Showing posts with label ಬ್ರಹ್ಮನರಾಣಿ. Show all posts
Showing posts with label ಬ್ರಹ್ಮನರಾಣಿ. Show all posts

Saturday, September 27, 2014

ದಾಸಸಾಹಿತ್ಯದಲ್ಲಿ ದೇವಿ ಸರಸ್ವತಿ :

ಸರಳ, ಸುಲಭ ಹಾಗೂ ಕನ್ನಡ ಭಾಷೆಯಲ್ಲಿ ರಚಿತವಾದ ದಾಸಸಾಹಿತ್ಯ ಭಕ್ತ ಸಮುದಾಯಕ್ಕೆ ಲಭ್ಯವಾದ ಅತ್ಯಂತ ಒಳ್ಳೆಯ ಹಾಗೂ ಉತ್ಕೃಷ್ಟವಾದ ಸಾಹಿತ್ಯ.  ದಾಸಪರಂಪರೆಯಲ್ಲಿ ಬಂದ ಶ್ರೇಷ್ಠ ಮಾನವರು ತಾವು ಕಂಡ ಸತ್ಯವು ಪ್ರತಿ ಜೀವಿಗೂ ತಿಳಿಯಲಿ ಮತ್ತು ಪ್ರತಿಯೊಬ್ಬರೂ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳಲಿ ಎಂಬ ಕಳಕಳಿಯಿಂದ ಸಾಹಿತ್ಯ ಸೃಷ್ಟಿ ಮಾಡಿ, ಅದನ್ನು ತಾವೇ ಹಾಡುತ್ತಾ, ಕುಣಿಯುತ್ತಾ ಭಗವಂತನಿಗೆ ಸಮರ್ಪಿಸಿದರು.  ಜೊತೆಯಲ್ಲಿ ಬಂದ ತಮ್ಮ ಶಿಷ್ಯರಿಗೂ ಅದನ್ನು ಕಲಿಸಿಕೊಟ್ಟರು.  ಊರೂರು ಸುತ್ತುತ್ತಾ, ಊಂಛವೃತ್ತಿ ಮಾಡುತ್ತಾ ಆಧ್ಯಾತ್ಮದ ತಿರುಳನ್ನು ಹಂಚಿದರು.  ಜನಸಾಮಾನ್ಯರಿಗೆ ತಿಳಿಯದೇ ಇದ್ದ ಅನೇಕ ವಿಷಯಗಳನ್ನು ಸುಲಭವಾಗಿ ಹಾಡಿನ ಮೂಲಕ ಪ್ರಚಾರ ಮಾಡಿದರು.  ಹೇಗೆ ಬದುಕಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂಬೆಲ್ಲಾ ಸಂಪ್ರದಾಯಗಳನ್ನೂ ಹಾಡಿನಲ್ಲಿಯೇ   ಅರ್ಥ ಮಾಡಿಸಿದರು.  ದಾಸಸಾಹಿತ್ಯದ ಪ್ರಾರಂಭವು ಶ್ರೀ ಶ್ರೀಪಾದರಾಜರ ಕೃತಿಗಳಿಂದ ಗುರುತಿಸಿಕೊಳ್ಳುತ್ತದೆ.  ದಾಸ ಪರಂಪರೆಯಲ್ಲಿ ಬಂದ ಪ್ರತಿಯೊಬ್ಬ ದಾಸರೂ ಸರಸ್ವತಿ ದೇವಿಯನ್ನು ಸ್ತುತಿ ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. 

ಶ್ರೀ ವಾದಿರಾಜರು ಸರಸ್ವತಿಯನ್ನು ಕುರಿತು ಬರೆದಿರುವ ಒಂದು ಕೃತಿ "ವಾಣಿ ಪರಮಕಲ್ಯಾಣಿ ನಮೋ ನಮೋ | ಅಜನ ರಾಣಿ ಪಂಕಜರಾಣಿ " ಎಂಬುದರಲ್ಲಿ ಸರಸ್ವತಿ ದೇವಿಯನ್ನು ಅಂಬೆ , ಸ್ಮರಣೆ ಮಾತ್ರವೇ ಸಾಕು ಭಕ್ತರ ಕಾಯ್ವೆ, ಶಾರದಾಂಬೆ, ಪುತ್ಥಳಿಬೊಂಬೆ, ವಾಗ್ದೇವಿ, ಹರಿಣಾಕ್ಷಿ ಎಂದು ಸ್ತುತಿಸಿದ್ದಾರೆ.

