Sunday, September 19, 2010

ಬೆಳಗಾಗ ನಾನೆದ್ದು ಯಾರ್ ಯಾರ ನೆನೆಯಲಿ......

ಶ್ರವಣ ಮನಕಾನಂದವೀವುದು| ಭವ ಜನಿತ ದು:ಖಗಳ ಪರಿಹರಿಪುದು|
ವಿವಿಧ ಭೋಗಗಳ ಇಹಪರಂಗಳಲಿತ್ತು ಸಲಹುವುದು||
ಭುವನಪಾವನವೆನಿಪ ಲಕ್ಷ್ಮೀ| ರಮಣನ ಮಂಗಳ ಕಥೆಯ ಪರಮೋ |
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ.....


ಬೆಳಗಾಗ ನಾನೆದ್ದು ಯಾರ್ ಯಾರ ನೆನಯಲೀ... ಎಳ್ಳು ಜೀರಿಗೆ ಬೆಳೆಯೋರ ಎಂಬ ನಮ್ಮ ಜಾನಪದ ಉಕ್ತಿಯಂತೇ... ಶ್ರೀ ಜಗನ್ನಾಥ ದಾಸರು ಮಾಡಿರುವ ಸುಭಾಷಿತದ ಅರ್ಥವೂ..... ಚಿಕ್ಕ ವಯಸ್ಸಿನಿಂದಲೂ ನಮಗೆಲ್ಲಾ ಅಮ್ಮ ಬೆಳಿಗ್ಗೆ ಏಳುವಾಗಲಿಂದಲೇ ಭಗವಂತನ ಚಿಂತನೆಯನ್ನುಮಾಡಿಸ ತೊಡಗುತ್ತಾರೆ. ಬಲಗಡೆಗೇ ತಿರುಗಿ ಎದ್ದೇಳು... ಎದ್ದು ಹಾಸಿಗೆಯ ಮೇಲೆ ಪದ್ಮಾಸನದಲ್ಲಿ ಕುಳಿತುಕೋ... ಕಣ್ಣು ಬಿಡಬೇಡ... ಎರಡು ಕರಗಳನ್ನೂ ಬೇಡುವಂತೆ ತೆರೆದು ಜೋಡಿಸಿಟ್ಟುಕೋ... ಕಣ್ಣು ಮುಚ್ಚಿಯೇ... ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ... ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ.. ಎಂದು ಹೇಳಿಕೊಂಡು, ನಿಧಾನವಾಗಿ ಕಣ್ಣು ತೆರೆದು ಮೊದಲು ಕರಗಳನ್ನು ನೋಡು.... ! ಪ್ರಭಾತೇ ಕರದರ್ಶನಂ ಮಾಡುವುದರಿಂದ, ನಮ್ಮಕರಗಳಲ್ಲೇ ನೆಲೆಸಿರುವರೆಂದು ನಾವು ನಂಬಿರುವ ಮುವ್ವತ್ತು ಮೂರು ಕೋಟಿ ದೇವರುಗಳ ದರ್ಶನದಿಂದ ನಮ್ಮ ದಿನ ಉತ್ತಮವಾಗಿ ಆರಂಭವಾಗಲೀ ಎಂಬುದರ ಸಂಕೇತ..... ಅಂದರೆ ನಾವು ನಿದ್ದೆಯಿಂದ ತಿಳಿವು ತಿಳಿದಾಕ್ಷಣ ಸದ್ವಿಚಾರ ಚಿಂತನೆಯಿಂದ ನಮ್ಮ ದಿನಚರಿ ಶುರುವಾಗಲಿ ಎಂಬುದೇ ಇದರ ಉದ್ದೇಶ. ಇದರ ನಂತರ ಸಮುದ್ರವಸನೇ ದೇವಿ ಪರ್ವತಸ್ಥನ ಮಂಡಲೇ.. ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶ ಕ್ಷಮಸ್ವಮೇ.. ಎಂದು ಹೇಳುತ್ತಾ ನಾವು ತುಳಿಯಲಿರುವ ಭೂದೇವಿಯ ಕ್ಷಮೆ ಯಾಚಿಸು... ದಿನ ಪೂರ್ತಿ ಕಾಲಲ್ಲಿ ತುಳಿದು ನೋವು ಕೊಡುವೆಯಾದ್ದರಿಂದ ಭೂಮಾತೆಯನ್ನು ಒಳ್ಳೆಯ ಮನದಿಂದ ನೆನೆದು, ನನ್ನನ್ನು ಸಹಿಸಿಕೋ ಎಂದು ಪ್ರಾರ್ಥಿಸಿ ನಂತರ ಅಡಿ ಎತ್ತಿ ಇಡು.... ಹೀಗೆ ಎಲ್ಲದರಲ್ಲೂ, ಎಲ್ಲರಲ್ಲೂ ಭಗವಂತನನ್ನು ಕಾಣುವ ನಮ್ಮ ಆಚಾರ, ಸಂಸ್ಕೃತಿ ಎಷ್ಟೊಂದು ಶ್ರೀಮಂತವಾಗಿದೆ....

