Saturday, July 31, 2010

ಪುಸ್ತಕ ಪರಿಷೆ.....

ಇದೇ ತಿಂಗಳ ೨೫ನೇ ತಾರೀಖು ಸೃಷ್ಟಿ ವೆಂಚರ್ಸ್ ನವರು ಕನ್ನಡ ಪುಸ್ತಕ ಪರಿಷೆ ಎಂಬ ಕಾರ್ಯಕ್ರಮ ಏರ್ಪಡಿಸಿದ್ದರು. ಇದುಎರಡನೆಯ ಬಾರಿ ನಡೆಯುತ್ತಿರುವುದು. ಇದಕ್ಕೆ ಮುಂಚೆ ಕೂಡ ಕೆಲವು ತಿಂಗಳುಗಳ ಮೊದಲು ಒಂದು ಹೊಸ ಅಲೆ ಸೃಷ್ಟಿಸುತ್ತಾ, ಸೃಷ್ಟಿ ವೆಂಚರ್ಸ್ ನವರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕನ್ನಡ ಸಾಹಿತ್ಯ.ಕಾಂ ಸದಸ್ಯರಿಗೆಲ್ಲಾ ಕಾರ್ಯಕ್ರಮಕ್ಕೆಆಹ್ವಾನ ಕೊಟ್ಟು ಒಂದು ಮಿಂಚಂಚೆ ಬಂದಾಗ, ನನಗೆ ಮೊದಲು ಸ್ವಲ್ಪ ಆಶ್ಚರ್ಯವಾಗಿತ್ತು ಮತ್ತು ಕುತೂಹಲದಿಂದಲೇ ನಾನುಮೊದಲ ಬಾರಿಗೆ ನೋಡಲು ಹೋಗಿದ್ದೆ. ಸೃಷ್ಟಿ ವೆಂಚರ್ಸ್ ನಮ್ಮ ಯುವಕರ ಗುಂಪು ತಮ್ಮ ಕಛೇರಿಯ ಕೆಲಸಗಳ ಒತ್ತಡದಲ್ಲೂ, ತಮ್ಮ ಎಲ್ಲಾ ರಜಾ ದಿನಗಳನ್ನೂ, ಬಿಡುವಿನ ಸಮಯವನ್ನೂ ಉಪಯೋಗಿಸಿಕೊಂಡು, ಮನೆ ಮನೆಗೂ ಹೋಗಿ ಎಲ್ಲರಿಂದಲೂ, ಹಳೆಯ - ಹೊಸ ಕನ್ನಡ ಪುಸ್ತಕಗಳನ್ನು ಪಡೆದುಕೊಂಡು ಬಂದು ಒಂದು ಭಾನುವಾರ ಎಲ್ಲರಿಗೂ ಅನುಕೂಲವಾಗುವಂತೆ, ಪುಸ್ತಕಗಳ ಪ್ರದರ್ಶನವನ್ನು ಮೊಟ್ಟ ಮೊದಲ ಬಾರಿಗೆ ಜನವರಿ ೧೭ರಂದು ಏರ್ಪಡಿಸಿದ್ದರು. ಜೊತೆಗೆ ದಿನದ ಪುಸ್ತಕ ಪರಿಷೆನೋಡಲು ಬಂದವರಿಗೆ, ಓದಲು ಒಂದು ಪುಸ್ತಕ ಉಚಿತವಾಗಿ ಕೊಡುವುದೆಂಬ ಮಾತನ್ನೂ ಸೇರಿಸಿದ್ದರು.

