿರೀಕ್ಷಣೆಯಿಲ್ಲದ ಪವಿತ್ರ ಸ್ನೇಹ ಏರ್ಪಡಬೇಕು ಮತ್ತು ಈ ಸ್ನೇಹದ ಭದ್ರ ಕೋಟೆಯ ಒಳಗೆ, ಹೊಸ ಜೀವನದ ಸುಂದರ ಅರಮನೆ ಕಟ್ಟಬೇಕು. ಆ ಅರಮನೆಯ ತೋಟದಲ್ಲಿ ಪ್ರೇಮದ ಹೂಗಳು ಅರಳಬೇಕು....

ಕೆಲವು ದಿನಗಳ ಹಿಂದೆ ನಾನು " ಸಿಂಪಥಿ ಮತ್ತು ಎಂಫಥಿ "ಯ ಮಧ್ಯದ ತೆಳುವಾದ ಗೆರೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆ ... ನಿಘಂಟಿನ ಅರ್ಥಗಳನ್ನು ಬಿಟ್ಟು, ಇನ್ನೂ ಸ್ವಲ್ಪ ಆಳವಾಗಿ ಯೋಚಿಸಿದಾಗ, ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಅಬ್ಬಾ..!! ನನ್ನ ಜೀವನದಲ್ಲೇ ಇದರ ಅನುಭೂತಿ ಎಷ್ಟು ಚೆನ್ನಾಗಿ ಆಗಿದೆಯೆಂದು.... ಮಧುರ ಸ್ನೇಹದ ಸಂಬಂಧಗಳೇರ್ಪಟ್ಟಾಗಲೇ ನಮಗೆ ಎಂಫಥಿಯ ನಿಜವಾದ ಅರ್ಥದ ಅನುಭವವಾಗುವುದು... ಸಿಂಪಥಿ ಮತ್ತು ಎಂಫಥಿಯ ಜೊತೆ ಇನ್ನೊಂದು ಶಬ್ದವನ್ನೂ ಜೋಡಿಸಬಹುದು ಅದು... "ಕಂಪ್ಯಾಶನ್".......ಮೂಲ ಅರ್ಥ ನೋಡಿದರೆ ಒಂದೇ ಅನ್ನಿಸುವುದಾದರೂ. ಇದನ್ನು ನಾವು ಮಾನವೀಯತೆಯ ಜೊತೆ ಹೆಚ್ಚು ಜೋಡಿಸಬಹುದು... ಆಂಗ್ಲದ ಒಂದು ಮಾತು... "Give compassion and you will receive understanding....Give unconditional love and you will become infinite".... ಅದರರ್ಥವನ್ನು ವಿಶ್ಲೇಷಿಸಿದಾಗ ಮಾನವೀಯತೆಯ ಮತ್ತು ಸ್ನೇಹದ ಹಸ್ತವನ್ನು ನಾವು ಮತ್ತೊಬ್ಬರೆಡೆ ಚಾಚಿದಾಗ, ನಮಗೆ ಬದುಕಿನ ನಿಜವಾದ ಅರ್ಥ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ... ಹಾಗೂ ಯಾವುದೇ ನಿರೀಕ್ಷಣೆಯಿಲ್ಲದ, ಕಟ್ಟುಪಾಡುಗಳಿಲ್ಲದ, ಮುಕ್ತವಾದ ಪ್ರೀತಿಯನ್ನು ಸ್ನೇಹದೊಂದಿಗೆ ಬೆರೆಸಿ ಎಲ್ಲರಿಗೂ ಹಂಚಿದರೆ, ನಾವು ಈ ಬ್ರಹ್ಮಾಂಡದಲ್ಲಿರುವ ಪ್ರಚಂಡ ಶಕ್ತಿಯೊಂದಿಗೆ ವಿಲೀನಗೊಳ್ಳುತ್ತೇವೆ.... ಅಂದರೆ ಪ್ರೀತಿಯಂತೆ ನಾವು ಸ್ನೇಹವನ್ನೂ ಪವಿತ್ರ (divine) ಎನ್ನಬಹುದು... ಇಷ್ಟೆಲ್ಲ ಸ್ನೇಹದ ವಿಚಾರ ನಾನು ಬರಿಯ ಮನುಷ್ಯ ಸಂಬಂಧಗಳಿಗೆ ಹೇಳಿದೆ... ಆದರೆ ಇಲ್ಲಿ ನನ್ನ ಮಾತುಗಳನ್ನು ಮುಗಿಸುವ ಮುನ್ನ...

"ನಮ್ಮ ನಿಮ್ಮಗಳ ನಡುವಿನದಲ್ಲದ, ನಾವು ನಂಬುವ ಭಗವಂತನ ಜೊತೆಗಿನ ನಮ್ಮ ಅಂತರಂಗದ ಸಂಬಂಧವನ್ನೂ ನಾವು ಸ್ನೇಹವೆಂದೇ ಕರೆಯುತ್ತೇವಲ್ಲವೇ....
ನಮ್ಮ ಆರಾಧ್ಯ ದೈವವೇ ನಮ್ಮ ಅಂತರಂಗದ ಹಾಗೂ ಅತ್ಯಂತ ನಿಕಟ ಸ್ನೇಹಿತನಲ್ಲವೇ....
ನಾವು ನಮ್ಮ ದೈವದ ಜೊತೆಗೆ ತೋರುವ ನಮ್ಮ ಪ್ರೀತಿ, ಭಕ್ತಿ, ಅನುಬಂಧ ಎಲ್ಲವೂ ಸ್ನೇಹ ಮಯವೇ ಅಲ್ಲವೇ...
ನಾವು ಮೆಚ್ಚಿ ಆರಾಧಿಸುವ ಭಗವಂತನಿಂದ ನಾವು unconditional ಪ್ರೀತಿ/ಸ್ನೇಹ ಪಡೆದುಕೊಳ್ಳುತ್ತಿರುವಾಗ, ನಾವೂ ಸ್ನೇಹಕ್ಕೆ ಪುಟ್ಟ ಸಂಬಂಧದ ಎಳೆ ಬೆರೆಸಿ, ಸ್ನೇಹವನ್ನು ವಿಶ್ವವ್ಯಾಪಿಯಾಗಿಸಬೇಕೆಂಬುದೇ ನನ್ನ ಅಭಿಪ್ರಾಯ....."