ಮೇಲಿನ ಸುಭಾಷಿತವನ್ನು ನಾನು ಶ್ರೀ ಅರಳು ಮಲ್ಲಿಗೆ ಪಾರ್ಥಸಾರಥಿಯವರ ವಾಚನದಲ್ಲಿ ಕೇಳಿದೆ. ಜಗನ್ನಾಥದಾಸರು ಪರಿಶುದ್ಧ ಮನಸ್ಸಿನಿಂದ ಭಗವಂತನ ಸಾಕ್ಷಾತ್ಕಾರ ಪಡೆದ ದಾಸವರೇಣ್ಯರು... ದಿನಾ ಬೆಳಿಗ್ಗೆ ಏಳುತ್ತಲೇ ಶ್ರೀಪುರುಷೋತ್ತಮನ, ಲಕ್ಷ್ಮೀ ರಮಣನ ಪುಣ್ಯ ನಾಮಸ್ಮರಣೆ ಮಾಡುತ್ತಾ, ಪುಣ್ಯ ಕಥೆಗಳನ್ನು ಕೇಳುತ್ತಾ ದಿನಚರಿ ಆರಂಭಿಸುವುದರಿಂದ, ನಮ್ಮ ಇಡಿಯ ದಿವಸ ಚೆನ್ನಾಗಿ ಒಳ್ಳೆಯ ಕೆಲಸ ಮಾಡುವುದರಲ್ಲಿಯೂ, ಸತ್ ಚಿಂತನೆಗಳಲ್ಲೂ ಕಳೆಯುವುದೆಂಬ ಆದೇಶ..... ನಮ್ಮ ಬದುಕಿನ, ಸಂಸಾರದ ಜಂಝಟಗಳೆಲ್ಲಾ ಕಳೆಯುವುದೂ, ನಾವು ಅಪೇಕ್ಷೆಯೇ ಪಡಲಾರದಷ್ಟು ಸುಖ, ಭೋಗಗಳನ್ನು ಮಹಾಮಹಿಮನು ನಮಗೆ ದಯಪಾಲಿಸುವನು...

ಅತ್ಯಂತ ಒತ್ತಡದ ಬದುಕು ಬದುಕುವ ನಾವು ಹರಿ ಚಿಂತನೆಯಿಂದಲೂ, ಸಕಾರಾತ್ಮಕ ವಿಚಾರಗಳಿಂದಲೂ ದಿನಚರಿ ಆರಂಭಿಸಿದರೆ, ನಾವು ತೆಗೆದುಕೊಳ್ಳಬೇಕಾದ ಮಹತ್ವದ ನಿರ್ಣಯಗಳು ಮತ್ತು ಕೆಲಸಗಳೂ ಸುಗಮವಾಗಿ ಮಾಡುವ ಅವಕಾಶ ಲಭಿಸುತ್ತದೆನ್ನುವುದು ಇದರ ಅರ್ಥ.