ಸೃಷ್ಟಿ ವೆಂಚರ್ಸ್ ನವರು ಅನೇಕ ಸೃಜನ ಶೀಲ ಚಟುವಟಿಕೆಗಳನ್ನು ನಡೆಸಿಕೊಡುತ್ತಿದ್ದಾರೆ. ಇವರ ಮೊದಲ ಪುಸ್ತಕ ಪರಿಷೆಯಪರಿಕಲ್ಪನೆಯೇ ನನಗೆ ಹೊಸದೊಂದು ವಿಚಾರವೆನ್ನಿಸಿತ್ತು. ನಾವುಗಳು ಕೊಂಡು ಓದಿ, ಬಿಟ್ಟ ಅಥವಾ ಬಿಸುಟ ಪುಸ್ತಕಗಳನ್ನುನಮ್ಮಿಂದ ದಾನವಾಗಿ ಪಡೆದುಕೊಂಡು, ಅದನ್ನೆಲ್ಲಾ ಒಂದು ಅವಕಾಶವಾಗಿ ಮಾರ್ಪಡಿಸಿ, ಓದಲು ಬಯಸುವ ಸಹೃದಯರಿಗೆತಲುಪಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ನಮ್ಮ ಭಾಷೆ ಉಳಿಯಬೇಕು, ಎಲ್ಲೆಡೆಗೂ ಕನ್ನಡ ಪ್ರಚಾರವಾಗಬೇಕು. ಪ್ರತಿಯೊಬ್ಬ ಕನ್ನಡಿಗನೂ, ಕನ್ನಡೇತರನೂ, ಕನ್ನಡ ಭಾಷೆ ಕಲಿಯಬೇಕು, ಕನ್ನಡ ಪುಸ್ತಕಗಳನ್ನು ಓದಬೇಕು ಎಂಬಸೃಷ್ಟಿಯವರಕಾಳಜಿ ನನಗೆ ತುಂಬಾ ಇಷ್ಟವಾಯಿತು. ಮೊದಲ ಬಾರಿ ನಡೆದಾಗಲೇ, ಪರಿಕಲ್ಪನೆ, ಸಾಹಿತ್ಯ ಆರಾಧಕರೂ, ಆಸಕ್ತರೂತುಂಬಿರುವ ನಮ್ಮ ಬೆಂಗಳೂರಿನ ಬಸವನಗುಡಿಯಲ್ಲಿ ಸಾಕಷ್ಟು ಉತ್ತೇಜನ ಪಡೆಯಿತು.... ಅನೇಕ ಸಾಯಿತಿಗಳೂ, ಗಣ್ಯರೂ, ಸಾರ್ವಜನಿಕರೂ ಬಂದು ಉತ್ತೇಜನ ನೀಡಿದ್ದರು. ನಾವು ಹೋದಾಗ ಕೂಡ, ಮೊದಲ ಸಲ ಶ್ರೀಮತಿ ಸುಧಾ ಮೂರ್ತಿಯವರನ್ನುಭೇಟಿಯಾಗಿದ್ದೆವು..

ಸಲವೂ ಸೃಷ್ಟಿಯವರು... ಪುಸ್ತಕ ಪರಿಷೆಯನ್ನು -
"ವಿನೂತನ ಪರಿಕಲ್ಪನೆಗಳಲ್ಲೊಂದು ಸಮಾಜ ವಿಕಾಸದ ಶಕ್ತಿ ಕೇಂದ್ರಗಳಾದ ಪುಸ್ತಕಗಳು ನಿಂತ ನೀರಿನಂತೆ ಒಂದೆಡೆ ಇರದೆ ಹಸ್ತದಿಂದ ಹಸ್ತಕ್ಕೆ,ಮಸ್ತಕದಿಂದ ಮಸ್ತಕಕ್ಕೆ ಸಂಚರಿಸಿ ತಮ್ಮ ಇರುವಿಕೆಯ ಸಾರ್ಥಕತೆಯನ್ನು ಸಾಧಿಸಬೇಕು" ಎಂಬ ಚಿಂತನೆಯಡಿಯಲ್ಲಿ “ಮೇಳಕ್ಕೆ ಬರುವವರಿಗೆ ಒಂದು ಪುಸ್ತಕ ಉಚಿತ" ಮತ್ತು "ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ" ಎಂಬ ಉದ್ದೇಶದಿಂದ ಪುಸ್ತಕಗಳನ್ನು ಸಂಗ್ರಹಿಸಿವಿತರಿಸುವ ಯೋಜನೆ ರೂಪಿಸಿತ್ತು. ಹೆಚ್ಚು ಸಂಖ್ಯೆಯಲ್ಲಿ ಮಕ್ಕಳಿಗೂ, ಯುವಕರಿಗೂ, ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸಿ ಕೊಡುವವಿಶೇಷ ಯೋಜನೆ ರೂಪಿಸಿತ್ತು.. ಪ್ರಾಮಾಣಿಕವಾಗಿ ಪುಸ್ತಕ ಜಾಗೃತಿ ಮತ್ತು ಭಾಷಾ ಜಾಗೃತಿಯನ್ನು ಹೊಂದಿರುವಕನ್ನಡಿಗರಿಂದ...... ಕನ್ನಡಿಗರಿಗಾಗಿ ಮಾತ್ರವೇ ಅಲ್ಲದೆ, ಕನ್ನಡೇತರರಿಗಾಗಿಯೂ ಪುಸ್ತಕ ಪರಿಷೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ೧೦ಘಂಟೆಗೆ ಆರಂಭವಾದ ಇದು ಸಾಯಂಕಾಲ ೫ರವರೆಗೆ ಎಂದು ನಿಯೋಜಿಸಲ್ಪಟ್ಟಿತ್ತು.

