Thursday, March 31, 2011

ಬೆಳಕಿನ ಮಿಂಚು :







ಅರಳಿದ್ದ ಸುಮವೊಂದು

ಬಾಡಿ ಮುದುಡಿತ್ತು....

ಮಲ್ಲಿಗೆಯ ಹಾರವು

ಬತ್ತಿ ಕಂದಾಗಿತ್ತು

ಅತ್ತು ಬಸವಳಿದ ಕೂಸು

ನನ್ನಪ್ಪಿ ಮಲಗಿತ್ತು

ಕೆಂದುಟಿಯ ಮೇಲಿದ್ದ

ಕೆಂಪು ಮಾಸಿತ್ತು...

ನಲುಗಿದ್ದ ನಾಸಿಕವು

ಕೆಂಡ ಸಂಪಿಗೆಯಾಗಿತ್ತು

ಪುಟ್ಟ ತೋಳುಗಳಲ್ಲಿ

ಕೊರಳನ್ನು ಬಳಸಿತ್ತು...

ಕೋಮಲ ಕೈಗಳ ಸ್ಪರ್ಶ

ಕುಡಿಯಂತೆ ಮೆದುವಿತ್ತು

ನಿದಿರೆಯಲಿ ಕನಸಿನಲಿ

ಉಮ್ಮಳಿಸಿ ಬಿಕ್ಕಿತ್ತು

ಮುಚ್ಚಿದ ಕಣ್ಣಾಲಿಯಲ್ಲಿ

ಹನಿಯು ಜಿನುಗುತಲಿತ್ತು

ಬೆಚ್ಚಿತ್ತು ಬೆದರಿತ್ತು

ಮಡಿಲಲ್ಲಿ ಹುದುಗಿತ್ತು

ಮೊಗದಲ್ಲಿ ಭಯವಿತ್ತು

ನನ್ನತ್ತ ನೋಡಿತ್ತು..

ತೋಳಿಂದ ಬಳಸುತ್ತ

ಕದಪುಗಳ ಚುಂಬಿಸುತ

ಅಕ್ಕರೆಯ ತೆಕ್ಕೆಯಲಿ

ಮೈಮನವ ಅರಳಿಸುತ

ಮುದುಡಿದ್ದ ಭಾವದಲಿ

ಮುದವನ್ನು ತುಂಬುತ್ತ

ಅಮೃತದ ಧಾರೆಯಲಿ

ಕಂದನಾ ಮೀಯಿಸಲು

ಹಸುಗೂಸ ಕಂಗಳಲಿ

ಬೆಳಕೊಂದು ಮಿಂಚಿತ್ತು

ವದನಾರವಿಂದದಲಿ

ಸಿಹಿ ನಗೆಯು ಚಿಮ್ಮಿತ್ತು

ತಬ್ಬುತ್ತ ಹಬ್ಬುತ್ತ

ಅನುರಾಗ ಹರಡುತ್ತ

ಸಾರ್ಥಕ್ಯ ಭಾವದಲಿ

ಜೀವಗಳು ಬೆರೆತಿತ್ತು...

ಪುಟ್ಟ ಕಂದ... ಅದೇನೋ ನೋಡಿ.. ಬೆದರಿ ತನ್ನ ಅಮ್ಮನನ್ನು ಹುಡುಕಿಕೊಂಡು ಅಡ್ಡಾ ದಿಡ್ಡಿಯಾಗಿ... ಏಳುತ್ತಾ... ಬೀಳುತ್ತಾ.... ಮೈ ಕೈಯೆಲ್ಲಾ ತರಚಿ ಗಾಯ ಮಾಡಿಕೊಂಡು ಓಡೋಡಿ ಬಂದಿದೆ... ತಾಯಿಯನ್ನು ಕಾಣದೆ.. ಕಂಗಾಲಾಗಿದೆ. ಕಣ್ಣಿಂದ ಧಾರೆಯಾಗಿ ಹರಿದ ನೀರು ಮುದ್ದು ಕಂದನ ಕೆನ್ನೆಯ ಮೇಲೆ ಕರೆಗಟ್ಟಿದೆ. ಮುದ್ದಾದ ಸುಂದರ ಮೊಗವು ಕಳೆಗುಂದಿ ಅರಳಿ ನಳನಳಿಸುತ್ತಿದ್ದ ಹೂವೊಂದು ಬಾಡಿ ಮುದುಡಿ ಸೊಪ್ಪಾಗಿ ಹೋದಂತಾಗಿದೆ. ಅಮ್ಮನಿಗಾಗಿ ಅತ್ತು ಅತ್ತು ಸುಸ್ತಾಗಿ ಬಸವಳಿದು.... ತಾಯಿಯನ್ನು ಕಂಡಾಕ್ಷಣ ನುಗ್ಗಿ ಬಂದು... ಬಿಗಿದಪ್ಪಿದೆ. ಕಂದನ ಅವಸ್ಥೆ ಕಂಡ ತಾಯಿ... ತುಂಬಾ ಕಳಕಳಿಯಿಂದ ಮಗುವನ್ನು ತೋಳಲ್ಲಿ ಮೃದುವಾಗಿ ಅಪ್ಪಿಕೊಂಡು... ತಲೆ ನೇವರಿಸಿ, ಕೈ ಕಾಲಿಗೆ ಅಂಟಿದ್ದ ಮಣ್ಣು.. ಧೂಳನ್ನೆಲ್ಲಾ ಉಟ್ಟಿದ್ದ ಸೀರೆಯಲ್ಲೇ ಒರೆಸಿ... ಕಂದನನ್ನು ತನ್ನ ಸೆರಗಿನಲ್ಲಿ ಮುಚ್ಚಿಕೊಂಡಾಗ... ಮಗು ಸೋತು ಹಾಗೆ ಅಮ್ಮನ ಕೊರಳು ಬಳಸಿ ನಿದ್ದೆ ಮಾಡಿತ್ತು. ಮಲಗಿದ್ದ ಮಗುವಿನ ಮುಖವನ್ನೇ ದಿಟ್ಟಿಸುತ್ತಾ ಆ ವಾತ್ಸಲ್ಯಮಯಿ ತಾಯಿ ಅಕ್ಕರೆಯಿಂದ ನಲುಗಿದ್ದ ಪುಟ್ಟ ಕೆಂಡ ಸಂಪಿಗೆಯಂತಹ ಮೂಗನ್ನೂ, ಬೆದರಿದಾಗ ಬಿಳುಚಿಕೊಂಡು ತನ್ನ ಸಹಜ ಕೆಂಪು ಬಣ್ಣ ಕಳೆದುಕೊಂಡ ಪುಟ್ಟ ತುಟಿಗಳನ್ನೂ, ಮುಖವನ್ನೂ... ತಣ್ಣನೆಯ ನೀರಿನಲ್ಲಿ ಅದ್ದಿದ್ದ ತನ್ನ ಸೀರೆಯ ಸೆರಗಿನಿಂದ ಒರೆಸಿದಳು. ಕೊರಳನ್ನು ಬಳಸಿದ್ದ ಮಲ್ಲಿಗೆಯ ಹಾರದಂತಿದ್ದ ಪುಟ್ಟ ತೋಳುಗಳನ್ನು ಮೆದುವಾಗಿ ನೇವರಿಸುತ್ತಾ... ಹಿತವಾಗಿ ಅಮುಕಿದಾಗ ... ತಾಯಿಯ ಅಕ್ಕರೆಯ ಸ್ಪರ್ಶ ಗುರುತಿಸಿತೋ ಎಂಬಂತೆ ಮಗು... ಮತ್ತಷ್ಟು ಒತ್ತಿಕೊಂಡು... ನಿದ್ದೆಯಲ್ಲೂ ಬಿಕ್ಕುತಲಿತ್ತು. ಮುಚ್ಚಿದ ನೀಳ ರೆಪ್ಪೆಗಳಡಿಯಿಂದ ಪನ್ನೀರ ಹನಿ ಜಿನುಗಿತ್ತು. ಉಕ್ಕಿ ಬಂದ ಮಮತೆಯಿಂದ ತಾಯಿ ಕಂದನನ್ನು ತನ್ನೊಳಗೇ ಹುದುಗಿಸಿಕೊಂಡು... ರಕ್ಷಿಸುವಂತೆ... ಕದಪುಗಳ ಮುದ್ದಿಸಿದಾಗ... ಕಂದನ ಮೊಗದಲ್ಲಿದ್ದ ಭಯ ನಿಧಾನವಾಗಿ ಕರಗಿ... ಅಮ್ಮನ ಅಕ್ಕರೆಯ ಆರೈಕೆಯಲ್ಲಿ ಮಗುವಿನ ಕೋಮಲ ಮೈ ಮನ ಅರಳಿ... ಅಮೃತದ ಧಾರೆಯಲಿ ಮಿಂದು ಹೊಸ ಜೀವ ಪಡೆದಂತೆ.. ಹೊಚ್ಚ ಹೊಸ ಹೂವಿನಂತೆ ಅರಳಿ... ಬೊಗಸೆ ಕಂಗಳ ತೆರೆದು ತಾಯ ತೆಕ್ಕೆಯಲಿರುವುದ ಕಂಡು ಹಿಗ್ಗಿ... ತನಗಿನ್ನೇನು ಭಯವಿಲ್ಲ... ತನ್ನಮ್ಮ ರಕ್ಷಿಸುವಳು ಎಂಬ ಅಗಾಧ ನಂಬಿಕೆಯಲ್ಲಿ.. ಮಗುವಿನ ಕಣ್ಣಲ್ಲಿನ ಭಯ ಕಳೆದು... ಬೆಳಕಿನ ಮಿಂಚು ಮೂಡಿತ್ತು.. ತಾವರೆಯಂತೆ ಅರಳಿದ ಮುಖವು .. ಸಿಹಿ ನಗೆಯ ಬುಗ್ಗೆಯನ್ನು ಚಿಮ್ಮಿಸುತ್ತಾ ಕಿಲಕಿಲನೆ ನಗುತ್ತಾ... ಅಮ್ಮಾ... ಮ್ಮಾ... ಎನ್ನುತ್ತಾ.. ಮತ್ತೆ ತಾಯಿಯನ್ನು ಗಟ್ಟಿಯಾಗಿ ತಬ್ಬುತ್ತಾ.. ತೆಕ್ಕೆಯಲ್ಲೇ ಜಿಗಿಯುತ್ತಾ... ಮುದ್ದು ಉಕ್ಕುವಂತೆ ಅನುರಾಗ ಹರಡುತ್ತಾ.... ತಾಯ ಮೈ ನವಿರೇಳಿಸುತ್ತಾ... ತನ್ನಮ್ಮ ತನ್ನದೇ... ಎನ್ನುವ ಒಡೆತನ ತೋರಿಸುತ್ತಾ..... ಪುಟ್ಟ ಕೈಗಳಿಂದ ಅಮ್ಮನ ಕೆನ್ನೆ ತಟ್ಟುತ್ತಾ... ಮುಖವೆಲ್ಲಾ ಮುದ್ದಿಸುತ್ತಾ.... ಅಮ್ಮನ ಭಾವದೊಳಗೆ ಸೇರಿ ಹೋಯಿತು. ಕಂದನ ನಿಷ್ಕಲ್ಮಶ ಪ್ರೀತಿಯಿಂದ ಕರಗಿ ಹೋದ ತಾಯಿ... ತಾನೂ ಮಗುವನ್ನು ಮುದ್ದಿಸುತ್ತಾ... ತನ್ನಲ್ಲೇ ಸೇರಿ ಒಂದಾದ ತನ್ನ ಕಂದನ ಪ್ರೇಮದಲ್ಲಿ ಕೊಚ್ಚಿ ಹೋಗುತ್ತಾ.... ತಾಯ್ತನದ... ತನ್ನ ಜೀವನದ... ಸಾರ್ಥಕ್ಯ ಪಡೆದಳು.


