Sunday, February 21, 2010

ವ್ಯಕ್ತಿ - ವಿಶೇಷಗಳು :

ಶ್ರೀ ಮುತ್ತುಸ್ವಾಮಿ ದೀಕ್ಷಿತರು : (ಕ್ರಿ ಶ ೧೭೭೫ - ೧೮೩೫)

ಶ್ರೀ ದೀಕ್ಷಿತರು ೧೬ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಅಲಂಕಾರ ಹಾಗೂ ಛಂದಸ್ಸ್ ಶಾಸ್ತ್ರಗಳಲ್ಲಿ ಪಾರಂಗತರು. ಶಬ್ದಾಲಂಕಾರ ಹಾಗೂ ತಾಳಾಲಂಕಾರಗಳನ್ನು ಸುಂದರವಾಗಿ ಕೃತಿಗಳಲ್ಲಿ ಅಳವಡಿಸಿದ್ದಾರೆ. ದ್ವಾದಶ ಮುದ್ರೆಗಳನ್ನು , ಕ್ಷೇತ್ರ ಮುದ್ರೆಗಳನ್ನೂ, ತಮ್ಮ ಕೃತಿಗಳಲ್ಲಿ ಅಳವಡಿಸಿದ್ದಾರೆ.

ಸುಮಾರು ೫೦ ಪಾಶ್ಚಾತ್ಯ ಕೃತಿಗಳಿಗೆ ಸಂಸ್ಕೃತ ಪದಪುಂಜ ಜೋಡಿಸಿ, ವೈಭವೀಕರಿಸಿದ್ದಾರೆ. ಶ್ರೀ ಭಾಸ್ಕರ ರಾಯರ ಲಲಿತಾ ಸಹಸ್ರನಾಮ ವ್ಯಾಖ್ಯಾನ ಮತ್ತು ಶ್ರೀ ವಿದ್ಯಾಪರ ತಂತ್ರ ಶಾಸ್ತ್ರ ಪ್ರಚುರ ಪಡಿಸಲು ಮತ್ತು ಬ್ರಹ್ಮಾಂಡ ಪುರಾಣ ಹಾಗೂ ಸೌಂದರ್ಯ ಲಹರಿಯ ವಿಶೇಷತೆಯನ್ನು ಪ್ರಚುರ ಪಡಿಸಲು, ಶ್ರೀ ಭಾಸ್ಕರ ರಾಯರೇ, ಮುತ್ತುಸ್ವಾಮಿ ದೀಕ್ಷಿತರ ಅವತಾರವೆತ್ತಿದ್ದಾರೆನ್ನುತ್ತಾರೆ, ಸಂಗೀತ ಪ್ರಪಂಚದಲ್ಲಿ.

ಇವರು ನಿಷ್ಣಾತ ವೀಣಾ ವೈಣಿಕರಾಗಿದ್ದರು. ಪಂಚದಶ ಗಮಕಗಳನ್ನು ಪ್ರಯೋಗ ಮಾಡಿ ತೋರಿಸಿದ್ದರು. ದೀಕ್ಷಿತರು ಷಣ್ಮುಖನ ಪರಮ ಭಕ್ತರಾಗಿದ್ದರು ಮತ್ತು ಸುಬ್ರಹ್ಮಣ್ಯ ಸ್ವಾಮಿಯು ಇವರಿಗೆ ಸಾಕ್ಷಾತ್ಕಾರವಾಗಿದ್ದನು.

ಶ್ರೀ ದೀಕ್ಷಿತರು ಕೃತಿಗಳ ಅನೇಕ ಗುಚ್ಛಗಳನ್ನು ರಚಿಸಿದ್ದಾರೆ -

೧) ಷೋಡಶ ಗಣಪತಿ ಕೃತಿಗುಚ್ಛ
೨) ತಿರುವಾರೂರಿನ ದೇವಾಲಯದ ಪಂಚ ಲಿಂಗಗಲ ಕುರಿತು ಕೃತಿಗಳು
೩) ಪಂಚತತ್ವಗಳ ಆಧಾರದ ಕೃತಿಗಳು
೪) ಅಭಯಾಂಬಾ ಕೃತಿಗಳು
೫) ಸುಬ್ರಹ್ಮಣ್ಯ ಸ್ವಾಮಿ ಕೃತಿಗಳು
೬) ತಿರುವಾರೂರಿನ ತ್ಯಾಗರಾಜ ಸ್ವಾಮಿ ಕುರಿತು ಕೃತಿಗಳು
೭) ನೀಲೋತ್ಪಲಾಂಬಾ ಕೃತಿಗಳು
೮) ಕಮಲಾಂಬಾ ನವಾವರಣ ಕೃತಿಗಳು

ಹೀಗೆ ಅವರ ರಚನೆಗಳಲ್ಲಿ ವೈವಿಧ್ಯಮಯ ಕೃತಿಗಳನ್ನು ನಾವು ಕಾಣಬಹುದು.