ಪುರಂದರ ದಾಸರು "ಒಂದೆ ಮನದಲಿ ಭಜಿಸು ವಾಗ್ದೇವಿಯ | ಇಂದು ಮತಿಕೊಡುವಳು ಶ್ರೀಹರಿಯ ಧ್ಯಾನದೊಳು " ಎಂಬ ಕೃತಿಯಲ್ಲಿ  ಪುರಾಣ ಕಥೆಗಳ ಉಲ್ಲೇಖ ಮಾಡಿದ್ದಾರೆ.  ಮೊದಲನೆಯ ಚರಣದಲ್ಲಿ ಪ್ರಹ್ಲಾದನ ಕಥೆಯನ್ನು ಹೇಳಿದ್ದಾರೆ.  ಪ್ರಹ್ಲಾದನು ಕಮಲಜನ (ಬ್ರಹ್ಮನ) ರಾಣಿಯಾದ ನಿನ್ನನ್ನು ವಂದಿಸಿ ಹರಿ ವಿಶ್ವಮಯನೆಂದು ಹೋರಾಟ ಪ್ರಾರಂಭಿಸಿದ.    ಪುಟ್ಟ ಬಾಲಕನಾದ ಪ್ರಹ್ಲಾದನ ಕ್ಲೇಶ, ವಿಪ್ಲವಗಳನ್ನೆಲ್ಲಾ ಕಳೆದು, ಭಾವಶುದ್ಧಿಯನ್ನು ಪ್ರಸಾದಿಸಿ, ಶ್ರೀಹರಿಯ ಚರಣಗಳನ್ನು ಹೊಂದಿಸಿದೆ ಎಂದು ಸ್ತುತಿಸಿದ್ದಾರೆ.  ಎರಡನೆಯ ಚರಣದಲ್ಲಿ ರಾಮಾಯಣದ ಕಥೆ ಹೇಳುತ್ತಾರೆ.   ದಶಮುಖನಾದ ರಾವಣನ ಅನುಜ ವಾಣಿಯಾದ ನಿನ್ನನ್ನು ವಂದಿಸದೇ ತಪಸ್ಸು ಮಾಡಿದ.   ತಪಸ್ಸು ಫಲಿಸಿ, ವರ ಬೇಡುವ ಸಮಯದಲ್ಲಿ ಅವನ ನಾಲಿಗೆಯಲ್ಲಿ ನೆಲೆಸಿ, ನಿದ್ರೆಯನ್ನು ಬೇಡುವಂತೆ ಮಾಡಿದೆ.  ಮುಂದೆ ಶ್ರೀರಾಮಚಂದ್ರ ಮತ್ತು ದಶಮುಖನ ಯುದ್ಧದಲ್ಲಿ ’ಕುಂಭಕರ್ಣ’ನೆಂದೇ ಕರೆಯಲ್ಪಟ್ಟ ರಾವಣನ ಅನುಜನ ಶಕ್ತಿ ಅವನು ಬೇಡಿದ್ದ ನಿದ್ರೆಯ ವರದಿಂದ ಕುಗ್ಗುವಂತೆ ಮಾಡಿದೆ ಎಂದು ಸರಸ್ವತಿ ದೇವಿಯ ಮಹಿಮೆಯನ್ನು ಸ್ತುತಿಸಿದ್ದಾರೆ.  ಮೂರನೆಯ ಚರಣದಲ್ಲಿ ಅಜನ ಪಟ್ಟದರಾಣಿಯಾದ ನಿನ್ನನ್ನು ನಿರಂತರ ಬಿಡದೇ ಭಜಿಸಿದರೆ ಸದಾ ಉರುತರವಾದ ವಾಕ್ ಶುದ್ಧಿಯನ್ನು ಕೊಡುವೆ ಮತ್ತು ಭಗವಂತನ ಸೇವೆಯನ್ನು ಕೊಟ್ಟು ಪರತತ್ತ್ವದ ಜ್ಞಾನವನ್ನು ಅರುಹುವೆಯೆಂದು ಸ್ತುತಿಸಿದ್ದಾರೆ.
"ಕೊಡು ಬೇಗ ದಿವ್ಯಮತಿ - ಸರಸ್ವತಿ" ಎಂಬ ಕೃತಿಯಲ್ಲಿ ಅಖಿಳ ವಿದ್ಯೆಗಳಿಗೆ ಅಭಿಮಾನಿಯಾದ, ಇಂದಿರಾರಮಣನ ಹಿರಿಯ ಸೊಸೆಯೇ ಸಕಲ ಸುಖವಿತ್ತು ಪಾಲಿಸು ಎಂದು ಪ್ರಾರ್ಥಿಸಿದ್ದಾರೆ.
"ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ | ಕುಣಿದಾಡೆ ಎನ್ನ ನಾಲಿಗೆ ಮೇಲೆ" ಎಂಬ ಕೃತಿಯಲ್ಲಿ ಇಳೆಯೊಳಗೆಲ್ಲ ಅಪ್ರತಿಮ ಗುಣವುಳ್ಳವಳೇ, ಎನ್ನ ನಾಲಿಗೆಯ ಮೇಲೆ ನೆಲೆಸಿ, ನನ್ನಿಂದ ಒಳ್ಳೆಯ ಮಾತುಗಳನ್ನಾಡಿಸಿ, ಸುಜ್ಞಾನ ಕೊಟ್ಟು ಕಾಪಾಡು ಎಂದಿದ್ದಾರೆ.  ದೇವಿಯನ್ನು ಸರ್ವಾಲಂಕಾರ ಭೂಷಿತೆಯಾಗಿ ವರ್ಣಿಸಿದ್ದಾರೆ. 
"ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ"  - ವಾಗಭಿಮಾನಿ, ವರಬ್ರಹ್ಮಾಣಿ, ಸುಂದರವೇಣೀ, ಸುಚರಿತ್ರಾಣಿ ಎಂದೆಲ್ಲಾ ವಿಧ ವಿಧವಾಗಿ ಹೊಗಳಿದ್ದಾರೆ.
"ಪಾಲಿಸೆಮ್ಮ ಮುದ್ದು ಶಾರದೆ - ಎನ್ನ - ನಾಲಿಗೆಯಲಿ ನಿಲ್ಲಬಾರದೆ" ಎಂಬ ಕೃತಿಯಲ್ಲಿ ಸರಸ್ವತಿದೇವಿಯನ್ನು ಶಾರದೆ ಎಂದು ಸ್ತುತಿಸಿದ್ದಾರೆ.  ಅಕ್ಷರಕ್ಷರದ ವಿವೇಕವನ್ನು ಪ್ರಸಾದಿಸು, ಸಾಕ್ಷಾದ್ರೂಪದಿಂದ ಒಲಿದು ರಕ್ಷಿಸು ತಾಯೆ ಎನ್ನುತ್ತಾ ಶೃಂಗಾರಪುರದಲ್ಲಿ ನೆಲೆಸಿರುವವಳು, ಸಂಗೀತ ಗಾನ ವಿಲಾಸಿನಿ, ಬ್ರಹ್ಮನರಾಣಿ ನಿನ್ನನ್ನೇ ನಿರುತವೂ ನಂಬಿರುವೆ, ಪೊರೆದು ಪಾಲಿಸು ಎಂದು ಪ್ರಾರ್ಥಿಸಿದ್ದಾರೆ.

ಕನಕದಾಸರು ತಮ್ಮ "ವರವ ಕೊಡು ಎನಗೆ ವಾಗ್ದೇವಿ - ನಿಮ್ಮ ಚರಣ ಕಮಲಂಗಳ ದಯಮಾಡು ದೇವಿ" ಎಂಬ ಕೃತಿಯಲ್ಲಿ ಅವಿರಳ ಪುರಿಯಲ್ಲಿ ನೆಲೆಸಿರುವ ಕಾಗಿನೆಲೆಯಾದಿಕೇಶವನ ಸುತನಿಗೆ ಸನ್ನುತ ರಾಣಿವಾಸೆ ಎನ್ನುತ್ತಾ ವಾಗ್ದೇವಿಯ ವರ್ಣನೆಯನ್ನು ಓದುವ, ಕೇಳುವ ಎಲ್ಲರಿಗೂ ಮನದಲ್ಲಿ ಮೂಡುವಂತೆ ಸ್ತುತಿಸಿದ್ದಾರೆ.  ಇದು ಕನಕದಾಸರು ಶೃಂಗೇರಿಗೆ ಹೋದಾಗ ರಚಿತವಾದ ಕೃತಿಯೆಂಬ ಮಾತಿದೆ.   ದೇವಿಯ ವರ್ಣನೆ ಮಾಡಲು ಮುದಕೊಡುವಂತಹ ಹಾಗೂ ಅಪರೂಪದ ಪದಪುಂಜಗಳನ್ನು ದಾಸರಾಯರು ಬಳಸಿದ್ದಾರೆ.  "ಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆ ಸಂಪಿಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ" ಎಂದು ವರ್ಣಿಸಿದ್ದಾರೆ.  ಇಲ್ಲಿ ಜೊಂಪು ಮದನನ ಪೂರ್ಣ ಶಕ್ತಿಬೊಂಬೆಯೆಂದರೆ ನೋಡಿದವರಿಗೆ ಮತ್ತೇರಿಸುವ ಸುಂದರ ಮನ್ಮಥನ ಸಂಮೋಹನ ಶಕ್ತಿಯ ಪೂರ್ಣರೂಪದ ಬೊಂಬೆಯಂತಿರುವ, ಘಮಘಮಿಸುವ ಸಂಪಿಗೆಯನ್ನು ಮುಡಿಗಿಟ್ಟಿರುವ ಶಾರದಾಂಬೆ ನೀನು ತೇಜಪ್ರಕಾಶೆ ಹಾಗೂ ಮಹಾಕವಿ ಜನರ ಹೃತ್ಕಮಲದಲ್ಲಿ ವಾಸಿಸುವವಳು ಎಂದು ಸ್ತುತಿಸಿದ್ದಾರೆ.

