Thursday, October 22, 2009

ನವಾವರಣ ಕೃತಿಗಳು - ೩

ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ನವಾವರಣ ಕೃತಿಗಳನ್ನು ಹಾಡಲು ಸಂಗೀತಗಾರರು ಒಂದು ಪದ್ಧತಿಯನ್ನು ಅನುಸರಿಸುತ್ತಾರೆ. ನಾವು ಯಾವುದೇ ಕೆಲಸ ಮಾಡಬೇಕಾದರೂ ನಿರ್ವಿಘ್ನವಾಗಿ ನೆರವೇರುವಂತೆ, ಅಗ್ರ ಪೂಜೆಯನ್ನು ವಿಘ್ನೇಶ್ವರನಿಗೆ ಸಲ್ಲಿಸಿ ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ನೆರವೇರಿಸು ಎಂದು ಹೇಗೆ ಪ್ರಾರ್ಥಿಸುತ್ತೇವೋ, ಹಾಗೇ ಇಲ್ಲೂ ಅಗ್ರಸ್ಥಾನ ನಮ್ಮ ಗಜಾನನನಿಗೇ ಮೀಸಲು. ನಾವು ದೀಕ್ಷಿತರ ಶ್ರೀ ಮಹಾಗಣಪತಿ ರವತುಮಾಂ... ಎಂಬ ಗೌಳ ರಾಗದಲ್ಲಿ ರಚಿಸಲ್ಪಟ್ಟಿರುವ ಮಿಶ್ರಛಾಪುತಾಳದ ಕೃತಿಯೊಂದಿಗೆ ಆರಂಭಿಸುತ್ತೇವೆ. ಕೃತಿಯ ಸಾಹಿತ್ಯ........

ಪಲ್ಲವಿ

ಶ್ರೀ ಮಹಾಗಣಪತಿ ರವತುಮಾಂ... - ಸಿದ್ಧಿ ವಿನಾಯಕೋ..
ಮಾತಂಗಮುಖ:
||

ಅನುಪಲ್ಲವಿ


ಕಾಮಜಕ ವಿಧೀಂದ್ರ ಸನ್ನುತ... ಕಮಲಾಲಯ ತಟನಿವಾಸೋ..

ಕೋಮಳಕರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ:.................
||

ಚರಣ

ಸುವರ್ಣಾಕರ್ಷಣ ವಿಘ್ನರಾಜೋ.... ಪಾದಾಂಬುಜೋ....
ಗೌರವರ್ಣ ವಸನಧರೋ.... ಫಾಲಚಂದ್ರೋ.... ನರಾದಿವಿನುತ ಲಂಬೋದರೋ... ಕುವಲಯ ಸ್ವವಿಷಾಣ ಪಾಶಾಂಕುಶ ಮೋದಕ ಪ್ರಕಾಶಕರೋ... ಭವ ಜಲಧಿ ನಾವೋ..... ಮೂಲ ಪ್ರಕೃತಿ ಸ್ವಭಾವಸ್ಸುಖತರೋ... ರವಿಸಹಸ್ರ ಸನ್ನಿಭ ದೇಹೋ.... ಕವಿಜನನುತ ಮೂಷಿಕ ವಾಹೋ.. ಅವನತ ದೇವತಾ ಸಮೂಹೋ.... ಅವಿನಾಶ ಕೈವಲ್ಯ ಗೇಹೋ..... ||

ಈ ಕೃತಿಯಲ್ಲಿ ದೀಕ್ಷಿತರು ವಿಘ್ನರಾಜನನ್ನು ಹೊಗಳಿ ಸಿದ್ಧಿ ವಿನಾಯಕನೇ.... ಆನೆಯ ಮುಖದವನೇ..... ನನ್ನನ್ನು ರಕ್ಷಿಸು..... ಮನ್ಮಥನ ತಂದೆಯಾದ ವಿಷ್ಣು, ಬ್ರಹ್ಮ ಮತ್ತು ದೇವೇಂದ್ರರಿಂದ ಪೂಜೆಗೊಳ್ಳುವವನೇ...... ಅತ್ಯಂತ ಮೃದುವಾದ ಕೈಗಳೂ, ಕಾಲುಗಳನ್ನೂ ಹೊಂದಿದವನೇ. ..... ತಿರುವಾರೂರು ಎಂಬ ಕ್ಷೇತ್ರದ ಕಮಲಾಂಬಾ ದೇವಾಲಯದ ಸರೋವರದ ದಡದಲ್ಲಿರುವವನೇ..... ಸುಬ್ರಹ್ಮಣ್ಯನ ಮೊದಲು ಜನಿಸಿ ಅಣ್ಣನಾದವನೇ... ಶ್ರೀ ಮಹಾಗಣಪತಿಯೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ.