ರಕ್ತ ಸಂಬಂಧಗಳಲ್ಲೇ ನಾವು ಸ್ನೇಹವನ್ನು ಅನುಮೋದಿಸುವಾಗ.... ಸ್ನೇಹಿತರ ಜೊತೆಗೆ ಸಂಬಂಧ ಗುರುತಿಸಿಕೊಳ್ಳುವುದರಲ್ಲಿ ನನಗೆ ಯಾವ ತಪ್ಪೂ ಕಾಣುವುದಿಲ್ಲ. ಸ್ನೇಹಿತರ ಜೊತೆಗೂ ನಾವು ಭಾವನಾತ್ಮಕವಾಗಿ ಸಂಬಂಧ ಕಲ್ಪಿಸಿಕೊಂಡಾಗಲೇ ಆತ್ಮೀಯತೆ ಹೆಚ್ಚುವುದು ಮತ್ತು ಮುಕ್ತವಾಗಿ ಚರ್ಚಿಸಲು ಅವಕಾಶವಾಗುವುದು...... ರಕ್ತ ಸಂಬಂಧಗಳಲ್ಲಿರುವ ನಿರೀಕ್ಷಣೆ ಸ್ನೇಹದಲ್ಲಿ ಇರುವುದಿಲ್ಲವೆಂಬುದೊಂದು ಮುಖ್ಯ ಕಾರಣವಾದರೆ, "ಸ್ನೇಹ"ದ ಕಡಲು "ರಕ್ತ ಸಂಬಂಧ"ದ ಕಡಲಿಗಿಂತ ಅತ್ಯಂತ ವಿಶಾಲವಾದುದು ಮತ್ತು ಕಡಲಿಗಿಳಿಯುವ ಪ್ರತೀ ದೋಣಿಗೂ, ತೇಲಲು ಬೇಕಾದಷ್ಟು ವಿಸ್ತಾರ ಇರುವುದು....

ನನ್ನ ಮಿತ್ರರೊಬ್ಬರ ಸಂದೇಶ...."ಆಕಾಶಕ್ಕಿಂತ ಅಗಲವಾದುದು ಆಸೆ....
ನೀರಿಗಿಂತ ತೆಳುವಾದುದು ಉಸಿರು....
ಹೂವಿಗಿಂತ ಮೃದುವಾದುದು ಮನಸು...
ವಜ್ರಕ್ಕಿಂತ ಅಮೂಲ್ಯವಾದುದು ಪ್ರೀತಿ....
ಪ್ರೀತಿಗಿಂತ ಪವಿತ್ರವಾದುದು ಸ್ನೇಹ".....

ಪ್ರತಿಯೊಬ್ಬರ ಜೀವನದಲ್ಲೂ "ಸ್ನೇಹ" ಎಷ್ಟು ಅವಶ್ಯಕ ಮತ್ತು ಸ್ನೇಹವೇ ಉಸಿರು ಎಂಬುದನ್ನು ಸರಳವಾಗಿ ಮೇಲಿನ ಕೆಲವು ಸಾಲುಗಳು ಅರ್ಥ ಬಿಡಿಸಿಟ್ಟಿವೆ.... ಇದನ್ನು ಕಳುಹಿಸಿದ ನನ್ನ ಸ್ನೇಹಿತರಿಗೆ, ಸಸ್ನೇಹ ವಂದನೆಗಳನ್ನು ಸಲ್ಲಿಸುತ್ತಾ...

ಹೀಗೆ ನಾವು ನಮ್ಮ ಬದುಕಿನ ಎಲ್ಲಾ ಕೊಂಡಿಗಳನ್ನೂ ಸ್ನೇಹಕ್ಕೇ ಜೋಡಿಸಿದರೆ, ಎಲ್ಲವೂ ಮತ್ತು ಎಲ್ಲರೂ ’ಸಂಬಂಧಗಳೇ’.... ಸಂಬಂಧಗಳಿಲ್ಲದ ಪ್ರೀತಿ ಸ್ನೇಹವಲ್ಲ, ಸ್ನೇಹವಿಲ್ಲದ ಬದುಕು ಬದುಕಲ್ಲ"... ನಾ ಮೇಲೆ ಹೇಳಿದ ಎಲ್ಲಾ ಸಂಬಂಧಗಳಲ್ಲೂ ಸ್ನೇಹವಿದ್ದೇ ಇರುವುದರಿಂದಲೇ ನಮಗೆ ನಿಷ್ಕಲ್ಮಶವಾದ ಪ್ರೀತಿಯ ಸಂಬಂಧಗಳು ಸಿಗುತ್ತವೆ.