ಕಾಖಂಡಕಿ ಶ್ರೀ ಮಹಿಪತಿದಾಸರು ತಮ್ಮ ಕೃತಿ "ಜಯ ಜಯ ಸ್ವರಸತಿ ಜಯವರ ಪೂರಣಮತಿ | ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ" ಯಲ್ಲಿ ಸರಸ್ವತಿದೇವಿಯನ್ನು ವಿದ್ಯಾವರದಾಯಿನಿ, ಸಿದ್ಧಿಗೆ ಶಿಖಾಮಣಿ, ಬುದ್ಧಿ ಪ್ರಕಾಶಿನಿ, ಸದ್ಭೂಷಿಣಿ ಎಂದು ವರ್ಣಿಸುತ್ತಾ ಸದಾಕಾಲವೂ ಸದ್ಗುರು ಸ್ತುತಿ ಒದುಗುವ ಹಾಗೆ ಸ್ಫೂರ್ತಿ ಕೊಡು, ವರವಿದ್ಯದಲಿ ದಾನಿಯಾದ ನೀನು ಸುಪ್ರವೀಣೆ ನಿನಗೆ ಜಯ ಜಯ ಎಂದು ಹಾಡಿದ್ದಾರೆ.

ಗಲಗಲಿ ಅವ್ವನವರೆಂದೇ ಪ್ರಸಿದ್ಧಿಯಾದ, ಹರಿದಾಸಿ ಶ್ರೀಮತಿ ರಮಾ ಅವರು ತಮ್ಮ "ಪಾಲಿಸೆ ಸರಸ್ವತಿ ಪಾಲಿಸೆ | ಪಾಲಿಸೆ ನಿನ್ನಯ ಪಾರಿಗೆ ಬಂದೆನು | ಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ" ಎಂಬ ಕೃತಿಯಲ್ಲಿ ಆದಿ ಬ್ರಹ್ಮನರಾಣಿಯೆ ವೇದಕ್ಕಭಿಮಾನಿಯೆ, ಮೋದ ಗಾಯನ ಕುಶಲಳೆ ದಯಮಾಡಿ ಮತಿಯ ಕೊಡು  ಎಂದು ಬೇಡುತ್ತಾರೆ.  ಕೃತಿಯನ್ನು ಮುಂದುವರೆಸುತ್ತಾ ಅವ್ವನವರು ಸರಸ್ವತಿ ದೇವಿಯನ್ನು ತುಂಬಾ ಆತ್ಮೀಯವಾದ ಸಂಬೋಧನೆಗಳಿಂದ, ನಮಗೆ ತುಂಬಾ ಹತ್ತಿರವಾದ ಒಬ್ಬ ಸ್ತ್ರೀಯ ಪಾತ್ರವೆಂಬಂತೆ ಚಿತ್ರಿಸುತ್ತಾರೆ.  ಸರಳವಾದ ಭಾವದಿಂದ ಅಕ್ಕರೆಯಿಂದ ಅಂತರಂಗದ ಗೆಳತಿಯನ್ನೋ, ಒಡಹುಟ್ಟಿದ ಸಹೋದರಿಯನ್ನೋ ಕರೆಯುವಂತೆ ರಾಮೇಶನರಮನೆಗೆ ಬಾರೆಂದು ಆಹ್ವಾನಿಸುತ್ತಾರೆ.   ಸರಸ್ವತಿ ದೇವಿಯನ್ನು ಖನಿ, ಮಿತ್ರಿ, ಹರದಿ (ಮುತ್ತೈದೆ)  ಗುಜ್ಜಿ (ಗಿಡ್ಡಿ, ಕುಬ್ಜ ಕನ್ಯೆ) ಎನ್ನುತ್ತಾ ಹೊನ್ನವರೆಯಾದ ಹೆರಳನ್ನು ಬಲಗೈಯಲ್ಲಿ ಹಿಡಿದುಕೊಂಡು ಮುತ್ತಿನ ಉಡಿಯಕ್ಕಿ, ಮಲ್ಲಿಗೆಯ ದಂಡು ಸ್ವೀಕರಿಸಲು ಗೆಜ್ಜೆಯ ಸರಪಳಿಯನ್ನು ಧರಿಸಿ, ಜರಿಯ ಸೀರೆಯನುಟ್ಟು ಘಲ್ ಘಲ್ ಎನ್ನುತ್ತಾ ಸಭೆಯೊಳಗೆ ಪ್ರತ್ಯಕ್ಷಳಾಗು ಎಂದು ಪ್ರಾರ್ಥಿಸುತ್ತಾರೆ.  ಅವ್ವನವರ ಕಾವ್ಯ ಓದುಗರ ಮನದ ಕದವನ್ನು ತಟ್ಟಿ ತೆರೆದು ಅಕ್ಕರೆಯ ಸಿಂಚನವನ್ನು ಮಾಡಿಸುತ್ತದೆ.  ಸರಸ್ವತಿ ದೇವಿಯನ್ನು ಪ್ರತ್ಯಕ್ಷವಾಗಿ ಕಂಡ ನವಿರಾದ ಅನುಭೂತಿಯನ್ನು ಹುಟ್ಟಿಸುತ್ತದೆ.   ಆಹ್ವಾನಿತಳಾದ ದೇವಿಯ ಭಾವದಲ್ಲಿ ಮನಸ್ಸು ಲೀನವಾಗುವಂತೆ ಮಾಡುತ್ತದೆ.



 ಚಿತ್ರಕೃಪೆ : ಅಂತರ್ಜಾಲ

Tuesday, December 31, 2013

ಸರಸ್ವತಿ ದೇವಿಯಾಗಿ..

