Tuesday, April 9, 2013

ಎಳ್ಳುಕಾಳಿನ ಭಕುತಿ..














ಎಳ್ಳುಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ |
ಬೆಳ್ಳಕ್ಕಿಯಂತೆ ನಿನ್ನ ಧ್ಯಾನ ಮಾಡುವೆನಯ್ಯ ||

ಗಂಡುಮುಳುಗ ಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ
ಮಂಡೆಶೂಲೆಯಲ್ಲದೆ ಗತಿಯು ಇಲ್ಲ |
ಮಂಡೂಕನಂದದಿ ಕೆರೆಯ ದಂಡೆಯ ಮೇಲೆ ಕುಳಿತು
ಮಂಡೆಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ ||

ಗಾಣದೆತ್ತಿನಂತೆ ಕಣ್ಣ ಕಟ್ಟಿ ಪ್ರದಕ್ಷಿಣೆಯ ಮಾಡಿ
ಕಾಣದೆ ನಾ ತಿರುಗಿದೆ ಕಂಡುದುದಿಲ್ಲ |
ಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿ
ಆಣಿಕಾರಿಗೆ ಮಾಡಿದಂಥ ಈ ಕುಯುಕುತಿ ||

ಇಕ್ಕಳದ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆ
ಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲ |
ಪೊಕ್ಕಳುಪೂವಿನ ಶ್ರೀಪುರಂದರವಿಠಲನೆ
ಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ ||

ಶ್ರೀ ಪುರಂದರ ದಾಸರು ತಮ್ಮ ಈ ಪದದಲ್ಲಿ ನಮ್ಮಂತಹ ಸಾಮಾನ್ಯ ಜನರ ಮನಸ್ಥಿತಿಯನ್ನು ಅದೆಷ್ಟು ಯಥಾವತ್ತಾದ ಚಿತ್ರಣ ಮಾಡಿದ್ದಾರೆ.  ಆಡು ಮಾತಿನಲ್ಲಿ ಉಪಯೋಗಿಸುವ ಎಲ್ಲಾ ಶಬ್ದಗಳಿಗೂ ಒಂದು ಒಳ ಆಧ್ಯಾತ್ಮ ತತ್ವವನ್ನು ಬೆರೆಸಿ ಅರ್ಥಪೂರ್ಣವಾಗಿ ನುಡಿದಿದ್ದಾರೆ.  ದಿನ ನಿತ್ಯ ನಮ್ಮ ಅಡುಗೆಯಲ್ಲಿ ಬಳಸುವ ಪದಾರ್ಥವಾದ ಎಳ್ಳುಕಾಳನ್ನು ಸಾಂಕೇತಿಕವಾಗಿಟ್ಟುಕೊಂಡು ಪ್ರಾರಂಭಿಸಿದ್ದಾರೆ.  ಎಳ್ಳು ನಮ್ಮ ಅಡುಗೆ ಮನೆಯಲ್ಲೂ ಹಾಗೂ ಆಚರಣೆಗಳಲ್ಲೂ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ.  ಪ್ರಮಾಣದಲ್ಲಿ ಅತ್ಯಂತ ಸಣ್ಣದಾದ ಎಳ್ಳು ಕಾಳಿನಷ್ಟೂ ಭಕ್ತಿ ನನ್ನ ಮನಸ್ಸಿನಲ್ಲಿ ಇಲ್ಲವೆಂದು ಭಗವಂತನಲ್ಲಿ ಅಂತರಂಗ ತೆರೆದು ನಿವೇದಿಸಿಕೊಂಡಿದ್ದಾರೆ.  ಬಕ ಪಕ್ಷಿ (ಬೆಳ್ಳಕ್ಕಿ) ನೀರಿನಲ್ಲಿ ಒಂದು ಕಾಲಲ್ಲಿ ನಿಂತು, ತಲೆ ತಗ್ಗಿಸಿಕೊಂಡು, ಕಣ್ಣು ಮುಚ್ಚಿಕೊಂಡು ಅಲುಗಾಡದೆ ಗಂಟೆಗಟ್ಟಲೆ ನಿಂತಿರುತ್ತದೆ.  ನೋಡಿದವರಿಗೆ ಅದು ಧ್ಯಾನದಲ್ಲಿ ತಲ್ಲೀನವಾಗಿದೆಯೆಂಬ ನಂಬಿಕೆ ಬರಬೇಕು ಹಾಗೆ ನಿಂತಿರುತ್ತದೆ.  ಆದರೆ ಅದರ ಗಮನವೆಲ್ಲಾ ಭಗವಂತನ ಧ್ಯಾನದಲ್ಲಿ ಲೀನವಾಗಿರೋಲ್ಲ.  ಕೆಳಗೆ ನೀರಿನಲ್ಲಿ ಮೀನು ಸಿಗುವುದೋ ಎಂಬ ಧ್ಯಾನದಲ್ಲಿ ಸಿಲುಕಿರುತ್ತದೆ, ಸಿಕ್ಕ ಕೂಡಲೆ ಅದರ ಧ್ಯಾನ, ತಪ, ಒಂಟಿಕಾಲಿನಲ್ಲಿ ನಿಂತಿದ್ದ ಭಂಗಿ ಎಲ್ಲವೂ ಗಾಳಿಯಲ್ಲಿ ತೂರಿಹೋಗಿ, ಕೊಕ್ಕಿನಲ್ಲಿ ಮೀನು ಸಿಕ್ಕಿಕೊಂಡಿರುತ್ತದೆ.  ಈ ಹಾಡಿನ ಪ್ರಾರಂಭದಲ್ಲೇ ದಾಸರು ಈ ಬಕಧ್ಯಾನದ ವಿಷಯ ತಿಳಿಸಿ ನಮ್ಮ ಧ್ಯಾನದ ಪರಿಯನ್ನು ಬಹಿರಂಗಗೊಳಿಸುತ್ತಾರೆ.  ಹೀಗೆ ದಾಸರು ಈ ಪದದಲ್ಲಿ ವಿವಿಧ ಉದಾಹರಣೆಗಳನ್ನು ಕೊಟ್ಟು ನಮ್ಮ ಡಂಭಕತನದ ಭಕ್ತಿಯನ್ನು ಟೀಕಿಸುತ್ತಾರೆ.

ಗಂಡುಮುಳುಗ ಹಕ್ಕಿಯೆಂದು ದಾಸರು ಉಲ್ಲೇಖಿಸಿರುವುದು ದಿನದಲ್ಲಿ ೧೦೦ ಬಾರಿ ಸುಮ್ಮನೆ ನೀರಿನಲ್ಲಿ ತಲೆ ಮುಳುಗಿಸಿ ಮೇಲೇಳುವ ಹಕ್ಕಿಯ ವಿಷಯ.  ಅಂದರೆ ಹಕ್ಕಿ ಯಾವ ಪುಣ್ಯ ಸಂಪಾದನೆಗಾಗಿಯೂ ನೀರಿನಲ್ಲಿ ಮುಳುಗುವುದಿಲ್ಲ, ಅದು ತನ್ನ ಆಹಾರವಾದ ಹುಳು, ಹುಪ್ಪಟೆಗಳನ್ನು ಕಂಡೊಡನೆ ನೀರಿನಲ್ಲಿ ತಲೆ ಮುಳುಗಿಸಿ, ಕೊಕ್ಕಿನಲ್ಲಿ ಹಿಡಿದುಕೊಂಡು ಒಂದೇ ಕ್ಷಣದಲ್ಲಿ ಮೇಲೆ ಬಂದುಬಿಡುತ್ತದೆ.  ಅದಕ್ಕೆ ತಾನು ಮುಳುಗಿ ಏಳುವ ನೀರು ಯಾವ ನದಿಯಾದರೇನು ಯಾವ ಸಮುದ್ರವಾದರೇನೂ, ಎಂತಹ ವ್ಯತ್ಯಾಸವೂ ಇಲ್ಲ.  ಹಾಗೇ ನಾವೂ ಕೂಡ ಕಂಡ ಕಂಡ ನದಿಗಳಲ್ಲೆಲ್ಲಾ ಮುಳುಗೆದ್ದು, ಸಮುದ್ರ ಸ್ನಾನ ಮಾಡಿ, ಪರಿಚಯವಿರುವ ಎಲ್ಲರಲ್ಲಿಯೂ ನಾನು ಗಂಗಾಸ್ನಾನ ಮಾಡಿದೆ, ತುಂಗಾಸ್ನಾನ ಮಾಡಿದೆ ಎಂದು ಡಂಗುರವನ್ನು ಸಾರುತ್ತೇವೆ.  ಆದರೆ ಮನದಲ್ಲಿ ಎಳ್ಳುಕಾಳಿನಷ್ಟೂ ಭಕ್ತಿಯಿಲ್ಲದಿರುವಾಗ, ಯಾವ ನದಿಯಲ್ಲಿ ಮುಳುಗಿದರೂ, ಸಮುದ್ರ ಸ್ನಾನ ಮಾಡಿದರೂ ನಮಗೆ ಪುಣ್ಯ ಲಭಿಸುವುದಿಲ್ಲ ಬದಲಿಗೆ ನೀರಿನಲ್ಲಿ ಮುಳುಮುಳುಗೆದ್ದ ಕಾರಣ ತಲೆನೋವು ಅಂಟಿಕೊಳ್ಳುತ್ತದೆ ಅಷ್ಟೆ.  ಕೆರೆಯ ದಂಡೆಯ ಮೇಲೆಯೇ ಕುಳಿತ ಮಂಡೂಕ ಸದಾ ತನ್ನ ವಟವಟಗುಟ್ಟುವ ಅಭ್ಯಾಸದಂತೆ, ನಾವು ಕೂಡ ದಂಡೆಯ ಮೇಲೆ ಕುಳಿತು ಯಾರಿಗೂ ತಿಳಿಯಬಾರದೆಂದು ಮುಸುಕು ಹೊದ್ದು, ಬೆರೆಳೆಣಿಸುತ್ತಾ ಜಪವನ್ನು ಮಾಡಿದರೆ, ಎಳ್ಳಷ್ಟೂ ಪುಣ್ಯ ದೊರಕುವುದಿಲ್ಲ ಎಂಬ ಅರ್ಥವಾಗುತ್ತದೆ.

