Saturday, February 18, 2012

ಶಿವರಾತ್ರಿ....


ಮಹಾಶಿವರಾತ್ರಿ ಹಿಂದೂ ಸಂಸ್ಕೃತಿಯ ಎಲ್ಲಾ ಜನಾಂಗದವರಿಗೂ ಅತ್ಯಂತ ಪವಿತ್ರವಾದ ಹಬ್ಬ ಮತ್ತು ಶಿವಭಕ್ತರಿಗೆ ಬಹು ಪ್ರಿಯವಾದದ್ದು. ಶಿವನು ಮನೋನಿಯಾಮಕನಾದ್ದರಿಂದ ಈ ಶಿವರಾತ್ರಿ ಸಾಧಕರಿಗೆ ಕೂಡ ಮುಖ್ಯವಾದ ದಿನ. "ಶಿವ"ನೆಂದರೆ ಮಂಗಳವೆಂದೇ ಅರ್ಥ. ಶಿವ ಧ್ಯಾನ ಮಾಡುವವರ ಮನಸ್ಸನ್ನು ನಿಯಂತ್ರಿಸುವವನು ಈಶ್ವರ. ರುದ್ರ, ವಾಮದೇವ, ಶಂಕರ, ಉಮಾಮಹೇಶ್ವರ, ಚದುರಗಹಾರ, ಮೃಗಧರ, ಪಶುಪತಿ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಶಿವನದು ಅತ್ಯಂತ ಉನ್ನತವಾದ ಭಾವವು ಮತ್ತು ಎಲ್ಲಾ ಕಾಮನೆಗಳನ್ನೂ ತ್ಯಜಿಸಿದವನು ಶಿವನು. ಉಪನಿಷತ್ತಿನಲ್ಲಿ "ಶರೀರಪುರುಷ" ಎಂದು ಕರೆಯಲ್ಪಡುವ ಶಿವನಿಗೆ ನಮ್ಮ ಶರೀರವೇ ಬಟ್ಟೆ. ಶರೀರ ಬಿದ್ದು ಹೋದಾಗ ಅವನು ದಿಗಂಬರ. ಮುಟ್ಟಿದರೆ ಕಣ್ಣೀರು ಬರಿಸುವುದು ಪಂಚಭೂತಗಳಲ್ಲಿ ಒಂದಾದ ಅಗ್ನಿ ಮತ್ತು ಶಿವ ಅಗ್ನಿಯೂ ಆಗುತ್ತಾನೆ. ಇವನು ಅಹಂಕಾರಕ್ಕೆ ಅಧಿಪತಿಯಾದ ದೇವತೆ. "ರುದ್ರ" ಎಂಬ ಪದವನ್ನು ಬಿಡಿಸಿದಾಗ ರುಕ್+ದ್ರಾ ಎಂದಾಗುತ್ತದೆ. ರುಕ್ ಎಂದರೆ ಭವರೋಗ ಮತ್ತು ದ್ರಾ ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ. ಆದ್ದರಿಂದಲೇ ತನಗೆ ಶರಣಾಗಿ ಬಂದವರನ್ನು ಭವ ಸಾಗರದ ಬಂಧನಗಳಿಂದ ಬಿಡಿಸುವವನು ಶಿವನು, ಮೋಕ್ಷದ ಮಾರ್ಗ ತೋರಿಸುವವನು ಎಂದಿದ್ದಾರೆ. ಇಂತಹ ಶಿವನನ್ನು ಭಕ್ತಿಯಿಂದ, ಶ್ರದ್ಧೆಯಿಂದ ಪೂಜಿಸುವ, ಆರಾಧಿಸುವ ದಿನವೇ ಶಿವರಾತ್ರಿ. ಶಿವರಾತ್ರಿ ಎಂದರೆ, ಉಪವಾಸ, ಜಾಗರಣೆಯ ಆಚರಣೆ. "ಉಪ" ಎಂದರೆ ಸಮೀಪದಲ್ಲಿ - ಭಗ ವಂತನ ಸನಿಹದಲ್ಲಿ ವಾಸಿಸುವುದು ಮತ್ತು "ಜಾಗರಣೆ" ಎಂದರೆ ಜಾಗೃತಾವಸ್ಥೆ. ಆಹಾರ ಸೇವಿಸ ದೇ ಇರುವುದೇ ಉಪವಾಸವೆಂದಲ್ಲ, ಹಾಗಾದರೆ ಅದು ಬರಿಯ ಭೌತಿಕ ದೇಹಕ್ಕೆ ಉಪವಾಸವಾದಂತೆ . ಇಂದ್ರಿಯಗಳ ನಿಗ್ರಹ ಮಾಡಿ, ಶಿವನ ಧ್ಯಾನ ಮಾಡುತ್ತಾ, ಮನಸ್ಸನ್ನು ಶಿವತತ್ವದಲ್ಲಿ ಲೀನಗೊಳಿಸುವುದೇ ಉಪವಾಸ. ಅಜ್ಞಾನದ ಕತ್ತಲಲ್ಲಿ ನಿದ್ರಿಸದೆ ಶಿವನ ಧ್ಯಾನವನ್ನು ಮಾಡುತ್ತಾ ಜ್ಞಾನದ ಬೆಳಕಿನೆಡೆಗೆ ಹೆಜ್ಜೆ ಹಾಕು ಎಂಬುದೇ ಜಾಗರಣೆ ಯ ತತ್ವ. ಜಾಗರಣೆ ಎಂದರೆ ಜ್ಞಾನ ದೃಷ್ಟಿಯ ಯಾಚನೆ. ಅಂತ್ಯವಿಲ್ಲದ ಹುಟ್ಟು-ಸಾವುಗಳ ನಡುವೆ ಜರ್ಝರಿತನಾಗಿರುವ ನನಗೆ ಜ್ಞಾನದೃಷ್ಟಿಯನ್ನು ಕೊಟ್ಟು ಉದ್ಧರಿಸು ಎಂಬ ಯಾಚನೆ. ಭಕ್ ತಿಯಿಂದ, ಶ್ರದ್ಧೆಯಿಂದ ನಮ್ಮನ್ನೇ ನಾವು ಶಿವನಿಗೆ ಅರ್ಪಿಸಿ ಕೊಳ್ಳುವ ಒಂದು ಪವಿತ್ರವಾದ ದಿವಸ ಶಿವರಾತ್ರಿ.

ಶ್ರೀ ಶಂಕರರು ಶಿವ ಪಂಚಾಕ್ಷರಿ ಸ್ತೋತ್ರದಲ್ಲಿ ಬೀಜಾಕ್ಷರಗಳಾದ ನಮಃ ಶಿವಾಯವನ್ನು ಸುಂದರವಾಗಿ ಒಂದೊಂದು ಅಕ್ಷರಕ್ಕೆ ಒಂದೊಂದು ವಿವರಣೆಯನ್ನು ಕೊಟ್ಟು ರುದ್ರದೇವನ ವಿಶೇಷತೆಯನ್ನು ಸರಳವಾಗಿ ಚಿತ್ರಿಸಿ, ಸ್ತುತಿಸಿ, ನಮಿಸಿದ್ದಾರೆ :

ನಾಗೇಂದ್ರ ಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯs ಮಹೇಶ್ವರಾಯ |

ನಿತ್ಯಾಯ ಶುದ್ಧಾಯs ದಿಗಂಬರಾಯ

ತಸ್ಮೈ ನಕಾರಾಯs ನಮಃ ಶಿವಾಯ ||

ನಾಗೇಂದ್ರನಾದ ವಾಸುಕಿಯನ್ನೇ ಕಂಠಭೂಷಣವಾಗಿ ಉಳ್ಳಂತಹ, ಮೂರು ನೇತ್ರಗಳುಳ್ಳ, ದೇಹವೆಲ್ಲಾ ಭಸ್ಮಧಾರಿಯಾಗಿರುವ, ಮಹೇಶನಾದ, ನಿತ್ಯನೂ, ಶುದ್ಧನೂ, ದಿಗಂಬರನೂ ಆದ ಪರಶಿವನನ್ನು ಪಂಚಾಕ್ಷರೀ ಮಂತ್ರದ ಮೊದಲ ಅಕ್ಷರ "" ಕಾರ ಶಿವನನ್ನು ನಮಿಸುತ್ತೇನೆ.

ಮಂದಾಕಿನೀ ಸಲಿಲ ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ ಮಹೇಶ್ವರಾಯ |

ಮಂದಾರ ಪುಷ್ಪ ಬಹುಪುಷ್ಪ ಸುಪೂಜಿತಾಯ

ತಸ್ಮೈ ಮಕಾರಾಯs ನಮಃ ಶಿವಾಯ ||

ಗಂಗಾನದಿಯಿಂದ ಅಭಿಷಿಂಚಿತವಾದ ಮತ್ತು ಚಂದನದಿಂದ ಲೇಪಿತವಾದ, ನಂದಿಯೇ ಮೊದಲಾದ ಗಣಗಳಿಂದ ಮಂದಾರ ಮೊದಲಾದ ಅನೇಕ ಪುಷ್ಪಗಳಿಂದ ಪೂಜಿಸಲ್ಪಡುವ "" ಕಾರ ಸ್ವರೂಪಿ ಮಹೇಶ್ವರನನ್ನು ನಮಿಸುತ್ತೇನೆ.

sಶಿವಾಯ ಗೌರೀವದನಾಬ್ಜ ಬೃಂದ

ಸೂರ್ಯಾಯ ದಕ್ಷಾಧ್ವರನಾಶಕಾಯ |

ಶ್ರೀ ನೀಲಕಂಠಾಯs ವೃಶಧ್ವಜಾಯ

ತಸ್ಮೈ ಶಿಕಾರಾಯs ನಮಃ ಶಿವಾಯ ||

ಶುಭಪ್ರದನಾದ, ಸೂರ್ಯೋದಯದಿಂದ ವಿಕಸಿಸುವ ಕಮಲದಂತೆ ಪಾರ್ವತಿಯ ಮುಖವನ್ನು ಹಸನ್ಮುಖವಾಗಿ ಮಾಡುವ, ದಕ್ಷನ ಯಜ್ಞ ನಾಶಕನಾದ ಶುಭಪ್ರದ ನೀಲಕಂಠನೇ, ವೃಷಭವನ್ನೇ ವಾಹನವಾಗಿ ಹೊಂದಿರುವ "ಶಿ"ಕಾರ ಸ್ವರೂಪಿ ಶಿವನಿಗೆ ನಮಿಸುತ್ತೇನೆ.

