Thursday, August 29, 2013

ಭೀಮಸೇನ



ಮಹಾಭಾರತದ ಪಾತ್ರಗಳು ನಮ್ಮ ಬದುಕಿಗೆ ತುಂಬಾ ಹತ್ತಿರವಾದವುಗಳು.  ಧನಾತ್ಮಕ ಗುಣಗಳ ವ್ಯಕ್ತಿತ್ವಕ್ಕೆ ಪಾಂಡವರ ಪಾತ್ರಗಳು ನಿದರ್ಶನಗಳಾದರೆ, ಋಣಾತ್ಮಕ ಭಾವಗಳಿಗೆ ಕೌರವರ ಪಾತ್ರಗಳು ನಿದರ್ಶನಗಳಾಗುತ್ತವೆ.  ಭಗವಂತನಾದ ಶ್ರೀಕೃಷ್ಣನ ವ್ಯಕ್ತಿತ್ವವು ಅತ್ಯಂತ ಉನ್ನತವಾದ ಭಾವವಾಗಿ, ನಮ್ಮ ಎಲ್ಲಾ ವಿಶ್ಲೇಷಣೆಯ ಪರಿಧಿಯನ್ನೂ ಮೀರಿ ಬೆಳೆಯುತ್ತದೆ.  ವಿಶೇಷ ಗುಣಗಳನ್ನೇ ಪ್ರಕಟಿಸುವ ಶ್ರೀಕೃಷ್ಣ ಶೈಶವಾವಸ್ಥೆಯಲ್ಲಿ ನಮ್ಮನ್ನು ಕಾಡುವ ಮುದ್ದು ಮಗುವಾಗಿ, ಅಂತಹ ಒಂದು ಮಗುವಿಗಾಗಿ ಜಗತ್ತಿನ ಎಲ್ಲಾ ತಾಯಂದಿರೂ ಹಂಬಲಿಸುವಂತೆ ಮಾಡುತ್ತಾನೆ.  ಬಾಲ್ಯದ ತುಂಟಾಟಗಳಲ್ಲಿ ತಾನು ನಕ್ಕು, ನಮ್ಮನ್ನು ನಗಿಸಿ, ಕಾಡಿಸಿ, ಪೀಡಿಸಿ, ಮುದ್ದುಗರೆಯುತ್ತಾನೆ.  ಬೆಳೆಯುತ್ತಾ ಹೋದಂತೆಲ್ಲಾ ತಾನು ಸಾಕ್ಷಾತ್ ಭಗವಂತನೇ ಎಂಬುದನ್ನು ನಿರೂಪಿಸುತ್ತಾನೆ.  ಪಾಂಡವರ ಜೊತೆಗೆ ಸದಾ ಇದ್ದು, ಅವರನ್ನು ಸಂರಕ್ಷಿಸುತ್ತಾನೆ.  ಪಾಂಡವರಲ್ಲಿ ಅತಿ ಹೆಚ್ಚಾದ ನಿಷ್ಠೆ ಮತ್ತು ಭಕ್ತಿಯನ್ನು ಕೃಷ್ಣನ ಬಗ್ಗೆ ಹೊಂದಿರುವವರು ಯಾರೆಂದು ಆಲೋಚಿಸಿದಾಗ, ಉಳಿದ ಎಲ್ಲರಿಗಿಂತ ಭೀಮಸೇನ ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾನೆ.  ತನ್ನ ಶೌರ್ಯ ಮತ್ತು ಬಲದಿಂದಲೇ ಹೆಚ್ಚು ಗುರುತಿಸಿಕೊಂಡಿದ್ದರೂ ಕೂಡ, ಭೀಮನಲ್ಲಿ  ಸಾಮಾನ್ಯವಾಗಿ ಗೋಚರಿಸದ ಹಲವಾರು ಅವ್ಯಕ್ತ ಗುಣಗಳು ಇದ್ದವೆಂಬುದು ಗುರುತಿಸಲ್ಪಟ್ಟಿದೆ.  ಇಡೀ ಮಹಾಭಾರತದ ಕಾಲದಲ್ಲಿ ಅತಿ ಕಡಿಮೆ ಮಾತನಾಡಿರುವ ವ್ಯಕ್ತಿಯೆಂದರೆ ಭೀಮಸೇನನೇ. 

ಪುರಾಣಗಳಿಂದ ನಮಗೆ ತಿಳಿಯುವುದೇನೆಂದರೆ ಭಗವಂತನು ಭೂಭಾರವನ್ನು ಹರಣ ಮಾಡುವುದಕ್ಕೋಸ್ಕರ ಭುವಿಗೆ ಅವತಾರ ರೂಪದಲ್ಲಿ ಇಳಿದು ಬರುತ್ತಾನೆ.  ಹಾಗೆ ಬರುವಾಗ ತಾನೊಬ್ಬನೇ ಬರುವುದಿಲ್ಲ, ತನ್ನ ಪರಿವಾರದ ಎಲ್ಲಾ ಸದಸ್ಯರೊಂದಿಗೇ ಪ್ರಕಟಗೊಳ್ಳುತ್ತಾನೆ.  ಪರಿವಾರದ ಅತಿ ಮುಖ್ಯ ಹಾಗೂ ಪ್ರಧಾನ ಸೇವಕನಾಗಿ ವಾಯು ದೇವನ ಅವತಾರವಾಗುತ್ತದೆ.  ಸದಾ ಸರ್ವದಾ ಎಲ್ಲಾ ಕಡೆಯೂ ಪಸರಿಸಿರುವ ವಾಯುದೇವನು ಭಗವಂತನಿಗೆ ಅತ್ಯಂತ ಪ್ರಿಯನಾದವನು.  ವಾಯುವೆಂದರೆ ’ಪರಿಸರ’ವೆಂದರ್ಥ.  ಶ್ರೀ ಜಗನ್ನಾಥದಾಸರು ತಮ್ಮ ಒಂದು ಕೃತಿಯಲ್ಲಿ "ಪರಿಸರ ನೀನಿರೆ ಹರಿತಾನಿರುವನು, ಇರದಿರೆ ತಾನಿರನು" ಎಂದಿದ್ದಾರೆ.   ದ್ವಾಪರಯುಗದಲ್ಲಿ ಭಗವಂತ ಶ್ರೀಕೃಷ್ಣನಾಗಿ ಅವತರಿಸಿದಾಗ, ವಾಯುದೇವನು ಭೀಮಸೇನನಾಗಿ ಬಂದ.  ಭಗವಂತನ ಭೂಭಾರಹರಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದು ವಾಯುದೇವನ ಅವತಾರವಾದ ಭೀಮಸೇನನೇ ಎಂಬುದು ಜರಾಸಂಧ,   ಕಿರ್ಮೀರ, ಬಕ, ಕೀಚಕ ಮುಂದಾದವರ ಹತ್ಯೆಯಿಂದ ನಮಗೆ ತಿಳಿಯಲ್ಪಡುತ್ತದೆ.  ಜರಾಸಂಧನ ವಧೆಯ ನಂತರ ಹನ್ನೊಂದು ಅಕ್ಷೋಹಿಣೀ ಸೈನ್ಯವನ್ನು ಒಟ್ಟು ಸೇರಿಸಿಕೊಂಡು ಜರಾಸಂಧನ ಕಾರ್ಯವನ್ನು ಮುಂದುವರೆಸುವ ಇಚ್ಛೆಯಿದ್ದವನು ದುರ್ಯೋಧನ.  ಅವನ ಮತ್ತು ಅವನ ೯೯ ಜನ ತಮ್ಮಂದಿರನ್ನೂ ವಧಿಸಿ ಧರ್ಮ ರಕ್ಷಣೆಯ ಕಾರ್ಯದಲ್ಲಿ ಭಗವಂತನ ಜೊತೆಗಿರುತ್ತಾನೆ.  ಹರಿ-ವಾಯು ಯಾವಾಗಲೂ ಜೋಡಿಯಾಗಿಯೇ ಇರುತ್ತಾರೆ.

ವಾಯುದೇವನ ಅವತಾರವಾದ ಭೀಮಸೇನ ಅತ್ಯಂತ ಬಲಶಾಲಿಯಾಗಿದ್ದು, ಯುದ್ಧದಲ್ಲಾಗಲೀ, ಅಸುರರ ಹತ್ಯೆಯಲ್ಲಾಗಲೀ, ಅವನಿಗೆ ಯಾರ ಸಹಾಯ, ಯಾವ ಆಯುಧ, ರಥ, ಆನೆ ಇತ್ಯಾದಿಗಳ್ಯಾವುದರ ಅವಶ್ಯಕತೆಯೂ ಇಲ್ಲದಿದ್ದರೂ ಕೂಡ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮ ಭೀಮಸೇನನಿಗೂ ಒಂದು ರಥ ಕೊಟ್ಟು, ತನ್ನ ಪ್ರೀತಿಯ ಪುತ್ರನಾದ ವಿಶೋಕನನ್ನು ಸಾರಥಿಯಾಗಿ ನೇಮಿಸಿರುತ್ತಾನೆ.  ಭೀಮಸೇನನನ್ನು ಕಂಡೊಡನೆ ಕೌರವರು ಆನೆಗಳನ್ನು ಮುಂದೆ ಕಳಿಸಿಬಿಟ್ಟು, ತಾವು ಹಿಂದುಳಿಯುತ್ತಿದ್ದರು.  ಭೀಮಸೇನ ರಥದಿಂದ ಕೆಳಗೆ ಧುಮುಕಿ ಆನೆಗಳೊಡನೆ ಸೆಣೆಸುತ್ತಿದ್ದ.  ಭೀಮಸೇನನ ಅಖಂಡ ಬಲದ ಮೇಲೆ ಅಭಿಮಾನವಿದ್ದರೂ ಕೂಡ ಶ್ರೀಕೃಷ್ಣ ಅವನಿಗೆ ರಥ ಮತ್ತು ಸಾರಥಿಯನ್ನು ನಿಯಮಿಸಿದ್ದನೆಂದರೆ, ಇದು ಭಗವಂತನಿಗೆ ವಾಯುದೇವನ ಮೇಲಿರುವ ಅಭಿಮಾನ ಮತ್ತು ಅಗಾಧ ನಂಬಿಕೆಯನ್ನು ಬಿಂಬಿಸುತ್ತದೆ.

ಪುರಾಣಗಳು ಭೀಮಸೇನನಲ್ಲಿದ್ದ ಹತ್ತು ಅಪೂರ್ವ ಗುಣಗಳನ್ನು ಹೀಗೆ ಉಲ್ಲೇಖಿಸಿವೆ :
ಭಕ್ತಿರ್ಜ್ಞಾನಂ ಸವೈರಾಗ್ಯಂ ಪ್ರಜ್ಞಾ ಮೇಧಾ ಧೃತಿಃ ಸ್ಥಿತಿಃ |
ಯೋಗಃ ಪ್ರಾಣೋ ಬಲಂ ಚೈವ ವೃಕೋದರ ಇತಿ ಸ್ಮೃತಃ ||
ಭಕ್ತಿ:   ಭಗವಂತನಲ್ಲಿ ಪೂರ್ಣಪ್ರಮಾಣದ ಭಕ್ತಿ
ಜ್ಞಾನ:  ಭಗವಂತ ದೊಡ್ಡವ ಎನ್ನುವ ಪೂರ್ಣ ಅರಿವು
ವೈರಾಗ್ಯ:  ಭಗವಂತನ ಮುಂದೆ ಎಲ್ಲವೂ ಸಣ್ಣ ವಸ್ತು ಎಂಬ ಪೂರ್ಣ ಅರಿವು
ಪ್ರಜ್ಞಾ:  ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ತಿಳುವಳಿಗೆ
ಮೇಧಾ:  ಅತ್ಯದ್ಭುತವಾದ ಸ್ಮರಣಶಕ್ತಿ
ಧೃತಿ:  ಭಗವಂತನ ಹಿರಿಮೆಯ ಬಗ್ಗೆ, ತನ್ನ ಶಕ್ತಿಯ ಬಗ್ಗೆ, ವಿಶ್ವದ ಬಗ್ಗೆಯೂ ಆತ್ಮವಿಶ್ವಾಸ
ಸ್ಥಿತಿ:    ಅಚಲವಾದ ನಿಲುವು
ಯೋಗ:  ಜೀವನದ ದ್ವಂದ್ವಗಳನ್ನು ಸಮಾನ ದೃಷ್ಟಿಯಿಂದ, 
              ಸಮಚಿತ್ತತೆಯಿಂದ ನೋಡುವ ನಿರ್ಲಿಪ್ತ ನಿಲುವು
ಪ್ರಾಣ:  ನಿರಂತರ ಚಲನಶೀಲತೆ
ಬಲ:   ಆತ್ಮಬಲ, ಪರಿಪೂರ್ಣವಾದ ಸ್ವರೂಪ ಸಾಮರ್ಥ್ಯ. 
"ಭೀಮಸೇನ" - ಭೀಮ ಎಂದರೆ ಎಲ್ಲ ಅರಿವಿನ ಮೇರು (ಭೃತ+ಮಾನ = ಭೀಮ).  ಇನ ಎಂದರೆ ಸ್ವಾಮಿಯಾದ ಭತವಂತ.  ಅವನ ಜೊತೆಗಿರುವವನು ಸೇನ (ಸ+ಇನ = ಸೇನ).
ಮೇಲೆ ಕಾಣಿಸಿದ ಹತ್ತೂ ಗುಣಗಳೂ ವಾಯುತತ್ತ್ವದ ವಿಶೇಷಗಳು.  ಧರ್ಮರಾಜನು ಜನಿಸಿದ ನಂತರ ಕುಂತಿ ಎರಡನೆಯ ಮಗುವನ್ನು ಪಡೆಯಲು ಯಾವ ದೇವತೆಯನ್ನು ಪ್ರಾರ್ಥಿಸಿಕೊಳ್ಳಬೇಕೆಂದು ಚಿಂತಿಸುತ್ತಿದ್ದಳು.  ನಾರಾಯಣ ಆಗಲೇ ವ್ಯಾಸರೂಪನಾಗಿ, ಪಾಂಡುವಿಗೆ ತಂದೆಯಾಗಿದ್ದ ಮತ್ತು ಚತುರ್ಮುಖ ಬ್ರಹ್ಮನಿಗೆ ಭೂಮಿಯಲ್ಲಿ ಜನನವಿರಲಿಲ್ಲ.  ಇವರಿಬ್ಬರ ನಂತರದ ಹಿರಿಯ ದೇವತೆ ವಾಯುದೇವನಾಗಿರುವಾಗ, ಬಲವಂತನೂ ಆದ ವಾಯುದೇವರನ್ನು ಪ್ರಾರ್ಥಿಸಿ ಕುಂತಿ, ಭೀಮಸೇನನನ್ನು ಪಡೆದಳು.  ಭೀಮನ ಜನ್ಮವಾದ ಕೂಡಲೇ ಭೂಮಿಯಲ್ಲಿನ ಎಲ್ಲಾ ರಾಜರುಗಳೂ ಭಯಗೊಂಡರು ಮತ್ತು ದುಷ್ಟರಾಜರುಗಳ ಸಮಸ್ತ ಪ್ರಾಣಿಗಳೂ ಇನ್ನು ತಮ್ಮ ಯಜಮಾನನ ಕಥೆ ಮುಗಿಯಿತೆಂದು ಕಣ್ಣೀರು ಸುರಿಸಿದವಂತೆ.  ಅಶರೀರವಾಣಿಯೊಂದು ಜಗತ್ತಿನಲ್ಲೇ ಬಲಜ್ಯೇಷ್ಠನೇ ಕುಂತಿಗೆ ಮಗನಾಗಿ ಜನಿಸಿದ್ದಾನೆಂದು ನುಡಿಯಿತಂತೆ.  ತನ್ನ ಬಲವನ್ನೂ ಮಿಕ್ಕ ಎಲ್ಲಾ ಗುಣಲಕ್ಷಣಗಳನ್ನೂ ಹುಟ್ಟಿನಲ್ಲೇ ಪ್ರಕಟಪಡಿಸಿದ ದೇವತೆ ವಾಯುದೇವನಾಗಿದ್ದಾನೆ.  ಭೀಮಸೇನ ಪುಟ್ಟ ಮಗುವಾಗಿದ್ದಾಗ ಒಮ್ಮೆ ಕುಂತಿ ಮಗುವನ್ನು ಎತ್ತಿಕೊಂಡಿದ್ದಾಗ ಹುಲಿಯ ಗರ್ಜನೆ ಕೇಳಿ ಗಾಬರಿಯಲ್ಲಿ ಕೈಬಿಟ್ಟಳಂತೆ.  ಮಗು ಕೆಳಗೆ ಕಲ್ಲಿನ ಮೇಲೆ ಬಿದ್ದಾಗ, ಆ ಕಲ್ಲುಬಂಡೆ ಒಡೆದು ನುಚ್ಚುನೂರಾಗಿ ಮುಂದೆ ಅದು ’ಶತಶೃಂಗ’ ಎಂದು ಕರೆಸಿಕೊಂಡಿತು ಎಂಬ ಉಲ್ಲೇಖವಿದೆ.  ಇದು ಭೀಮನ ಅಸಾಮಾನ್ಯ ಬಲದ ಪ್ರಕಟಣೆಯಾಗಿತ್ತು.

