Monday, February 8, 2010

ಪುಸ್ತಕ ಪರಿಚಯ - ೪

ತಾವರೆಯ ಕೊಳ....

ಸೂಕ್ಷ್ಮ ಸ್ವಭಾವದವಳಾದ ಶಾಂತಾಳಿಗೆ ಮಕ್ಕಳಿಲ್ಲ ಮತ್ತು ಮೈದುನ ರಮೇಶನ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ. MBBS ಓದುತ್ತಿದ ರಮೇಶ ಮತ್ತು ಅವನ ಪರಿವಾರದವರು ಮೆನಿಂಜೈಟಿಸ್ ಬಂದು ಆಸ್ಪತ್ರೆ ಸೇರಿದ ಶಾಂತಳನ್ನು ಕಳೆದುಕೊಳ್ಳುತ್ತಾರೆ. ಸಾವಿನ ಬಗ್ಗೆ ಬರೆದ ಎರಡು ವಾಕ್ಯ...."ಅಪಾರ ಬಂಧು ಬಳಗವನ್ನೂ, ತನ್ನ ಪ್ರೀತಿ ಪಾತ್ರರನ್ನೂ, ತನಗಿಂತಲೂ ವಯಸ್ಸಾದವರನ್ನೂ ತನಗಾಗಿ ಕಂಬನಿಗರೆಯಲು ಬಿಟ್ಟು ಶಾಂತ ಹೊರಟು ಹೋದಳು.." ನನ್ನನ್ನು ತಟ್ಟಿತು. ತ್ರಿವೇಣಿಯವರು ಬದುಕು ಮತ್ತು ಸಾವನ್ನು - ವಿಶ್ಲೇಶಿಸುತ್ತಾ, ಸಾವಿಗೆ ವಯಸ್ಸು, ಬಳಗ ಯಾವುದೂ ಬೇಡ, ಬರೀ ಜೀವ ಮಾತ್ರ ಸಾಕು ಮತ್ತು ಬದುಕು ಎನ್ನುವುದು ಎಷ್ಟೊಂದು ಅಶಾಶ್ವತವೆಂದಿದ್ದಾರೆ...

ಶಾಂತ ಸತ್ತ ತಕ್ಷಣ "ಮುತ್ತೈದೆ ಸಾವು ಪುಣ್ಯ ಮಾಡಿದ್ದಳು" ಎಂದು ಮುತ್ತೈದೆಯಲ್ಲದ ಹೆಂಗಸೊಬ್ಬಳು ನುಡಿದಾಗ ಲೇಖಕಿ ಶಾಂತಳ ಗಂಡ ರಾಮಣ್ಣನ ಮೂಲಕ "ಜೀವನದಲ್ಲಿ ಏನನ್ನೂ ಕಾಣದೆ ಕಣ್ಣು ಮುಚ್ಚುವ ಮುತ್ತೈದೆ ಸಾವೆಂತದು"? ಎಂದು ಅರ್ಥಪೂರ್ಣವಾಗಿ ಹೇಳುತ್ತಾರೆ....

