Thursday, October 22, 2009

ನವಾವರಣ ಕೃತಿಗಳು - ೩

ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ನವಾವರಣ ಕೃತಿಗಳನ್ನು ಹಾಡಲು ಸಂಗೀತಗಾರರು ಒಂದು ಪದ್ಧತಿಯನ್ನು ಅನುಸರಿಸುತ್ತಾರೆ. ನಾವು ಯಾವುದೇ ಕೆಲಸ ಮಾಡಬೇಕಾದರೂ ನಿರ್ವಿಘ್ನವಾಗಿ ನೆರವೇರುವಂತೆ, ಅಗ್ರ ಪೂಜೆಯನ್ನು ವಿಘ್ನೇಶ್ವರನಿಗೆ ಸಲ್ಲಿಸಿ ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ನೆರವೇರಿಸು ಎಂದು ಹೇಗೆ ಪ್ರಾರ್ಥಿಸುತ್ತೇವೋ, ಹಾಗೇ ಇಲ್ಲೂ ಅಗ್ರಸ್ಥಾನ ನಮ್ಮ ಗಜಾನನನಿಗೇ ಮೀಸಲು. ನಾವು ದೀಕ್ಷಿತರ ಶ್ರೀ ಮಹಾಗಣಪತಿ ರವತುಮಾಂ... ಎಂಬ ಗೌಳ ರಾಗದಲ್ಲಿ ರಚಿಸಲ್ಪಟ್ಟಿರುವ ಮಿಶ್ರಛಾಪುತಾಳದ ಕೃತಿಯೊಂದಿಗೆ ಆರಂಭಿಸುತ್ತೇವೆ. ಕೃತಿಯ ಸಾಹಿತ್ಯ........

ಪಲ್ಲವಿ

ಶ್ರೀ ಮಹಾಗಣಪತಿ ರವತುಮಾಂ... - ಸಿದ್ಧಿ ವಿನಾಯಕೋ..
ಮಾತಂಗಮುಖ:
||

ಅನುಪಲ್ಲವಿ


ಕಾಮಜಕ ವಿಧೀಂದ್ರ ಸನ್ನುತ... ಕಮಲಾಲಯ ತಟನಿವಾಸೋ..

ಕೋಮಳಕರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ:.................
||

ಚರಣ

ಸುವರ್ಣಾಕರ್ಷಣ ವಿಘ್ನರಾಜೋ.... ಪಾದಾಂಬುಜೋ....
ಗೌರವರ್ಣ ವಸನಧರೋ.... ಫಾಲಚಂದ್ರೋ.... ನರಾದಿವಿನುತ ಲಂಬೋದರೋ... ಕುವಲಯ ಸ್ವವಿಷಾಣ ಪಾಶಾಂಕುಶ ಮೋದಕ ಪ್ರಕಾಶಕರೋ... ಭವ ಜಲಧಿ ನಾವೋ..... ಮೂಲ ಪ್ರಕೃತಿ ಸ್ವಭಾವಸ್ಸುಖತರೋ... ರವಿಸಹಸ್ರ ಸನ್ನಿಭ ದೇಹೋ.... ಕವಿಜನನುತ ಮೂಷಿಕ ವಾಹೋ.. ಅವನತ ದೇವತಾ ಸಮೂಹೋ.... ಅವಿನಾಶ ಕೈವಲ್ಯ ಗೇಹೋ..... ||

ಈ ಕೃತಿಯಲ್ಲಿ ದೀಕ್ಷಿತರು ವಿಘ್ನರಾಜನನ್ನು ಹೊಗಳಿ ಸಿದ್ಧಿ ವಿನಾಯಕನೇ.... ಆನೆಯ ಮುಖದವನೇ..... ನನ್ನನ್ನು ರಕ್ಷಿಸು..... ಮನ್ಮಥನ ತಂದೆಯಾದ ವಿಷ್ಣು, ಬ್ರಹ್ಮ ಮತ್ತು ದೇವೇಂದ್ರರಿಂದ ಪೂಜೆಗೊಳ್ಳುವವನೇ...... ಅತ್ಯಂತ ಮೃದುವಾದ ಕೈಗಳೂ, ಕಾಲುಗಳನ್ನೂ ಹೊಂದಿದವನೇ. ..... ತಿರುವಾರೂರು ಎಂಬ ಕ್ಷೇತ್ರದ ಕಮಲಾಂಬಾ ದೇವಾಲಯದ ಸರೋವರದ ದಡದಲ್ಲಿರುವವನೇ..... ಸುಬ್ರಹ್ಮಣ್ಯನ ಮೊದಲು ಜನಿಸಿ ಅಣ್ಣನಾದವನೇ... ಶ್ರೀ ಮಹಾಗಣಪತಿಯೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ.

ಮುಂದುವರೆಯುತ್ತಾ ಚಿನ್ನವನ್ನು ಒರೆಹಚ್ಚಿದ ವಿಘ್ನರಾಜನೆಂದು ಪ್ರಸಿದ್ಧಿಯಾದವನೇ ಕಮಲ ಪುಷ್ಪದಷ್ಟು ಮೃದು ಮತ್ತು ಸುಂದರವಾದ ಪಾದಗಳುಳ್ಳವನೇ..... ಹಣೆಯಲ್ಲಿ ಚಂದ್ರನನ್ನು ಧರಿಸಿದವನೇ.... ಶುಭ್ರ ಬಿಳುಪು ವಸ್ತ್ರಧರಿಸಿದವನೇ... ನರರು ಸುರರು ಎಲ್ಲರಿಂದಲೂ ಸ್ತುತಿಸಲ್ಪಡುವವನೇ.... ಇಡೀ ಜಗತ್ತನ್ನೇ ಅಡಗಿಸಿಕೊಂಡ ದೊಡ್ಡ ಹೊಟ್ಟೆಯವನೇ.... ಪಾಶ-ಅಂಕುಶಧಾರನೇ..... ಕನ್ನೈದಿಲೆ ಪುಷ್ಪವನ್ನು ಕೈಯಲ್ಲಿ ಹಿಡಿದಿರುವವನೇ....... ಮೂಲ ಪ್ರಕೃತಿಯ ಸ್ವಭಾವದವನೇ..... ಸಹಸ್ರಾರು ಸೂರ್ಯರ ಕಾಂತಿಯಷ್ಟು ಕಂಗೊಳಿಸುವ ದೇಹದವನೇ...... ಕವಿ - ಸುರ - ನರರೆಲ್ಲರ ಅತ್ಯಂತ ಪ್ರಿಯನಾದವನೇ..... ಇಲಿಯನ್ನು ವಾಹನವನ್ನಾಗಿಸಿಕೊಂಡವನೇ..... ನಾಶವೇ ಇಲ್ಲದವನೇ.... ಮೋಕ್ಷದಾಯಕನೇ..... ಎಲ್ಲರಿಂದಲೂ ನಮಸ್ಕರಿಸಲ್ಪಡುವವನೇ..... ನನ್ನನ್ನು ರಕ್ಷಿಸು ಎನ್ನುತ್ತಾರೆ.