ವಾಸಿಷ್ಠಕುಂಭೋದ್ಭವ ಗೌತಮಾರ್ಯ -

ಮುನೀಂದ್ರ ದೇವಾರ್ಚಿತ ಶೇಖರಾಯ |

ಚಂದ್ರಾರ್ಕ ವೈಶ್ವಾನರಲೋಚನಾಯ

ತಸ್ಮೈ ವಕಾರಾಯs ನಮಃ ಶಿವಾಯ ||

ಸತ್ಪುರುಷರೂ, ಮುನಿಶ್ರೇಷ್ಠರೂ ಆದ ವಸಿಷ್ಠ, ಅಗಸ್ತ್ಯ ಗೌತಮಾದಿ ಸಕಲ ಮುನಿಸಮೂಹ, ದೇವಸಮೂಹದಿಂದ ಅರ್ಚಿಸಲ್ಪಡುವ ಸೂರ್ಯ, ಚಂದ್ರ, ಅಗ್ನಿಗಳನ್ನೇ ನೇತ್ರವಾಗಿ ಹೊಂದಿರುವ ""ಕಾರವೆಂಬ ಅಕ್ಷರದ ಮಹೇಶ್ವರನಿಗೆ ನಮಿಸುತ್ತೇನೆ.

sಯಜ್ಞಸ್ವರೂಪಾಯs ಜಟಾಧರಾಯ

sಪಿನಾಕಹಸ್ತಾಯs ಸನಾತನಾಯ |

ದಿವ್ಯಾಯ ದೇವಾಯs ದಿಗಂಬರಾಯ

ತಸ್ಮೈ ಯಕಾರಾಯs ನಮಃ ಶಿವಾಯ ||

ಯಜ್ಞ ಸ್ವರೂಪನೂ, ಜಟಾಧಾರಿಯೂ, ಪಿನಾಕವೆಂಬ ಧನುಸ್ಸನ್ನು ಹೊಂದಿರುವವನೂ, ಸನಾತನನೂ, ದಿವ್ಯನೂ, ದೇವನೂ, ದಿಗಂಬರನೂ ಆದ ""ಕಾರ ಸ್ವರೂಪಿಯಾದ ಮಹೇಶ್ವರನಿಗೆ ನಮಿಸುತ್ತೇನೆ, ವಂದನೆಗಳು.

ಹೀಗೆ ಶಿವ ಪಂಚಾಕ್ಷರಿ ಮಂತ್ರವನ್ನು ಸದಾ ಜಪಿಸುವಲ್ಲಿ ನಮ್ಮ ಅಂತರಂಗ ನಿರತವಾಗಿದ್ದರೆ, ಶಿವನ ಒಲುಮೆ ನಮ್ಮದಾಗುತ್ತದೆಂಬುದು ಸತ್ಯ. ಶಂಕರನು ದಯಾಮಯನು ತನ್ನ ಭಕ್ತರ ಯಾವ ಬೇಡಿಕೆಯನ್ನೂ ನಿರಾಕರಿಸದವನು ಎನ್ನುವ ನಂಬಿಕೆ ನಮಗಿದೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಶಿವನು ಅಭಿಷೇಕಪ್ರಿಯನು. ಶುದ್ದ ಭಕ್ತಿಯಿಂದ ಮಾಡುವ ಅಭಿಷೇಕವನ್ನು ಅತಿ ಕರುಣೆಯಿಂದ ಸ್ವೀಕರಿಸಿ, ಬೇಡಿದ ವರಗಳನ್ನು ಕೊಟ್ಟುಬಿಡುವ ಮನೋನಿಯಾಮಕನು. ಚಂಚಲತೆಗೆ ಒಳಗಾಗಿ ದಿಕ್ಕಿಲ್ಲದಂತೆ ವಿಷಯಾಸಕ್ತಿಗಳ ಸುತ್ತ ಅಲೆದಾಡುವ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸಿ, ದೃಷ್ಟಿಹಾಯಿಸಿದ ಕಡೆಯೆಲ್ಲಾ ಶಿವನ ರೂಪ ಕಾಣುವಂತೆ ನಿನ್ನ ಪಾದದಲ್ಲಿ ನನ್ನ ಚಿತ್ತವನ್ನು ನೆಲೆಗೊಳಿಸು ಎಂದು ಪ್ರಾರ್ಥಿಸುವುದೇ ಶಿವರಾತ್ರಿಯ ವಿಶೇಷತೆ. ನಮಗೆ ತಲೆಯೆತ್ತಿ ನೋಡಿದಾಗೆಲ್ಲಾ ಆಕಾಶದಲ್ಲಿ ಕಾಣುವುದು ಹೊಗೆಯಂತಿರುವ ಮೋಡಗಳು. ಗಂಗೆಯನ್ನು ಶಿರದಲ್ಲಿ ಧರಿಸಲೋಸುಗ ಶಿವ ತನ್ನ ಜಟೆಯನ್ನು ಬಿಚ್ಚಿ ಒಗೆದಾಗ ಅದು ಹೀಗೆ ಹೊಗೆಯಂತೆ ಕಂಡಿತಂತೆ. ಆದ್ದರಿಂದಲೇ ಶಿವನ ನಾಮ ವ್ಯೋಮಕೇಶಿ / ಧೂರ್ಜಟಿ. ಹೀಗೆ ನಾವು ಕಾಣುವ ಪ್ರತಿ ದೃಶ್ಯದಲ್ಲೂ ನಮ್ಮ ಚಿತ್ತಕ್ಕೆ ಶಿವನ ನೆನಪು, ಬರುವಂತೆ ಮಾಡುತ್ತಾ ಸಂಸಾರವೆಂಬ ಸಾಗರದ ಬಂಧನ ಬಿಡಿಸು ಎಂದು ಪ್ರಾರ್ಥಿಸಬೇಕು. ಧೂರ್ಜಟಿ ಎಂದರೇ ವೈರಾಗ್ಯವೆಂಬ ಅರ್ಥವನ್ನು ನಾವು ತಿಳಿದರೆ ಸಾಕು ಆ ನಾಮ ಸ್ಮರಣೆಯೇ ನಮ್ಮ ಚಿತ್ತವನ್ನು ನಿಯಂತ್ರಿಸುತ್ತದೆ ನಮಗೆ ಸಾಗಬೇಕಾದ ಹಾದಿಯನ್ನು ತೋರಿಸುತ್ತದೆ.

“ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ” ಎಂಬ ಗೀತೆಯ ಸಂದೇಶದಂತೆ ಶಿವರಾತ್ರಿಯಂದು ಕವಿದಿರುವ ಗಾಡಾಂಧಕಾರದಲ್ಲಿ, ಅಜ್ಞಾನದ ಕತ್ತಲೆಯಲ್ಲಿ ಮುಳುಗಿ ಜೀವನ ಕತ್ತಲೆಯಾಗಿಸಿಕೊಳ್ಳಬೇಡ, ಅಜ್ಞಾನವನ್ನು ದೂರೀಕರಿಸು, ಜ್ಞಾನದ ಪ್ರಕಾಶದಲ್ಲಿ ಎಚ್ಚೆತ್ತುಕೋ, ಆತ್ಮ ಸಾಕ್ಷಾತ್ಕಾರ ಪಡೆದು ಜನ್ಮ ಸಾರ್ಥಕ ಪಡಿಸಿಕೋ ಎಂಬುದೇ ಜಾಗರಣೆಯ ತತ್ವ ಹಾಗೂ ಸರ್ವ ಭೋಗಗಳನ್ನು ಬಿಟ್ಟು ಪಾಪರಹಿತವಾದ ಜೀವನವನ್ನು ಅಳವಡಿಸಿಕೊಳ್ಳುವುದು ಉಪವಾಸದ ತತ್ವ.

“ಶಿವ” ತತ್ವದಿಂದ ನಾವು ಕಲಿಯಬೇಕಾದ ಮೊದಲ ಪಾಠವೆಂದರೆ ಸರಳತೆ. ಎಲ್ಲವನ್ನೂ ತ್ಯಜಿಸಿದವನು, ಯಾವ ಬಂಧನಕ್ಕೂ ಒಳಗಾಗದವನು ಶಿವ. ಶಿವತತ್ವವೇ ನಮ್ಮ ಅಂತರಂಗದ, ಆತ್ಮದ ಜಾಗೃತಿ ಅಥವಾ ತುರೀಯಾವಸ್ಥೆ, ಅನುಭವದಿಂದ ಮಾತ್ರವೇ ಅರ್ಥವಾಗಬಹುದಾದದ್ದು. ಶಿವನ ಆರಾಧನೆಯೆಂದರೆ, ಸಂಪೂರ್ಣ ಶರಣಾಗತಿ, ಭೌತಿಕ ದೇಹದ ಅರಿವಿನಿಂದ ಆಚೆಗೆ ಅರಿವುಮಾಡಿಕೊಳ್ಳುವುದು ಮತ್ತು ಶಿವತತ್ವದಲ್ಲಿ ಲೀನವಾಗುವುದು. ಶ್ರೀ ವಿಜಯದಾಸರು ತಮ್ಮ ಒಂದು ಕೀರ್ತನೆಯನ್ನು “ಲಿಂಗ.. ಎನ್ನಂತರಂಗ” ಎಂಬ ಮಾತಿನಿಂದಲೇ ಪ್ರಾರಂಭಿಸಿ ಶಿವನನ್ನು ಅಂತರಂಗದಲ್ಲಿ ನೆಲೆಸಿರುವ ದೇವನೆಂದು ಸೂಚಿಸಿದ್ದಾರೆ.

ಶ್ರೀ ಪುರಂದರ ದಾಸರ ಕೀರ್ತನೆಯಲ್ಲಿ ಶಿವರಾತ್ರಿಯಂದು ಶಿವನ ದರುಶನದಿಂದ ಪಡೆಯಬಹುದಾದ ಅನೇಕ ವಿಚಾರಗಳಿವೆ :

|| ಶಿವದರುಶನ ನಮಗಾಯಿತು ಕೇಳಿ | ಶಿವರಾತ್ರಿಯ ಜಾಗರಣೆ ||

|| ಪಾತಾಳಗಂಗೆಯ ಸ್ನಾನವ ಮಾಡಲು | ಪಾಪಗಳೆಲ್ಲ ಪರಿಹಾರವು |

|| ಜ್ಯೋತಿರ್ಲಿಂಗದ ಧ್ಯಾನವ ಮಾಡಲು | ದ್ಯೂತಗಳಿಲ್ಲ ಅನುದಿನವು ||

ಶಿವರಾತ್ರಿಯಂದು ಶಿವನ ದರುಶನಕ್ಕೆ ಪ್ರಾಮುಖ್ಯತೆ ಎಂಬುದು ಈ ಕೀರ್ತನೆಯಲ್ಲಿ ಪುರಂದರ ದಾಸರು ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ರಾತ್ರಿ ಜಾಗರಣೆ ಮಾಡುವುದರಿಂದ ಶಿವನ ದರುಶನವಾದಂತೆಯೇ ಎಂಬ ಅರ್ಥ. ಪ್ರತೀ ತಿಂಗಳಿನಲ್ಲೂ ಬರುವ ಶಿವರಾತ್ರಿಯಂದು ಜಾಗರಣೆ – ಉಪವಾಸ ಮಾಡಲು ಸರ್ವರಿಗೂ ಸಾಧ್ಯವಿಲ್ಲವಾದ್ದರಿಂದ, ವರ್ಷಕ್ಕೊಮ್ಮೆ ಬರುವ “ಮಹಾಶಿವರಾತ್ರಿ” ಹಬ್ಬದ ಆಚರಣೆ ಮಾಡುವುದರಿಂದ ಮಾಡದೇ ಬಿಟ್ಟ ಎಲ್ಲಾ ತಿಂಗಳುಗಳ ಶಿವರಾತ್ರಿಯನ್ನು ಆಚರಿಸಿದ ಪುಣ್ಯವನ್ನು ಗಳಿಸಿದಂತಾಗುವುದು.