ಶ್ರೀ ತ್ಯಾಗರಾಜರು (ಕ್ರಿ ಶ ೧೭೬೭ - ೧೮೪೭)

ಶ್ರೀ ತ್ಯಾಗರಾಜರು ತಮ್ಮ ೧೮ನೇ ವಯಸ್ಸಿನಲ್ಲಿಯೇ ರಾಮಕೃಷ್ಣಾನಂದ ಯತೀಂದ್ರರಿಂದ ಶ್ರೀ ರಾಮ ಮಂತ್ರ ದೀಕ್ಷೆ ಪಡೆದು, ಇದನ್ನು ಒಂದು ವ್ರತದಂತೆ, ಒಂದು ಸಲಕ್ಕೆ ೧,೨೫,೦೦೦ ರಾಮನಾಮ ಜಪದಂತೆ ವರ್ಷಾನುಗಟ್ಟಲೆ ಮಾಡಿ, ತೊಂಬತ್ತಾರು ಕೋಟಿ ರಾಮಜಪ ಮಾಡಿದ್ದರು. ತಮ್ಮ ತಂದೆಯವರು ಮಾಡುತ್ತಿದ್ದ ರಾಮಾಯಣ ಪಾರಾಯಣವನ್ನು ಕೇಳಿ ಕೇಳಿ ಅವರು ಶ್ರೀ ರಾಮನ ಪರಮ ಭಕ್ತರಾಗಿದ್ದರು. ತಂದೆ ರಾಮ ಬ್ರಹ್ಮರು ಕಾಲವಾದ ನಂತರ ತಮ್ಮ ಪಾಲಿಗೆ ಬಂದ ತಂದೆಯ ಪೂಜೆಯ ಕೋಣೆ ಮತ್ತು ರಾಮಪಂಚಾಯತನ ವಿಗ್ರಹಗಳನ್ನು ಸಂತೋಷದಿಂದ ಸ್ವೀಕರಿಸಿದ್ದರು. ತ್ಯಾಗರಾಜರು ಗೃಹಸ್ಥರಾಗಿದ್ದೂ ವಿರಕ್ತಿಯಿಂದಿದ್ದರು. ರಾಮತಾರಕ ಮಂತ್ರದ ಸಿದ್ಧಿಯಾಗಿ ಅವರಿಗೆ ಶ್ರೀರಾಮನು ಲಕ್ಷ್ಮಣನೊಂದಿಗೆ ಸಾಕ್ಷಾತ್ಕರಿಸಿದ್ದನು. ಆನಂದ ತುಂಬಿ ತ್ಯಾಗರಾಜರು "ಏಲ ನೀ ದಯ ರಾದು" ಎಂಬ ಕೀರ್ತನೆ ರಚಿಸಿ ಹಾಡಿದ್ದರು. ತ್ಯಾಗರಾಜರು ಮಹಾರಾಜರು ಕೊಟ್ಟ ಸಂಪತ್ತನ್ನು ನಿರಾಕರಿಸಿದರೆಂಬ ಕಾರಣಕ್ಕೆ ಕೋಪಗೊಂಡು ಅವರ ಅಣ್ಣ, ರಾಮನ ಪೂಜೆಯ ಹುಚ್ಚು ತಮ್ಮನಿಗೆ ಹಿಡಿದಿರುವುದೇ ವಿರಕ್ತಿಗೆ ಕಾರಣವೆಂದು ಅವರು ಪೂಜಿಸುತ್ತಿದ್ದ ರಾಮಪಂಚಾಯತನ ವಿಗ್ರಹಗಳನ್ನು ಎತ್ತಿಕೊಂಡು ಹೋಗಿ ಕಾವೇರಿ ನದಿಯಲ್ಲಿ ಬಿಸಾಡಿಬಿಟ್ಟರು. ಕಾವೇರಿ ನದಿಯನ್ನೆಲ್ಲಾ ಶೋಧಿಸಿ, ಅದರಲ್ಲಿ ಈಜಾಡಿ ತಮ್ಮ ಸ್ವಾಮಿಯನ್ನು ಪಡೆದುಕೊಂಡಿದ್ದರು ತ್ಯಾಗರಾಜರು.