ಬೆಳಿಗ್ಗೆ ೧೧.೩೦ ಸಮಯದಲ್ಲಿ ನಾವು ಕೆಲವು ಬ್ಲಾಗ್ ಮಿತ್ರರು ಸೇರಿ ಅಲ್ಲಿಗೆ ಭೇಟಿ ಕೊಟ್ಟಾಗ, ಅದಾಗಲೇ ಜನರಿಂದ ತುಂಬಿತ್ತು. ಆರಂಭವಾದ ಒಂದೂವರೆ ಘಂಟೆಯೊಳಗಾಗಿ ಆಗಲೇ ೧೦೦೦ಕ್ಕೂ ಮೇಲ್ಪಟ್ಟು ಪುಸ್ತಕಗಳು ವಿತರಣೆಯಾಗಿ ಹೋಗಿವೆ ಎಂಬುದುತಿಳಿಯಿತು. ಇಲ್ಲಿ ಎಲ್ಲಾ ತರಹದ ಪುಸ್ತಕಗಳನ್ನೂ ಒಂದೇ ಜಾಗದಲ್ಲಿ ನಮ್ಮ ಉಪಯೋಗಕ್ಕಾಗಿ ಕೊಡುತ್ತಿರುವುದರಿಂದ, ಇದು ಒಂದುವರ್ಗಕ್ಕಾಗಿಯೋ, ಅಥವಾ ಮಹಿಳೆಯರಿಗಾಗಿಯೋ ಸೀಮಿತವಾಗಿಲ್ಲ. ಪರೀಕ್ಷೆಯ ತಯ್ಯಾರಿಗೆ ಬೇಕಾಗಿರುವಂತಹ ಪುಸ್ತಕಗಳುವಿದ್ಯಾರ್ಥಿಗಳಿಗಾಗಿ, ಆಧ್ಯಾತ್ಮದ ಪುಸ್ತಕಗಳು ಆಸಕ್ತರಿಗಾಗಿ, ಕನ್ನಡ ಕಾದಂಬರಿಗಳು ಮಹಿಳೆಯರಿಗಾಗಿ, ಚಿಕ್ಕ ಮಕ್ಕಳಿಗಾಗಿಸಾಹಿತ್ಯ.... ಹೀಗೆ ಎಲ್ಲಾ ಬೇರೆ ಬೇರೆ ವಿಷಯಗಳ ಬಗೆಗಿನ ಅನೇಕ ಪುಸ್ತಕಗಳು ಇದ್ದವು.