ಗಣೇಶನ ಪ್ರಾರ್ಥನೆಯ ನಂತರ ನಾವು ದೀಕ್ಷಿತರ ಸುರುಟಿ ರಾಗದ, ಆದಿತಾಳದ ರಚನೆ, ಬಾಲಸುಬ್ರಹ್ಮಣ್ಯಂ ಹಾಡಿ ಷಣ್ಮುಖನನ್ನು ಪ್ರಾರ್ಥಿಸುತ್ತೇವೆ......

ಪಲ್ಲವಿ

ಬಾಲಸುಬ್ರಹ್ಮಣ್ಯಂ ಭಜೇಹಂ...... ಭಕ್ತ ಕಲ್ಪ ಭೂರುಹಂ ಶ್ರೀ..........||

ಅನುಪಲ್ಲವಿ

ನೀಲ ಕಂಠ ಹೃದಾನಂದಕರಂ......... ನಿತ್ಯ ಶುದ್ಧ ಬುದ್ಧ ಮುಕ್ತಾಂಬರಂ............||

ಚರಣ

ವೇಲಾಯುಧ ಧರಂ....... ಸುಂದರಂ...... ವೇದಾಂತಾರ್ಥ ಬೋಧ ಚತುರಂ...........
ಫಾಲಕ್ಷ ಗುರುಗುಹಾವತಾರಂ........ ಪರಾಶಕ್ತಿ ಸುಕುಮಾರಂ ಧೀರಂ..........

ಪಾಲಿತ ಗೀರ್ವಾಣಾದಿ ಸಮೂಹಂ........ ಪಂಚಭೂತಮಯ ಮಾಯಾಮೋಹಂ........
ನೀಲಕಂಠ ವಾಹಂ.......... ಸುದೇಹಂ......... ನಿರತಿಶಯಾನಂದ ಪ್ರವಾಹಂ..........||

ದೀಕ್ಷಿತರು ಈ ಕೃತಿಯಲ್ಲಿ ಬಾಲಸುಬ್ರಹ್ಮಣ್ಯನೇ.... ಭಕ್ತರು ಕೇಳಿದ್ದನ್ನೆಲ್ಲಾ ಕರುಣಿಸುವ ಕಲ್ಪವೃಕ್ಷವೇ ನಿನ್ನನ್ನು ನಾನು ಭಜಿಸುತ್ತೇನೆ, ಪೂಜಿಸುತ್ತೇನೆ, ನಿನಗೆ ನನ್ನ ನಮಸ್ಕಾರಗಳು ಎಂದು ಆರಂಭಿಸಿ.... ಅನುಪಲ್ಲವಿಯಲ್ಲಿ ... ಷಣ್ಮುಖನೇ ನೀನು ನೀಲಕಂಠನಾದ ನಿನ್ನ ತಂದೆ ಈಶ್ವರನಿಗೆ ಆನಂದ ಕೊಡುವವನೂ, ಪರಿಶುದ್ಧತೆಗೆ ಹೆಸರಾದವನೂ, ಅತಿಜ್ಞಾನಿಯೂ - ನಮಗೆ ಜ್ಞಾನವನ್ನು ದಯಪಾಲಿಸುವವನೂ, ಮೋಕ್ಷಸ್ವರೂಪಿಯೂ ಅಂದರೆ ಮುಕ್ತಿಯನ್ನು ಕೊಡುವವನೂ, ಅಂಬರದಲ್ಲೆಲ್ಲಾ ವ್ಯಾಪಿಸಿಕೊಂಡಿರುವವನೂ... ನಿನಗೆ ಇದೋ ನನ್ನ ಪ್ರಣಾಮಗಳು.........ಎನ್ನುತ್ತಾರೆ.

ಮುಂದುವರೆಯುತ್ತಾ ಚರಣದಲ್ಲಿ ಷಣ್ಮುಖನನ್ನು ವರ್ಣಿಸುತ್ತಾ.... ನಿನ್ನ ಕೈಯಲ್ಲಿ ವೇಲಾಯುಧವನ್ನು ಹಿಡಿರುವವನೂ, ಮುದ್ದು ಮುಖದವನು, ಸುಂದರ ದೇಹದವನು, ವೇದ ಉಪನಿಷತ್ತುಗಳ ಅರ್ಥವನ್ನು ತಿಳಿದಿರುವವನೂ ಅಂದರೆ ’ಓಂ’ ಕಾರದ ಅರ್ಥವನ್ನು ನಿನ್ನ ತಂದೆಗೇ ಬೋಧಿಸಿದವನು... ತುಂಬಾ ಧೈರ್ಯವಂತನೂ, ಪಾರ್ವತಿಯ ಸುಕುಮಾರನೂ... ಮಯೂರ ವಾಹನನೂ... ಸದೃಡಕಾಯನೂ.... ಅತಿಶಯವಾದ ಆನಂದವನ್ನು ಕೊಡುವವನೂ ಗುರುವಾದ ಗುಹನ ಅವತಾರವನ್ನು ತಾಳಿದವನೂ ಆದ ಶ್ರೀ ಸುಬ್ರಹ್ಮಣ್ಯನೇ ನಿನಗೇ ನಮೋ ನಮ: ಎನ್ನುತ್ತಾರೆ.