ಎರಡನೆಯ ಚರಣದಲ್ಲಿ ದಾಸರು ನಮ್ಮನ್ನು ಗಾಣದೆತ್ತಿಗೆ ಹೋಲಿಕೆ ಕೊಟ್ಟಿದ್ದಾರೆ.  ಹಿಂದಿನ ಕಾಲದಲ್ಲಿ ಎಣ್ಣೆ ಬೇಕೆಂದರೆ ಗಾಣದವರ ಮನೆಗೇ ಹೋಗಬೇಕಿತ್ತು.  ಅಲ್ಲಿ ಕಾಳುಗಳನ್ನು ಹಾಕಿ ಒಂದು ಗಾಣ ಕಟ್ಟಿ, ಆ ಗಾಣಕ್ಕೆ ಎತ್ತು ಕಟ್ಟಿಬಿಡುತ್ತಿದ್ದರು.  ಕಣ್ಣುಗಳನ್ನು ತೆರೆದು ಸುತ್ತಿದರೆ, ತಲೆ ಸುತ್ತಬಹುದೆಂದು, ಆ ಎತ್ತಿನ ಕಣ್ಣು ಕಟ್ಟಿಬಿಡುತ್ತಿದ್ದರು.  ಅದು ತನ್ನನ್ನು ಕಟ್ಟಿದ್ದ ಗಾಣಕ್ಕೇ ಸುತ್ತುತ್ತಾ ಪ್ರದಕ್ಷಿಣೆ ಬರುತ್ತಿತ್ತು, ಆದರೆ ಮನದಲ್ಲಿ ತಾನೆಲ್ಲೋ ತುಂಬಾ ದೂರ ಪಯಣಿಸಿದ್ದೇನೆಂಬ ಆಲೋಚನೆ ಇರುತ್ತಿತ್ತು.  ಹಾಗೇ ನಾವು ಕೂಡ ಮನದಲ್ಲಿ ಎಳ್ಳಷ್ಟೂ ಭಕ್ತಿಯಿಲ್ಲದೆ, ಸುಮ್ಮನೆ ತೀರ್ಥಕ್ಷೇತ್ರಗಳನ್ನು ಸುತ್ತುತ್ತಾ, ಭಗವಂತನನ್ನು ಕಂಡೆವೇನೋ ಎಂದು ಕೊಂಡರೆ ಏನೂ ಪ್ರಯೋಜನವಿಲ್ಲ.  ಅಂತರಂಗದಾಳದಲ್ಲೇ ಇರುವ ನಮ್ಮೊಡೆಯನ ಅರಿವು, ನಮಗೆ ಆಗಬೇಕೇ ಹೊರತು, ಬಾಹ್ಯ ಮನಸ್ಸಿನ ಪದರದಲ್ಲೇ ಉಳಿದು, ಸುಖಾ ಸುಮ್ಮನೆ ಪುಣ್ಯಕ್ಷೇತ್ರಗಳನ್ನು ಸುತ್ತುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ.  ತನ್ನ ತಪೋಬಲದಿಂದ, ಜ್ಞಾನದ ಕಣ್ಣನ್ನು ಕಾಲಿನಲ್ಲಿ ಪಡೆದಿದ್ದ ಭೃಗು ಮಹರ್ಷಿಗಳು ಅಹಂಕಾರಕ್ಕೆ ಜಾಗ ಕೊಟ್ಟರು.  ಸಾಕ್ಷಾತ್ ವೈಕುಂಠಕ್ಕೇ ತೆರಳಿದರೂ ಕೂಡ, ಕಣ್ಣ ಮುಂದೆಯೇ ಮಾಣಿಕ್ಯದ ರಾಶಿಯೇ ಇದ್ದರೂ ಕೂಡ, ಅದನ್ನು ಅರಿತುಕೊಳ್ಳದೇ ಭಗವಂತನ ವಕ್ಷಸ್ಥಲಕ್ಕೇ ಕಾಲಿನಿಂದ ಒದ್ದು ಅಹಂಕಾರ ಪ್ರದರ್ಶನ ಮಾಡಿದರು.  ಶ್ರೀಹರಿ ಮುಗುಳ್ನಗುತ್ತಾ ಅವರ ಕಾಲಿನಲ್ಲಿ ಒಂದು ಆಣಿ ಇದೆಯೇನೋ ಎಂಬಂತೆ ಪಾದ ಒತ್ತುತ್ತಾ, ಜ್ಞಾನದ ಕಣ್ಣನ್ನು ಕಿತ್ತುಬಿಟ್ಟ.  ಅಹಂಕಾರ ಇಳಿಯಿತು.  ಆದರೆ ಮಾಣಿಕ್ಯದ ರಾಶಿಗೆ ಹೋಗಿ, ಕಾಲಿನ ಆಣಿಗೆ ಉಪಚಾರ ಮಾಡಿಸಿಕೊಂಡಂತಹುದು ಮೂರ್ಖತನವೆಂಬುದು ದಾಸರ ಅಭಿಪ್ರಾಯ.

ಕಬ್ಬಿಣವನ್ನು ಬಗ್ಗಿಸಬೇಕಾದರೆ ಸುಲಭವಲ್ಲ.  ಅದನ್ನು ಚೆನ್ನಾಗಿ ಕಾಯಿಸಿ, ಕಾಯಿಸಿ ಅದು ಸಿಕ್ಕಾಪಟ್ಟೆ ಬಿಸಿಯಾಗಿದ್ದಾಗಲೇ ಬಡಿದು ನಮಗೆ ಬೇಕಾದಂತೆ ಬಗ್ಗಿಸಬೇಕು.  ಆದರೆ ಅತ್ಯಂತ ತೀಕ್ಷ್ಣ ಉಷ್ಣತೆ ಇರುವುದನ್ನು ಹಿಡಿದುಕೊಳ್ಳಲು ತುಂಬಾ ಬಲಿಷ್ಠವಾದ ಇಕ್ಕಳವೇ ಬೇಕು.  ಹಾಗೆ ಅನೇಕ ವಿಷಯಾಸಕ್ತಿಗಳಲ್ಲಿ ಮುಳುಗಿ ಮುಳುಗಿ ತೊಂದರೆ ಕೊಡುವ ಈ ಮನಸ್ಸನ್ನು ಕಬ್ಬಿಣದಂತೆ ಚೆನ್ನಾಗಿ ಕಾಯಿಸಿ, ಬಡಿದು ಒಂದು ಆಕಾರ ಕೊಡು ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ ದಾಸರು.  ಆದರೆ ಕಬ್ಬಿಣ ಕಾಯಿಸಿದರೆ ಸಾಲದು, ಅದನ್ನು ಭದ್ರವಾಗಿ ಸಿಕ್ಕಿಸಿಕೊಂಡು ಬಿಡುವ ಇಕ್ಕಳದ ಕೈಯಿಲ್ಲದೆ ಯಾವ ಪ್ರಯೋಜನವೂ ಇಲ್ಲ.  ಆದ್ದರಿಂದ ಬೇರೆ ಗತಿಯೇ ಇಲ್ಲವೆಂದು ನಿನ್ನತ್ತ ಶರಣಾಗಿ ಬಂದಿರುವ ಈ ಕಬ್ಬಿಣವನ್ನು ಕಾಯಿಸಿ, ಪಿಡಿವ ಇಕ್ಕಳ ನೀನಾಗಿ, ನನ್ನನ್ನು ಸಿಕ್ಕಿಸಿಕೊಂಡು, ರಕ್ಷಿಸು ಎನ್ನುತ್ತಾರೆ.

ಕೊನೆಯ ಎರಡು ಸಾಲಿನಲ್ಲಿ ಶೀ ಪುರಂದರದಾಸರು, ಭಗವಂತನನ್ನು ಲೀಲಾಮಯನೆಂದೂ, ಬ್ರಹ್ಮಾಂಡವೆಂಬ ಆಟಿಕೆಯನ್ನು ಸೃಷ್ಟಿಸಿ, ಮಕ್ಕಳಂತೆ ಆಡುವವನೆಂದೂ ಹೇಳುತ್ತಾರೆ.  ಹೊಕ್ಕಳಲ್ಲಿ ಹೂವಿಟ್ಟುಕೊಂಡು, ಬ್ರಹ್ಮನನ್ನು ಹುಟ್ಟಿಸಿದ ಜಗದ್ರಕ್ಷಕನೇ, ನಿನ್ನ ಮಕ್ಕಳಾಟಿಕೆಯನ್ನು ಬಿಟ್ಟು, ಕೊಂಚ ನನ್ನತ್ತ ನೋಡಿ, ನನ್ನನ್ನು ರಕ್ಷಿಸು, ಉದ್ಧರಿಸು ಎಂದು ಬೇಡುತ್ತಾರೆ.


 ಚಿತ್ರಕೃಪೆ : ಅಂತರ್ಜಾಲ

Tuesday, October 23, 2012

ವೀಣೆ..

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ತಂತಿವಾದ್ಯವಾದ ವೀಣೆ.  ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ ಸರಸ್ವತಿ.  ಸರಸ್ವತಿ ದೇವಿಯು ಸಂಗೀತದ ಅಧಿದೇವತೆ.  ಅವಳು ವೀಣಾಪಾಣಿ.  ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.

ನಮ್ಮ ದೇಶದಲ್ಲಿ ಇರುವಷ್ಟು ಸಂಗೀತ ವಾದ್ಯಗಳು ಬೇರೆಲ್ಲೂ ಇಲ್ಲವೆನ್ನಬಹುದೇನೋ.. ಪ್ರತಿಯೊಂದು ವಾದ್ಯವೂ ತನ್ನದೇ ಆದ ಒಂದು ಆಕಾರ, ರಚನೆ ಮತ್ತು ಧ್ವನಿಯನ್ನು ಹೊಂದಿದೆ ಮತ್ತು ವಿಶಿಷ್ಟವಾಗಿದೆ.  ಶಾಸ್ತ್ರದಲ್ಲಿ ಈ ವಾದ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ.  ಅವುಗಳು :
೧) ತತ (ತಂತೀವಾದ್ಯಗಳು)
೨) ಸುಷಿರ (ಗಾಳಿ ವಾದ್ಯಗಳು)
೩) ಅವನದ್ಧ (ತಾಡನ ವಾದ್ಯಗಳು)
೪) ಘನ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು)

 ವೀಣೆ ತತ ಅಂದರೆ ತಂತೀವಾದ್ಯಗಳ ಗುಂಪಿಗೆ ಸೇರುತ್ತದೆ.    ತಂತಿಗಳ ಮೂಲಕ ನಾದೋತ್ಪತ್ತಿಯಾಗುವ ವಾದ್ಯಗಳೇ ತತವಾದ್ಯಗಳು.  ತಂತೀ ವಾದ್ಯಗಳನ್ನು ಶ್ರುತಿ ವಾದ್ಯ ಮತ್ತು ಸಂಗೀತಾವಾದ್ಯಗಳೆಂದು ವಿಂಗಡಿಸಲಾಗಿದೆ.  ಗಾಯನ ಅಥವಾ ವಾದನಗಳಲ್ಲಿ ಶ್ರುತಿಗಾಗಿ ಉಪಯೋಗಿಸಲ್ಪಡುವುದು  "ತಂಬೂರಿ" ಮತ್ತು ಸಂಗೀತವನ್ನು ಗಾಯನಕ್ಕೆ ಬದಲಾಗಿ ವಾದ್ಯದಲ್ಲಿ ಹೊಮ್ಮಿಸಲು ಉಪಯೋಗಿಸಲ್ಪಡುವುದು "ವೀಣೆ".  ವೀಣೆ ಋಗ್ವೇದದಲ್ಲಿ ಮತ್ತು ಯಜುರ್ವೇದದಲ್ಲಿ ಕೂಡ  ಪ್ರಸ್ತಾಪಿಸಲ್ಪಟ್ಟಿದೆಯಂತೆ.   ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣವಿರಬಹುದು ಏಕೆಂದರೆ "ರುದ್ರವೀಣೆ" ಎಂದು ಕೂಡ ವಿಶಿಷ್ಟವಾದ ಒಂದು ವೀಣೆ ಇದೆ.  ದೇವಿ ಸರಸ್ವತಿಯಲ್ಲದೆ ವಿಶ್ವಾವಸು, ತುಂಬುರು ಮತ್ತು ನಾರದರು ಕೂಡ ವೈಣಿಕರೇ ಮತ್ತು ತುಂಬುರರ ವೀಣೆಯ ಹೆಸರು "ಕಲಾವತೀ" ಎಂದೂ, ವಿಶ್ವಾವಸುವಿನ ವೀಣೆಯ ಹೆಸರು "ಬೃಹತೀ" ಎಂದೂ ಮತ್ತು ನಾರದರ ವೀಣೆಯ ಹೆಸರು "ಮಹತಿ" ಎಂದೂ ನಮಗೆ ಪುರಾಣಗಳಿಂದ ತಿಳಿದುಬರುತ್ತದೆ.  ವೀಣೆ ಮೋಕ್ಷ ಸಾಧನೆಗೆ ಸುಲಭವಾದ ಹಾದಿ ಎಂದು ಯಾಜ್ಞವಲ್ಕ್ಯರು ತಮ್ಮ ಸ್ಮೃತಿಯಲ್ಲಿ ಹೇಳಿದ್ದಾರೆ.  ನಾವು ರಾವಣನ ಕಥೆಯಲ್ಲಿ ಕೂಡ ಕೇಳಿದ್ದೇವೆ - ವೀಣೆಯ ತಂತಿಯೊಂದು ಕಿತ್ತು ಹೋದಾಗ ತನ್ನ ದೇಹದ ಒಂದು ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮುಂದುವರೆಸಿದನೆಂದು.