ದಾಸರು ಬರಿಯ ಇಹದ ಭೋಗ, ನೆಮ್ಮದಿ, ಸುಖಗಳ ಬಗ್ಗೆ ಹೇಳಿಲ್ಲ. ಅವರು "ಇಹ ಪರ" ಎರಡರ ಮಾತನ್ನೂ ಇಲ್ಲಿ

ಆಡಿದ್ದಾರೆ. ನಮ್ಮ ವಿಚಾರಗಳೇನಿದ್ದರೂ ಕೊನೆಗೆ, ಒಂದೇ ವ್ಯಾಪ್ತಿಗೆ ತಲುಪಬೇಕು.... ಅದೇ "ಶರಣಾಗತಿ". ನಮ್ಮ ಇಲ್ಲಿಯ ಎಲ್ಲಾ ಕರ್ಮಗಳೂ ಮುಂದಿನ ಜನ್ಮಕ್ಕೆ ಬುತ್ತಿ ಎಂದಾಗ, ಅರಿವು ಉಂಟಾಗಿರುವ ಜೀವನ ಸಾರ್ಥಕ್ಯ ಪಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕಲಿಯುಗದಲ್ಲಿ ನಮಸ್ಕಾರ ಮತ್ತು ನಾಮ ಸಂಕೀರ್ತನೆಗಳೆರಡೇ ಸಾಕು ಸದ್ಗತಿ ಹೊಂದಲು ಎಂಬ ಮಾತಿದೆ. ಅದರಂತೆ ನಾವು ಬೆಳಗಾಗುತ್ತಲೇ ಹರಿಸ್ಮರಣೆ ಮಾಡುತ್ತಾ ಶುಭ ಮಂಗಳಕರವಾಗಿರುವ ಲಕ್ಷ್ಮೀ ರಮಣನ ಕಥೆ ಕೇಳುತ್ತಾ ಮನಕಾನಂದ ಪಡೆಯೋಣ ಎಂಬುದೇ ಇದರ ಅರ್ಥ. ಪ್ರಾಥ: ಕಾಲವೇ ಮನಸ್ಸು ಆನಂದ ಹೊಂದಿದರೆ, ದಿನವೆಲ್ಲಾ ಖಂಡಿತಾ ಆನಂದವಾಗಿ ಕಳೆಯಲು ಒಳ್ಳೆಯ ಬುನಾದಿ ಆಗುತ್ತದೆಂಬುದನ್ನು ಸುಭಾಷಿತ ಸೂಚಿಸುತ್ತದೆ. ಒಳ್ಳೆಯ ಮಾತುಗಳನ್ನೂ, ಕಥೆಗಳನ್ನೂ, ಸಂಗೀತವನ್ನೂ, ಕೇಳುವುದರಿಂದ ಮನವೆಂಬ ವನದಲ್ಲಿರುವ ಜೀವ ಕುಸುಮವು ವಿಕಸಿತಗೊಳ್ಳುತ್ತದೆ......


ಚಿತ್ರಕೃಪೆ : ಅಂತರ್ಜಾಲ

12 comments:

  1. ಪ್ರಾತಃಕಾಲದಲ್ಲಿ ದೇವರ ಸ್ಮರಣೆ ಮಾಡುತ್ತ ಏಳುವದು ನಿಜವಾಗಿಯೂ ಉತ್ತಮ ಸಂಸ್ಕಾರ. ಜಗನ್ನಾಥದಾಸರ ‘ಹರಿಕಥಾಮೃತಸಾಗರ’ವು ಒಂದು ಪವಿತ್ರ ಗ್ರಂಥವಾಗಿದೆ. ದಾಸರನ್ನು ನೆನೆದ ನಿಮಗೆ ನನ್ನ ನಮನಗಳು.