ಭೀಮಸೇನನದು ’ಮೇರು’ ವ್ಯಕ್ತಿತ್ವ.  ಪರ್ವತಗಳ ಶಿರೋಮಣಿಯಾದ ಮೇರು ಪರ್ವತದಂತೆ ಅಚಲ, ಧೀರ ಮತ್ತು ವೀರ.  ಶ್ರೀ ತ್ಯಾಗರಾಜರು ಶ್ರೀರಾಮಚಂದ್ರನ ಕುರಿತು ಮಾಯಾಮಾಳವಗೌಳ ರಾಗದಲ್ಲಿ ಒಂದು  ವಿಳಂಬಕಾಲದ ಕೃತಿ ರಚಿಸಿದ್ದಾರೆ.   "ಮೇರು ಸಮಾನ ಧೀರ.. ವರದ".. ಎಂದು ಪ್ರಾರಂಭವಾಗುವ ಈ ಕೃತಿ ಭೀಮಸೇನನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.  ತ್ಯಾಗರಾಜರು ಮಾಡಿರುವ ಶ್ರೀರಾಮಚಂದ್ರನ ವರ್ಣನೆಯಲ್ಲಿ ನಾವು ಭೀಮಸೇನನನ್ನು ಕಾಣಬಹುದಾಗಿದೆ.  ಕೃತಿಯ ಅನುಪಲ್ಲವಿಯಲ್ಲಿ "ಸಾರಾಸಾರ... ನೀರದ ಕಾಂತಿನಿ ನೀ ಠೀವಿನಿ... ಮಹಾ ಮೇರು ಸಮಾನ ಧೀರ" ಎಂದಿದೆ.  ಇಲ್ಲಿ ಸಾರಾಸಾರ ಎಂಬ ವರ್ಣನೆಯಲ್ಲಿ ಸಾರದಲ್ಲೂ ಅಸಾರದಲ್ಲೂ ವ್ಯಾಪಿಸಿರುವ, ಪಸರಿಸಿರುವ ಎಂಬ ವಿಶೇಷ ಗುಣ ವಾಯುದೇವನ ವರ್ಣನೆಯೋ ಎಂಬಂತೆ ಇದೆ.  ಪರ್ವತಗಳಲ್ಲಿ ಅತಿಶಯವಾದುದು ಮೇರುಪರ್ವತ.  ಗಾಳಿ, ಮಳೆ, ಮೇಘಗಳಿಗೆ ಜಗ್ಗದೆ ನಿಶ್ಚಲವಾಗಿ ವೀರನೂ, ಧೀರನೂ, ಏಕಾಂಗಿಯೂ ಆಗಿ ನಿಂತಿರುವ ಮೇರುಪರ್ವತದಂತೆಯೇ, ಸಮಾನವಿಲ್ಲದವನು ವಾಯುದೇವನ ಅವತಾರನಾದ ಭೀಮಸೇನನು.  ಕೃತಿಯ ಚರಣದಲ್ಲಿ ತ್ಯಾಗರಾಜರು "ದಳಿತ ದುರ್ಮಾನವ" ಎಂದಿದ್ದಾರೆ.  ಅಂದರೆ ದುಷ್ಟರನ್ನು ದಮನ ಮಾಡಿದವನು ಎಂದು ಅರ್ಥ ಬರುತ್ತದೆ.  ಭೀಮಸೇನನ ಅವತಾರವೂ ದುಷ್ಟರನ್ನು ದಮಿಸಿ ಶ್ರೀಕೃಷ್ಣನ ಭೂಭಾರಹರಣ ಕಾರ್ಯದಲ್ಲಿ ನೆರವಾಗುವ ಉದ್ದೇಶವೇ ಆಗಿದೆಯಾದ್ದರಿಂದ, ಈ ಕೃತಿಯಲ್ಲಿ ಶ್ರೀರಾಮಚಂದ್ರನಿಗೆ ತಿಳಿಸಿರುವ ಗುಣವಿಶೇಷಣಗಳು ವಾಯುದೇವನಾದ ಭೀಮಸೇನನಿಗೂ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗಿದೆ. 
ಮುಂದೆ ತನ್ನ ಅಣ್ಣ-ತಮ್ಮಂದಿರು, ತಾಯಿ ಮತ್ತು ದ್ರೌಪದಿಯ ಸಂಪೂರ್ಣ ಜವಾಬ್ದಾರಿಯನ್ನು ಭೀಮಸೇನನೇ ನಿಭಾಯಿಸುವನೆಂಬ ಸೂಕ್ಷ್ಮತೆಗೆ ಬೆಂಬಲವಾಗಿ ಅನೇಕ ನಿದರ್ಶನಗಳೂ, ಸೂಚನೆಗಳೂ ಭೀಮಸೇನನ ಬಾಲ್ಯದಿಂದಲೇ ಸಿಕ್ಕುತ್ತಾ ಹೋಗುತ್ತವೆ.  ತುಂಬಾ ವಿಶೇಷವಾದ ಮತ್ತು ಉಲ್ಲೇಖವಾಗಿಲ್ಲದ ವಾಯುದೇವನ ಇನ್ನೊಂದು ಮುಖ್ಯ ಗುಣ ಲಕ್ಷಣವೆಂದರೆ ನಿಷ್ಠುರತೆ.  ಮುಂದೆ ಬ್ರಹ್ಮ ಪದವಿಗೆ ಬರುವ ವಾಯುದೇವನು ತುಂಬಾ ನಿಷ್ಠುರವಾದಿ.  ತಪ್ಪು ಯಾರೇ ಮಾಡಿದರೂ ಅದಕ್ಕೆ ಶಿಕ್ಷೆಯಾಗಲೇ ಬೇಕೆಂಬ ಅಭಿಪ್ರಾಯವನ್ನು ಖಂಡಿತವಾಗಿ ತಿಳಿಸಿಬಿಡುವವರು.  ಧರ್ಮರಾಜ ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಅರಣ್ಯಕ್ಕೆ ಹೊರಡಲು ತಯಾರಾಗಿ ನಿಂತಾಗ ಭೀಮಸೇನ ಅತ್ಯುಗ್ರನಾಗಿ ದ್ರೌಪದಿಯನ್ನು ಅವಮಾನಿಸಿದ ದುರ್ಯೋಧನನ ತೊಡೆ ಮುರಿಯುವೆನೆಂದು ಪ್ರತಿಜ್ಞೆ ಮಾಡುತ್ತಾನೆ.  ಹಾಗೇ ಜೂಜಾಡಿದ ಧರ್ಮರಾಜನ ಕೈಗಳನ್ನು ಸುಟ್ಟು ಬಿಡಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಾನೆ.  ಅರ್ಜುನ ಹಿರಿಯಣ್ಣನಿಗೆ ಹಾಗೆ ಮಾಡಲಾಗದು ಎಂಬ ಮಾತು ತಿಳಿಸಿದಾಗ, ಭೀಮಸೇನ ಉತ್ತರವಾಗಿ ದೊಡ್ಡವರು ತಪ್ಪು ಮಾಡಿದಾಗ ಅದನ್ನು ಚಿಕ್ಕವರು ತಪ್ಪನ್ನು ತೋರಿಸಿಕೊಟ್ಟು ಅದಕ್ಕಾಗಿ ಶಿಕ್ಷೆಯನ್ನು ಅನುಭವಿಸಬೇಕೆಂಬ ಮಾತು ಆಡಿದರೂ ಸಾಕು, ಅದರಿಂದ ದೊಡ್ಡರ ಮನಸ್ಸಿಗೆ ಉಂಟಾಗುವ ಕ್ಲೇಶದಿಂದಲೇ ಪಾಪ ಪರಿಹಾರವಾಗಿ ಬಿಡುತ್ತದೆ, ಶಿಕ್ಷೆ ಅನುಭವಿಸಬೇಕಾಗಿಲ್ಲ ಎಂದು ತಿಳಿಸಿ ಹೇಳುತ್ತಾನೆ.

ಮಹಾಭಾರತದ ಉದ್ದಕ್ಕೂ ಭೀಮಸೇನ ತನ್ನ ಮೂಲ ಸ್ವರೂಪವಾದ ವಾಯುವಿನ ತತ್ತ್ವಗಳನ್ನು ಸದಾ ಪ್ರಕಟಪಡಿಸುತ್ತಲೇ ಇರುತ್ತಾನೆ.  ಚಿಕ್ಕ ವಯಸ್ಸಿನಿಂದಲೂ ದುರ್ಯೋಧನನ ಎಲ್ಲಾ ಹಿಂಸೆಗಳನ್ನೂ ಮೆಟ್ಟುತ್ತಲೇ ಇದ್ದ.  ವಿಷವನ್ನೂ ಕುಡಿದು ಜೀರ್ಣಿಸಿಕೊಂಡವನು.  ಎಲ್ಲಕ್ಕಿಂತ ಮೊದಲು ಭಗವಂತನಲ್ಲಿನ ಭಕ್ತಿ ಮತ್ತು ನಿಷ್ಠೆ ಪ್ರಮಾಣದಲ್ಲಿ ಪ್ರದರ್ಶಿಸಿದ.  ಶ್ರೀಕೃಷ್ಣನ ಎಲ್ಲಾ ಆಜ್ಞೆಗಳನ್ನೂ ಮರು ಪ್ರಶ್ನಿಸದೆ, ಸಂದೇಹಕ್ಕೆ ಆಸ್ಪದವೇ ಇಲ್ಲದಂತೆ ಶಿರಸಾವಹಿಸಿ ಕಾರ್ಯ ರೂಪಕ್ಕೆ ತರುವಂತಹವನಾಗಿರುತ್ತಾನೆ. ಭಗವಂತನ ಪರಿಪೂರ್ಣ ಜ್ಞಾನವನ್ನು ಹೊಂದಿದವನಾಗಿ,  ಎಲ್ಲಕ್ಕಿಂತ, ಎಲ್ಲರಿಗಿಂತ ಭಗವಂತ ದೊಡ್ಡವನೆಂಬ ಅರಿವು, ಭಗವಂತನ ಎದುರಿಗೆ ಮಿಕ್ಕವೆಲ್ಲವೂ ತೃಣ ಸಮಾನವೆಂಬ ವೈರಾಗ್ಯ ಹೊಂದಿದವನಾಗಿರುತ್ತಾನೆ. 

ಭೀಮಸೇನನ ವ್ಯಕ್ತಿತ್ವವನ್ನು ನಾವು ಸ್ವಲ್ಪ ಆಳವಾಗಿ ಚಿಂತಿಸಿದಾಗ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ವಿಚಾರಗಳನ್ನು ಕಾಣಬಹುದಾಗಿದೆ.  ಇವತ್ತಿನ ಈ ನಮ್ಮ ಜೀವನಕ್ಕೂ ಭೀಮಸೇನ ಆದರ್ಶವಾಗುತ್ತಾನೆ.  ಆಧ್ಯಾತ್ಮ ಹಾದಿಯಲ್ಲಿ ನಡೆಯಬೇಕೆಂದವರಿಗೆ, ಭಗವಂತನ ವಿಚಾರಗಳನ್ನು ಅಧ್ಯಯನ ನಡೆಸುವುದು, ಹರಿಯ ಗುಣಗಳನ್ನು ಶ್ರವಣ ಮಾಡುವುದು, ಸದಾ ನಾಮ ಜಪ ಮಾಡುವುದು, ವಿಚಾರ ವಿನಿಮಯ ಮಾಡುವುದು ಮುಂತಾದವುಗಳಲ್ಲಿ ಮಾತ್ರವೇ ಮನಸ್ಸು ನೆಲೆಗೊಳಿಸಬೇಕು, ಅದೊಂದೇ ಸ್ಥಿರ ಮತ್ತು ಬಾಕಿಯದೆಲ್ಲಾ ಅಸ್ಥಿರವೆಂಬ ಅರಿವು ಮೂಡಿಸಿಕೊಳ್ಳಲು ಭೀಮಸೇನ ಮಾದರಿಯಾಗುತ್ತಾನೆ.  ನಮ್ಮ ನಂಬಿಕೆ, ವಿಶ್ವಾಸ ಅಚಲವಾಗಿರಬೇಕೆಂಬ ನೀತಿ ತಿಳಿಯಬಹುದಾಗಿದೆ.  ಯಾವುದೇ ಕಾರ್ಯವನ್ನು ಮಾಡುವಾಗಲೂ ಏಕಚಿತ್ತದಿಂದ, ಅಚಲ ಮನಸ್ಸಿನಿಂದ ಮಾಡಬೇಕು, ಚಂಚಲತೆ ಇರಬಾರದೆಂಬ ಪಾಠ ಕಲಿಯಬಹುದಾಗಿದೆ.  ಅರಗಿನ ಮನೆಯಲ್ಲಿನ ಅಗ್ನಿಯ ಪ್ರಸಂಗದಲ್ಲಿ ಭೀಮಸೇನನ ಸಮಯ ಪ್ರಜ್ಞೆ, ಬಲ ಪ್ರದರ್ಶನ ಸಾಬೀತಾಗಿದೆ.  ತಾನೊಬ್ಬನೇ ತನ್ನ ಅಣ್ಣ, ಮೂವರು ತಮ್ಮಂದಿರು ಮತ್ತು ತಾಯಿಯನ್ನು ಹೊತ್ತುಕೊಂಡು ಹೋಗಿ ಕಾಪಾಡುತ್ತಾನೆ.  ಇಲ್ಲಿ ಭೀಮಸೇನನ ಶೌರ್ಯ ಹಾಗೂ ಬಲದ ಜೊತೆಗೆ ಅವನ ’ಪ್ರಜ್ಞಾ’ ಗುಣ ವಿಶೇಷ ಕೂಡ ಪ್ರಕಟವಾಗಿದೆ. ಅಂದರೆ ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆಯು ಪ್ರತಿಬಿಂಬಿಸಲ್ಪಟ್ಟಿದೆ.