ಇದಲ್ಲದೇ ಬರಿಯ ವಿತರಣೆಗಿಟ್ಟ ಪುಸ್ತಕಗಳಲ್ಲದೆ.... ಅತ್ಯಂತ ಪುರಾತನವಾದ, ಈಗ ಲಭ್ಯವಿಲ್ಲದಿರುವಂತಹ ಅನರ್ಘ್ಯರತ್ಯಗಳಂತಹ ಪುಸ್ತಕಗಳೂ ಇದ್ದವು.... ಆದರೆ ವಿತರಣೆಗಾಗಿ ಅಲ್ಲ. ಅವುಗಳನ್ನು ಬರಿಯ ಪ್ರಕರ್ಶನಕ್ಕಾಗಿ ಇಡಲಾಗಿತ್ತು. ಜೋಪಾನದಿಂದ, ಮುಂದಿನ ಪೀಳಿಗೆಗಳಿಗಾಗಿ ಕಾಯ್ದಿರಿಸಿಕೊಳ್ಳಬೇಕಾದವುಗಳನ್ನು ಇಲ್ಲಿ, ಯಾರೂ ಮುಟ್ಟದಂತೆ, ಆದರೆ ನೋಡಲುಮಾತ್ರ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದು ಸೃಷ್ಟಿ ವೆಂಚರ್ಸ್ ನವರ ಕನ್ನಡ ಸಾಹಿತ್ಯದ ಬಗೆಗಿನ ಕಾಳಜಿಯನ್ನುಪ್ರತಿಬಿಂಬಿಸುತ್ತದೆ..

ಅನೇಕ ಸಾಹಿತಿಗಳೂ, ವೃದ್ಧರೂ, ಮಾಧ್ಯಮದವರೂ ಸೇರಿದಂತೆ ಒಂದು ಪುಟ್ಟ ಜನ ಪ್ರವಾಹವೇ ಅಲ್ಲಿ ನೆರೆದಿತ್ತು........ TV ಮಾಧ್ಯಮದವರೂ ಬಂದಿದ್ದರು... ಮತ್ತು ಅದನ್ನು ರಾತ್ರಿ ಪ್ರಸಾರ ಮಾಡುವ Just Bangalore ಕಾರ್ಯಕ್ರಮದಲ್ಲಿತೋರಿಸಿದರೆಂದೂ ತಿಳಿಯಿತು. ನಾವು ಮೊದಲ ಪುಸ್ತಕ ಪರಿಷೆಯಲ್ಲಿ ತೆಗೆದುಕೊಂಡು ಬಂದ ಪುಸ್ತಕ ಓದಿದ್ದರೆ, ಅದನ್ನು ಬಾರಿಯಪರಿಷೆಯಲ್ಲಿ ವಾಪಸ್ಸು ಕೊಡಬಹುದಿತ್ತು.... ನಿಮ್ಮ ಮನೆಗಳಲ್ಲಿ ನೀವು ಓದಿ ಬಿಟ್ಟಿರುವ ಪುಸ್ತಕಗಳನ್ನು ಇಲ್ಲಿಯ ಪುಸ್ತಕ ಪರಿಷೆಗಾಗಿಸೃಷ್ಟಿ ವೆಂಚರ್ಸ್ ಗೆ ಯಾವಾಗ ಬೇಕಾದರೂ ತಲುಪಿಸಬಹುದು.