ಪುರಂದರ ದಾಸರ ಇನ್ನೊಂದು ಕೀರ್ತನೆ “ಚಂದ್ರ ಚೂಡ ಶಿವಶಂಕರ ಪಾರ್ವತಿ ರಮಣಾ..ನಿನಗೆ ನಮೋ ನಮೋ” ಎನ್ನುತ್ತಾ “ನಂದಿ ವಾಹನಾ ಆನಂದದಿಂದ ಮೂಜಗದಿ ಮೆರೆವನು ನೀನೆ”.. ಎಂದು ಸ್ತುತಿಸಿದ್ದಾರೆ.

ಶ್ರೀ ಜಗನ್ನಾಥದಾಸರು “ನೀಲಲೋಹಿತಾ ಪಾಲಯ ಮಾಂ” ಎಂಬ ಕೀರ್ತನೆಯಲ್ಲಿ ಕೂಡ ಶಿವನನ್ನು ಒಲಿಸಿಕೊಳ್ಳುವುದು ಮುಕ್ತಿ ಮಾರ್ಗಕ್ಕೆ ಸೋಪಾನವೆಂಬುದನ್ನು ತಿಳಿಸಿದ್ದಾರೆ.

ಶ್ರೀ ಕನಕದಾಸರು ತಮ್ಮ “ಶಿವ ಶಿವ ಶಿವ ಎನ್ನಿರೋ.. ಮೂರ್ಜಗದವರೆಲ್ಲಾ” ಎಂಬ ಕೀರ್ತನೆಯಲ್ಲಿ ಶಿವ ನಾಮದ ಜಪ ಆಗಮ ಸಿದ್ಧಾಂತದ ಮೂಲದ ಜಪವೆಂದೂ, ನಮ್ಮೆಲ್ಲಾ ರೋಗಗಳ ಪರಿಹರಿಸುವ ಔಷಧಿಯೆಂದೂ ಹೇಳುತ್ತಾರೆ. ಮನುಜ ಜನ್ಮದಲ್ಲಿ ಹುಟ್ಟಿ ಮೈ ಮರೆತು ಇರಬಾರದೆಂದೂ, ತನು-ಮನ-ಪ್ರಾಣವನ್ನು ವ್ಯರ್ಥ ಮಾಡದೆ ಶಿವನಿಗೆ ಸಮರ್ಪಿಸಬೇಕೆಂದೂ ತಿಳಿಸುತ್ತಾರೆ. ಕೋಟಿ ಅಪರಾಧಗಳ ತ್ಯಜಿಸಬೇಕಾದರೆ, ಜವನ ಬಾಧೆಯನ್ನು ಜಯಿಸಬೇಕಾದರೆ, ಮೃತ್ಯುಂಜಯನ ಮೊರೆ ಹೋಗದೆ ಬೇರೆ ದಾರಿಯೇ ಇಲ್ಲವೆಂಬ ಸತ್ಯವನ್ನು ತುಂಬಾ ಸ್ಪಷ್ಟವಾಗಿ ಬಿಡಿಸಿ ಇಟ್ಟಿದ್ದಾರೆ.

ಸಂಗೀತ ಪಿತಮಹಾರಾದ ಶ್ರೀ ತ್ಯಾಗರಾಜರು ಕೂಡ ತಮ್ಮ “ಶಿವ ಶಿವ ಶಿವ ಎನ್ನರಾದ”.. ಎಂಬ ಕೃತಿಯಲ್ಲಿ ಭವದ ಬಾಧೆಗಳನ್ನೆಲ್ಲಾ ಕಳೆಯಲು ಶಿವನ ಮೊರೆ ಹೋಗುವುದೊಂದೇ ದಾರಿ ಎಂದಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ



Friday, December 16, 2011

ಮಾತು... ಮಾತು... ಮಾತು...

ಮಾನವನಿಗೆ ಮಾತು ಭಗವಂತನ ಅನುಗ್ರಹದಿಂದ ಬಂದಿದೆ. ಭೂಮಿಯ ಸಂಬಂಧದಿಂದಲೇ ಈ ಮಾತನಾಡುವ ಶಕ್ತಿ ಬಂದಿರಬೇಕೆಂದು ಕೂಡ ತಿಳಿಯಬಹುದು ಏಕೆಂದರೆ ಭೂಮಿಯಲ್ಲಿ ಅನೇಕ ವಿವಿಧ ಜಾತಿಯ ಪಶು, ಪಕ್ಷಿ, ಗಿಡ, ಮರ ಎಲ್ಲವೂ ಇರುವುದರಿಂದ ಅವುಗಳನ್ನು ಗುರುತಿಸಲು ಮಾನವನಿಗೆ ಒಂದೊಂದು ಹೆಸರು, ಒಂದು ಅಭಿವ್ಯಕ್ತಿ ಮಾಧ್ಯಮ ಬೇಕಾಗಿರುವುದರಿಂದ, ಅದು ನಮಗೆ ಭೂತಾಯಿಯ ಕೃಪೆಯಿಂದಲೇ ಲಭಿಸಿರುವುದರಿಂದ, ನಾವು ಮಾನವನಿಗೆ ಮಾತು ಕಲಿಸಿದವಳು "ಭೂಮಾತೆ" ಎಂದು ಹೇಳಬಹುದು ಅನ್ನಿಸುತ್ತದೆ.

"ಮಾತು" ಎಂದರೆ ನಮ್ಮ ಮನಸ್ಸಿನಲ್ಲಿ ಬರುವ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದು. ನಮ್ಮ ಭಾವನೆಗಳಿಗೆ ಒಂದು ರೂಪ, ಆಕಾರ, ಅರ್ಥ ಕೊಟ್ಟು ಇನ್ನೊಬ್ಬರಿಗೆ ತಲುಪಿಸುವುದು ಎಂದು ಕೂಡ ಹೇಳಬಹುದು. ಆದ್ದರಿಂದಲೇ ಮಾತು ಒಂದು ಅತ್ಯಂತ ಪ್ರಮುಖ ಹಾಗೂ ಮುಖ್ಯ ಮಾಧ್ಯಮವಾಗುತ್ತದೆ. ಆದರೆ ನಾವು ಎಷ್ಟು ಮಾತು ಆಡಬೇಕು ಎನ್ನುವುದನ್ನು ಮಾತ್ರ ನಾವೇ ನಿರ್ಧರಿಸಬೇಕು. ನಾವು ಪ್ರಪಂಚದ ಮಹಾಪುರುಷರ ಕಥೆಗಳನ್ನು ಅವಲೋಕಿಸುತ್ತಾ ಹೋದಾಗ ನಮಗೆ ಒಂದು ಮಹತ್ವದ ವಿಷಯ ತಿಳಿಯುವುದೇನೆಂದರೆ.. ಸಾಧಕರು ಎಂದಿಗೂ ಹೆಚ್ಚು ಮಾತನಾಡುವುದಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ, ಎಷ್ಟು ಬೇಕೋ ಅಷ್ಟೇ ಮಾತುಗಳನ್ನೇ ಆಡುತ್ತಾರೆ. ತುಂಬಾ ಚೊಕ್ಕವಾದ ಉದಾಹರಣೆಯನ್ನು ರಾಮಾಯಣದಿಂದ ಕೊಡಬಹುದು. ಶ್ರೀರಾಮಚಂದ್ರ ಎಂದಿಗೂ ಅವಶ್ಯಕತೆಗಿಂತ ಹೆಚ್ಚು ಮಾತನಾಡಲೇ ಇಲ್ಲ. ಮಹಾಪುರುಷರು ಯಾವಾಗಲೂ ಮಿತಭಾಷಿಗಳು, ಪ್ರಿಯಂವದರೂ ಆಗಿರುತ್ತಾರೆ.