ವೀಣೆ ಈಗಿರುವ ಸ್ವರೂಪಕ್ಕೆ ಬರುವ ಮೊದಲು ಅನೇಕ ಬದಲಾವಣೆಗಳನ್ನು ಹೊಂದಿದ್ದಾಗಿರಬಹುದು.  ಕಾಳಿದಾಸನ ’ಶ್ಯಾಮಲಾ ದಂಡಕ’ದಲ್ಲಿ  "ಮಾಣಿಕ್ಯವೀಣಾಂ ಉಪಲಾಲಯಂತೀಂ " ಎನ್ನುತ್ತಾ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ.  ಹಾಗೇ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು "ಘೋಷವತೀ" ಎಂಬ ವೀಣೆಯನ್ನು ನುಡಿಸಿದ್ದನೆಂದು ಕೂಡ ಉಲ್ಲೇಖವಿದೆ.  ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಯ ಅನುಗ್ರಹದಿಂದ ಕಾಶಿಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ "ರಾಮ" ಎಂದು ಕೆತ್ತಲ್ಪಟ್ಟಿದೆಯಂತೆ.  ಹೀಗೆ ವೀಣೆಯ ಇತಿಹಾಸ ತುಂಬಾ ಹಿಂದಿನದೆಂಬ ಮಾತು ನಮಗೆ ಅರ್ಥವಾಗುತ್ತದೆ.

ವೀಣೆಯ ವಿವರಣೆಯೆಂದರೆ ಒಂದು ಚಿಕ್ಕ ಹಾಗೂ ಒಂದು ದೊಡ್ಡ ಬುರುಡೆಗಳಿರುತ್ತವೆ.  ದೊಡ್ಡ ಬುರುಡೆಯನ್ನು  ಕೊಡ  ಎಂದು ಕರೆಯುತ್ತಾರೆ.  ಬಲಗಡೆಗೆ ಇರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಹಲಸಿನ ಮರದಿಂದ ಮಾಡುತ್ತಾರೆ.  ಇದರ ತಯಾರಿ ಕೂಡ ಅನೇಕ ತಿಂಗಳುಗಳ ಕೆಲಸವಾಗುತ್ತದೆ.  ಹಲಸಿನ ಮರವನ್ನು ನೀರಿನಲ್ಲಿ ನೆನೆಸಿಟ್ಟು ಬೇಕಾದ ಆಕಾರಕ್ಕೆ ಕೊರೆದು, ಕತ್ತರಿಸಿ ಹಗುರ ಮಾಡಿ ಕೊಡವನ್ನು ತಯಾರಿಸುತ್ತಾರೆ.  ಕೊಡ ಹಗುರವಾಗಿದ್ದಷ್ಟೂ ನಾದ ಚೆನ್ನಾಗಿ ತುಂಬುತ್ತದೆಂಬ ನಂಬಿಕೆಯಿದೆ.  ಹೀಗೆ ತಯಾರಿಸಿದ ಕೊಡವನ್ನು ಇನ್ನೊಂದು ಮರದ ಹಾಳೆಯಿಂದ ಮುಚ್ಚಿರುತ್ತಾರೆ. ಅದಕ್ಕೆ ದಂಡಿಯನ್ನು ಜೋಡಿಸುತ್ತಾರೆ.  ಅದರ ಎಡತುದಿ ಭೂಮಿಯ ಕಡೆಗೆ ಬಗ್ಗಿರುತ್ತದೆ ಮತ್ತು ಇದಕ್ಕೆ ಇನ್ನೊಂದು ಪುಟ್ಟ ಕೊಡದಂತಹ ಬುರುಡೆಯನ್ನು ಜೋಡಿಸಿರುತ್ತಾರೆ.  ಈ ರೀತಿಯ ವೀಣೆ ಮೊಟ್ಟ ಮೊದಲು ತಂಜಾವೂರಿನಲ್ಲಿ ತಯಾರಾದುದರಿಂದ ಇಂತಹ ವೀಣೆಗೆ "ತಂಜಾವೂರು ವೀಣೆ" ಎನ್ನುತ್ತಾರೆ.  ಎಡಗಡೆಗೆ ಜೋಡಿಸಿರುವ ಪುಟ್ಟ ಕೊಡದಂತಹದು ಸೋರೆಬುರುಡೆ ಅಥವಾ ಕಾಗದದ ಬುರುಡೆ, ಪಿತ್ ಅಥವಾ ರಾಳದ ಬುರುಡೆ, ತಗಡಿನ ಬುರುಡೆಯೂ ಆಗಿರಬಹುದು.  ದಂಡಿಯ ಮೇಲ್ಭಾಗಕ್ಕೆ ದೋಣಿ ಪಟ್ಟಿಯನ್ನು ಅಂಟಿಸಿರುತ್ತಾರೆ ಮತ್ತು ಈ ದೋಣಿ ಪಟ್ಟಿಯ ಮೇಲೆ ಉದ್ದಕ್ಕೂ ಎರಡೂ ಕಡೆಗಳಲ್ಲೂ ಹದ ಮಾಡಿದ ಮೇಣದಿಂದ ಜಗಲಿಗಳನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಆಯಾಯಾ ಸ್ವರ ಸ್ಥಾನಗಳಿಗೆ ಅನುಗುಣವಾಗಿ ನೆಡುತ್ತಾರೆ.  ಮೇಣಕ್ಕೆ ಇದ್ದಿಲನ್ನು ನುಣ್ಣಗೆ ಪುಡಿಮಾಡಿ ಬೆರೆಸಿ, ಕಲಸಿ, ಬೆಂಕಿಯಲ್ಲಿ ಕಾಯಿಸಿ ಗೊತ್ತಾದ ಹದಕ್ಕೆ ತಂದು ಕಟ್ಟಬೇಕು.  ಇದರ ಮೇಲೆ ಮೆಟ್ಟಿಲುಗಳನ್ನು ನೆಡುವಾಗ ನಿಶ್ಯಬ್ದತೆ ಇರಬೇಕು.  ಕೂದಲೆಳೆಯಷ್ಟು ವ್ಯತ್ಯಾಸವಾದರೂ ಅಪಸ್ವರ ಬರುತ್ತದೆ.  ಇದಕ್ಕೆ ವೀಣೆಮೇಳ ಕಟ್ಟುವುದು ಎಂದೇ ಕರೆಯುತ್ತಾರೆ.  ಈ ಮೆಟ್ಟಿಲುಗಳ ಮೇಲೆ ವೀಣೆಯ ಕೊಡದ ಮೇಲೆ ಅಂಟಿಸಿದ "ಕುದುರೆ" (ಮರದ ತುಂಡು) ಮೂಲಕ ಹಾದು ನಾಲ್ಕು ತಂತಿಗಳು ಬರುತ್ತವೆ.  ಕುದುರೆಯ ಎತ್ತರ ಮತ್ತು ಮೇಣದ ಎತ್ತರ ಎರಡೂ ಸಮವಾಗಿದ್ದಾಗ ಮಾತ್ರ ಸುಲಲಿತವಾದ ನಾದ ಹೊರಹೊಮ್ಮುತ್ತದೆ.  ನಾಲ್ಕು ತಂತಿಗಳಲ್ಲಿ ಮೊದಲನೆಯದು "ಸಾರಣಿ", ಎರಡನೆಯದು "ಪಂಚಮ", ಮೂರನೆಯದು "ಮಂದ್ರ", ನಾಲ್ಕನೆಯದು "ಅನುಮಂದ್ರ" ಎಂದು ಕರೆಯುತ್ತಾರೆ.  ಇದಲ್ಲದೆ ಕುದುರೆಯ ಪಕ್ಕದಲ್ಲಿ ಬಾಗಿದ ಒಂದು ಹಿತ್ತಾಳೆಯ ರೇಕು ಜೋಡಿಸಿರುತ್ತಾರೆ.  ಇದರ ಮೂಲಕ ಮೂರು ತಾಳದ ತಂತಿಗಳು ಹಾದು ಹೋಗುತ್ತವೆ.  ಅವುಗಳು ಕ್ರಮವಾಗಿ ಮಧ್ಯ ಷಡ್ಜ, ಮಧ್ಯ ಪಂಚಮ ಮತ್ತು ತಾರ ಷಡ್ಜಗಳು.  ವೀಣೆಯ ಎಲ್ಲಾ ಏಳು ತಂತಿಗಳೂ ಎಡಗಡೆಯ ಪುಟ್ಟ ಬುರುಡೆಯ ಕಡೆಗೆ ಹಾದು ಬರುತ್ತವೆ ಮತ್ತು ಒಂದೊಂದು ತಂತಿಯೂ ಒಂದೊಂದು ಬಿರಟೆಯಿಂದ ಕಟ್ಟಲ್ಪಟ್ಟು, ಹೆಚ್ಚಿಗೆ ಇರುವ ತಂತಿ ಅದಕ್ಕೆ ಸುತ್ತಿ ಭದ್ರಪಡಿಸಲ್ಪಟ್ಟಿರುತ್ತದೆ.  ವೀಣೆ ಶ್ರುತಿ ಮಾಡುವಾಗ ಈ ಬಿರಟೆಗಳನ್ನು ಬಿಗಿ ಮತ್ತು ಸಡಿಲು ಮಾಡುವ ಮುಖಾಂತರ ಬೇಕಾದ ಬಿಂದುವಿನಲ್ಲಿ ಸ್ವರ ಕೂಡಿಸಲು ಅನುಕೂಲವಾಗುತ್ತದೆ.

ಮೂರು ಪ್ರತ್ಯೇಕ ಭಾಗಗಳಾದ ಕಾಯಿ, ದಂಡಿ ಮತ್ತು ತಲೆ ಉಳ್ಳ ವೀಣೆಗೆ ’ಖಂಡ ವೀಣೆ’ ಎಂದು ಹೆಸರು.  ಮೂರೂ ಭಾಗಗಳೂ ಏಕವಾಗಿ ಒಂದೇ ಮರದಲ್ಲಿ ಮಾಡಲ್ಪಡುವ ವೀಣೆಗೆ ’ಅಖಂಡ ವೀಣೆ’ ಎಂದು ಹೆಸರು.  ಅಖಂಡ ವೀಣೆಯ ನಾದ ಹೆಚ್ಚು ಮಧುರವಾಗಿರುತ್ತದೆನ್ನುತ್ತಾರೆ.  ವೆಂಕಟಮುಖಿಯವರು  ಉಲ್ಲೇಖಿಸಿರುವ ಮೂರು ವಿಧ ವೀಣೆಗಳಾದ ’ಶುದ್ಧ ಮೇಳ ವೀಣೆ’, ’ಮಧ್ಯಮ ಮೇಳ ವೀಣೆ’ ಮತ್ತು ’ರಘುನಾಥ ಮೇಳ ವೀಣೆ’ ಗಳಲ್ಲಿ ತಂತಿಗಳು ಮೇಲೆ ಹೇಳಿದಂತಿಲ್ಲದೆ ಬೇರೆಯೇ ಕ್ರಮದಲ್ಲಿವೆ ಮತ್ತು ಅವುಗಳನ್ನು ಶ್ರುತಿ ಮಾಡುವ ರೀತಿಯೂ ಬೇರೆಯೇ ಆಗಿವೆ.  ಮೆಟ್ಟಿಲುಗಳ ಜೋಡಣೆಯ ಕ್ರಮದಲ್ಲೂ ಸ್ವಲ್ಪ ವ್ಯತ್ಯಾಸ ಬರುತ್ತದೆ.