ಪ್ರಣೋ ದೇವೀ ಸರಸ್ವತೀ, ವಾಜೇಭಿರ್ವಾಜಿನೀವತೀ | ಧೀನಾಮವಿತ್ರ್ಯವತು |
ಆ ನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಮ್ |
ವಾಗ್ದೇವ್ಯೈ ನಮಃ ||
ಸರಸ್ವತಿ ದೇವೀ ಸರ್ವರಕ್ಷಕಳು, ಸಾಮರ್ಥ್ಯಸಂಪನ್ನೆಯೂ ಆಗಿರುವಳು ಮತ್ತು ಲೋಕಕ್ಕೆ ಅನ್ನ ನೀರು ಪೂರೈಸುವವಳು.  ದಾನ ಮಾಡುವವರಿಗೆ ಉತ್ತಮವಾಗಿ ವರದಾನ ಮಾಡುವವಳು, ಯಜ್ಞ ಕರ್ಮದಲ್ಲಿ ವಿಪುಲ ಧನ ಧಾನ್ಯ ಕೊಡುವವಳು ಎಂದು ಋಗ್ವೇದವು ಗುಣಗಾನ ಮಾಡಿದೆ.  ಋಗ್ವೇದ, ಯಜುರ್ವೇದ, ಸಾಮವೇದಗಳಲ್ಲೂ,  ಉಪನಿಷತ್ತುಗಳಲ್ಲೂ ಸರಸ್ವತೀದೇವಿಯನ್ನು "ವಾಕ್" ಎಂದು ಸ್ತುತಿಸಲ್ಪಟ್ಟಿದೆ.  ಓಂ ವಾಜ್ಮೇಮನಸಿ ಪ್ರತಿಷ್ಠಿತಾ - ಮನೋ ಮೇ ವಾಚಿ ಪ್ರತಿಷ್ಠಿತಂ - ನನ್ನ ವಾಕ್ಕು ನಿರಂತರವಾಗಿ ಮನಸ್ಸಿನಲ್ಲಿ ಸ್ಥಿರವಾಗುವಂತಾಗಲೀ, ನನ್ನ ಮನಸ್ಸು ವಾಕ್ಕಿನಲ್ಲಿ ನೆಲೆಸುವಂತಾಗಲೀ ಎಂದು ಐತರೇಯಾದಿ ಉಪನಿಷತ್ತಿನಲ್ಲಿ ಪ್ರಾರ್ಥಿಸಲಾಗಿದೆ.

ಕೃಷ್ಣ ಯಜುರ್ವೇದಾಂತರ್ಗತವಾಗಿರುವ ಸರಸ್ವತೀ ರಹಸ್ಯೋಪನಿಷತ್ ನ  ಸರಸ್ವತೀ ದಶ ಶ್ಲೋಕದಲ್ಲಿ ದೇವಿಯನ್ನು "ಶ್ರೀ ವಾಗೀಶ್ವರೀ ದೇವತಾ.... ಶ್ರದ್ಧಾ, ಮೇಧಾ, ಪ್ರಜ್ಞಾ, ಧಾರಣಾ ವಾಗ್ದೇವತಾ ಮಹಾ ಸರಸ್ವತೀ ತ್ಯೇತೈ ರಂಗನ್ಯಾಸಃ ನಿಹಾರ ಹಾರ ಘನಸಾರ ಸುಧಾಕರಾಭಾಂ ಕಲ್ಯಾಣದಾಂ ಕನಕ ಚಂಪಕ ದಾಮ ಭೂಷಾಮ್, ಉತ್ತುಂಗ ಪೀನಕುಚ ಕುಂಭಮನೋಹರಾಂಗೀಂ ವಾಣೀಂ ನಮಾಮಿ ಮನಸಾ ವಚನಾಂ ವಿಭೂತ್ತೈ" - ಶ್ರೀ ವಾಗೀಶ್ವರೀ ದೇವತಾ ಪ್ರೀತಿಗಾಗಿ, ಶ್ರದ್ಧಾ, ಮೇಧಾ, ಪ್ರಜ್ಞಾ, ಧಾರಣ, ವಾಗ್ದೇವತೇ ಮಹಾಸರಸ್ವತೀ ಬಂಗಾರದ ಸಂಪಂಗೀ ಮಾಲೆಯಿಂದ ಅಲಂಕರಿಸಿಕೊಂಡಿರುವವಳು, ಉತ್ತುಂಗ ಪೀನವಾದ ಕುಚಕುಂಭಗಳಿಂದ ಮನೋಹರವಾದ ಶರೀರವುಳ್ಳವಳಾದ ವಾಣಿಯನ್ನು ವಾಕ್ಕಿನ ವಿಭೂತಿಗಾಗಿ ಮನಸಾ ನಮಸ್ಕರಿಸುತ್ತೇನೆ ಎಂದು ವಿವರಿಸಿದ್ದಾರೆ.  ಮುಂದುವರೆಯುತ್ತಾ "ನಮಸ್ತೇ ಶಾರದಾ ದೇವೀ ಕಾಶ್ಮೀರಪುರವಾಸಿನಿ, ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೇ, ಅಕ್ಷಸೂತ್ರಾಂ ಕುಶಧರಾ ಪಾಶಪುಸ್ತಕ ಧಾರಿಣೀ, ಮುಕ್ತಾಹಾರ ಸಮಾಯುಕ್ತಾ ವಾಚಿ ತಿಷ್ಠತು ಮೇ ಸದಾ, ಕಂಬುಕಂಠೀ ಸುತಾ ಮ್ರೋಷ್ಠೀ, ಸರ್ವಾಭರಣಭೂಷಿತಾ, ಮಹಾಸರಸ್ವತೀ ದೇವೀ ಜಿಹ್ವಾಗ್ರೇ ಸನ್ನಿವೇಶ್ಯತಾಮ್ - ಜಪಮಾಲೆಯನ್ನೂ, ಅಂಕುಶವನ್ನೂ ಧರಿಸಿರುವಂತಹವಳು, ಮುತ್ತಿನ ಹಾರವನ್ನು ಧರಿಸಿರುವವಳಾದ ಸರಸ್ವತೀ ದೇವಿಯೇ ಸದಾ ನನ್ನ ಜಿಹ್ವಾಗ್ರಗಳಲ್ಲಿ ಸನ್ನಿಧಾನವನ್ನು ಹೊಂದಿರು ಎಂದು ಪ್ರಾರ್ಥಿಸಲಾಗಿದೆ.

