Monday, June 14, 2010

ಸಂಪದಿಗರ 'ಸಮ್ಮಿಲನ'

ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ ಆರಂಭವಾಗಿ ಬಿಟ್ಟಿತು. ಭಾನುವಾರ (13.06.2010)ಬೆಳಿಗ್ಗೆ ೭.೩೦ಕ್ಕೇ ಹರಿ ಕರೆ ಮಾಡಿ ರೆಡೀನಾ... ಎಂದಾಗ
ನನಗೆ ಭಯವೇ ಆಗಿತ್ತು. ಇಷ್ಟು ಬೇಗನಾ...? ಏನಪ್ಪಾ ಇದು ಎಂದರೆ... ನಾನಾಗಲೇ ಬಸ್ ನಿಲ್ದಾಣದಲ್ಲಿದ್ದೇನೆ, ನಿನ್ನೆ ಮಳೆಯಲ್ಲಿ ಸಿಕ್ಕಿಕೊಂಡೆ, ಹೋಗಲಾಗಲಿಲ್ಲ. ಈಗ ಬೇಗ ಎಲ್ಲರಿಗಿಂತ ಮೊದಲು ಹೋದರೆ ಸ್ವಲ್ಪ ಏನಾದರೂ ತಯಾರಿ ಮಾಡಬಹುದು ಮತ್ತು ಬಂದವರನ್ನು ಸ್ವಾಗತಿಸಬಹುದು ಎಂದರು. ಸರಿ ನೀವು ಹೊರಡಿ ನಾ ಬರ್ತೀನಿ ಎಂದೆ. ಹಾಗೂ ಹೀಗೂ ಬೆಳಗಿನ ಅವಸರದ ಕೆಲಸಗಳನ್ನು ಮುಗಿಸಿ, ನಾನು ರೆಡಿಯಾದಾಗ ಆಗಲೇ ೯.೧೫. ಇನ್ನೂ ನಮ್ಮ ಮನೆ ಗಲ್ಲಿಯನ್ನೂ ದಾಟಿರಲಿಲ್ಲ, ಆಗಲೇ ಹರಿಯ ಕರೆ.... ಈಗ ಮನೆಯಿಂದ ಹೊರಟ್ರಾ... ಅಯ್ಯೋ ಎಷ್ಟೊತ್ತಿಗಪ್ಪಾ ನೀವು ಬರೋದು ಅಂದ್ರು.... ಟ್ರಾಫಿಕ್ ಇರಲ್ಲ ಹರಿ, ಭಾನುವಾರ ೨೦ ನಿಮಿಷದಲ್ಲಿ ಅಲ್ಲಿರ್ತೀನಿ.... ಯಾರು ಬಂದಿದ್ದಾರೆ ಅಂದೆ. ಹರಿ ಒಂದು ಪುಟ್ಟ ಪಟ್ಟಿಯನ್ನೇ ಕೊಟ್ಟಾಗ... ನನಗೆ ಅತ್ಯಂತ ಸಂತೋಷವಾಗಿತ್ತು. ಮನೆಯಿಂದ ದೊಮ್ಮಲೂರು ತಲುಪಿದ್ದೇನೋ ನಾನೆಂದಂತೆ ಬರೀ ೧೫ ನಿಮಿಷದಲ್ಲೇ... ಆದರೆ ಆ ನೀರಿನ ತೊಟ್ಟಿಯ ಗುರುತು ಇಟ್ಟುಕೊಂಡು ಸಿಐಎಸ್ ಕಟ್ಟಡ ಹುಡುಕುವಲ್ಲಿ ಇನ್ನರ್ಧ ಘಂಟೆಯಾಗಿ ಹೋಗಿತ್ತು. ೩೦ ನಿಮಿಷದಲ್ಲಿ ೪ ಸಲ ಹರಿಗೆ ಕರೆ ಮಾಡಿ, ಅವರ ತಲೆಯೂ ತಿಂದಿದ್ದಾಯ್ತು.... :-) ಕೊನೆಗೂ ಹರಿ ಮುಖ್ಯ ರಸ್ತೆಗೆ ಬಂದು ಕಾದಿದ್ದು, ನನ್ನನ್ನು ಕರೆದುಕೊಂಡು ಹೋದಾಗ, ಅಲ್ಲಾಗಲೇ ಸಂಪದಿಗರ ಕಲರವ ಶುರುವಾಗಿ ಬಿಟ್ಟಿತ್ತು.