ವೀಣೆಯ ಪುಟ್ಟ ಸೋರೆಯ ಬುರುಡೆಯನ್ನು ನುಡಿಸುವವರ ಎಡ ತೊಡೆಯ ಮೇಲಿಟ್ಟುಕೊಳ್ಳುತ್ತಾರೆ, ದೊಡ್ಡ ಕೊಡ ಅಥವಾ ಬುರುಡೆಯನ್ನು ಬಲತೊಡೆಗೆ ತಗುಲುವಂತೆ ಇಟ್ಟುಕೊಂಡು ಕುಳಿತು, ಬಲಗೈನಿಂದ ಮೊದಲನೆಯ ತಂತಿ ಸಾರಣಿಯನ್ನು ತರ್ಜನಿ ಹಾಗೂ ಮಧ್ಯದ ಬೆರಳುಗಳಿಂದ ಮೀಟುತ್ತಾ, ಎಡಗೈಯನ್ನು ಮೇಣದಲ್ಲಿ ಕಟ್ಟಿರುವ ಮೆಟ್ಟಿಲುಗಳ ಮೇಲೆ ಒತ್ತುತ್ತಾ ನಾದ ಹೊಮ್ಮಿಸುತ್ತಾರೆ.  ಬಲಗೈನ ಕಿರು ಬೆರಳಿನಿಂದ ತಾಳದ ತಂತಿಗಳನ್ನು ಬೇಕಾದ ಕಡೆ ತಾಳ ಹಾಕಲು ಉಪಯೋಗಿಸುತ್ತಾರೆ.  ವೀಣೆ ಗಮಕಕ್ಕೆ ತುಂಬಾ ಸೂಕ್ತವಾದ ವಾದ್ಯ.  ಗಾಯನದಲ್ಲಿ ಸಾಧ್ಯವಾಗದೇ ಇರುವ ಸ್ವರಪ್ರಕ್ತಿಯು ಸಹಜವಾಗಿ ತಂತೀವಾದ್ಯವಾದ ವೀಣೆಯಲ್ಲಿ ಅತ್ಯದ್ಭುತವಾಗಿ ಉತ್ಪತ್ತಿ ಮಾಡಬಹುದು.  ವೀಣೆಯ ಮೆಟ್ಟುಗಳ ಮೇಲೆ ಹಾಯುವ ತಂತಿಗಳಲ್ಲಿ ಪ್ರಧಾನ ತಂತಿಯಾದ ಸಾರಣಿ, ಮಂದ್ರ ಪಂಚಮ ಮತ್ತು ಮಂದ್ರ ಷಡ್ಜ ತಂತಿಗಳ ಮೇಲೆ ಸಂವಾದಿ, ಅನುವಾದಿ ಸ್ವರ ರಂಜನೆಗೆ ಆಸ್ಪದವೀಯುವ ಸ್ವರಗಳ ಮೆಟ್ಟಿಲುಗಳನ್ನು ಎಡಗೈ ಬೆರಳುಗನ್ನದುಮಿ ಬಲಗೈ ಬೆರಳಿನ ಒಂದೇ ಒಂದು ಮೀಟಿನಿಂದ ಮೂರೂ ಸ್ವರಗಳನ್ನೂ ಉತ್ಪತ್ತಿ ಮಾಡುವುದೇ ಈ "ಗಮಕ"ದ ತಂತ್ರ.

ಐತರೇಯೋಪನಿಷತ್ತಿನಲ್ಲಿ ನಮ್ಮ ದೇಹವನ್ನು ವೀಣೆಯೆಂದು ಉಲ್ಲೇಖಿಸಿದ್ದಾರೆ....

ಅಥ ಖಲ್ವಿಯಂ ದೈವೀವೀಣಾ ಭವತಿ |  ತದನುಕೃತಿರಸೌ ಮಾನುಷೀ ವೀಣಾ ಭವತಿ |   
ಯಥಾಸ್ಯಾ: ಶಿರ ಏವಮಮುಷ್ಯಾ: ಶಿರ: |
ಯಥಾಸ್ಯಾ ಉದರಮೇವಮಮುಷ್ಯಾ ಅಂಭಣಮ್ | ಯಥಾಸ್ಯೈ ಜಿಹ್ವಾ - ಏವಮಮುಷ್ಯೈ ವಾದನಮ್ |
ಯಥಾಸ್ಯಾಸ್ತಂತ್ರಯ ಏವಮಮುಷ್ಯಾ ಅಂಗುಲಯ: | ಯಥಾಸ್ಯಾ: ಸ್ವರಾ ಏವಮಮುಷ್ಯಾ: ಸ್ವರಾ: ||
 
ಈ ದೇಹವೊಂದು ದೈವೀವೀಣೆ.  ಮನುಷ್ಯರು ನಿರ್ಮಿಸಿದ ಮರದ ವೀಣೆ ದೇವರು ನಿರ್ಮಿಸಿದ ಈ ದೇಹವೀಣೆಯದೇ ಅನುಕರಣೆ.  ದೇಹಕ್ಕೆ ತಲೆಯಿದ್ದಂತೆ ಮರದ ವೀಣೆಗೆ ಪುಟ್ಟ ಬುರುಡೆ ಇದೆ, ದೇಹದ ಉದರ ಹಾಗೂ ಪೀಠವಿದ್ದಂತೆ ವೀಣೆಗೆ ಕೊಡ ಅಥವಾ ದೊಡ್ಡ ಬುರುಡೆಯಿದೆ.  ಬೆನ್ನುಹುರಿಯು ಉದ್ದಕ್ಕೆ ದೇಹದಲ್ಲಿ  ಪೀಠದಿಂದ ಕಂಠದವರೆಗೆ ಪಸರಿಸಿ ಪೀಠವನ್ನು ಮತ್ತು ದೇಹದ ಕೆಳಗಿನ ಭಾಗದ ಸಂಪರ್ಕವನ್ನು ತಲೆಗೆ ಮುಟ್ಟಿಸಿದೆಯೋ ಹಾಗೆ ವೀಣೆಯಲ್ಲಿ ಮರದ ದೋಣಿ ಕೊಡವನ್ನು ಪುಟ್ಟ ಬುರುಡೆಗೆ ಸೇರಿಸಿದೆ.  ಬೆನ್ನುಹುರಿಯಲ್ಲಿರುವಂತೆಯೇ ಈ ದೋಣಿಯ ಮೇಲೆ ಮೇಣವನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಸ್ವರಸ್ಥಾನಗಳಾಗಿ ಜೋಡಿಸಿರುತ್ತಾರೆ.  ದೇಹದ ವೀಣೆಗೆ ನಾಲಿಗೆ ಹೇಗೆ ಸ್ವರ / ನಾದವನ್ನು ಉತ್ಪತ್ತಿ ಮಾಡುವುದೋ ಹಾಗೆ ವೀಣೆಯ ಮೇಲೆ ವಾದಕನ ಬೆರಳುಗಳು ನಾದವನ್ನು ಸೃಷ್ಟಿಸುತ್ತವೆ.  ದೇಹಕ್ಕೆ ನರಗಳೇ ತಂತಿಗಳು.  ನಾದ ಮೈತುಂಬಿದಾಗ, ನರ ನರವೂ ನಾದದ ಅಲೆಯಲ್ಲಿ ತೇಲಿಹೋಗುವುದು.  ಹಾಗೇ ವೀಣೆಯ ತಂತಿಗಳೂ, ವಾದಕನ ಬೆರಳುಗಳು ತಂತಿಯ ಮೇಲೆ ಆಟವಾಡಿದಾಗ, ಅಲೆ ಅಲೆಯಾಗಿ ನಾದ ವೀಣೆಯ ಕೊಡದಿಂದ ಚಿಮ್ಮುತ್ತದೆ.  ದೇಹವೆಂಬ ದೈವೀವೀಣೆ ದೇವರ ಗುಣಗಾನಕ್ಕೇ ಮೀಸಲಾದ ವೀಣೆ.  ಈ ದೇಹ ವೀಣೆಗೆ ನಮ್ಮ ಕೈಗಳೇ ತಾಳವಾದ್ಯ.  ಕೈ ತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆಯಿಂದ ಭಗವಂತನ ಸ್ಮರಣೆಯನ್ನು ನುಡಿಸಬೇಕು. 

ವೀಣೆ ದೈವೀಕವಾದರೂ ನಮ್ಮ ಜೀವನದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.  ಬೇರೆ ಎಲ್ಲಾ ವಾದ್ಯಗಳಿಗಿಂತಲೂ ವೀಣೆ ವಾದಕನ ಮನಸ್ಸಿನ ಭಾವಗಳನ್ನು ಅತ್ಯಂತ ನವಿರಾಗಿ ಬಿಂಬಿಸುತ್ತದೆ ಎನಿಸುತ್ತದೆ.  ವೀಣೆ ಅಭ್ಯಾಸ ಮಾಡುವಾಗ ಮನಸ್ಸು ಪ್ರಶಾಂತವಾಗುತ್ತದೆ.  ತಂತಿಗಳ ಮೇಲೆ ಮೆಲ್ಲಗೆ ಬೆರಳಾಡಿಸಿದಾಗ ಝುಮ್ಮೆನ್ನುವ ನಾದ ನಮ್ಮ ನರನಾಡಿಗಳಲ್ಲೂ ಪ್ರವಹಿಸಲಾರಂಭಿಸುತ್ತದೆ.  ವಾದಕನ ಹೃದಯಕ್ಕೆ ಹತ್ತಿರವಾಗಿ ನಾದ ಮಿಡಿಯುವ ವೀಣೆ ಅತ್ಯಂತ ಆಪ್ತವಾಗುತ್ತದೆ.  ಅದೊಂದು ವಾದ್ಯವೆಂಬ ಅಂಶ ಮರೆತುಹೋಗಿ ಜೀವದ ಗೆಳತಿಯಾಗಿಬಿಡುತ್ತದೆ.  ನಮ್ಮ ಭಾವನೆಗಳನ್ನು ಅರಳಿಸ ತೊಡಗುತ್ತದೆ.  ಹೊರ ಹೊಮ್ಮುವ ನಾದ ನಮ್ಮೊಡನೆ ಮಾತನಾಡಾಲಾರಂಭಿಸುತ್ತದೆ.  ಎಡಕೈ ಬೆರಳುಗಳು ತಂತಿಯ ಮೇಲೆ ಸ್ವಲ್ಪವೇ ಒತ್ತಡದಿಂದ ಚಲಿಸಲಾರಂಭಿಸಿದೊಡನೇ ನಮ್ಮೊಳಗಿನ ಭಾವನೆಗಳ ಪ್ರಪಂಚ ಅನಾವರಣಗೊಳ್ಳುತ್ತಾ ಎಲ್ಲೆಲ್ಲೂ ನಾದವೇ ತುಂಬಿರುವ ಅನುಭವ ಕೊಡುತ್ತದೆ.  ನಡುನಡುವೆ ತಾಳದ ತಂತಿಗಳನ್ನು ಮೀಟುವಾಗ ಮಂದ್ರ ಹಾಗೂ ತಾರದಲ್ಲಿ ’ಸ’ ಮತ್ತು ಮಧ್ಯಮದಲ್ಲಿ ’ಪ’ ಮಿಶ್ರವಾಗಿ ಗೆಜ್ಜೆಯ ಘಲ್ ಘಲ್ ಶಬ್ದ ಕೇಳಿಸುವಂತಾಗುತ್ತದೆ.  ವೀಣೆಯ ಪುಟ್ಟ ಬುರುಡೆಯನ್ನು ವಾದಕ ತನ್ನ ಎಡ ತೊಡೆಯ ಮೇಲಿಟ್ಟುಕೊಂಡು ನುಡಿಸುವಾಗ, ಕಂಪನದಿಂದುಂಟಾಗುವ ನಾದ ನಮ್ಮ ಶರೀರದಲ್ಲೂ ದಿವ್ಯ ಕಂಪನದ ಅನುಭವ ಕೊಡುತ್ತದೆ.   ವಿಜಯಭಾಸ್ಕರ ಸಂಗೀತ ನೀಡಿರುವ, ಶ್ರೀಮತಿ ಬಿ ಕೆ ಸುಮಿತ್ರ ಅವರು ಹಾಡಿರುವ  ’ಕಲ್ಯಾಣಿ’ ಚಿತ್ರದ  "ವೀಣಾ.. ನಿನಗೇಕೋ ಈ ಕಂಪನ | ಮೃದುವಾಗಿ ನುಡಿ ಮುದವಾಗಿ ನುಡಿ | ರಾಗ ಸಂಮೋಹನ ||" ಹಾಡು ನುಡಿಸುವವರ ಮನದ ಭಾವನೆಗಳ ಜೊತೆ ಎಷ್ಟು ಸುಂದರವಾಗಿ ವೀಣೆಯ ತರಂಗಗಳು ಬೆಸೆದುಕೊಳ್ಳುತ್ತವೆನ್ನುವುದಕ್ಕೆ ಉತ್ತಮ ಉದಾಹರಣೆಯಾಗುತ್ತದೆ.  
http://www.raaga.com/play/?id=191059

ಒಮ್ಮೆ ಮೀಟಿದರೆ ಸಾಕು ನಾದಕ್ಕೆ ಮನಸೋಲುವಂತೆ ಮಾಡುವುದು ವೀಣೆ ಎಂಬ ಮಾತನ್ನು ಈ ಹಾಡಿನಲ್ಲಿ "ನಿನ್ನಯ ನಾದಕೆ ಮೈಮನ ಒಲಿಸಿ" ಎಂದೂ,  ಭಾವನೆಗಳ ಹೊಸ ಪ್ರಪಂಚದ ಅನಾವರಣವಾಗುತ್ತದೆ ಎಂಬ ಮಾತನ್ನು "ಭಾವತರಂಗದಿ ಲೋಕವ ಮರೆಸಿ" ಎಂದೂ ಹೇಳಿದ್ದಾರೆ.  ನಾದದೊಂದಿಗೆ ಮೈಮನ ತೇಲಿದಾಗಲೇ ನಡೆಯುವುದು ಸ್ವಚ್ಛ ಮನದಿಂದ ಭಗವಂತನ ಆರಾಧನೆ.