ದೀಕ್ಷಿತರು ತಮ್ಮ ಸುಬ್ರಹ್ಮಣ್ಯನ ಕುರಿತಾದ ಎಲ್ಲಾ ಕೃತಿಗಳಲ್ಲೂ ಷಣ್ಮುಖನ ಆರಾಧನೆ ಮಾಡುವವರು ಎಲ್ಲಾ ಜಂಜಾಟಗಳಿಂದಲೂ ಮುಕ್ತಿಹೊಂದಿ ಮೋಕ್ಷ ಸಾಧನೆ ಮಾಡಬಹುದೆಂದು ತಿಳಿಸುತ್ತಾರೆ. ಅವರ ಕೃತಿಗಳಲ್ಲಿನ ಷಣ್ಮುಖನ ವರ್ಣನೆ ಅತಿಶಯವಾಗಿರುತ್ತದೆ. ಅವರ ಇನ್ನೊಂದು ರಚನೆ... ಸಮಷ್ಠಿ ಚರಣವನ್ನೊಳಗೊಂಡ, ನಾಟ ರಾಗದ "ಸ್ವಾಮಿನಾಥ ಪರಿಪಾಲಯ ಶುಮಾಂ"... ಕೂಡ ಸುಂದರವಾದ ಕೃತಿ. ಎಲ್ಲಾ ರಚನೆಗಳಲ್ಲೂ ಅವರ ಗುರುಗುಹನ ಮೇಲಿನ ಭಕ್ತಿ ಉತ್ಕಟವಾಗಿ ತೋರಿಸಲ್ಪಟ್ಟಿದೆ.

Friday, October 16, 2009

ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು - 2

ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸ ಬೇಕಾಗುತ್ತದೆ. ಇದರಲ್ಲಿ ಒಂಭತ್ತು ಆವರಣಗಳನ್ನು ಪೂಜಿಸಬೇಕಾಗುತ್ತದೆ. ಪ್ರತಿಯೊಂದು ವೃತ್ತದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಶಕ್ತಿಯೂ ಇದೆ. ಇಲ್ಲಿರುವ ಒಂಭತ್ತು ಚಕ್ರಗಳನ್ನೂ ಪೂಜಿಸಿದ ನಂತರವೇ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀ ಚಕ್ರ"ದ ಉಪಾಸನೆಯೇ "ಶ್ರೀ ವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಈ ನವಾವರನ ಕೃತಿಗಳಲ್ಲಿ ದೀಕ್ಷಿತರು ದೇವಿಯ ಆರಾಧನೆಯನ್ನೂ, ದೇವಿಯ ಸೌಂದರ್ಯವನ್ನೂ ಅತ್ಯಂತ ಮನೋಹರವಾಗಿ ವರ್ಣಿಸಿದ್ದಾರೆ.....

ಆಶ್ವೀಜ ಬಹುಳ ಚತುರ್ದಶಿ - ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ "ಮೀನಾಕ್ಷಿ ಮುದಂ ದೇಹಿ" ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. "ಮೀನಲೋಚನಿ ಪಾಶಮೋಚನಿ....." ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ... ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ...... ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ..... ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ........

ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದೇ ಆಚರಿಸಲಾಗುತ್ತದೆ. ದೀಕ್ಷಿತರ್ಯ್ ಸಂಗೀತದ ಜ್ಯೋತಿಯನ್ನು ಬೆಳಗಿ, ನಮಗಾಗಿ ಇಂತಹ ಅಪೂರ್ವ ಹಾಗೂ ಅಮೂಲ್ಯ ಸಂಪತ್ತನ್ನು ಅನುಗ್ರಹಿಸಿದ್ದಾರೆ. ಮಹಾನ್ ಚೇತನವಾದ ದೀಕ್ಷಿತರನ್ನು, ನಾವು ಅವರ ರಚನೆಗಳನ್ನು ಹಾಡುತ್ತಾ, ಅವರು ಹಚ್ಚಿದ ನಾದ ಜ್ಯೋತಿಯನ್ನು ನಿರಂತರವಾಗಿ ಬೆಳಗುತ್ತಾ, ತಲೆಬಾಗಿ ನಮಿಸೋಣ............


ಮುಂದುವರೆಯುವುದು........

Wednesday, October 14, 2009

ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು

ಅತ್ಯಂತ ವಿದ್ವತ್ತ್ ಪೂರ್ಣ ಮತ್ತು ಶ್ರೇಷ್ಠವಾದ ನವಾವರಣ ಕೃತಿಗಳ ಬಗ್ಗೆ ನನಗೆ ತಿಳಿದ ಅರ್ಥ ಹಾಗೂ ಅನಿಸಿಕೆಗಳನ್ನು ನಿಮ್ಮ ಜೊತೆ ವಿನಿಮಯ ಮಾಡಿಕೊಳ್ಳುವ ಮೊದಲು ಈ ಕೃತಿಗಳ ಕರ್ತೃ, ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಜೀವನದ ಬಗ್ಗೆ ಒಂದು ಚಿಕ್ಕ ಇಣುಕು ನೋಟ ಅಥವಾ ಪೀಠಿಕೆ :..........


ಒಂದು ಶತಮಾನ ಕ್ರಿ.ಶ.೧೭೫೦ ರಿಂದ ೧೮೫೦ ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸುವರ್ಣಯುಗ. ಶ್ರೀ ಮುತ್ತುಸ್ವಾಮಿ ದೀಕ್ಷಿತರು ಶಾಸ್ತ್ರೀಯ ಸಂಗೀತದ ರತ್ನತ್ರಯರೂ, ತ್ರಿಮೂರ್ತಿಗಳಲ್ಲೂ ಒಬ್ಬರು. ಇವರು ಹಂಸಧ್ವನಿ ರಾಗದ ಕರ್ತೃಗಳಾದ ಶ್ರೀ ರಾಮಸ್ವಾಮಿ ದೀಕ್ಷಿತರು ಮತ್ತು ತಾಯಿ ಸುಬ್ಬಲಕ್ಷ್ಮಿ ಅಮ್ಮಾಳ್ ರವರ ಸುಪುತ್ರರಾಗಿ ತಿರುವಾರೂರಿನಲ್ಲಿ ೧೭೭೫ರಲ್ಲಿ ಜನಿಸಿದರು. ತಂದೆ ತಾಯಿಯರ ಭಕ್ತಿಗೆ ಒಲಿದ ವೈದೀಶ್ವರ ಕೋಯಿಲ್ ಮುತ್ತು ಕುಮರಸ್ವಾಮಿಯ ಅನುಗ್ರಹಿತ ಮಗು ದೀಕ್ಷಿತರು. ೧೬ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಇವರು ತಮ್ಮ ಗುರುಗಳ ಆಣತಿಯಂತೆ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಗಿತ್ತು. ನಿಷ್ಣಾತ ವೈಣಿಕರಾದ ದೀಕ್ಷಿತರು ಪಂಚದಶ ಗಮಕಗಳನ್ನು ಪ್ರಯೋಗಮಾಡಿ ತೋರಿಸಿದ್ದರು. ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕರಿಸಿದ್ದನು. ತಾವು ಈ ’ಗುರುಗುಹ’ನ ದಾಸ, ಅವನ ಕಾಲಿನ ಕಸವೆಂಬ ಭಾವನೆಯಿಂದ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ಎಂದು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಇವರು ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಭಾವ ವ್ಯಕ್ತಪಡಿಸಿದ್ದಾರೆ.