ಸಿಐಎಸ್ ಕಟ್ಟಡ ಸುಂದರವಾಗಿದೆ. ಹೊರಗೆ ಹಸಿರು ವಾತಾವರಣ... ಕೋಗಿಲೆಯ ಎಡಬಿಡದ ಕುಹೂ ಗಾನ, ಮನಕ್ಕೆ ನಿಜಕ್ಕೂ ಮುದಕೊಟ್ಟಿತ್ತು. ಅತ್ಯಂತ ಪ್ರಶಸ್ಥವಾದ ಜಾಗವಾಗಿತ್ತು ಅದು ನಮ್ಮ ಸಂಮಿಲನಕ್ಕೆ... ನಾಗರಾಜ್ ರ ಚಿತ್ರ ನೋಡಿದ್ದ ಕಾರಣ ನಾನವರನ್ನು ಗುರುತು ಹಿಡಿದೆ. ಪಕ್ಕಕ್ಕೆ ತಿರುಗೆ ಕಾಫಿ ಲೋಟ ಹಿಡಿದಿರುವ ಚಿಕ್ಕೂ... ಎದುರಿಗೇ ಕುಳಿತಿದ್ದರೂ ನನಗೆ ಗುರುತು ಹಿಡಿಯುವುದಾಗಲಿಲ್ಲ... ಅಷ್ಟರಲ್ಲಿ ಪಕ್ಕದ ಸೋಫಾದಲ್ಲಿ ಕುಳಿತಿದ್ದವರು... ನಮಸ್ಕಾರ ಎಂದು ಜೋರು ದನಿಯಲ್ಲೆಂದಾಗ, ನಾ ಬೆಚ್ಚಿ ತಿರುಗಿದರೆ... ಯಾವ ಸಂಶಯವೂ ಇಲ್ಲ... ನಮ್ಮೆಲ್ಲರ ಮಿತ್ರ ಆತ್ರಾಡಿ ಸುರೇಶ್... ಅಬ್ಬ ಅಂತೂ ಒಬ್ಬರಾದರೂ ಪರಿಚಿತರಿದ್ದಾರೆಂದು ಸಮಾಧಾನದ ನಿಟ್ಟುಸಿರಿಡುವಷ್ಟರಲ್ಲಿ ಸುರೇಶ್, ಗೋಪಿನಾಥ್ ಮತ್ತು ಕುಟುಂಬ, ಮಂಜುನಾಥ್ ಮತ್ತು ಕುಟುಂಬದವರನ್ನು ಪರಿಚಯಿಸಿದರು. ಮಂಜುನಾಥ್ ರ ಮಗ, ಮಗಳೂ ಬಂದಿದ್ದರು. ಜೊತೆಗೆ ಒಬ್ಬ ಪುಟ್ಟ ಅತಿಥಿಯೂ ಇದ್ದಳು.... ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತಾ ಇರುವಾಗ ಆಗಲೇ ಹರಿ "ಸಂಪದ ಸಂಮಿಲನ" ಎಂಬ ದೊಡ್ಡ ಅಚ್ಚು ಹಾಕಿದ ಫಲಕದಂತಹುದನ್ನು ಅಂಟಿಸಿ, ಕುರ್ಚಿಗಳನ್ನು ಈ ಕಡೆ, ಆ ಕಡೆ ಸರಿಸಿ ವೇದಿಕೆ ಸಜ್ಜುಗೊಳಿಸುತ್ತಿದ್ದರು. ಅಷ್ಟುಹೊತ್ತಿಗೆ ಕವಿ ನಾಗರಾಜ್, ಅಂಜನ್ ಕುಮಾರ್ ಅವರೂ ಬಂದು ಸೇರಿದರು.