ಸುಂದರವಾದ ಕವನ ಬರೆದು ಕೊಟ್ಟ ಅನಂತ್ ಸರ್... ಹೃದಯಪೂರ್ವಕ ಧನ್ಯವಾದಗಳು.. :-).. ನಿಮ್ಮ ಕವನ ನನ್ನನ್ನು ತುಂಬಾ ಭಾವುಕಳನ್ನಾಗಿಸಿತು. ತಾಯಿ-ಮಗುವಿನ ಪ್ರೇಮದ ಪರಿಯೇ ಅತ್ಯಂತ ಶ್ರೇಷ್ಠವಾದ ಭಾವವೆಂಬುದು ನಮ್ಮ ಮಾತುಗಳಲ್ಲಿ ಹಿಡಿದಿಡಲಾಗದ್ದು... ಯಶೋದೆ – ಕೃಷ್ಣನಲ್ಲದೆ ಬೇರಾವ ಹೋಲಿಕೆಯೂ ಇಲ್ಲವೇ ಇಲ್ಲ ಎಂಬುದೇ ನನ್ನ ಅಭಿಪ್ರಾಯ.....

ಚಿತ್ರಕೃಪೆ : ಅಂತರ್ಜಾಲ

Friday, March 4, 2011

ಪುಟ್ಟ ಪುಟ್ಟಿಯ ಜಾತ್ರೆ ವಿಶೇಷ - ಭಾಗ - ೨


"ತೂಗು ತೊಟ್ಟಿಲು" ನೋಡುವುದರಲ್ಲಿ ಮಗ್ನನಾಗಿ ಬಿಟ್ಟಿದ್ದ ಪುಟ್ಟನಿಗೆ ಇದ್ದಕ್ಕಿದ್ದಂಗೆ ಪುಟ್ಟಿ ಇಲ್ಲದಿರುವುದು ಗೊತ್ತಾಗಿ ಹೆದರಿಕೆ ಆಯಿತು. ಆ ಕಡೆ ಈ ಕಡೆ ಎಲ್ಲಾ ನೋಡ್ತಾ... "ಪುಟ್ಟೀ.... ಅಮ್ಮೂ..." ಅಂತ ಕೂಗಿದ. ಎಲ್ಲೂ ಮಗುನಿನ ಸ್ವರವೂ, ಸುಳಿಹೂ ಎರಡೂ ಇಲ್ಲ. ಪುಟ್ಟನಿಗೆ ಅಳುವೇ ಬಂದು ಬಿಡ್ತು... ಆತಂಕದಿಂದ "ಪುಟ್ಟಕ್ಕಾ... ಚಿನ್ನೂ..." ಅಂತ ಕೂಗ್ತಾ ಆ ಗುಂಪಿನಿಂದ ಹೊರ ಬಂದು ನಿಧಾನವಾಗಿ ಎಲ್ಲ ಕಡೆ ನೋಡುತ್ತಾ ನಿಂತ. ಪುಟ್ಟಿಯು ಎಲ್ಲೂ ಕಾಣದಿರಲು ನಮ್ಮ ಪುಟ್ಟ ನಿಜಕ್ಕೂ ಕಂಗಾಲಾಗಿಬಿಟ್ಟ. ಅಳುತ್ತಾ ಅಳುತ್ತಾ ಪುಟ್ಟ.. ಮತ್ತೆ ಮತ್ತೆ "ಅಮ್ಮೂ... ಎಲ್ಲಿದೀಯ ಚಿನ್ನಮ್ಮಾ..." ಅಂತ ಜೋರು ಜೋರಾಗಿ ಕೂಗುತ್ತಾ ಎಲ್ಲಾ ಕಡೆ ಒಂದೇ ಸಮ ಓಡಲಾರಂಭಿಸಿದ...

ಬಣ್ಣದ ಟೇಪು, ಬಳೆ ಕಂಡು ಆಸೆಯಿಂದ ಬಂದು, ಕಣ್ಣರಳಿಸಿ ತನ್ನದೇ ಬಣ್ಣದ ಲೋಕದಲ್ಲಿ ವಿಹರಿಸುತ್ತಾ ನಿಂತಿದ್ದ ಪುಟ್ಟಿಯನ್ನು ಜನರು ತಳ್ಳಿ ಬಿಟ್ಟರು. ಅಪಾರ ಜನಸಂದಣಿಯಲ್ಲಿ ಇದ್ದಕ್ಕಿದ್ದಂತೆ ತಳ್ಳಿದ್ದರಿಂದ, ಆಯ ತಪ್ಪಿ ಪುಟ್ಟಿ ಬಿದ್ದು.. ಮಂಡಿ ತರಚಿಕೊಂಡಿತು. ಎರಡೂ ಕೈಗಳೂ, ಹಾಕಿದ್ದ ತಿಳಿ ಗುಲಾಬಿ ಬಣ್ಣದ ಲಂಗವೂ ಧೂಳಾಗಿ ಬಿಟ್ಟಿತು. ಎಲ್ಲಿ ನೋಡಿದರೂ ಬರಿಯ ಜನರೇ ಕಾಣುತ್ತಿದ್ದು ಅಣ್ಣನ ಕಾಣದೆ ಪುಟ್ಟಿಗೆ ಹೆದರಿಕೆಯಿಂದ, ಬಿದ್ದ ನೋವಿನಿಂದ... ಅಳು ಬಂತು. ತಾನು ಅಣ್ಣನ ಕೈ ಬಿಟ್ಟು, ಒಬ್ಬಳೇ ಬಂದೆನೆಂಬ ಭಯಕ್ಕೆ "ಅಣ್ಣಾ.....".... "ಅಮ್ಮಾ...." ಎಂದು ಹೋ ಎಂದು ಅರಚುತ್ತಾ, ತಾಳ - ಲಯ ಯಾವುದೂ ಇಲ್ಲದ, ಪುಟ್ಟಿಯದೇ ಸ್ವಂತದ ಹೊಸ ರಾಗವೊಂದರ ಉದಯವಾಗಿ... ಅದು ನಿಮಿಷ ನಿಮಿಷಕ್ಕೂ ತಾರಕಕ್ಕೇರುತ್ತಿತ್ತು...

ಈ ಕಡೆ ಕಂಗಾಲಾಗಿದ್ದ ಪುಟ್ಟನೂ... "ಅಮ್ಮೂ... " ಎಂದು ಕೂಗುತ್ತಾ, ಅಳುತ್ತಾ, ಹುಡುಕುತ್ತಾ ಬರುತ್ತಿದ್ದವನು, ಒಮ್ಮೆಲೇ ಈ ತಾರಕ ಸ್ವರಾಲಾಪನೆ ಕೇಳಿಸಿಕೊಂಡು... ಆ ಕಡೆಗೆ ಹುಡುಕಿಕೊಂಡು ಓಡಿ ಬಂದ. ಅಲ್ಲಿ ಮೈಯೆಲ್ಲಾ ಧೂಳು ಮೆತ್ತಿಕೊಂಡು, ಕಣ್ಣು, ಮೂಗಿನಲ್ಲೆಲ್ಲಾ ನೀರು ಧಾರಕಾರವಾಗಿ ಸುರಿಸಿಕೊಂಡು, ಹೋ ಎಂದು ಅರಚುತ್ತಿದ್ದ ಮಗುವನ್ನು ಕಂಡು ಪುಟ್ಟನಿಗೆ ಅಳುವಿನಲ್ಲೂ ನಗು, ನೆಮ್ಮದಿ, ಸಂತೋಷ... ಎಲ್ಲವೂ ಒಟ್ಟೊಟ್ಟಿಗೇ ಆಯ್ತು. ಅವನ ಅಳು ಮರೆತುಹೋಗಿ, "ಅಯ್ಯೂ ಪುಟ್ಟೀ.... ನನ್ನ ಚಿನ್ನೂ..." "ನೀ ಇಲ್ಲೀವರೆಗೆ ಹ್ಯಾಗೆ ಬಂದ್ಯೋ ಮುದ್ದೂ"... "ನೀ ಕಾಣದೆ ನಂಗೆಷ್ಟು ಭಯ ಆಗಿ ಬಿಟ್ಟಿತ್ತು".... ಕಂದಾ... ಅಂತ ಬಡಬಡಿಸುತ್ತಾ ಓಡೋಡಿ ಬಂದ.... ಅಣ್ಣನನ್ನು ಕಾಣುತ್ತಲೇ ಪುಟ್ಟಿಗೂ ಅಳು ಮರೆತು ಹೋಗಿ, "ಅಣ್ಣಾ..." ಅಂತ ಓಡೋಡಿ ಬಂತು. ಪುಟ್ಟ ಹತ್ತಿರ ಓಡಿ ಬಂದ ಮಗುವಿನ ಕಣ್ಣೊರೆಸಿ, ಖುಷಿಯಿಂದ ಗಟ್ಟಿಯಾಗಿ ಅಪ್ಪಿಕೊಂಡ. ಪುಟ್ಟಿಯೂ ನೆಮ್ಮದಿ, ಖುಷಿಯಿಂದ ಹಿಗ್ಗಿ... ತಾನೂ ಅಣ್ಣನನ್ನು ಗಟ್ಟಿಯಾಗಿ ತಬ್ಬಿಕೊಂಡು, ಧೂಳನ್ನೆಲ್ಲಾ ಪುಟ್ಟನ ಮೈಗೆಲ್ಲಾ ಮೆತ್ತಿ... ಹಾಗೇ ಮುದ್ದು ಮಾಡಿತು.