ದೀಕ್ಷಿತರು ಶ್ರೀ ವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಅತ್ಯಂತ ಶ್ರೇಷ್ಠ ಕೃತಿಗಳಲ್ಲಿ ಅವರ ಪಾಂಡಿತ್ಯ ಮತ್ತು ವಿದ್ವತ್ತ್ ಗಳ ಅನುಭವ ನಮಗಾಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಅವರ ವಿಶೇಷತೆಯೇ....

ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ..... ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ, ಸ್ಥಾನ ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ.......

ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು. ತಮ್ಮದೇ ರಚನೆ "ಮಾಯೆ ತ್ವಂ ಯಾಹಿ, ಮಾಂ ಬಾದಿತುಂ ಕಾಹಿ".... ಎಂಬ ಕೃತಿಯಲ್ಲಿ ಎಲೈ ಮಾಯೆಯೇ ನನ್ನನ್ನು ತ್ಯಜಿಸು, ಬಾಧಿಸಬೇಡವೆಂದು ಹೇಳುತ್ತಾರೆ...... ದೀಕ್ಷಿತರು ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ರಚಿಸಿದ್ದಾರೆ.


ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ದೇವರನ್ನು ಪೂಜಿಸುತ್ತಿದ್ದರು. ಅವರು ಬಹಳ ಮೃದು ಹೃದಯದವರೂ, ಕರುಣೆಯುಳ್ಳವರೂ ಆಗಿದ್ದರು. ಬರದಿಂದ ಬಸವಳಿದ ಜೀವಿಗಳನ್ನು ನೋಡಿ, ಮರುಗಿ... "ಆನಂದಾಮೃತ ಕರ್ಷಿಣೀ... ಅಮೃತ ವರ್ಷಿಣೀ...." ಎಂದು ಬೇಡಿದರು. ನನ್ನ ಮನಸ್ಸಿನಲ್ಲಿ ಸಂತೋಷದ / ಆನಂದದ ಮಳೆಗರೆದ ತಾಯೇ... "ಸಲಿಲಂ ವರ್ಷಯ ವರ್ಷಯ".... ಎಂದು ಹಾಡಿದರು.........


ರ‍ಾಗ : ಅಮೃತವರ್ಷಿಣಿ ತಾಳ : ಆದಿತಾಳ

ಪಲ್ಲವಿ

ಆನಂದಾಮೃತ ಕರ್ಷಿಣಿ.. ಅಮೃತ ವರ್ಷಿಣಿ....
ಹರಾದಿ ಪೂಜಿತೇ ಶಿವೇ ಭವಾನಿ.......||

ಸಮಷ್ಟಿ ಚರಣ

ಶ್ರೀನಂದಾದಿ ಸಂರಕ್ಷಿಣಿ...... ಶ್ರೀ ಗುರುಗುಹ ಜನನಿ ಚಿದ್ರೂಪಿಣಿ...
ಸಾನಂದ ಹೃದಯ ನಿಲಯೇ ಸದ್ಯ ಸ್ಸುವೃಷ್ಟಿ ಹೇತವೇ ತ್ವಾಂ.....
ಸಂತತಂ ಚಿಂತಯೇ ಅಮೃತೇಶ್ವರಿ......
ಸಲಿಲಂ ವರ್ಷಯ ವರ್ಷಯ ವರ್ಷಯ............ ||


ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರು. ಹೀನ ಕುಲದವನಾದ ಅವನು ನವಗ್ರಹ ಶಾಂತಿ ಮಾಡಲಾಗುವುದಿಲ್ಲವೆಂದು, ಅವನಿಗೆ ಈ ಕೃತಿಗಳನ್ನು ಸ್ವತ: ಹೇಳಿಕೊಟ್ಟರು. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಹಾಗೆ ಸಂಗೀತದಿಂದಲೂ ಸಾಧ್ಯವೆಂದು ಶಿಷ್ಯನಿಗೆ ಉಪದೇಶಿಸಿದರು. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು.... ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಟ ಕೃತಿಗಳಾಗಿವೆ.........

ಮುಂದುವರೆಯುವುದು.............

ಕೊನೆಯ ಮಾತು : ಆನಂದಾಮೃತಕರ್ಷಿಣಿ ಕೃತಿಯ ಕೊಂಡಿ ಹಂಸಾನಂದಿಯವರ ಬ್ಲಾಗ್ ಮೂಲಕ ಸಿಕ್ಕಿತ್ತು. ಅವರಿಗೆ ಧನ್ಯವಾದಗಳು....

Tuesday, October 6, 2009

ಆನಂದ..ಬ್ರಹ್ಮಾನಂದ..ಪರಮಾನಂದ.. ಸಂಗೀತವೇ........

ಶ್ರೀ ಕೃಷ್ಣರಾಜೇಂದ್ರ ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜ ತನ್ನ ೪೧ನೇ ಸಂಗೀತ ಸಮ್ಮೇಳನವನ್ನು ಈ ತಿಂಗಳ ೪ನೇ ತಾರೀಖಿನಿಂದ ನಡೆಸುತ್ತಿದೆ. ಪ್ರತಿದಿನ ಬೆಳಿಗ್ಗೆ ವಿದ್ವತ್ ಘೋಷ್ಟಿಗಳು ನಡೆಯುತ್ತಿವೆ. ಸಂಜೆ ೪.೧೫ರಿಂದ ೫.೪೫ರವರೆಗೆ ಯುವ ಉದಯೋನ್ಮುಖ ಕಲಾವಿದರುಗಳ ಸಂಗೀತ ಕಛೇರಿಗಳು ನಡೆಯುತ್ತಿವೆ. ಸಾಯಂಕಾಲ ೬ ಘಂಟೆಯಿಂದ ರಾತ್ರಿ ೯ ಘಂಟೆಯವರೆಗೆ ಭವ್ಯ ಸಂಗೀತ ಕಛೇರಿಗಳು ನಡೆಯುತ್ತಿವೆ.