ಪ್ರಾರ್ಥನೆಯಾದ ನಂತರ ನಮ್ಮ ಕಾರ್ಯಕ್ರಮ ತೇಜಸ್ವಿ ಅವರ ಕವಿತಾ ವಾಚನದಿಂದ ಆರಂಭವಾಯಿತು. ಅವರು ತಾವು ಬರೆದ ಮೊಟ್ಟ ಮೊದಲ ಕವನ - ತಮ್ಮ ಭಗ್ನ ಪ್ರೇಮದ ಬಗೆಗೆ ಓದಿದರು. ನಂತರ ಎರಡನೆಯದಾಗಿ ಓದಿದ ಕವನ ’ತನ್ನನ್ನು ಮೊದಲು ಪ್ರೀತಿಸು’.... ಇದರಲ್ಲಿನ ಸಾಲುಗಳು "ನಿಲ್ಲು... ಓಡುತ್ತಿರುವ ಗೆಳೆಯನೆ... ಮರೆತೆಯೇನು ಪ್ರೀತಿಸಲು ತನ್ನನೇ".. ನನ್ನನ್ನು ತುಂಬಾ ಸೆಳೆಯಿತು. ಮತ್ತೂ ಮುಂದುವರೆದು ತೇಜಸ್ವಿ ಅವರು ’ಗುರಿ ಮುಟ್ಟುವ ಬಗ್ಗೆ’, ’ಉತ್ತಮ ಅಭ್ಯಾಸಗಳ ಬಗ್ಗೆ’’ವಾಸ್ತವವ ಅರಿಮನವೇ’.. ಕವನಗಳನ್ನು ಓದಿದರು. ತುಂಬಾ ಚೆನ್ನಾಗಿದ್ದವು ಅವರ ಶೈಲಿ. ತಾವು ಕವನ ಬರೆಯುವ ಪರಿಯನ್ನೂ ಕೂಡ ನಮ್ಮ ಯುವ ಕವಿ ವರ್ಣಿಸಿದರು. ಘಟನೆಗಳನ್ನು ವಿವರಿಸುತ್ತಾ ಕವನ ಬರೆಯುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಪ್ರಾಸಕ್ಕಾಗಿ ನಿಘಂಟನ್ನು ತೆರೆದಿಟ್ಟುಕೊಂಡು, ಪದಗಳನ್ನು ಹುಡುಕಿ, ಪ್ರಾಸ ಜೋಡಿಸಿ, ತಮ್ಮ ಭಾವ ಕೂಡ ಸೇರಿಸಿ ಕವನ ರಚಿಸುತ್ತಾರಂತೆ.

ಎರಡನೆಯದಾಗಿ ನಾಗರಾಜ್ ಸಂಪದ ಸೇರಿದ ಬಗ್ಗೆ ಹಾಗೂ ತಮ್ಮ ಮಳೆನೀರು ಕೊಯಿಲಿನ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡಿದರು. ಯಾವುದೋ ತುರ್ತು ಮೀಟಿಂಗ್ ಗಾಗಿ ಹೋಗಲೇ ಬೇಕಾದ ಅನಿವಾರ್ಯವಿದೆಯೆಂದು ಬೇಸರದಿಂದಲೇ ಅವರು ಹೊರಟು ಬಿಟ್ಟರು.

ಗೋಪಿನಾಥ್ ಬೆಳ್ಳಾಳ್ ರವರು ತಮ್ಮ ಕವನಗಳನ್ನು ಅತ್ಯಂತ ಸುಂದರವಾಗಿ ವಾಚಿಸಿದರು. ೮೦ರ ಇಳಿವಯಸ್ಸಿನಲ್ಲೂ ಹೊಸತು ಕಲಿಯಬೇಕೆನ್ನುವ ತುಡಿತ ಇರುವ ತಮ್ಮ ತಾಯಿಯವರ ಬಗ್ಗೆ ಎರಡು ಮಾತುಗಳನ್ನು ಅವರು ಆಡಿದಾಗ ನನಗೆ ಅವರೂ ಬಂದಿದ್ದರೆ ಭೇಟಿಯಾಗಬಹುದಿತ್ತಲ್ಲವೇ ಎಂದನ್ನಿಸಿತು. ಅವರ ವಯಸ್ಸಿಗೆ ಅವರು ಉತ್ಸಾಹದ ಚಿಲುಮೆಯಂತಿದ್ದಾರೆಂದರೆ ಖಂಡಿತಾ ಅವರು ನಮಗೆಲ್ಲರಿಗೂ ಆದರ್ಶಪ್ರಾಯರು.... ಗೋಪಿನಾಥ್ ಸಾರ್... ಒಮ್ಮೆ ಖಂಡಿತಾ ಭೇಟಿ ಮಾಡಿಸಿ ತಾಯಿಯವರನ್ನು (ಬಹುಶ: ಮುಂದಿನ ಸಂಮಿಲನದಲ್ಲಿ)....
ರೈತ ಮತ್ತು ಸೈನಿಕನ ಮಧ್ಯೆ ಸಾಮ್ಯತೆ ವಿವರಿಸುವ ಕವನ ನಮ್ಮ ಮನಗಳನ್ನು ಚಿಂತಿಸುವಂತೆ ಮಾಡಿತ್ತು..

