Tuesday, October 6, 2009

ಆನಂದ..ಬ್ರಹ್ಮಾನಂದ..ಪರಮಾನಂದ.. ಸಂಗೀತವೇ........

ಶ್ರೀ ಕೃಷ್ಣರಾಜೇಂದ್ರ ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜ ತನ್ನ ೪೧ನೇ ಸಂಗೀತ ಸಮ್ಮೇಳನವನ್ನು ಈ ತಿಂಗಳ ೪ನೇ ತಾರೀಖಿನಿಂದ ನಡೆಸುತ್ತಿದೆ. ಪ್ರತಿದಿನ ಬೆಳಿಗ್ಗೆ ವಿದ್ವತ್ ಘೋಷ್ಟಿಗಳು ನಡೆಯುತ್ತಿವೆ. ಸಂಜೆ ೪.೧೫ರಿಂದ ೫.೪೫ರವರೆಗೆ ಯುವ ಉದಯೋನ್ಮುಖ ಕಲಾವಿದರುಗಳ ಸಂಗೀತ ಕಛೇರಿಗಳು ನಡೆಯುತ್ತಿವೆ. ಸಾಯಂಕಾಲ ೬ ಘಂಟೆಯಿಂದ ರಾತ್ರಿ ೯ ಘಂಟೆಯವರೆಗೆ ಭವ್ಯ ಸಂಗೀತ ಕಛೇರಿಗಳು ನಡೆಯುತ್ತಿವೆ.

ನಿನ್ನೆ ೬ನೇ ತಾರೀಖು ಸಾಯಂಕಾಲ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಏರ್ಪಡಿಸಿದ್ದರು. ಸರಿಯಾಗಿ ೬ ಘಂಟೆಗೆ ಕಛೇರಿ ನಠಭೈರವಿ ರಾಗದ, ಅವರ ಸ್ವಂತ ರಚನೆಯಾದ ವರ್ಣದಿಂದ ಆರಂಭವಾಯಿತು. ಈ ವರ್ಣ ಈ ಕಛೇರಿಗೆಂದೇ ಮಾಡಿದ ಮತ್ತು ಅರ್ಪಿಸಲ್ಪಟ್ಟ ಕೃತಿ ಎಂದು ಶ್ರೀ ಪದ್ಮನಾಭನ್ ಹೇಳಿದರು. ಮುಂದುವರೆದು ಮಾಮವಸದಾವಂದೇ...... ಭಾವಯಾಚ್ಯುತಂ ವಾಸುದೇವಂ, ಪೂರ್ವಿ ಕಲ್ಯಾಣಿ ರಾಗದಲ್ಲಿ...... ಕೃತಿಗೆ ಸೊಗಸಾದ ನೆರವಲ್ ಹಾಡಿ, ಕಲ್ಪನಾ ಸ್ವರಗಳನ್ನು ಹಾಡಿದರು. ಕೃತಿ ಆರಂಭಿಸುವ ಮೊದಲು ಮಾಡಿದ ಪೂರ್ವಿ ಕಲ್ಯಾಣಿ ರಾಗದ ಆಲಾಪನೆ ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿತ್ತು.