ಒಮ್ಮೆ ಅವರು ತಿರುಪತಿಗೆ ಹೋದಾಗ ದರ್ಶನದ ವೇಳೆ ಮುಗಿದಿದ್ದು ದೇವರ ಮುಮ್ದೆ ತೆರೆ ಹಾಕಲಾಗಿತ್ತು. ಇಷ್ಟು ದೂರ ಬಂದು ದೇವರನ್ನು ಕಾಣಲಗದಲ್ಲಾ ಎಂದು ಮರುಗಿ ತ್ಯಾಗರಾಜರು ಅಲ್ಲೇ ನಿಂತು "ತೆರೆ ತೆಗೆಯಬಾರದೇ, ತಿರುಪತಿ ವೆಂಕಟರಮಣ" (ತೆರ ತೀಯಗರಾದಾ) ಎಂದು ಹಾಡಿದರು. ಒಡನೆಯೇ ಅರ್ಚಕರೂ ಎಲ್ಲರೂ ನೋಡುತ್ತಿದ್ದಂತೆಯೇ ತೆರೆ ತನ್ನಷ್ಟಕ್ಕೆ ತಾನೇ ಪಕ್ಕಕ್ಕೆ ಸರಿದುಕೊಂಡು ಬಿಟ್ಟಿತು. ದೇವರ ದರ್ಶನ ಮಾಡಿದ ತ್ಯಾಗರಾಜರು ’ವೆಂಕಟೇಶಾ ನಿನ್ನನ್ನು ನೋಡಲು ಹತ್ತುಸಾವಿರ ಕಣ್ಣುಗಳು ಬೇಕು" ಎಂದು ಹಾಡಿ ಕೃತಜ್ಞತೆ ಸೂಚಿಸಿದ್ದರಂತೆ.

ಶ್ರೀ ತ್ಯಾಗರಾಜರೂ ಸಹ ಅತ್ಯಂತ ಪ್ರಸಿದ್ಧಿ ಪಡೆದಿರುವ ’ಪಂಚರತ್ನ ಕೃತಿಗಳು’ ಅಲ್ಲದೇ -

೧) ಕೋವೂರಿ ಪಂಚರತ್ನಗಳು
೨) ಶ್ರೀರಂಗಂ ಪಂಚರತ್ನಗಳು
೩) ತಿರುವಟ್ಟಿಯೂರ್ ಪಂಚರತ್ನಗಳು
೪) ಲಾಲ್ ಗುಡಿ ಪಂಚರತ್ನಗಳು
೫) ನಾರದ ಪಂಚರತ್ನಗಳು
೬) ಕಾಂಚಿಪುರಂ ಕೃತಿಗಳು

ಹೀಗೇ ಕೃತಿಗಳ ಗುಚ್ಛಗಳನ್ನೂ, ಅಸಂಖ್ಯಾತ ಕೀರ್ತನೆಗಳನ್ನೂ ರಚಿಸಿದ್ದಾರೆ.


ಶ್ರೀ ಬಾಲಮುರಳೀಕೃಷ್ಣ : (ಜನನ ೦೬.೦೭.೧೯೩೦)


ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಶ್ರೀ ಬಾರಮುರಳೀ ಕೃಷ್ಣರು ತಮ್ಮದೇ ಆದ ಹೊಸ ೭೨ ರಾಗಗಳನ್ನು ಕೊಡುಗೆಯಾಗಿಸಿದ್ದಾರೆ. ಇವರು ಅನೇಕ ಪ್ರಯೋಗಗಳನ್ನು ಮಾಡಿ, ಕ್ರಮವಾಗಿ ೪, ೩, ೨ ಸ್ವರಗಳನ್ನಷ್ಟೇ ಉಪಯೋಗಿಸಿ ಹೊಸ ರಾಗಗಳನ್ನು ಸ್ವತ: ಕಂಡುಹಿಡಿದು, ಕೃತಿಗಳನ್ನೂ ಕೂಡ ರಚಿಸಿದ್ದಾರೆ. ಇವರ ಈ ರಾಗಗಳ ಗುಚ್ಛದ ಒಂದು ರಾಗವಾದ "ಮಹತಿ"ಯನ್ನು ಆಧರಿಸಿ ತಮಿಳು ಸಿನೆಮಾ ಕ್ಷೇತ್ರದ ಪ್ರಸಿದ್ಧ ಹಾಡು "ಅತಿಶಯ ರಾಗಂ... ಆನಂದ ರಾಗಂ.... ", "ಅಪೂರ್ವ ರಾಗಂಗಳ್" ಚಿತ್ರದಲ್ಲಿ ಅಳವಡಿಸಲಾಗಿದೆ.