ಶಾಂತಳ ಸಾವಿನಿಂದ ಕುಗ್ಗಿ ಹೋಗಿದ್ದ ರಮೇಶನನ್ನು ಮುಂಬಯಿಗೆ ಹವಾಬದಲಾವಣೆಗಾಗಿ ಕಳುಹಿಸುತ್ತಾರೆ. ಅಲ್ಲಿ ರಾಮಣ್ಣನ ಗೆಳೆಯ ಶೇಷಾದ್ರಿಯ ಹೆಂಡತಿ, ಮಗುವಿನ ತಾಯಿ, ರತ್ನಳಲ್ಲಿ ಅನುರಕ್ತನಾಗುತ್ತಾನೆ ರಮೇಶ. ಅವಳು ಸ್ನೇಹಿತನ ಮಡದಿ, ತನಗೆ ದಕ್ಕುವವಳಲ್ಲವೆಂದು ಗೊತ್ತಿದ್ದೂ ಉತ್ಕಟವಾಗಿ ಪ್ರೇಮಿಸುತ್ತಾನೆ. ಅವನು ತನ್ನನ್ನು ಬಿಟ್ಟು ವ್ಯಾಸಂಗ ಮುಗಿಸಿ ವೈದ್ಯನಾಗಬೇಕೆಂದು ರತ್ನ ಹೇಳುತ್ತಾಳೆ. ಈ ಪ್ರೇಮ, ಈ ಹಗರಣ ಮುಂದೊಂದು ದಿನ ನಿಮ್ಮ ಪಾಲಿಗೆ ಅರ್ಥವಿಲ್ಲದಿದ್ದಾಗಿ ತೋರುತ್ತದೆಂದು ತಿಳಿ ಹೇಳುತ್ತಾಳೆ. ರತ್ನಳ ಮಗು ಆರೋಗ್ಯ ತಪ್ಪಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ರಮೇಶನೊಳಗಿನ ವೈದ್ಯನಾಗುವ ಬಯಕೆ ಮತ್ತೆ ಚಿಗುರೊಡೆಯುತ್ತದೆ. ಕೊನೆಗೂ ರತ್ನಳನ್ನು ಬಿಟ್ಟು ವಾಪಸ್ಸು ಊರಿಗೆ ಹೊರಡುವ ತಯಾರಿ ನಡೆಸುತ್ತಾನೆ ರಮೇಶ. ಇಲ್ಲಿಯತನಕ ಅತ್ಯಂತ ಸಂಯಮ ತೋರಿದ್ದ ರತ್ನ ಅಸಹಾಯಕಳಾಗಿ ದುರ್ಬಲಳಾಗಿ ರಮೇಶನ ಮುಂದೆ ನಿಂತಿರುತ್ತಾಳೆ. ನಾವು ಯಾರೊಡನೆಯೂ ತುಂಬಾ ಸ್ನೇಹ, ವಿಶ್ವಾಸ ಇಟ್ಟುಕೋಬಾರದು.... ಬಾಂಧವ್ಯವೂ ಬೇಡ, ವಿರಹವೂ ಬೇಡ... ಎಂಬಂತಹ ಮಾತುಗಳನ್ನಾಡುತ್ತಾಳೆ....

ಮದುವೆಗೆ ಮುಂಚೆ ಪ್ರತಿಯೊಬ್ಬ ಹುಡುಗ ಹುಡುಗಿಯೂ ತನ್ನ ಭಾವಿಪತ್ನಿಯ ಬಗ್ಗೆ, ಜೀವನದ ಬಗ್ಗೆ, ನಾನಾ ರೀತಿಯ ಕನಸುಗಳನ್ನು ಕಟ್ಟಿರುತ್ತಾರೆ. ನೆಲೆಯಿಲ್ಲದ ಹಾರಾಡುವ ಚಂಚಲ ಚಿಟ್ಟೆಯಾಗಿರುತ್ತದೆ ಆಗ ಮನಸ್ಸು. ಮದುವೆಯಾದ ಮೇಲೆ ಮನಸ್ಸಿಗೆ ನೆಲೆ ಸಿಕ್ಕುತ್ತದೆ. ಆಗ ನಮಗೆ ಹಿಂದಿನ ಅನುಭವವೆಲ್ಲಾ ಕೇವಲ ಹುಚ್ಚಾಟ ಎನಿಸುತ್ತದೆ.... ಲೇಖಕಿ ಜೀವನದಲ್ಲಿ ಮನಸ್ಸಿಗೆ ನೆಲೆಸಿಗುವುದೆಂದರೆ ಅದು "ಮದುವೆ"ಯಿಂದ ಮಾತ್ರವೇ ಎನ್ನುತ್ತಾರೆ.... ಪ್ರೇಮ ಸ್ಥಿರವಲ್ಲ, ಪ್ರೇಮ ಚಿರವಲ್ಲ, ಹೂವಿನಿಂದ ಹೂವಿಗೆ ಹಾರುವ ಭ್ರಮರಕ್ಕೂ, ಪ್ರೇಮಕ್ಕೂ ವ್ಯತ್ಯಾಸವಿಲ್ಲ. ಕ್ಷಣಿಕ ಕಾಲ ಮಾತ್ರ ಮನಸ್ಸನ್ನು ಮುತ್ತಿ ಭ್ರಾಂತಿಗೀಡುಮಾಡುವ ಒಂದು ದೌರ್ಬಲ್ಯಕ್ಕೆ ಪ್ರೇಮ ಎನ್ನುತ್ತಾರೆ ಲೇಖಕಿ.