ಇದರ ನಂತರ ಅವರು ಹಾಡಿದ್ದು ಚಪಲವಿರಬೇಕು... ನಮಗೆ ಗಾನ ಹೋಳಿಗೆ ತಿಂದು ತೇಗುವಂತಾ, ವೈಕುಂಠ ತೋರಿಸುವ ಗಾಯನ (ಗಾನದ) ಚಪಲವಿರಬೇಕು..... ಎಂಬ ಸ್ವಂತ ರಚನೆ ಹಾಡಿದರು. ಈ ಕೃತಿಯ ಸಾಹಿತ್ಯ ನನಗೆ ಬರೆದುಕೊಳ್ಳಲಾಗದಿದ್ದರೂ ಅದರ ಭಾವಾರ್ಥ ಮಾತ್ರ ನನ್ನನ್ನು ಆಶ್ಚರ್ಯಗೊಳಿಸಿತು. ಶ್ರೀ ಪದ್ಮನಾಭನ್ ರವರು ಈ ರಚನೆಯಲ್ಲಿ ಗಾನದ ಹೋಳಿಗೆ ತಿನ್ನಲು ಅನಿಲದ ಅಡಚಣೆಯಿಲ್ಲ, ಅನ್ನ ವರ್ಜ್ಯವಿಲ್ಲ.... ಎಂದು ಸೊಗಸಾಗಿ ಹಾಡುತ್ತಾ ಹೋದಂತೆ, ನಮಗೆ ಅರ್ಥ ತಿಳಿಯಾಗಿ ನಮ್ಮ ಮನಮುಟ್ಟುವಂತಾಯಿತು. ಒಟ್ಟಿನಲ್ಲಿ ಅವರು ಹೂರಣದ ಒಬ್ಬಟ್ಟನ್ನು ವರ್ಣಿಸುತ್ತಾ... ಒಳಗಿರುವ ಹೂರಣ ಸಂಗೀತದ ಸಾಹಿತ್ಯ.... ಹೋಳಿಗೆಯ ಬಣ್ಣವೇ ನಾವು ಹಾಡುವ ’ವರ್ಣ’.... ಸಕ್ಕರೆಯ ಒಬ್ಬಟ್ಟಿಗೆ ಮತ್ತೆ ಮೇಲೆ ಹಾಕಿಕೊಳ್ಳುವ ಸ್ವಲ್ಪ ಸಕ್ಕರೆಯೇ ಸಂಗೀತದ ಲಯ, ತಾಳ, ಭಾವ ಎಲ್ಲವನ್ನೂ ಹೋಳಿಗೆಗೆ ರುಚಿ ಹೆಚ್ಚಾಗಲು ಸೇರಿಸುವ ಕ್ಷೀರ (ಹಾಲು) ಮತ್ತು ಅಭಿಗಾರ (ತುಪ್ಪ) ಎಂದು ಮನತುಂಬಿ ಹಾಡುತ್ತಾ ಹೋದಂತೆ, ಕೇಳುವವರಿಗೆ ನಿಜವಾಗಲೂ ಹೋಳಿಗೆ ಸವಿದದ್ದಕ್ಕಿಂತ ಹೆಚ್ಚು ಆನಂದ ಉಂಟಾಯಿತು.

ಕಛೇರಿ ಮುಂದುವರೆಸುತ್ತಾ.. ಎಂತವೇಡುಕೊಂದೂ ರಾಘವಾ.....ಹಾಡಿದ ನಂತರ ಮತ್ತೊಂದು ಕೃತಿ ನನ್ನನ್ನು ಅತಿಯಾಗಿ ಸೆಳೆದಿದ್ದು ಅವರು ಹಾಡಿದ ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ.... ಎಂಬ ಸಾಹಿತ್ಯ. ಇದರ ಚರಣದಲ್ಲಿ ಅವರು ಹೇಳುತ್ತಾರೆ...
ದಾನ ಧರ್ಮ ಮಾಡಲಿಲ್ಲ.. ದಯಬುದ್ಧಿ ಹುಟ್ಟಲಿಲ್ಲ... ಜ್ಞಾನ ಅರಿತೂ ಹರಿ ಪೂಜೆ ಮಾಡಲಿಲ್ಲ... ಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ... ನಿರ್ಮಲ ಮನದಲ್ಲಿ ಒಂದೂ ದಿನವಿರಲಿಲ್ಲ... ಉಂಡು ಸುಖಿಯಲ್ಲ.. ಉಟ್ಟು ತೊಟ್ಟು ಹರಿನಾಮವಿಲ್ಲ... ದುಡ್ಡು ಕೊಟ್ಟು ಹರಿಸೇವೆ ಮಾಡಲಿಲ್ಲ... ಗುಂಡು ನಾಯಿಯಂತೆ ಮನೆ ಮನೆಗಳ ತಿರುಗಿ ಇದ್ದೆ... ಮೊಂಡು ಜೋಗಿಗಳ ಗುಣಗಳ ಬಿಡಿಸೋ ದಯವ ಮಾಡೋ.....