ನಿನ್ನೆ ೬ನೇ ತಾರೀಖು ಸಾಯಂಕಾಲ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಏರ್ಪಡಿಸಿದ್ದರು. ಸರಿಯಾಗಿ ೬ ಘಂಟೆಗೆ ಕಛೇರಿ ನಠಭೈರವಿ ರಾಗದ, ಅವರ ಸ್ವಂತ ರಚನೆಯಾದ ವರ್ಣದಿಂದ ಆರಂಭವಾಯಿತು. ಈ ವರ್ಣ ಈ ಕಛೇರಿಗೆಂದೇ ಮಾಡಿದ ಮತ್ತು ಅರ್ಪಿಸಲ್ಪಟ್ಟ ಕೃತಿ ಎಂದು ಶ್ರೀ ಪದ್ಮನಾಭನ್ ಹೇಳಿದರು. ಮುಂದುವರೆದು ಮಾಮವಸದಾವಂದೇ...... ಭಾವಯಾಚ್ಯುತಂ ವಾಸುದೇವಂ, ಪೂರ್ವಿ ಕಲ್ಯಾಣಿ ರಾಗದಲ್ಲಿ...... ಕೃತಿಗೆ ಸೊಗಸಾದ ನೆರವಲ್ ಹಾಡಿ, ಕಲ್ಪನಾ ಸ್ವರಗಳನ್ನು ಹಾಡಿದರು. ಕೃತಿ ಆರಂಭಿಸುವ ಮೊದಲು ಮಾಡಿದ ಪೂರ್ವಿ ಕಲ್ಯಾಣಿ ರಾಗದ ಆಲಾಪನೆ ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿತ್ತು.

ಇದರ ನಂತರ ಅವರು ಹಾಡಿದ್ದು ಚಪಲವಿರಬೇಕು... ನಮಗೆ ಗಾನ ಹೋಳಿಗೆ ತಿಂದು ತೇಗುವಂತಾ, ವೈಕುಂಠ ತೋರಿಸುವ ಗಾಯನ (ಗಾನದ) ಚಪಲವಿರಬೇಕು..... ಎಂಬ ಸ್ವಂತ ರಚನೆ ಹಾಡಿದರು. ಈ ಕೃತಿಯ ಸಾಹಿತ್ಯ ನನಗೆ ಬರೆದುಕೊಳ್ಳಲಾಗದಿದ್ದರೂ ಅದರ ಭಾವಾರ್ಥ ಮಾತ್ರ ನನ್ನನ್ನು ಆಶ್ಚರ್ಯಗೊಳಿಸಿತು. ಶ್ರೀ ಪದ್ಮನಾಭನ್ ರವರು ಈ ರಚನೆಯಲ್ಲಿ ಗಾನದ ಹೋಳಿಗೆ ತಿನ್ನಲು ಅನಿಲದ ಅಡಚಣೆಯಿಲ್ಲ, ಅನ್ನ ವರ್ಜ್ಯವಿಲ್ಲ.... ಎಂದು ಸೊಗಸಾಗಿ ಹಾಡುತ್ತಾ ಹೋದಂತೆ, ನಮಗೆ ಅರ್ಥ ತಿಳಿಯಾಗಿ ನಮ್ಮ ಮನಮುಟ್ಟುವಂತಾಯಿತು. ಒಟ್ಟಿನಲ್ಲಿ ಅವರು ಹೂರಣದ ಒಬ್ಬಟ್ಟನ್ನು ವರ್ಣಿಸುತ್ತಾ... ಒಳಗಿರುವ ಹೂರಣ ಸಂಗೀತದ ಸಾಹಿತ್ಯ.... ಹೋಳಿಗೆಯ ಬಣ್ಣವೇ ನಾವು ಹಾಡುವ ’ವರ್ಣ’.... ಸಕ್ಕರೆಯ ಒಬ್ಬಟ್ಟಿಗೆ ಮತ್ತೆ ಮೇಲೆ ಹಾಕಿಕೊಳ್ಳುವ ಸ್ವಲ್ಪ ಸಕ್ಕರೆಯೇ ಸಂಗೀತದ ಲಯ, ತಾಳ, ಭಾವ ಎಲ್ಲವನ್ನೂ ಹೋಳಿಗೆಗೆ ರುಚಿ ಹೆಚ್ಚಾಗಲು ಸೇರಿಸುವ ಕ್ಷೀರ (ಹಾಲು) ಮತ್ತು ಅಭಿಗಾರ (ತುಪ್ಪ) ಎಂದು ಮನತುಂಬಿ ಹಾಡುತ್ತಾ ಹೋದಂತೆ, ಕೇಳುವವರಿಗೆ ನಿಜವಾಗಲೂ ಹೋಳಿಗೆ ಸವಿದದ್ದಕ್ಕಿಂತ ಹೆಚ್ಚು ಆನಂದ ಉಂಟಾಯಿತು.

ಕಛೇರಿ ಮುಂದುವರೆಸುತ್ತಾ.. ಎಂತವೇಡುಕೊಂದೂ ರಾಘವಾ.....ಹಾಡಿದ ನಂತರ ಮತ್ತೊಂದು ಕೃತಿ ನನ್ನನ್ನು ಅತಿಯಾಗಿ ಸೆಳೆದಿದ್ದು ಅವರು ಹಾಡಿದ ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ.... ಎಂಬ ಸಾಹಿತ್ಯ. ಇದರ ಚರಣದಲ್ಲಿ ಅವರು ಹೇಳುತ್ತಾರೆ...
ದಾನ ಧರ್ಮ ಮಾಡಲಿಲ್ಲ.. ದಯಬುದ್ಧಿ ಹುಟ್ಟಲಿಲ್ಲ... ಜ್ಞಾನ ಅರಿತೂ ಹರಿ ಪೂಜೆ ಮಾಡಲಿಲ್ಲ... ಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ... ನಿರ್ಮಲ ಮನದಲ್ಲಿ ಒಂದೂ ದಿನವಿರಲಿಲ್ಲ... ಉಂಡು ಸುಖಿಯಲ್ಲ.. ಉಟ್ಟು ತೊಟ್ಟು ಹರಿನಾಮವಿಲ್ಲ... ದುಡ್ಡು ಕೊಟ್ಟು ಹರಿಸೇವೆ ಮಾಡಲಿಲ್ಲ... ಗುಂಡು ನಾಯಿಯಂತೆ ಮನೆ ಮನೆಗಳ ತಿರುಗಿ ಇದ್ದೆ... ಮೊಂಡು ಜೋಗಿಗಳ ಗುಣಗಳ ಬಿಡಿಸೋ ದಯವ ಮಾಡೋ.....