ಇವರು ಒಮ್ಮೆ ಪ್ಯಾರಿಸ್ ನಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದಾಗ, ಒಬ್ಬ ಫ್ರೆಂಚ್ ಪ್ರಜೆ - ಪಿಟೀಲು ತಯಾರಕ ಎದ್ದು ನಿಂತು ಇವರನ್ನು ಕೇಳಿದನಂತೆ... when one doctorate cannot be done in one's life time, how can Dr Balamurali perfect so many......... ಎಂದು.... ಇವರ ಪಾಂಡಿತ್ಯ ಪರೀಕ್ಷಿಸುವ ಸಲುವಾಗಿ, ಅವನು ಇವರನ್ನು ಒಂದು ಹಾಡು ಫ್ರೆಂಚ್ ಭಾಷೆಯಲ್ಲಿ ಹಾಡಲು ಕೇಳಿದಾಗ, ಇವರು ಸುಲಲಿತವಾಗಿ ಹಾಡಿದ್ದರು.... ಇವರಿಗೆ ಅನೇಕ ದೇಶ ವಿದೇಶ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗಿದೆ. ಬಾಲಮುರಳಿಯವರ ಅಭಿಪ್ರಾಯದಲ್ಲಿ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ೭೨ ಮೇಳಕರ್ತ ರಾಗಗಳೇ ಪ್ರಪಂಚದ ಎಲ್ಲಾ ವಿಧದ ಸಂಗಿತಕ್ಕೂ ಆಧಾರ. ಇವರ ಸ್ವಂತ ರಚನೆ, ಅವರದೇ ರಾಗ "ಸರ್ವಶ್ರೀ"ಯಲ್ಲಿ... ಉಮಾಸುತಂ ನಮಾಮಿ, ಮಮ ಮಾನಸ್ಥಿತಂ.... ಈ ರಾಗಕ್ಕೆ ಇವರು ಕೇವಲ ಮೂರೇ ಮೂರು ಸ್ವರಗಳಾದ ’ಸ’ ’ಮ’ ’ಪ’ ಗಳನ್ನು ಮಾತ್ರವೇ ಉಪಯೋಗಿಸಿದ್ದಾರೆ...

ಶ್ರೀ ಬಾಲಮುರಳಿಯವರಿಗೆ ೧೮ನೇ ವಯಸ್ಸಿಗೇ ಮದುವೆಯಾಗಿ, ೨೦ನೇ ವಯಸ್ಸಿಗೇ ಅವರು ತಂದೆಯಾಗಿದ್ದರು. ೩ ಹೆಣ್ಣು ಮತ್ತು ೩ ಗಂಡು ಮಕ್ಕಳು. ಈಗವರಿಗೆ ಮರಿಮಕ್ಕಳೂ ಇದ್ದಾರೆ.....




ಆಧಾರ : ಶ್ರೀ ದೀಕ್ಷಿತರು ಮತ್ತು ಶ್ರೀ ತ್ಯಾಗರಾಜರು - ಲಭ್ಯವಿರುವ ಹಲವಾರು ಪುಸ್ತಕಗಳು
ಶ್ರೀ ಬಾಲಮುರಳೀಕೃಷ್ಣ - ಜಯಾ ಟಿ ವಿ ಯ "ತಿರುಂಬಿಪಾಕ್ಕಿರೇನ್" ಕಾರ್ಯಕ್ರಮದಲ್ಲಿ, ಸ್ವತ: ಬಾಲಮುರಳಿಯವರೇ
ಪ್ರಸ್ತುತ ಪಡಿಸಿದ ವಿವರಗಳು.

Monday, February 8, 2010

ಪುಸ್ತಕ ಪರಿಚಯ - ೪

ತಾವರೆಯ ಕೊಳ....