ಅತ್ತೂ ಅತ್ತೂ ಸುಸ್ತಾಗಿ ಬಿಟ್ಟಿದೀಯಲ್ಲ ಕಂದಮ್ಮಾ.. "ಬಾ ಇಲ್ಲಿ ಕೂತ್ಕೊಳಣ ಸ್ವಲ್ಪ ಹೊತ್ತು" ಅಂತ ಪುಟ್ಟ ಪಕ್ಕದ ಅಂಗಡಿಯ ಕಟ್ಟೆ ಮೇಲೆ ಕುಳಿತುಕೊಂಡಿತು. ಅಣ್ಣ ಕೂತಿದ್ದು ಕಂಡೊಡನೆ, ಪುಟ್ಟಕ್ಕ ಸಂತಸದಿಂದ, ಅಣ್ಣನ ಮಡಿಲಲ್ಲಿ ತಲೆ ಇಟ್ಟು, ಬೆಚ್ಚಗೆ ನಿದ್ದೆ ಮಾಡಿ ಬಿಟ್ಟಿತು... ಸುಸ್ತಾಗಿ ನಿದ್ದೆ ಮಾಡುತ್ತಿದ್ದ ಮಗುವನ್ನೇ ಅಕ್ಕರೆಯಿಂದ ನೋಡುತ್ತಾ, ತಲೆ ಸವರುತ್ತಾ, ಕುಳಿತು ಬಿಟ್ಟ ಪುಟ್ಟ.... ಹಾಗೇ ಒಂದು ಸಣ್ಣ ನಿದ್ದೆ ಮಾಡಿ ಎದ್ದ ಪುಟ್ಟಿ, ಖುಷಿಯಿಂದ ಹೀ ಎಂದು ಹಲ್ಲು ಕಿರಿದಾಗ, ಪುಟ್ಟ... "ಅಮ್ಮೂ ಎಲ್ಲಿ ಅಬ್ಬು ಆಯ್ತು ತೋರಿಚು ಕಂದಾ..." "ಛೂ ಮಂತ್ರ ಹಾಕ್ತೀನಿ... ಮನೇಗೋಗೋಷ್ಟರಲ್ಲಿ ಎಲ್ಲಾ ಮಾಯ ಆಗ್ಬಿಡತ್ತೆ" ಅಂದಾಗ, ಪುಟ್ಟಿ ಮತ್ತೆ ಊಂ.. ಎಂದು ರಾಗ ಹಾಡುತ್ತಾ, ಒಂದೊಂದೇ ಗಾಯಗಳನ್ನು ತೋರಿಸಿತು.

"ಉಫ್ಫಿ.." ಎನ್ನುತ್ತಾ... "ಛೂ ಮಂತ್ರಕಾಳಿ...ನನ್ನಮ್ಮು ನೋವೆಲ್ಲಾ ಹೋಗ್ಬಿಡಲಿ.." ಅಂತ ಪುಟ್ಟ ಮುದ್ದು ಮುದ್ದಾಗಿ ಮಂತ್ರ ಹಾಕುವುದನ್ನೇ... ಬಿಟ್ಟ ಕಣ್ಣುಗಳಿಂದ ನೋಡುತ್ತಾ ಕೂತಿತ್ತು ಪುಟ್ಟಿ. ಮೆಲ್ಲಗೆ ನೋವಾದ ಜಾಗವನ್ನೆಲ್ಲಾ ಕೈಯಿಂದ ಸವರುತ್ತಾ ಪುಟ್ಟ... "ಅಮ್ಮೂ... ನೀ ಯಾಕೆ ಕಂದ ನನ್ನ ಕೈ ಬಿಡಿಸ್ಕೊಂಡು ಒಬ್ಬಳೇ ಬಂದಿ... ಹಾಗೆಲ್ಲಾ ಬರಬಾರದು ಅಲ್ವಾಮ್ಮಾ.." ಎಂದು ಕೇಳಿದಾಗ, ಪುಟ್ಟಿ "ಹೂಂ... ಅಣ್ಣಾ ನಂಗೆ ಹೆದ್ರಿಕೆ ಆಯ್ತು... ಊಂ..." ಎಂದು ಮತ್ತೆ ಬಿಕ್ಕಳಿಸಿತು. ಪುಟ್ಟ "ಸಾಕು ಚಿನ್ನೂ... ಇನ್ನು ಅಳಬಾರದಮ್ಮಾ.. ನಾ ಸಿಕ್ಕಿ ಬಿಟ್ಟೆ ಅಲ್ವಾ ಈಗ.." "ಬಾ ಹೋಗೋಣ.." ಎಂದು ಎದ್ದ. ಪುಟ್ಟ ಮಂತ್ರ ಹಾಕಿದ್ದಕ್ಕೆ ತನ್ನ ನೋವೆಲ್ಲಾ ಮರೆತು ಪುಟ್ಟಿ ಹೀ ಎಂದು ಖುಷಿಯಿಂದ ನಗುತ್ತಾ ಪುಟ್ಟನ ಕೈಹಿಡಿದು ಹೊರಟಿತು. ಇಬ್ಬರೂ ದೇವಸ್ಥಾನಕ್ಕೆ ಹೋಗಿ ಗ್ರಾಮ ದೇವತೆ ಹಳದಮ್ಮನ ದರ್ಶನ ಪಡೆದರು. ಅಣ್ಣ ಮಾಡಿದಂತೇ ತಾನೂ ಕೈ ಮುಗಿದು, ನಮಸ್ಕಾರ ಮಾಡಿ, ಮಂಗಳಾರತಿ ತಗೊಂಡು ಪುಟ್ಟನ ಅಂಗಿ ಹಿಡ್ಕೊಂಡೇ ನಿಂತಿತ್ತು ಪುಟ್ಟಿ. ಪುಟ್ಟ, ದೇವಿಯನ್ನು ಬೇಡಿಕೊಂಡು, ಕುಂಕುಮ ತೆಗೆದು ಪುಟ್ಟಿಯ ಹಣೆಗೆ ಹಚ್ಚಿದ. ಮಧ್ಯೆ ಮಧ್ಯೆ, ಇನ್ನೂ ಬಿಕ್ಕುತ್ತಿದ್ದ ಮಗುವನ್ನು ಕಂಡು ಪುಟ್ಟನಿಗೆ ತುಂಬಾ ಬೇಜಾರಾಗಿತ್ತು..

ಪುಟ್ಟ "ಚಿನ್ನೂ ಬಾಮ್ಮ... ನಾ ನಿಂಗೆ ಟೇಪು, ಬಳೆ ಎಲ್ಲಾ ಕೊಡಿಸ್ತೀನಿ... ಅಮ್ಮ ದುಡ್ಡು ಕೊಟ್ಟಿದ್ದಾರೆ ಪುಟ್ಟೀ..." ಎಂದು ಪುಟ್ಟಿಯನ್ನು ಅಂಗಡಿಗೆ ಕರೆದುಕೊಂಡು ಹೋಗಿ, ಅದು ತೋರಿಸಿದ ಬಣ್ಣದ ಟೇಪು, ಬಳೆ, ಕೊಡಿಸಿದ. ಬಣ್ಣದ ಟೇಪು, ಬಳೆ ಕೊಂಡು ಆಚೆ ಬಂದ ಮಗೂ... "ಅಣ್ಣಾ... ಅಂತ ಬೆಂಡು ಬತ್ತಾಸು ಮಾರುತ್ತಿದ್ದ ಅಂಗಡಿ ಮುಂದೆ ನಿಂತು ಬಿಟ್ಟಿತ್ತು ಪುಟ್ಟಿ. ಪುಟ್ಟ ನಗುತ್ತಾ... ಬೆಂಡು ಬತ್ತಾಸು ಎಲ್ಲಾ ಕೊಡಿಸಿದ. ಪುಟ್ಟಿ ತನ್ನ ನೋವೆಲ್ಲಾ ಮರೆತು, ಹಿಗ್ಗಿನಿಂದ ಬೆಂಡು ಬತ್ತಾಸು ತಿನ್ನುತ್ತಾ... "ಅಣ್ಣಾ... ಮನೆಗೋಗನ" ಅಂತು. ಪುಟ್ಟ ಪಾಪ ಅಮ್ಮ ಕೊಟ್ಟಿದ್ದ ದುಡ್ಡೆಲ್ಲಾ ಪುಟ್ಟಿಗೇ ಖರ್ಚು ಮಾಡಿ, ಮಗುವಿನ ಮುಖದಲ್ಲಿ ನಗುವರಳಿಸಿ, ತನಗೇನೂ ಕೊಳ್ಳದೆ, ಮಗುವಿನ ಹಿಗ್ಗಿನಲ್ಲಿ ತಾನೂ ಭಾಗಿಯಾಗುತ್ತಾ... " ಹೂಂ ಚಿನ್ನೂ... ಕತ್ತಲಾದ್ರೆ ಅಮ್ಮ ಹೆದರ್ಕೋತಾರೆ ಅಲ್ವಾಮ್ಮಾ..." "ಬಾ ಪುಟ್ಟೀ ಮನೆಗೆ ಹೋಗಿ ಬಿಡೋಣ" ಎಂದ.

ಪುಟ್ಟಿಯ ಕೈಯನ್ನು ಭದ್ರವಾಗಿ ಹಿಡಿದುಕೊಂಡು, " ಅಮ್ಮೂ ನೀ ಇನ್ಮೇಲೆ ಯಾವತ್ತೂ ನನ್ನ ಕೈ ಬಿಟ್ಟು ಹೋಗ್ಬಾರ್ದು... ಗೊತ್ತಾಯ್ತಾ ಅಮ್ಮೂ.." "ಚಿನ್ನೂ... ಆ ತೂಗು ತೊಟ್ಟಿಲು ಎಷ್ಟು ಚೆನ್ನಾಗಿತ್ತು ಗೊತ್ತೇನೋ..." ಎಂದೆಲ್ಲಾ ಮಾತಾಡುತ್ತಾ ಬರುತ್ತಿದ್ದರೆ, ಪುಟ್ಟಿ ಬೆಂಡು, ಬತ್ತಾಸು ನೆಕ್ಕುತ್ತಾ... ಹೂಂ..ಹೂಂ.. ಎನ್ನುತ್ತಾ... ಮಧ್ಯೆ ಮಧ್ಯೆ ಅಣ್ಣನ ಮುಖ ನೋಡಿ ಮುದ್ದಾಗಿ ನಗುತ್ತಾ ಬರುತ್ತಿತ್ತು. ಅದು ತನ್ನದೇ ಲೋಕದಲ್ಲಿ, ಹೊಸ ಟೇಪು, ಬಳೆಗಳೊಡನೆ ವಿಹರಿಸುತ್ತಿತ್ತು. ಮನೆ ಹತ್ತಿರ ಬಂದೊಡನೆ, ಹೊರಗೇ ಕಾಯುತ್ತಾ ನಿಂತಿದ್ದ ಅಮ್ಮನನ್ನು ಕಂಡು ಪುಟ್ಟಿ, ಅವಸರದಲ್ಲಿ ಅಣ್ಣನ ಕೈ ಬಿಟ್ಟು... "ಅಮ್ಮಾ... ನೋಡು ಹೊಸ ಟೇಪು..." ಅಂತ ಓಡೋಯ್ತು... ಅದರ ಸಂಭ್ರಮ ನೋಡುತ್ತಾ ಪುಟ್ಟ ಮೈ ಮರೆತು ನಿಂತಿದ್ದ.

ಅಂತೂ ನಮ್ಮ ಪುಟ್ಟ-ಪುಟ್ಟಿಯ ತೇರು ಜಾತ್ರೆಯಲ್ಲಿ ಮೆರವಣಿಗೆ ಮಾಡಿಕೊಂಡು, ಜೋಪಾನವಾಗಿ ಮನೆ ತಲುಪಿತ್ತು.


ಚಿತ್ರಕೃಪೆ : ಅಂತರ್ಜಾಲ

Sunday, February 6, 2011

ಪುಟ್ಟ-ಪುಟ್ಟಿಯ ಜಾತ್ರೆ ವಿಶೇಷ...