ಪದ್ಮ ಪುರಾಣದಲ್ಲಿ ಬರುವ ವಾಗೀಶ್ವರಿ ಸ್ತೋತ್ರದಲ್ಲಿ ಸರಸ್ವತಿಯನ್ನು ಜಗದ್ಧಾತ್ರೀ ಸರಸ್ವತೀಂ, ಸರ್ವಾ ವಿದ್ಯಾಂ ಲಭಂತೇ ತೇ, ಅಮಲ ಕಮಲಾದಿ ವಾಸಿನಿ, ಮನಸೋ ವೈಮಲ್ಯದಾಯಿನಿ, ಮನೋಜ್ಞೆ, ಚರಣಾಂಭೋರುಹಂ, ನಮಾಮಿ ಸದಾ ಎಂದು ಸ್ತುತಿಸಲ್ಪಟ್ಟಿದೆ. 

ಬ್ರಹ್ಮ ವೈವರ್ತಮಹಾಪುರಾಣದಲ್ಲಿ ಸರಸ್ವತೀ ದೇವಿಯ ಅವತಾರದ ಕಥೆ ಹೇಳಲ್ಪಟ್ಟಿದೆ.  ಇದು ನಾರಾಯಣ ಮಹರ್ಷಿ ಮತ್ತು ನಾರದರ ಸಂವಾದ ರೂಪದಲ್ಲಿದೆ.  ನಾರಾಯಣ ಮಹರ್ಷಿಗಳು ಹೇಳಿದ ವಿಶ್ವಬ್ರಹ್ಮಾಂಡದ ಕಥೆಯನ್ನು ಕೇಳಿ ನಾರದರು ಪ್ರಕೃತಿಯ ಚರಿತ್ರೆಯನ್ನು ತಿಳಿಸುವಂತೆ ಪ್ರಾರ್ಥಿಸುತ್ತಾರೆ.  ಆಗ ಮಹರ್ಷಿಗಳು ಸೃಷ್ಟಿಯ ಪ್ರಾರಂಭದಲ್ಲಿ ಪ್ರಕೃತಿಯು ಪಾರ್ವತಿ, ರಾಧೆ, ಲಕ್ಷ್ಮೀ, ಸರಸ್ವತಿ ಮತ್ತು ಸಾವಿತ್ರಿ ಎಂಬ ಐದು ರೂಪಗಳನ್ನು ಧರಿಸಿದಳೆಂದು ತಿಳಿಸುತ್ತಾರೆ.  ಪ್ರಕೃತಿಯ ಅಂಶದಿಂದ ಉದಿಸಿದ ಈ ದೇವಿಯರ ಚರಿತ್ರೆಯನ್ನೂ ಮಹರ್ಷಿಗಳು ನಾರದರಿಗೆ ವಿವರಿಸುತ್ತಾರೆ.  ಇಲ್ಲಿ ಬರುವ ಕಥೆಯ ಪ್ರಕಾರ ಮೊದಲಿಗೆ ಶ್ರೀಕೃಷ್ಣನು ಸರಸ್ವತಿಯನ್ನು ಪೂಜಿಸಿ, ಅನ್ಯ ದೇವತೆಗಳಿಗೆ ಪೂಜಿಸುವ ವಿಧಿಯನ್ನು ವಿಧಿಸುತ್ತಾನೆ.  ಸರಸ್ವತೀ ದೇವಿಯ ಅನುಗ್ರಹದಿಂದ ಮೂರ್ಖನೂ ಕೂಡ ಪಂಡಿತನಾಗುತ್ತಾನೆಂದು ಸಾರುತ್ತಾನೆ.  ಮಾಘ ಶುದ್ಧ ಪಂಚಮಿಯ ದಿನದಲ್ಲೂ, ವಿದ್ಯಾರಂಭದಲ್ಲಿಯೂ ಮಾನವರು, ದೇವತೆಗಳು, ಋಷಿಗಳು, ಸಿದ್ಧರು, ನಾಗರು, ಗಂಧರ್ಮರು, ಕಿಂನರರು ಮುಂತಾದವರೆಲ್ಲರೂ ಭಕ್ತಿಯಿಂದ ಸರಸ್ವತೀದೇವಿಯನ್ನು ಪೂಜಿಸಬೇಕೆಂದೂ, ಷೋಡಶೋಪಚಾರಗಳನ್ನು ಸಮರ್ಪಿಸಬೇಕೆಂದೂ, ಧ್ಯಾನ, ಸ್ತೋತ್ರಗಳನ್ನು ಅರ್ಪಿಸಬೇಕೆಂದೂ ತಿಳಿಸುತ್ತಾನೆ.  ಪುಸ್ತಕ, ಕಲಶಗಳಲ್ಲಿ ದೇವಿಯನ್ನು ಆಹ್ವಾನಿಸಿ ಪೂಜಿಸುವರೆಂದು ತಿಳಿಸುತ್ತಾನೆ.  ಸರಸ್ವತಿ ದೇವಿಯ ಕವಚವನ್ನು ಚಂದನಲಿಪ್ತವಾದ ಚಿನ್ನದ ತಾಯಿತದಲ್ಲಿಟ್ಟು ಕಂಠದಲ್ಲಿ ಅಥವಾ ಬಲತೋಳಲ್ಲಿ ಧರಿಸುವರು ಮತ್ತು ಸರಸ್ವತಿ ದೇವಿಯ ಕವಚವನ್ನು ವಿದ್ವಾಂಸರು ಪಠಿಸುತ್ತಾರೆಂದು ತಿಳಿಸುತ್ತಾನೆ.  ಶ್ರೀಕೃಷ್ಣನು ಹೀಗೆ ಪೂಜಿಸಿದನಂತರ ಬ್ರಹ್ಮ, ವಿಷ್ಣು, ಮಹೇಶ್ವರರು, ಅನ್ಯ ದೇವತೆಗಳೂ, ಮನುಗಳೂ, ಚಕ್ರವರ್ತಿಗಳೂ, ಮಾನವಾದಿಗಳೂ ಪೂಜಿಸಲಾರಂಭಿಸಿದರು.  ಸರಸ್ವತೀ ಕವಚದಲ್ಲಿ ನಮ್ಮ ದೇಹದ ಪ್ರತೀ ಅಂಗಗಳಿಗೂ ಉದ್ದೇಶಿತವಾಗಿ ದೇವಿಯ ಒಂದೊಂದು ಮಂತ್ರವಿದೆ.  ಅದನ್ನು ಜಪಿಸುತ್ತಾ ದೇಹದ ಆ ಅಂಗವನ್ನು ಸರಸ್ವತೀದೇವಿ ರಕ್ಷಿಸಲೆಂದು ಪ್ರಾರ್ಥಿಸುವ ವಿಧಾನವಿದೆ.  ’ವಿಶ್ವಜಯ’ವೆಂದು ಪ್ರಸಿದ್ಧವಾದ ಸರ್ವಮಂತ್ರ ಸಮೂಹಯುಕ್ತವಾದ ಕವಚ ಮಂತ್ರ ಮತ್ತು ಕಾಣ್ವಶಾಖೆಯಲ್ಲಿ ಉಕ್ತವಾದ ಕವಚಮಂತ್ರ, ಸ್ತೋತ್ರ, ಪೂಜಾವಿಧಾನ, ಧ್ಯಾನ ಮತ್ತು ವಂದನೆಗಳು.
 