ಭೀಮಸೇನನ ನಿರಂತರ ಚಲನಶೀಲತೆಯ ಗುಣ ವಾಯು ತತ್ತ್ವದ ಮುಖ್ಯಲಕ್ಷಣ.  ಇಡೀ ಬ್ರಹ್ಮಾಂಡದಲ್ಲೇ ಪಸರಿಸಿರುವ ವಾಯು - ’ಪರಿಸರ’ ಸದಾ ಚಲನಶೀಲತೆಯಿಂದ ಕೂಡಿದೆ.  ನಿಂತಲ್ಲಿ ನಿಲ್ಲದೆ ಚಲಿಸುತ್ತಿರುವುದು ಬೆಳವಣಿಗೆಯ ಮತ್ತು ವ್ಯಾಪ್ತಿಯ ವಿಸ್ತಾರದ ಅಂಶವನ್ನು ತೋರುತ್ತದೆ.  ನಮ್ಮ ಮನಸ್ಸೂ, ಬುದ್ಧಿಯೂ ಈ ತತ್ತ್ವದೆಡೆಗೆ ಆಕರ್ಷಣೆಗೊಳಿಸಿಕೊಂಡಲ್ಲಿ, ನಮ್ಮೊಳಗೇ ಹುದುಗಿರುವ ಕ್ರಿಯಾಶೀಲತೆಗೆ ಚಾಲನೆ ಕೊಟ್ಟಂತೆ ಆಗುತ್ತದೆ.  ಸದಾ ನಮ್ಮ ಜ್ಞಾನವನ್ನು ವಿಸ್ತರಿಸುವ, ವಿಸ್ತಾರಗೊಳಿಸಿಕೊಳ್ಳುವ ಹುನ್ನಾರದಲ್ಲಿ ಮನಸ್ಸನ್ನು ಹುದುಗಿಸಿಕೊಂಡಾಗ ಪರಿಸರದೆಲ್ಲೆಡೆ ನಿತ್ಯ ನೂತನವಾದ ಚೈತನ್ಯ ಕಂಡು ಬರುತ್ತದೆ.  ನಮ್ಮೊಳಗಿನ ಪ್ರಾಣಶಕ್ತಿಗೆ ಪರಿಸರದಲ್ಲಿನ ಚೈತನ್ಯ ಕೂಡಿಕೊಂಡಾಗ ಬುದ್ಧಿಯ ವಿಕಸನವಾಗುತ್ತದೆ.

ವಾಯುತತ್ತ್ವದ ಗುಣಲಕ್ಷಣಗಳಾದ ’ಯೋಗ’ ಮತ್ತು ’ಧ್ರುತಿ’ಯ ವಿಶೇಷಣಗಳನ್ನು ನಮ್ಮ ಬದುಕಿಗೆ ಸಮನ್ವಯ ಮಾಡಿಕೊಳ್ಳಬೇಕೆಂದಾಗ ನಮ್ಮ ಜೀವನದಲ್ಲಿ ಪ್ರಾಕೃತಿಕ ಸಂಸಾರದ ಸಾಗರದಲ್ಲಿ ದಿನದಿನವೂ ಎದುರಾಗುವ ಏರಿಳಿತಗಳನ್ನು ಸಮಾನ ಚಿತ್ತದಿಂದ ಸ್ವೀಕರಿಸುವುದು ಎಂದರ್ಥವಾಗುತ್ತದೆ.  ಸಂಸಾರವೆಂಬ ಭವಸಾಗರದಲ್ಲಿ ಸಿಲುಕಿದಾಗಲೇ ನಮ್ಮ ಚಿತ್ತಶಾಂತಿಯನ್ನು ಕಾಪಾಡಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿರುತ್ತೇವೆ.  ಇಂತಹ ಸಂದರ್ಭಗಳನ್ನು ಪ್ರತಿ ಹಂತದಲ್ಲೂ ದಾಟಿಕೊಂಡು ಮುಂದೆ ನಡೆಯಲೇಬೇಕೆಂಬ ಕಡ್ಡಾಯವಿರುವಾಗ ಮನಸ್ಥಿತಿಯನ್ನು ’ಯೋಗ’ ಲಕ್ಷಣದಲ್ಲಿ ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ.  ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ನಿರ್ಲಿಪ್ತತೆಯ ನಡವಳಿಕೆಯಿಂದ ವರ್ತಿಸುವ ಭೀಮಸೇನನ ವ್ಯಕ್ತಿತ್ವ ನಮ್ಮನ್ನು ಕಂಗೆಡದಂತೆ ಹುರಿದುಂಬಿಸುತ್ತದೆ.  ’ಧ್ರುತಿ’ ಎಂದರೆ ಭಗವಂತನೆಂಬ ಅಗಾಧ ಶಕ್ತಿಯ ಅರಿವು, ನಮ್ಮೊಳಗಿನ ಚೈತನ್ಯವಾಗಿರುವ ಆ ಶಕ್ತಿಯಿಲ್ಲದೇ ನಾವೇನೂ ಅಲ್ಲವೆಂಬ ನಂಬಿಕೆ ಮತ್ತು ಭಗವಂತನ ಸೃಷ್ಟಿಯನ್ನು ಗೌರವಿಸುವುದು.

ವಾಯು ತತ್ತ್ವದ ೧೦ನೆಯ ಲಕ್ಷಣ ’ಬಲ’.  ಭೀಮಸೇನನ ಬಲವೆಂದರೆ ತನ್ನದೇ ಆತ್ಮಶಕ್ತಿ ಮತ್ತು ಸಾಮರ್ಥ್ಯ.  ಭೀಮಸೇನ ವಾಯುದೇವರ ಅವತಾರವಾದ್ದರಿಂದ ಅವನಿಗೆ ತನ್ನ ಸ್ವರೂಪದ ಅರಿವು ತಿಳಿದಿತ್ತು.  ಆದರೆ ನಾವು ನಮ್ಮ ಕರ್ಮಗಳ ಫಲದಿಂದ ಮತ್ತೆ ಮತ್ತೆ ಜನಿಸಿ ಬಂದಿರುವ, ಅಧ್ಯಾತ್ಮದ ಹಾದಿಯಲ್ಲಿ ನಡೆಯಬೇಕೆಂಬ ಇಚ್ಛೆಯುಳ್ಳ ಸಾಮಾನ್ಯ ಮಾನವರಾದ  ನಮಗೆ ನಮ್ಮ ಸ್ವರೂಪ ತಿಳಿದಿಲ್ಲ.  ಆದರೆ ಎಲ್ಲಾ ಜೀವಿಗಳಲ್ಲೂ ತಮ್ಮದೇ ಆದ ಅಂತರ್ಶಕ್ತಿ, ಆತ್ಮಬಲ ಎನ್ನುವುದು ಇದ್ದೇ ಇದೆ.  ಅದನ್ನು ಜತನದಿಂದ ಪೋಷಿಸಿ, ಸರಿಯಾದ ಪ್ರೇರಣೆಗಳಿಗೆ ಅರಳುವಂತಹ ಅಭ್ಯಾಸ ಮಾಡಿಸಿದಾಗ ಅದು ವೃದ್ಧಿಯಾಗುತ್ತದೆ ಮತ್ತು ಅಗಾಧವಾಗಿ ಬೆಳೆಯುತ್ತದೆ.  ತನ್ನಲ್ಲಿ ನಂಬಿಕೆಯೆಂಬ ಪ್ರಚಂಡ ವಿಶ್ವಾಸವಿದ್ದಾಗ ಬದುಕನ್ನು ಎದುರಿಸುವ ತಾಕತ್ತು ಬರುತ್ತದೆ.  ಈ ಅಗಾಧವಾದ ನಂಬಿಕೆಯು ಪರಿಸ್ಥಿತಿಗಳನ್ನು ನಿಭಾಯಿಸುವಾಗ ಸೋಲುವ ಭಯದಿಂದ ಹಿಮ್ಮೆಟ್ಟದಂತೆ ತಡೆಯುತ್ತದೆ.  ಸೋಲು ಎಂಬ ಪದದ ಪರಿಚಯವೇ ಇಲ್ಲದ ವ್ಯಕ್ತಿತ್ವ ಭೀಮಸೇನನದು.  ಯಾವುದೇ ಕಾರ್ಯವನ್ನಾಗಲೀ ಮಾಡಬಲ್ಲೆನೆಂಬ ಒಂದು ಛಲ, ಜಯಿಸಬಲ್ಲೆನೆಂಬ ಧೈರ್ಯ ನಮಗೆ ಭೀಮಸೇನ ಕೊಡುತ್ತಾನೆ.  ಭೀಮಸೇನನನ್ನು ನೆನೆದಾಗ ಉನ್ನತಮಟ್ಟದ ಧನಾತ್ಮಕ ಕಿರಣಗಳು ವಾಯು ತತ್ತ್ವದ ಪ್ರಚಂಡ ಶಕ್ತಿಯ ಆವಾಹನೆ ನಮ್ಮೊಳಗೆ ಆಗುತ್ತದೆ.  ತಲೆಯೆತ್ತಿ ನಿಲ್ಲುವ, ಹೋರಾಡುವ ಬಲ ಬರುತ್ತದೆ.

ವಿಷಯಾಧಾರ : ಶ್ರೀ ಬನ್ನಂಜೆ ಗೋವಿಂದಾಚಾರ್ಯರ "ಭೀಮಸೇನ" ಪುಸ್ತಕ
ಚಿತ್ರಕೃಪೆ : ಅಂತರ್ಜಾಲ


Tuesday, April 9, 2013

ಎಳ್ಳುಕಾಳಿನ ಭಕುತಿ..














ಎಳ್ಳುಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ |
ಬೆಳ್ಳಕ್ಕಿಯಂತೆ ನಿನ್ನ ಧ್ಯಾನ ಮಾಡುವೆನಯ್ಯ ||

ಗಂಡುಮುಳುಗ ಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ
ಮಂಡೆಶೂಲೆಯಲ್ಲದೆ ಗತಿಯು ಇಲ್ಲ |
ಮಂಡೂಕನಂದದಿ ಕೆರೆಯ ದಂಡೆಯ ಮೇಲೆ ಕುಳಿತು
ಮಂಡೆಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ ||

ಗಾಣದೆತ್ತಿನಂತೆ ಕಣ್ಣ ಕಟ್ಟಿ ಪ್ರದಕ್ಷಿಣೆಯ ಮಾಡಿ
ಕಾಣದೆ ನಾ ತಿರುಗಿದೆ ಕಂಡುದುದಿಲ್ಲ |
ಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿ
ಆಣಿಕಾರಿಗೆ ಮಾಡಿದಂಥ ಈ ಕುಯುಕುತಿ ||

ಇಕ್ಕಳದ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆ
ಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲ |
ಪೊಕ್ಕಳುಪೂವಿನ ಶ್ರೀಪುರಂದರವಿಠಲನೆ
ಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ ||

ಶ್ರೀ ಪುರಂದರ ದಾಸರು ತಮ್ಮ ಈ ಪದದಲ್ಲಿ ನಮ್ಮಂತಹ ಸಾಮಾನ್ಯ ಜನರ ಮನಸ್ಥಿತಿಯನ್ನು ಅದೆಷ್ಟು ಯಥಾವತ್ತಾದ ಚಿತ್ರಣ ಮಾಡಿದ್ದಾರೆ.  ಆಡು ಮಾತಿನಲ್ಲಿ ಉಪಯೋಗಿಸುವ ಎಲ್ಲಾ ಶಬ್ದಗಳಿಗೂ ಒಂದು ಒಳ ಆಧ್ಯಾತ್ಮ ತತ್ವವನ್ನು ಬೆರೆಸಿ ಅರ್ಥಪೂರ್ಣವಾಗಿ ನುಡಿದಿದ್ದಾರೆ.  ದಿನ ನಿತ್ಯ ನಮ್ಮ ಅಡುಗೆಯಲ್ಲಿ ಬಳಸುವ ಪದಾರ್ಥವಾದ ಎಳ್ಳುಕಾಳನ್ನು ಸಾಂಕೇತಿಕವಾಗಿಟ್ಟುಕೊಂಡು ಪ್ರಾರಂಭಿಸಿದ್ದಾರೆ.  ಎಳ್ಳು ನಮ್ಮ ಅಡುಗೆ ಮನೆಯಲ್ಲೂ ಹಾಗೂ ಆಚರಣೆಗಳಲ್ಲೂ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ.  ಪ್ರಮಾಣದಲ್ಲಿ ಅತ್ಯಂತ ಸಣ್ಣದಾದ ಎಳ್ಳು ಕಾಳಿನಷ್ಟೂ ಭಕ್ತಿ ನನ್ನ ಮನಸ್ಸಿನಲ್ಲಿ ಇಲ್ಲವೆಂದು ಭಗವಂತನಲ್ಲಿ ಅಂತರಂಗ ತೆರೆದು ನಿವೇದಿಸಿಕೊಂಡಿದ್ದಾರೆ.  ಬಕ ಪಕ್ಷಿ (ಬೆಳ್ಳಕ್ಕಿ) ನೀರಿನಲ್ಲಿ ಒಂದು ಕಾಲಲ್ಲಿ ನಿಂತು, ತಲೆ ತಗ್ಗಿಸಿಕೊಂಡು, ಕಣ್ಣು ಮುಚ್ಚಿಕೊಂಡು ಅಲುಗಾಡದೆ ಗಂಟೆಗಟ್ಟಲೆ ನಿಂತಿರುತ್ತದೆ.  ನೋಡಿದವರಿಗೆ ಅದು ಧ್ಯಾನದಲ್ಲಿ ತಲ್ಲೀನವಾಗಿದೆಯೆಂಬ ನಂಬಿಕೆ ಬರಬೇಕು ಹಾಗೆ ನಿಂತಿರುತ್ತದೆ.  ಆದರೆ ಅದರ ಗಮನವೆಲ್ಲಾ ಭಗವಂತನ ಧ್ಯಾನದಲ್ಲಿ ಲೀನವಾಗಿರೋಲ್ಲ.  ಕೆಳಗೆ ನೀರಿನಲ್ಲಿ ಮೀನು ಸಿಗುವುದೋ ಎಂಬ ಧ್ಯಾನದಲ್ಲಿ ಸಿಲುಕಿರುತ್ತದೆ, ಸಿಕ್ಕ ಕೂಡಲೆ ಅದರ ಧ್ಯಾನ, ತಪ, ಒಂಟಿಕಾಲಿನಲ್ಲಿ ನಿಂತಿದ್ದ ಭಂಗಿ ಎಲ್ಲವೂ ಗಾಳಿಯಲ್ಲಿ ತೂರಿಹೋಗಿ, ಕೊಕ್ಕಿನಲ್ಲಿ ಮೀನು ಸಿಕ್ಕಿಕೊಂಡಿರುತ್ತದೆ.  ಈ ಹಾಡಿನ ಪ್ರಾರಂಭದಲ್ಲೇ ದಾಸರು ಈ ಬಕಧ್ಯಾನದ ವಿಷಯ ತಿಳಿಸಿ ನಮ್ಮ ಧ್ಯಾನದ ಪರಿಯನ್ನು ಬಹಿರಂಗಗೊಳಿಸುತ್ತಾರೆ.  ಹೀಗೆ ದಾಸರು ಈ ಪದದಲ್ಲಿ ವಿವಿಧ ಉದಾಹರಣೆಗಳನ್ನು ಕೊಟ್ಟು ನಮ್ಮ ಡಂಭಕತನದ ಭಕ್ತಿಯನ್ನು ಟೀಕಿಸುತ್ತಾರೆ.