ಮುಂದುವರೆಯುತ್ತಾ ಚಿನ್ನವನ್ನು ಒರೆಹಚ್ಚಿದ ವಿಘ್ನರಾಜನೆಂದು ಪ್ರಸಿದ್ಧಿಯಾದವನೇ ಕಮಲ ಪುಷ್ಪದಷ್ಟು ಮೃದು ಮತ್ತು ಸುಂದರವಾದ ಪಾದಗಳುಳ್ಳವನೇ..... ಹಣೆಯಲ್ಲಿ ಚಂದ್ರನನ್ನು ಧರಿಸಿದವನೇ.... ಶುಭ್ರ ಬಿಳುಪು ವಸ್ತ್ರಧರಿಸಿದವನೇ... ನರರು ಸುರರು ಎಲ್ಲರಿಂದಲೂ ಸ್ತುತಿಸಲ್ಪಡುವವನೇ.... ಇಡೀ ಜಗತ್ತನ್ನೇ ಅಡಗಿಸಿಕೊಂಡ ದೊಡ್ಡ ಹೊಟ್ಟೆಯವನೇ.... ಪಾಶ-ಅಂಕುಶಧಾರನೇ..... ಕನ್ನೈದಿಲೆ ಪುಷ್ಪವನ್ನು ಕೈಯಲ್ಲಿ ಹಿಡಿದಿರುವವನೇ....... ಮೂಲ ಪ್ರಕೃತಿಯ ಸ್ವಭಾವದವನೇ..... ಸಹಸ್ರಾರು ಸೂರ್ಯರ ಕಾಂತಿಯಷ್ಟು ಕಂಗೊಳಿಸುವ ದೇಹದವನೇ...... ಕವಿ - ಸುರ - ನರರೆಲ್ಲರ ಅತ್ಯಂತ ಪ್ರಿಯನಾದವನೇ..... ಇಲಿಯನ್ನು ವಾಹನವನ್ನಾಗಿಸಿಕೊಂಡವನೇ..... ನಾಶವೇ ಇಲ್ಲದವನೇ.... ಮೋಕ್ಷದಾಯಕನೇ..... ಎಲ್ಲರಿಂದಲೂ ನಮಸ್ಕರಿಸಲ್ಪಡುವವನೇ..... ನನ್ನನ್ನು ರಕ್ಷಿಸು ಎನ್ನುತ್ತಾರೆ.

ಗಣೇಶನ ಪ್ರಾರ್ಥನೆಯ ನಂತರ ನಾವು ದೀಕ್ಷಿತರ ಸುರುಟಿ ರಾಗದ, ಆದಿತಾಳದ ರಚನೆ, ಬಾಲಸುಬ್ರಹ್ಮಣ್ಯಂ ಹಾಡಿ ಷಣ್ಮುಖನನ್ನು ಪ್ರಾರ್ಥಿಸುತ್ತೇವೆ......

ಪಲ್ಲವಿ

ಬಾಲಸುಬ್ರಹ್ಮಣ್ಯಂ ಭಜೇಹಂ...... ಭಕ್ತ ಕಲ್ಪ ಭೂರುಹಂ ಶ್ರೀ..........||

ಅನುಪಲ್ಲವಿ

ನೀಲ ಕಂಠ ಹೃದಾನಂದಕರಂ......... ನಿತ್ಯ ಶುದ್ಧ ಬುದ್ಧ ಮುಕ್ತಾಂಬರಂ............||

ಚರಣ

ವೇಲಾಯುಧ ಧರಂ....... ಸುಂದರಂ...... ವೇದಾಂತಾರ್ಥ ಬೋಧ ಚತುರಂ...........
ಫಾಲಕ್ಷ ಗುರುಗುಹಾವತಾರಂ........ ಪರಾಶಕ್ತಿ ಸುಕುಮಾರಂ ಧೀರಂ..........

ಪಾಲಿತ ಗೀರ್ವಾಣಾದಿ ಸಮೂಹಂ........ ಪಂಚಭೂತಮಯ ಮಾಯಾಮೋಹಂ........
ನೀಲಕಂಠ ವಾಹಂ.......... ಸುದೇಹಂ......... ನಿರತಿಶಯಾನಂದ ಪ್ರವಾಹಂ..........||