ಸರಸ್ವತಿ ದೇವಿಯನ್ನು ವೀಣಾಪಾಣಿ ವಿಶ್ವ ಕಲ್ಯಾಣಿ, ಗಾಯನ, ನರ್ತನ ನಂದ ಪ್ರದಾಯಿನಿ ಎನ್ನುತ್ತಾ,  ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ ಎನ್ನುತ್ತಾರೆ ಡಿವಿಜಿಯವರು.  ಸಂಗೀತ ಶಾಸ್ತ್ರದಲ್ಲಿ ಬರುವ ಆಹತ ಅನಾಹತದ ನೆನಪು ಮಾಡಿಕೊಡುತ್ತದೆ - ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ.  ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ.  ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ ಎಂದು ಸುಂದರವಾಗಿ ವರ್ಣಿಸಿದ್ದಾರೆ ಡಿವಿಜಿಯವರು ತಮ್ಮ ಅಂತಃಪುರ ಗೀತೆ  ಸಂಕಲನದಲ್ಲಿರುವ "ವೀಣಾಪಾಣಿ ವಿಶ್ವ ಕಲ್ಯಾಣಿ ಗಾಯನ ನರ್ತನ ನಂದ ಪ್ರದಾಯಿನಿ".. ಎಂಬ ರಚನೆಯಲ್ಲಿ.  




ಶೃಂಗಾರ ರಸದ ಪ್ರಚೋದನೆಗೆ ಕೂಡ ವೀಣೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸಿದ್ದಾರೆ ಕವಿ ಶ್ರೀ ಸಾ ಶಿ ಮರುಳಯ್ಯ.  ಅವರು ತಮ್ಮ  "ಶ್ರುತಿ ಸುಖ್ಹ ನಿನದೆ ಕಲರವ ವರದೇ.... ಓ ಗೆಳತಿ.. ಘೋಷವತಿ... || ಎಂಬ ರಚನೆಯಲ್ಲಿ ಉದಯನ ನುಡಿಸುತ್ತಿದ್ದನೆನ್ನಲಾದ ಘೋಷವತಿ ಎಂಬ ವೀಣೆಯನ್ನು ಕುರಿತು ಪ್ರಸ್ತಾಪಿಸಿದ್ದಾರೆ.





ಉದಯನ ಹೃದಯ ಮೋದ ತರಂಗಿಣಿ | ವಾಸವದತ್ತಾ ಪ್ರಣಯ ಪ್ರಚೋದಿನಿ |


ಕುಂಜರ ಭಂಜನಿ ಕುಮುದ ನಿರಂಜನಿ | ಮಂಗಳ ಪತಗಳ ಮಧುರ ಸುಭಾಷಿಣಿ ||


ಚಿಗುರಿನ ಬೆರಳಲಿ ತಂತಿಯ ಮೀಟಲು | ಷಡಜದ ಸವಿದನಿ ಜಿನುಗಿಸುವೆ |


ಪಂಚಮದಂಚಿಗೆ ನಾದದ ಬ್ರಹ್ಮಕೆ | ವೀಣಾಮಣಿ ನೀ ಕುಣಿಯಿಸುವೆ ||


ಪ್ರದ್ಯೋತ್ತೋನ್ನತ ಪ್ರಥಮ ಪ್ರಭಾತಕೆ | ಧೃತಗತಿಯಲಿ ನೀ ಸಂಚಲಿಸಿ |


ರಾಗಿಣಿ ಭಾಮಿನಿ ಪ್ರೇಮೋನ್ಮಾದಿನಿ | ಮಧುಕರ ಮಿಲನಕೆ ನೆರವಾಗೇ ||  




ನುಡಿಸುವ ಉದಯನನ ಹೃದಯದ ತರಂಗಿಣಿ, ರಾಗಿಣಿ, ಭಾಮಿನಿ, ಪ್ರೇಮೋನ್ಮಾದಿನಿ ಎಂದೆಲ್ಲಾ ವರ್ಣಿಸುತ್ತಾ ಚಿಗುರಿನ ಬೆರಳುಗಳು ತಂತಿಯ ಮೀಟಿದಾಗ ಷಡ್ಜದ ಸವಿದನಿಯಿಂದ ಪಂಚಮದ ಪ್ರೇಮನಾದವನ್ನು ಹೊರಡಿಸುತ್ತಾ,  ಹೃದಯದಲ್ಲಿ ಸುಖದ ಕಲ್ಪನೆಯ ತರಂಗಗಳನ್ನು ಮೀಟಿ ಎಚ್ಚರಿಸುತ್ತಾ ಮಧುಕರ ಮಿಲನಕ್ಕೆ ನೆರವಾಗೇ ಎಂದು ನುಡಿದಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ 


ಆಧಾರ ಪುಸ್ತಕಗಳು : ಕರ್ನಾಟಕ ಸಂಗೀತದ ಪಠ್ಯ ಪುಸ್ತಕ  
"ವೀಣೆ" - ರಾಜಶ್ರೀ (ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಾಶನ)


Wednesday, September 19, 2012

ಮೂಲಾಧಾರ ಚಕ್ರದಲ್ಲಿ ಗಣಪ



ನಮ್ಮ ಭಾರತೀಯ ಪರಂಪರೆಯಲ್ಲಿ ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ ಮೊದಲ ಪೂಜೆ ಸ್ವೀಕರಿಸುವವನು ವಿಘ್ನ ನಿವಾರಕನಾದ ವಿಘ್ನೇಶ್ವರನು.   ಗಣಪತಿ, ಬೆನಕ, ಮೋದಕಪ್ರಿಯ, ಲಂಬೋಧರ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಡುವವನು.  ಗಣೇಶ ನಮ್ಮ ಭಾರತದಲ್ಲಿ ಮಾತ್ರವೇ ಅಲ್ಲದೇ ಇಡೀ ಪ್ರಪಂಚದಲ್ಲೇ ಪ್ರಸಿದ್ಧನಾದವನು.  ಪಾರ್ವತಿ ಪುತ್ರನಾಗಿ ಉದ್ಭವಿಸಿದವನು.  ತಾಯಿ ಪಾರ್ವತಿ ಬಾಗಿಲಿನಲ್ಲಿ ಕಾವಲಿಗೆ ನಿಲ್ಲಿಸಿದ್ದಳು ಎಂದು ಪುರಾಣ ಕಥೆಗಳಲ್ಲಿ ತಿಳಿಸಲ್ಪಟ್ಟಿದೆ.  ಅದರ ಅರ್ಥ ಗಣೇಶ ನಮ್ಮನ್ನು ಕಾಪಾಡುವವನು, ರಕ್ಷಿಸುವವನು, ನಮ್ಮೆಲ್ಲಾ ಕಷ್ಟಗಳನ್ನೂ ನಿವಾರಿಸುವವನು ಎಂದಾಗುತ್ತದೆ.  ಗಣಪತಿ ಅತೀ ಬುದ್ಧಿಶಾಲಿ ಮತ್ತು ಸೂಕ್ಷ್ಮ ತರಂಗಗಳನ್ನು ಸೃಷ್ಟಿಸುವವನು.  ಆನೆಗಳು ವಾತಾವರಣದಲ್ಲಿರುವ ಅತೀ ಸೂಕ್ಷ್ಮವಾದ ಶಬ್ದ  ತರಂಗಗಳನ್ನು ಗ್ರಹಿಸಬಲ್ಲದು.  ಮುಂದಾಗುವ ಅಪಾಯದ ಸೂಚನೆಯನ್ನು ಬೇರೆಲ್ಲಾ ಪ್ರಾಣಿಗಳಿಗಿಂತಲೂ ಮೊದಲೇ ಗ್ರಹಿಸುವ ಶಕ್ತಿಯುಳ್ಳದ್ದು.  ಆನೆಯ ಮೊಗದವನಾದ ಗಣೇಶ ಕೂಡ ಹೀಗೆ ಮುಂಬರುವ ನಮ್ಮೆಲ್ಲಾ ಅಪಾಯಗಳನ್ನೂ ಗ್ರಹಿಸಿ ನಮ್ಮನ್ನು ಪೊರೆಯುವನೆಂಬ ನಂಬಿಕೆ ನಮ್ಮಲ್ಲಿ ತುಂಬಾ ಆಳವಾಗಿ ನೆಲೆಸಿದೆ. 


ಗಣಪತಿಯನ್ನು ವಿಘ್ನನಿವಾರಕನೆಂದು ಪ್ರಥಮವಾಗಿ ಪೂಜಿಸುತ್ತೇವೆ.  ನಾವು ಮಾಡುವ ಯಾವುದೇ ಕಾರ್ಯದಲ್ಲಾಗಲೀ ವಿಘ್ನಗಳು ಬಾರದಂತೆ ತಡೆಯುತ್ತಾನೆಂಬ ನಂಬಿಕೆ.  ಆದ್ದರಿಂದಲೇ ಅವನು "ಪ್ರಥಮ ಪೂಜಿತ ಪ್ರಮಥಾದಿ ವಂದಿಪ".  ಬೇರೆಲ್ಲಾ ದೇವತೆಗಳಿಗಿಂತಲೂ ವಿಭಿನ್ನಾಕೃತಿ ಹೊಂದಿರುವ ಗಣಪ ನೋಡಿದ ಕೂಡಲೇ ಆತ್ಮೀಯತೆಯನ್ನು ಉಂಟುಮಾಡುತ್ತಾನೆ.  ಸುಲಭವಾಗಿ ಒಲಿಯಬಲ್ಲವ, ನಮ್ಮ ಕಷ್ಟಗಳನ್ನು ಅರ್ಥೈಸಿಕೊಳ್ಳಬಲ್ಲವ ಎಂಬ ಭಾವ ಪ್ರಕಟಿಸುತ್ತಾನೆ.

ಗಣಪತಿಯ ಆರಾಧನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.  ಪ್ರಾಚೀನ ಕಾಲದಿಂದಲೂ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ನಾವು ಗಣಪತಿಯ ವರ್ಣನೆ, ಆರಾಧನೆಯನ್ನು ಕಾಣಬಹುದು.  ನಮ್ಮ ಜನಪದ ಸಾಹಿತ್ಯದಲ್ಲೇ ಅತ್ಯಂತ ಮಧುರವಾದ  "ಶರಣು ಶರಣುವಯ್ಯ ಗಣನಾಯಕ | ನಮ್ಮ ಕರುಣದಿಂದಲಿ ಕಾಯೊ ಗಣನಾಯಕ | ಎಂಬ ಪದದಲ್ಲಿ ಗಣಪತಿಗೆ ಪ್ರಿಯವೆನ್ನಲಾದ ಭಕ್ಷ್ಯಗಳ ವಿವರಣೆಯೆಲ್ಲಾ ಕೊಟ್ಟಾದ ನಂತರ "ನಿಮ್ಮಲ ಮನದಲ್ಲಿ ಗಣನಾಯಕ | ನಿಮ್ಮ ಧ್ಯಾನವ ಮಾಡುವೆ ಗಣನಾಯಕ|" ಎನ್ನುತ್ತಾ ನಿಮ್ಮಲ ಮನದವನಾದ ದೇವನು ನಮಗೂ ನಿರ್ಮಲ ಚಿತ್ತವನ್ನು ಕರುಣಿಸುವವನು ಎಂದಿದ್ದಾರೆ.   ದಾಸ ಸಾಹಿತ್ಯದಲ್ಲಿ ಕೂಡ ನೂರಾರು ಕೀರ್ತನೆಗಳನ್ನು ವಿವಿಧ ದಾಸರುಗಳು ರಚಿಸಿರುವುದನ್ನು ನಾವು ಕಾಣುತ್ತೇವೆ.