ಗಂಡುಮುಳುಗ ಹಕ್ಕಿಯೆಂದು ದಾಸರು ಉಲ್ಲೇಖಿಸಿರುವುದು ದಿನದಲ್ಲಿ ೧೦೦ ಬಾರಿ ಸುಮ್ಮನೆ ನೀರಿನಲ್ಲಿ ತಲೆ ಮುಳುಗಿಸಿ ಮೇಲೇಳುವ ಹಕ್ಕಿಯ ವಿಷಯ.  ಅಂದರೆ ಹಕ್ಕಿ ಯಾವ ಪುಣ್ಯ ಸಂಪಾದನೆಗಾಗಿಯೂ ನೀರಿನಲ್ಲಿ ಮುಳುಗುವುದಿಲ್ಲ, ಅದು ತನ್ನ ಆಹಾರವಾದ ಹುಳು, ಹುಪ್ಪಟೆಗಳನ್ನು ಕಂಡೊಡನೆ ನೀರಿನಲ್ಲಿ ತಲೆ ಮುಳುಗಿಸಿ, ಕೊಕ್ಕಿನಲ್ಲಿ ಹಿಡಿದುಕೊಂಡು ಒಂದೇ ಕ್ಷಣದಲ್ಲಿ ಮೇಲೆ ಬಂದುಬಿಡುತ್ತದೆ.  ಅದಕ್ಕೆ ತಾನು ಮುಳುಗಿ ಏಳುವ ನೀರು ಯಾವ ನದಿಯಾದರೇನು ಯಾವ ಸಮುದ್ರವಾದರೇನೂ, ಎಂತಹ ವ್ಯತ್ಯಾಸವೂ ಇಲ್ಲ.  ಹಾಗೇ ನಾವೂ ಕೂಡ ಕಂಡ ಕಂಡ ನದಿಗಳಲ್ಲೆಲ್ಲಾ ಮುಳುಗೆದ್ದು, ಸಮುದ್ರ ಸ್ನಾನ ಮಾಡಿ, ಪರಿಚಯವಿರುವ ಎಲ್ಲರಲ್ಲಿಯೂ ನಾನು ಗಂಗಾಸ್ನಾನ ಮಾಡಿದೆ, ತುಂಗಾಸ್ನಾನ ಮಾಡಿದೆ ಎಂದು ಡಂಗುರವನ್ನು ಸಾರುತ್ತೇವೆ.  ಆದರೆ ಮನದಲ್ಲಿ ಎಳ್ಳುಕಾಳಿನಷ್ಟೂ ಭಕ್ತಿಯಿಲ್ಲದಿರುವಾಗ, ಯಾವ ನದಿಯಲ್ಲಿ ಮುಳುಗಿದರೂ, ಸಮುದ್ರ ಸ್ನಾನ ಮಾಡಿದರೂ ನಮಗೆ ಪುಣ್ಯ ಲಭಿಸುವುದಿಲ್ಲ ಬದಲಿಗೆ ನೀರಿನಲ್ಲಿ ಮುಳುಮುಳುಗೆದ್ದ ಕಾರಣ ತಲೆನೋವು ಅಂಟಿಕೊಳ್ಳುತ್ತದೆ ಅಷ್ಟೆ.  ಕೆರೆಯ ದಂಡೆಯ ಮೇಲೆಯೇ ಕುಳಿತ ಮಂಡೂಕ ಸದಾ ತನ್ನ ವಟವಟಗುಟ್ಟುವ ಅಭ್ಯಾಸದಂತೆ, ನಾವು ಕೂಡ ದಂಡೆಯ ಮೇಲೆ ಕುಳಿತು ಯಾರಿಗೂ ತಿಳಿಯಬಾರದೆಂದು ಮುಸುಕು ಹೊದ್ದು, ಬೆರೆಳೆಣಿಸುತ್ತಾ ಜಪವನ್ನು ಮಾಡಿದರೆ, ಎಳ್ಳಷ್ಟೂ ಪುಣ್ಯ ದೊರಕುವುದಿಲ್ಲ ಎಂಬ ಅರ್ಥವಾಗುತ್ತದೆ.

ಎರಡನೆಯ ಚರಣದಲ್ಲಿ ದಾಸರು ನಮ್ಮನ್ನು ಗಾಣದೆತ್ತಿಗೆ ಹೋಲಿಕೆ ಕೊಟ್ಟಿದ್ದಾರೆ.  ಹಿಂದಿನ ಕಾಲದಲ್ಲಿ ಎಣ್ಣೆ ಬೇಕೆಂದರೆ ಗಾಣದವರ ಮನೆಗೇ ಹೋಗಬೇಕಿತ್ತು.  ಅಲ್ಲಿ ಕಾಳುಗಳನ್ನು ಹಾಕಿ ಒಂದು ಗಾಣ ಕಟ್ಟಿ, ಆ ಗಾಣಕ್ಕೆ ಎತ್ತು ಕಟ್ಟಿಬಿಡುತ್ತಿದ್ದರು.  ಕಣ್ಣುಗಳನ್ನು ತೆರೆದು ಸುತ್ತಿದರೆ, ತಲೆ ಸುತ್ತಬಹುದೆಂದು, ಆ ಎತ್ತಿನ ಕಣ್ಣು ಕಟ್ಟಿಬಿಡುತ್ತಿದ್ದರು.  ಅದು ತನ್ನನ್ನು ಕಟ್ಟಿದ್ದ ಗಾಣಕ್ಕೇ ಸುತ್ತುತ್ತಾ ಪ್ರದಕ್ಷಿಣೆ ಬರುತ್ತಿತ್ತು, ಆದರೆ ಮನದಲ್ಲಿ ತಾನೆಲ್ಲೋ ತುಂಬಾ ದೂರ ಪಯಣಿಸಿದ್ದೇನೆಂಬ ಆಲೋಚನೆ ಇರುತ್ತಿತ್ತು.  ಹಾಗೇ ನಾವು ಕೂಡ ಮನದಲ್ಲಿ ಎಳ್ಳಷ್ಟೂ ಭಕ್ತಿಯಿಲ್ಲದೆ, ಸುಮ್ಮನೆ ತೀರ್ಥಕ್ಷೇತ್ರಗಳನ್ನು ಸುತ್ತುತ್ತಾ, ಭಗವಂತನನ್ನು ಕಂಡೆವೇನೋ ಎಂದು ಕೊಂಡರೆ ಏನೂ ಪ್ರಯೋಜನವಿಲ್ಲ.  ಅಂತರಂಗದಾಳದಲ್ಲೇ ಇರುವ ನಮ್ಮೊಡೆಯನ ಅರಿವು, ನಮಗೆ ಆಗಬೇಕೇ ಹೊರತು, ಬಾಹ್ಯ ಮನಸ್ಸಿನ ಪದರದಲ್ಲೇ ಉಳಿದು, ಸುಖಾ ಸುಮ್ಮನೆ ಪುಣ್ಯಕ್ಷೇತ್ರಗಳನ್ನು ಸುತ್ತುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ.  ತನ್ನ ತಪೋಬಲದಿಂದ, ಜ್ಞಾನದ ಕಣ್ಣನ್ನು ಕಾಲಿನಲ್ಲಿ ಪಡೆದಿದ್ದ ಭೃಗು ಮಹರ್ಷಿಗಳು ಅಹಂಕಾರಕ್ಕೆ ಜಾಗ ಕೊಟ್ಟರು.  ಸಾಕ್ಷಾತ್ ವೈಕುಂಠಕ್ಕೇ ತೆರಳಿದರೂ ಕೂಡ, ಕಣ್ಣ ಮುಂದೆಯೇ ಮಾಣಿಕ್ಯದ ರಾಶಿಯೇ ಇದ್ದರೂ ಕೂಡ, ಅದನ್ನು ಅರಿತುಕೊಳ್ಳದೇ ಭಗವಂತನ ವಕ್ಷಸ್ಥಲಕ್ಕೇ ಕಾಲಿನಿಂದ ಒದ್ದು ಅಹಂಕಾರ ಪ್ರದರ್ಶನ ಮಾಡಿದರು.  ಶ್ರೀಹರಿ ಮುಗುಳ್ನಗುತ್ತಾ ಅವರ ಕಾಲಿನಲ್ಲಿ ಒಂದು ಆಣಿ ಇದೆಯೇನೋ ಎಂಬಂತೆ ಪಾದ ಒತ್ತುತ್ತಾ, ಜ್ಞಾನದ ಕಣ್ಣನ್ನು ಕಿತ್ತುಬಿಟ್ಟ.  ಅಹಂಕಾರ ಇಳಿಯಿತು.  ಆದರೆ ಮಾಣಿಕ್ಯದ ರಾಶಿಗೆ ಹೋಗಿ, ಕಾಲಿನ ಆಣಿಗೆ ಉಪಚಾರ ಮಾಡಿಸಿಕೊಂಡಂತಹುದು ಮೂರ್ಖತನವೆಂಬುದು ದಾಸರ ಅಭಿಪ್ರಾಯ.

ಕಬ್ಬಿಣವನ್ನು ಬಗ್ಗಿಸಬೇಕಾದರೆ ಸುಲಭವಲ್ಲ.  ಅದನ್ನು ಚೆನ್ನಾಗಿ ಕಾಯಿಸಿ, ಕಾಯಿಸಿ ಅದು ಸಿಕ್ಕಾಪಟ್ಟೆ ಬಿಸಿಯಾಗಿದ್ದಾಗಲೇ ಬಡಿದು ನಮಗೆ ಬೇಕಾದಂತೆ ಬಗ್ಗಿಸಬೇಕು.  ಆದರೆ ಅತ್ಯಂತ ತೀಕ್ಷ್ಣ ಉಷ್ಣತೆ ಇರುವುದನ್ನು ಹಿಡಿದುಕೊಳ್ಳಲು ತುಂಬಾ ಬಲಿಷ್ಠವಾದ ಇಕ್ಕಳವೇ ಬೇಕು.  ಹಾಗೆ ಅನೇಕ ವಿಷಯಾಸಕ್ತಿಗಳಲ್ಲಿ ಮುಳುಗಿ ಮುಳುಗಿ ತೊಂದರೆ ಕೊಡುವ ಈ ಮನಸ್ಸನ್ನು ಕಬ್ಬಿಣದಂತೆ ಚೆನ್ನಾಗಿ ಕಾಯಿಸಿ, ಬಡಿದು ಒಂದು ಆಕಾರ ಕೊಡು ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ ದಾಸರು.  ಆದರೆ ಕಬ್ಬಿಣ ಕಾಯಿಸಿದರೆ ಸಾಲದು, ಅದನ್ನು ಭದ್ರವಾಗಿ ಸಿಕ್ಕಿಸಿಕೊಂಡು ಬಿಡುವ ಇಕ್ಕಳದ ಕೈಯಿಲ್ಲದೆ ಯಾವ ಪ್ರಯೋಜನವೂ ಇಲ್ಲ.  ಆದ್ದರಿಂದ ಬೇರೆ ಗತಿಯೇ ಇಲ್ಲವೆಂದು ನಿನ್ನತ್ತ ಶರಣಾಗಿ ಬಂದಿರುವ ಈ ಕಬ್ಬಿಣವನ್ನು ಕಾಯಿಸಿ, ಪಿಡಿವ ಇಕ್ಕಳ ನೀನಾಗಿ, ನನ್ನನ್ನು ಸಿಕ್ಕಿಸಿಕೊಂಡು, ರಕ್ಷಿಸು ಎನ್ನುತ್ತಾರೆ.

ಕೊನೆಯ ಎರಡು ಸಾಲಿನಲ್ಲಿ ಶೀ ಪುರಂದರದಾಸರು, ಭಗವಂತನನ್ನು ಲೀಲಾಮಯನೆಂದೂ, ಬ್ರಹ್ಮಾಂಡವೆಂಬ ಆಟಿಕೆಯನ್ನು ಸೃಷ್ಟಿಸಿ, ಮಕ್ಕಳಂತೆ ಆಡುವವನೆಂದೂ ಹೇಳುತ್ತಾರೆ.  ಹೊಕ್ಕಳಲ್ಲಿ ಹೂವಿಟ್ಟುಕೊಂಡು, ಬ್ರಹ್ಮನನ್ನು ಹುಟ್ಟಿಸಿದ ಜಗದ್ರಕ್ಷಕನೇ, ನಿನ್ನ ಮಕ್ಕಳಾಟಿಕೆಯನ್ನು ಬಿಟ್ಟು, ಕೊಂಚ ನನ್ನತ್ತ ನೋಡಿ, ನನ್ನನ್ನು ರಕ್ಷಿಸು, ಉದ್ಧರಿಸು ಎಂದು ಬೇಡುತ್ತಾರೆ.


 ಚಿತ್ರಕೃಪೆ : ಅಂತರ್ಜಾಲ

Tuesday, October 23, 2012

ವೀಣೆ..

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ತಂತಿವಾದ್ಯವಾದ ವೀಣೆ.  ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ ಸರಸ್ವತಿ.  ಸರಸ್ವತಿ ದೇವಿಯು ಸಂಗೀತದ ಅಧಿದೇವತೆ.  ಅವಳು ವೀಣಾಪಾಣಿ.  ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.