ಸೃಷ್ಟಿ ವೆಂಚರ್ಸ್ ನವರು ಬರೀ ಪುಸ್ತಕ ಪರಿಷೆಯೊಂದೇ ಅಲ್ಲದೆ, ಅನೇಕ ಪ್ರಶಸ್ತಿ ವಿಜೇತ, ಉತ್ತಮ ಕನ್ನಡ ಚಿತ್ರಗಳ ಪ್ರದರ್ಶನಮತ್ತು ಚಿತ್ರ ತಂಡಗಳೊಂದಿಗೆ ಸಂವಾದ ಕೂಡ ಏರ್ಪಡಿಸುತ್ತಿರುತ್ತಾರೆ... ತಮ್ಮ ಪುಟ್ಟ ಕಛೇರಿಯಲ್ಲಿ ಮಕ್ಕಳಿಗಾಗಿ creativity classes, ಗೃಹಿಣಿಯರಿಗಾಗಿ ಅನೇಕ ತರಹದ ತರಬೇತಿಗಳನ್ನೂ ಕೂಡ ನಡೆಸುತ್ತಾರೆ... ಹೀಗೆ ನಮಗೆ ಹೊಸಾಪರಿಕಲ್ಪನೆಯೊಂದನ್ನು ಸೃಷ್ಟಿಸಿ ತೋರಿಸಿದ ಸೃಷ್ಟಿ ವೆಂಚರ್ಸ್ ನವರಿಗೆ ಒಂದು ಧನ್ಯವಾದವನ್ನು ತಿಳಿಸುತ್ತಾ, ಇನ್ನೂ ಅನೇಕಸೃಜನಾತ್ಮಕ ಕಾರ್ಯಗಳು ಅವರಿಂದ ನಡೆಯಲಿ ಎಂದು ಹಾರೈಸುತ್ತೇನೆ. ಇದರ ವಿವರಣೆಯನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದಉದ್ದೇಶವೆಂದರೆ, ಮುಂದಿನ ಪುಸ್ತಕ ಪರಿಷೆ ಮತ್ತು ಅವರ ಇತರ ಚಟುವಟಿಕೆಗಳಲ್ಲಿ, ನಮ್ಮ ಬ್ಲಾಗ್ ಮಿತ್ರರುಗಳು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಲಿ ಮತ್ತು ಕನ್ನಡ ಭಾಷೆಯ, ಸಾಹಿತ್ಯದ ಉಳಿವಿಗಾಗಿ ಬೆಂಬಲ ತೋರಿಸಲಿ ಎಂಬ ಆಶಯದಿಂದಲೇ....
“ಸೃಷ್ಟಿ ವೆಂಚರ್ಸ್”
ನಂ. 81 ,ಈ.ಏ.ಟಿ ರಸ್ತೆ,
(ಪುಳಿಯೊಗರೆ ಪಾಯಿಂಟ್ ಮೇಲೆ)
ಬಸವನಗುಡಿ, ಬೆಂಗಳೂರು-560004
9945003479, 9448171069

13 comments:

  1. dhanyavaadagaLu maahitiyannu haMchikoMDiddakke .

    ReplyDelete
  2. ಉತ್ತಮ ಪ್ರಯತ್ನ, ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ,
    ನಿಮ್ಮ ಮಾಹಿತಿಗೆ ಧನ್ಯವಾದಗಳು.

    ReplyDelete
  3. ಮೇಡಮ್,

    ನಾನು ಬರಬೇಕೆಂದುಕೊಂಡಿದ್ದೆ. ಫೋಟೊಗ್ರಫಿ ಕೆಲಸದಿಂದಾಗಿ ಬರಲಿಕ್ಕಾಗಲಿಲ್ಲ. ಒಂದು ಉತ್ತಮ ಪ್ರಯತ್ನಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು.

    ReplyDelete
  4. ಓದುವ ಹವ್ಯಾಸವನ್ನು ಉತ್ತಮ ಪಡಿಸುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಇದನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು

    ReplyDelete
  5. Excellent Job, ನಿಮಗೆ ಅನಂತ ಅಭಿನಂದನೆಗಳು

    ReplyDelete
  6. ಶ್ರೀಧರ್ ಮತ್ತು ಪ್ರವೀಣ್ ಇಬ್ಬರಿಗೂ ಧನ್ಯವಾದಗಳು......

    ಶಿವು ಸಾರ್..
    ಬರಬೇಕೆಂದು ಕೊಂಡಿದ್ದೆ ಎಂಬ ನಿಮ್ಮ ಮಾತು ನಂಗೆ ಖುಷಿ ಕೊಟ್ಟಿತ್ತು. ಮುಂದಿನ ಸಲ ಹೆಚ್ಚು ಜನರು ಸೇರೋಣ, ಒಳ್ಳೆಯ ಒಂದು ಪ್ರಯತ್ನಕ್ಕೆ ನಮ್ಮ ಬೆಂಬಲ ಸೂಚಿಸುವುದಕ್ಕಾಗಿ. ಧನ್ಯವಾದಗಳು.

