Sunday, July 12, 2009

ಗುರು

'ಗುರು ಪೂರ್ಣಿಮೆ’ ಈ ತಿಂಗಳ ೭ನೇ ತಾರೀಖು ಬರುತ್ತಿರುವುದರಿಂದ, ನಾನು ಗುರು ವಂದನೆ ಮಾಡಿ, ನನ್ನ ಮನದ ಮಾತುಗಳನ್ನು ದಾಖಲಿಸುವ ಕೆಲಸ ಶುರು ಮಾಡುತ್ತಿದ್ದೇನೆ.
’ಗುರು’ ಎನ್ನುವ ಶಬ್ದ ಎಲ್ಲರ ಜೀವನದಲ್ಲೂ ಅತಿ ಮುಖ್ಯವಾದದ್ದು. ಬರೀ ಶಬ್ದ ಮಾತ್ರವೇ ಅಲ್ಲ, ಗುರು ಎನ್ನುವ ವ್ಯಕ್ತಿಯೊಟ್ಟಿನ ನಮ್ಮ ಸಂಬಂಧವನ್ನು ನಾವು ಅವಲೋಕಿಸಿದಾಗ ಅದು ಎಷ್ಟು ವಿಶಾಲ, ಅದಕ್ಕೇ ಎಂದು ಸೀಮಿತವಾದ ವ್ಯಾಪ್ತಿಯೇ ಇಲ್ಲ ಮತ್ತು ಅದನ್ನು ಅರ್ಥೈಸಿದಷ್ಟೂ ನಿಗೂಡವಾಗಿ ಬಿಚ್ಚಿಕೊಳ್ಳುತ್ತಲೇ ಹೋಗುವ ಒಂದು ಚಿದಂಬರ ರಹಸ್ಯ ಎಂದು ತಿಳಿಯುತ್ತದೆ.

ನಾವು ಗುರುವನ್ನು ಬ್ರಹ್ಮ, ವಿಷ್ಣು ಮಹೇಶ್ವರರಿಗೆ, ಅಂದರೆ ತ್ರಿಮೂರ್ತಿಗಳಿಗೆ ಹೋಲಿಸುತ್ತೇವೆ. ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣರಾದ ತ್ರಿಮೂರ್ತಿಗಳಿಗೇಕೆ ಹೋಲಿಸುತ್ತೇವೆಂದರೆ, ನಮ್ಮ ಜೀವನಗಳಲ್ಲಿ ನಮ್ಮನ್ನು ಸೃಷ್ಟಿಸುವ, ಸ್ಥಿತಿಕಾಯುವ, ಲಯಕೊಡುವ ವ್ಯಕ್ತಿಯೇ "ಗುರು" . ನಾವು ಈ ಭೂಮಿಯಲ್ಲಿ ಜನಿಸಿದಾಗ, ನಮ್ಮನ್ನು ಇಂಥವರ ಮಕ್ಕಳೆಂದು, ನಮ್ಮನ್ನು ವ್ಯಕ್ತಿಯಾಗಿ ಗುರುತಿಸುವ ಹೆಸರಿನಿಂದ ಕರೆಯಲ್ಪಡುತ್ತೇವೆ. ಆದರೆ ಆ ನಮ್ಮ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ, ಅದನ್ನು ಪೋಷಿಸುವುದರಲ್ಲಿ, ಗುರುವಿನ ಪಾತ್ರವೇ ಮಹತ್ತರವಾದದ್ದು.

ಒಂದು ಶಿಶು ಗರ್ಭದಲ್ಲಿ ರೂಪು ತಳೆದಾಕ್ಷಣದಿಂದಲೇ ತಾಯಿ ಅದಕ್ಕೆ ಪ್ರಥಮ ಗುರುವಾಗುತ್ತಾಳೆ. ಆ ಶಿಶುವನ್ನು ನವ ಮಾಸಗಳು ಗರ್ಭದಲ್ಲಿ ಹೊರುವಾಗಲೇ ಅವಳು ಮಗುವಿನ ಜೊತೆ ಭಾವನಾತ್ಮಕ ಸಂಬಂಧವನ್ನೂ ಬೆಳೆಸಿಕೊಳ್ಳುತ್ತಾಳೆ. ಅಂದರೆ ಆ ಮೂಲಕ ಆ ಮಗುವಿಗೆ ಭಾವನೆಗಳನ್ನು ಬೆಳೆಸುತ್ತಾಳೆ / ಕಲಿಸುತ್ತಾಳೆ. ಆ ಮಗುವನ್ನು ಪ್ರೀತಿಸುವುದರ ಮೂಲಕ ಅದಕ್ಕೆ ಪ್ರೀತಿಸುವುದನ್ನು ಕಲಿಸುತ್ತಾಳೆ. ಭಾವನೆಗಳನ್ನು ಕಲಿಸುತ್ತಾಳೆ ಮತ್ತು ತನ್ನೆಲ್ಲಾ ಭಾವನೆಗಳನ್ನೂ ತೋರಿಸಲು ಕಲಿಸುತ್ತಾಳೆ. ಆದ್ದರಿಂದ ಎಲ್ಲರಿಗಿಂತ ಮೊದಲು ನಮಗೆ ಜನ್ಮ ಕೊಟ್ಟ ತಾಯಿಗೆ, ಪ್ರಥಮ ಗುರುವಿಗೆ ನನ್ನ ಅನಂತಾನಂತ ವಂದನೆಗಳು.