ಬ್ರಹ್ಮವೈವರ್ತ ಮಹಾಪುರಾಣದಲ್ಲಿಯೇ ಮಹರ್ಷಿ ಯಾಜ್ಞವಲ್ಕ್ಯರ ಕಥೆಯೂ ತಿಳಿಸಲ್ಪಟ್ಟಿದೆ.  ಮಹರ್ಷಿಗಳು ಗುರುಶಾಪದಿಂದ ತಾವು ಕಲಿತ ವಿದ್ಯೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ದುಃಖಿತರಾಗಿ, ಸೂರ್ಯನನ್ನು ಕುರಿತು ತಪಸ್ಸು ಮಾಡುತ್ತಾರೆ.  ಸೂರ್ಯದೇವನ ದರ್ಶನವಾದಾಗ ದೈನ್ಯತೆಯಿಂದ, ದುಃಖದಿಂದ ಪ್ರಾರ್ಥಿಸಿಕೊಂಡಾಗ, ಸೂರ್ಯ ದೇವನು ಮಹರ್ಷಿಗಳಿಗೆ ವೇದ ವೇದಾಂಗಗಳನ್ನು ಉಪದೇಶಿಸುತ್ತಾನೆ.  ಮಹರ್ಷಿಗಳು ಕಳೆದುಕೊಂಡ ಸ್ಮರಣ ಶಕ್ತಿಗಾಗಿ ವಾಗ್ದೇವಿಯನ್ನು ಸ್ತುತಿಸಬೇಕೆಂದು ತಿಳಿಸುತ್ತಾನೆ. ಯಾಜ್ಞವಲ್ಕ್ಯರು ಸರಸ್ವತೀದೇವಿಯನ್ನು ಭಕ್ತಿಯಿಂದ ಪೂಜಿಸಿ, ಸರಸ್ವತೀ ಸ್ತೋತ್ರ ರಚಿಸುತ್ತಾರೆ.  

| ಬ್ರಹ್ಮ ಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ, ಸರ್ವ ವಿದ್ಯಾಧಿದೇವಿ ಯಾ ತಸ್ಮೈ ವಾಣ್ಯೈ ನಮೋ ನಮಃ, |
| ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ದೇಹಿ.. ಸ್ಮೃತಿ ಶಕ್ತಿಃ, ಜ್ಞಾನಶಕ್ತಿಃ, ಬುದ್ಧಿ ಶಕ್ತಿ ಸ್ವರೂಪಿಣಿ.. ನಮೋ ನಮಸ್ತೇ ||
ಎನ್ನುತ್ತಾ ಸ್ತುತಿಸುತ್ತಾರೆ.  ಗುರುಶಾಪದಿಂದ ನಷ್ಟವಾಗಿದ್ದ ತಮ್ಮ ಸ್ಮರಣಶಕ್ತಿಯನ್ನೂ, ವಿದ್ಯೆಯನ್ನೂ, ಕವಿತ್ವಶಕ್ತಿಯನ್ನೂ, ಗ್ರಂಥ ನಿರ್ಮಾಣಶಕ್ತಿಯನ್ನೂ, ಶಿಷ್ಯಬೋಧನ ಶಕ್ತಿಗಳನ್ನೂ ನೀಡೆಂದು ಬೇಡಿಕೊಳ್ಳುತ್ತಾರೆ.  ಭಕ್ತಿ ಪರವಶರಾಗಿ ನಮಿಸುತ್ತಾರೆ.  ಜ್ಯೋತಿ ಸ್ವರೂಪಳಾದ ಸರಸ್ವತೀದೇವಿಯ ಅನುಗ್ರಹ ಪಡೆಯುತ್ತಾರೆ.  ಹೀಗೆ  ಯಾಜ್ಞವಲ್ಕ್ಯರಿಂದ ರಚಿತವಾಗಿರುವ ಸರಸ್ವತೀದೇವಿಯ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವವರು ಶ್ರೇಷ್ಠ ವಾಗ್ಮಿಗಳಾಗುತ್ತಾರೆಂಬ ನಂಬಿಕೆಯಿದೆ.

ಶ್ರೀ ಜಗನ್ನಾಥದಾಸರು ತಮ್ಮ ಹರಿಕಥಾಮೃತಸಾರವೆಂಬ ಮೇರು ಕೃತಿಯಲ್ಲಿ ಸರಸ್ವತಿಯನ್ನು ಚತುರವದನನ ರಾಣಿ ಎಂದು ಕರೆದು ವರ್ಣಿಸಿದ್ದಾರೆ.
ಚತುರವದನನ ರಾಣಿ ಅತಿರೋ
ಹಿತ ವಿಮಲವಿಜ್ಞಾನಿ ನಿಗಮ ಪ್ರ
ತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |
ನುತಿಸಿ ಬೇಡುವೆ ಜನನಿ ಲಕುಮೀ
ಪತಿಯ ಗುಣಗಳ ತುತಿಪುದಕೆ ಸ
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನಸದನದಲಿ ||
ಸರಸ್ವತಿ ದೇವಿಯು ವೇದಗಳ ಅಭಿಮಾನಿ.  ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಅತಿರೋಹಿತಳು ಮರೆವೆಯೇ ಎಲ್ಲದವಳು ತಡೆಯಿಲ್ಲದೇ ಪರಮಾತ್ಮನ ಸ್ತುತಿ ಮಾಡುತ್ತಲೇ ಇರುವವಳು, ಬ್ರಹ್ಮಾಣಿ – ತತ್ವಜ್ಞಾನಿ.  ಬ್ರಹ್ಮ ಮತ್ತು ಸರಸ್ವತಿ ಮಹತ್ತತ್ವಕ್ಕೆ ಸೇರಿದವರು. ಪರಮಾತ್ಮನ ಬಗ್ಗೆ ಶುದ್ಧವಾದ ವಿಮಲ ಜ್ಞಾನವು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.  ಇವಳು ಪರಶುಕ್ಲತ್ರಯರಲ್ಲಿ ಒಬ್ಬಳು ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ತತ್ವಜ್ಞಾನಿ, ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.  ಬ್ರಹ್ಮ ದೇವರಿಗಿಂತ ೧೦೦ ಗುಣಗಳಲ್ಲಿ ಕಡಿಮೆ.  ಇವಳೂ ಋಜುಗಣಕ್ಕೆ ಸೇರಿದವಳಾದ್ದರಿಂದ ೩೨ ಲಕ್ಷಣಗಳು ಉಳ್ಳವಳು.  ೧೯೯ ಕಲ್ಪ ಸಾಧನೆಯಾದ ಮೇಲೆ ವಾಣೀ ಪದವಿಗೆ ಬರುವವಳು.  ವೇದಾಭಿಮಾನಿ, ವೇದದ್ವಾರ ಭಗವಂತನಲ್ಲಿ ಉಪಸಂಹಾರ ಮಾಡುವ ಚಿತ್ತಕ್ಕೆ ಅಭಿಮಾನಿ ಸರಸ್ವತಿ.  ನಾಲಿಗೆಗೂ ಅಭಿಮಾನಿ,    ಕ್ಷೀರಕ್ಕೂ ಅಭಿಮಾನಿ.  ಕ್ಷೀರದ ಬಣ್ಣ ಬಿಳುಪು ಮತ್ತು ಬಿಳುಪು ಎಂದರೆ ಜ್ಞಾನ.  ಜೀವರುಗಳಿಗೆ ಜ್ಞಾನ ಕ್ಷೀರ ಉಣಿಸುವವಳು ಸರಸ್ವತಿ ದೇವಿ. ಇಂತಹ ಅಭಿಮಾನಿ ದೇವತೆ ಸದ್ಗುಣಿ ಸರಸ್ವತಿಯು ನಮ್ಮ ವದನದಲ್ಲಿ ಇದ್ದು ಪರಮಾತ್ಮನ ಗುಣಗಳನ್ನು ನುಡಿಸಲಿ  ಎಂದು ದಾಸರು ಕೇಳಿಕೊಂಡಿದ್ದಾರೆ.   ಉಪನಿಷತ್ತುಗಳಲ್ಲಿರುವ ಉಲ್ಲೇಖಗಳ ಆಧಾರದ ಮೇಲೆಯೇ ದಾಸರಾಯರು ಕನ್ನಡ ಭಾಷೆಯಲ್ಲಿ ಸುಲಭವಾಗಿ ಅರ್ಥವಾಗುವಂತೆ ಹರಿಕಥಾಮೃತಸಾರವನ್ನು ರಚಿಸಿದ್ದಾರೆ.
 