    ಪ್ರಭಾಮಣಿ ಮೇಡಮ್..
    ನನ್ನ ಮಾತುಗಳನ್ನೋದಲು ಬಂದ ನಿಮಗ ಸ್ವಾಗತ. ನಿಮ್ಮ ಬ್ಲಾಗ್ ಕೂಡ ನೋಡಿದೆ. ಚೆನ್ನಾಗಿದೆ ನಿಮ್ಮ ಲೇಖನಗಳು. ಹೀಗೇ ಬರುತ್ತಿರಿ ಮೇಡಮ್ ನನ್ನ ಮಾತುಗಳನ್ನೋದಲು. ನನ್ನ ಪ್ರಯತ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಭಟ್ ಸಾರ್...
    ನಿಮ್ಮ ಪ್ರೋತ್ಸಾಹ, ಬೆಂಬಲ ಸೃಷ್ಟಿಯ ಯುವಕರಿಗೆ ತುಂಬಾ ಅವಶ್ಯ ಮತ್ತು ಹೆಮ್ಮೆಯ ವಿಚಾರ. ಮುಂದಿನ ಸಲ ನೀವೂ ದಯವಿಟ್ಟು ಬನ್ನಿ ಸಾರ್. ಅಭಿನಂದನೆಗಳನ್ನು ತಿಳಿಸಿದ್ದೀರಿ ಅದನ್ನು ನಾನು ಕಷ್ಟಪಟ್ಟು ಕೆಲಸ ಮಾಡಿದ ಸೃಷ್ಟಿಯ ತಂಡದವರಿಗೆ ಈ ಮೂಲಕ ತಲುಪಿಸಿದ್ದೇನೆ. ಧನ್ಯವಾದಗಳು ಸಾರ್.

    ReplyDelete
  7. ಶ್ಯಾಮಲಾಜೀ...
    ಪುಸ್ತಕಪರಿಷೆಯ ಪರಿಕಲ್ಪನೆಯನ್ನು ಮಾಡಿದ ಸೃಷ್ಟಿ ವೆಂಚರ್ಸ್‌‌ನವರ ಪ್ರಯತ್ನ, ನಮ್ಮ ನಿಮ್ಮ ಮೊದಲ ಭೇಟಿಯಾಗಿದ್ದು 'ಜನವರಿ ೧೭ ರ' ಪುಸ್ತಕ ಪರಿಷೆಯಲ್ಲಿ. ಈ ದಿನ ನಿಮ್ಮ ಇನ್ನೂ ಕೆಲವು ಬ್ಲಾಗಿಗರ ಭೇಟಿ ಮಾಡಿಸಿಕೊಟ್ಟರಿ. ಕಳೆದಬಾರಿಯ ಪುಸ್ತಕ ಕೊಂಡುಹೋಗಿದ್ದು ಓದಿದ್ದು ಮುಗಿದಿದ್ದರೂ, ಮತ್ತೆ ಮತ್ತೆ ಆ ಪುಸ್ತಕವನ್ನು ಬಿಟ್ಟುಕೊಡಲಾಗದೆ ತರಲಾಗಲಿಲ್ಲ. ಕೆಲವೊಂದು ಪುಸ್ತಕಗಳು ಸಿಗುವುದು ಅಪರೂಪ.

    ಇನ್ನು ನನ್ನ ಮಿತ್ರರೂ ಕೆಲವರು ಬರುವ ಆಸಕ್ತಿಯಿಂದಿದ್ದರೂ ಕೆಲವಾರು ಕಾರಣಗಳಿಂದ ಬರಲಾಗಲಿಲ್ಲ ಎಂದು ತಿಳಿಸಿದರು.

    ಮುಂದಿನ ಬಾರಿ ಮತ್ತಷ್ಟು ಬ್ಲಾಗಿಗ ಮಿತ್ರರು ಸೇರುವ... ನಮ್ಮಲ್ಲಿರುವ, ನಾವು ಓದಿರುವ ಪುಸ್ತಕಗಳು ಮತ್ತೊ‌ಬ್ಬ ಆಸಕ್ತರಿಗೂ ಸಿಗಲು ಪ್ರಯತ್ನಿಸೋಣ...