ದೀಕ್ಷಿತರು ಈ ಕೃತಿಯಲ್ಲಿ ಬಾಲಸುಬ್ರಹ್ಮಣ್ಯನೇ.... ಭಕ್ತರು ಕೇಳಿದ್ದನ್ನೆಲ್ಲಾ ಕರುಣಿಸುವ ಕಲ್ಪವೃಕ್ಷವೇ ನಿನ್ನನ್ನು ನಾನು ಭಜಿಸುತ್ತೇನೆ, ಪೂಜಿಸುತ್ತೇನೆ, ನಿನಗೆ ನನ್ನ ನಮಸ್ಕಾರಗಳು ಎಂದು ಆರಂಭಿಸಿ.... ಅನುಪಲ್ಲವಿಯಲ್ಲಿ ... ಷಣ್ಮುಖನೇ ನೀನು ನೀಲಕಂಠನಾದ ನಿನ್ನ ತಂದೆ ಈಶ್ವರನಿಗೆ ಆನಂದ ಕೊಡುವವನೂ, ಪರಿಶುದ್ಧತೆಗೆ ಹೆಸರಾದವನೂ, ಅತಿಜ್ಞಾನಿಯೂ - ನಮಗೆ ಜ್ಞಾನವನ್ನು ದಯಪಾಲಿಸುವವನೂ, ಮೋಕ್ಷಸ್ವರೂಪಿಯೂ ಅಂದರೆ ಮುಕ್ತಿಯನ್ನು ಕೊಡುವವನೂ, ಅಂಬರದಲ್ಲೆಲ್ಲಾ ವ್ಯಾಪಿಸಿಕೊಂಡಿರುವವನೂ... ನಿನಗೆ ಇದೋ ನನ್ನ ಪ್ರಣಾಮಗಳು.........ಎನ್ನುತ್ತಾರೆ.

ಮುಂದುವರೆಯುತ್ತಾ ಚರಣದಲ್ಲಿ ಷಣ್ಮುಖನನ್ನು ವರ್ಣಿಸುತ್ತಾ.... ನಿನ್ನ ಕೈಯಲ್ಲಿ ವೇಲಾಯುಧವನ್ನು ಹಿಡಿರುವವನೂ, ಮುದ್ದು ಮುಖದವನು, ಸುಂದರ ದೇಹದವನು, ವೇದ ಉಪನಿಷತ್ತುಗಳ ಅರ್ಥವನ್ನು ತಿಳಿದಿರುವವನೂ ಅಂದರೆ ’ಓಂ’ ಕಾರದ ಅರ್ಥವನ್ನು ನಿನ್ನ ತಂದೆಗೇ ಬೋಧಿಸಿದವನು... ತುಂಬಾ ಧೈರ್ಯವಂತನೂ, ಪಾರ್ವತಿಯ ಸುಕುಮಾರನೂ... ಮಯೂರ ವಾಹನನೂ... ಸದೃಡಕಾಯನೂ.... ಅತಿಶಯವಾದ ಆನಂದವನ್ನು ಕೊಡುವವನೂ ಗುರುವಾದ ಗುಹನ ಅವತಾರವನ್ನು ತಾಳಿದವನೂ ಆದ ಶ್ರೀ ಸುಬ್ರಹ್ಮಣ್ಯನೇ ನಿನಗೇ ನಮೋ ನಮ: ಎನ್ನುತ್ತಾರೆ.

ದೀಕ್ಷಿತರು ತಮ್ಮ ಸುಬ್ರಹ್ಮಣ್ಯನ ಕುರಿತಾದ ಎಲ್ಲಾ ಕೃತಿಗಳಲ್ಲೂ ಷಣ್ಮುಖನ ಆರಾಧನೆ ಮಾಡುವವರು ಎಲ್ಲಾ ಜಂಜಾಟಗಳಿಂದಲೂ ಮುಕ್ತಿಹೊಂದಿ ಮೋಕ್ಷ ಸಾಧನೆ ಮಾಡಬಹುದೆಂದು ತಿಳಿಸುತ್ತಾರೆ. ಅವರ ಕೃತಿಗಳಲ್ಲಿನ ಷಣ್ಮುಖನ ವರ್ಣನೆ ಅತಿಶಯವಾಗಿರುತ್ತದೆ. ಅವರ ಇನ್ನೊಂದು ರಚನೆ... ಸಮಷ್ಠಿ ಚರಣವನ್ನೊಳಗೊಂಡ, ನಾಟ ರಾಗದ "ಸ್ವಾಮಿನಾಥ ಪರಿಪಾಲಯ ಶುಮಾಂ"... ಕೂಡ ಸುಂದರವಾದ ಕೃತಿ. ಎಲ್ಲಾ ರಚನೆಗಳಲ್ಲೂ ಅವರ ಗುರುಗುಹನ ಮೇಲಿನ ಭಕ್ತಿ ಉತ್ಕಟವಾಗಿ ತೋರಿಸಲ್ಪಟ್ಟಿದೆ.