ಭದ್ರಾ ನದಿಯ ತೀರದಲ್ಲೊಂದು ಪುಟ್ಟ ಊರು. ತುಂಬಿ ಹರಿಯುವ ಹೊಳೆ. ನದಿಯ ಮಧ್ಯದಲ್ಲೊಂದು ಚಿಕ್ಕ ಮಂಟಪ. ಅದರಲ್ಲಿ ಈಶ್ವರ ನೆಲೆಸಿದ್ದ... ಸುತ್ತಲೂ ಹಸಿರು ಬೆಟ್ಟ ಗುಡ್ಡಗಳಿಂದಾವೃತ್ತವಾಗಿದ್ದ ಊರು... ಪ್ರಕೃತಿ ಮಾತೆಯ, ವನದೇವತೆಯ ಮಡಿಲು ಹಸಿರು ತೊಟ್ಟಿಲಿನಂತೆ ಕಂಗೊಳಿಸುತ್ತಿತ್ತು. ಬಲು ರಮ್ಯವಾದ ನೋಟ. ನದೀ ತೀರದಲ್ಲೊಂದು ಶ್ರೀ ರಾಮಚಂದ್ರನ ದೇವಸ್ಥಾನ. ಸೀತಾ, ಲಕ್ಷ್ಮಣ, ಆಂಜನೇಯರ ಸಮೇತ... ಜೊತೆಗೆ ಈಶ್ವರನೂ...ಒಳಗೆ ಸುಬ್ರಹ್ಮಣ್ಯನೂ ಇದ್ದರು. ಪಕ್ಕದಲ್ಲೇ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ. ರಾಮದೇವರ ದೇವಸ್ಥಾನದ ಎದುರಿನಲ್ಲಿ ದೊಡ್ಡ ಅರಳೀಮರ, ಪಕ್ಕದಲ್ಲೇ ನದಿಗೆ ಇಳಿದು ಹೋಗಲು ಮೆಟ್ಟಿಲುಗಳು. ಭದ್ರೆಯ ಒಡಲು ಯಾವಾಗಲೂ ತುಂಬಿ, ಲಯವಾದ ಸಂಗೀತದಂತೆ ಜುಳು ಜುಳು ಹರಿಯುವ ಅವಳ ಸೌಂದರ್ಯ ನೋಡುವುದೇ ಒಂದು ಆನಂದ. ಎಷ್ಟೋ ಜನರು ಸಾಯಂಕಾಲ ದೇವರ ದರ್ಶನಾರ್ಥವಾಗಿ ಬಂದವರು, ಸಂಸಾರ ಜಂಜಟವನ್ನೆಲ್ಲಾ ಮರೆತು ಹಾಯಾಗಿ, ಅರಳೀ ಕಟ್ಟೆಯ ಮೇಲೆ ಕುಳಿತು, ಭದ್ರೆಯನ್ನು ನೋಡುತ್ತಾ, ಆಹ್ಲಾದಕರ ಗಾಳಿಯನ್ನು ಸೇವಿಸುತ್ತಾ, ಹಸಿರು ದಿಟ್ಟಿಸುತ್ತಾ, ಕನಸುಗಳ ಲೋಕಕ್ಕೆ ಹೋಗಿ ಬಿಡುತ್ತಿದ್ದರು. ರಾಯರ ಮಠದಲ್ಲಿ ಹೊರಗೆ ಪ್ರಾಕಾರದಲ್ಲಿ ಒಂದು ಮೂಲೆಗೆ ಆಳವಾದ ಭಾವಿ ಇತ್ತು. ಪ್ರಾಕಾರದ ಬಾಗಿಲು ಯಾವಾಗಲೂ ತೆಗೆದೇ ಇರುತ್ತಿತ್ತು. ಮಧ್ಯಾಹ್ನ ಮೂರು ಘಂಟೆಯಾದರೆ ಸಾಕು... ಮಕ್ಕಳ ಒಂದು ದೊಡ್ಡ ಗುಂಪು ಅರಳೀ ಮರದ ನೆರಳಿನಲ್ಲೂ.. ರಾಯರ ಮಠದ ಪ್ರಾಕಾರದಲ್ಲೂ ಆಟವಾಡಲು ತಪ್ಪದೆ ಹಾಜರಾಗಿಬಿಡುತ್ತಿತ್ತು. ದೇವಸ್ಥಾನದ ಅರ್ಚಕರ ಮನೆಯ ಸುಧಾ, ಪಕ್ಕದ ಬೀದಿಯ ಉಮಾ, ಎದುರುಗಡೆ ಮನೆಯ ಹೆಲೆನ್, ಲಿನೆಟ್, ಆಕಡೆ ಬೀದಿಯ ನಾಗರತ್ನ, ಪೋಲೀಸ್ ಠಾಣೆ ಎದುರುಮನೆಯ ನಟರಾಜ, ಅಲ್ಲೇ ಸ್ವಲ್ಪ ಮುಂದಿನ ಮನೆಯ ರೋಹಿಣಿ, ರೇಣುಕಾ, ಗೋಪಿ, ಕಿಟ್ಟಿ, ವಾಸು, ಸೀನ, ನಾಗರಾಜ... ಹೀಗೆ ಒಂದು ದೊಡ್ಡ ಗುಂಪು ಸೇರಿ ರಜಾ ದಿನಗಳಲ್ಲಿ, ಸ್ಕೂಲು ಮುಗಿದ ನಂತರ ಗಲಾಟೆ ಮಾಡುತ್ತಾ, ಮಠದ ಪ್ರಾಕಾರದಲ್ಲಿ ಐಸ್ ಪೈಸ್ ಆಡುತ್ತಾ, ಒಬ್ಬರನ್ನೊಬ್ಬರು ಹಿಡಿಯಲು ಅಟ್ಟಿಸಿಕೊಂಡು ಓಡುತ್ತಾ... ಇಡೀ ವಾತಾವರಣವನ್ನೇ ವಿದ್ಯುದೀಕರಿಸುತ್ತಿದ್ದರು. ಆ ಊರು ಇತಿಹಾಸ ಪ್ರಸಿದ್ಧವಾದ ಊರು. ಅಲ್ಲಿ ಹೊಯ್ಸಳರ ಕಾಲದ, ನಕ್ಷತ್ರದಾಕಾರದ, ಸುತ್ತಲೂ ಅತ್ಯಂತ ಸುಂದರ ಕೆತ್ತನೆಯುಳ್ಳ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಸ್ಥಾನವೂ ಇತ್ತು. ಈ ಇತಿಹಾಸ ಪ್ರಸಿದ್ಧ ದೇವಸ್ಥಾನದ ಪಕ್ಕದಲ್ಲೇ ಒಂದು ಮಸೀದಿಯೂ ಇತ್ತು. ಊರು ಬರೀ ಇತಿಹಾಸಕ್ಕೆ ಮಾತ್ರವಲ್ಲ, ಉದ್ಯಮಕ್ಕೂ ಪ್ರಸಿದ್ಧಿಯಾಗಿತ್ತು. ಒಂದು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಒಂದು ಕಾಗದ ಕಾರ್ಖಾನೆಯೂ ಇತ್ತು. ತುಂಬಾ ದೊಡ್ಡ ಊರಲ್ಲದಿದ್ದರೂ, ತಾಲೂಕು ಮಟ್ಟಕ್ಕೆ ಚೆನ್ನಾಗಿಯೇ ಇತ್ತು. ಸುತ್ತ ಮುತ್ತಲಿನ ಹಳ್ಳಿಗಳೂ, ತುಂಗ-ಭದ್ರಾ ನದಿಯ ಸಂಗಮ ಕ್ಷೇತ್ರ, ಎಲ್ಲಿ ನೋಡಿದರೂ ಕಣ್ಣು ಕಾಣುವಷ್ಟು ದೂರಕ್ಕೂ ಹಸಿರು ತುಂಬಿ ನಿಂತ ಗದ್ದೆಗಳು, ಭದ್ರೆಯ ಒಡಲಿನಲ್ಲಿ ಮೂಡಿನಿಂತ ಎರಡು ಸೇತುವೆಗಳು... ಒಂದು ರೈಲು ಓಡಾಡಲು ಇನ್ನೊಂದು ಬಸ್ಸು ಮತ್ತು ಪಾದಚಾರಿಗಳಿಗಾಗಿ.. ಒಟ್ಟಿನಲ್ಲಿ ಊರು ತುಂಬಾ ಲವಲವಿಕೆಯಿಂದ ಕೂಡಿತ್ತು. ಊರಿನ ಗ್ರಾಮ ದೇವತೆ ಹಳದಮ್ಮ, ತನ್ನ ಇಬ್ಬರು ಸಹೋದರಿಯರೊಂದಿಗೆ ನೆಲೆಸಿದ್ದ ಸಮೃದ್ಧ ಊರು. ಊರಿನಲ್ಲಿದ್ದ ಇತರ ಅನೇಕ ಕುಟುಂಬಗಳಂತೆ.. ಊರಿನ ಮಧ್ಯದಲ್ಲಿ, ಗ್ರಾಮ ದೇವತೆ ಹಳದಮ್ಮನ ದೇವಸ್ಥಾನಕ್ಕೆ ಸ್ವಲ್ಪವೇ ದೂರದಲ್ಲಿ ನೆಲೆಸಿದ್ದ ಒಂದು ಚಿಕ್ಕ ಕುಟುಂಬ. ಅಪ್ಪ-ಅಮ್ಮ, ಅಜ್ಜಿ-ತಾತ ಮತ್ತು ಪುಟ್ಟ-ಪುಟ್ಟಿ... ಪುಟ್ಟನಿಗೆ ಆರು ವರ್ಷ ಮತ್ತು ಪುಟ್ಟಿಗೆ ೩ ೧/೨ ವರುಷ ಅಷ್ಟೇ. ಅಣ್ಣ-ತಂಗಿ ಇಬ್ಬರೂ ಯಾವಾಗಲೂ ಒಟ್ಟಿಗೇ ಇರುತ್ತಿದ್ದರು. ಪುಟ್ಟ ತಾನು ತುಂಬಾ ದೊಡ್ಡವನೆಂದುಕೊಳ್ಳುತ್ತಾ ಪುಟ್ಟಿಯ ಜವಾಬ್ದಾರಿಯನ್ನು ವಹಿಸಿಕೊಂಡು ಬಿಡುತ್ತಿದ್ದ. ಎಲ್ಲಿಗೆ ಹೋದರೂ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವುದು, ಪುಟ್ಟಿಯ ಬೇಕು ಬೇಡಗಳನ್ನೆಲ್ಲಾ ಆಸೆ-ಅಕ್ಕರೆಯಿಂದ ನೋಡಿಕೊಳ್ಳುವುದು ಮಾಡುತ್ತಿದ್ದ. ಪುಟ್ಟಿಯನ್ನು ಅಣ್ಣನ ವಶಕ್ಕೆ ಒಪ್ಪಿಸಿ, ಪುಟ್ಟಿಯ ಅಮ್ಮ-ಅಜ್ಜಿ ಹಾಯಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಊರಲ್ಲಿ ಪ್ರತೀವರ್ಷ ಗ್ರಾಮದೇವತೆ ಹಳದಮ್ಮನ ಜಾತ್ರೆ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ಒಂದು ವಾರ ದಿನವೂ ದೇವರಿಗೆ ವಿಶೇಷ ಪೂಜೆ, ಆರತಿ, ಪ್ರಸಾದ ವಿನಿಯೋಗ ಎಲ್ಲವೂ ಇರುತ್ತಿತ್ತು. ಜಾತ್ರೆಯ ಕೊನೆಯ ದಿನ ದೇವಿ ಹಳದಮ್ಮ ತನ್ನ ಅಕ್ಕ-ತಂಗಿಯರೊಡಗೂಡಿ ಊರಿನ ಬೀದಿಗಳಲ್ಲಿ ಮೆರವಣಿಗೆ ಬರುತ್ತಾ... ಎಲ್ಲರ ಮನೆಯ ಹತ್ತಿರವೂ ಬಂದು, ಅರಿಸಿನ-ಕುಂಕುಮ ಇಸ್ಕೊಂಡು, ಮಂಗಳಾರತಿ ಮಾಡಿಸಿಕೊಂಡು, ಹರಸುತ್ತಿದ್ದಳು. ದೇವಿಯರ ಕೃಪೆಯಿಂದ ಊರು ಸುಭಿಕ್ಷವಾಗಿತ್ತು. ಜನರು ನೆಮ್ಮದಿಯಾಗಿದ್ದರು. ಈ ವರ್ಷದ ಜಾತ್ರೆಯ ಡಂಗೂರ ಸಾರಿದ್ದರು. ಆಗಲೇ ಜಾತ್ರೆಯ ಹಬ್ಬ, ಸಡಗರ ಶುರುವಾಗಿತ್ತು. ದೇವಸ್ಥಾನದ ಮುಂದಿನ ರಸ್ತೆಯುದ್ದಕ್ಕೂ ಅಂಗಡಿಗಳ ಸಾಲುಗಳು ಎದ್ದು ನಿಂತಿದ್ದವು. ಬೆಂಡು-ಬತ್ತಾಸು, ಟೇಪು-ಬಳೆ, ಆಟದ ಸಾಮಾನುಗಳು, ಬಣ್ಣ ಬಣ್ಣದ ಬೊಂಬೆಗಳು ಎಲ್ಲವೂ ತಮ್ಮ ತಮ್ಮ ಅಂಗಡಿಗಳಲ್ಲಿ, ಆಗಲೇ ತಯ್ಯಾರಾಗಿ ನಿಂತಿದ್ದವು. ಜಾತ್ರೆಯ ಇನ್ನೊಂದು ವಿಶೇಷವೆಂದರೆ, ಗ್ರಾಮದ ಆಟಗಳು ಮತ್ತು ಕೆಂಡ ತುಳಿಯುವುದು. ಜಾತ್ರೆಗೆ ಊರಿನ ಜನರೆಲ್ಲರೂ ಹೋಗುತ್ತಿದ್ದರು. ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮದಿಂದ ಹೋಗುತ್ತಿದ್ದ ಜನರನ್ನು ಮನೆಯ ಕಟ್ಟೆಯ ಮೇಲೆ ಕುಳಿತು ನೋಡುತ್ತಿತ್ತು ನಮ್ಮ ಪುಟ್ಟಿ. "ಅಣ್ಣಾ... ನಾವೂ ಜಾತ್ರೆಗೆ ಹೋಗನಾ.."? ಅಂತ ಮುದ್ದಾಗಿ ಪುಟ್ಟನ ಹಿಂದೆ ಮುಂದೆ ಪುಟು ಪುಟು ಓಡಾಡುತ್ತಾ ಅದೇ ಒಂದೇ ಪ್ರಶ್ನೆಯನ್ನು ಕೇಳಿ ಕೇಳಿ ತಲೆತಿನ್ನುತ್ತಿತ್ತು ಪುಟ್ಟಿ. ಬೇರೇ ಏನೂ ಇಲ್ಲ ಪುಟ್ಟಿಗೆ ಜಾತ್ರೆಗೆ ಹೋಗಿ, ಅಲ್ಲಿ ಕಣ್ಣಿಗೆ ಅಂದವಾಗಿ, ಬಣ್ಣವಾಗಿ ಕಾಣುವ ಹೊಸ ಟೇಪು, ಬಳೆ ಕೊಂಡು, ಬೆಂಡು-ಬತ್ತಾಸು, ಮಂಡಕ್ಕಿ ತಿನ್ನುತ್ತಾ ತಿರುಗಾಡಬೇಕು ಅಷ್ಟೆ. ಆದರೆ ಪುಟ್ಟನಿಗೆ ಬೇರೆಲ್ಲಕ್ಕಿಂತಲೂ.. ತನ್ನ ಮುದ್ದಿನ ತಂಗಿ ಪುಟ್ಟಿಯ ಕೈ ಹಿಡಿದುಕೊಂಡು, "ಅಲ್ನೋಡು ಚಿನ್ನೂ... ಎಷ್ಟು ಚೆನ್ನಾಗಿದೆ..".. "ಇಲ್ನೋಡು ಬಂಗಾರ... ದೇವಿಗೆ ಅಲಂಕಾರ"... "ಎಷ್ಟೊಂದು ಬಣ್ಣ ಬಣ್ಣದ ಹೂವು ನೋಡು ಅಮ್ಮೂ.." ಅಂತ ಎಡಗೈಯಲ್ಲಿ ಬೊಟ್ಟು ಮಾಡಿ ತೋರಿಸುತ್ತಾ, ಬಲಗೈಯಲ್ಲಿ ಪುಟ್ಟಿಯ ಕೈ ಹಿಡಿದು ಜಾತ್ರೆಯಲ್ಲಿ ತಿರುಗೋದು ತುಂಬಾ ಇಷ್ಟ. ಪುಟ್ಟಿ ಏನಕ್ಕಾದರೂ ಹೆದರಿ, ಬೆಚ್ಚಿದಾಗ, ಆಪ್ತತೆಯಿಂದ ಮಗುವಿನ ಹೆಗಲು ತಬ್ಬಿ "ಓನಿಲ್ಲ ಬಂಗಾರೂ.." "ನಾನಿದೀನಲ್ಲ ಚಿನ್ನೂ.. ಹೆದರ್ಕೊಬೇಡ"... ಎಂದು ಮುದ್ದು ಮಾಡುತ್ತಾ ತಾನೇನೋ ತುಂಬಾ ದೊಡ್ಡ ಗಂಡಸೆಂಬಂತೆ.. ಸುತ್ತಾಡುವುದು ತುಂಬಾ ಇಷ್ಟವಾದ ಕೆಲಸವಾಗಿತ್ತು. ಇಷ್ಟವಾಗುವುದೆಂಬುದಕ್ಕಿಂತ ಊಟ, ತಿಂಡಿ, ನೀರು, ನಿದ್ದೆ ಯಾವುದೂ ಬೇಡ ಪುಟ್ಟನಿಗೆ. ತನ್ನ ಪುಟ್ಟ ತಂಗಿಯೇ ಒಬ್ಬ ಪುಟ್ಟ ದೇವತೆಯೆಂಬಂತೆ, ಹೆಮ್ಮೆಯಿಂದ, ಅಕ್ಕರೆಯ ಧಾರೆ ಹರಿಸುತ್ತಾ ಎಲ್ಲವನ್ನೂ ಮರೆತು ಇದ್ದು ಬಿಡುತ್ತಿದ್ದ ನಮ್ಮ ಪುಟ್ಟ... ಪುಟ್ಟಿಯ ವರಾತ ಶುರುವಾಗಿತ್ತಲ್ಲಾ ಆಗಲೇ... ಪುಟ್ಟ "ಅಮ್ಮಾ ಮಗೂ ಅಣ್ಣಾ ಜಾತ್ರೆಗೋಗನಾ" ಅಂತ ಕೇಳ್ತಿದೆಯಮ್ಮಾ... ಪಾಪ ಅಮ್ಮಾ ಪುಟ್ಟೀ... "ಕರ್ಕೊಂಡು ಹೋಗ್ಲಾ" ಅಂತ ಅಮ್ಮನ್ನ ಕೇಳಿದ. ಅಮ್ಮ ಸ್ವಲ್ಪ ಹಿಂಜರಿಯುತ್ತಲೇ.."ಪುಟ್ಟಾ ಹುಷಾರಾಗಿ ಕರ್ಕೊಂಡೋಗಿ ಬರ್ತೀಯಾಪ್ಪಾ ರಾಜಾ..?" ಅಂದ್ರು. "ಹೂ ನಮ್ಮಾ ನೀನೇನು ಹೆದರ್ಕೋಬೇಡ... ಕತ್ತಲಾಗೋಷ್ಟರಲ್ಲಿ ಬಂದು ಬಿಡ್ತೀವಿ" ಅಂದ ಪುಟ್ಟ. ಸರಿ ಅಮ್ಮ ಪುಟ್ಟಿಯನ್ನೂ, ಪುಟ್ಟನನ್ನೂ ಉತ್ಸವ ಮೂರ್ತಿಗಳಂತೆ ಅಲಂಕರಿಸಿ, ಹತ್ತು ಸಾರಿ... "ಪುಟ್ಟಾ ಮಗೂ ಕೈ ಬಿಡಬೇಡ್ವೋ ಬಂಗಾರ..." "ಹುಷಾರು ಕಣಪ್ಪಾ..." "ದುಡ್ಡು ಸರಿಯಾಗಿ ಜೋಬಲ್ಲಿಟ್ಕೊಂಡ್ಯೇನೋ."? ಅಂತೆಲ್ಲಾ ಕೇಳುತ್ತಾ... ಹೊರ ಬಾಗಿಲವರೆಗೂ ಬಂದು ಕಳಿಸಿ ಅಲ್ಲಿಯೇ ನೋಡುತ್ತಾ ನಿಂತಿದ್ದರು. ಹಿಂದೆ ತಿರುಗಿ ನೋಡುತ್ತಾ... "ಅಮ್ಮಾ ಟಾ ಟಾ" ಎಂದು ಹಿಗ್ಗಿನಿಂದ, ಎಡಗೈ ಬೀಸುತ್ತಾ... ಹೊರಟಿತ್ತು ಪುಟ್ಟಿ. ತಂಗಿಯ ಬಲಗೈಯನ್ನು ಭದ್ರವಾಗಿ ಹಿಡಿದುಕೊಂಡು, ಪುಟ್ಟ ಖುಷಿಯಿಂದ ತಾನೂ ತಾಯಿಗೆ ಕೈ ಬೀಸಿದ. ಕೈ ಕೈ ಹಿಡಿದು ಪುಟ್ಟ-ಪುಟ್ಟಿಯರ ಬಣ್ಣದ ತೇರು ಜಾತ್ರೆಗೆ ಹೊರಟಿತ್ತು. ಈ ಸಲದ ಜಾತ್ರೆಯಲ್ಲಿ ಒಂದು ವಿಶೇಷವಿತ್ತು. ಮೊಟ್ಟ ಮೊದಲ ಬಾರಿಗೆ, ಜಾತ್ರೆಯಲ್ಲಿ "ತೂಗು ತೊಟ್ಟಿಲು" - ಮೆರ್ರಿ ಗೋ ರೌಂಡ್ ಬಂದಿತ್ತು. ಅಷ್ಟೆತ್ತರಕ್ಕೆ ತೂಗುತ್ತಾ ಹೋಗುವ ತೊಟ್ಟಿಲ ವಿಷಯ ಆಗಲೇ ಸ್ನೇಹಿತರಿಂದ ಕೇಳಿ ತಿಳಿದಿದ್ದ ಪುಟ್ಟ, ಕುತೂಹಲದಿಂದ ನೋಡಲು ಕಾಯುತ್ತಿದ್ದ. ಪುಟ್ಟ - ಪುಟ್ಟಿ ಇಬ್ಬರೂ.. ಹಾಗೇ ನಿಧಾನವಾಗಿ ನೋಡುತ್ತಾ ದೇವಸ್ಥಾನದ ಹತ್ತಿರ ಬಂದರು. "ಅಲ್ನೋಡು ಚಿನ್ನೂ... ಹೇಗೆ ಕಂಭದ ಮೇಲೆ ಹುಡುಗ ಗಿರಗಿರ ತಿರುಗ್ತಿದಾನೆ"... ಅಂತ ಪುಟ್ಟಿಗೆ ತೋರಿಸಿದ ಪುಟ್ಟ. ಪುಟ್ಟಿಯೂ ತಾನೇನೂ ಕಮ್ಮಿ ಇಲ್ಲವೆಂಬಂತೆ... "ಅಣ್ಣಾ ಅಲ್ನೋಡು..." ಅಂತ ಕೈ ಜಗ್ಗಿತು. ಏನೋ ತೋರಿಸುತ್ತಿದೆ ಮಗೂ ಎಂದು ಪುಟ್ಟ ಅದು ಬೊಟ್ಟು ಮಾಡಿದ ಕಡೆ ನೋಡಿದರೆ... ಅಲ್ಲೆರಡು ಕೋಳಿಗಳು ಕಾಳಗಕ್ಕೆ ತಯ್ಯಾರಾಗಿ ನಿಂತಿದ್ದವು. ಪುಟ್ಟನಿಗೆ ನಗು ಬಂತು. ಮೆಲ್ಲಗೆ ನಕ್ಕಾಗ, ಪುಟ್ಟಿಯ ಅಸಮಧಾನದ ನೋಟ ಎದುರಿಸಬೇಕಾಯಿತು. ಊಂ.. ಎಂದು ಉದ್ದ ಮೂತಿ ಮಾಡಿದ ಚಿನ್ನಾರಿ ಮಗುವನ್ನು ಕಂಡು ಪುಟ್ಟನಿಗೆ ಮುದ್ದು ಬಂತು. ಆಸೆಯಿಂದ ಪುಟ್ಟಿಯನ್ನು ಹತ್ತಿರಕ್ಕೆಳೆದುಕೊಂಡು... "ಅಮ್ಮೂ ಕೋಪಾನಾ" ಅಂದಾಗ, ಪುಟ್ಟಿ ಇಲ್ಲಾ ಎಂಬಂತೆ, ಎರಡು ಜುಟ್ಟು ಕುಣಿಸುತ್ತಾ, ತಲೆಯಾಡಿಸಿ, "ಹೀ....." ಎಂದು ಹಲ್ಲು ಕಿರಿಯಿತು. "ಪುಟ್ಟೀ.. ಕಂದಾ... ನೀ ನನ್ಜೊತೆನೇ ಇರ್ಬೇಕು... ಕೈ ಬಿಡಬಾರದು... ಗೊತ್ತಾಯ್ತಾ.."? ಎನ್ನುತ್ತಾ... ಮುಂದೆ ಮುಂದೆ ನಡೆದು ಹೋದರು ಇಬ್ಬರೂ.... "ತೂಗು ತೊಟ್ಟಿಲು" ದೂರದಿಂದಲೇ ತಿರುಗುತ್ತಿರುವುದು ಕಣ್ಣಿಗೆ ಬಿದ್ದಾಗ, ಪುಟ್ಟ... "ಬಾ ಚಿನ್ನೂ.." ಎಂದು ಆ ಕಡೆ ಕರೆದುಕೊಂಡು ಹೋದ. ಈ ಸಾರಿ ಏನೇನೋ ಹೊಸಾದೆಲ್ಲಾ ಬಂದಿದೆ ಪುಟ್ಟೀ... "ನೋಡೋಣ ಬಾರೆ"... ಅಂತ ಅಲ್ಲಿ ಹೋಗಿ ನಿಂತುಕೊಂಡ. ಪುಟ್ಟಿಯೂ ಕೈ ಹಿಡ್ಕೊಂಡು ಪಕ್ಕದಲ್ಲೇ ನಿಂತಿತ್ತು. ಪುಟ್ಟ ಮೆರ್ರಿ ಗೋ ರೌಂಡ್ ನಲ್ಲಿ ತಾನು ಪುಟ್ಟಿಯನ್ನು ಬಿಟ್ಟು ಹೋಗೋಕ್ಕಾಗಲ್ಲ... ಪುಟ್ಟಿಗೆ ಆಗದ್ದು ತನಗೂ ಬೇಡವೆಂದು ಕೊಳ್ಳುತ್ತಾ... ನೋಡುತ್ತಾ ನಿಂತಿದ್ದ. ಪಕ್ಕದಲ್ಲೇ ನಿಂತಿದ್ದ ಪುಟ್ಟಿಗೆ... ಎರಡೇ ನಿಮಿಷದಲ್ಲಿ ಬೇಸರವಾಗಿತ್ತು. ಅದು ಸುತ್ತಲೂ ತಿರುಗಿ ನೋಡಲಾರಂಭಿಸಿತ್ತು. ಅದರ ಕಣ್ಣು ದೃಷ್ಟಿ ಅಂಗಡಿ ಸಾಲಿನಲ್ಲಿನ ಒಂದು ಅಂಗಡಿಯಲ್ಲಿ ಕಂಡ ಬಣ್ಣ ಬಣ್ಣದ ಟೇಪು, ಬಳೆಗಳ ಮೇಲೆ ಬಿತ್ತು, ಖುಷಿಯಾಗಿ ಬಿಡ್ತು ಪುಟ್ಟಿ. ಸ್ವಲ್ಪ ಸಡಿಲವಾಗಿದ್ದ ಅಣ್ಣನ ಹಿಡಿತವನ್ನ ಮೆತ್ತಗೆ ಬಿಡಿಸಿಕೊಂಡು ನಮ್ಮ ತರ್ಲೆ ಪುಟ್ಟಕ್ಕನ ಸವಾರಿ ಅಂಗಡಿಯ ಸಾಲಿನ ಕಡೆ ಹೊರಟಿತು. ಆಸೆಯಿಂದ ನೋಡುತ್ತಾ... ಉಗುರು ಕಚ್ಚುತ್ತಾ... ಅಲ್ಲಿಯೇ ನಿಂತು ಬಿಟ್ಟಿತು ಪುಟ್ಟಿಯ ತೇರು.....