ಈ ಕಥೆಗೆ ಸಂಬಂಧ ಪಟ್ಟಂತೆ ತ್ರಿವೇಣಿಯವರು ಹಾಗೆ ಹೇಳಿರಬಹುದೆಂದು ಕೊಂಡರೂ ಕೂಡ, ನನ್ನ ಮನಸ್ಸು ಪ್ರೇಮ ಒಂದು ದೌರ್ಬಲ್ಯವೆಂದು ಒಪ್ಪಿಕೊಳ್ಳುವುದಿಲ್ಲ. ಪ್ರೇಮ ಖಂಡಿತಾ ಚಿರವಾಗಿರತ್ತೆ. ಪ್ರೇಮಿಸಿ ಮದುವೆಯಾದವರು ನಂತರ ಬದುಕಿನಲ್ಲಿ ಏನೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂದು ಕೊಂಡರೂ, ಇಬ್ಬರ ನಡುವೆ ಸ್ವಲ್ಪವಾದರು ಆ ಪ್ರೇಮ ಎನ್ನುವುದಿಲ್ಲದಿದ್ದರೆ, ಜೊತೆಗೆ ಬಾಳುವುದು ಕಠಿಣ ಕೆಲಸವಾಗಿ ಬಿಡುತ್ತದೆ. ಹೊಂದಾಣಿಕೆ ಬದುಕಿನೊಂದಿಗಾಗುತ್ತದೆಯೇ ಹೊರತು ಪ್ರೇಮದೊಂದಿಗಲ್ಲವೆಂದು ನನ್ನ ಅಭಿಪ್ರಾಯ.....

13 comments:

  1. ತ್ರಿವೇಣಿಯವರ ಕಾದಂಬರಿ ಓದಲೆಬೇಕಿನಿಸಿದೆ,
    ತುಂಬಾ ಚೆನ್ನಾಗಿ ಹೇಳಿದ್ದಿರಿ
    ಹೆಣ್ಣಿನ ಬದುಕಿನ ಸುತ್ತ ಕಥೆ ಹೆಣೆಯುವುದರಲ್ಲಿ ತ್ರಿವೇಣಿ ಸಿದ್ದ ಹಸ್ತರು

    ReplyDelete
  2. ವಿವರಣೆ ಚೆನ್ನಾಗಿದೆ....ಧನ್ಯವಾದಗಳು

    ReplyDelete
  3. ಶ್ಯಾಮಲ ಮೇಡಮ್,

    ತ್ರಿವೇಣಿಯವರ ಈ ಕಾದಂಬರಿ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಆಗ ನಾನು ಗ್ರಂಥಾಲಯಗಳಲ್ಲಿ ಬೇರೇನೋ ಹುಡುಕುತ್ತಿದ್ದಾಗ ಇದು ಸಿಗುತ್ತಿತ್ತು. ತೆಗೆದುಕೊಳ್ಳುತ್ತಿರಲಿಲ್ಲ. ಈಗ ಮತ್ತೆ ಸಿಕ್ಕಿದರೆ ಓದುವೆ.

    ReplyDelete
  4. ಡಾ ಗುರುಅವರೇ..
    ನೀವು ಸರಿಯಾಗಿ ಹೇಳಿದಿರಿ. ತ್ರಿವೇಣಿಯವರ ಕಾದಂಬರಿಗಳಲ್ಲಿ ಹೆಣ್ಣು ಮತ್ತು ಅವಳಿಗೆ ಸಂಬಂಧ ಪಟ್ಟಂತ ಸಾಮಾಜಿಕ ಸಮಸ್ಯೆಗಳೇ ಮುಖ್ಯ ವಿಷಯಗಳು. ಸಮಾಜದಲ್ಲಿ ಹೆಣ್ಣಿನ ಸ್ಥಾನ ಮಾನಗಳ ಬಗ್ಗೆ ಮತ್ತು ಅವಳ ಬದುಕಿನ ಬಗ್ಗೆ ತ್ರಿವೇಣಿಯವರು ಮನಮುಟ್ಟುವಂತೆ ಬರೆಯುತ್ತಿದ್ದರು. ಧನ್ಯವಾದಗಳು...


    ಸುಬ್ರಹ್ಮಣ್ಯ ಭಟ್ಟರಿಗೆ... ವಿವರಣೆ ಮೆಚ್ಚಿದ್ದಕ್ಕೆ ಧನ್ಯವಾದಗಳು...

    ReplyDelete
  5. ಶಿವು ಸಾರ್....
    ತ್ರಿವೇಣಿಯವರ ಕಾದಂಬರಿಗಳು ಸಿಕ್ಕರೆ ಖಂಡಿತಾ ಓದಿ. ಎಲ್ಲರಿಗೂ ಇಷ್ಟವಾಗುವಂತಹ ಶೈಲಿ ಅವರದು.
    YPE ನ ವರದಿಯಲ್ಲಿ ನಿಮ್ಮನ್ನು ನಾವು ’ಕಸ್ತೂರಿ’ ವಾರ್ತೆಯಲ್ಲಿ ನೋಡಿದೆವು..