ಮಾತು ಮಾನವನ ಜೀವನದ ಅತ್ಯಂತ ಮುಖ್ಯವಾದ ಒಂದು ಕಾರ್ಯ. ದೈನಂದಿನ ಜೀವನದಲ್ಲಿ ವ್ಯಕ್ತಿಗಳ ನಡುವೆ ಪರಸ್ಪರ ವಿಚಾರಗಳನ್ನು, ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಮಾತು ಅತ್ಯಂತ ಮುಖ್ಯವಾದ ಸಂಪರ್ಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿದಿನ ಮುಂಜಾನೆ ಆರಂಭದಿಂದಲೇ (ಕಣ್ಣು ಬಿಟ್ಟಾಗಿನಿಂದಲೇ) ನಾವು ಮಾತನಾಡಲು ಆರಂಭಿಸಿರುತ್ತೇವೆ. ಎಷ್ಟು ಮಾತಾಡುತ್ತೇವೆ, ಯಾರೆಲ್ಲರ ಜೊತೆ ಮಾತಾಡುತ್ತೇವೆ, ಯಾವ ವಿಷಯಗಳನ್ನು ಮಾತಾಡುತ್ತೇವೆ, ದಿನದ ೨೪ ಘಂಟೆಗಳಲ್ಲಿ ಮಾತಿಗಾಗಿ ನಾವು ಅದೆಷ್ಟು ಸಮಯ ಮೀಸಲಿಟ್ಟಿರುತ್ತೇವೆ ಎಂದೆಲ್ಲಾ ಒಂದು ದಿನವಾದರೂ, ಯೋಚಿಸುವುದೇ ಇಲ್ಲ. ಆದರೆ ನಮ್ಮ ದಿನ ನಿತ್ಯದ ಬದುಕಿನಲ್ಲಿ ಪರಸ್ಪರ ಒಂದಿಷ್ಟು ಭಾವಗಳಲ್ಲಿ ಏರಿಳಿತವಾದಾಗ ಮಾತ್ರ ಮಾತು ಸ್ವಲ್ಪ ಹಿಂದಡಿಯಿಟ್ಟು, ಮೌನ ಒಂದು ಹೆಜ್ಜೆ ಮುಂದೆ ಬಂದಿರುತ್ತದೆ. ಭಾವನೆಗಳ ಮಹಾಪೂರ ಒಮ್ಮೆಲೇ ಹರಿಯಲಾರಂಭಿಸಿದಾಗ, ಒಡಲಾಳದ ಮಾತುಗಳೆಲ್ಲಾ ಬೇಲಿ ಹಾರಿ ನಾಮುಂದು ತಾಮುಂದು ಎಂದು ಪೈಪೋಟಿಯಲ್ಲಿ ಬರಲು ತಯಾರಾಗಿ ನಿಂತು ಬಿಡುತ್ತವೆ. ಅದೇ ಸಮಯದಲ್ಲಿ ನಮ್ಮ ಒಳ ಅಂತರಂಗದ ಮನಸ್ಸು "ಮಾತು ಸಾಕು" ಎಂಬ ಸಂದೇಶವನ್ನು ತೀವ್ರವಾಗಿ ಕಳುಹಿಸ ಬೇಕು. ಅಂತರಂಗವೆಂಬ ಈ ಹೈ ಕಮ್ಯಾಂಡ್ ನ ನಿರ್ದೇಶನವನ್ನು ಮೀರುವ ಧೈರ್ಯ ನಮ್ಮ ಹೊರ ಮನಸ್ಸಿಗೆ ಇರದ ಕಾರಣ, ಹೊರಗೆ ಜಿಗಿಯಲು ಅಣಿಯಾಗಿ ಕುಳಿತಿದ್ದ ಎಲ್ಲಾ ಮಾತುಗಳೂ ಸಪ್ಪೆ ಮುಖದಿಂದ ವಾಪಸ್ಸು ಒಳಗೆ ಹೋಗಲೇ ಬೇಕಾಗುತ್ತದೆ. ಅಂತಹುದೇ ಒಂದು ಅದ್ಭುತ ಕ್ಷಣದಿಂದಲೇ ನನ್ನ ಮನಸ್ಸು "ಮಾತು" ಎಂಬ ಮಹಾ ಶಬ್ದದ ಸುತ್ತಲೂ ಸುತ್ತಾಡುತ್ತಾ ಅವಲೋಕನ ಆರಂಭಿಸಿದ್ದು. ನಿರಂತರವಾಗಿ ಯಾವುದಾದರೂ ಒಂದು ವಿಷಯದ ಬಗ್ಗೆ ನಿಲ್ದಾಣಗಳೇ ಇಲ್ಲದ ಬಸ್ಸಿನಂತೆ ಸದಾ ಬಡಬಡಿಸುತ್ತಿದ್ದ ಬಾಯಿ ಎಂದಾದರೂ ವಿಶ್ರಾಂತಿ ಬಯಸಬಹುದೇ ಎಂಬ ಚಿಂತನೆಗೆ ತೊಡಗಿಕೊಂಡಿತು. :-)


ನನ್ನ ಪರಿಧಿಯ ಸುತ್ತಲೂ ಒಂದೇ ಒಂದು ಸಾಸಿವೆ ಕಾಳಿಗೂ ಜಾಗವಿಲ್ಲದಂತೆ ಹಬ್ಬಿ, ಬೆಳೆದು, ನಳನಳಿಸುತ್ತಿದ್ದ ಮಾತಿನ ಗಿಡಗಳ ಗುಂಪಿನಲ್ಲಿ, ನನಗೆ ಒಂದೇ ಒಂದು ಹೆಜ್ಜೆ ಹಿಂದುಗಡೆಯೇ, ಶಬ್ದವೇ ಇಲ್ಲದಂತೆ, ಘನ ಗಂಭೀರವಾಗಿ "ಮೌನ"ವೂ ವಾಸಿಸುತ್ತಿದೆ ಎಂಬುದು ನನಗೆ ತಿಳಿದೇ ಇರಲಿಲ್ಲ. ಅಂತರಂಗದ ನಿರ್ದೇಶನವನ್ನು ಪಾಲಿಸಲು ಆರಂಭಿಸಿದ ದಿನದಿಂದ ನನಗೆ ಮೌನದ ಮುಖ ಈಗ ಸ್ಪಷ್ಟವಾಗಿ ಕಾಣತೊಡಗಿದೆ. ನನ್ನ ಸುತ್ತು ಮುತ್ತಲಿನ, ಪ್ರಕೃತಿ ಮಾತೆಯ ಅನೇಕ ಅದ್ಧೂರಿಗಳನ್ನೂ, ವೈಚಿತ್ರ್ಯಗಳನ್ನೂ, ಕಣ್ಣಿಗೆ ತುಂಬಿಕೊಳ್ಳುವ ಆಚರಣೆ ಜಾರಿಗೆ ಬಂದಿದೆ. ನಾನೇಕೆ ಮೌನವಾಗಿರಬೇಕು ಎಂದುಕೊಂಡಾಗ ನನಗೆ ಪ್ರಕೃತಿಯೇ ಸ್ಫೂರ್ತಿಯಾಗಿದ್ದಾಳೆ. ಮಾನವನ ಎಲ್ಲಾ ಅತ್ಯಾಚಾರಗಳನ್ನೂ ಸಹಿಸಿಕೊಂಡು, ಅದೇ ಸ್ನಿಗ್ದ ಮುಗುಳುನಗೆ ಬೀರುತ್ತಾ, ಮೌನವಾಗಿ ಹಸಿರು ಹಸಿರಾಗಿ ನಳನಳಿಸುತ್ತಿರುವ ತಾಯಿ ನನಗೆ ಚೇತೋಹಾರಿಕೆಯನ್ನು ಕೊಟ್ಟಿದ್ದಾಳೆ. ಅಷ್ಟಕ್ಕೂ ನಾವು ಅನವಶ್ಯಕವಾಗಿ ಏಕೆ ಮಾತಾಡಬೇಕು ಎಂಬುದನ್ನು ಮನಸ್ಸು ಈಗ ಯೋಚಿಸ ತೊಡಗಿದೆ. ಪ್ರಕೃತಿ ಮಾತೆ, ಸೂರ್ಯ, ಚಂದ್ರ ಎಲ್ಲರೂ ಸದ್ದಿಲ್ಲದೆ ತಮ್ಮ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರಲ್ಲವೇ? ಹೊರಗಿನ ಪ್ರಪಂಚಕ್ಕಿಂತ ನಾನು ನಮ್ಮೊಳಗೇ ನೋಡಿಕೊಂಡಾಗ, ನಮ್ಮ ದೇಹದ ಒಳಗೆ ಆಗುವ ಎಲ್ಲಾ ವ್ಯಾಪಾರವೂ ನಮ್ಮ ಅರಿವಿಗೇ ಬರದೇ ದಿನದ ೨೪ ಘಂಟೆಗಳೂ ಅನವರತ ನಡೆಯುತ್ತಿಲ್ಲವೇ..? ಅವರೇನಾದರೂ ತಮ್ಮ ಕೆಲಸವನ್ನು ಸುಮ್ಮನೆ ಅನವಶ್ಯಕವಾಗಿ ಮಾತಾಡುತ್ತಾ ಜಗತ್ತಿಗೆಲ್ಲಾ ಸಾರುತ್ತಿದ್ದಾರೆಯೇ? ಇದಕ್ಕಿಂತ ಒಳ್ಳೆಯ ಉದಾಹರಣೆ ನಮಗೆ ಬೇರೆಲ್ಲೂ ಸಿಕ್ಕಲಾರದು. ಪ್ರಕೃತಿಯ ಕೆಲಸದ ಮುಂದೆ ನಾವೆಂತಹ ಹುಲು ಮಾನವರು, ಯಾವುದಕ್ಕೂ ಸಮರಲ್ಲ ಎನ್ನುವುದನ್ನು ಡಿವಿಜಿಯವರು ತಮ್ಮ "ಕಗ್ಗ"ದಲ್ಲಿ ಹೀಗೆಂದಿದ್ದಾರೆ :


ಇಳೆಯಿಂದ ಮೊಳಕೆಯೊಡೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ

ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ

ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ||


ಹೀಗೆ ನಮಗೆ ಅತ್ಯಂತ ಅವಶ್ಯಕತೆ ಇರುವುದನ್ನು ಸದ್ದಿಲ್ಲದೆ ಕೊಡುತ್ತಾ, ಅದ್ಭುತವಾದ ಕಾರ್ಯಗಳನ್ನು ಮಾಡುತ್ತಿರುವವರು ಮಾತೇ ಆಡದೆ ಮೌನವಾಗಿಯೇ ಇಲ್ಲವೇ? ಮತ್ತೆ ನಾವೇಕೆ ಇಷ್ಟೊಂದು ಮಾತಾಡುತ್ತೇವೆ?
ನಾನೀಗ ಹೇಳ ಹೊರಟಿರುವುದು ಮಾತನ್ನೇ ಆಡಬಾರದೆಂದು ಅಲ್ಲ. ಅವಶ್ಯಕವಿದ್ದಷ್ಟು ಮಾತ್ರ ಮಾತು ಆಡಬೇಕು ಎಂಬ ಅಂಶವನ್ನು ಒತ್ತು ಕೊಟ್ಟು ಮನವರಿಕೆ ಮಾಡಿಸುವ/ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