    ReplyDelete
  2. ಶ್ಯಾಮಲಾವ್ರೆ...ಎಲ್ಲ ಧರ್ಮದಲ್ಲೂ ಕೈ ನೋಡಿಕೊಂಡು ಮುಖಮುಟ್ಟಿಕೊಳ್ಳುವುದು ಎಲ್ಲ ಧರ್ಮಗಳಲ್ಲೂ ಇದೆ..ಹಾಗಾಗಿ ಇದು ಒಂದು ವಾಪಕ ಚರ್ಯೆ...ಇದರ ಅರ್ಥಗಳು ಒಟ್ಟಾರೆ ಒಂದೆಡೆಗೆ ಸೇರುತ್ವೆ...ದಿನ ಶುಭವಾಗಲಿ ಎಂದು. ಇದರ ಮೂಲಕ ದಿನಕ್ಕೆ ಬೇಕಾಗುವ ಏಕಚಿತ್ತತೆಯನ್ನು ಕ್ರೂಢೀಕರಿಸುವ ವಿಧಾನವೂ ಹೌದೇನೋ....
    ಚನ್ನಾಗಿದೆ ನಿಮ್ಮ ಚಿಂತನೆ.

    ReplyDelete
  3. ಶ್ಯಾಮಲ ಮೇಡಮ್,
    ಮುಂಜಾನೆ ಎದ್ದು ದೇವರಸ್ಮರಣೆ ನಿಜಕ್ಕೂ ಒಂದು ರೀತಿಯ ಸಮಾಧಾನ.ಒಂದು ಪವಿತ್ರ ಗ್ರಂಥವನ್ನು ನೆನಪಿಸಿಕೊಂಡ ನಿಮಗೆ ಧನ್ಯವಾದಗಳು.

    ReplyDelete
  4. "ಪಾದಸ್ಪರ್ಶ ಕ್ಷಮಸ್ವಮೇ.. ಎಂದು ಹೇಳುತ್ತಾ ನಾವು ತುಳಿಯಲಿರುವ ಭೂದೇವಿಯ ಕ್ಷಮೆ ಯಾಚಿಸು..." ಅತ್ತ್ಯುತ್ತಮ ಕಾನ್ಸೆಪ್ಟ್. ಭರತ ಭೂಮಿಯ ಸ೦ಸ್ಕೃತಿಯೇ ಹಾಗೆ, ಸದ್ವಿಚಾರಗಳ ಭ೦ಡಾರ. ಸಕಾರಾತ್ಮಕ ವಿಚಾರಗಳಿಂದ ದಿನಚರಿ ಆರಂಭಿಸುತ್ತಾ ಶರಣಾಗತಿಯ ವ್ಯಾಪ್ತಿಗೆ ತಲುಪಿಸಿದ್ದೀರಿ. ಉತ್ತಮ ವಿಚಾರಗಳ ನಿರೂಪಣೆಗೆ ಧನ್ಯವಾದಗಳು, ಶ್ಯಾಮಲಾ.

    ಅನ೦ತ್

    ReplyDelete
  5. ನಮ್ಮ ಸ೦ಸ್ಕ್ರತಿಯ ಮಹತ್ವ ಮತ್ತು ಅದರ ಅರ್ಥವ್ಯಾಪ್ತಿ ಬಲು ದೊಡ್ಡದು. ವಿದೇಶಿಯರು ಕೂಡ ಅದನ್ನು ಅನುಕರಿಸುತ್ತಿರುವಾಗ, ನಾವೇ ಮರೆಯುತ್ತ ಬರುತ್ತಿದ್ದೇವೆ ಅನ್ನುವುದೇ ಬೇಸರದ ವಿಷಯ.