ಹೊಳೆನರಸೀಪುರ ಮಂಜುನಾಥ್ ಅವರು ತಮ್ಮ ಬಾಲ್ಯ, ಜೀವನದ ಬಗ್ಗೆ ಎರಡು ಮಾತನಾಡಿ, ’ಅಪಘಾತ’ ಕಥೆ ಮನ ಮುಟ್ಟುವಂತೆ ಓದಿದರು. ಅವರ ಶೈಲಿ, ಓದುವ ರೀತಿ ಎಲ್ಲಾ ತುಂಬಾ ಚೆನ್ನಾಗಿತ್ತು. ಆದರೆ ಕಥೆಯ ವಿಷಯ ಸ್ವಲ್ಪ ಮಟ್ಟಿಗೆ ಮನಸ್ಸನ್ನು ಆವರಿಸಿದ್ದಂತೂ ನಿಜ...

ಈಗ ಬಂತು ನಮ್ಮ ಆತ್ರಾಡಿ ಸುರೇಶ ಹೆಗ್ಡೆಯವರ ಸರದಿ... ಚಿತ್ರದಲ್ಲೂ, ಎದುರಿಗೂ ನೋಡಲು ಸ್ವಲ್ಪ ಹೆಚ್ಚೇ ಎನಿಸುವ ಗಾಂಭೀರ್ಯವಿದ್ದರೂ, ಮಾತನಾಡಲು ಶುರು ಮಾಡಿದರೆ ಅತ್ಯಂತ ಸರಳವಾಗಿ ಮಾತನಾಡಿ, ಎಲ್ಲರನ್ನೂ ನಗಿಸಿ, ತಾವೂ ನಗುತ್ತಾರೆ... ಅವರು ’ನಾವು ಬೆಳೆಯುವುದೆಂತು’ ಎಂಬ ತಮ್ಮ ಕವನದಿಂದ ಆರಂಭಿಸಿ... ಒಳ್ಳೆಯದು ಬೆಳೆಯಲು ಅನವರತ ಶ್ರಮಬೇಕು ಎಂಬ ಸಂದೇಶವನ್ನೂ ಕೊಟ್ಟರು. ಜೊತೆಗೆ ’ಸಂಗಾತಿ ಯಾವಾಗ ನಮ್ಮೊಟ್ಟಿಗಿರಬೇಕು’, ’ಸ್ವಾತಂತ್ರ್ಯ’ .. ಇನ್ನೊಬ್ಬರು ಕಟ್ಟಿಕೊಟ್ಟ ಬುತ್ತಿ ಹೊತ್ತು ನಡೆಯುವ ನಮಗೆ ಎಲ್ಲಿದೆ ಸ್ವಾತಂತ್ರ್ಯ ಎಂಬ ಭಾವವುಳ್ಳ ಕವನಗಳನ್ನೂ ಓದಿದರು. ಕೊನೆಗೆ ಎಲ್ಲರನ್ನೂ ಉದ್ದೇಶಿಸಿ, ಈ ಸಂಮಿಲನಕ್ಕಾಗಿಯೇ ಬರೆದ "ಕಾಲೆಳೆದು ಕಾಲೆಳೆದು" ಎಂಬ ಕವನವನ್ನೂ ಪದ್ಯದ ಧಾಟಿಯಲ್ಲಿ ಓದಿ ನಮ್ಮನ್ನು ನಗೆಗಡಲಲ್ಲಿ ತೇಲಿಸಿದರು.

ಚಿಕ್ಕೂ ಚೇತನ್ ರವರ ಕವನಗಳೂ, ಚುರುಮುರಿಗಳೂ ಸಕತ್ತಾಗಿ ಚುರುಕಾಗಿದ್ದವು..