ಮುಂದುವರೆಯುವುದು.....

ಚಿತ್ರಕೃಪೆ : ಅಂತರ್ಜಾಲ

Wednesday, January 5, 2011

ಒಮ್ಮೆ ಬಸ್ಸಿನಲ್ಲಿ.... :-)...

ನಮ್ಮ ಮದುವೆಯಾದ ಹೊಸತರಲ್ಲಿ ಒಮ್ಮೆ ನಾನೂ, ನನ್ನವರೂ, ನಮ್ಮಣ್ಣ ರಾತ್ರಿ ಬಸ್ಸಿನಲ್ಲಿ ಭದ್ರಾವತಿಗೆ ಹೊರಟಿದ್ದೆವು. ಆಗೆಲ್ಲಾ ಮುಂಗಡವಾಗಿ ಸೀಟು ಕಾಯ್ದಿರಿಸಿಕೊಳ್ಳುವ ಅಭ್ಯಾಸ ನಾವು ಮಾಡಿಕೊಂಡಿರಲಿಲ್ಲ. ಯಾವಾಗ ಸಾಧ್ಯವಾದರೆ ಆಗ, ಯಾವ ಬಸ್ಸು ಸಿಕ್ಕರೆ ಅದರಲ್ಲಿ ಪ್ರಯಾಣ ಮಾಡುವ ಸಾಹಸ ಮಾಡುತ್ತಿದ್ದೆವು. ನಾವು ಬಸ್ ನಿಲ್ದಾಣಕ್ಕೆ ಬಂದು ತುಂಬಿದ್ದ ಒಂದೆರಡು ಬಸ್ಸುಗಳನ್ನು ಬಿಟ್ಟು ಕಾಯುತ್ತಾ ನಿಂತರೂ ನಮ್ಮಣ್ಣನ ಸುಳಿವೇ ಇರಲಿಲ್ಲ. ಆಗ ಮೊಬೈಲ್ ಕೂಡ ಇರಲಿಲ್ಲವಲ್ಲ. ಇನ್ನೊಂದೇ ಬಸ್ಸು ಕೊನೆಯದು ಶಿವಮೊಗ್ಗಕ್ಕೆ ಹೋಗಲು ಎಂದು ಗೊತ್ತಾದಾಗ, ನಾವು ಹತ್ತಿ, ಬಾಗಿಲ ಪಕ್ಕದಲ್ಲೇ ಇದ್ದ ಕೊನೆಯ ಒಂದೇ ಒಂದು ಖಾಲಿ ಸೀಟಲ್ಲಿ ಕುಳಿತೆವು. ಪಕ್ಕದಲ್ಲಿ ಮೂರು ಜನರು ಕುಳಿತುಕೊಳ್ಳುವ ಸೀಟಿನಲ್ಲಿ ಅಣ್ಣನಿಗಾಗಿ ಸ್ಥಳ ಕಾಯ್ದಿರಿಸಿ, ಕೂತಿದ್ದೆವು. ಓಡುತ್ತಾ ಬಂದ ಅಣ್ಣ ತನಗಾಗಿ ಒಂದು ಸೀಟು ಕಾಯ್ದಿರಿಸಲಾಗಿದೆಯೆಂದು ನೋಡಿ, ತಂದಿದ್ದ ಕಿಟ್ ಬ್ಯಾಗನ್ನು ಮೇಲೆ ನಮ್ಮ ಸೂಟ್ಕೇಸ್ ಹಾಗೂ ಒಂದು ಕಿಟ್ ಇಟ್ಟಿದ್ದ ಜಾಗದಲ್ಲಿ ಇಟ್ಟು... ಇನ್ನೂ ಸಮಯ ಇದೆ.. ಈಗ ಬಂದೆ ಕಣೇ ಎಂದು.. ನಾನು ಬೇಡ್ವೋ ಇಳೀಬೇಡ ಎಂದರೂ ಕೇಳದೆ ಇಳಿದು ಹೊರಟೇ ಹೋದ.