ನಮ್ಮ ದೇಶದಲ್ಲಿ ಇರುವಷ್ಟು ಸಂಗೀತ ವಾದ್ಯಗಳು ಬೇರೆಲ್ಲೂ ಇಲ್ಲವೆನ್ನಬಹುದೇನೋ.. ಪ್ರತಿಯೊಂದು ವಾದ್ಯವೂ ತನ್ನದೇ ಆದ ಒಂದು ಆಕಾರ, ರಚನೆ ಮತ್ತು ಧ್ವನಿಯನ್ನು ಹೊಂದಿದೆ ಮತ್ತು ವಿಶಿಷ್ಟವಾಗಿದೆ.  ಶಾಸ್ತ್ರದಲ್ಲಿ ಈ ವಾದ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ.  ಅವುಗಳು :
೧) ತತ (ತಂತೀವಾದ್ಯಗಳು)
೨) ಸುಷಿರ (ಗಾಳಿ ವಾದ್ಯಗಳು)
೩) ಅವನದ್ಧ (ತಾಡನ ವಾದ್ಯಗಳು)
೪) ಘನ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು)

 ವೀಣೆ ತತ ಅಂದರೆ ತಂತೀವಾದ್ಯಗಳ ಗುಂಪಿಗೆ ಸೇರುತ್ತದೆ.    ತಂತಿಗಳ ಮೂಲಕ ನಾದೋತ್ಪತ್ತಿಯಾಗುವ ವಾದ್ಯಗಳೇ ತತವಾದ್ಯಗಳು.  ತಂತೀ ವಾದ್ಯಗಳನ್ನು ಶ್ರುತಿ ವಾದ್ಯ ಮತ್ತು ಸಂಗೀತಾವಾದ್ಯಗಳೆಂದು ವಿಂಗಡಿಸಲಾಗಿದೆ.  ಗಾಯನ ಅಥವಾ ವಾದನಗಳಲ್ಲಿ ಶ್ರುತಿಗಾಗಿ ಉಪಯೋಗಿಸಲ್ಪಡುವುದು  "ತಂಬೂರಿ" ಮತ್ತು ಸಂಗೀತವನ್ನು ಗಾಯನಕ್ಕೆ ಬದಲಾಗಿ ವಾದ್ಯದಲ್ಲಿ ಹೊಮ್ಮಿಸಲು ಉಪಯೋಗಿಸಲ್ಪಡುವುದು "ವೀಣೆ".  ವೀಣೆ ಋಗ್ವೇದದಲ್ಲಿ ಮತ್ತು ಯಜುರ್ವೇದದಲ್ಲಿ ಕೂಡ  ಪ್ರಸ್ತಾಪಿಸಲ್ಪಟ್ಟಿದೆಯಂತೆ.   ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣವಿರಬಹುದು ಏಕೆಂದರೆ "ರುದ್ರವೀಣೆ" ಎಂದು ಕೂಡ ವಿಶಿಷ್ಟವಾದ ಒಂದು ವೀಣೆ ಇದೆ.  ದೇವಿ ಸರಸ್ವತಿಯಲ್ಲದೆ ವಿಶ್ವಾವಸು, ತುಂಬುರು ಮತ್ತು ನಾರದರು ಕೂಡ ವೈಣಿಕರೇ ಮತ್ತು ತುಂಬುರರ ವೀಣೆಯ ಹೆಸರು "ಕಲಾವತೀ" ಎಂದೂ, ವಿಶ್ವಾವಸುವಿನ ವೀಣೆಯ ಹೆಸರು "ಬೃಹತೀ" ಎಂದೂ ಮತ್ತು ನಾರದರ ವೀಣೆಯ ಹೆಸರು "ಮಹತಿ" ಎಂದೂ ನಮಗೆ ಪುರಾಣಗಳಿಂದ ತಿಳಿದುಬರುತ್ತದೆ.  ವೀಣೆ ಮೋಕ್ಷ ಸಾಧನೆಗೆ ಸುಲಭವಾದ ಹಾದಿ ಎಂದು ಯಾಜ್ಞವಲ್ಕ್ಯರು ತಮ್ಮ ಸ್ಮೃತಿಯಲ್ಲಿ ಹೇಳಿದ್ದಾರೆ.  ನಾವು ರಾವಣನ ಕಥೆಯಲ್ಲಿ ಕೂಡ ಕೇಳಿದ್ದೇವೆ - ವೀಣೆಯ ತಂತಿಯೊಂದು ಕಿತ್ತು ಹೋದಾಗ ತನ್ನ ದೇಹದ ಒಂದು ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮುಂದುವರೆಸಿದನೆಂದು.

ವೀಣೆ ಈಗಿರುವ ಸ್ವರೂಪಕ್ಕೆ ಬರುವ ಮೊದಲು ಅನೇಕ ಬದಲಾವಣೆಗಳನ್ನು ಹೊಂದಿದ್ದಾಗಿರಬಹುದು.  ಕಾಳಿದಾಸನ ’ಶ್ಯಾಮಲಾ ದಂಡಕ’ದಲ್ಲಿ  "ಮಾಣಿಕ್ಯವೀಣಾಂ ಉಪಲಾಲಯಂತೀಂ " ಎನ್ನುತ್ತಾ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ.  ಹಾಗೇ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು "ಘೋಷವತೀ" ಎಂಬ ವೀಣೆಯನ್ನು ನುಡಿಸಿದ್ದನೆಂದು ಕೂಡ ಉಲ್ಲೇಖವಿದೆ.  ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಯ ಅನುಗ್ರಹದಿಂದ ಕಾಶಿಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ "ರಾಮ" ಎಂದು ಕೆತ್ತಲ್ಪಟ್ಟಿದೆಯಂತೆ.  ಹೀಗೆ ವೀಣೆಯ ಇತಿಹಾಸ ತುಂಬಾ ಹಿಂದಿನದೆಂಬ ಮಾತು ನಮಗೆ ಅರ್ಥವಾಗುತ್ತದೆ.

ವೀಣೆಯ ವಿವರಣೆಯೆಂದರೆ ಒಂದು ಚಿಕ್ಕ ಹಾಗೂ ಒಂದು ದೊಡ್ಡ ಬುರುಡೆಗಳಿರುತ್ತವೆ.  ದೊಡ್ಡ ಬುರುಡೆಯನ್ನು  ಕೊಡ  ಎಂದು ಕರೆಯುತ್ತಾರೆ.  ಬಲಗಡೆಗೆ ಇರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಹಲಸಿನ ಮರದಿಂದ ಮಾಡುತ್ತಾರೆ.  ಇದರ ತಯಾರಿ ಕೂಡ ಅನೇಕ ತಿಂಗಳುಗಳ ಕೆಲಸವಾಗುತ್ತದೆ.  ಹಲಸಿನ ಮರವನ್ನು ನೀರಿನಲ್ಲಿ ನೆನೆಸಿಟ್ಟು ಬೇಕಾದ ಆಕಾರಕ್ಕೆ ಕೊರೆದು, ಕತ್ತರಿಸಿ ಹಗುರ ಮಾಡಿ ಕೊಡವನ್ನು ತಯಾರಿಸುತ್ತಾರೆ.  ಕೊಡ ಹಗುರವಾಗಿದ್ದಷ್ಟೂ ನಾದ ಚೆನ್ನಾಗಿ ತುಂಬುತ್ತದೆಂಬ ನಂಬಿಕೆಯಿದೆ.  ಹೀಗೆ ತಯಾರಿಸಿದ ಕೊಡವನ್ನು ಇನ್ನೊಂದು ಮರದ ಹಾಳೆಯಿಂದ ಮುಚ್ಚಿರುತ್ತಾರೆ. ಅದಕ್ಕೆ ದಂಡಿಯನ್ನು ಜೋಡಿಸುತ್ತಾರೆ.  ಅದರ ಎಡತುದಿ ಭೂಮಿಯ ಕಡೆಗೆ ಬಗ್ಗಿರುತ್ತದೆ ಮತ್ತು ಇದಕ್ಕೆ ಇನ್ನೊಂದು ಪುಟ್ಟ ಕೊಡದಂತಹ ಬುರುಡೆಯನ್ನು ಜೋಡಿಸಿರುತ್ತಾರೆ.  ಈ ರೀತಿಯ ವೀಣೆ ಮೊಟ್ಟ ಮೊದಲು ತಂಜಾವೂರಿನಲ್ಲಿ ತಯಾರಾದುದರಿಂದ ಇಂತಹ ವೀಣೆಗೆ "ತಂಜಾವೂರು ವೀಣೆ" ಎನ್ನುತ್ತಾರೆ.  ಎಡಗಡೆಗೆ ಜೋಡಿಸಿರುವ ಪುಟ್ಟ ಕೊಡದಂತಹದು ಸೋರೆಬುರುಡೆ ಅಥವಾ ಕಾಗದದ ಬುರುಡೆ, ಪಿತ್ ಅಥವಾ ರಾಳದ ಬುರುಡೆ, ತಗಡಿನ ಬುರುಡೆಯೂ ಆಗಿರಬಹುದು.  ದಂಡಿಯ ಮೇಲ್ಭಾಗಕ್ಕೆ ದೋಣಿ ಪಟ್ಟಿಯನ್ನು ಅಂಟಿಸಿರುತ್ತಾರೆ ಮತ್ತು ಈ ದೋಣಿ ಪಟ್ಟಿಯ ಮೇಲೆ ಉದ್ದಕ್ಕೂ ಎರಡೂ ಕಡೆಗಳಲ್ಲೂ ಹದ ಮಾಡಿದ ಮೇಣದಿಂದ ಜಗಲಿಗಳನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಆಯಾಯಾ ಸ್ವರ ಸ್ಥಾನಗಳಿಗೆ ಅನುಗುಣವಾಗಿ ನೆಡುತ್ತಾರೆ.  ಮೇಣಕ್ಕೆ ಇದ್ದಿಲನ್ನು ನುಣ್ಣಗೆ ಪುಡಿಮಾಡಿ ಬೆರೆಸಿ, ಕಲಸಿ, ಬೆಂಕಿಯಲ್ಲಿ ಕಾಯಿಸಿ ಗೊತ್ತಾದ ಹದಕ್ಕೆ ತಂದು ಕಟ್ಟಬೇಕು.  ಇದರ ಮೇಲೆ ಮೆಟ್ಟಿಲುಗಳನ್ನು ನೆಡುವಾಗ ನಿಶ್ಯಬ್ದತೆ ಇರಬೇಕು.  ಕೂದಲೆಳೆಯಷ್ಟು ವ್ಯತ್ಯಾಸವಾದರೂ ಅಪಸ್ವರ ಬರುತ್ತದೆ.  ಇದಕ್ಕೆ ವೀಣೆಮೇಳ ಕಟ್ಟುವುದು ಎಂದೇ ಕರೆಯುತ್ತಾರೆ.  ಈ ಮೆಟ್ಟಿಲುಗಳ ಮೇಲೆ ವೀಣೆಯ ಕೊಡದ ಮೇಲೆ ಅಂಟಿಸಿದ "ಕುದುರೆ" (ಮರದ ತುಂಡು) ಮೂಲಕ ಹಾದು ನಾಲ್ಕು ತಂತಿಗಳು ಬರುತ್ತವೆ.  ಕುದುರೆಯ ಎತ್ತರ ಮತ್ತು ಮೇಣದ ಎತ್ತರ ಎರಡೂ ಸಮವಾಗಿದ್ದಾಗ ಮಾತ್ರ ಸುಲಲಿತವಾದ ನಾದ ಹೊರಹೊಮ್ಮುತ್ತದೆ.  ನಾಲ್ಕು ತಂತಿಗಳಲ್ಲಿ ಮೊದಲನೆಯದು "ಸಾರಣಿ", ಎರಡನೆಯದು "ಪಂಚಮ", ಮೂರನೆಯದು "ಮಂದ್ರ", ನಾಲ್ಕನೆಯದು "ಅನುಮಂದ್ರ" ಎಂದು ಕರೆಯುತ್ತಾರೆ.  ಇದಲ್ಲದೆ ಕುದುರೆಯ ಪಕ್ಕದಲ್ಲಿ ಬಾಗಿದ ಒಂದು ಹಿತ್ತಾಳೆಯ ರೇಕು ಜೋಡಿಸಿರುತ್ತಾರೆ.  ಇದರ ಮೂಲಕ ಮೂರು ತಾಳದ ತಂತಿಗಳು ಹಾದು ಹೋಗುತ್ತವೆ.  ಅವುಗಳು ಕ್ರಮವಾಗಿ ಮಧ್ಯ ಷಡ್ಜ, ಮಧ್ಯ ಪಂಚಮ ಮತ್ತು ತಾರ ಷಡ್ಜಗಳು.  ವೀಣೆಯ ಎಲ್ಲಾ ಏಳು ತಂತಿಗಳೂ ಎಡಗಡೆಯ ಪುಟ್ಟ ಬುರುಡೆಯ ಕಡೆಗೆ ಹಾದು ಬರುತ್ತವೆ ಮತ್ತು ಒಂದೊಂದು ತಂತಿಯೂ ಒಂದೊಂದು ಬಿರಟೆಯಿಂದ ಕಟ್ಟಲ್ಪಟ್ಟು, ಹೆಚ್ಚಿಗೆ ಇರುವ ತಂತಿ ಅದಕ್ಕೆ ಸುತ್ತಿ ಭದ್ರಪಡಿಸಲ್ಪಟ್ಟಿರುತ್ತದೆ.  ವೀಣೆ ಶ್ರುತಿ ಮಾಡುವಾಗ ಈ ಬಿರಟೆಗಳನ್ನು ಬಿಗಿ ಮತ್ತು ಸಡಿಲು ಮಾಡುವ ಮುಖಾಂತರ ಬೇಕಾದ ಬಿಂದುವಿನಲ್ಲಿ ಸ್ವರ ಕೂಡಿಸಲು ಅನುಕೂಲವಾಗುತ್ತದೆ.

ಮೂರು ಪ್ರತ್ಯೇಕ ಭಾಗಗಳಾದ ಕಾಯಿ, ದಂಡಿ ಮತ್ತು ತಲೆ ಉಳ್ಳ ವೀಣೆಗೆ ’ಖಂಡ ವೀಣೆ’ ಎಂದು ಹೆಸರು.  ಮೂರೂ ಭಾಗಗಳೂ ಏಕವಾಗಿ ಒಂದೇ ಮರದಲ್ಲಿ ಮಾಡಲ್ಪಡುವ ವೀಣೆಗೆ ’ಅಖಂಡ ವೀಣೆ’ ಎಂದು ಹೆಸರು.  ಅಖಂಡ ವೀಣೆಯ ನಾದ ಹೆಚ್ಚು ಮಧುರವಾಗಿರುತ್ತದೆನ್ನುತ್ತಾರೆ.  ವೆಂಕಟಮುಖಿಯವರು  ಉಲ್ಲೇಖಿಸಿರುವ ಮೂರು ವಿಧ ವೀಣೆಗಳಾದ ’ಶುದ್ಧ ಮೇಳ ವೀಣೆ’, ’ಮಧ್ಯಮ ಮೇಳ ವೀಣೆ’ ಮತ್ತು ’ರಘುನಾಥ ಮೇಳ ವೀಣೆ’ ಗಳಲ್ಲಿ ತಂತಿಗಳು ಮೇಲೆ ಹೇಳಿದಂತಿಲ್ಲದೆ ಬೇರೆಯೇ ಕ್ರಮದಲ್ಲಿವೆ ಮತ್ತು ಅವುಗಳನ್ನು ಶ್ರುತಿ ಮಾಡುವ ರೀತಿಯೂ ಬೇರೆಯೇ ಆಗಿವೆ.  ಮೆಟ್ಟಿಲುಗಳ ಜೋಡಣೆಯ ಕ್ರಮದಲ್ಲೂ ಸ್ವಲ್ಪ ವ್ಯತ್ಯಾಸ ಬರುತ್ತದೆ.