ಜನಿಸಿದ ನಂತರ ತಾಯಿಯ ಜೊತೆಗೆ ತಂದೆಯೂ ಗುರುವಿನ ಸ್ಥಾನ ಅಲಂಕರಿಸುತ್ತಾನೆ. ಮಗುವನ್ನು ತಂದೆ, ಅಕ್ಕರೆಯಿಂದ ಎತ್ತಿ, ತನ್ನ ಭುಜದ ಮೇಲೆ ಮಲಗಿಸಿಕೊಂಡಾಗ, ಮಗು ಅನುಭವಿಸುವ ಭದ್ರತೆ, ನಿರಾಳ ಎಲ್ಲಾ ಅಪಾರವಾದದ್ದು. ಮುಂದೆ ತಂದೆಯ ಕೈ ಹಿಡಿದು ನಡೆಯಲು ಕಲಿತು, ದೊಡ್ಡವನಾಗುತ್ತಾ ಆಗುತ್ತಾ, ತಂದೆಯನ್ನೇ ಅನುಕರಿಸುವುದನ್ನೂ ಕಲಿಯುತ್ತದೆ. ಪುಟ್ಟ ಮಕ್ಕಳ ದೃಷ್ಟಿಯಲ್ಲಿ, ಅಪ್ಪಂದಿರು ಯಾವಾಗಲೂ ಎಲ್ಲಾ ಗೊತ್ತಿರುವ, ಶಕ್ತಿವಂತ ಪುರುಷನಾಗಿರುತ್ತಾನೆ.

ಶಾಲೆಯಲ್ಲಿ ಸೇರಿದಾಕ್ಷಣದಿಂದ ಮಗುವಿಗೆ, ವಿದ್ಯೆ, ವಿನಯ, ನಡವಳಿಕೆ, ಜೀವನ ಎದುರಿಸುವ ಪರಿ, ಧೈರ್ಯ, ಕಲಿಸುವ ಗುರು ಸಿಗುತ್ತಾರೆ. ಗುರು ಬರೀ ವಿದ್ಯೆ ಕಲಿಸುವುದಕ್ಕೆ ಮಾತ್ರವೇ ಸೀಮಿತವಾಗಿರಬೇಕಿಲ್ಲ. ಮಕ್ಕಳಿಗೆ ಗುರು ಯಾವಾಗಲೂ ಆದರ್ಶ ಪುರುಷನ ರೂಪದಲ್ಲಿರುತ್ತಾರೆ. ಅನುಕರಣಾ ವ್ಯಕ್ತಿಯಾಗಿರುತ್ತಾರೆ. ಅಜ್ನಾನವೆಂಬ ಕತ್ತಲನ್ನು ಹೊಡೆದೋಡಿಸಿ, ಜ್ನಾನವೆಂಬ ದೀಪ ಬೆಳಗುವವನೇ ಗುರು. ನಮ್ಮ ಜೀವನದಲ್ಲಿ ಕತ್ತಲಾಗಿರುವ, ಮೂಢವಾಗಿರುವ, ಅಂದರೆ ನಾವು ನಮ್ಮ ಬುದ್ಧಿ ಹಾಗೂ ಮನಸ್ಸನ್ನು ಇಲ್ಲಿ ಕತ್ತಲೆಗೆ ಹೋಲಿಸಿಕೊಂಡರೆ, ಆ ಕತ್ತಲನ್ನು ಕರಗಿಸುವವನೇ ಗುರು ಎಂದಾಗುತ್ತದೆ. ಕತ್ತಲನ್ನು ಕರಗಿಸುವುದೆಂದರೇನು ? ನಾವು ಬೆಳಕಿನ ನಂದಾ ದೀಪ ಹಚ್ಚಿಟ್ಟರೆ, ಅಲ್ಲಿರುವ ಕತ್ತಲು ತಾನಾಗೇ ಕರಗತ್ತೆ. ಆ ಬೆಳಕು ಅಥವಾ ಜ್ಯೋತಿ ಅಂದರೆ ಜ್ನಾನವನ್ನು ಕೊಡುವವನೇ ಗುರು.