ಬಸ್ಸಿನಲ್ಲಿ ಜನರು ಇನ್ನೂ ಹತ್ತುತ್ತಲೇ ಇದ್ದರು. ಪಾಪ ಕೂರಲು ಜಾಗವಿಲ್ಲದೇ ಅದೇ ಕೊನೆಯ ಬಸ್ಸೆಂದು ನಿಂತೇ ಪ್ರಯಾಣ ಮಾಡುವ ನಿರ್ಧಾರವನ್ನು ಮಾಡಿ ಹತ್ತುತ್ತಿದ್ದರು. ಇದ್ದಕ್ಕಿದ್ದಂತೆ ಜೋರಾಗಿ ಊದಿದ ವಿಷಲ್ ಶಬ್ದ ಕಿವಿಗಪ್ಪಳಿಸುತ್ತಿದ್ದಂತೆ... ಬಸ್ಸಿನ ಪಕ್ಕೆಯ ಮೇಲೆ ಎರಡು ದಪ್ ದಪ್ ಎಂಬ ಏಟಿನ ಶಬ್ದದ ಜೊತೆಗೇ ರೈಟ್ ರೈಟ್ ಎನ್ನುತ್ತಾ ಕಂಡಕ್ಟರ್ ಎಲ್ರೀ ಜಾಗ ಬಿಡ್ರೀ ಎನ್ನುತ್ತಾ ಎಲ್ಲರನ್ನೂ ತಳ್ಳಿಕೊಂಡು ಒಳಗೆ ತೂರಿಯೇ ಬಿಟ್ಟ. ಅದಕ್ಕಾಗೇ ಕಾದಿದ್ದಂತೆ ಬಸ್ಸು ಹೊರಟೇ ಬಿಡ್ತು.... ನಮ್ಮಣ್ಣ ಎಲ್ಲೂ ಕಾಣಲೇ ಇಲ್ಲ. ನನ್ನವರಿಗೆ ಆಗಲೇ ಸಿಟ್ಟು ಬರತೊಡಗಿತ್ತು. ಯಾವಾಗ್ಲೂ ಹೀಗೆ ನಿಮ್ಮಣ್ಣ ಎಂದು ಸ್ವಲ್ಪ ಜೋರಾಗೇ ಸ್ವಗತ ಅನ್ನೋ ಹಾಗೆ ಹೇಳ್ತಾ ಕಿಟಕಿಯಿಂದ ಹೊರಗೆ ಬಗ್ಗಿ ನೋಡುತ್ತಿದ್ದರು. ಅಷ್ಟರಲ್ಲಿ ಇಲ್ಲಿ ಒಳಗೆ ಆಗಲೇ... ಯಾರಿಗ್ರೀ ಸೀಟು ಕಾಯ್ದಿರಿಸಿರೋದು... ತೆಗೀರೀ ಕೂತ್ಕೋತೀವಿ ಎಂಬ ಗಲಾಟೇ ಬೇರೆ. ನಂಗೆ ತುಂಬಾ ಆತಂಕವಾಗಿ ನಾನು ಕುಳಿತಲ್ಲಿಂದ ಎದ್ದು, ಇವರನ್ನು ಸರಿಸಿ, ಕಿಟಕಿಯಿಂದ ಹೊರಗೆ ಬಗ್ಗಿ ನೋಡಿದಾಗ, ಫುಟ್ ಬೋರ್ಡ್ ಮೇಲೆ ತುಂಬಿದ್ದ ಅಷ್ಟೊಂದು ಜನಗಳ ಮಧ್ಯದಲ್ಲಿ ಒಂದು ಬಕ್ಕ ತಲೆ ಹೊಳೆಯುವುದು ಕಂಡಿತು. ನಾನು ಖುಷಿಯಿಂದ ರೀ... ಅಣ್ಣ ಬಸ್ಸು ಹತ್ತಿದಾನ್ರೀ ಎಂದು ಕೂಗುತ್ತಾ... ಇವರ ಪಿಟಿಪಿಟಿ, ಸ್ವಗತಗಳಿಗೆ ಒಂದು ಪೂರ್ಣ ವಿರಾಮದ ಚಿನ್ಹೆ ಬರೆದಿದ್ದೆ. ಸಮಾಧಾನದಿಂದ ಇವರೂ ಬಗ್ಗಿ ನೋಡಿದಾಗ ನಮಗೆ ಕಂಡಿದ್ದು.. ಅಣ್ಣ ಒಂದು ಕೈಯಲ್ಲಿ ಬಸ್ಸಿನ ಕಂಬಿ ಹಿಡಿದು, ಜೋತಾಡ್ತಾ ನನ್ನ ಕಂಡೊಡನೆ... ಹಲ್ಲು ಕಿರಿಯುತ್ತಿದ್ದಾನೆ .

ಅಂತೂ ಅದು ಹೇಗೋ ಕಷ್ಟಪಟ್ಟು ಅವನನ್ನು ಒಳಗೆ ಎಳೆದುಕೊಂಡು ನಿಟ್ಟುಸಿರು ಬಿಟ್ಟಿದ್ದಾಯ್ತು.

ಬಸ್ಸು ಹೊರಟ ಸ್ವಲ್ಪ ಹೊತ್ತಿನಲ್ಲೇ ಅದರ ಕುಲುಕಾಟವೇ ತೊಟ್ಟಿಲ ತೂಗುವಿಕೆಯೇನೋ, ಆಗಲೇ ನಿದ್ರಾ ದೇವಿಯ ವಶರಾಗಿದ್ದವರ ಗೊರಕೆಯೇ ಜೋಗುಳವೇನೋ ಎಂಬಂತೆ ಮೆಲ್ಲಮೆಲ್ಲಗೆ ಎಲ್ಲರೂ ತೂಕಡಿಸಲಾರಂಭಿಸಿದ್ದೆವು. ಇದ್ದಕ್ಕಿದ್ದಂತೆ ಡ್ರೈವರ್ ಅದೇನು ಕಂಡು ಬ್ರೇಕ್ ಹಾಕಿದನೋ ತಿಳಿಯದು, ಹಿಂದೆ ತಲೆಯೊರಗಿಸಿ, ಬಾಯಿ ಬಿಟ್ಟು, ಅರ್ಧನಿಮೀಲಿತರಾಗಿದ್ದವರೆಲ್ಲರ ಹಲ್ಲು, ಮೂಗು, ಹಣೆ ಮುಂದಿನ ಸೀಟಿನ ಕಂಬಿಗೆ ಡೀ... ಡೀ.... ಡಿಚ್ಚೀ....ಹೊಡೆದಿತ್ತು.

ಅದೇ ಕ್ಷಣ ಸರಿಯಾಗಿ ನಮ್ಮಣ್ಣನ ತಲೆಯ ಮೇಲೊಂದು ಕಿಟ್ ಅನಾಮತ್ತು ಟಪ್ ಎಂದು ಎಗರಿ ಕುಳಿತಿತ್ತು... ಪಾಪ ಬಡಪಾಯಿ ಅಣ್ಣ, ಜಜ್ಜಿದ ಮೂಗು ಉಜ್ಜಬೇಕೋ.... ಏಟು ತಿಂದ ಬಕ್ಕತಲೆಯ ಸವರಬೇಕೋ ತಿಳಿಯದೇ ಪೆಚ್ಚಾಗಿದ್ದ. ನಾವಿಬ್ಬರೂ ನಗು ಬಂದರೂ ಅವನ ಕೋಪಕ್ಕೆ ಹೆದರಿ ತಡೆದುಕೊಂಡು, ಅಯ್ಯೋ ಪಾಪ ಎಂಬಂತೆ ಮುಖ ಮಾಡಿ, ಏನಾದರಾಗಲಿ ಎಂದು ಕಿಟ್ ಕೆಳಗೇ ಇಟ್ಟು, ಹಾಗೇ ಮತ್ತೆ ನಿಧಾನವಾಗಿ ನಿದ್ರಾ ದೇವಿಯನ್ನು ಕರೆಯಲಾರಂಭಿಸಿದ್ದೆವು. ಆಗ.. ಇದ್ದಕಿದ್ದಂತೆ "ಅಯ್ಯೋ.... ಅಮ್ಮಾ..." ಎಂಬ ಆಕ್ರಂದನ ನಮ್ಮನ್ನು ಬೆಚ್ಚಿ ಬೀಳಿಸಿತ್ತು.... ಡ್ರೈವರ್ ಮತ್ತೊಮ್ಮೆ ಬ್ರೇಕ್ ಹಾಕಿದಾಗ, ನೋಡಿದರೆ, ಸಾರಿ ಒಂದು ಸೂಟ್ಕೇಸ್ ನಮ್ಮಣ್ಣನ ತಲೆಯನ್ನು ಸ್ಪ್ರಿಂಗ್ ಬೋರ್ಡ್ ಮಾಡಿಕೊಂಡು, ಅವನ ಮಂಡಿಯನ್ನೊಮ್ಮೆ ಗುದ್ದಿ, ಕೆಳಗೆ ನನ್ನ ಕಾಲ ಬಳಿ, ಏನೂ ತಿಳಿಯದಂತೆ, ಮುಗ್ಧವಾಗಿ ಕುಳಿತಿತ್ತು. ಬಾರಿ ನಿದ್ದೆಯಿಂದ ಬೆಚ್ಚಿ ಎದ್ದಿದ್ದ ಎಲ್ಲರೂ ನಗೆಗಡಲಲ್ಲಿ ತೇಲ ತೊಡಗಿದ್ದರು....... ಎರಡನೆಯ ಬಾರಿಗೂ ತಾನೇ ಎಲ್ಲರ ದೃಷ್ಟಿಗೆ ಬೀಳಬೇಕಾಯಿತೆಂಬ ಸಂಕೋಚ, ಬಕ್ಕ ತಲೆಗೆ ಬಲವಾಗಿ ಬಿದ್ದ ಏಟಿನ ನೋವು, ಮನಸಾರ ಪಕ್ಕೆ ಹಿಡಿದು ನಗುತ್ತಿದ್ದ ನಾವಿಬ್ಬರೂ... ಎಲ್ಲರನ್ನೂ..

ಎಲ್ಲವನ್ನೂ ಒಮ್ಮೆ ದುರುಗುಟ್ಟಿಕೊಂಡು ನೋಡಿದ ಅಣ್ಣ ಮೆಲ್ಲಗೆ ತಾನೂ ನಗುವುದೋ ಬಿಡುವುದೋ ಎಂಬಂತೆ ನಗುಮುಖ ಮಾಡಿದ.... ಅಲ್ಲಿಂದ ನಾವ್ಯಾರೂ ಭದ್ರಾವತಿ ತಲುಪುವವರೆಗೂ ನಿದ್ದೆ ಮಾಡಲೇ ಇಲ್ಲ. ಒಬ್ಬರಾದ ಮೇಲೊಬ್ಬರಂತೆ, ಸರದಿಯಲ್ಲಿ ತಲೆ ಮೇಲೆತ್ತಿಕೊಂಡು... ಅಲ್ಲಿ ಜೋಡಿಸಿಟ್ಟಿದ್ದ ಸೂಟ್ ಕೇಸ್ ಗಳು ಹಾಗೂ ತರಹೇವಾರಿ ಕಿಟ್ಟು ಬ್ಯಾಗ್ ಗಳನ್ನು ಸಂಶಯಾತ್ಮಕವಾದ (ಯಾರು ನಮ್ಮ ತಲೆಗಳನ್ನಪ್ಪಳಿಸಲು ಕಾದಿರುವರೋ ಎಂಬಂತೆ) ದೃಷ್ಟಿಯಿಂದ ನೋಡುತ್ತಾ, ಹರಟುತ್ತಾ ಊರು ತಲುಪಿದ್ದೆವು.