ಹಾಡಿ ಮುಗಿಸಿ ಮತ್ತೆ ದಾನ ಧರ್ಮ ಮಾಡಲಿಲ್ಲ ಎಂಬ ಕಡೆ ನೆರವೆಲ್ ಮಾಡಿದರು.. ನಂತರ ಹಾಡಿದ್ದೇ ಬಂಟುರೀತಿ ಕೊಲುವು ವಿಯವಯ್ಯ ರಾಮಾ...., ಇದರ ನಂತರ ಬಂದಿದ್ದು ಸರ್ವಕಾಲಕ್ಕೂ ಅತ್ಯಂತ ಜನಪ್ರಿಯವಾದ ದ್ವಿಜಾವಂತಿ ರಾಗದ ಅಖಿಲಾಂಡೇಶ್ವರಿ ರಕ್ಷಮಾಂ........ ಇದಾದ ಮೇಲೆ ಹಾಡಿದ್ದೇ ಕಛೇರಿಯ ವಿಶೇಷ ಘಟ್ಟ... ನಠ ಭೈರವಿಯ ರಾಗಾಲಾಪನೆ... ತಾನ... ಪಲ್ಲವಿ "ಆನಂದ.... ಬ್ರಹ್ಮಾನಂದ..... ಪರಮಾನಂದ.... ಸಂಗೀತವೇ.....". ಇದಂತೂ ನಿಜವಾಗಿ ಶ್ರೋತೃಗಳಿಗೆಲ್ಲಾ ಸಂಗೀತದ ಪರಮಾನಂದವನ್ನೇ ಉಣಬಡಿಸಿತು. ಶ್ರೀ ಪದ್ಮನಾಭನ್ ರವರ ಕಛೇರಿಗಳಲ್ಲಿ ಅವರು ಪ್ರಯೋಗಿಸುವ ಕಲ್ಪನಾ ಸ್ವರಗಳು, ಆಲಾಪನೆಗಳು, ನೆರವೆಲ್ ಮಾಡುವ ಹೊಸ ಹೊಸ ವಿಧಾನಗಳು ನಮ್ಮನ್ನು ಖಂಡಿತಾ ಸ್ವರ್ಗಕ್ಕೇ ಕರೆದುಕೊಂಡು ಹೋಗಿಬಿಡತ್ತೆ. ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಲೇ ಇರೋಣ ಎನ್ನಿಸುವಷ್ಟು ಅದ್ಭುತವಾಗಿರುತ್ತದೆ.

ನಂತರ ಹಾಡಿದ್ದು ಪಾರ್ಥಸಾರಥಿ ರುಕ್ಮಿಣೀಪತಿ.....ಸ್ವಯಂ ರಚನೆ ಮಾಡಿದ್ದು.... ಕೊನೆಯ ಘಟ್ಟ ಮುಟ್ಟಿದ್ದ ಈ ಸಾಯಂಕಾಲದ ಕಛೇರಿಗೆ ಶ್ರೀ ಪದ್ಮನಾಭರ್ ರವರು ಭಕ್ತಿಯ ಸಿಂಚನ ಲೇಪಿಸಿದ್ದು ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮವ್ರತಾಯಚ, ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೆ... ಎಂಬ ಗುರುರಾಯರ ಸ್ತುತಿಯನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಿದ್ದು.....

ಕಛೇರಿ ಮುಕ್ತಾಯದ ಹಂತ ತಲುಪುತ್ತಿದ್ದಂತೆ ನನ್ನೊಳಗಿನ ಚಡಪಡಿಕೆ ಮಿತಿ ಮೀರಿತ್ತು... ಯಾವ ತಿಲ್ಲಾನ ಹಾಡಿ ಮುಗಿಸುತ್ತಾರೆಂಬ ಕುತೂಹಲ.... ನೆನೆಸಿದ್ದಂತೆಯೇ.. ಸಿಂಧೂಭೈರವಿಯ ತಿಲ್ಲಾನ ಶುರು ಮಾಡಿದರು. ಮಧ್ಯದ ಸಾಹಿತ್ಯ ಕೂಡ ಅವರ ಸ್ವಂತ ರಚನೆಯೇ.... ಅವರು ತಿಲ್ಲಾನ ಹಾಡಿದ ವೇಗ ಯಾವ ಯುವ ಕಲಾವಿದನನ್ನೂ ಪೋಟಿಗೊಡ್ಡಬಹುದಾಗಿತ್ತು. ಮೂರು ಘಂಟೆಗಳ ಕಾಲ ಸುಶ್ರಾವ್ಯವಾಗಿ ಗಾನದ ಅಮೃತವನ್ನೇ ಸುರಿಸುವ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಎಷ್ಟು ಕೇಳಿದರೂ, ಇನ್ನೂ ಗಾನಾಮೃತಕ್ಕಾಗಿ ತಹತಹಿಸುವಂತೆ ಮಾಡುತ್ತದೆ. ಸಂಗೀತವನ್ನೇ ಜೀವ, ಸರ್ವಸ್ವವೆಂದುಕೊಂಡು, ಅದೊಂದು ಪೂಜೆಯೇನೋ ಎಂಬಂತೆ ಹಾಡುತ್ತಾ ಮೋಡಿ ಮಾಡುವ ಈ ಕಲಾವಿದರನ್ನು ಹೋಲಿಸಲು ಅಥವಾ ವರ್ಣಿಸಲು ನನಗೆ ಶಬ್ದ ಭಂಡಾರ ಸಾಲದು..... ಕಛೇರಿ ಮುಗಿಸಿ ಹೊರಗೆ ಬಂದರೆ, ಯಾವುದೋ ದಿವ್ಯವಾದ ಗಾನ ಲೋಕದಿಂದ ಧರೆಗಿಳಿದು ಬಂದಂತೆ ಅನ್ನಿಸುತ್ತದೆ.........

ಬೆಂಗಳೂರು ಗಾಯನ ಸಮಾಜ ಪ್ರತೀ ವರ್ಷ ನಡೆಸುವ ಈ ಸಮ್ಮೇಳನದಲ್ಲಿ ವಾರದ ದಿನಗಳು ಶ್ರೋತೃಗಳ ಹಾಜರಾತಿ ಸ್ವಲ್ಪ ಕಮ್ಮಿಯಾಗೇ ಇರತ್ತೆ. ಇಂಥಹ ಸತ್ಕಾರ್ಯ ಮಾಡುತ್ತಿರುವ ಒಂದು ಸಂಸ್ಥೆಯನ್ನು ನಾವು ಪ್ರೋತ್ಸಾಹಿಸಲೇ ಬೇಕು, ನಮ್ಮ ಅತ್ಯಮೂಲ್ಯವಾದ ಕರ್ನಾಟಕ ಸಂಗೀತವನ್ನು ಉಳಿಸಲೇ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಂಥಹ ಅಪರೂಪದ ಕಲಾವಿದರು ತಮ್ಮನ್ನೇ ಮರೆತು ಅಮೃತಧಾರೆಯನ್ನೇ ಹರಿಸುವಾಗ ನಾವು ಕನಿಷ್ಠ ಕೇಳಿಯಾದರೂ ನಮ್ಮ ಜನ್ಮ ಸಾರ್ಥಕ್ಯ ಪಡೆಯಬಹುದಲ್ವಾ?............