ಹಾಡಿ ಮುಗಿಸಿ ಮತ್ತೆ ದಾನ ಧರ್ಮ ಮಾಡಲಿಲ್ಲ ಎಂಬ ಕಡೆ ನೆರವೆಲ್ ಮಾಡಿದರು.. ನಂತರ ಹಾಡಿದ್ದೇ ಬಂಟುರೀತಿ ಕೊಲುವು ವಿಯವಯ್ಯ ರಾಮಾ...., ಇದರ ನಂತರ ಬಂದಿದ್ದು ಸರ್ವಕಾಲಕ್ಕೂ ಅತ್ಯಂತ ಜನಪ್ರಿಯವಾದ ದ್ವಿಜಾವಂತಿ ರಾಗದ ಅಖಿಲಾಂಡೇಶ್ವರಿ ರಕ್ಷಮಾಂ........ ಇದಾದ ಮೇಲೆ ಹಾಡಿದ್ದೇ ಕಛೇರಿಯ ವಿಶೇಷ ಘಟ್ಟ... ನಠ ಭೈರವಿಯ ರಾಗಾಲಾಪನೆ... ತಾನ... ಪಲ್ಲವಿ "ಆನಂದ.... ಬ್ರಹ್ಮಾನಂದ..... ಪರಮಾನಂದ.... ಸಂಗೀತವೇ.....". ಇದಂತೂ ನಿಜವಾಗಿ ಶ್ರೋತೃಗಳಿಗೆಲ್ಲಾ ಸಂಗೀತದ ಪರಮಾನಂದವನ್ನೇ ಉಣಬಡಿಸಿತು. ಶ್ರೀ ಪದ್ಮನಾಭನ್ ರವರ ಕಛೇರಿಗಳಲ್ಲಿ ಅವರು ಪ್ರಯೋಗಿಸುವ ಕಲ್ಪನಾ ಸ್ವರಗಳು, ಆಲಾಪನೆಗಳು, ನೆರವೆಲ್ ಮಾಡುವ ಹೊಸ ಹೊಸ ವಿಧಾನಗಳು ನಮ್ಮನ್ನು ಖಂಡಿತಾ ಸ್ವರ್ಗಕ್ಕೇ ಕರೆದುಕೊಂಡು ಹೋಗಿಬಿಡತ್ತೆ. ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಲೇ ಇರೋಣ ಎನ್ನಿಸುವಷ್ಟು ಅದ್ಭುತವಾಗಿರುತ್ತದೆ.

ನಂತರ ಹಾಡಿದ್ದು ಪಾರ್ಥಸಾರಥಿ ರುಕ್ಮಿಣೀಪತಿ.....ಸ್ವಯಂ ರಚನೆ ಮಾಡಿದ್ದು.... ಕೊನೆಯ ಘಟ್ಟ ಮುಟ್ಟಿದ್ದ ಈ ಸಾಯಂಕಾಲದ ಕಛೇರಿಗೆ ಶ್ರೀ ಪದ್ಮನಾಭರ್ ರವರು ಭಕ್ತಿಯ ಸಿಂಚನ ಲೇಪಿಸಿದ್ದು ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮವ್ರತಾಯಚ, ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೆ... ಎಂಬ ಗುರುರಾಯರ ಸ್ತುತಿಯನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಿದ್ದು.....