    ಚಂದ್ರು

    ReplyDelete
  8. ಚಂದ್ರೂ.... ನನಗೂ ನೆನಪಿದೆ ನಿಮ್ಮನ್ನು ಭೇಟಿಯಾಗಿದ್ದು... :-) ಹೌದು ಈ ಸಲ ಹರೀ... ವಿನಯ್ ಕೂಡಾ ಇದ್ದರು... ಮುಂದಿನ ಸಲ ಸಿಕ್ಕಾಗ, ನಾವು ಓದಿರುವ ಪುಸ್ತಕಗಳನ್ನು ಬದಲಾಯಿಸಿಕೊಳ್ಳೋಣ. ಪುಸ್ತಕ ಪರಿಷೆಗೆ ಕೊಡುವಂತಹ ಪುಸ್ತಕಗಳು ನನ್ನ ಹತ್ತಿರ ಇಲ್ಲ. ಇರುವುದೆಲ್ಲಾ ನಾನು ಆರಿಸಿ, ನನ್ನ ಪುಟ್ಟ ಗ್ರಂಥಾಲಯಕ್ಕಾಗಿ ಸಂಗ್ರಹಿಸಿರುವ ಕೆಲವೇ ಪುಸ್ತಕಗಳು... ಧನ್ಯವಾದಗಳು..

    ReplyDelete
  9. srushti venchurs bagge mahiti neediddakke dhanyavadagalu. duradurinavarige swalp niraas. aadaru intaha prayatna nadeyuttideyalla ennuvadu santasada suddhi mattu illu adannu maadalu sphoorthi siguvadu.
    maahitige dhanyavadagalu.

    ReplyDelete
  10. ಸೃಷ್ಟಿ ವೆಂಚರ್ಸ್ ವನರು ಮಾಡಿತ್ತಿರುವ ಕೆಲಸ ನಿಜಕ್ಕೂ ಕನ್ನಡದ ಸೇವೆ ಸೀತಾರಾಮ್ ಸಾರ್.... ನೀವು ದೂರದೂರಿನಲ್ಲಿದ್ದೀರೆಂದು ನಿರಾಸೆ ಪಟ್ಟರೂ, ಸೃಷ್ಟಿಯವರ ಕೆಲಸ ನಿಮಗೆ ನೀವಿರುವ ಜಾಗದಲ್ಲೇ ಮಾಡಲು ಸ್ಪೂರ್ತಿ ಕೊಟ್ಟಿದೆ ಎಂಬುದು ತುಂಬಾ ಸಂತಸದ ಹಾಗೂ ಮುಖ್ಯವಾದ ವಿಚಾರ. ನೀವೊಮ್ಮೆ ಬೆಂಗಳೂರಿಗೆ ಬಂದಾಗ, ಸೃಷ್ಟಿಯ ಹುಡುಗರನ್ನು ಭೇಟಿ ಮಾಡಬಹುದು ಅನ್ಸತ್ತೆ... ಧನ್ಯವಾದಗಳು.....

    ReplyDelete
  11. ಶ್ಯಾಮಲಾರವರೆ...
    ಮುಂದಿನ ಬಾರಿ ಖಂಡಿತ ಬರುವೆ...

    ಸಂಪೂರ್ಣಮಾಹಿತಿ../ ಲೇಖನಕ್ಕಾಗಿ ಧನ್ಯವಾದಗಳು...

    ReplyDelete
  12. ಪ್ರಕಾಶ್ ಸಾರ್....

    ಧನ್ಯವಾದಗಳು.... ಖಂಡಿತಾ ಮುಂದಿನ ಸಲ ನಮ್ಮ ಬ್ಲಾಗ್ ಲೋಕದ ಬಂಧುಗಳೆಲ್ಲಾ ಬಂದರೆ... ಸೃಷ್ಟಿಯವರ ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹವಾಗುತ್ತದೆ.

    ReplyDelete
  13. na tandiruva "the flow of life " odta iddene iga :) olle baraha akka

    ReplyDelete