ಸರಸ್ವತಿಯ ಜೊತೆಗಿರುವ ಹಂಸವು ತಪ್ಪು-ಸರಿ, ಸತ್ಯ-ಅಸತ್ಯಗಳ ಮಧ್ಯೆಯಿರುವ ವ್ಯತ್ಯಾಸವನ್ನು ಗುರುತಿಸುವ ಶಕ್ತಿಯ ಸಂಕೇತವಾಗಿದೆ.  ಹಂಸವು ಈ ಪ್ರಪಂಚದಲ್ಲಿ ಇರು ಆದರೆ ಯಾವುದಕ್ಕೂ ಅಂಟಿಕೊಳ್ಳಬೇಡ, ಕಮಲದ ಎಲೆಯ ಮೇಲೆ ಹೇಗೆ ನೀರಿನ ಹನಿ ಅಂಟಿಕೊಳ್ಳದೇ ಇರುವುದೋ ಹಾಗೆ ಇರು ಎಂದು ತಿಳಿಸುತ್ತದೆ.    ಹಂಸಜಪ (ಉಸಿರಾಟ) ಜೀವಿ ಹಾಗೂ ಪ್ರಾಣದ ಇರುವಿಕೆಯನ್ನು ಸಂಕೇತಿಸುತ್ತದೆ.  ಹಂಸ ನೀರಿನ ಮೇಲೆ ಧ್ಯಾನಿಸುತ್ತಾ ತೇಲುತ್ತಿರುತ್ತದೆ, ಇದೂ ಕೂಡ ನಾವು ಭವಸಾಗರದಲ್ಲಿ ಭಗವಂತನನ್ನು ಧ್ಯಾನಿಸುತ್ತಿರಬೇಕೆಂಬ ಸೂಚನೆ ನೀಡುತ್ತದೆ.  ಸರಸ್ವತಿಯ ಬಲಗಡೆಗೆ ನವಿಲು, ಅಖಂಡ ಜ್ಞಾನದ ಸಂಕೇತವೂ ಆಗಿದೆ ಮತ್ತು ಪ್ರಾಪಂಚಿಕ ವಿಷಯಾಸಕ್ತಿಗಳೆಡೆಗೆ ಆಕರ್ಷಣೆಯೂ ಆಗಿದೆ.  ಮಾನವನ ಅಜ್ಞಾನ ಅಥವಾ ಅಹಂಕಾರಗಳಿಗೆ ಒಳಪಟ್ಟು ವಿಷಯಾಸಕ್ತಿಗಳಲ್ಲಿ ಮುಳುಗಬಹುದೆನ್ನುವುದನ್ನು ಸಂಕೇತಿಸುತ್ತದೆ.  ಸರಸ್ವತಿ ದೇವಿ ಹಂಸ ಹಾಗೂ ನವಿಲುಗಳ ಮಧ್ಯದಲ್ಲಿ ವಿರಾಜಮಾನಳಾಗಿ ಈ ಎರಡರ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬೇಕೆಂಬುದನ್ನು ಸೂಚಿಸುತ್ತಾಳೆ.  ಸರಸ್ವತಿ ದೇವಿ ಕುಳಿತಿರುವ ತಾವರೆ ಹೂವು ನೀರಿನಿಂದ ಮೇಲಕ್ಕೆ ಚಾಚಿರುವುದು, ಭವಸಾಗರದಲ್ಲಿ ನಾವು ಅದರಂತೆ ತಲೆ ಎತ್ತಬೇಕು ಎಂದು ತಿಳಿಸುತ್ತದೆ.  ಅಂತರಂಗದ ಕದವನ್ನು ತೆರೆದು ಒಳಗಡೆಗೆ ನೋಟ ಹರಿಸಬೇಕೆಂಬುದರ ಸಂಕೇತವಾಗಿದೆ.  ಬಲಗೈಯಲ್ಲಿ ಜಪಮಾಲೆ, ವ್ಯಾಖ್ಯಾನ ಮುದ್ರೆ ಹಾಗೂ ಎಡಗೈಯಲ್ಲಿ ಪುಸ್ತಕ ಇರುವವಳು.  ಚಂದ್ರಮುಖಿ, ಚತುರ್ಭುಜೆ ಎಂದು ಸರಸ್ವತಿಯ ವರ್ಣನೆ ವಿಷ್ಣು ಧರ್ಮೋತ್ತರದಲ್ಲಿದೆ.  ಸರಸ್ವತಿ ದೇವಿಯು ಕೈಯಲ್ಲಿ ಹಿಡಿದಿರುವ ವೀಣೆ ನಾದದ ಸಂಕೇತ.  ನಮ್ಮೆಲ್ಲಾ ಚಿಂತನೆಗಳು ಮತ್ತು ಕೆಲಸಗಳು ಈ ಶಬ್ದ ಅಥವಾ ನಾದದಿಂದಲೇ ಉತ್ಪತ್ತಿಯಾಗುವುದು.  ಬ್ರಹ್ಮಾಂಡದಲ್ಲಿ ಹುದುಗಿರುವ ದೈವೀಕ ಸಂಗೀತದ ನಾದಕ್ಕೆ ನಮ್ಮ ಇಂದ್ರಿಯಗಳನ್ನು ಒಳಮುಖವಾಗಿ ತಿರುಗಿಸಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.  ಹೃದಯಕ್ಕೆ ಹತ್ತಿರವಾಗಿ ವೀಣೆಯ ಮೇಲೆ ನಾಟ್ಯವಾಡುವ ಎಡಗೈ ಬೆರಳುಗಳು ಸದಾ ಸದ್ವಿಷಯಗಳ ಚಿಂತನೆ ಮಾಡುತ್ತಾ, ನಿಷ್ಕಾಮ ಪ್ರೇಮವನ್ನು ಹಂಚಬೇಕೆಂಬುದನ್ನೂ,  ವೀಣೆಯ ಬುಡದಲ್ಲಿ ಆಧಾರವಾಗುವ ಬಲಗೈಯಿಂದ ಋಣಾತ್ಮಕ ಭಾವಗಳನ್ನು ಹಾಗೆಯೇ ಅದುಮಿ, ಮೆಟ್ಟಬೇಕೆಂದುದನ್ನೂ ಸೂಚಿಸುತ್ತದೆ.