ಸೂಕ್ಷ್ಮ ಸ್ವಭಾವದವಳಾದ ಶಾಂತಾಳಿಗೆ ಮಕ್ಕಳಿಲ್ಲ ಮತ್ತು ಮೈದುನ ರಮೇಶನ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ. MBBS ಓದುತ್ತಿದ ರಮೇಶ ಮತ್ತು ಅವನ ಪರಿವಾರದವರು ಮೆನಿಂಜೈಟಿಸ್ ಬಂದು ಆಸ್ಪತ್ರೆ ಸೇರಿದ ಶಾಂತಳನ್ನು ಕಳೆದುಕೊಳ್ಳುತ್ತಾರೆ. ಸಾವಿನ ಬಗ್ಗೆ ಬರೆದ ಎರಡು ವಾಕ್ಯ...."ಅಪಾರ ಬಂಧು ಬಳಗವನ್ನೂ, ತನ್ನ ಪ್ರೀತಿ ಪಾತ್ರರನ್ನೂ, ತನಗಿಂತಲೂ ವಯಸ್ಸಾದವರನ್ನೂ ತನಗಾಗಿ ಕಂಬನಿಗರೆಯಲು ಬಿಟ್ಟು ಶಾಂತ ಹೊರಟು ಹೋದಳು.." ನನ್ನನ್ನು ತಟ್ಟಿತು. ತ್ರಿವೇಣಿಯವರು ಬದುಕು ಮತ್ತು ಸಾವನ್ನು - ವಿಶ್ಲೇಶಿಸುತ್ತಾ, ಸಾವಿಗೆ ವಯಸ್ಸು, ಬಳಗ ಯಾವುದೂ ಬೇಡ, ಬರೀ ಜೀವ ಮಾತ್ರ ಸಾಕು ಮತ್ತು ಬದುಕು ಎನ್ನುವುದು ಎಷ್ಟೊಂದು ಅಶಾಶ್ವತವೆಂದಿದ್ದಾರೆ...

ಶಾಂತ ಸತ್ತ ತಕ್ಷಣ "ಮುತ್ತೈದೆ ಸಾವು ಪುಣ್ಯ ಮಾಡಿದ್ದಳು" ಎಂದು ಮುತ್ತೈದೆಯಲ್ಲದ ಹೆಂಗಸೊಬ್ಬಳು ನುಡಿದಾಗ ಲೇಖಕಿ ಶಾಂತಳ ಗಂಡ ರಾಮಣ್ಣನ ಮೂಲಕ "ಜೀವನದಲ್ಲಿ ಏನನ್ನೂ ಕಾಣದೆ ಕಣ್ಣು ಮುಚ್ಚುವ ಮುತ್ತೈದೆ ಸಾವೆಂತದು"? ಎಂದು ಅರ್ಥಪೂರ್ಣವಾಗಿ ಹೇಳುತ್ತಾರೆ....

ಶಾಂತಳ ಸಾವಿನಿಂದ ಕುಗ್ಗಿ ಹೋಗಿದ್ದ ರಮೇಶನನ್ನು ಮುಂಬಯಿಗೆ ಹವಾಬದಲಾವಣೆಗಾಗಿ ಕಳುಹಿಸುತ್ತಾರೆ. ಅಲ್ಲಿ ರಾಮಣ್ಣನ ಗೆಳೆಯ ಶೇಷಾದ್ರಿಯ ಹೆಂಡತಿ, ಮಗುವಿನ ತಾಯಿ, ರತ್ನಳಲ್ಲಿ ಅನುರಕ್ತನಾಗುತ್ತಾನೆ ರಮೇಶ. ಅವಳು ಸ್ನೇಹಿತನ ಮಡದಿ, ತನಗೆ ದಕ್ಕುವವಳಲ್ಲವೆಂದು ಗೊತ್ತಿದ್ದೂ ಉತ್ಕಟವಾಗಿ ಪ್ರೇಮಿಸುತ್ತಾನೆ. ಅವನು ತನ್ನನ್ನು ಬಿಟ್ಟು ವ್ಯಾಸಂಗ ಮುಗಿಸಿ ವೈದ್ಯನಾಗಬೇಕೆಂದು ರತ್ನ ಹೇಳುತ್ತಾಳೆ. ಈ ಪ್ರೇಮ, ಈ ಹಗರಣ ಮುಂದೊಂದು ದಿನ ನಿಮ್ಮ ಪಾಲಿಗೆ ಅರ್ಥವಿಲ್ಲದಿದ್ದಾಗಿ ತೋರುತ್ತದೆಂದು ತಿಳಿ ಹೇಳುತ್ತಾಳೆ. ರತ್ನಳ ಮಗು ಆರೋಗ್ಯ ತಪ್ಪಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ರಮೇಶನೊಳಗಿನ ವೈದ್ಯನಾಗುವ ಬಯಕೆ ಮತ್ತೆ ಚಿಗುರೊಡೆಯುತ್ತದೆ. ಕೊನೆಗೂ ರತ್ನಳನ್ನು ಬಿಟ್ಟು ವಾಪಸ್ಸು ಊರಿಗೆ ಹೊರಡುವ ತಯಾರಿ ನಡೆಸುತ್ತಾನೆ ರಮೇಶ. ಇಲ್ಲಿಯತನಕ ಅತ್ಯಂತ ಸಂಯಮ ತೋರಿದ್ದ ರತ್ನ ಅಸಹಾಯಕಳಾಗಿ ದುರ್ಬಲಳಾಗಿ ರಮೇಶನ ಮುಂದೆ ನಿಂತಿರುತ್ತಾಳೆ. ನಾವು ಯಾರೊಡನೆಯೂ ತುಂಬಾ ಸ್ನೇಹ, ವಿಶ್ವಾಸ ಇಟ್ಟುಕೋಬಾರದು.... ಬಾಂಧವ್ಯವೂ ಬೇಡ, ವಿರಹವೂ ಬೇಡ... ಎಂಬಂತಹ ಮಾತುಗಳನ್ನಾಡುತ್ತಾಳೆ....