ರೂಪ ಅವರ ಸ್ಥಳದಲ್ಲೇ ಹೆಣೆದ ಕಥೆಯೂ ಸುಂದರವಾಗಿತ್ತು. ಯಶಿತಾಳ ಹಾಜರಿ ಸಂಮಿಲನಕ್ಕೊಂದು ಸುಂದರ ಕಂಪು ಮೂಡಿಸಿತ್ತು.

ಕವಿನಾಗರಾಜ್ ಅವರು ತಮ್ಮ ಕೆಲವು ಅನುಭವಗಳನ್ನೂ, ಸಂಪದ ಉಳಿವು, ಬೆಳವಣಿಗೆಯ ಬಗೆಗೂ ತಮ್ಮ ಅಭಿಪ್ರಾಯಗಳನ್ನು ನಮ್ಮೊಡನೆ ಹಂಚಿಕೊಂಡರು.

ಅಂಜರ್ ಕುಮಾರ್ ಅವರ ಬ್ಯಾಂಕಿನಲ್ಲಿ ನಡೆಯುವ ಹಾಸ್ಯ ಪ್ರಸಂಗಗಳ ಮರು ಸೃಷ್ಟಿ ಚೆನ್ನಾಗಿತ್ತು. ಅವರು ತಾವು ಓದಿದ ’ಯೋಗಿಯ ಆತ್ಮ ಕಥೆ’ ಪುಸ್ತಕದಲ್ಲಿನ ಒಂದು ನುಡಿ "ಮರಳಿನ ಮಧ್ಯೆ ಸಕ್ಕರೆ ಕಣಗಳಿರುತ್ತವೆ. ಜೀವನ ಇದರ ಮಿಶ್ರಣ. ಸಕ್ಕರೆ ಮಾತ್ರವೇ ಆರಿಸಿಕೊಳ್ಳಬೇಕು" ಎಂಬ ಮಾತನ್ನು ನಮಗೂ ತಿಳಿಸಿದರು.

ಈಗ ನಾನು ಓದಿದ ಕಥೆ "ಸಂಬಂಧಗಳು" ಬಗ್ಗೆ ಎರಡು ಮಾತು.... ಕಥೆಯ ಲೇಖಕರು ನಮ್ಮ ಸಂಪದಿಗರೇ ಆದ ಶ್ರೀ ಅನಂತ್ ಅವರು. ನನಗೆ ಕಥೆ ಇಷ್ಟವಾಗಿದ್ದರಿಂದ ಅವರ ಅನುಮತಿ ಪಡೆದು ಅವರ ಪರವಾಗಿ ನಾ ಓದಿದೆ. ರೂಪ ಅವರು ಬರೆದಂತೆ ನಾನು ಅದರ ವಿಮರ್ಶೆ ಮಾಡಲಿಲ್ಲ. ಕಥೆಯ ಬಗ್ಗೆ ನಾ ಆಡಿದ ಎಲ್ಲಾ ಮಾತುಗಳೂ ನಾನು ಅನಂತ್ ಅವರೊಂದಿಗೆ ಚರ್ಚಿಸಿದ ಮಾತುಗಳು. ಇಲ್ಲಿ ವಿಮರ್ಶೆ ಮಾಡುವ ಉದ್ದೇಶ ನನಗಿರಲಿಲ್ಲ. ಕಥೆಯನ್ನು ಬೇರೊಬ್ಬರು ಓದಿದಾಗ ಕೆಲವೊಮ್ಮೆ ನಮಗೆ ಚಿಕ್ಕ ಪುಟ್ಟ ವಿವರಗಳು ಮರೆತುಹೋಗುವ ಸಂದರ್ಭ ಇರುತ್ತಾದ್ದರಿಂದ, ನಾನು ಅದರಲ್ಲಿ ಅನಂತ್ ಅವರು ಏನು ಹೇಳಿದ್ದಾರೆಂಬುದನ್ನೂ, ಕಥೆ ಬರೆಯುವಾಗಿನ ಅವರ ಮನಸ್ಥಿತಿಯನ್ನೂ, ಉದ್ದೇಶವನ್ನೂ, ಅದರಲ್ಲಿರುವ ಪಾತ್ರಗಳ ಹಾಗೂ ಕಥೆಯ ಮೌಲ್ಯವನ್ನೂ ನಿಮ್ಮಲ್ಲಿ ಹಂಚಿಕೊಳ್ಳುವುದಕ್ಕಾಗಿ ಮಾತ್ರವೇ ಹೇಳಿದ್ದು. ಆ ನಿಟ್ಟಿನಲ್ಲಿ ನಾನು ಸಫಲಳಾಗಿದ್ದೇನೆ ಮತ್ತು ಕಥೆಯ ಲೇಖಕರ ಮನೋಭಿಪ್ರಾಯವನ್ನು ಸರಿಯಾದ ರೀತಿಯಲ್ಲಿ ನಿಮಗೆ ತಲುಪಿಸಿದ್ದೇನೆಂದುಕೊಂಡಿದ್ದೇನೆ. ಕಥೆಯ ಮೆಚ್ಚುಗೆಯೆಲ್ಲಾ ಲೇಖಕರಿಗೇ ಸಲ್ಲಬೇಕು, ಓದಿದವರಿಗಲ್ಲವೆಂದು ನನ್ನ ಅಭಿಪ್ರಾಯ.