ಶ್ರೀ ಶಂಕರಾಚಾರ್ಯರು ತಮ್ಮ "ಗಣೇಶ ಪಂಚಕ - ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ"ದಲ್ಲಿ ಸಾಧಕರಿಗೆ ಮೋಕ್ಷವನ್ನು ಕೊಡುವವನು ಮತ್ತು  "ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ" - ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿರುವಂತಹ ಸಾಧಕರು ಮತ್ತು ಯೋಗಿಗಳ ಹೃದಯದಲ್ಲಿ ನಿರಂತರವಾಗಿ ನೆಲೆಸಿರುವವನಾದ್ದರಿಂದ ಗಣೇಶನನ್ನು ಸದಾ ಧ್ಯಾನಿಸುತ್ತಿರಬೇಕು ಎಂದಿದ್ದಾರೆ.  ಇದಲ್ಲದೆ ಶ್ರೀ ಶಂಕರರ ಏಕಶ್ಲೋಕೀ ಗಣಪತಿ ಸ್ತೋತ್ರಮ್, ಶ್ರೀ ಗಣೇಶ ಭುಜಂಗ ಸ್ತೋತ್ರ ಮತ್ತು ಶ್ರೀ ಗಣೇಶ ಸ್ತೋತ್ರ ಮಾಲ ಎಂಬ ರಚನೆಗಳೂ ಪ್ರಚಲಿತದಲ್ಲಿವೆ.

ನಮ್ಮ ದೇಹದಲ್ಲಿರುವ ಏಳು ಚಕ್ರಗಳಲ್ಲಿ ಮೊದಲನೆಯದೂ, ಹಾಗೂ ಭೂಮಿ ತತ್ವಕ್ಕೆ ಹೊಂದಿಕೊಂಡಿರುವುದೂ  ಮೂಲಾಧಾರ ಚಕ್ರ.  ಏಳು ಚಕ್ರಗಳಿಗೂ ತಮ್ಮದೇ ಆದ ಬೇರೆ ಬೇರೆ ಬಣ್ಣಗಳಿವೆ ಮತ್ತು ಪ್ರತ್ಯೇಕ ಬೀಜಾಕ್ಷರಗಳಿವೆ.  ಮೂಲಾಧಾರ ಚಕ್ರವೇ ವಿಘ್ನೇಶ್ವರನ ನಿವಾಸ ಸ್ಥಾನ ಮತ್ತು ಗಣೇಶ ಆದಿಶಕ್ತಿಯ ಮಗನಾದ್ದರಿಂದ ಅವನು ಶಕ್ತಿದೇವಿಯ ಜೊತೆಗೆ ನಮ್ಮ ದೇಹದಲ್ಲಿನ ಎಲ್ಲಾ ಚಕ್ರಗಳನ್ನೂ ನೆಲೆಸಿದ್ದಾನೆಂಬ ನಂಬಿಕೆಯಿದೆ.   ಮೂಲಧಾರ ಚಕ್ರದ ಬೀಜಾಕ್ಷರ "ಲಂ" - ಲಂಬೋದರನ ಹೆಸರಿನ ಮೊದಲ ಅಕ್ಷರವೇ ಲಂ.  ಈ ಚಕ್ರದ ಬಣ್ಣ ಕೆಂಪು ಮತ್ತು ಅಧಿಪತಿ ಬುಧ.  ಬುಧ ಬುದ್ಧಿಯ ಸಂಕೇತನಾದ್ದರಿಂದ ಗಣಪತಿ ಕೂಡ ಜ್ಞಾನವನ್ನು ಕೊಡುವವನಾಗುತ್ತಾನೆ.  ಗಣೇಶನ ಪೂಜೆಯಲ್ಲಿ ಕೆಂಪು ಹೂವಿಗೆ ಪ್ರಾಧಾನ್ಯತೆ ಇದೆ. ಮೂಲಾಧಾರ ಚಕ್ರ ನಮ್ಮ ಭೌತಿಕ ಬದುಕಿಗೆ ಬಹಳ ಬಲವಾದ ಅಡಿಪಾಯ ಕೊಡುವುದು.  ಭೂಮಿತತ್ವದ ಈ ಮೂಲಾಧಾರ ಚಕ್ರವನ್ನು ವಿಕಸನಗೊಳಿಸಲು ಸತತವಾಗಿ "ಲಂ" ಬೀಜಾಕ್ಷರದ ಜಪಾನುಷ್ಠಾನ ಮಾಡಬೇಕು.  ಸದಾ ಲಂಬೋದರನನ್ನು ಧ್ಯಾನಿಸುವುದರ ಮೂಲಕ ನಾವು ಚಕ್ರ ಉದ್ದೀಪನಗೊಳಿಸಿಕೊಳ್ಳಬಹುದಾಗಿದೆ.   ಪೃಥ್ವಿ ತತ್ವದಲ್ಲಿ ನೆಲೆಸಿರುವುದರಿಂದಲೇ ಗಣಪತಿ ನಮಗೆ ಅತ್ಯಂತ ಆತ್ಮೀಯನಾಗುತ್ತಾನೆ.  ಗಣಪತಿಗೆ ಅಗ್ರ ಪೂಜೆ ಸಲ್ಲಿಸುವ ಕಾರಣವೂ ಇದೇ ಆಗಿದೆ ಮತ್ತು ಗಣಪತಿಯ ಆರಾಧನೆಯಿಂದ ನಮಗೆ ಜೀವನದಲ್ಲಿ ಧೃಡತೆ ಸಿಕ್ಕುತ್ತದೆ.  ನಮ್ಮ ಬದುಕಿನ ನೆಲೆ ಗಟ್ಟಿಯಾಗಿದ್ದಾಗ, ನಾವು ಜೀವನದಲ್ಲಿ ಮುಂದೆ ಉನ್ನತವಾದ ಧ್ಯೇಯಗಳನ್ನು ಪಾಲಿಸಲು, ಗುರಿ ತಲುಪಲು ಅನುಕೂಲವಾಗುತ್ತದೆ.  "ಗಂ" ಎಂಬ ಬೀಜ ಮಂತ್ರ ನಮ್ಮ ಅಂತರಂಗದ ಮೌನವನ್ನು ಸೂಚಿಸುತ್ತದೆ.  ಹಾಗೆಂದರೆ ನಮ್ಮೊಳಗೇ ಇರುವ ಆಂತರ್ಯದ ಮೌನವನ್ನು ನಾವು ಉದ್ದೀಪನಗೊಳಿಸಿಕೊಳ್ಳಬೇಕೆಂಬ ಮಾತನ್ನು "ಗಂ ಗಣಪತಿಯೇ ನಮಃ" ಎಂಬ ಮಂತ್ರ ಸ್ಪಷ್ಟ ಪಡಿಸುತ್ತದೆ.  ಮೂಲಾಧಾರ ಚಕ್ರದಲ್ಲಿ ಕುಳಿತಿರುವ ಗಣಪತಿ ತಾನೇ ಒಂದು ಮಗುವಾಗಿ ನಮಗೆ ಮಗುವಿನ ಮುಗ್ಧತೆಯನ್ನು ದಯಪಾಲಿಸುತ್ತಾನೆ.  ನಮ್ಮ ಸುತ್ತಲೂ ನಾವು ಕಟ್ಟಿಕೊಂಡಿರುವ ಭೌತಿಕ ಬಂಧನಗಳನ್ನು ಬಿಡಿಸಲು ಸಹಾಯ ಮಾಡುತ್ತಾನೆ.

ನಾವು ಗಣಪತಿಯ ಮುಂದೆ ತೆಂಗಿನಕಾಯಿಯನ್ನು ಅಪ್ಪಳಿಸುತ್ತೇವೆ, ಇದು ನಮ್ಮ "ಅಹಂ"ನ್ನು ಚೂರು ಚೂರಾಗಿ ನೆಲಕ್ಕೆ ಅಪ್ಪಳಿಸಿ, ಗಣೇಶನಿಗೆ ಸಂಪೂರ್ಣ ಶರಣಾಗತರಾಗುವ ಸೂಚನೆ.  ಯಾವಾಗ ನಾವು ನಮ್ಮ "ಅಹಂಸಂಪೂರ್ಣವಾಗಿ ತೊರೆಯುತ್ತೇವೆಯೋ ಆಗ ನಾವು ಮುಂದಿನ ಹಂತದ ಸಾಧನೆಗೆ ಅರ್ಹತೆ ಪಡೆಯುತ್ತೇವೆ.   ಎಲ್ಲಾ ಭಾವಗಳನ್ನೂ ಬಿಟ್ಟು, ನಿರ್ಮೋಹ ಭಾವದಿಂದ ನಾವು ಶರಣಾದಾಗಲೇ ನಮ್ಮ ಆಧ್ಯಾತ್ಮದ ಮುಗ್ಧ ಚೇತನದ ಅರಿವು ನಮಗಾಗುವುದು.  ಪ್ರತೀ ವರ್ಷವೂ ಗಣಪತಿಯ ಮೂರ್ತಿಯನ್ನು ತಂದು ಪೂಜಿಸಿ, ನೀರಿನಲ್ಲಿ ವಿಸರ್ಜಿಸಿ ಬಿಡುವುದರ ಅರ್ಥ, ನಮ್ಮ ಬದುಕೂ ಕೂಡ ಹೀಗೆ ಪಂಚಭೂತಗಳಿಂದ ಮಾಡಲ್ಪಟ್ಟಿದೆಯೆಂದೂ ಮತ್ತು ಒಂದು ದಿನ ಮತ್ತೆ ಅಲ್ಲಿಯೇ ಲೀನವಾಗಬೇಕೆಂದೂ ಅಶಾಶ್ವತವೆಂದೂ ಸ್ಪಷ್ಟಪಡಿಸುತ್ತದೆ.  ತನ್ನನ್ನೇ ತಾನು ನೀರಿನಲ್ಲಿ ಕರಗಿಸಿಕೊಂಡು ನಮಗೆ ತಾವರೆ ಎಲೆಯ ಮೇಲಿನ ನೀರಿನ ಹನಿಯಂತೆ ಬದುಕಬೇಕೆಂಬುದನ್ನು ಉಪದೇಶಿಸುತ್ತಿದ್ದಾನೆ ವಿನಾಯಕ.