ವೀಣೆಯ ಪುಟ್ಟ ಸೋರೆಯ ಬುರುಡೆಯನ್ನು ನುಡಿಸುವವರ ಎಡ ತೊಡೆಯ ಮೇಲಿಟ್ಟುಕೊಳ್ಳುತ್ತಾರೆ, ದೊಡ್ಡ ಕೊಡ ಅಥವಾ ಬುರುಡೆಯನ್ನು ಬಲತೊಡೆಗೆ ತಗುಲುವಂತೆ ಇಟ್ಟುಕೊಂಡು ಕುಳಿತು, ಬಲಗೈನಿಂದ ಮೊದಲನೆಯ ತಂತಿ ಸಾರಣಿಯನ್ನು ತರ್ಜನಿ ಹಾಗೂ ಮಧ್ಯದ ಬೆರಳುಗಳಿಂದ ಮೀಟುತ್ತಾ, ಎಡಗೈಯನ್ನು ಮೇಣದಲ್ಲಿ ಕಟ್ಟಿರುವ ಮೆಟ್ಟಿಲುಗಳ ಮೇಲೆ ಒತ್ತುತ್ತಾ ನಾದ ಹೊಮ್ಮಿಸುತ್ತಾರೆ.  ಬಲಗೈನ ಕಿರು ಬೆರಳಿನಿಂದ ತಾಳದ ತಂತಿಗಳನ್ನು ಬೇಕಾದ ಕಡೆ ತಾಳ ಹಾಕಲು ಉಪಯೋಗಿಸುತ್ತಾರೆ.  ವೀಣೆ ಗಮಕಕ್ಕೆ ತುಂಬಾ ಸೂಕ್ತವಾದ ವಾದ್ಯ.  ಗಾಯನದಲ್ಲಿ ಸಾಧ್ಯವಾಗದೇ ಇರುವ ಸ್ವರಪ್ರಕ್ತಿಯು ಸಹಜವಾಗಿ ತಂತೀವಾದ್ಯವಾದ ವೀಣೆಯಲ್ಲಿ ಅತ್ಯದ್ಭುತವಾಗಿ ಉತ್ಪತ್ತಿ ಮಾಡಬಹುದು.  ವೀಣೆಯ ಮೆಟ್ಟುಗಳ ಮೇಲೆ ಹಾಯುವ ತಂತಿಗಳಲ್ಲಿ ಪ್ರಧಾನ ತಂತಿಯಾದ ಸಾರಣಿ, ಮಂದ್ರ ಪಂಚಮ ಮತ್ತು ಮಂದ್ರ ಷಡ್ಜ ತಂತಿಗಳ ಮೇಲೆ ಸಂವಾದಿ, ಅನುವಾದಿ ಸ್ವರ ರಂಜನೆಗೆ ಆಸ್ಪದವೀಯುವ ಸ್ವರಗಳ ಮೆಟ್ಟಿಲುಗಳನ್ನು ಎಡಗೈ ಬೆರಳುಗನ್ನದುಮಿ ಬಲಗೈ ಬೆರಳಿನ ಒಂದೇ ಒಂದು ಮೀಟಿನಿಂದ ಮೂರೂ ಸ್ವರಗಳನ್ನೂ ಉತ್ಪತ್ತಿ ಮಾಡುವುದೇ ಈ "ಗಮಕ"ದ ತಂತ್ರ.

ಐತರೇಯೋಪನಿಷತ್ತಿನಲ್ಲಿ ನಮ್ಮ ದೇಹವನ್ನು ವೀಣೆಯೆಂದು ಉಲ್ಲೇಖಿಸಿದ್ದಾರೆ....

ಅಥ ಖಲ್ವಿಯಂ ದೈವೀವೀಣಾ ಭವತಿ |  ತದನುಕೃತಿರಸೌ ಮಾನುಷೀ ವೀಣಾ ಭವತಿ |   
ಯಥಾಸ್ಯಾ: ಶಿರ ಏವಮಮುಷ್ಯಾ: ಶಿರ: |
ಯಥಾಸ್ಯಾ ಉದರಮೇವಮಮುಷ್ಯಾ ಅಂಭಣಮ್ | ಯಥಾಸ್ಯೈ ಜಿಹ್ವಾ - ಏವಮಮುಷ್ಯೈ ವಾದನಮ್ |
ಯಥಾಸ್ಯಾಸ್ತಂತ್ರಯ ಏವಮಮುಷ್ಯಾ ಅಂಗುಲಯ: | ಯಥಾಸ್ಯಾ: ಸ್ವರಾ ಏವಮಮುಷ್ಯಾ: ಸ್ವರಾ: ||
 
ಈ ದೇಹವೊಂದು ದೈವೀವೀಣೆ.  ಮನುಷ್ಯರು ನಿರ್ಮಿಸಿದ ಮರದ ವೀಣೆ ದೇವರು ನಿರ್ಮಿಸಿದ ಈ ದೇಹವೀಣೆಯದೇ ಅನುಕರಣೆ.  ದೇಹಕ್ಕೆ ತಲೆಯಿದ್ದಂತೆ ಮರದ ವೀಣೆಗೆ ಪುಟ್ಟ ಬುರುಡೆ ಇದೆ, ದೇಹದ ಉದರ ಹಾಗೂ ಪೀಠವಿದ್ದಂತೆ ವೀಣೆಗೆ ಕೊಡ ಅಥವಾ ದೊಡ್ಡ ಬುರುಡೆಯಿದೆ.  ಬೆನ್ನುಹುರಿಯು ಉದ್ದಕ್ಕೆ ದೇಹದಲ್ಲಿ  ಪೀಠದಿಂದ ಕಂಠದವರೆಗೆ ಪಸರಿಸಿ ಪೀಠವನ್ನು ಮತ್ತು ದೇಹದ ಕೆಳಗಿನ ಭಾಗದ ಸಂಪರ್ಕವನ್ನು ತಲೆಗೆ ಮುಟ್ಟಿಸಿದೆಯೋ ಹಾಗೆ ವೀಣೆಯಲ್ಲಿ ಮರದ ದೋಣಿ ಕೊಡವನ್ನು ಪುಟ್ಟ ಬುರುಡೆಗೆ ಸೇರಿಸಿದೆ.  ಬೆನ್ನುಹುರಿಯಲ್ಲಿರುವಂತೆಯೇ ಈ ದೋಣಿಯ ಮೇಲೆ ಮೇಣವನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಸ್ವರಸ್ಥಾನಗಳಾಗಿ ಜೋಡಿಸಿರುತ್ತಾರೆ.  ದೇಹದ ವೀಣೆಗೆ ನಾಲಿಗೆ ಹೇಗೆ ಸ್ವರ / ನಾದವನ್ನು ಉತ್ಪತ್ತಿ ಮಾಡುವುದೋ ಹಾಗೆ ವೀಣೆಯ ಮೇಲೆ ವಾದಕನ ಬೆರಳುಗಳು ನಾದವನ್ನು ಸೃಷ್ಟಿಸುತ್ತವೆ.  ದೇಹಕ್ಕೆ ನರಗಳೇ ತಂತಿಗಳು.  ನಾದ ಮೈತುಂಬಿದಾಗ, ನರ ನರವೂ ನಾದದ ಅಲೆಯಲ್ಲಿ ತೇಲಿಹೋಗುವುದು.  ಹಾಗೇ ವೀಣೆಯ ತಂತಿಗಳೂ, ವಾದಕನ ಬೆರಳುಗಳು ತಂತಿಯ ಮೇಲೆ ಆಟವಾಡಿದಾಗ, ಅಲೆ ಅಲೆಯಾಗಿ ನಾದ ವೀಣೆಯ ಕೊಡದಿಂದ ಚಿಮ್ಮುತ್ತದೆ.  ದೇಹವೆಂಬ ದೈವೀವೀಣೆ ದೇವರ ಗುಣಗಾನಕ್ಕೇ ಮೀಸಲಾದ ವೀಣೆ.  ಈ ದೇಹ ವೀಣೆಗೆ ನಮ್ಮ ಕೈಗಳೇ ತಾಳವಾದ್ಯ.  ಕೈ ತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆಯಿಂದ ಭಗವಂತನ ಸ್ಮರಣೆಯನ್ನು ನುಡಿಸಬೇಕು. 

ವೀಣೆ ದೈವೀಕವಾದರೂ ನಮ್ಮ ಜೀವನದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.  ಬೇರೆ ಎಲ್ಲಾ ವಾದ್ಯಗಳಿಗಿಂತಲೂ ವೀಣೆ ವಾದಕನ ಮನಸ್ಸಿನ ಭಾವಗಳನ್ನು ಅತ್ಯಂತ ನವಿರಾಗಿ ಬಿಂಬಿಸುತ್ತದೆ ಎನಿಸುತ್ತದೆ.  ವೀಣೆ ಅಭ್ಯಾಸ ಮಾಡುವಾಗ ಮನಸ್ಸು ಪ್ರಶಾಂತವಾಗುತ್ತದೆ.  ತಂತಿಗಳ ಮೇಲೆ ಮೆಲ್ಲಗೆ ಬೆರಳಾಡಿಸಿದಾಗ ಝುಮ್ಮೆನ್ನುವ ನಾದ ನಮ್ಮ ನರನಾಡಿಗಳಲ್ಲೂ ಪ್ರವಹಿಸಲಾರಂಭಿಸುತ್ತದೆ.  ವಾದಕನ ಹೃದಯಕ್ಕೆ ಹತ್ತಿರವಾಗಿ ನಾದ ಮಿಡಿಯುವ ವೀಣೆ ಅತ್ಯಂತ ಆಪ್ತವಾಗುತ್ತದೆ.  ಅದೊಂದು ವಾದ್ಯವೆಂಬ ಅಂಶ ಮರೆತುಹೋಗಿ ಜೀವದ ಗೆಳತಿಯಾಗಿಬಿಡುತ್ತದೆ.  ನಮ್ಮ ಭಾವನೆಗಳನ್ನು ಅರಳಿಸ ತೊಡಗುತ್ತದೆ.  ಹೊರ ಹೊಮ್ಮುವ ನಾದ ನಮ್ಮೊಡನೆ ಮಾತನಾಡಾಲಾರಂಭಿಸುತ್ತದೆ.  ಎಡಕೈ ಬೆರಳುಗಳು ತಂತಿಯ ಮೇಲೆ ಸ್ವಲ್ಪವೇ ಒತ್ತಡದಿಂದ ಚಲಿಸಲಾರಂಭಿಸಿದೊಡನೇ ನಮ್ಮೊಳಗಿನ ಭಾವನೆಗಳ ಪ್ರಪಂಚ ಅನಾವರಣಗೊಳ್ಳುತ್ತಾ ಎಲ್ಲೆಲ್ಲೂ ನಾದವೇ ತುಂಬಿರುವ ಅನುಭವ ಕೊಡುತ್ತದೆ.  ನಡುನಡುವೆ ತಾಳದ ತಂತಿಗಳನ್ನು ಮೀಟುವಾಗ ಮಂದ್ರ ಹಾಗೂ ತಾರದಲ್ಲಿ ’ಸ’ ಮತ್ತು ಮಧ್ಯಮದಲ್ಲಿ ’ಪ’ ಮಿಶ್ರವಾಗಿ ಗೆಜ್ಜೆಯ ಘಲ್ ಘಲ್ ಶಬ್ದ ಕೇಳಿಸುವಂತಾಗುತ್ತದೆ.  ವೀಣೆಯ ಪುಟ್ಟ ಬುರುಡೆಯನ್ನು ವಾದಕ ತನ್ನ ಎಡ ತೊಡೆಯ ಮೇಲಿಟ್ಟುಕೊಂಡು ನುಡಿಸುವಾಗ, ಕಂಪನದಿಂದುಂಟಾಗುವ ನಾದ ನಮ್ಮ ಶರೀರದಲ್ಲೂ ದಿವ್ಯ ಕಂಪನದ ಅನುಭವ ಕೊಡುತ್ತದೆ.   ವಿಜಯಭಾಸ್ಕರ ಸಂಗೀತ ನೀಡಿರುವ, ಶ್ರೀಮತಿ ಬಿ ಕೆ ಸುಮಿತ್ರ ಅವರು ಹಾಡಿರುವ  ’ಕಲ್ಯಾಣಿ’ ಚಿತ್ರದ  "ವೀಣಾ.. ನಿನಗೇಕೋ ಈ ಕಂಪನ | ಮೃದುವಾಗಿ ನುಡಿ ಮುದವಾಗಿ ನುಡಿ | ರಾಗ ಸಂಮೋಹನ ||" ಹಾಡು ನುಡಿಸುವವರ ಮನದ ಭಾವನೆಗಳ ಜೊತೆ ಎಷ್ಟು ಸುಂದರವಾಗಿ ವೀಣೆಯ ತರಂಗಗಳು ಬೆಸೆದುಕೊಳ್ಳುತ್ತವೆನ್ನುವುದಕ್ಕೆ ಉತ್ತಮ ಉದಾಹರಣೆಯಾಗುತ್ತದೆ.  
http://www.raaga.com/play/?id=191059

ಒಮ್ಮೆ ಮೀಟಿದರೆ ಸಾಕು ನಾದಕ್ಕೆ ಮನಸೋಲುವಂತೆ ಮಾಡುವುದು ವೀಣೆ ಎಂಬ ಮಾತನ್ನು ಈ ಹಾಡಿನಲ್ಲಿ "ನಿನ್ನಯ ನಾದಕೆ ಮೈಮನ ಒಲಿಸಿ" ಎಂದೂ,  ಭಾವನೆಗಳ ಹೊಸ ಪ್ರಪಂಚದ ಅನಾವರಣವಾಗುತ್ತದೆ ಎಂಬ ಮಾತನ್ನು "ಭಾವತರಂಗದಿ ಲೋಕವ ಮರೆಸಿ" ಎಂದೂ ಹೇಳಿದ್ದಾರೆ.  ನಾದದೊಂದಿಗೆ ಮೈಮನ ತೇಲಿದಾಗಲೇ ನಡೆಯುವುದು ಸ್ವಚ್ಛ ಮನದಿಂದ ಭಗವಂತನ ಆರಾಧನೆ.

ಸರಸ್ವತಿ ದೇವಿಯನ್ನು ವೀಣಾಪಾಣಿ ವಿಶ್ವ ಕಲ್ಯಾಣಿ, ಗಾಯನ, ನರ್ತನ ನಂದ ಪ್ರದಾಯಿನಿ ಎನ್ನುತ್ತಾ,  ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ ಎನ್ನುತ್ತಾರೆ ಡಿವಿಜಿಯವರು.  ಸಂಗೀತ ಶಾಸ್ತ್ರದಲ್ಲಿ ಬರುವ ಆಹತ ಅನಾಹತದ ನೆನಪು ಮಾಡಿಕೊಡುತ್ತದೆ - ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ.  ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ.  ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ ಎಂದು ಸುಂದರವಾಗಿ ವರ್ಣಿಸಿದ್ದಾರೆ ಡಿವಿಜಿಯವರು ತಮ್ಮ ಅಂತಃಪುರ ಗೀತೆ  ಸಂಕಲನದಲ್ಲಿರುವ "ವೀಣಾಪಾಣಿ ವಿಶ್ವ ಕಲ್ಯಾಣಿ ಗಾಯನ ನರ್ತನ ನಂದ ಪ್ರದಾಯಿನಿ".. ಎಂಬ ರಚನೆಯಲ್ಲಿ.  




