Wednesday, October 14, 2009

ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು

ಅತ್ಯಂತ ವಿದ್ವತ್ತ್ ಪೂರ್ಣ ಮತ್ತು ಶ್ರೇಷ್ಠವಾದ ನವಾವರಣ ಕೃತಿಗಳ ಬಗ್ಗೆ ನನಗೆ ತಿಳಿದ ಅರ್ಥ ಹಾಗೂ ಅನಿಸಿಕೆಗಳನ್ನು ನಿಮ್ಮ ಜೊತೆ ವಿನಿಮಯ ಮಾಡಿಕೊಳ್ಳುವ ಮೊದಲು ಈ ಕೃತಿಗಳ ಕರ್ತೃ, ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಜೀವನದ ಬಗ್ಗೆ ಒಂದು ಚಿಕ್ಕ ಇಣುಕು ನೋಟ ಅಥವಾ ಪೀಠಿಕೆ :..........


ಒಂದು ಶತಮಾನ ಕ್ರಿ.ಶ.೧೭೫೦ ರಿಂದ ೧೮೫೦ ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸುವರ್ಣಯುಗ. ಶ್ರೀ ಮುತ್ತುಸ್ವಾಮಿ ದೀಕ್ಷಿತರು ಶಾಸ್ತ್ರೀಯ ಸಂಗೀತದ ರತ್ನತ್ರಯರೂ, ತ್ರಿಮೂರ್ತಿಗಳಲ್ಲೂ ಒಬ್ಬರು. ಇವರು ಹಂಸಧ್ವನಿ ರಾಗದ ಕರ್ತೃಗಳಾದ ಶ್ರೀ ರಾಮಸ್ವಾಮಿ ದೀಕ್ಷಿತರು ಮತ್ತು ತಾಯಿ ಸುಬ್ಬಲಕ್ಷ್ಮಿ ಅಮ್ಮಾಳ್ ರವರ ಸುಪುತ್ರರಾಗಿ ತಿರುವಾರೂರಿನಲ್ಲಿ ೧೭೭೫ರಲ್ಲಿ ಜನಿಸಿದರು. ತಂದೆ ತಾಯಿಯರ ಭಕ್ತಿಗೆ ಒಲಿದ ವೈದೀಶ್ವರ ಕೋಯಿಲ್ ಮುತ್ತು ಕುಮರಸ್ವಾಮಿಯ ಅನುಗ್ರಹಿತ ಮಗು ದೀಕ್ಷಿತರು. ೧೬ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಇವರು ತಮ್ಮ ಗುರುಗಳ ಆಣತಿಯಂತೆ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಗಿತ್ತು. ನಿಷ್ಣಾತ ವೈಣಿಕರಾದ ದೀಕ್ಷಿತರು ಪಂಚದಶ ಗಮಕಗಳನ್ನು ಪ್ರಯೋಗಮಾಡಿ ತೋರಿಸಿದ್ದರು. ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕರಿಸಿದ್ದನು. ತಾವು ಈ ’ಗುರುಗುಹ’ನ ದಾಸ, ಅವನ ಕಾಲಿನ ಕಸವೆಂಬ ಭಾವನೆಯಿಂದ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ಎಂದು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಇವರು ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಭಾವ ವ್ಯಕ್ತಪಡಿಸಿದ್ದಾರೆ.

ದೀಕ್ಷಿತರು ಶ್ರೀ ವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಅತ್ಯಂತ ಶ್ರೇಷ್ಠ ಕೃತಿಗಳಲ್ಲಿ ಅವರ ಪಾಂಡಿತ್ಯ ಮತ್ತು ವಿದ್ವತ್ತ್ ಗಳ ಅನುಭವ ನಮಗಾಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಅವರ ವಿಶೇಷತೆಯೇ....

ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ..... ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ, ಸ್ಥಾನ ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ.......

ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು. ತಮ್ಮದೇ ರಚನೆ "ಮಾಯೆ ತ್ವಂ ಯಾಹಿ, ಮಾಂ ಬಾದಿತುಂ ಕಾಹಿ".... ಎಂಬ ಕೃತಿಯಲ್ಲಿ ಎಲೈ ಮಾಯೆಯೇ ನನ್ನನ್ನು ತ್ಯಜಿಸು, ಬಾಧಿಸಬೇಡವೆಂದು ಹೇಳುತ್ತಾರೆ...... ದೀಕ್ಷಿತರು ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ರಚಿಸಿದ್ದಾರೆ.


ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ದೇವರನ್ನು ಪೂಜಿಸುತ್ತಿದ್ದರು. ಅವರು ಬಹಳ ಮೃದು ಹೃದಯದವರೂ, ಕರುಣೆಯುಳ್ಳವರೂ ಆಗಿದ್ದರು. ಬರದಿಂದ ಬಸವಳಿದ ಜೀವಿಗಳನ್ನು ನೋಡಿ, ಮರುಗಿ... "ಆನಂದಾಮೃತ ಕರ್ಷಿಣೀ... ಅಮೃತ ವರ್ಷಿಣೀ...." ಎಂದು ಬೇಡಿದರು. ನನ್ನ ಮನಸ್ಸಿನಲ್ಲಿ ಸಂತೋಷದ / ಆನಂದದ ಮಳೆಗರೆದ ತಾಯೇ... "ಸಲಿಲಂ ವರ್ಷಯ ವರ್ಷಯ".... ಎಂದು ಹಾಡಿದರು.........


ರ‍ಾಗ : ಅಮೃತವರ್ಷಿಣಿ ತಾಳ : ಆದಿತಾಳ

ಪಲ್ಲವಿ

ಆನಂದಾಮೃತ ಕರ್ಷಿಣಿ.. ಅಮೃತ ವರ್ಷಿಣಿ....
ಹರಾದಿ ಪೂಜಿತೇ ಶಿವೇ ಭವಾನಿ.......||

ಸಮಷ್ಟಿ ಚರಣ

ಶ್ರೀನಂದಾದಿ ಸಂರಕ್ಷಿಣಿ...... ಶ್ರೀ ಗುರುಗುಹ ಜನನಿ ಚಿದ್ರೂಪಿಣಿ...
ಸಾನಂದ ಹೃದಯ ನಿಲಯೇ ಸದ್ಯ ಸ್ಸುವೃಷ್ಟಿ ಹೇತವೇ ತ್ವಾಂ.....
ಸಂತತಂ ಚಿಂತಯೇ ಅಮೃತೇಶ್ವರಿ......
ಸಲಿಲಂ ವರ್ಷಯ ವರ್ಷಯ ವರ್ಷಯ............ ||


ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರು. ಹೀನ ಕುಲದವನಾದ ಅವನು ನವಗ್ರಹ ಶಾಂತಿ ಮಾಡಲಾಗುವುದಿಲ್ಲವೆಂದು, ಅವನಿಗೆ ಈ ಕೃತಿಗಳನ್ನು ಸ್ವತ: ಹೇಳಿಕೊಟ್ಟರು. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಹಾಗೆ ಸಂಗೀತದಿಂದಲೂ ಸಾಧ್ಯವೆಂದು ಶಿಷ್ಯನಿಗೆ ಉಪದೇಶಿಸಿದರು. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು.... ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಟ ಕೃತಿಗಳಾಗಿವೆ.........

ಮುಂದುವರೆಯುವುದು.............

ಕೊನೆಯ ಮಾತು : ಆನಂದಾಮೃತಕರ್ಷಿಣಿ ಕೃತಿಯ ಕೊಂಡಿ ಹಂಸಾನಂದಿಯವರ ಬ್ಲಾಗ್ ಮೂಲಕ ಸಿಕ್ಕಿತ್ತು. ಅವರಿಗೆ ಧನ್ಯವಾದಗಳು....

3 comments:

  1. ವೈಣಿಕ ಮುತ್ತುಸ್ವಾಮಿ ದೀಕ್ಷಿತ್‍ರವರ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಅವರ ಸ್ಥಳ ಬಾಲ್ಯ ಇತ್ಯಾದಿಗಳ ವಿಚಾರದಲ್ಲಿ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಿ...
    ಧನ್ಯವಾದಗಳು.

    ReplyDelete
  2. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಶಿವು ಅವರೆ....
    ನರಕಚತುರ್ದಶಿ ಶ್ರೀ ದೀಕ್ಷಿತರ ಪುಣ್ಯಸ್ಮರಣೆಯ ದಿನ,
    ಹಾಗಾಗಿ ನಾನು ಅವರ ನೆನಪು ಮಾಡಿಕೊಂಡು, ಈ
    ನವಾವರಣ ಕೃತಿಗಳ ಬಗ್ಗೆ ನನಗೆ ತಿಳಿದಿರುವುದನ್ನು
    ತಮ್ಮೆಲ್ಲರೊಡನೆ ಹಂಚಿಕೊಳ್ಳಲು ಶುರು ಮಾಡಿದ್ದೇನೆ.
    ಶ್ಯಾಮಲ

    ReplyDelete
  3. ಒಳ್ಳೇ ಸರಣಿ ಶುರು ಮಾಡಿದ್ದೀರಿ, ಮುಂದುವರೆಸಿ!

    ReplyDelete