    ReplyDelete
  6. ಶ್ಯಾಮಲಾ ಅವರೆ,
    ಸರಳವಾಗಿ ಒಂದು ಉತ್ತಮ ಸಂಸ್ಕೃತಿಯ ಬಗ್ಗೆ ತಿಳಿಸಿದ್ದೀರಿ. ನಾವೂ ಚಿಕ್ಕವರಿದ್ದಾಗ ಇವೆಲ್ಲ ಮಾಡುತ್ತಿದ್ದು, ಇದೀಗ ಬಿಟ್ಟುಹೋಗಿದೆಯೆನ್ನಬಹುದು. ಈ ಶ್ಲೋಕಗಳು, ಸುಭಾಷಿತಗಳು ಮನುಷ್ಯನ ಮನಸ್ಸನ್ನು ತಿದ್ದಿತೀಡಿ ದಿನ ಹಾಗೂ ಜೀವಮಾನಗಳಲ್ಲಿ ಸದಾಕಾಲ ಸದ್ವಿಚಾರ ಚಿಂತನೆ ಮಾಡಿಕೊಳ್ಳಲಿ ಎಂಬುದಾಗಿದೆ. ಇದರಿಂದ ಸದಾಕಾಲ ಜೀವನವು ಸುಖವಾಗಿರುತ್ತದೆ ಇಹ ಮತ್ತು ಪರಗಳಲ್ಲಿ ಎಂಬುದು ನಿಶ್ಚಿತ. ಆದರೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ನಾವಿಂದು... ಮರೆಯುತ್ತಿರುವುದು ನಿಜಕ್ಕೂ ಖೇದಕರ.

    ಸ್ನೇಹದಿಂದ,

    ReplyDelete
  7. ಸಂಸ್ಕೃತಿ ಸಂಸ್ಕಾರಗಳೊಳಗಿನ ಉತ್ತಮ ವಿಚಾರಗಳನ್ನು ತಿಳಿಸಿದ್ದೀರಿ. ಇವುಗಳನ್ನು ಅರಿತು, ಅಳವಡಿಸಿಕೊಂಡು ನಡೆವ ಮನಃಸ್ಥಿತಿ ಮಾತ್ರ ಇಂದಿನವರಲ್ಲಿ ಕಾಣಸಿಗದು!

    ReplyDelete
  8. ಉತ್ತಮ ವಿಚಾರಗಳನ್ನು ಬಹಳ ಚೆನ್ನಾಗಿ ಹೇಳಿದ್ದೀರಿ. ಉತ್ತಮ ಸಂಸ್ಕೃತಿಯ ಆಚರಣೆ ಇಂದಿನ ಅವಶ್ಯಕತೆಯಾಗಿದೆ.

    ReplyDelete
  9. ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.....

    ReplyDelete
  10. ಅಂತರಂಗದ ಮಾತುಗಳು...

    ಬಹಳ ಒಳ್ಳೆಯ ಲೇಖನ ..
    ನನಗೆ ಮಿಸ್ ಆಗೊಗ್ತಿತ್ತು ನೋಡಿ...

    ಒಂದು ಬೆಳಗು ಶುದ್ಧ ಮನಸ್ಸಿನಿಂದ ಶುರುವಾಗ ಬೇಕೆನ್ನುವ ನಮ್ಮ ಹಿರಿಯರ ಆಶಯ...
    ಅದಕ್ಕೆ ಅವರು ಹಾಕಿಕೊಟ್ಟ ದಾರಿ... ನಿಜಕ್ಕೂ ಸೊಗಸು...

    ಇಂಥಹ ಬರಹಗಳು ಇನ್ನಷ್ಟು ಬರಲಿ...

    ReplyDelete
  11. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಪ್ರಕಾಶ್ ಸಾರ್... ಇನ್ನೂ ಇಂಥಹ ಬರಹಗಳು ಬರಲಿ ಎಂದಿದ್ದೀರಿ. ಖಂಡಿತಾ ಪ್ರಯತ್ನಿಸುತ್ತೇನೆ...


    ಶ್ಯಾಮಲ

    ReplyDelete
  12. ಮನ ಪಕ್ವ ಮಾಡುವಲ್ಲಿ ದೇವನ್ನಾಮ ಸ್ಮರಣೆ ಮತ್ತು ಆಚಾರಗಳ ಅರ್ಥ ಮಾಡಿಕೊಡುವ ಲೇಖನ ಚೆನ್ನಾಗಿ ಮೂಡಿದೆ.

    ReplyDelete