ಕರ್ನಾಟಕ ಸಂಗೀತದಲ್ಲಿ ಕೂಡ ಶ್ರೀ ಗಣೇಶನ ಆರಾಧನೆ ವಾಗ್ಗೇಯಕಾರರುಗಳಿಂದ ಮಾಡಲ್ಪಟ್ಟಿದೆ.  ಸಂಗೀತ ಪಿತಾಮಹತ್ರಯರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಹಂಸಧ್ವನಿ ರಾಗದ "ವಾತಾಪಿ ಗಣಪತಿಂ ಭಜೇ" ಎಂಬ ಕೃತಿಯಲ್ಲಿ
"ಭೂತಾದಿ ಸಂಸೇವಿತ ಚರಣಂ |  ಭೂತ ಭೌತಿಕ ಪ್ರಪಂಚ ಭರಣಂ ||
ವೀತ ರಾಗಿಣಂ ವಿನುತ ಯೋಗಿನಂ | ವಿಶ್ವ ಕಾರಣಂ ವಿಘ್ನ ವಾರಣಂ" ||  - ಪಂಚ ಭೂತಾದಿಗಳಿಂದಲೂ ನಮಸ್ಕರಿಸಲ್ಪಟ್ಟ ಪಾದಂಗಳ ಹೊಂದಿರುವವನೂ, ಪ್ರಪಂಚವನ್ನು ಸಮಸ್ಥಿತಿಯಲ್ಲಿ ಇಟ್ಟಿರುವವನೂ, ಕಾಮ, ಕ್ರೋಧ, ರಾಗ ದ್ವೇಷಗಳನ್ನು ತ್ಯಜಿಸಿ, ವೈರಾಗ್ಯವನ್ನು ತಳೆದಿರುವ ಯೋಗಿಗಳಿಂದ ನಮಸ್ಕರಿಕೊಳ್ಳುವವನೂ, ಪ್ರಪಂಚಕ್ಕೆಲ್ಲ ಕಾರಣ ಭೂತನಾದವನು, ವಿಘ್ನಗಳನ್ನು ನಿವಾರಿಸುವವನೂ ಆದ ಗಣಪತಿಯನ್ನು ಸ್ಮರಿಸುತ್ತೇನೆ ಎನ್ನುತ್ತಾರೆ.  ಮುಂದುವರೆಯುತ್ತಾ ಕೃತಿಯ ಚರಣದಲ್ಲಿ
"ಪುರಾ ಕುಂಭಸಂಭವ ಮುನಿವರ ಪ್ರಪೂಜಿತಂ - ತ್ರಿಕೋಣ ಮಧ್ಯಗತಂ |
ಮುರಾರಿ ಪ್ರಮುಖಾದ್ಯುಪಾಸಿತಂ - ಮೂಲಾಧಾರ ಕ್ಷೇತ್ರಂ ಸ್ಥಿತಂ |
ಪರಾದಿ ಚತ್ವಾರಿ ವಾಗಾತ್ಮಕಂ - ಪ್ರಣವ ಸ್ವರೂಪ ವಕ್ರ ತುಂಡಂ |
ನಿರಂತರಂ ನಿಟಿಲ ಚಂದ್ರಖಂಡಂ - ನಿಜ ವಾಮಕರ - ವಿಧೃತೇಕ್ಷು ದಂಡಂ |
ಕರಾಂಬುಜ ಪಾಶ ಬೀಜಾಪೂರಂ - ಕಲುಷ ವಿದೂರಂ - ಭೂತಾಕಾರಂ |
ಹರಾದಿ ಗುರುಗುಹ ತೋಷಿತಬಿಂಬಂ - ಹಂಸಧ್ವನಿ ಭೂಷಿತ ಹೇರಂಬಂ" || - ಅನಾದಿ ಕಾಲದಿಂದಲೂ ಮುನಿ ಶ್ರೇಷ್ಠರಿಂದಲೂ, ಮುರಾರಿಯಂತಹ ಪ್ರಮುಖ ದೇವತೆಗಳಿಂದ ಉಪಾಸಿಸಲ್ಪಟ್ಟವನೂ, ಮೂಲಾಧಾರ ಚಕ್ರದಲ್ಲಿ ನೆಲೆಸಿರುವವನೂ, ಪರಾ-ಪಶ್ಯಂತಿ-ಮಧ್ಯಮಾ-ವೈಖರೀ ಎಂಬ ನಾಲ್ಕು ಮಾತುಗಳಿಂದ ಕೂಡಿದ "ಓಂ"ಕಾರ ಸ್ವರೂಪನೂ, ವಕ್ರತುಂಡನೂ, ಹಣೆಯಲ್ಲಿ ಚಂದ್ರನ ಗುರುತನ್ನು ಹೊಂದಿರುವವನೂ, ಕಬ್ಬಿನ ಕೋಲನ್ನು ಹಿಡಿದಿರುವವನೂ, ಮನಸ್ಸಿನ ಕಲ್ಮಷವನ್ನು ದೂರಮಾಡುವವನೂ, ಭೂತಕಾರನಾದ ಪರಮೇಶ್ವರನೇ ಮೊದಲಾದವರಿಂದ ವಂದಿಸಲ್ಪಡುವವನೂ ಸುಬ್ರಹ್ಮಣ್ಯನಿಂದ ಸಂತೋಷಿಸಲ್ಪಡುವವನೂ, ಹಂಸಧ್ವನಿ ರಾಗದ ಭೂಷಣನೂ ಆದ ಗಣಪತಿಯನ್ನು ಭಜಿಸುತ್ತೇನೆ ಎನ್ನುತ್ತಾರೆ. 

ಶ್ರೀ ದೀಕ್ಷಿತರು ತಮ್ಮ "ಶ್ರೀ" ರಾಗದ ಇನ್ನೊಂದು ಕೃತಿ "ಶ್ರೀ ಮೂಲಾಧಾರ ಚಕ್ರ ವಿನಾಯಕ | ಅಮೂಲ್ಯ ಪರಪ್ರದಾಯಕ || ಯಲ್ಲಿ ಪ್ರಾರಂಭದಲ್ಲೇ ಮೂಲಾಧಾರ ಚಕ್ರದಲ್ಲಿ ನೆಲೆಸಿರುವವನು ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ.  ಅಮೂಲ್ಯವಾದ ವರಗಳನ್ನು ಬೇಡಿದ ಭಕ್ತರಿಗೆ ಕರುಣಿಸುವವನು ಎನ್ನುತ್ತಾ "ಮೂಲಜ್ಞಾನ ಶೋಕ ವಿನಾಶಕ | ಮೂಲಕಂದ ಮುಕ್ತಿಪ್ರದಾಯಕ || - ಭಕ್ತರ ದುಃಖ ಮತ್ತು ಅಜ್ಞಾನವನ್ನು ಹೋಗಲಾಡಿಸುವವನು, ಸಂಪೂರ್ಣ ಶರಣಾಗತರಾದವರಿಗೆ ಮುಕ್ತಿಯನ್ನು ಕರುಣಿಸುವವನು ಎಂದು ಸ್ತುತಿಮಾಡುತ್ತಾರೆ.

ಯೋಗಶಾಸ್ತ್ರದ ಪ್ರಕಾರ ಮೂಲಾಧಾರ ಚಕ್ರದಲ್ಲಿರುವ ಶಕ್ತಿ ದೇವತೆಯನ್ನು ಜಾಗೃತಿಗೊಳಿಸುವುದಕ್ಕೆ ನಾವು ಮೂಲವಾಗಿ ಗಣಪತಿಯನ್ನೇ ಆರಾಧಿಸ ಬೇಕೆಂಬ ಮಾತು ನಿಶ್ಚಿತವಾಗಿ ಹೇಳಲ್ಪಡುತ್ತದೆ.  ವಿಭಿನ್ನವಾದ ಆಕಾರ, ಅಗಾಧವಾದ ಆಕೃತಿಯ, ಆನೆಯ ಮೊಗದ ವಿನಾಯಕ ನಾವು ನಮ್ಮ ಭೌತಿಕ ಶರೀರದ ಪ್ರಜ್ಞೆಯನ್ನು ಮೀರಿ ಭಗವತ್ತತ್ವದೆಡೆಗೆ ಸಾಗಬೇಕೆಂಬ ಸತ್ಯವನ್ನು ನಿಚ್ಚಳವಾಗಿ ತೋರಿಸುತ್ತಾನೆ.   ಹೆಚ್ಚು ಮಾತನಾಡದೆ, ಸೂಕ್ಷವಾಗಿ ಕಿವಿಗಳನ್ನು ಅಗಲವಾಗಿ ತೆರೆದಿಟ್ಟುಕೊಂಡು, ಪುಟ್ಟ ಪುಟ್ಟ ತೀಕ್ಷ್ಣ ಕಣ್ಣುಗಳಿಂದ ಎಲ್ಲವನ್ನೂ ಗ್ರಹಿಸಬೇಕು.  ವಿಷಯಾಸಕ್ತಿಗಳಿಗೆ, ಆಹಾರ ಸೇವನೆಗೆ ಎಲ್ಲಕ್ಕೂ ಒಂದು ಕಡಿವಾಣ ಹಾಕಿಕೊಂಡು ಹಿತ ಮಿತವಾಗಿ ಭಗವಂತನ ಪಾದದಲ್ಲಿ ಚಿತ್ತವನ್ನು ನೆಡಬೇಕೆಂದು ಬೋಧಿಸುವವನು ನಮ್ಮೆಲ್ಲರ ಪ್ರೀತಿಯ ಆರಾಧ್ಯ ದೈವ ಶ್ರೀ ಗಣೇಶ.

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಚಿತ್ರಕೃಪೆ : ಅಂತರ್ಜಾಲ

Friday, August 10, 2012

ಶ್ರೀ ಕೃಷ್ಣಪ್ರಜ್ಞೆ..




"ಕೃಷ್ಣ" ಎಂದರೇ "ಕರ್ಷಿಸುವವ - ಸೆಳೆಯುವವ", ಭಗವಂತ.  ಕೃಷ್ಣ ಒಬ್ಬ ವ್ಯಕ್ತಿಯೇ, ಭಾವವೇ, ಶಕ್ತಿಯೇ, ನಮ್ಮಂತರಂಗದ ಆಳವೇ ಎಂದುಕೊಂಡಾಗ ನಮಗೆ ಕೃಷ್ಣ ಎಂದರೆ ಭಗವಂತನಾದರೂ ಅವನು ಅರಿತವರಿಗೆ - ಅರಿತಂತೆ, ದೊರೆತವರಿಗೆ - ದೊರೆತಂತೆ, ತಿಳಿದವರಿಗೆ - ತಿಳಿದಂತೆ,  ಎಲ್ಲರೊಳಗೂ ನೆಲೆಯಿದ್ದು, ಯಾರ ಅಂಕೆಗೂ ಸಿಲುಕದವ, ಸಿಕ್ಕಂತೆ ಮಾಡಿ ನುಣುಚಿಕೊಳ್ಳುವವ ಎಂಬುದು ಅರ್ಥವಾಗುತ್ತದೆ.   ಅವರವರ ಭಾವಕ್ಕೆ ತಕ್ಕಂತೆ, ಅವರವರ ಭಕುತಿಗೆ ತಕ್ಕಂತೆ ದೊರಕುವ ಕೃಷ್ಣ ನಮ್ಮ ಬಾಹ್ಯ ಬುದ್ಧಿ ಮತ್ತು ಮನಸ್ಸಿಗೆ ಒಂದು ಪ್ರಜ್ಞೆ ಎನ್ನಿಸುತ್ತಾನೆ.   ಭಾಗವತ ಕಥೆಗಳನ್ನು ಓದಿದಾಗ ನಮಗೆ ಕೃಷ್ಣನ ಜೀವನದ ಪೂರ್ತಿ ವಿವರಗಳು ಸಿಕ್ಕುತ್ತವೆ.  ಆದರೆ ಅಲ್ಲಿ ವಿವರಿಸಿರುವಷ್ಟೇ ವ್ಯಾಪ್ತಿಯೇ ಕೃಷ್ಣನದು ? ಅಲ್ಲ ಎನ್ನುತ್ತದೆ ಅಂತರಂಗ.  ಏಕೆಂದರೆ ಆತ್ಮದ ಅರಿವಿಗೆ ಬರುವ, ಆತ್ಮದಲ್ಲಿ ಲೀನವಾಗಿಸಿಕೊಳ್ಳ ಬಹುದಾದ ಒಂದು ಭಾವ ಕೃಷ್ಣ.  ಸಾಮಾಜಿಕವಾಗಿ ವಿಸ್ತಾರವಾದ ವ್ಯಾಪ್ತಿ ಹೊಂದಿರುವ ಕೃಷ್ಣ, ಸಾಮಾಜಿಕವಾಗಿಯೇ ವಿಶ್ಲೇಷಣೆ ಮಾಡಿದಾಗ "ಪ್ರಜ್ಞೆ" ಎನ್ನಿಸುತ್ತಾನೆ.  ಹಾಗಾದರೆ ಕೃಷ್ಣ ಎಲ್ಲರಿಗೂ ಒಂದೇ ರೀತಿಯಾಗಿಯೇ ಕಾಣುತ್ತಾನೆಯೇ ಎಂಬ ಪ್ರಶ್ನೆ ಬಂದಾಗ ಮಾತ್ರ, ಬಾಹ್ಯ ಮನಸ್ಸಿನ ಅರಿವಿಗೆ ಬರುವ ಕೃಷ್ಣ ಒಬ್ಬ ಭಗವಂತನಾಗಿ, ಪ್ರಜ್ಞೆಯಾಗಿ ಕಾಣಿಸುತ್ತಾನೆ.  ಆದರೆ ಅವನು ನಮ್ಮೆಲ್ಲರ ಒಳಗೂ ವ್ಯಾಪಿಸಿದ್ದಾನೆಂಬ ಭಾವ ಬಂದಾಗ ಮಾತ್ರ ಅಂತರಂಗದಲ್ಲಿ ಸುಳಿಯುವ ಕೃಷ್ಣಭಾವ ಬೇರೆಯದೇ ಅರ್ಥ ಕೊಡುತ್ತದೆ.  ನನಗೆ ಕೃಷ್ಣ ನನ್ನೆಲ್ಲಾ ಭಾವನೆಗಳಿಗೂ ಸ್ಪಂದಿಸುವ, ಒಂದು ದಿವ್ಯ ಚೇತನ.  ನನ್ನೊಳಗಿನ ಪ್ರಶ್ನೆಗಳಿಗೆ, ಹತಾಶೆಗಳಿಗೆ, ಪ್ರಯತ್ನಗಳಿಗೆ ಸದಾ ಜೊತೆಗೂಡುವ ಒಂದು ಅವಿನಾಭಾವದ ಸಂಬಂಧಿ.  ನನ್ನ ಚಿಕ್ಕ ಚಿಕ್ಕ ಸಂತಸಗಳಿಗೂ ಹಿಗ್ಗಿ ನಲಿಯುವ, ಪ್ರೋತ್ಸಾಹಿಸುವ, ಬದುಕಬೇಕೆಂಬ ತುಡಿತವನ್ನು ಸದಾ ಜಾಗೃತಗೊಳಿಸುವ ಅದಮ್ಯ ಚೇತನ.  ನನ್ನೊಳಗೆ ನಾನಾಗಿ ಬೆರೆತುಹೋಗಿರುವ ಒಂದು ಸುಂದರವಾದ ಶೃತಿ - ಸ್ಮೃತಿ. 