ಇನ್ನು ಕೊನೆಯದಾಗಿ ನಮ್ಮೆಲ್ಲರ ಆತ್ಮೀಯ ಮಿತ್ರ ಹರೀಶ್ ಆತ್ರೇಯರ ವಿಚಾರ. ಯಾರು ಯಾರು ಬರುತ್ತಾರೆಂದು ನೋಡಿಕೊಂಡು, ಪಟ್ಟಿ ಮಾಡಿಕೊಂಡು, ಅವರೆಲ್ಲರ ವ್ಯಕ್ತಿ ಪರಿಚಯಗಳನ್ನೂ, ಅವರು ಬರೆದಿರುವ ಲೇಖನಗಳನ್ನೂ ನೋಡಿ, ಓದಿ, ಒಬ್ಬೊಬ್ಬರನ್ನೂ ಪರಿಚರಿಯಿಸಿದ ರೀತಿ ನಿಜಕ್ಕೂ ಹರ್ಷ ತಂದಿತ್ತು. ಎಲ್ಲರಿಗೂ ಆಹಾ ಇದು ನಾನೇನಾ... ಇಷ್ಟೆಲ್ಲಾ ಬರೆದಿದ್ದೇನಾ ನಾನು ಎಂಬ ಭಾವನೆ ಬರುವಂತೆ ನಮ್ಮೆಲ್ಲರನ್ನೂ ಉಬ್ಬಿಸಿದರು. ಅದಕ್ಕಾಗಿ ಅವರಿಗೆ ಒಂದು ವಿಶೇಷ ಧನ್ಯವಾದ. ಆಸೆ ಅಕ್ಕರೆಯಿಂದ ನಮ್ಮೆಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶದಿಂದ ಈ ಸಂಮಿಲನಕ್ಕೆ ತಯ್ಯಾರಿ ನಡೆಸಿದ್ದಕ್ಕೆ ಎರಡನೇ ವಿಶೇಷ ಧನ್ಯವಾದ. ತಮ್ಮ ಸರದಿ ಬಂದಾಗ, ಅವರು ಎಲ್ಲರ ಬರಹಗಳಿಗೂ ಪ್ರತಿಕ್ರಿಯೆ ರೂಪದಲ್ಲಿ ಬರಿದಿದ್ದ ಕವನಗಳನ್ನು ಮಾತ್ರವೇ ಓದಿ ತಪ್ಪಿಸಿಕೊಂಡು ಬಿಡುವ ಸಂಚು ಮಾಡಿದ್ದರು. ಆದರೆ ಹಿಂದಿನ ದಿನವೇ ನನಗೆ ತಮ್ಮ ಕವನ ಓದಬೇಕೆಂದು ಒಂದು ಮಾತು ಹೇಳಿದ್ದರಿಂದ, ನಾನು ಅವರ ಯಾವ ಮಾತೂ ಕೇಳದೆ... ಒಂದೇ ಒಂದು ಕವನ ಓದುವ ಅವಕಾಶ ಪಡೆದೆ. ನಮ್ಮ ಯುವ ಕವಿ ನಿಜಕ್ಕೂ ಸುಂದರ ಕವನಗಳನ್ನು ಬರೆಯುತ್ತಾರೆ. ಜೊತೆಗೆ ನಮ್ಮೆಲ್ಲರಿಗೂ ತಿಳಿದಂತೆ ಅವರ ಬರಹಗಳೂ ಬಹಳ ಪ್ರಬುದ್ಧವಾಗಿವೆ. ನಾನೂ ಹರಿಯನ್ನು ಮೊದಲ್ ಬಾರಿ ಭೇಟಿಯಾದಾಗ ಆಘಾತಗೊಂಡಿದ್ದೆ :-) :-) ಏಕೆಂದರೆ ಅವರ ಬರಹಗಳನ್ನೋದಿ, ಕಮ್ಮಿಯೆಂದರೂ ೩೫ ವರ್ಷದ ಒಬ್ಬ ವ್ಯಕ್ತಿಯನ್ನು ಎದುರು ನೋಡಿದ್ದ ನನಗೆ, ಯುವ ಕವಿಯ ದರ್ಶನ ಸರಿಯಾಗಿ ಬೇಸ್ತು ಬೀಳಿಸಿತ್ತು.