ಮದುವೆಗೆ ಮುಂಚೆ ಪ್ರತಿಯೊಬ್ಬ ಹುಡುಗ ಹುಡುಗಿಯೂ ತನ್ನ ಭಾವಿಪತ್ನಿಯ ಬಗ್ಗೆ, ಜೀವನದ ಬಗ್ಗೆ, ನಾನಾ ರೀತಿಯ ಕನಸುಗಳನ್ನು ಕಟ್ಟಿರುತ್ತಾರೆ. ನೆಲೆಯಿಲ್ಲದ ಹಾರಾಡುವ ಚಂಚಲ ಚಿಟ್ಟೆಯಾಗಿರುತ್ತದೆ ಆಗ ಮನಸ್ಸು. ಮದುವೆಯಾದ ಮೇಲೆ ಮನಸ್ಸಿಗೆ ನೆಲೆ ಸಿಕ್ಕುತ್ತದೆ. ಆಗ ನಮಗೆ ಹಿಂದಿನ ಅನುಭವವೆಲ್ಲಾ ಕೇವಲ ಹುಚ್ಚಾಟ ಎನಿಸುತ್ತದೆ.... ಲೇಖಕಿ ಜೀವನದಲ್ಲಿ ಮನಸ್ಸಿಗೆ ನೆಲೆಸಿಗುವುದೆಂದರೆ ಅದು "ಮದುವೆ"ಯಿಂದ ಮಾತ್ರವೇ ಎನ್ನುತ್ತಾರೆ.... ಪ್ರೇಮ ಸ್ಥಿರವಲ್ಲ, ಪ್ರೇಮ ಚಿರವಲ್ಲ, ಹೂವಿನಿಂದ ಹೂವಿಗೆ ಹಾರುವ ಭ್ರಮರಕ್ಕೂ, ಪ್ರೇಮಕ್ಕೂ ವ್ಯತ್ಯಾಸವಿಲ್ಲ. ಕ್ಷಣಿಕ ಕಾಲ ಮಾತ್ರ ಮನಸ್ಸನ್ನು ಮುತ್ತಿ ಭ್ರಾಂತಿಗೀಡುಮಾಡುವ ಒಂದು ದೌರ್ಬಲ್ಯಕ್ಕೆ ಪ್ರೇಮ ಎನ್ನುತ್ತಾರೆ ಲೇಖಕಿ.

ಈ ಕಥೆಗೆ ಸಂಬಂಧ ಪಟ್ಟಂತೆ ತ್ರಿವೇಣಿಯವರು ಹಾಗೆ ಹೇಳಿರಬಹುದೆಂದು ಕೊಂಡರೂ ಕೂಡ, ನನ್ನ ಮನಸ್ಸು ಪ್ರೇಮ ಒಂದು ದೌರ್ಬಲ್ಯವೆಂದು ಒಪ್ಪಿಕೊಳ್ಳುವುದಿಲ್ಲ. ಪ್ರೇಮ ಖಂಡಿತಾ ಚಿರವಾಗಿರತ್ತೆ. ಪ್ರೇಮಿಸಿ ಮದುವೆಯಾದವರು ನಂತರ ಬದುಕಿನಲ್ಲಿ ಏನೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂದು ಕೊಂಡರೂ, ಇಬ್ಬರ ನಡುವೆ ಸ್ವಲ್ಪವಾದರು ಆ ಪ್ರೇಮ ಎನ್ನುವುದಿಲ್ಲದಿದ್ದರೆ, ಜೊತೆಗೆ ಬಾಳುವುದು ಕಠಿಣ ಕೆಲಸವಾಗಿ ಬಿಡುತ್ತದೆ. ಹೊಂದಾಣಿಕೆ ಬದುಕಿನೊಂದಿಗಾಗುತ್ತದೆಯೇ ಹೊರತು ಪ್ರೇಮದೊಂದಿಗಲ್ಲವೆಂದು ನನ್ನ ಅಭಿಪ್ರಾಯ.....