ಶೃಂಗಾರ ರಸದ ಪ್ರಚೋದನೆಗೆ ಕೂಡ ವೀಣೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸಿದ್ದಾರೆ ಕವಿ ಶ್ರೀ ಸಾ ಶಿ ಮರುಳಯ್ಯ.  ಅವರು ತಮ್ಮ  "ಶ್ರುತಿ ಸುಖ್ಹ ನಿನದೆ ಕಲರವ ವರದೇ.... ಓ ಗೆಳತಿ.. ಘೋಷವತಿ... || ಎಂಬ ರಚನೆಯಲ್ಲಿ ಉದಯನ ನುಡಿಸುತ್ತಿದ್ದನೆನ್ನಲಾದ ಘೋಷವತಿ ಎಂಬ ವೀಣೆಯನ್ನು ಕುರಿತು ಪ್ರಸ್ತಾಪಿಸಿದ್ದಾರೆ.





ಉದಯನ ಹೃದಯ ಮೋದ ತರಂಗಿಣಿ | ವಾಸವದತ್ತಾ ಪ್ರಣಯ ಪ್ರಚೋದಿನಿ |


ಕುಂಜರ ಭಂಜನಿ ಕುಮುದ ನಿರಂಜನಿ | ಮಂಗಳ ಪತಗಳ ಮಧುರ ಸುಭಾಷಿಣಿ ||


ಚಿಗುರಿನ ಬೆರಳಲಿ ತಂತಿಯ ಮೀಟಲು | ಷಡಜದ ಸವಿದನಿ ಜಿನುಗಿಸುವೆ |


ಪಂಚಮದಂಚಿಗೆ ನಾದದ ಬ್ರಹ್ಮಕೆ | ವೀಣಾಮಣಿ ನೀ ಕುಣಿಯಿಸುವೆ ||


ಪ್ರದ್ಯೋತ್ತೋನ್ನತ ಪ್ರಥಮ ಪ್ರಭಾತಕೆ | ಧೃತಗತಿಯಲಿ ನೀ ಸಂಚಲಿಸಿ |


ರಾಗಿಣಿ ಭಾಮಿನಿ ಪ್ರೇಮೋನ್ಮಾದಿನಿ | ಮಧುಕರ ಮಿಲನಕೆ ನೆರವಾಗೇ ||  




ನುಡಿಸುವ ಉದಯನನ ಹೃದಯದ ತರಂಗಿಣಿ, ರಾಗಿಣಿ, ಭಾಮಿನಿ, ಪ್ರೇಮೋನ್ಮಾದಿನಿ ಎಂದೆಲ್ಲಾ ವರ್ಣಿಸುತ್ತಾ ಚಿಗುರಿನ ಬೆರಳುಗಳು ತಂತಿಯ ಮೀಟಿದಾಗ ಷಡ್ಜದ ಸವಿದನಿಯಿಂದ ಪಂಚಮದ ಪ್ರೇಮನಾದವನ್ನು ಹೊರಡಿಸುತ್ತಾ,  ಹೃದಯದಲ್ಲಿ ಸುಖದ ಕಲ್ಪನೆಯ ತರಂಗಗಳನ್ನು ಮೀಟಿ ಎಚ್ಚರಿಸುತ್ತಾ ಮಧುಕರ ಮಿಲನಕ್ಕೆ ನೆರವಾಗೇ ಎಂದು ನುಡಿದಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ 


ಆಧಾರ ಪುಸ್ತಕಗಳು : ಕರ್ನಾಟಕ ಸಂಗೀತದ ಪಠ್ಯ ಪುಸ್ತಕ  
"ವೀಣೆ" - ರಾಜಶ್ರೀ (ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಾಶನ)


Wednesday, September 19, 2012

ಮೂಲಾಧಾರ ಚಕ್ರದಲ್ಲಿ ಗಣಪ



ನಮ್ಮ ಭಾರತೀಯ ಪರಂಪರೆಯಲ್ಲಿ ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ ಮೊದಲ ಪೂಜೆ ಸ್ವೀಕರಿಸುವವನು ವಿಘ್ನ ನಿವಾರಕನಾದ ವಿಘ್ನೇಶ್ವರನು.   ಗಣಪತಿ, ಬೆನಕ, ಮೋದಕಪ್ರಿಯ, ಲಂಬೋಧರ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಡುವವನು.  ಗಣೇಶ ನಮ್ಮ ಭಾರತದಲ್ಲಿ ಮಾತ್ರವೇ ಅಲ್ಲದೇ ಇಡೀ ಪ್ರಪಂಚದಲ್ಲೇ ಪ್ರಸಿದ್ಧನಾದವನು.  ಪಾರ್ವತಿ ಪುತ್ರನಾಗಿ ಉದ್ಭವಿಸಿದವನು.  ತಾಯಿ ಪಾರ್ವತಿ ಬಾಗಿಲಿನಲ್ಲಿ ಕಾವಲಿಗೆ ನಿಲ್ಲಿಸಿದ್ದಳು ಎಂದು ಪುರಾಣ ಕಥೆಗಳಲ್ಲಿ ತಿಳಿಸಲ್ಪಟ್ಟಿದೆ.  ಅದರ ಅರ್ಥ ಗಣೇಶ ನಮ್ಮನ್ನು ಕಾಪಾಡುವವನು, ರಕ್ಷಿಸುವವನು, ನಮ್ಮೆಲ್ಲಾ ಕಷ್ಟಗಳನ್ನೂ ನಿವಾರಿಸುವವನು ಎಂದಾಗುತ್ತದೆ.  ಗಣಪತಿ ಅತೀ ಬುದ್ಧಿಶಾಲಿ ಮತ್ತು ಸೂಕ್ಷ್ಮ ತರಂಗಗಳನ್ನು ಸೃಷ್ಟಿಸುವವನು.  ಆನೆಗಳು ವಾತಾವರಣದಲ್ಲಿರುವ ಅತೀ ಸೂಕ್ಷ್ಮವಾದ ಶಬ್ದ  ತರಂಗಗಳನ್ನು ಗ್ರಹಿಸಬಲ್ಲದು.  ಮುಂದಾಗುವ ಅಪಾಯದ ಸೂಚನೆಯನ್ನು ಬೇರೆಲ್ಲಾ ಪ್ರಾಣಿಗಳಿಗಿಂತಲೂ ಮೊದಲೇ ಗ್ರಹಿಸುವ ಶಕ್ತಿಯುಳ್ಳದ್ದು.  ಆನೆಯ ಮೊಗದವನಾದ ಗಣೇಶ ಕೂಡ ಹೀಗೆ ಮುಂಬರುವ ನಮ್ಮೆಲ್ಲಾ ಅಪಾಯಗಳನ್ನೂ ಗ್ರಹಿಸಿ ನಮ್ಮನ್ನು ಪೊರೆಯುವನೆಂಬ ನಂಬಿಕೆ ನಮ್ಮಲ್ಲಿ ತುಂಬಾ ಆಳವಾಗಿ ನೆಲೆಸಿದೆ. 


ಗಣಪತಿಯನ್ನು ವಿಘ್ನನಿವಾರಕನೆಂದು ಪ್ರಥಮವಾಗಿ ಪೂಜಿಸುತ್ತೇವೆ.  ನಾವು ಮಾಡುವ ಯಾವುದೇ ಕಾರ್ಯದಲ್ಲಾಗಲೀ ವಿಘ್ನಗಳು ಬಾರದಂತೆ ತಡೆಯುತ್ತಾನೆಂಬ ನಂಬಿಕೆ.  ಆದ್ದರಿಂದಲೇ ಅವನು "ಪ್ರಥಮ ಪೂಜಿತ ಪ್ರಮಥಾದಿ ವಂದಿಪ".  ಬೇರೆಲ್ಲಾ ದೇವತೆಗಳಿಗಿಂತಲೂ ವಿಭಿನ್ನಾಕೃತಿ ಹೊಂದಿರುವ ಗಣಪ ನೋಡಿದ ಕೂಡಲೇ ಆತ್ಮೀಯತೆಯನ್ನು ಉಂಟುಮಾಡುತ್ತಾನೆ.  ಸುಲಭವಾಗಿ ಒಲಿಯಬಲ್ಲವ, ನಮ್ಮ ಕಷ್ಟಗಳನ್ನು ಅರ್ಥೈಸಿಕೊಳ್ಳಬಲ್ಲವ ಎಂಬ ಭಾವ ಪ್ರಕಟಿಸುತ್ತಾನೆ.

ಗಣಪತಿಯ ಆರಾಧನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.  ಪ್ರಾಚೀನ ಕಾಲದಿಂದಲೂ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ನಾವು ಗಣಪತಿಯ ವರ್ಣನೆ, ಆರಾಧನೆಯನ್ನು ಕಾಣಬಹುದು.  ನಮ್ಮ ಜನಪದ ಸಾಹಿತ್ಯದಲ್ಲೇ ಅತ್ಯಂತ ಮಧುರವಾದ  "ಶರಣು ಶರಣುವಯ್ಯ ಗಣನಾಯಕ | ನಮ್ಮ ಕರುಣದಿಂದಲಿ ಕಾಯೊ ಗಣನಾಯಕ | ಎಂಬ ಪದದಲ್ಲಿ ಗಣಪತಿಗೆ ಪ್ರಿಯವೆನ್ನಲಾದ ಭಕ್ಷ್ಯಗಳ ವಿವರಣೆಯೆಲ್ಲಾ ಕೊಟ್ಟಾದ ನಂತರ "ನಿಮ್ಮಲ ಮನದಲ್ಲಿ ಗಣನಾಯಕ | ನಿಮ್ಮ ಧ್ಯಾನವ ಮಾಡುವೆ ಗಣನಾಯಕ|" ಎನ್ನುತ್ತಾ ನಿಮ್ಮಲ ಮನದವನಾದ ದೇವನು ನಮಗೂ ನಿರ್ಮಲ ಚಿತ್ತವನ್ನು ಕರುಣಿಸುವವನು ಎಂದಿದ್ದಾರೆ.   ದಾಸ ಸಾಹಿತ್ಯದಲ್ಲಿ ಕೂಡ ನೂರಾರು ಕೀರ್ತನೆಗಳನ್ನು ವಿವಿಧ ದಾಸರುಗಳು ರಚಿಸಿರುವುದನ್ನು ನಾವು ಕಾಣುತ್ತೇವೆ.

ಶ್ರೀ ಶಂಕರಾಚಾರ್ಯರು ತಮ್ಮ "ಗಣೇಶ ಪಂಚಕ - ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ"ದಲ್ಲಿ ಸಾಧಕರಿಗೆ ಮೋಕ್ಷವನ್ನು ಕೊಡುವವನು ಮತ್ತು  "ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ" - ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿರುವಂತಹ ಸಾಧಕರು ಮತ್ತು ಯೋಗಿಗಳ ಹೃದಯದಲ್ಲಿ ನಿರಂತರವಾಗಿ ನೆಲೆಸಿರುವವನಾದ್ದರಿಂದ ಗಣೇಶನನ್ನು ಸದಾ ಧ್ಯಾನಿಸುತ್ತಿರಬೇಕು ಎಂದಿದ್ದಾರೆ.  ಇದಲ್ಲದೆ ಶ್ರೀ ಶಂಕರರ ಏಕಶ್ಲೋಕೀ ಗಣಪತಿ ಸ್ತೋತ್ರಮ್, ಶ್ರೀ ಗಣೇಶ ಭುಜಂಗ ಸ್ತೋತ್ರ ಮತ್ತು ಶ್ರೀ ಗಣೇಶ ಸ್ತೋತ್ರ ಮಾಲ ಎಂಬ ರಚನೆಗಳೂ ಪ್ರಚಲಿತದಲ್ಲಿವೆ.

ನಮ್ಮ ದೇಹದಲ್ಲಿರುವ ಏಳು ಚಕ್ರಗಳಲ್ಲಿ ಮೊದಲನೆಯದೂ, ಹಾಗೂ ಭೂಮಿ ತತ್ವಕ್ಕೆ ಹೊಂದಿಕೊಂಡಿರುವುದೂ  ಮೂಲಾಧಾರ ಚಕ್ರ.  ಏಳು ಚಕ್ರಗಳಿಗೂ ತಮ್ಮದೇ ಆದ ಬೇರೆ ಬೇರೆ ಬಣ್ಣಗಳಿವೆ ಮತ್ತು ಪ್ರತ್ಯೇಕ ಬೀಜಾಕ್ಷರಗಳಿವೆ.  ಮೂಲಾಧಾರ ಚಕ್ರವೇ ವಿಘ್ನೇಶ್ವರನ ನಿವಾಸ ಸ್ಥಾನ ಮತ್ತು ಗಣೇಶ ಆದಿಶಕ್ತಿಯ ಮಗನಾದ್ದರಿಂದ ಅವನು ಶಕ್ತಿದೇವಿಯ ಜೊತೆಗೆ ನಮ್ಮ ದೇಹದಲ್ಲಿನ ಎಲ್ಲಾ ಚಕ್ರಗಳನ್ನೂ ನೆಲೆಸಿದ್ದಾನೆಂಬ ನಂಬಿಕೆಯಿದೆ.   ಮೂಲಧಾರ ಚಕ್ರದ ಬೀಜಾಕ್ಷರ "ಲಂ" - ಲಂಬೋದರನ ಹೆಸರಿನ ಮೊದಲ ಅಕ್ಷರವೇ ಲಂ.  ಈ ಚಕ್ರದ ಬಣ್ಣ ಕೆಂಪು ಮತ್ತು ಅಧಿಪತಿ ಬುಧ.  ಬುಧ ಬುದ್ಧಿಯ ಸಂಕೇತನಾದ್ದರಿಂದ ಗಣಪತಿ ಕೂಡ ಜ್ಞಾನವನ್ನು ಕೊಡುವವನಾಗುತ್ತಾನೆ.  ಗಣೇಶನ ಪೂಜೆಯಲ್ಲಿ ಕೆಂಪು ಹೂವಿಗೆ ಪ್ರಾಧಾನ್ಯತೆ ಇದೆ. ಮೂಲಾಧಾರ ಚಕ್ರ ನಮ್ಮ ಭೌತಿಕ ಬದುಕಿಗೆ ಬಹಳ ಬಲವಾದ ಅಡಿಪಾಯ ಕೊಡುವುದು.  ಭೂಮಿತತ್ವದ ಈ ಮೂಲಾಧಾರ ಚಕ್ರವನ್ನು ವಿಕಸನಗೊಳಿಸಲು ಸತತವಾಗಿ "ಲಂ" ಬೀಜಾಕ್ಷರದ ಜಪಾನುಷ್ಠಾನ ಮಾಡಬೇಕು.  ಸದಾ ಲಂಬೋದರನನ್ನು ಧ್ಯಾನಿಸುವುದರ ಮೂಲಕ ನಾವು ಚಕ್ರ ಉದ್ದೀಪನಗೊಳಿಸಿಕೊಳ್ಳಬಹುದಾಗಿದೆ.   ಪೃಥ್ವಿ ತತ್ವದಲ್ಲಿ ನೆಲೆಸಿರುವುದರಿಂದಲೇ ಗಣಪತಿ ನಮಗೆ ಅತ್ಯಂತ ಆತ್ಮೀಯನಾಗುತ್ತಾನೆ.  ಗಣಪತಿಗೆ ಅಗ್ರ ಪೂಜೆ ಸಲ್ಲಿಸುವ ಕಾರಣವೂ ಇದೇ ಆಗಿದೆ ಮತ್ತು ಗಣಪತಿಯ ಆರಾಧನೆಯಿಂದ ನಮಗೆ ಜೀವನದಲ್ಲಿ ಧೃಡತೆ ಸಿಕ್ಕುತ್ತದೆ.  ನಮ್ಮ ಬದುಕಿನ ನೆಲೆ ಗಟ್ಟಿಯಾಗಿದ್ದಾಗ, ನಾವು ಜೀವನದಲ್ಲಿ ಮುಂದೆ ಉನ್ನತವಾದ ಧ್ಯೇಯಗಳನ್ನು ಪಾಲಿಸಲು, ಗುರಿ ತಲುಪಲು ಅನುಕೂಲವಾಗುತ್ತದೆ.  "ಗಂ" ಎಂಬ ಬೀಜ ಮಂತ್ರ ನಮ್ಮ ಅಂತರಂಗದ ಮೌನವನ್ನು ಸೂಚಿಸುತ್ತದೆ.  ಹಾಗೆಂದರೆ ನಮ್ಮೊಳಗೇ ಇರುವ ಆಂತರ್ಯದ ಮೌನವನ್ನು ನಾವು ಉದ್ದೀಪನಗೊಳಿಸಿಕೊಳ್ಳಬೇಕೆಂಬ ಮಾತನ್ನು "ಗಂ ಗಣಪತಿಯೇ ನಮಃ" ಎಂಬ ಮಂತ್ರ ಸ್ಪಷ್ಟ ಪಡಿಸುತ್ತದೆ.  ಮೂಲಾಧಾರ ಚಕ್ರದಲ್ಲಿ ಕುಳಿತಿರುವ ಗಣಪತಿ ತಾನೇ ಒಂದು ಮಗುವಾಗಿ ನಮಗೆ ಮಗುವಿನ ಮುಗ್ಧತೆಯನ್ನು ದಯಪಾಲಿಸುತ್ತಾನೆ.  ನಮ್ಮ ಸುತ್ತಲೂ ನಾವು ಕಟ್ಟಿಕೊಂಡಿರುವ ಭೌತಿಕ ಬಂಧನಗಳನ್ನು ಬಿಡಿಸಲು ಸಹಾಯ ಮಾಡುತ್ತಾನೆ.