ಕೃಷ್ಣನನ್ನು ಒಂದು ಭಾವವೆಂದುಕೊಂಡಾಗ ನಮಗೆ ತುಂಬಾ ಹತ್ತಿರವಾಗುತ್ತಾನೆ.  ನಮ್ಮ ಸುತ್ತುಮುತ್ತಲಿನ ಪ್ರತಿ ವಸ್ತುವಿನಲ್ಲೂ ಕಾಣತೊಡಗುತ್ತಾನೆ.   ಕೃಷ್ಣನನ್ನು ನಾವು ಭಗವಂತನೆಂದು ಸೌಂದರ್ಯ ವರ್ಣನೆ ಮಾಡುವಾಗ "ನೀಲಮೇಘಶ್ಯಾಮ", "ನೀಲಿಕಣ್ಣಿನವ" ಎಂದು ಹೇಳುತ್ತೇವೆ.  ಕೃಷ್ಣ ಒಂದು ಪ್ರಜ್ಞೆಯಾದಾಗ ನಮಗೆ ಕಣ್ಣಿಗೆ ಕಾಣಿಸುವ ನೀಲಿ ಬಣ್ಣದಲ್ಲೆಲ್ಲಾ ಅವನು ಕಾಣಿಸತೊಡಗುತ್ತಾನೆ, ನಮ್ಮೊಡನೆ ಬೆರೆಯುತ್ತಾನೆ.  ನೀಲಿ ಬಣ್ಣ ನಾವು ಧರಿಸಿರುವ ಬಟ್ಟೆಯಾದರೆ, ಕೃಷ್ಣ ನಮ್ಮ ಇಂದ್ರಿಯಗಳಲ್ಲೊಂದಾದ ಚರ್ಮಕ್ಕೆ ಹೊದಿಕೆಯಾಗಿರುತ್ತಾನೆ.  ಭೌತಿಕ ದೇಹದ ಸಂಪರ್ಕದಲ್ಲಿ ಸದಾ ಪ್ರಜ್ಞೆ ಮೂಡಿಸುತ್ತಿರುತ್ತಾನೆ.  ನಮ್ಮನ್ನೇ ನಾವು ನೋಡಿಕೊಳ್ಳುವಾಗ ಮುಖ್ಯ ಇಂದ್ರಿಯವಾದ ಕಣ್ಣಿಗೆ ಕೃಷ್ಣನ ಪ್ರಜ್ಞೆ ಗೋಚರಿಸಿ, ಮನಸ್ಸೆಂಬ ಇಂದ್ರಿಯಕ್ಕೆ ಸದಾ ನೆನಪಿನ ಅಲೆ ಮೂಡಿಸುತ್ತಿರುತ್ತಾನೆ.  ತಿಳಿನೀಲಿ ಬಣ್ಣದ ಕಣ್ಣುಗಳುಳ್ಳ ವ್ಯಕ್ತಿಯನ್ನು ಕಂಡಾಗ,  ಕೃಷ್ಣ ಪ್ರಜ್ಞೆ ಮರುಕಳಿಸಿ, ಮನಸ್ಸಿಗೆ ಹಿತವಾದ ಭಾವ ಹಾಗೂ ಪರಿಚಯದ ಅಲೆ ಮೂಡಿಸುತ್ತದೆ.  ತಲೆಯೆತ್ತಿ ನಿರ್ಮಲವಾದ ನೀಲಿ ಆಕಾಶ ಕಂಡಾಗ ಮನದಲ್ಲಿ ಏಳುವ ಕೃಷ್ಣ ಪ್ರಜ್ಞೆ ತುಂಬಾ ಆಪ್ಯಾಯಮಾನವಾಗುತ್ತದೆ.  ಎಲ್ಲೆಲ್ಲಿ ನೋಡಿದರೂ, ನೋಡಿದಷ್ಟೂ ಕಾಣುವ ಕೊನೆ ಮೊದಲಿಲ್ಲದ ಆಕಾಶದ ಬಣ್ಣ ಕೃಷ್ಣ ಪ್ರಜ್ಞೆಯನ್ನು ಮನಸ್ಸಿನಲ್ಲಿ ಉತ್ಪತ್ತಿಮಾಡಿದಾಗ, ಭಗವಂತನಾದ ಕೃಷ್ಣ ನಮ್ಮನ್ನು ಕಾಪಾಡುತ್ತಾ, ನಾವು ಹೋದಲ್ಲೆಲ್ಲಾ ತನ್ನಿರವನ್ನು ತಿಳಿಸುತ್ತಿದ್ದಾನೆ, ನಂಬಿಕೆಯನ್ನು, ಆಪ್ತತೆಯನ್ನು ವಿಶಾಲವಾಗಿ ಹರಡಿದ್ದಾನೆ ಎನ್ನಿಸುತ್ತದೆ.  ನೀಲಿ ಬಣ್ಣದ ಸಮುದ್ರದ ಮುಂದೆ ನಿಂತಾಗ ತಿಳಿಯಾದ ನೀರಿನಲ್ಲೂ, ಜುಳು ಜುಳು ಸದ್ದಿನಲ್ಲೂ, ಕೃಷ್ಣ ಪ್ರಜ್ಞೆ ಜಾಗೃತವಾಗುತ್ತದೆ.  ಎಷ್ಟು ನೋಡಿದರೂ ಮುಗಿಯದ ಸಮುದ್ರದ ವಿಸ್ತಾರ ನಮ್ಮಲ್ಲಿ ಮೂಡಿದ್ದ ಕೃಷ್ಣ ಪ್ರಜ್ಞೆಯನ್ನು ವಿಸ್ತರಿಸುತ್ತದೆ.  ಸಮುದ್ರದ ಆಳದ ಅರಿವಾದಾಗ, ಕೃಷ್ಣನ ಆಳದ ಒಂದು ಪುಟ್ಟ ತಿಳಿವು, ವ್ಯಾಪ್ತತೆಗೆ ಎಣೆಯೇ ಇಲ್ಲ, ಕೊನೆಯೇ ಇಲ್ಲ ಎಂದಾಗ, "ಕೃಷ್ಣ" ಪ್ರಜ್ಞೆ ಎಲ್ಲಾ ಅಳತೆಗೂ ಮೀರಿ ವಿಜೃಂಭಿಸುತ್ತದೆ.

ಕೃಷ್ಣನನ್ನು ಜೀವನದ ಪ್ರತಿ ಹಂತದಲ್ಲೂ ಪ್ರತಿ ನಿಮಿಷದಲ್ಲೂ ನಾವು ನಮ್ಮ ಜೊತೆಗೇ ಕಾಣುತ್ತಿರುತ್ತೇವೆ.  ಸುಂದರ ಪ್ರಕೃತಿಯನ್ನು ನೋಡಿದಾಗಲಾಗಲೀ, ಶೃಂಗಾರದ ಭಾವ ನಮಗರಿವಿಲ್ಲದಂತ ಮನವನ್ನು ಕೂಡಿದಾಗಲಾಗಲೀ, ಹಕ್ಕಿಗಳ ಚಿಲಿಪಿಲಿ ಇಂಚರವನ್ನು ಕೇಳಿದಾಗಲಾಗಲೀ ನಮಗೆ ಕೃಷ್ಣನ ನೆನಪೇ ಆಗುತ್ತದೆ.  ಕೃಷ್ಣನನ್ನು ಭಗವಂತನೆಂದುಕೊಂಡರೂ ಕೂಡ, ಅದನ್ನು ಮೀರಿದ ಒಂದು ಸ್ನೇಹ, ನಮ್ಮದೇ ಮುಂದುವರೆದ ಭಾವ ಎಂಬ ಅರ್ಥವೇ ಹೆಚ್ಚು ಮುದಕೊಡುತ್ತದೆ. ಕೃಷ್ಣನ ನಿಕಟವರ್ತಿಗಳಾದ ಗೋವು, ಕೊಳಲು, ತುಳಸಿ, ಬೆಣ್ಣೆ ಹೀಗೆ ಪ್ರತಿಯೊಂದೂ ನಮಗೆ ಕೃಷ್ಣ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಲೇ ಇರುತ್ತವೆ.  ಕೃಷ್ಣ ನಮ್ಮೊಳಗೇ, ನಮ್ಮೊಂದಿಗೇ ಸದಾ ಇದ್ದಾನೆಂಬ ಅಲೌಕಿಕ ಸುಖ ತನು ಮನಗಳನ್ನು ಪುಳಕಿತಗೊಳಿಸುತ್ತಲೇ ಇರುತ್ತದೆ.

ಕೃಷ್ಣನ ಬಾಲ್ಯಲೀಲೆಗಳು, ಗೋಪಿಕಾ ಸ್ತ್ರೀಯರ ಒಡನಾಟ, ರಾಧೆಯ ಒಲವು, ಗೀತೆಯ ಬೋಧನೆ ಎಲ್ಲವೂ ಪ್ರತೀ ಜೀವಿಯ ಜೀವಿತದ ಜೊತೆಯಲ್ಲಿ ಅತೀ ಗಟ್ಟಿಯಾಗಿ ಬೆಸೆದುಕೊಂಡಿರುವ ವಿಚಾರಗಳು.  ಕೃಷ್ಣನನ್ನು ಭಗವಂತನೆಂದು ನಾವೆಷ್ಟು ಆರಾಧಿಸಿದರೂ ಕೂಡ ಎಲ್ಲವನ್ನೂ ಮೀರುವ ಕೃಷ್ಣನ ವ್ಯಕ್ತಿತ್ವ, ಕೃಷ್ಣನನ್ನು "ಪ್ರಜ್ಞೆ" ಎನ್ನುತ ಸತ್ಯವಾಗಿ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.  ಈ ಪ್ರಜ್ಞೆಯ ಅರಿವನ್ನು ಅರಿಯುವುದೇ ನಿಜವಾದ ಜನ್ಮಾಷ್ಟಮಿಯ ಆಚರಣೆಯಾಗುತ್ತದೆ.  ಕೃಷ್ಣನಿಗೆ ಹುಟ್ಟು ಸಾವುಗಳಿಲ್ಲ, ಅವನು ನಿರಂತರವಾಗಿ ನಮ್ಮೊಳಗೇ ಹರಿಯುವ ಚೈತನ್ಯ. ಇದೇ "ಕೃಷ್ಣಪ್ರಜ್ಞೆ". 

ಸರ್ವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು....

 ಚಿತ್ರಕೃಪೆ : ಅಂತರ್ಜಾಲ