Monday, February 1, 2010

ಪುಸ್ತಕಗಳ ಬಿಡುಗಡೆ ಸಮಾರಂಭ....

ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವು. ಹೊಸದಾದ ಮೂರು ಪುಸ್ತಕಗಳು "ಅಭಿವೃದ್ಧಿಯ ಅಂಧಯುಗ", "ಟಿಪ್ಪು ಖಡ್ಗದ ನ್ಯಾನೋ ಕಾರ್ಬನ್" ಮತ್ತು "ಕೊಪೇನ್ ಹೇಗನ್ ಋತು ಸಂಹಾರ" ಭೂಮಿ ಬುಕ್ಸ್ ಪ್ರಕಾಶನದ ಮೊಟ್ಟ ಮೊದಲ ಪುಸ್ತಕಗಳು.. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪ್ರೊ.ಬಿ ಕೆ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ, ಕೆ ವಿ ಅಕ್ಷರ ಮತ್ತು ಶ್ರೀಮತಿ ನೇಮಿಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಡೆಯಿತು ಪುಸ್ತಕಗಳ ಲೋಕಾರ್ಪಣಾ ಸಮಾರಂಭ. ಎಂದಿನಂತೆ ಅಂಕಿತದವರು ಉಪಹಾರವನ್ನೂ ಏರ್ಪಡಿಸಿ ಬಿಟ್ಟಿದ್ದರು. ಈ ಸಮಾರಂಭದಲ್ಲಿ ನನ್ನನ್ನು ಆಕರ್ಷಿಸಿದ ವಿಚಾರಗಳೆಂದರೆ ಭೂಮಿ ಬುಕ್ಸ್ ಪ್ರಕಾಶನದವರ ಪ್ರತಿ ಪುಸ್ತಕಕ್ಕೆ ಬದಲು ಒಂದು ಗಿಡ ನೆಡುವ ಸಂಕಲ್ಪ ಮತ್ತು ಅತಿಥಿಗಳಿಗೆ ಪ್ರೀತಿಯಿಂದ ಕೊಟ್ಟ ಸಸಿಗಳು. ಹಸಿರು ಸಸಿಗಳು ಒಬ್ಬರಿಂದೊಬ್ಬರಿಗೆ ವಿನಿಮಯವಾಗುವ ವಿಷಯವೇ ನನ್ನನ್ನು ಬಹಳ ಸಂತೋಷ ಪಡಿಸಿತ್ತು. ಎರಡು ವರ್ಷಗಳ ಹಿಂದೆ ನಮ್ಮ ಚಿಕ್ಕಮ್ಮನ ಮನೆಯಲ್ಲಿ ನರಸಿಂಹ ಹೋಮ ಮಾಡಿದಾಗ, ನಾವು ಉಡುಗೊರೆಯಾಗಿ ಪುಟ್ಟ ಪುಟ್ಟ ಸಸಿಗಳನ್ನು ಕೊಟ್ಟಾಗ, ಅಲ್ಲಿ ನೆರೆದಿದ್ದ ಎಲ್ಲಾ ಸಾರ್ವಜನಿಕರೂ (ಎಲ್ಲರೂ ನಮ್ಮ ಬಳಗವೆಂಬ ವರ್ಗಕ್ಕೆ ಸೇರಿದವರೇ...!! :-) ನಮ್ಮನ್ನೇ ವಿಚಿತ್ರವಾಗಿ ನೋಡಿದ್ದರು. ಆದರೆ ಪುಸ್ತಕ ಬಿಡುಗಡೆಯಂತಹ ಸಾರ್ವಜನಿಕ ಸಮಾರಂಭಗಳಲ್ಲಿ ಈ ಆಚರಣೆ ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು.