"ಮಾತು" ನಮ್ಮ ಜೀವನದ ಅತಿ ಮುಖ್ಯವಾದ ಒಂದು ಆಯಾಮ. ನಾವು ಯಾವ ವಿಷಯವನ್ನೇ ಮಾತಾಡಲಿ ಆ ಮಾತಿನಲ್ಲಿ ಸತ್ವ, ಅರ್ಥ, ತೂಕ ಎಲ್ಲವೂ ಇರಬೇಕು. ಆರಿಸಿಕೊಳ್ಳುವ ಪ್ರತಿಯೊಂದು ಪದವೂ ಇನ್ನೊಬ್ಬರ ಮನಸ್ಸಿಗೆ ನೋವಾಗದ ಹಾಗೆ ಇರಬೇಕು. ಶಬ್ದ ಭಂಡಾರದ ಒಡೆಯ ಭಗವಂತ, ನಾವು ಅದನ್ನು ಎರವಲು ಪಡೆದು ಉಪಯೋಗಿಸುತ್ತಿದ್ದೇವೆಂಬ ಒಂದೇ ಒಂದು ಚಿಕ್ಕ ಅಂಶ ನಮ್ಮ ಮಸ್ತಿಶ್ಕದಲ್ಲಿ ಕುಳಿತರೆ ಸಾಕು, ನಮ್ಮ ನಾಲಿಗೆಗೆ ತಾನಾಗೇ ನಿಯಂತ್ರಣ ಬರುತ್ತದೆ. ನಮ್ಮ ಹಿಂದಿನವರೂ ಕೂಡ ಈ ಬೋಧನೆಯನ್ನು ನೂರಾರು ತರದಲ್ಲಿ ನಮಗೆ ತಿಳಿಸಿ ಹೇಳಿದ್ದಾರೆ. ಆದರೆ ನಾವು ಮಾತು ಶುರು ಮಾಡಿಬಿಟ್ಟೆವೆಂದರೆ ಸಾಕು ಅದು ಲಂಗು ಲಗಾಮು ಇಲ್ಲದೆ ಓಡುತ್ತಲೇ ಇರುತ್ತದೆ. "ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು" ಎನ್ನುವುದು ಒಂದು ನಾಣ್ಣುಡಿ. ಅದರ ಅರ್ಥವನ್ನು ನಾವು ಮಾಡಿಕೊಂಡರೆ, ಮಾತು ನಮ್ಮ ನಾಲಿಗೆಯನ್ನು ಸ್ಪ್ರಿಂಗ್ ಬೋರ್ಡ್ ಮಾಡಿಕೊಂಡು ಹೊರಗೆ ಧುಮುಕುವ ಮೊದಲು ಈ ಮಾತು ಆಡುವ ಅವಶ್ಯಕತೆ ಇದೆಯೇ ಎಂದೊಮ್ಮೆ ಆಲೋಚಿಸಿದರೆ ಮೇಲೆ ಹೇಳಿದ ನಾಣ್ಣುಡಿಯಂತೆ, ಹತ್ತು ಮಾತುಗಳ ಬದಲು ಒಂದೇ ಒಂದು ಮುತ್ತಿನಂತಹ ಮಾತು ಹೊರಬರಬಹುದು. ಅಲ್ಲಿಗೆ ನಾವು ೯ ಅನವಶ್ಯಕ ಮಾತುಗಳನ್ನು ಉಳಿಸಿದಂತಾಗುತ್ತದೆ.


ಸತ್ವಯುತವಾಗಿ, ಪ್ರಿಯವಾಗಿ ಮಾತನಾಡುವುದೂ ಕೂಡ ಒಂದು ಕಲೆ. ಪ್ರಿಯಂವದರಾಗುವುದು ಅಷ್ಟೇನೂ ಕಠಿಣವಲ್ಲದ ಕಾರ್ಯ. ಮನಸ್ಸೆಂಬ ಒಂದು ಬೃಹತ್ ಕಾರ್ಯಾಗಾರದಲ್ಲಿ ಸಾಕಷ್ಟು ಕೋಶಗಳಿವೆ. ಈ ಕೋಶಗಳಲ್ಲಿ ನಾವೇ ಜನ್ಮದಾರಾಭ್ಯ ತುಂಬಿಸಿಕೊಳ್ಳುತ್ತಾ ಬಂದಿರುವ ವೈವಿಧ್ಯ, ಅಸಂಖ್ಯಾತ ಕಡತಗಳಿವೆ. ಸಂದರ್ಭೋಚಿತವಾಗಿ, ಸನ್ನಿವೇಶದ ಕಳೆಕಟ್ಟುವಂತೆ ಮಧುರವಾದ ಮಾತುಗಳಾಡುವುದೂ ಕೂಡ ತುಂಬಾ ಮುಖ್ಯ.

ನಾವು ಆಡುವ ಮಾತುಗಳು ಹೆಚ್ಚು ಪರಿಣಾಮಕಾರಿಯಾಗುವುದು ನಮ್ಮ ಧ್ವನಿಯ ಏರಿಳಿತಗಳಿಂದ. ಆಡುವ ಮಾತುಗಳು ಬರೀ ಆಡಂಬರವಾಗಿರದೆ, ಅರ್ಥಪೂರ್ಣವಾಗಿರಬೇಕು. ನಮ್ಮ ಮಾತಿನ ಮೇಲಿನ ನಿಯಂತ್ರಣ ನಮ್ಮ ಮನಸ್ಸಿನ ಭಾವನೆಗಳೊಂದಿಗೆ ಜೋಡಿಸಲ್ಪಟ್ಟಿದೆ. ಮನಸ್ಸು ಪರಿಶುದ್ಧವಾಗಿ, ಭಾವ ಸಂಯಮತೆ ಇದ್ದಾಗ, ಮಾತುಗಳೂ ಕೂಡ ಮಧುರವಾಗಿ, ಧ್ವನಿಯ ಏರಿಳಿತಗಳು ಸುಗಮವಾಗಿ ಸಂಗೀತದಂತೆ ಕೇಳಿಸುತ್ತದೆ. ಆದರೆ ನಮ್ಮ ಭಾವ ಮಲಿನವಾಗಿದ್ದಾಗ, ಅಂದರೆ ಕೋಪ, ಉದ್ರೇಕದಿಂದ ಆವರಿಸಿಕೊಂಡಿದ್ದಾಗ, ಮಾತುಗಳೂ ಕೂಡ ಅರ್ಥಪೂರ್ಣವಾಗಿರದೆ, ಧ್ವನಿಯ ಏರಿಳಿತವೂ ಕೂಡ ಕರ್ಕಶವಾಗಿರುತ್ತದೆ.

ನಮ್ಮ ಪೂರ್ವಿಕರು ಮಾತನ್ನಾಡುವ ಕಲೆಯನ್ನು ರೂಡಿಸಿಕೊಳ್ಳಬೇಕೆಂದೂ, ಮಾತು ಅದೆಷ್ಟು ಪ್ರಮುಖವಾದದ್ದು ಎಂಬುದನ್ನೂ ನೀತಿಶತಕಗಳ ಮೂಲಕವೂ, ಶರಣರ ವಚನಗಳ ಮೂಲಕವೂ ತಿಳಿಸಿರುತ್ತಾರೆ. ಭತ್ರೃಹರಿಯ ಶತಕ "ಕೇಯೂರಾ ವಿಭೂಷಯಂತಿ ಪುರುಷಂ ಹಾರಾ ಚಂದ್ರೋಜ್ವಲಾ:" .. ಎಂಬುದರಲ್ಲಿ ಮೈ ತುಂಬಾ ತೊಟ್ಟ ಆಭರಣಗಳೂ, ಸ್ನಾನವೂ, ಸುಗಂಧ ದ್ರವ್ಯ ಲೇಪನವೂ ಯಾವುದೂ ನೀನಾಡುವ ನಲ್ನುಡಿಯ ನಾಲಿಗೆಗೆ ಸಮವಲ್ಲ, ಮಾತಿನೊಡವೆಯ ಮುಂದೆ ಬೇರೆಲ್ಲಾ ಒಡವೆಗಳೂ ಕುಂದುವುವು ಎಂದಿದ್ದಾರೆ. ಚಾಣಕ್ಯ ಪಂಡಿತನ ಚಾಣಕ್ಯ ನೀತಿದರ್ಪಣದಲ್ಲಿ "ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ: | ತಸ್ಮಾತ್ ತದೇವ ವಕ್ರವ್ಯಂ ವಚನೇ ಕಾ ದರಿದ್ರತಾ?" ಅಂದರೆ ಒಳ್ಳೆಯ ಮಾತುಗಳನ್ನು ಕೇಳಿದಾಗ ಎಲ್ಲರೂ ಸಂತಸಪಡುವರಾದ್ದರಿಂದ ಒಳ್ಳೆಯದನ್ನೇ ಮಾತನಾಡು ಎಂದಿದ್ದಾರೆ. ಯಾರು ಮಾತು, ಮನಸ್ಸು, ದೇಹದಲ್ಲಿ ಶುದ್ಧರಾಗಿರುತ್ತಾರೋ ಅವರು ಸಜ್ಜನರು ಅವರ ಸಂಗವ ಮಾಡಬೇಕು ಎಂದು ಸರ್ವಜ್ಞ ಹೇಳಿದ್ದಾರೆ. ನಮ್ಮ ದಾಸ ಪರಂಪರೆಯಲ್ಲೂ ಹೀಗೆ ಅನೇಕ ಉದಾಹರಣೆಗಳಿವೆ. "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ..." ಎಂಬ ಪುರಂದರ ದಾಸರ ಪದದಲ್ಲಿ ಅನವಶ್ಯಕ ಮಾತುಗಳನ್ನು ಆಡದೆ ಹರಿಯ ಸ್ಮರಣೆ ಮಾಡುತ್ತಾ ಸದ್ಗತಿ ಪಡೆಯಬೇಕೆಂದು ಹೇಳುತ್ತಾ ಮಾತಿನ ಮಹತ್ವವನ್ನು ಸಾರಿದ್ದಾರೆ.

{ಭರ್ತೃಹರಿ ಶತಕ ಮತ್ತು ಚಾಣಕ್ಯ ನೀತಿದರ್ಪಣ ವಿವರಣೆ - ಶ್ರೀ ಹಂಸಾನಂದಿ ಅವರ "ಹಂಸನಾದ" ಪುಸ್ತಕದ ಸಹಾಯದಿಂದ. ಅವರಿಗೆ ಧನ್ಯವಾದಗಳು ತಿಳಿಸುತ್ತಾ... :-) }

Sunday, October 2, 2011

ಸಂಗೀತದಲ್ಲಿ ದೇವಿಯ ಆರಾಧನೆ..