6 comments:

  1. ಇದೊಂದು ಹೆಚ್ಚುವರಿ ಟಿಪ್ಪಣಿ ಹಾಕೋಣವೆನ್ನಿಸಿತು -

    ಮುತ್ತುಸ್ವಾಮಿ ದೀಕ್ಷಿತರು ಚಾಪು (ಮಿಶ್ರ,ಖಂಡ) ತಾಳಗಳನ್ನು ಉಪಯೋಗಿಸಿಲ್ಲವಾದರೂ ರೂಢಿಯಲ್ಲಿ ಆ ಪದ್ಧತಿ ಬೆಳೆದುಬಂದುಬಿಟ್ಟಿದೆ. ಸಾಧಾರಣವಾಗಿ ಖಂಡ ಏಕ, ಮಿಶ್ರ ಏಕ, ತ್ರಿಶ್ರ ತ್ರಿಪುಟತಾಳಗಳಲ್ಲಿರುವ ರಚನೆಗಳನ್ನು ಹೀಗೆ ಬದಲಿಸಿ ಹಾಡಲಾಗುತ್ತಿದೆ.

    ReplyDelete
  2. ನಮಸ್ಕಾರ ಮತ್ತು ನನ್ನ ಬ್ಲಾಗ್ ಗೆ ಸ್ವಾಗತ ಹಂಸಾನಂದಿಯವರೇ....

    ಹೆಚ್ಚುವರಿ ಮಾಹಿತಿಗಾಗಿ ಧನ್ಯವಾದಗಳು..... ಹೀಗೇ ಬರುತ್ತಿರಿ...ನಿಮ್ಮ ಭೇಟಿ ನನ್ನನ್ನು ಪ್ರೋತ್ಸಾಹಿಸುತ್ತದೆ....

    ಶ್ಯಾಮಲ

    ReplyDelete
  3. ಶ್ಯಾಮಲಾರವರೆ...

    ಮಹಾನು ಭಾವ ದೀಕ್ಷೀತರ ಕೃತಿಗಳ ಬಗೆಗೆ ತಿಳಿಸಿಕೊಡುತ್ತಿರುವಿರಿ...
    ಕೃತಿ, ಹಾಗೂ ಅರ್ಥವಿವರಣೆ ಎರಡೂ ಸೊಗಸಾಗಿದೆ...
    ಸರಳವಾಗಿ ಬಿಡಿಸಿ ಹೇಳಿದ್ದೀರಿ...

    ಭಕ್ತಿಗೆ ಭಾವ ಒಂದಿದ್ದರೆ ಸಾಕಾದರೂ...
    ಅರ್ಥವೂ ಸೇರಿದರೆ ಇನ್ನೂ ಸೊಗಸಲ್ಲವೇ...?

    ಹಂಸಾನದಿಯವರಿಗೂ ವಂದನೆಗಳು...

    ನಿಮ್ಮ ಈ ಥರಹದ ಪ್ರಯತ್ನ ಮುಂದು ವರೆಯಲಿ...

    ಅಭಿನಂದನೆಗಳು...

    ReplyDelete
  4. ನನ್ನಂಥ ಸಂಗೀತ ಗೊತ್ತಿಲ್ಲದವನಿಗೂ ಅರ್ಥ ಆಗುವ ಹಾಗೆ ತಿಳಿಸಿದ್ದಿರಿ, ಧನ್ಯವಾದಗಳು....

    ReplyDelete
  5. ಪ್ರಕಾಶ್ ಅವರೇ...
    ಭಕ್ತಿಯ ಜೊತೆಗೆ ನಾವು ಕೇಳುವ ಅಥವಾ ಹಾಡುವ ಸಂಗೀತ ಅರ್ಥವೂ ಆದರೆ, ಅನುಭವಿಸುವ ಆನಂದವೇ ಬೇರೆಯಾಗಿರುತ್ತದೆ. ನಿಮ್ಮ ಈ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು.......

    ಶ್ಯಾಮಲ

    ReplyDelete
  6. ದಿನಕರರಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.....
    ಸಂಗೀತ ಕೇಳುವಷ್ಟು ತಾಳ್ಮೆ, ಆಸಕ್ತಿ ಇದ್ದರೆ ಅದು ನಮ್ಮನ್ನು ತನ್ನಂತಾನೇ ನಾದ ಲೋಕಕ್ಕೆ ಸೆಳೆದುಕೊಂಡು ಬಿಡತ್ತೆ. ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಹಿತ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ, ಕೇಳುತ್ತಾ ಕೇಳುತ್ತಾ ನಮಗೆ ನಾವೇ ಅರ್ಥೈಸಿಕೊಳ್ಳುವ ಪ್ರಯತ್ನ ಪಡತೊಡಗುತ್ತೇವೆ. ಹೀಗೇ ಬರುತ್ತಾಯಿರಿ.......

    ಶ್ಯಾಮಲ

    ReplyDelete