    ReplyDelete
  6. ತ್ರಿವೇಣಿಯವರ ಬಗ್ಗೆ ಹೇಳುವುದು ತುಂಬಾ ಇದೆ, ಅವರ 'ಬೆಕ್ಕಿನ ಕಣ್ಣು' ಓದಿ ನಾನು ಹೆದರಿಬಿಟ್ಟಿದ್ದೆ, ವಿವರಣೆ ಚೆನ್ನಾಗಿ ಕೊಟ್ಟಿದ್ದೀರ, ಧನ್ಯವಾದಗಳು

    ReplyDelete
  7. ವಿ ಆರ್ ಭಟ್ ಸಾರ್...
    ನೀವು ಬೆಕ್ಕಿನ ಕಣ್ಣು ತುಂಬಾ ಚಿಕ್ಕವರಿದ್ದಾಗ ಓದಿರಬೇಕು... ನನಗೆ ಈಗ ಮತ್ತೆ ಓದಬೇಕೆನಿಸಿದೆ....ವಿವರಣೆ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ReplyDelete
  8. chikka0dinalli odidda taavare kola jnaapisidiri. Che0dada anisike.

    ReplyDelete
  9. ಧನ್ಯವಾದಗಳು ಸೀತಾರಾಮ ಸಾರ್......

    ReplyDelete
  10. dear mami...I read your review about the book and was impressed. I have hardly read any kannada novels and have been searching for love and romance in many Mills&Boon books,though they are a bit artificial. I shall definitely make an effort to searh for kannada novels and read them.As far as love is concerned what I feel is that many relationships have survived many hinderances because there is love in it..Love makes you compromise,makes you accept the other person as he/she is and want to make you work harder than you would in an arranged system,to make it an success..

    ReplyDelete
  11. ಪ್ರೀತಿಯ ಕ್ಷಮಾ...
    ಕನ್ನಡ ಸಾಹಿತ್ಯ ತುಂಬಾ ಶ್ರೀಮಂತವಾಗಿದೆ. ನಮ್ಮ ಲೇಖಕಿಯರಾದ ತ್ರಿವೇಣಿ, ಎಂ ಕೆ ಇಂದಿರಾ, ಅನುಪಮಾ ನಿರಂಜನ ಇಂಥವರ ಪುಸ್ತಕಗಳನ್ನು ಓದಿದರೆ ನಿಮಗೆ ಕನ್ನಡ ಸಾಹಿತ್ಯದ ಪರಿಚಯವಾಗುತ್ತದೆ. ನೀವು ಒಮ್ಮೆ ಓದಲು ಆರಂಭಿಸಿದರೆ, ಖಂಡಿತಾ ಮುಂದುವರೆಸುತ್ತೀರಿ... ನನ್ನ ಪುಸ್ತಕ ಪರಿಚಯದಿಂದ ನಿಮಗೆ ಕನ್ನಡ ಓದುವ ಆಸಕ್ತಿ ಬಂದರೆ, ನಾ ಬರೆದದ್ದು ಸಾರ್ಥಕವಾಗತ್ತೆ.... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕ್ಷಮಾ... ಹೀಗೇ ಬರುತ್ತಾ ಇರಿ ನನ್ನ ಅಂತರಂಗದ ಮಾತುಗಳನ್ನೋದಲು..

    ReplyDelete
  12. 'antharangadamatugalu' ಅವ್ರೆ ..,

    ಚಂದದ ವಿವರಣೆ.....

    ಹೌದು..!
    ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

    ReplyDelete
  13. ಮನಸಿನ ಮನೆಯ ಗುರು ಅವರೇ...
    ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ. ನಿಮ್ಮ ’ಮನಸಿನಮನೆ’ ಚೆನ್ನಾಗಿದೆ. ಮನೆ ಕಟ್ಟಲು ಈಗ ತಾನೇ ಆರಂಭಿಸಿದ್ದೀರಿ. ಸುಂದರವಾದ, ಅಂದದ ಅರಮನೆಯಾಗಲಿ ನಿಮ್ಮ ಮನಸಿನ ಮನೆ ಎಂದು ಹಾರೈಸುವೆ.... ಹೀಗೇ ಬರುತ್ತಿರಿ....

    ReplyDelete