ಕಛೇರಿ ಮುಕ್ತಾಯದ ಹಂತ ತಲುಪುತ್ತಿದ್ದಂತೆ ನನ್ನೊಳಗಿನ ಚಡಪಡಿಕೆ ಮಿತಿ ಮೀರಿತ್ತು... ಯಾವ ತಿಲ್ಲಾನ ಹಾಡಿ ಮುಗಿಸುತ್ತಾರೆಂಬ ಕುತೂಹಲ.... ನೆನೆಸಿದ್ದಂತೆಯೇ.. ಸಿಂಧೂಭೈರವಿಯ ತಿಲ್ಲಾನ ಶುರು ಮಾಡಿದರು. ಮಧ್ಯದ ಸಾಹಿತ್ಯ ಕೂಡ ಅವರ ಸ್ವಂತ ರಚನೆಯೇ.... ಅವರು ತಿಲ್ಲಾನ ಹಾಡಿದ ವೇಗ ಯಾವ ಯುವ ಕಲಾವಿದನನ್ನೂ ಪೋಟಿಗೊಡ್ಡಬಹುದಾಗಿತ್ತು. ಮೂರು ಘಂಟೆಗಳ ಕಾಲ ಸುಶ್ರಾವ್ಯವಾಗಿ ಗಾನದ ಅಮೃತವನ್ನೇ ಸುರಿಸುವ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಎಷ್ಟು ಕೇಳಿದರೂ, ಇನ್ನೂ ಗಾನಾಮೃತಕ್ಕಾಗಿ ತಹತಹಿಸುವಂತೆ ಮಾಡುತ್ತದೆ. ಸಂಗೀತವನ್ನೇ ಜೀವ, ಸರ್ವಸ್ವವೆಂದುಕೊಂಡು, ಅದೊಂದು ಪೂಜೆಯೇನೋ ಎಂಬಂತೆ ಹಾಡುತ್ತಾ ಮೋಡಿ ಮಾಡುವ ಈ ಕಲಾವಿದರನ್ನು ಹೋಲಿಸಲು ಅಥವಾ ವರ್ಣಿಸಲು ನನಗೆ ಶಬ್ದ ಭಂಡಾರ ಸಾಲದು..... ಕಛೇರಿ ಮುಗಿಸಿ ಹೊರಗೆ ಬಂದರೆ, ಯಾವುದೋ ದಿವ್ಯವಾದ ಗಾನ ಲೋಕದಿಂದ ಧರೆಗಿಳಿದು ಬಂದಂತೆ ಅನ್ನಿಸುತ್ತದೆ.........

ಬೆಂಗಳೂರು ಗಾಯನ ಸಮಾಜ ಪ್ರತೀ ವರ್ಷ ನಡೆಸುವ ಈ ಸಮ್ಮೇಳನದಲ್ಲಿ ವಾರದ ದಿನಗಳು ಶ್ರೋತೃಗಳ ಹಾಜರಾತಿ ಸ್ವಲ್ಪ ಕಮ್ಮಿಯಾಗೇ ಇರತ್ತೆ. ಇಂಥಹ ಸತ್ಕಾರ್ಯ ಮಾಡುತ್ತಿರುವ ಒಂದು ಸಂಸ್ಥೆಯನ್ನು ನಾವು ಪ್ರೋತ್ಸಾಹಿಸಲೇ ಬೇಕು, ನಮ್ಮ ಅತ್ಯಮೂಲ್ಯವಾದ ಕರ್ನಾಟಕ ಸಂಗೀತವನ್ನು ಉಳಿಸಲೇ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಂಥಹ ಅಪರೂಪದ ಕಲಾವಿದರು ತಮ್ಮನ್ನೇ ಮರೆತು ಅಮೃತಧಾರೆಯನ್ನೇ ಹರಿಸುವಾಗ ನಾವು ಕನಿಷ್ಠ ಕೇಳಿಯಾದರೂ ನಮ್ಮ ಜನ್ಮ ಸಾರ್ಥಕ್ಯ ಪಡೆಯಬಹುದಲ್ವಾ?............

2 comments:

  1. tumbaa arthapoorna lekhana..... nammade sangeetavanna ulisona......

    ReplyDelete
  2. ನಮಸ್ಕಾರ ದಿನಕರ ಮೊಗೇರರಿಗೆ....
    ನನ್ನ ಬ್ಲಾಗ್ ಲೋಕಕ್ಕೆ ನಿಮಗೆ ಆದರದ ಸ್ವಾಗತ...... ಹೌದು ನಮ್ಮ ಸಂಗೀತವನ್ನು ನಾವೇ ಉಳಿಸಬೇಕು. ನಿಮಗೂ ಸಂಗೀತದಲ್ಲಿ ಆಸಕ್ತಿಯಿದೆಯೆಂದು ತಿಳಿದು ಸಂತೋಷವಾಯಿತು. ಹೀಗೇ ಬರುತ್ತಾಯಿರಿ.... ಧನ್ಯವಾದಗಳು.
    ಶ್ಯಾಮಲ

    ReplyDelete