ಜಗನ್ಮಾತೆಯು ಸಚ್ಚಿದಾನಂದ ರೂಪಿಣಿಯು, ಶುದ್ಧ ಚೈತನ್ಯರೂಪಳು ಮತ್ತು ಪರಾಶಕ್ತಿಯು. ಪರಾಶಕ್ತಿಯಾದ ಜಗನ್ಮಾತೆಯ ಚರಣಗಳಲ್ಲಿ ಶರಣಾದರೆ, ಆಶ್ರಯ ಬಯಸಿದರೆ, ದೇವಿಯು ತಾಯಿಯಂತೆ ಕರುಣೆಯಿಂದ ನಮ್ಮನ್ನು ಕಾಪಾಡುತ್ತಾಳೆ. ಮಾತೆಯು ಭುಕ್ತಿ-ಮುಕ್ತಿಗಳೆರಡೂ ಕೊಡುವವಳು. ಆಕೆ ಅತಿ ಸೌಂದರ್ಯವತಿ, ಮಹಾ ಲಾವಣ್ಯವತಿ, ಮಹಾತ್ರಿಪುರಸುಂದರಿ, ಶ್ರೀ ಲಲಿತಾಂಬಿಕೆ. ತಾಯಿಯ ಅತಿಶಯ ಸೌಂದರ್ಯವನ್ನು ಶ್ರೀ ಶಂಕರರು ತಮ್ಮ ಸೌಂದರ್ಯಲಹರಿಯಲ್ಲಿ ಸುಂದರವಾಗಿ ವಿವರಿಸಿದ್ದಾರೆ. ಶ್ರೀ ಮಹಾತ್ರಿಪುರಸುಂದರಿ ದೇವಿಯ ಸಗುಣರೂಪ, ನಿಷ್ಕಲರೂಪ, ಕುಂಡಲಿನಿ ಶಕ್ತಿರೂಪ, ಮಂತ್ರರೂಪ, ಯಂತ್ರರೂಪ, ಹೀಗೇ ಅತಿ ಸೂಕ್ಷ್ಮ ವಿಷಯಗಳನ್ನು ಮನೋಹರವಾಗಿ, ಮಧುರವಾಗಿ, ಮನಸ್ಸಿಗೆ ಉಲ್ಲಾಸವಾಗುವಂತೆ ವಿವರಿಸುತ್ತಾ ಹೋಗುತ್ತಾರೆ. ಮನಸ್ಸಿಗೆ ಆನಂದವಾಗುವಂತೆ, ಅನರ್ಘ್ಯ ಮುತ್ತುಗಳನ್ನು ಪೋಣಿಸಿರುವಂತೆ ಇರುವ ಸೌಂದರ್ಯಲಹರಿ ಸ್ತೋತ್ರದ ಮೊದಲ ಭಾಗವನ್ನುಆನಂದಲಹರಿಎಂದೇ ಕರೆಯುತ್ತಾರೆ. ಸೌಂದರ್ಯಲಹರಿಯನ್ನು ಶ್ರೀ ಶಂಕರರು.. ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭುವಿತುಂ | ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ || ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚ್ಯಾದಿಭಿರಪಿ | ಪ್ರಣಂತುಂ ಸ್ತೋತುಂ ವಾ ಕಥಮಕೃತ ಪುಣ್ಯಃ ಪ್ರಭವತಿ || ಎನ್ನುತ್ತಾ ಪ್ರಾರಂಭಿಸುತ್ತಾರೆ. ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣರಾದ ತ್ರಿಮೂರ್ತಿಗಳಿಂದಲೂ ಸ್ತುತಿಸಲ್ಪಡುವವಳು ಜಗನ್ಮಾತೆ, ಶ್ರೀಮಾತೆ. ಲಲಿತಾ ಸಹಸ್ರನಾಮದಲ್ಲಿ ಕೂಡ ದೇವಿಯನ್ನು “ಚಿತಿ:, ತತ್ಪದಲಕ್ಷ್ಯಾರ್ಥಾ, ಚಿದೇಕರಸರೂಪಿಣೀ” ಎಂದು ದೇವಿಯನ್ನು ವರ್ಣಿಸುತ್ತಾರೆ. ಅಂತಹ ಆದಿಶಕ್ತಿಯನ್ನು ಆರಾಧಿಸುವ ಸಮಯವೇ ನಮ್ಮ ನವರಾತ್ರಿಯ ಆಚರಣೆ.

ಸಂಗೀತದಲ್ಲಿ ದೇವಿಯ ವರ್ಣನೆ ನಮಗೆ ಅನಾದಿ ಕಾಲದಿಂದಲೂ ಅತ್ಯಂತ ಸುಂದರ ಕೃತಿಗಳ ರಚನೆಗಳ ಮೂಲಕ ನಮ್ಮ ವಾಗ್ಗೇಯಕಾರರು ಮಾಡಿಕೊಟ್ಟಿದ್ದಾರೆ. ಕರ್ನಾಟಕ ಸಂಗೀತದ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬರಾದ ಶ್ರೀ ಶ್ಯಾಮಾ ಶಾಸ್ತ್ರಿಗಳ ರಚನೆ ಮಧ್ಯಮಾವತಿ ರಾಗದಲ್ಲಿ, ವಿಳಂಬ ಗತಿಯಲ್ಲಿರುವ ಪ್ರಚಲಿತ ಕೀರ್ತನೆ ಪಾಲಿಂಚು ಕಾಮಾಕ್ಷಿ ಪಾವನಿ ಪಾಪಶಮನಿ..” ಎನ್ನುತ್ತಾರೆ. ಇದು ನಾವು ತಾಯಿಯ ಪಾದಕ್ಕೆ ಶರಣಾಗಬೇಕೆಂಬ ಭಾವ. ತಮ್ಮ ಆತ್ಮ ನಿವೇದನೆಯನ್ನು ತಾಯಿಯ ಮುಂದೆ ಮಾಡುತ್ತಾ... ನಿನ್ನನ್ನು ವಿಧ ವಿಧವಾಗಿ ಬೇಡಿಕೊಳ್ಳುತ್ತಿದ್ದೇನೆ, ನನ್ನ ವ್ಯಥೆಯನ್ನೆಲ್ಲಾ ಕಳೆದು ನನ್ನನ್ನು ಕಾಪಾಡು..., ನೀನೇ ಭುವನಕ್ಕೆಲ್ಲಾ ಜನನಿ, ನನ್ನ ದುರಿತಗಳನ್ನೆಲ್ಲಾ ತೀರಿಸಿ, ವರಗಳ ಕೊಟ್ಟು ಕಾಪಾಡು.. ಮನೋರಥಗಳನ್ನೆಲ್ಲಾ ಕೊಡುವ ಕಾರುಣ್ಯ ಮೂರ್ತಿಯೇ.. ನಾನು ಏನೂ ಅರಿಯದ, ನಿನ್ನಲ್ಲೇ ಶರಣಾಗಿರುವ ನಿನ್ನ ಮಗು.. ಕಾಪಾಡು ತಾಯೇ ಎನ್ನುತ್ತಾರೆ. ತಮ್ಮ ಇನ್ನೊಂದು ಕೃತಿ “ಸರೋಜದಳ ನೇತ್ರಿ... ಹಿಮಗಿರಿ ಪುತ್ರಿ.. ನೀ ಪದಾಂಬುಜಮುನೆ.. ಸದಾ ನಮ್ಮಿನಾನಮ್ಮ ಶುಭ ಮಿಮ್ಮಾ.. ಶ್ರೀ ಮೀನಾಕ್ಷಮ್ಮಾ”... ಎಂಬುದರಲ್ಲಿ ನಿನ್ನ ಪಾದಗಳನ್ನೇ ಸದಾ ನಂಬಿಕೊಂಡಿದ್ದೇನೆ, ಮಂಗಳವ ಕರುಣಿಸು ಎನ್ನುತ್ತಾರೆ.

ನವರಾತ್ರಿಯ ಒಂಬತ್ತು ದಿನಗಳು ಲಕ್ಷ್ಮೀ, ಸರಸ್ವತಿ, ದುರ್ಗೆಯ ವಿವಿಧ ರೂಪಗಳನ್ನು ಬಹಳ ಭಕ್ತಿಯಿಂದ, ಶ್ರದ್ಧೆಯಿಂದ ಆರಾಧಿಸುತ್ತೇವೆ. ನವರಾತ್ರಿಯ ಸಂಭ್ರಮ, ಆಚರಣೆ ಯಾವ ಒಂದು ಪ್ರದೇಶಕ್ಕೂ ಸೀಮಿತವಾಗಿಲ್ಲ. ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ವಿಧದಲ್ಲಿ ಆಚರಣೆ ಜಾರಿಯಲ್ಲಿದೆ. ಪೂಜಿಸುವ ವಿಧಾನ ವಿವಿಧವಾಗಿದೆಯೇ ಹೊರತು ದೇವಿಯ ಆರಾಧನೆಯ ಹಿಂದಿರುವ ಭಾವ ಮಾತ್ರ ಎಲ್ಲ ಕಡೆಯೂ ಒಂದೇ.