Friday, October 2, 2009

ಎರಡು ಸಾವಿನ ಸುತ್ತ.........

ಮೊದಲನೆಯ ಸಂದರ್ಭ :

ಸಾವು ಮನುಷ್ಯನ ಗತ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ ಎಂಬ ಚಿಕ್ಕ ಸತ್ಯ ನಿನ್ನೆ ನನ್ನ ಅನುಭವಕ್ಕೆ ಬಂತು. ನಮ್ಮ ಕಟ್ಟಡದಲ್ಲಿ ಕಾವಲುಪಡೆಯ ಸದಸ್ಯನಾದ ಒಬ್ಬ ವ್ಯಕ್ತಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಮರಳಲು ಸಮವಸ್ತ್ರ ಬದಲಿಸಿ ಬಂದಾಗ, ಸುಸ್ತಾಗುತ್ತಿದೆ ಎಂದನಂತೆ. ಬೆಳಿಗ್ಗೆ ಕೆಲಸಕ್ಕೆ ಬಂದವರು ಮತ್ತು ಅಲ್ಲಿದ್ದ ಮತ್ತಿತರು, ಆ ವ್ಯಕ್ತಿಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಕಾಫಿ ತರಿಸಿ ಕುಡಿಸಿ, ಚಾಕೊಲೇಟ್ ಕೊಟ್ಟು, ಮಾತನಾಡಿಸಿ ಉಪಚರಿಸಿದ್ದಾರೆ. ಆದರೆ ತೀವ್ರ ಹೃದಯಾಘಾತದಿಂದ ಆ ವ್ಯಕ್ತಿ ಕುಳಿತಲ್ಲೇ ನಿಧನ ಹೊಂದಿದ್ದ. ಮನೆಗೆ ತಲುಪಿಸುವ ಏರ್ಪಾಟು ಮಾಡಿದಾಗ, ವ್ಯಕ್ತಿಯ ಮನೆಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳು ಸ್ವೀಕರಿಸಲು ನಿರಾಕರಿಸಿಬಿಟ್ಟಿದ್ದಾರೆ. ಕಾರಣವೇನೆಂದರೆ ಸತ್ತ ವ್ಯಕ್ತಿ ಒಂದು ವರುಷದ ಹಿಂದೆ ಮನೆಯವರ ಜೊತೆ ಜಗಳವಾಡಿಕೊಂಡು, ಮನೆ ಬಿಟ್ಟು ಬಂದಿದ್ದನಂತೆ....... ಕೊನೆಗೆ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಆ ವ್ಯಕ್ತಿಯ ಮಗ ಬಂದು ತಂದೆಯ ಶವವನ್ನು ತೆಗೆದುಕೊಂಡು ಹೋದ.....

ಮನುಷ್ಯ ಬದುಕಿರುವಾಗ ಮಾಡುವ ಎಲ್ಲಾ ಕಾರ್ಯಗಳಿಗೂ ಅವನ ಸಾವಿನ ನಂತರದಲ್ಲಿ ಅವನ ಸಂಬಂಧಿಕರಿಂದಾಗಲಿ ಅಥವಾ ಅವನ ಸಹವಾಸಕ್ಕೆ ಬಂದ ಇತರರಿಂದಾಗಲಿ ಅರ್ಥ ಹುಡುಕುವಂತಾಗುತ್ತದೆ. ಈ ವ್ಯಕ್ತಿ ಬದುಕಿದ್ದಾಗ ಹೇಗಿದ್ದ, ತನ್ನ ಸಂಸಾರವನ್ನು ಹೇಗೆ ಪಾಲಿಸಿದ ಅಥವಾ ಹೆಂಡತಿ ಮಕ್ಕಳೊಂದಿಗೆ ಯಾವ ರೀತಿಯ ಬಾಂಧವ್ಯ ಹೊಂದಿದ್ದ ಎಂಬ ವಿಚಾರ ನನಗೆ ತಿಳಿದಿಲ್ಲ. ತಿಳಿದುಕೊಳ್ಳುವ ಅವಶ್ಯಕತೆಯೂ ಇಲ್ಲಿ ಇಲ್ಲ. ಆದರೆ ಈ ಸಂದರ್ಭದಲ್ಲಿ ಆ ಮೃತ ವ್ಯಕ್ತಿಯ ಕುಟುಂಬ ನಡೆದುಕೊಂಡ ರೀತಿ ನನಗೆ ಗೊಂದಲವನ್ನುಂಟುಮಾಡಿದೆ. ಮರಣದಲ್ಲಿ ನಮ್ಮ ಆಕ್ರೋಶ, ಸಿಟ್ಟು, ದ್ವೇಷ, ಹತಾಶೆ ಎಂಬ ಭಾವೋದ್ವೇಗಗಳನ್ನು ಹರಿಯ ಬಿಡಬಹುದೋ - ಬಾರದೋ ಎಂಬುದೇ ನನ್ನ ತರ್ಕಕ್ಕೆ ನಿಲುಕದ ವಿಷಯವಾಗಿದೆ. ಜೀವ ದೇಹವನ್ನು ಬಿಟ್ಟು ಹೋದ ನಂತರ ನಮ್ಮ ಸಂಸ್ಕೃತಿಯ ಪ್ರಕಾರ ಅದಕ್ಕೆ ಸಂಸ್ಕಾರ ಮಾಡಬೇಕದದ್ದು ಮಗನ ಅಥವಾ ಕುಟುಂಬದ ಇತರ ಸದಸ್ಯರ ಕರ್ತವ್ಯ. ಆದರೆ ಮನೆಬಾಗಿಲಿಗೆ ಬಂದ ಶವವನ್ನು ನಿರಾಕರಿಸುವುದರಿಂದ ಏನನ್ನು ಸಾಧಿಸಿದಂತಾಗಿದೆ? ಬದುಕಿದ್ದಾಗ ಆ ವ್ಯಕ್ತಿ ನಡೆದುಕೊಂಡಿದ್ದಿಕ್ಕಿಂತ ಕೀಳ್ತನದಲ್ಲಿ, ಕುಟುಂಬದವರು ನಡೆದುಕೊಂಡರೆಂದು ನನಗನ್ನಿಸಿತು. ದೇಹವನ್ನು ಸಂಸ್ಕಾರ ಮಾಡದೆ ಬಿಡುವುದರಿಂದ, ನಾವು ಪರಿಸರನಾಶಕ್ಕೆ ಕಾರಣರಾಗಬಹುದೇ ಹೊರತು, ಸತ್ತ ಆ ವ್ಯಕ್ತಿಗೆ ಅವನು ಮಾಡಿದ ತಪ್ಪುಗಳನ್ನು ಯಾವ ರೀತಿ ಅರ್ಥಮಾಡಿಸಿದಂತಾಯಿತು ?