ಯಾರಿಗೂ ಸಾಟಿಯಿಲ್ಲದ, ಯಾರನ್ನೂ ಹೋಲದ, ಎಲ್ಲರಿಗಿಂತ ಅತ್ಯುನ್ನತ ಸ್ಥಾನ, ಗೌರವ ಪಡೆದವನೇ ಗುರು. ನಮ್ಮ ಅಂಧಕಾರ ಹೊಡೆದೋಡಿಸಿ, ಜ್ನಾನವೆಂಬ ಜ್ಯೋತಿ ಬೆಳಗು ಎಂದು ಪ್ರಾರ್ಥಿಸುತ್ತಾ ನಾನು ಈ ಗುರುವಂದನೆ ಮಾಡುತ್ತಿದ್ದೇನೆ. ನನಗೆ ಜೀವ ಕೊಟ್ಟು, ನನ್ನನ್ನು ಸಂರಕ್ಷಿಸಿದ, ನನ್ನ ತಾಯಿ-ತಂದೆಯರ ಪಾದಾರವಿಂದಗಳಿಗೆ ನನ್ನ ಮೊದಲ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿ, ಈ ತನಕ ನನ್ನ ಜೀವನದಲ್ಲಿ, ಒಂದೇ ಒಂದು ಅಕ್ಷರವನ್ನು ಕಲಿಸಿದವರಿಗೂ (ಒಂದಕ್ಷರಂ ಕಲಿಸಿದಾತಂ ಗುರು), ಇನ್ನೂ ಕಲಿಸುತ್ತಿರುವವರಿಗೂ, ನನ್ನ ಸಂಗೀತದ ಗುರುಗಳು ಶ್ರೀಮತಿ ಉಷಾರವರಿಗೂ, ನನ್ನ ಅನಂತಾನಂತ ನಮನಗಳನ್ನೂ, ಗುರು ಪೂರ್ಣಿಮೆಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಣ್ಣಿಗೆ ಕಾಣುವ ಗುರುಗಳ ಜೊತೆಗೆ ಅಸಂಖ್ಯ ಅಗೋಚರ ಗುರುಗಳೂ ಇದ್ದಾರೆ, ನಮ್ಮ ಸುತ್ತುಮುತ್ತಲಿನ ವಾತಾವರಣ, ಪ್ರಕೃತಿ, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಆತ್ಮಸಾಕ್ಷಿ ನಮ್ಮ ಜೀವನದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ನಮ್ಮ ಸುಪ್ತ ಮನಸ್ಸು, ಅನುಭವದ ದೆಸೆಯಿಂದ, ನಮ್ಮನ್ನು ಸದಾ ಸರಿಯಾದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿರುತ್ತದೆ. ಆ ನಮ್ಮ ಸುಪ್ತ ಮನಸ್ಸಿನ ಶಕ್ತಿ ಅಥವಾ ತಾಕತ್ತನ್ನು ಊಹಿಸಿಕೊಳ್ಳುವುದಾಗಲೀ, ಅಂದಾಜು ಮಾಡುವುದಾಗಲಿ, ನಮ್ಮ ಬುದ್ಧಿಗೆ ನಿಲುಕದ್ದು. ಇದೊಂದು ಪ್ರಚಂಡ ಬಲದ ತಾಕತ್ತು. ನಾವು ಆ ಅದಮ್ಯ ಚೇತನಕ್ಕೂ ಮತ್ತು ಆ ಭಗವಂತನಿಗೂ ವಂದಿಸುತ್ತಾ... ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ, ನನ್ನನ್ನು ಸತತವಾಗಿ ಜ್ನಾನದ ದಿಕ್ಕಿಗೆ ಕೈ ಹಿಡಿದು ನಡೆಸು, ದಾರಿ ತೋರೆಂದು ಕೇಳುತ್ತಾ............

" ಗುರುಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ:
ಗುರುರೇವ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮ:

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ
ತತ್ಪದಂ ದರ್ಶಿತಂ ಯೇನ ತಸ್ಮೈಶ್ರೀ ಗುರವೇ ನಮ:

ಅಜ್ನಾನತಿಮಿರಾಂಧಸ್ಯ ಜ್ನಾನಾಂಜನಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ:

ಬ್ರಹ್ಮಾನಂದಂ ಪರವಸುಖದಂ ಕೇವಲಂ ಜ್ನಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್

ಏಕಂ ನಿತ್ಯ ವಿಮಲಂ ಅಚಲಂ ಸರ್ವಧೀ ಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ

ಶ್ರೀ ಗುರುಭ್ಯೋ ನಮ: - ಹರಿ: ಓಂ....

1 comment:

  1. ತುಮ್ಬ ಚೆನ್ನಾಗಿ ಇದೆ!!!!!!!

    ReplyDelete