ಎಲ್ಲಾ ಅತಿಥಿಗಳ ಮಾತುಗಳ ನಂತರ ಶ್ರೀ ನಾಗೇಶ ಹೆಗಡೆಯವರು ತಮ್ಮ ಚಿಕ್ಕ ಚೊಕ್ಕವಾದ ಮಾತುಗಳನ್ನು ಆಡಿದರು. ಅವರು ಅಲ್ಲಿ ನೆರೆದಿದ್ದವರಿಗೆಲ್ಲಾ "ನಿಮ್ಮ ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಘಟನೆಗಳು ನಡೆದಾಗಲೆಲ್ಲಾ (ಅಂದರೆ ನಮ್ಮ ಜನ್ಮ ದಿನಗಳಂದು, ಮದುವೆಯ ವಾರ್ಷಿಕೋತ್ಸವ, ಮಕ್ಕಳ ಹುಟ್ಟು ಹಬ್ಬ, ಅನ್ನಪ್ರಾಶನ ಹೀಗೆ.......) ನೀವು ನೆನಪಾಗಿ ಒಂದೊಂದು ಗಿಡ ನೆಟ್ಟರೆ, ಬೆಂಗಳೂರು ಮತ್ತೆ ಹಸಿರು ವನವಾಗುತ್ತದೆ ಎಂದು ಕರೆ ಕೊಡುವುದರ ಮೂಲಕ ತಮ್ಮ ಪರಿಸರ ಮತ್ತು ಹಸಿರು ಕಾಳಜಿಯನ್ನು ವ್ಯಕ್ತಪಡಿಸಿದರು. ನನಗೆ ಅವರ ಈ ವಿಧಾನ ಅತ್ಯಂತ ಪ್ರಭಾವಕಾರಿ ಅನ್ನಿಸಿತು. ಸರಕಾರ ತಿಪ್ಪಗೊಂಡನಹಳ್ಳಿಯ ಸಮೀಪ ’ಸ್ಫೂರ್ತಿ ವನ’ಕ್ಕೆ ಜಾಗ ಕೊಟ್ಟಿದೆಯೆಂದೂ ಮತ್ತು ಭೂಮಿ ಪ್ರಕಾಶನ ಹೊರ ತರುವ ಪ್ರತಿಯೊಂದು ಪುಸ್ತಕಕ್ಕೆ ಬದಲಾಗಿ ಅಥವಾ ನೆನಪಾಗಿ ಈ ಸ್ಫೂರ್ತಿವನದಲ್ಲಿ ಒಂದೊಂದು ಗಿಡ ನೆಡಲಾಗುತ್ತದೆಂದು ಭರವಸೆಯಿತ್ತರು. ಇದರ ಶುರುವಾತು ಶ್ರೀಮತಿ ನೇಮಿಚಂದ್ರರವರು, ತಾವೇ ನೆಟ್ಟ ನೇರಳೆ ಸಸಿಯನ್ನು ಶ್ರೀ ನಾಗೇಶ ಹೆಗಡೆಯವರಿಗೆ ಕಾಣಿಕೆಯಾಗಿ ನೀಡುವ ಮೂಲಕ ಮಾಡಿದರು.

ಸಮಾರಂಭದ ಚಿತ್ರ ’ಅವಧಿ’ಯಲ್ಲಿದೆ. ಶ್ರೀ ನಾಗೇಶ ಹೆಗಡೆಯವರ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ನನ್ನನ್ನು ತುಂಬಾ ಆಕರ್ಷಿಸಿತು.....

ಕೊನೆಯದಾಗಿ ಹೇಳಲೇಬೇಕಾದ ಒಂದು ಮಾತು.... ಸಮಾರಂಭದಲ್ಲಿ ನಾನು ಭೇಟಿಯಾದ ನಮ್ಮ ಸಂಪದ ಮಿತ್ರರು... ಹರಿ, ಶ್ರೀಹರ್ಷ, ವಿನಯ್..... ಮತ್ತು ಬ್ಲಾಗ್ ಲೋಕದ ಗೆಳೆಯರು ಕ್ಷಣ ಚಿಂತನೆ ಖ್ಯಾತಿಯ ಚಂದ್ರಶೇಖರ್, ಛಾಯಾ ಕನ್ನಡಿ ಖ್ಯಾತಿಯ ಶಿವು ಮತ್ತು ಮಲ್ಲಿ ಕಣ್ಣಲ್ಲಿ (ಕ್ಯಾಮೆರಾ) ಖ್ಯಾತಿಯ ಡಿ ಜಿ ಮಲ್ಲಿಕಾರ್ಜುನ್.... ನನಗೆ ನಿಜಕ್ಕೂ ಕಾರ್ಯಕ್ರಮಕ್ಕೆ ಹೋಗಿದ್ದು ಸಂತಸ ತಂದಿತ್ತು........