ಸಂಮಿಲನಕ್ಕೆ ಬಂದ ಎಲ್ಲಾ ಸಂಪದ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳು...... ಬರದೇ ಒಳ್ಳೆಯ ಅವಕಾಶ ಕಳೆದುಕೊಂಡು ನಿರಾಶರಾದವರೆಲ್ಲರೂ ಮುಂದಿನ ಸಲ ತಪ್ಪದೇ ಬರುತ್ತಾರೆಂದು ಆಶಿಸೋಣವೇ....?

6 comments:

  1. ನಮಸ್ತೆ ಶ್ಯಾಮಲಾ,

    'ಸಂಪದಿಗರ ಸಮ್ಮಿಲನ' ದ ನಿರೂಪಣೆ ಇಷ್ಟವಾಯಿತು. ಜೊತೆಗೆ ಅಲ್ಲಿಗೆ ಬಂದಿದ್ದವರ ಕಿರುಪರಿಚಯ ತಿಳಿಸಿಕೊಟ್ಟಿದ್ದೀರಿ. ನನಗೆ ಈ ವಿಚಾರ ತಿಳಿದಿರಲಿಲ್ಲ. ಈ ನಿಮ್ಮ ಬರಹ ಓದಿದಾಗ ಮುಂದಿನ ಬಾರಿ ಭೇಟಿಯಾಗೋಣ ಅಂದುಕೊಂಡಿದ್ದೇನೆ.

    ಧನ್ಯವಾದಗಳು.

    ಸ್ನೇಹದಿಂದ,

    ReplyDelete
  2. ನಿಮ್ಮ ನಿರೂಪಣೆ ಓದಿದ ಮೇಲೆ, ಸಂಪದಿಗರ ಉತ್ಸಾಹ ಹಾಗು ಕಳಕಳಿ ಇವು ಅರ್ಥವಾದವು. ನಿಮ್ಮ ಸಮ್ಮೇಲನಗಳು ಹೀಗೇ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

    ReplyDelete
  3. ಸಂಪದದ ಮಿತ್ರರ ಮತ್ತು ಸಮ್ಮಿಲನದ ಕಾರ್ಯಚಟುವಟಿಗೆಗಳನ್ನು ಓದಿ ತುಂಬ ಖುಷಿಯಾಯಿತು. ಮುಮ್ದೆಯೂ ಹೀಗೆ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.

    ReplyDelete
  4. ಶ್ಯಾಮಲಾ
    ಸಮ್ಮಿಲನದ ಬರಹ ತುಂಬಾ ಇಷ್ಟವಾಯಿತು
    ಬರೆಯುತ್ತಿರಿ

    ReplyDelete
  5. ಶ್ಯಾಮಲ ಮೇಡಮ್,

    "ಸಂಪದ ಸಮ್ಮಿಲನ ಕಾರ್ಯಕ್ರಮದ ಬಗ್ಗೆ ನೀವು ಬರೆದ ಲೇಖನವನ್ನು ಓದಿ ಖುಶಿಯಾಯ್ತು. ಇನ್ನಷ್ಟು ಇಂಥ ಕಾರ್ಯಕ್ರಮಗಳು ಚೆನ್ನಾಗಿ ಆಗಲಿ ಎಂದು ಆಶಿಸುತ್ತೇನೆ.

    ReplyDelete
  6. ನಿಮ್ಮ ಲೇಖನ ಇಷ್ಟವಾಯಿತು. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.

    ReplyDelete