ನವರಾತ್ರಿಯನ್ನು ನಾವು ಆಚರಿಸುವುದೇ ಜಗನ್ಮಾತೆಯ ಭಗವತ್ತತ್ವವನ್ನು ತಾಯಿಯಾಗಿ ಆರಾಧಿಸುವುದಕ್ಕಾಗಿ. ಪೃಥ್ವೀ ಸ್ವರೂಪಳಾಗಿರುವ ತಾಯಿಯನ್ನು ಧೀ, ಶ್ರೀ, ಕಾಂತಿ, ಕ್ಷಮಾ, ಶಾಂತಿ, ಶ್ರದ್ಧಾ, ಮೇಧಾ, ಧೃತಿ, ಸ್ಮೃತಿ, ಜಯಾ, ವಿಜಯಾ, ಧಾತ್ರಿ, ಲಜ್ಜಾ, ಕೀರ್ತಿ, ಸ್ಪ್ರುಹಾ, ದಯಾ ಎಂದು ಅನೇಕ ನಾಮಗಳಿಂದ ಪೂಜಿಸುತ್ತೇವೆ. ಅವಳೇ ಮೂಲ ಪ್ರಕೃತಿ, ಭಕ್ತ ಪರಾಧೀನೆ, ವಾತ್ವಲ್ಯಮಯಿ ಮತ್ತು ನಮ್ಮ ಶರೀರದಲ್ಲಿರುವ ಮೂಲಾಧಾರ ಸ್ಥಾನದಲ್ಲಿ ಕುಂಡಲಿನಿ ಶಕ್ತಿಯಾಗಿ ನಿದ್ರಿಸುತ್ತಿದ್ದಾಳೆ ಎಂಬ ನಂಬಿಕೆ. ತಾಯಿಯನ್ನು ತಲುಪಲು ನಾವು ಒಂದೊಂದೇ ಚಕ್ರವನ್ನು ಜಾಗೃತಿಗೊಳಿಸಿಕೊಳ್ಳುತ್ತಾ ಸಾಧನೆ ಮಾಡಬೇಕು. ಈ ಸಾಧನೆಯನ್ನು ನಾವು ಶ್ರೀ ಚಕ್ರದ ಆರಾಧನೆಯಿಂದ ಕೂಡ ಮಾಡಬಹುದಾಗಿದೆ. “ಶ್ರೀಚಕ್ರವು ಒಂಬತ್ತು ಆವರಣಗಳ ಪರಶಿವ ಮತ್ತು ಪರಾಶಕ್ತಿಯ ಐಕ್ಯರೂಪ ಮತ್ತು ಮಧ್ಯದಲ್ಲಿನ ಬಿಂದು ಕೋಣವೇ ತಾಯಿಯ ನೆಲೆ. ಅಲ್ಲಿಗೆ ತಲುಪಲು ನಾವು ಒಂದೊಂದೇ ಆವರಣಗಳಲ್ಲಿನ ತ್ರಿಕೋನಗಳನ್ನು ಮತ್ತು ಪದ್ಮಗಳನ್ನು ಪೂಜಿಸುತ್ತಾ ಹೋಗಬೇಕು. ಒಂದೊಂದು ಆವರಣಕ್ಕೂ ಒಬ್ಬೊಬ್ಬಳು ದೇವತೆ ಅಧಿದೇವತೆ ಇರುತ್ತಾಳೆ. ಪ್ರತೀ ಚಕ್ರಕ್ಕೂ ಚಕ್ರೇಶ್ವರಿ ಮತ್ತು ಪರಿವಾರ ದೇವತೆಗಳೂ ಇದ್ದಾರೆ. ಇವರೆಲ್ಲರ ಪೂಜೆ, ತರ್ಪಣ, ಭಕ್ತಿ, ಧ್ಯಾನ, ಸ್ವಸಮರ್ಪಣೆಗಳ ಮುಖಾಂತರ ತಾಯಿಯ ಸ್ಥಾನವಾದ ಬಿಂದು ತ್ರಿಕೋಣ ತಲುಪಬೇಕು. ನಮ್ಮ ಕರ್ನಾಟಕ ಸಂಗೀತದ ರತ್ನತ್ರಯರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ತಮ್ಮ ಕಮಲಾಂಬ ನವಾವರಣಕೃತಿಗಳಲ್ಲಿ ನಮ್ಮ ಆತ್ಮವನ್ನು ಬಿಂದು ಸ್ವರೂಪಿಣಿಯಲ್ಲಿ ಲೀನವಾಗಿಸುವ ಉದ್ದೇಶವನ್ನು ಸಫಲಗೊಳಿಸುವ ಕೆಲಸ ಮಾಡಿದ್ದಾರೆ. ಬ್ರಹ್ಮ ಜ್ಞಾನ ನಾದ ರೂಪದಲ್ಲಿ ಕೂಡ ಆಗಬಹುದು, ಸಂಗೀತವೂ ಸಾಕ್ಷಾತ್ಕಾರಕ್ಕೆ ಸೋಪಾನವೆಂದು ತೋರಿಸಿಕೊಟ್ಟಿದ್ದಾರೆ. ನವರಾತ್ರಿಯ ಒಂಬತ್ತು ದಿನಗಳನ್ನು ನಾವು ದೇವಿಯ ವಿವಿಧ ರೂಪಗಳ ಆರಾಧನೆಯನ್ನು ಈ ಶ್ರೇಷ್ಠ ಕೃತಿಗಳ ಮೂಲಕ ಕೂಡ ಮಾಡಬಹುದಾಗಿದೆ.

ನವಾವರಣ ಕೃತಿಗಳ ಗುಚ್ಚವಲ್ಲದೇ, ದೀಕ್ಷಿತರು ನೀಲೋತ್ಪಲಾಂಬಿಕಾಯಕೃತಿಗಳ ಗುಚ್ಛ ಕೂಡ ಮಾಡಿದ್ದಾರೆ. ಹಾಗೂ ಗುಚ್ಚಗಳ ಹೊರತಾಗಿಯೂ "ಶ್ರೀ ಸರಸ್ವತಿ – ಆರಭಿ ರಾಗದಲ್ಲಿ, ಪರ್ವತರಾಜಕುಮಾರಿ – ಶ್ರೀ ರಂಜನೀ ರಾಗದಲ್ಲೂ, ಹಿರಣ್ಮಯೀಂ ಲಕ್ಷ್ಮೀಂ" ಎಂಬಂತೆ ಅನೇಕ ದೇವಿ ಕೃತಿಗಳನ್ನೂ ರಚಿಸಿದ್ದಾರೆ.

ಸಂಗೀತ ಪಿತಾಮಹ ಶ್ರೀ ತ್ಯಾಗರಾಜರ ತ್ರಿಪುರ ಸುಂದರಿ ಪಂಚರತ್ನ ಕೃತಿಗಳಲ್ಲಿ ದೇವಿ ತ್ರಿಪುರ ಸುಂದರಿಯ ವರ್ಣನೆ ಉಪಮೆಗೆ ಸಾಟಿಯಿಲ್ಲದ್ದು. ಅವರ ಇತರ ಕೃತಿಗಳು.. "ಸುಂದರಿ ನೀ ದಿವ್ಯ ರೂಪಮು (ಕಲ್ಯಾಣಿ), ಸುಂದರಿ ನಿನ್ನು ವರ್ಣಿಂಪ ಬ್ರಹ್ಮಾದಿ ಸುರುಲಕೈನ ತರಮಾ (ಆರಭಿ) ಸುಂದರಿ ನನ್ನಿಂದರಿಲೋ (ಬೇಗಡೆ)" ಬಹು ಜನಪ್ರಿಯ ದೇವಿ ಕೃತಿಗಳು.

ಕರ್ನಾಟಕ ಸಂಗೀತದ ರತ್ನ ತ್ರಯರಾದ ಶ್ರೀ ತ್ಯಾಗರಾಜರು, ಶ್ರೀ ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ರೀ ಶ್ಯಾಮಾಶಾಸ್ತ್ರಿಗಳ ಸಮಕಾಲೀನರೇ ಆದ ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಕೂಡ ತಮ್ಮ ಕೃತಿ ಗುಚ್ಛ ನವರಾತ್ರಿ ಕೃತಿಗಳಲ್ಲಿ ದೇವಿಯ ವಿವಿಧ ರೂಪಗಳನ್ನು ಆರಾಧಿಸಿದ್ದಾರೆ. ಮೈಸೂರು ವಾಸುದೇವಾಚಾರ್ಯರ "ಶೈಲಸುತೇ ಶಿವಸಹಿತೆ.. ದೇವಿ ಕಮಲಾಲಯೇ, ಶ್ರೀಹರಿ ವಲ್ಲಭೆ"... ಎಂಬ ಹಲವಾರು ಕೃತಿಗಳು ದೇವಿಯ ರೂಪಗಳ ವರ್ಣನೆಯನ್ನು ಮಾಡುತ್ತವೆ.

ಮೈಸೂರು ಸಂಸ್ಥಾನದ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಹರಿಕೇಶ ನಲ್ಲೂರ್ ಮುತ್ತಯ್ಯ ಭಾಗವತರು ಚಾಮುಂಡೇಶ್ವರಿಯ ಕುರಿತು ರಚಿಸಿದ ೧೦೮ ಅಷ್ಟೋತ್ತರ ಕೃತಿಗಳು ಬಹು ಉನ್ನತವಾದವು. ದೇವಿಯನ್ನು ೧೦೮ ನಾಮಗಳಿಂದ ಆರಾಧಿಸುವ ಈ ಕೃತಿಗಳು, ಅತ್ಯಂತ ಶ್ಲಾಘನೀಯವಾದದ್ದು. ಇದರಲ್ಲಿ ಕೆಲವು ಜನಪ್ರಿಯ ಕೃತಿಗಳೆಂದರೆ "ಸಂಪತ್ಪ್ರದೆ ಶ್ರೀ ಚಾಮುಂಡೇಶ್ವರಿ (ಕಲ್ಯಾಣಿ), ಭುವನೇಶ್ವರಿಯ ನೆನೆ ಮಾನಸವೇ (ಮೋಹನ ಕಲ್ಯಾಣಿ) ಮತ್ತು ದುರ್ಗಾದೇವಿ ದುರಿತ ನಿವಾರಿಣಿ (ನವರಸ ಕಲ್ಯಾಣಿ)"..

ಮೈಸೂರು ಸಂಸ್ಥಾನದ ಸಿಂಹಾಸನಾಧೀಶ್ವರ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಶ್ರೀ ವಿದ್ಯೆಯ ಉಪಾಸಕರು. ಆದ್ದರಿಂದಲೇ ಅವರು ಶ್ರೀ ವಿದ್ಯಾಎಂಬ ಅಂಕಿತದೊಂದಿಗೆ ತಮ್ಮ ಕೃತಿಗಳಲ್ಲಿ ಶ್ರೀ ವಿದ್ಯೆಯ ಉಪಾಸನೆ ಹಾಗೂ ಶ್ರೀ ಚಕ್ರದ ಆರಾಧನೆಯ ವಿವರಗಳನ್ನು ಕೊಟ್ಟಿದ್ದಾರೆ. ಅಪರೂಪದ ರಾಗಗಳಲ್ಲಿ ಕೃತಿಗಳನ್ನೂ ರಚಿಸಿದ್ದಾರೆ. “ಜಗನ್ಮೋಹಿನಿ” ಎಂದು ಪ್ರಾರಂಭ ವಾಗುವ ಕೃತಿಯನ್ನು ಜಗನ್ಮೋಹಿನಿ ರಾಗದಲ್ಲೇ ರಚಿಸಿದ್ದಾರೆ. ಅವರ ಒಂದು ಕೃತಿ ಮಾಂಡ್ ರಾಗದಲ್ಲಿ “ಬ್ರಹ್ಮಾಂಡ ವಲಯೇ ಮಾಯೆ, ಬ್ರಹ್ಮಾದಿ ವಂದಿತ ಶುಭಾಜಾಯೇ..” ಮತ್ತು ಮಿಶ್ರ ಝಂಪೆ ತಾಳದಲ್ಲಿ ಹಿಂದೋಳ ರಾಗದ “ಚಿಂತಯಾಮಿ ಜಗದಂಬಾ ಚಾಮುಂಡಾಂಬಾಂ.. ಚಿತ್ತ ರಂಜನ ದಿವ್ಯ ಕಾಂತೀ ಚಿತ್ಪ್ರಭಾಂ ” ತುಂಬಾ ವಿದ್ವತ್ಪೂರ್ಣ ಕೃತಿಗಳು. ಈ ಕೃತಿಯಲ್ಲಿ ಜಗದಂಬೆಯನ್ನು ಚಾಮುಂಡೇಶ್ವರಿ ಎಂದು ಕರೆಯುತ್ತಾ ಕೊನೆಗೆ ಲಲಿತೇ ಎನ್ನುತ್ತಾರೆ. ದನುಜ ಮದ ಭಂಜನಿಎಂದು ವರ್ಣಿಸುತ್ತಾ ಒಡೆಯರು ನವಧಾತುಗಳೇ ದನುಜರು ಮತ್ತು ಅವುಗಳನ್ನು ದಮನ ಮಾಡಬೇಕು, ದೇವಿ ಆ ಒಂಭತ್ತನ್ನು ಸಂಹಾರ ಮಾಡುವವಳು ಎಂದು ಸ್ತುತಿಸುತ್ತಾರೆ. ಆ ರೂಪಗಳು ಯಾವುವೆಂದರೆ :