ಎರಡನೆಯ ಸಂದರ್ಭ :

ಕೆಲವು ದಿನಗಳ ಕೆಳಗೆ ನಮಗೆ ತುಂಬಾ ತಿಳಿದವರ ಸಾವು ಘಟಿಸಿತ್ತು. ಮೃತರಾದ ವ್ಯಕ್ತಿ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಎಂದಿಗೂ ಗೌರವಿಸಲೇಯಿಲ್ಲ. ಒಬ್ಬನೇ ಮಗನನ್ನು ಆದರಿಸಲೇ ಇಲ್ಲ. ಬದುಕಿದ್ದಷ್ಟೂ ದಿನವೂ ಹೆಂಡತಿಯನ್ನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹಿಂಸಿಸಿದ ಆತ, ಸಾಯುವ ಕಾಲಕ್ಕೆ ಒಂದು ಅಪರೂಪದ ಲಿವರ್ ಕ್ಯಾನ್ಸರ್ ನಿಂದ ನರಳುತ್ತಿದ್ದರು. ಆದರೆ ತನಗೆ ಈ ಮಾರಕ ರೋಗ ಇರುವ ವಿಷಯ ಅವರಿಗೆ ತಿಳಿಯಲೇ ಇಲ್ಲ. ಜಾಂಡೀಸ್ ಎಂದು ಆಸ್ಪತ್ರೆ ಸೇರಿದವರಿಗೆ ೪ನೇ ಹಂತದಲ್ಲಿದ್ದ ಕ್ಯಾನ್ಸರ್ ರೋಗ ಕಂಡುಹಿಡಿಯಲ್ಪಟ್ಟಿತ್ತು. ಕೆಮೋ ಥೆರಪಿ ಬೇಡವೆಂದ ಹೆಂಡತಿ, ಊರಿಗೆ ಕರೆದುಕೊಂಡು ಹೋಗಿ ಅಲ್ಲಿಯ ಆಸ್ಪತ್ರೆಗೆ ಸೇರಿಸಿ, ವೈದ್ಯ ಮಾಡಿಸಿ, ಬದುಕಿದ್ದ ಹದಿನೈದು ದಿನಗಳು ಆರೈಕೆ ಮಾಡಿದರು. ತನಗೆ ಆತ ಮಾಡಿದ ಎಲ್ಲಾ ಅನ್ಯಾಯ-ಅಕ್ರಮವನ್ನೂ ಮರೆತು ಮಾನವೀಯತೆ ಮೆರೆದರು.

ಮರಣಾನಂತರವೂ ಈ ವ್ಯಕ್ತಿಯ ಅಂತ್ಯ ಸಂಸ್ಕಾರ ಎದುರು ನೋಡದಿದ್ದ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ತಂದೆ ಪ್ರೀತಿಯನ್ನೇ ಪಡೆಯದೆ ಬರಿಯ ಅಪಮಾನಗಳನ್ನೇ ಸಹಿಸಿದ ಮಗ ಕೂಡ ಶದ್ಧೆಯಿಂದ, ಪಾಂಗಿತವಾಗಿ ಎಲ್ಲವನ್ನೂ ಮಾಡಿದ. ಯಾವುದೋ ಜಾತಿಯಲ್ಲಿ ಹುಟ್ಟಿದ್ದರೂ ಕೂಡ ಉತ್ತಮ ರೀತಿಯಲ್ಲಿ ಸಂಸ್ಕಾರ ಪಡೆದ ಈ ವ್ಯಕ್ತಿ ನಿಜವಾಗಿ ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿದ್ದಿರಬೇಕೆಂಬ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡಿತ್ತು !!!

ಇಷ್ಟೆಲ್ಲಾ ಮಾಡಿ ಮುಗಿಸುವಾಗ ಹೆಂಡತಿಯ ಮನದಲ್ಲಿ ಏನು ಭಾವನೆಗಳಿದ್ದವೋ ಗೊತ್ತಿಲ್ಲ ಆದರೆ ನಾನು ನನ್ನ ಕರ್ತವ್ಯ ಮಾಡಿದೆ ಎಂಬಂಥ ಮಾತುಗಳನ್ನು ಆಡಿದ್ದರು ಆಕೆ.

ಮೇಲಿನ ಘಟನೆಗೆ ವಿರುದ್ಧವಾದ ಈ ಪ್ರಸಂಗ ಈ ವ್ಯಕ್ತಿಯ ಗತಜೀವನದತ್ತ ಬೆಳಕು ಚೆಲ್ಲಲೇಯಿಲ್ಲ. ಬಾಹ್ಯ ಪ್ರಪಂಚಕ್ಕೆ ಎಲ್ಲಾ ಒಳ್ಳೆಯತನವನ್ನೂ ಹೊಂದಿದ್ದ ವ್ಯಕ್ತಿ ಕೀಳರಿಮೆಯಿಂದ ನರಳುತ್ತಿದ್ದರೆಂಬ ನನ್ನ ನಂಬಿಕೆ ಧೃಡಪಟ್ಟಿತ್ತು. ಇಂತಹ ಕೀಳರಿಮೆಯಿಂದ ನರಳುವ ಗಂಡಸರು ನಮ್ಮ ಸಮಾಜದಲ್ಲಿ ಇನ್ನೂ ಅನೇಕರಿದ್ದಾರೆ. ಹೆಂಡತಿಯ ಏಳಿಗೆ ಸಹಿಸದ, ತನ್ನನ್ನು ಉದ್ಧರಿಸಿಕೊಳ್ಳಲು ಅರಿಯದ ಜನರು, ಸ್ವಲ್ಪ ಗಮನ ಇಟ್ಟು ನೋಡಿದರೆ, ನಮ್ಮ ಮಧ್ಯೆ ಇನ್ನೂ ಅನೇಕರು ಇದ್ದಾರೆ.