ಸರಸ್ವತಿ ದೇವಿ ಶಾರದೆ ಎಂದೂ ಪೂಜಿಸಲ್ಪಡುತ್ತಾಳೆ.  ನವರಾತ್ರಿಯ ಏಳನೆಯ ದಿನ ಶಾರದಾ ಮಾತೆಯನ್ನು ವಿಶೇಷವಾಗಿ ಆರಾಧಿಸಿ ಬ್ರಹ್ಮಿಣಿ, ಅಗ್ನಿದಾತೆ, ವಿದ್ಯಾದಾತೆ ಶಾರದೆ, ಅಭಯದಾತೆ ಕಾಶ್ಮೀರ ಪುರವಾಸಿನಿಯೇ ನಮಗೆ ವಿದ್ಯಾ ಸಂಪತ್ತನ್ನು ನೀಡಿ ಉದ್ಧರಿಸೆಂದು  ಪ್ರಾರ್ಥಿಸಲಾಗುತ್ತದೆ.   ಮನೆಯಲ್ಲಿ ಇರುವ ವೀಣೆ, ತಂಬೂರಿ ಮುಂತಾದ ಸಂಗೀತ ವಾದ್ಯಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.  ಶ್ರೀ ಶಂಕರಾಚಾರ್ಯರು ತಮ್ಮ ಶಾರದಾಭುಜಂಗ ಪ್ರಯಾತಾಷ್ಟಕಂನಲ್ಲಿ ಶಾರದೆಯನ್ನು ಸ್ತುತಿಸಿದ್ದಾರೆ:
| ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ | ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಂ || - ವಕ್ಷ ಸ್ಥಳದಲ್ಲಿ ತುಂಬಿದ ಅಮೃತ ಕಳಶವನ್ನೇ ಹೊಂದಿರುವ, ಪ್ರಸಾದ ಪುಣ್ಯಗಳಿಗೆ ಅವಲಂಬಿತಳಾದ ಚಂದ್ರನಂತೆ ಅರಳಿದ ತುಟಿಯಿಂದ ಹಸನ್ಮುಖಳಾದ ನನ್ನ ಶಾರದಾಂಬೆಯನ್ನು ಭಜಿಸುತ್ತೇನೆ.
| ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನ ಮುದ್ರಾಂ | ಕಲಾಭಿರ್ವಿನಿದ್ರಾಂ ಕಲಾಪೈಃ  ಸುಭಾದ್ರಾಂ || - ದಯಾಮಯ ನೋಟವುಳ್ಳವಳು , ಕೈಯಲ್ಲಿ ಜ್ಞಾನಮುದ್ರೆ ಇರುವವಳು, ಕಲಾಸಕ್ತಳು, ಶಾಂತಳೂ, ಸೌಂದರ್ಯವತಿಯು, ಜಲಚರ ಪಕ್ಷಿ ಮೃಗ ಹಂಸವಾಹಿನಿಯೂ, ಮಹತ್ತಾದವಳೂ, ನವಗುಣ ಸಂಪನ್ನಳೂ, ಸದಾ ಸೌಮ್ಯರೂಪಳಾದ ಶಾರದೆ ತಾಯಿಯನ್ನು ಭಜಿಸುತ್ತೇನೆ.
| ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾಂಗೀಂ | ಭಜೇ ಮಾನಸಾಂಭೋಜ ಸುಭ್ರಾಂತ ಭೃಂಗೀಮ್ |
ನಿಜ ಸ್ತೋತ್ರ ಸಂಗೀತ್ಯ ನೃತ್ಯ ಪ್ರಭಾಂಗೀಂ | ಭಜೇ ಶಾರದಾಂಬಾಮಜಸ್ರಂ ಮದಂಬಾಮ್ || - ಪ್ರಜ್ವಲಿಸುವ ಅಗ್ನಿಯಂತೆ ಕಾಂತಿಯುತಳಾದ, ಜಗತ್ತಿಗೆ ಮೋಹನ ರೂಪಳಾದ ಮನಸ್ಸಿನ ಸರೋವರದಲ್ಲಿ ದುಂಬಿಯಂತೆ ವಿಹರಿಸುತ್ತಿರುವ, ಸ್ತೋತ್ರ ಸಂಗೀತ ನೃತ್ಯಗಳಿಗೆ ಒಡೆಯಳಾದ ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.

ಹಿಂದೂ ಸಂಸ್ಕೃತಿಯಲ್ಲಿ ಸರಸ್ವತೀದೇವಿಯು ವಾಣಿ, ಶಾರದೆ, ವೀಣಾಪಾಣಿ, ವಾಗ್ದೇವಿ, ಬ್ರಹ್ಮನರಾಣಿ ಎಂದು ಅನೇಕ ನಾಮಗಳಿಂದ ಪೂಜಿಸಲ್ಪಡುತ್ತಾಳೆ.



 ಚಿತ್ರಕೃಪೆ : ಅಂತರ್ಜಾಲ