) ಮಧು ಕೈಟಭರನ್ನು ಕೊಂದ ಕಾಳಿ

) ಚಂಡ ಮುಂಡರನ್ನು ಕೊಂದ ಚಾಮುಂಡಿ

) ಮಹಿಷಾಸುರನನ್ನು ಕೊಂದ ಮಹಿಷಾಸುರಮರ್ಧಿನಿ

) ರಕ್ತ ಬೀಜನನ್ನು ಕೊಂದ ಮಹಾಕಾಳಿ

) ಭಿಕ್ಷುಂಕರನ್ನು ಕೊಂದ ರಕ್ತದಂತಿ

) ಕ್ಷಾಮ ನಿವಾರಕಳಾದ ಶಾಕಾಂಬರಿ

) ದುರ್ಗನೆಂಬ ಅಸುರನನ್ನು ಕೊಂದ ದುರ್ಗೆ

) ಅರುಣನೆಂಬ ಅಸುರನನ್ನು ಕೊಂದ ಭ್ರಾಮರಿ (ಭ್ರಮರಾಂಬ)

) ಕಂಸನ ಮರಣದ ಸೂಚನೆಯಿತ್ತ ದುರ್ಗೆ

ಮತ್ತು ರೂಪಗಳನ್ನು ನವರಾತ್ರಿಯಲ್ಲಿ ರಾಜ್ಯದ ಸುಭಿಕ್ಷೆಗಾಗಿ ಸಂಕಲ್ಪ ಮಾಡಿ ಪೂಜಿಸುವುದು ವಾಡಿಕೆಯಾದ್ದರಿಂದ ಒಡೆಯರು ಚಿಂತಿಯಾಮಿ ಜಗದಂಬಾ ಕೃತಿಯಲ್ಲಿ “ದನುಜ ಮದ ಭಂಜನಿ , ಧನ ಧಾನ್ಯ ಸೌಭಾಗ್ಯದಾಯಿನಿ, ಧರ್ಮ ಸಂಸ್ಥಾಪಿನಿ” ಎಂದಿದ್ದಾರೆ.

ಕನ್ನಡ ರಾಗದಲ್ಲಿ ಮಾಡಿರುವ ಇನ್ನೊಂದು ಕೃತಿ “ಶ್ರೀ ಚಾಮುಂಡೇಶ್ವರಿ ದೇವಿ ತವ ಪಾದ ಭಕ್ತಿಂ ದೇಹಿ”... ಯಲ್ಲಿ ಚರಣದಲ್ಲಿ ಶರಣಾಗುವುದನ್ನು ಸುಲಲಿತವಾಗಿ ವಿವರಿಸಿದ್ದಾರೆ.

(ಆಧಾರ ಗ್ರಂಥ ಡಾ.ಸುಕನ್ಯಾ ಪ್ರಭಾಕರ್ ಅವರ ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ”)

ನವರಾತ್ರಿಯಲ್ಲಿ ನಾವು ದೇವಿ ಜಗನ್ಮಾತೆಯನ್ನು ದುರ್ಗೆಯ ನವರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿರಾತ್ರಿಯೆಂದು ಪೂಜಿಸುತ್ತೇವೆ. ದಶಮಿಯಂದು ಮಾತೇ ಮಹಿಷಾಸುರಮರ್ಧಿನಿಯಾಗಿ ಪೂಜಿಸಲ್ಪಡುತ್ತಾಳೆ.

ಅಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವನಿನೋದಿನಿ ನಂದನುತೇ |

ಗಿರಿವರ ವಿಂಧ್ಯ ಶಿರೋದಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣು ನುತೇ ||

ಭಗವತಿ ಹೇ ಶಿತಿಕಂಠ ಕುಟುಂಬಿನೀ ಭೂರಿ ಕುಟುಂಬಿನಿ ಭೂರಿಕೃತೇ |

ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ ||

ವಿಜಯದಶಮಿಯಂದು ದೇವಿ ಚಾಮುಂಡೇಶ್ವರಿಯ ರೂಪದಲ್ಲಿರುತ್ತಾಳೆ ಎಂದಾಗ ಶ್ರೀ ವಾಸುದೇವಾಚಾರ್ಯರ ಬಿಲಹರಿ ರಾಗದ, ಅತ್ಯಂತ ಜನಪ್ರಿಯ ಕೃತಿ “ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ.. ಕೃಪಾಕರಿ ಶಂಕರಿ ಶ್ರುತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರಮರ್ಧಿನಿ...” ನೆನಪಾಗದೆ ಇರದು. ತಲೆತಲಾಂತರದಿಂದಲೂ ಹಾಡುತ್ತಾ ಬಂದಿರುವ ಈ ಕೃತಿ ಇಂದಿಗೂ ಎಂದಿಗೂ ಅತಂತ ಪ್ರಸ್ತುತವಾಗಿದೆ. ಸಾಹಿತ್ಯಕ್ಕೆ ಪೂರಕವಾಗಿ ಮಾಡಿರುವ ಸ್ವರ ಜೋಡಣೆ ಈ ಕೃತಿಯಲ್ಲಿ ನಮ್ಮ ತನು ಮನ ಲೀನವಾಗುವಂತೆ ಮಾಡುತ್ತದೆ. ಉಲ್ಲಾಸಭರಿತವಾಗಿ ಮಾಡುತ್ತದೆ.

ದಾಸ ಸಾಹಿತ್ಯದಲ್ಲಿ ನಾವು ದೇವಿ ದುರ್ಗೆಯ ಆರಾಧನೆಯನ್ನು ಶ್ರೀ ವಿಜಯದಾಸರ ರಚನೆಯಾದಶ್ರೀ ದುರ್ಗಾ ಸುಳಾದಿಯಲ್ಲಿ ನೋಡಬಹುದು. "ದುರ್ಗಾ ದುರ್ಗಿಯೇ, ಮಹಾದುಷ್ಟಜನ ಸಂಹಾರಿ, ದುರ್ಗಾಂತರ್ಗತ ದುರ್ಗೆ, ದುರ್ಲಭ ಸುಲಭೆ, ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರು” ಎಂದು ಪ್ರಾರಂಭವಾಗುವ ಸುಳಾದಿ ಅತ್ಯಂತ ನಿರರ್ಗಳವಾಗಿ, ನೀರು ಹರಿದಂತೆ ಪ್ರಾಸ ಬದ್ಧವಾಗಿ, ಲಾಲಿತ್ಯದಿಂದ ಕೂಡಿ ಓದುವವರ ಮನಸ್ಸನ್ನು ಆಕರ್ಷಿಸುತ್ತದೆ. ತಾಯಿ ದುರ್ಗೆ ಶರಣು ಎಂದವರನ್ನು ಯಾವ ರೀತಿಯೆಲ್ಲಾ ಕಾಪಾಡುತ್ತಾಳೆಂದು ದಾಸರು ಸುಲಲಿತವಾಗಿ ಹೇಳುತ್ತಾ ಹೋಗುತ್ತಾರೆ. ಕೊನೆಗೆ ಶ್ರೀಪಾದಾರ್ಚನೆ ಮಾಡುವ ಶ್ರೀ ಭೂ ದುರ್ಗಾವರ್ಣತ್ರಯೇಶ್ರೀ ಹರಿನಾಮಒಂದೇ ನಮ್ಮ ಜಿಹ್ವಾಗ್ರದಲ್ಲಿ ನೆನೆವ ಔಪಾಸನ ಕೊಡು ನಮಗೆ ಎಂದು ಪ್ರಾರ್ಥಿಸುತ್ತಾರೆ.

ಶ್ರೀಗುರು ಗೋಪಾಲದಾಸರು ಕೂಡ ತಮ್ಮ “ಶ್ರೀದುರ್ಗಾದೇವಿಯ ಸ್ತೋತ್ರ”ಗಳಲ್ಲಿ “ದುರ್ಗಮಭಾವದಿಂದ ನಿರ್ಗಮ ಗೈಸು ಹೇ ಭಾರ್ಗವಿ.. ಎನ್ನುತ್ತಾ “ಸುನಿತಂಬೆ ಜಗದಂಬೆ ಶುಭಗುಣನಿಕುರುಂಬೆ”.. ಎಂಬ ವಿವಿಧ ನಾಮಗಳಿಂದ ದಯಮಾಡೆಂದು ಪ್ರಾರ್ಥಿಸುತ್ತಾರೆ. ಇನ್ನೊಂದು ಸ್ತೋತ್ರದಲ್ಲಿ ಶ್ರೀ ವಿಜಯದಾಸರು ಸುಳಾದಿಯಲ್ಲಿ ಹೇಳಿರುವಂತೆಯೇ ಇವರೂ “ಭರ್ಗಬ್ರಹ್ಮಾದ್ಯನಿಮಿಷವರ್ಗಸಂಸೇವಿತದೇವಿ, ಸ್ವರ್ಗಸರ್ವಾಭೀಷ್ಟ ಅಪವರ್ಗಪ್ರದಾತೇ, ದುರ್ಗಮ ಭವಾಬ್ಧಿಯಿಂದ ನಿರ್ಗಮ ಗೈಸು ನಂಬಿದೆ, ಭಾರ್ಗವಿ ಶ್ರೀದುರ್ಗೆ ಜಗತ್ ಸರ್ಗಾದಿಕರ್ತೆ” ಎಂದು ಹೇಳಿದ್ದಾರೆ. ಎಷ್ಟೊಂದು ಸಾಮ್ಯತೆ ಮತ್ತು ಆಪ್ತತೆ ಅನ್ನಿಸುತ್ತದೆ ನಮಗೆ. ಸಾಹಿತ್ಯವನ್ನೆಲ್ಲಾ ಓದುವಾಗ ಮನಸ್ಸು ತಾಯಿಯ ಚರಣದಲ್ಲಿ ಅರ್ಪಿತವಾಗಿಯೇ ಬಿಡುವುದು, ಭಾವ ಜಾಗೃತವಾಗಿಯೇ ಬಿಡುವುದು..

ಹೀಗೆ ಸಂಗೀತ ಪ್ರಪಂಚದಲ್ಲಿ ಜಗನ್ಮಾತೆ ವಿಧ ವಿಧವಾದ ರೂಪಗಳಲ್ಲಿ, ಸ್ತುತಿಸಲ್ಪಡುತ್ತಾಳೆ ಮತ್ತು ಆರಾಧಿಸಲ್ಪಡುತ್ತಾಳೆ.