ನಾವು ಗಣಪತಿಯ ಮುಂದೆ ತೆಂಗಿನಕಾಯಿಯನ್ನು ಅಪ್ಪಳಿಸುತ್ತೇವೆ, ಇದು ನಮ್ಮ "ಅಹಂ"ನ್ನು ಚೂರು ಚೂರಾಗಿ ನೆಲಕ್ಕೆ ಅಪ್ಪಳಿಸಿ, ಗಣೇಶನಿಗೆ ಸಂಪೂರ್ಣ ಶರಣಾಗತರಾಗುವ ಸೂಚನೆ.  ಯಾವಾಗ ನಾವು ನಮ್ಮ "ಅಹಂಸಂಪೂರ್ಣವಾಗಿ ತೊರೆಯುತ್ತೇವೆಯೋ ಆಗ ನಾವು ಮುಂದಿನ ಹಂತದ ಸಾಧನೆಗೆ ಅರ್ಹತೆ ಪಡೆಯುತ್ತೇವೆ.   ಎಲ್ಲಾ ಭಾವಗಳನ್ನೂ ಬಿಟ್ಟು, ನಿರ್ಮೋಹ ಭಾವದಿಂದ ನಾವು ಶರಣಾದಾಗಲೇ ನಮ್ಮ ಆಧ್ಯಾತ್ಮದ ಮುಗ್ಧ ಚೇತನದ ಅರಿವು ನಮಗಾಗುವುದು.  ಪ್ರತೀ ವರ್ಷವೂ ಗಣಪತಿಯ ಮೂರ್ತಿಯನ್ನು ತಂದು ಪೂಜಿಸಿ, ನೀರಿನಲ್ಲಿ ವಿಸರ್ಜಿಸಿ ಬಿಡುವುದರ ಅರ್ಥ, ನಮ್ಮ ಬದುಕೂ ಕೂಡ ಹೀಗೆ ಪಂಚಭೂತಗಳಿಂದ ಮಾಡಲ್ಪಟ್ಟಿದೆಯೆಂದೂ ಮತ್ತು ಒಂದು ದಿನ ಮತ್ತೆ ಅಲ್ಲಿಯೇ ಲೀನವಾಗಬೇಕೆಂದೂ ಅಶಾಶ್ವತವೆಂದೂ ಸ್ಪಷ್ಟಪಡಿಸುತ್ತದೆ.  ತನ್ನನ್ನೇ ತಾನು ನೀರಿನಲ್ಲಿ ಕರಗಿಸಿಕೊಂಡು ನಮಗೆ ತಾವರೆ ಎಲೆಯ ಮೇಲಿನ ನೀರಿನ ಹನಿಯಂತೆ ಬದುಕಬೇಕೆಂಬುದನ್ನು ಉಪದೇಶಿಸುತ್ತಿದ್ದಾನೆ ವಿನಾಯಕ.

ಕರ್ನಾಟಕ ಸಂಗೀತದಲ್ಲಿ ಕೂಡ ಶ್ರೀ ಗಣೇಶನ ಆರಾಧನೆ ವಾಗ್ಗೇಯಕಾರರುಗಳಿಂದ ಮಾಡಲ್ಪಟ್ಟಿದೆ.  ಸಂಗೀತ ಪಿತಾಮಹತ್ರಯರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಹಂಸಧ್ವನಿ ರಾಗದ "ವಾತಾಪಿ ಗಣಪತಿಂ ಭಜೇ" ಎಂಬ ಕೃತಿಯಲ್ಲಿ
"ಭೂತಾದಿ ಸಂಸೇವಿತ ಚರಣಂ |  ಭೂತ ಭೌತಿಕ ಪ್ರಪಂಚ ಭರಣಂ ||
ವೀತ ರಾಗಿಣಂ ವಿನುತ ಯೋಗಿನಂ | ವಿಶ್ವ ಕಾರಣಂ ವಿಘ್ನ ವಾರಣಂ" ||  - ಪಂಚ ಭೂತಾದಿಗಳಿಂದಲೂ ನಮಸ್ಕರಿಸಲ್ಪಟ್ಟ ಪಾದಂಗಳ ಹೊಂದಿರುವವನೂ, ಪ್ರಪಂಚವನ್ನು ಸಮಸ್ಥಿತಿಯಲ್ಲಿ ಇಟ್ಟಿರುವವನೂ, ಕಾಮ, ಕ್ರೋಧ, ರಾಗ ದ್ವೇಷಗಳನ್ನು ತ್ಯಜಿಸಿ, ವೈರಾಗ್ಯವನ್ನು ತಳೆದಿರುವ ಯೋಗಿಗಳಿಂದ ನಮಸ್ಕರಿಕೊಳ್ಳುವವನೂ, ಪ್ರಪಂಚಕ್ಕೆಲ್ಲ ಕಾರಣ ಭೂತನಾದವನು, ವಿಘ್ನಗಳನ್ನು ನಿವಾರಿಸುವವನೂ ಆದ ಗಣಪತಿಯನ್ನು ಸ್ಮರಿಸುತ್ತೇನೆ ಎನ್ನುತ್ತಾರೆ.  ಮುಂದುವರೆಯುತ್ತಾ ಕೃತಿಯ ಚರಣದಲ್ಲಿ
"ಪುರಾ ಕುಂಭಸಂಭವ ಮುನಿವರ ಪ್ರಪೂಜಿತಂ - ತ್ರಿಕೋಣ ಮಧ್ಯಗತಂ |
ಮುರಾರಿ ಪ್ರಮುಖಾದ್ಯುಪಾಸಿತಂ - ಮೂಲಾಧಾರ ಕ್ಷೇತ್ರಂ ಸ್ಥಿತಂ |
ಪರಾದಿ ಚತ್ವಾರಿ ವಾಗಾತ್ಮಕಂ - ಪ್ರಣವ ಸ್ವರೂಪ ವಕ್ರ ತುಂಡಂ |
ನಿರಂತರಂ ನಿಟಿಲ ಚಂದ್ರಖಂಡಂ - ನಿಜ ವಾಮಕರ - ವಿಧೃತೇಕ್ಷು ದಂಡಂ |
ಕರಾಂಬುಜ ಪಾಶ ಬೀಜಾಪೂರಂ - ಕಲುಷ ವಿದೂರಂ - ಭೂತಾಕಾರಂ |
ಹರಾದಿ ಗುರುಗುಹ ತೋಷಿತಬಿಂಬಂ - ಹಂಸಧ್ವನಿ ಭೂಷಿತ ಹೇರಂಬಂ" || - ಅನಾದಿ ಕಾಲದಿಂದಲೂ ಮುನಿ ಶ್ರೇಷ್ಠರಿಂದಲೂ, ಮುರಾರಿಯಂತಹ ಪ್ರಮುಖ ದೇವತೆಗಳಿಂದ ಉಪಾಸಿಸಲ್ಪಟ್ಟವನೂ, ಮೂಲಾಧಾರ ಚಕ್ರದಲ್ಲಿ ನೆಲೆಸಿರುವವನೂ, ಪರಾ-ಪಶ್ಯಂತಿ-ಮಧ್ಯಮಾ-ವೈಖರೀ ಎಂಬ ನಾಲ್ಕು ಮಾತುಗಳಿಂದ ಕೂಡಿದ "ಓಂ"ಕಾರ ಸ್ವರೂಪನೂ, ವಕ್ರತುಂಡನೂ, ಹಣೆಯಲ್ಲಿ ಚಂದ್ರನ ಗುರುತನ್ನು ಹೊಂದಿರುವವನೂ, ಕಬ್ಬಿನ ಕೋಲನ್ನು ಹಿಡಿದಿರುವವನೂ, ಮನಸ್ಸಿನ ಕಲ್ಮಷವನ್ನು ದೂರಮಾಡುವವನೂ, ಭೂತಕಾರನಾದ ಪರಮೇಶ್ವರನೇ ಮೊದಲಾದವರಿಂದ ವಂದಿಸಲ್ಪಡುವವನೂ ಸುಬ್ರಹ್ಮಣ್ಯನಿಂದ ಸಂತೋಷಿಸಲ್ಪಡುವವನೂ, ಹಂಸಧ್ವನಿ ರಾಗದ ಭೂಷಣನೂ ಆದ ಗಣಪತಿಯನ್ನು ಭಜಿಸುತ್ತೇನೆ ಎನ್ನುತ್ತಾರೆ. 

ಶ್ರೀ ದೀಕ್ಷಿತರು ತಮ್ಮ "ಶ್ರೀ" ರಾಗದ ಇನ್ನೊಂದು ಕೃತಿ "ಶ್ರೀ ಮೂಲಾಧಾರ ಚಕ್ರ ವಿನಾಯಕ | ಅಮೂಲ್ಯ ಪರಪ್ರದಾಯಕ || ಯಲ್ಲಿ ಪ್ರಾರಂಭದಲ್ಲೇ ಮೂಲಾಧಾರ ಚಕ್ರದಲ್ಲಿ ನೆಲೆಸಿರುವವನು ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ.  ಅಮೂಲ್ಯವಾದ ವರಗಳನ್ನು ಬೇಡಿದ ಭಕ್ತರಿಗೆ ಕರುಣಿಸುವವನು ಎನ್ನುತ್ತಾ "ಮೂಲಜ್ಞಾನ ಶೋಕ ವಿನಾಶಕ | ಮೂಲಕಂದ ಮುಕ್ತಿಪ್ರದಾಯಕ || - ಭಕ್ತರ ದುಃಖ ಮತ್ತು ಅಜ್ಞಾನವನ್ನು ಹೋಗಲಾಡಿಸುವವನು, ಸಂಪೂರ್ಣ ಶರಣಾಗತರಾದವರಿಗೆ ಮುಕ್ತಿಯನ್ನು ಕರುಣಿಸುವವನು ಎಂದು ಸ್ತುತಿಮಾಡುತ್ತಾರೆ.

ಯೋಗಶಾಸ್ತ್ರದ ಪ್ರಕಾರ ಮೂಲಾಧಾರ ಚಕ್ರದಲ್ಲಿರುವ ಶಕ್ತಿ ದೇವತೆಯನ್ನು ಜಾಗೃತಿಗೊಳಿಸುವುದಕ್ಕೆ ನಾವು ಮೂಲವಾಗಿ ಗಣಪತಿಯನ್ನೇ ಆರಾಧಿಸ ಬೇಕೆಂಬ ಮಾತು ನಿಶ್ಚಿತವಾಗಿ ಹೇಳಲ್ಪಡುತ್ತದೆ.  ವಿಭಿನ್ನವಾದ ಆಕಾರ, ಅಗಾಧವಾದ ಆಕೃತಿಯ, ಆನೆಯ ಮೊಗದ ವಿನಾಯಕ ನಾವು ನಮ್ಮ ಭೌತಿಕ ಶರೀರದ ಪ್ರಜ್ಞೆಯನ್ನು ಮೀರಿ ಭಗವತ್ತತ್ವದೆಡೆಗೆ ಸಾಗಬೇಕೆಂಬ ಸತ್ಯವನ್ನು ನಿಚ್ಚಳವಾಗಿ ತೋರಿಸುತ್ತಾನೆ.   ಹೆಚ್ಚು ಮಾತನಾಡದೆ, ಸೂಕ್ಷವಾಗಿ ಕಿವಿಗಳನ್ನು ಅಗಲವಾಗಿ ತೆರೆದಿಟ್ಟುಕೊಂಡು, ಪುಟ್ಟ ಪುಟ್ಟ ತೀಕ್ಷ್ಣ ಕಣ್ಣುಗಳಿಂದ ಎಲ್ಲವನ್ನೂ ಗ್ರಹಿಸಬೇಕು.  ವಿಷಯಾಸಕ್ತಿಗಳಿಗೆ, ಆಹಾರ ಸೇವನೆಗೆ ಎಲ್ಲಕ್ಕೂ ಒಂದು ಕಡಿವಾಣ ಹಾಕಿಕೊಂಡು ಹಿತ ಮಿತವಾಗಿ ಭಗವಂತನ ಪಾದದಲ್ಲಿ ಚಿತ್ತವನ್ನು ನೆಡಬೇಕೆಂದು ಬೋಧಿಸುವವನು ನಮ್ಮೆಲ್ಲರ ಪ್ರೀತಿಯ ಆರಾಧ್ಯ ದೈವ ಶ್ರೀ ಗಣೇಶ.

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಚಿತ್ರಕೃಪೆ : ಅಂತರ್ಜಾಲ