ಇದು ನಮ್ಮ ಮೂವರಿಗೂ ಮರೆಯಲಾಗದ ಒಂದು ಹಾಸ್ಯಮಯ ಘಟನೆಯಾಗಿ ಹೋಯಿತು...

Friday, December 10, 2010

ಸುಂದರ ಸಂಜೆ.....

ದಿನವೂ ಮುಂಜಾವಿನಲೇ ಶುರುವಾಗುವ ದಿನಚರಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೇ ರೀತಿಯದ್ದಾಗಿರುತ್ತದೆ. ಸತಿ-ಪತಿಯರಿಬ್ಬರೂ ಕೆಲಸಕ್ಕೆ ಹೋಗಬೇಕಾದ ಸಂಸಾರಗಳಲ್ಲಂತೂ ಆ ಒತ್ತಡ ಶುಭೋದಯಕ್ಕೆ ಮುಂಚೆಯೇ ಪ್ರಾರಂಭವಾಗಿಯೇ ಬಿಟ್ಟಿರುತ್ತದೆ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿ ಗಡಿಯಾರದ ಓಟದ ಜೊತೆಗೇ ತಾವೂ ಓಡುತ್ತಾ, ಏದುತ್ತಾ, ಕಛೇರಿ ಸರಿಯಾದ ಸಮಯಕ್ಕೆ ತಲುಪಲು ಹರ ಸಾಹಸ ಪಡುತ್ತಾರೆ. ಇದೆಲ್ಲವೂ ನನಗೂ ಸ್ವಾನುಭವವೇ ಆಗಿತ್ತಾದ್ದರಿಂದ ಆ ಗಡಿಬಿಡಿ ಬದುಕು ನನಗೆ ಚೆನ್ನಾಗಿ ಅರ್ಥವಾಗಿದೆ. ಆದರೆ ಈಗ ನಾನು ಕೆಲಸ ಬಿಟ್ಟು ಒಂದು ದಶಕವೇ ಕಳೆದು ಹೋಗಿರುವುದರಿಂದ, ಎಲ್ಲವನ್ನೂ ಸ್ವಲ್ಪ ವಿರಾಮದಲ್ಲಿ ನೋಡಲು, ಅರ್ಥ ಮಾಡಿಕೊಳ್ಳಲೂ, ಗಮನಿಸಲೂ ಸಮಯ ಸಿಕ್ಕಿದೆ. ಹೀಗೆ ಒಂದು ದಿನ ನನ್ನ ಸ್ನೇಹಿತರ ಜೊತೆಯ ಉಲ್ಲಾಸದ ಮಾತುಕತೆಗಳಲ್ಲಿ ಮೊದಲಿನಿಂದಲೂ ಮನೆಯನ್ನೇ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿರುವ, ಪೂಜೆ, ಹಬ್ಬ ಹರಿದಿನ, ಮನೆಗೆ ಬಂದು ಹೋಗುವ ನೆಂಟರು, ಇಷ್ಟರು, ಮನೆಯ ಸದಸ್ಯರು ಎಲ್ಲವನ್ನೂ ಅಚ್ಚು ಕಟ್ಟಾಗಿ ನಿರ್ವಹಿಸುತ್ತಾ ಇರುವ ಒಬ್ಬ ಗೃಹಿಣಿ... ಮದುವೆಯಾಗಿ ೧೫ – ೨೦ ವರ್ಷಗಳ ನಂತರವೂ.... ಬೆಳಗಿನಿಂದ ದುಡಿದು, ದಣಿದು ಬರುವ ಪತಿಯನ್ನು ಹೇಗೆ ಸ್ವಾಗತಿಸಬಹುದು ಎಂಬ ಮಾತು ಬಂದಿತ್ತು. ಬೆಳಗಿನಿಂದ ಕಾರ್ಖಾನೆಯಲ್ಲಿ ಯಂತ್ರಗಳ ನಡುವೆ, ಯಂತ್ರಗಳದ್ದೇ ಮನಸ್ಸಿನ ಮಾನವರ ನಡುವೆ, ಕೆಲಸ ಮಾಡಿ ಬಂದಾಗ ಪತಿ ಏನನ್ನು ನಿರೀಕ್ಷಿಸಬಹುದು..?

ಒಂದು ಸುಂದರ ಸಂಜೆ... ಶುಭ್ರವಾದ ಬಾನು, ಇಳೆಯ ಕದಪುಗಳನ್ನು ರಂಗೇರಿಸಿ, ತನ್ನ ಪ್ರೇಮ ನಿವೇದನೆಯನ್ನು ಮಾಡುತ್ತಾ, ತಾನೂ ರಂಗು ರಂಗಾಗಿರುವ ರವಿ, ಇನಿಯನ ಚೆಲ್ಲಾಟಕೆ ಸೋತು, ತಲೆಬಾಗಿ, ನಾಚಿ ನಸುಗೆಂಪಾಗಿ, ಅರಳಿ ನಿಂತ ವಸುಂಧರೆ.. ಹೀಗೊಂದು ದೃಶ್ಯ ಕಲ್ಪಿಸಿಕೊಂಡಾಗ ನನಗೆ ಬೆಳಗಿನಿಂದ ಮನೆಯ ಕೆಲಸಗಳಲ್ಲಿ ಮುಳುಗಿ, ಮಧ್ಯಾಹ್ನದ ಊಟದ ನಂತರ ತುಸು ವಿಶ್ರಾಂತಿ ಪಡೆದು, ದಣಿದು ಬರುವ ಪತಿಯ ಸ್ವಾಗತಕ್ಕಾಗಿ, ಶುಭ್ರ ಸೀರೆಯ ಉಟ್ಟು, ಹೂ ಮುಡಿದು, ನಸು ನಗುತ್ತಾ ಗೇಟ್ ನಲ್ಲಿ ಕಾದು ನಿಂತಿರುವ ಮಡದಿಯ ನೆನಪಾಯಿತು. ಇಡೀ ಮನೆಯ ಉಸ್ತುವಾರಿ ನೋಡಿಕೊಂಡು, ಆ ಒತ್ತಡದ ಕೆಲಸಗಳಲ್ಲೂ ತನ್ನ ಪತಿಗೆ ಇಷ್ಟವಾದ ಪಾಯಸ ತಯಾರಿಸಿ, ಕಾದು ನಿಂತಿಹಳು ಮಡದಿ....

ದ್ವಿಚಕ್ರ ವಾಹನದಲ್ಲಿ, ಮನದನ್ನೆಯ ಬಳಿಗೆ ಹಾರಿ ಬಂದ ಪತಿ ಅವಳ ಒಂದು ಮುಗುಳ್ನಗೆ ಪಡೆದು, ಹೊಸ ಚೈತನ್ಯ ಪಡೆಯುತ್ತಾನೆ. ಬೆಳಗಿನಿಂದ ದುಡಿದ ಮಡದಿಯ ಜೊತೆ ಸ್ವಲ್ಪ ಹೊತ್ತು ಕುಳಿತು ಸಾಂತ್ವನದ, ಪ್ರೇಮದ ಮಾತುಗಳನ್ನಾಡುತ್ತಾ ಅಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲು ಮುಂದಾಗುತ್ತಾನೆ. ಇದೇ ಸಮಯಕ್ಕಾಗಿಯೇ ಕಾತುರದಿಂದ ಕಾಯುತ್ತಿದ್ದ ಮಡದಿ, ಮೆಲ್ಲಗೆ ಅಡಿಯಿಡುತ್ತಾ ಕೈಯಲ್ಲಿ ಲೋಟ ಹಿಡಿದು ಬಂದಾಗ, ಪ್ರಸನ್ನನಾದ ಪತಿ.... ಆಹಾ ಎಂಥಹ ಸುಂದರ ಗಳಿಗೆ, ಪತ್ನಿಯ ಕೈಯ ಬಿಸಿ ಕಾಫಿ... ಎಂದು ಕನಸು ಕಾಣುತ್ತಾನೆ. ಆದರೆ ಹತ್ತಿರ ಬಂದ ಮಡದಿಯ ಕೈಯಲ್ಲಿ ತನ್ನಿಷ್ಟದ ಪಾಯಸದ ಲೋಟ ಕಂಡು, ಹಿಗ್ಗಿ ಹೂವಿನಂತೆ ಅರಳಿ, ಅನುರಾಗ ತುಂಬಿದ ನೋಟದಿಂದ, ಮೆಚ್ಚುಗೆಯಿಂದ ಪತ್ನಿಯನ್ನೇ ನೋಡುತ್ತಾ ಪಾಯಸದ ಲೋಟ ಹಿಡಿದ ಕೈಯನ್ನು ತನ್ನ ಕೈಯೊಳು ತೆಗೆದುಕೊಂಡು ನಸುನಗುತ್ತಾನೆ. ಅತ್ಯಂತ ಮನೋಹರ ದೃಶ್ಯ ಕಂಡ (ಕಲ್ಪನೆಯಲ್ಲಿ) ನನ್ನ ಮನಸ್ಸು ಲಹರಿಯಲ್ಲಿ ತೇಲಾಡ ತೊಡಗಿತ್ತು... ಮನಕ್ಕೆ ಮುದಕೊಟ್ಟಿತ್ತು... ದೃಶ್ಯದ ವರ್ಣನೆ ಕೆಲವೇ ಮಾತುಗಳಲ್ಲಿ ಹಿಡಿದಿಡಿವ ನನ್ನ ಪ್ರಯತ್ನ :


ಮುಸ್ಸಂಜೆಯ ಇಳಿ ಬಿಸಿಲಲಿ
ದಣಿದು ಬಾಯಾರಿ ಬಳಲಿ
ಹಿಂತಿರುಗಿದ ಇನಿಯನ
ಮನದಿಂಗಿತವ ತಿಳಿದು
ಮನ ಮೆಚ್ಚಿದ ಮಡದಿ
ಪಾಯಸದ ಬಟ್ಟಲು ಹಿಡಿದು
ಮೆಲ್ಲನೇ ಬಳಿ ಬರಲು
ಹೊನ್ನ ಹೂನಗೆ ಬೀರಲು
ಅನುರಾಗ ಅರಳಿತು
ಜೊನ್ನ ಜೇನು ಬೆರೆತ
ಪಾಯಸ ಗಂಟಲಿಗೂ
ಮನಕೂ ಸಿಹಿಯ ಲೇಪಿಸಿತು ...

ಅನುರಾಗದ ಅಲೆಯಲ್ಲಿ ತೇಲುತ್ತಾ ಜೋಡಿ ಮನಸ್ಸುಗಳು ಜೋಡಿ ಹಕ್ಕಿಗಳಂತೆ ಸಂತೋಷದಿಂದ ನಲಿದವು.....



ಚಿತ್ರಕೃಪೆ : ಅಂತರ್ಜಾಲ