Sunday, July 12, 2009

ಭಗವಾನ್ ಶ್ರೀವೇದವ್ಯಾಸರ ಕಿರು ಪರಿಚಯ :-


ಭಗವಾನ್ ಶ್ರೀ ವೇದವ್ಯಾಸರಿಗೆ ಅನೇಕ ಹೆಸರುಗಳು :

೧) ಕಪ್ಪಗಿದ್ದುದರಿಂದ ಕೃಷ್ಣ ೨) ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೈಪಾಯನ

೩) ಬದರೀ ಕ್ಷೇತ್ರದಲ್ಲಿ ಆಶ್ರಮ ನಿರ್ಮಿಸಿಕೊಂಡು ಇದ್ದುದರಿಂದ ಬಾದರಾಯಣ

೪) ಪರಾಶರ ಮಹರ್ಷಿಗಳ ಮಗನಾದ್ದರಿಂದ ಪಾರಾಶರ್ಯ

೫) ತಾಯಿ ವಸುವಿನ ಮಗನಾದ್ದರಿಂದ ವಾಸವೇಯ

೬) ವೇದಗಳನ್ನು ಅನುಕೂಲಕರವಾಗಿ ವಿಂಗಡಿಸಿದ್ದರಿಂದ "ವೇದವ್ಯಾಸ"

"ವ್ಯಾಸ" ಎಂಬುದು ಬಿರುದು. ಇವರ ಮುತ್ತಾತ ವರಿಷ್ಠ, ಅಜ್ಜ ಶಕ್ತಿ, ತಂದೆ ಪರಾಶರ.

ಶ್ರೀ ವೇದವ್ಯಾಸರ ತಾಯಿ ಮತ್ತ್ಸ್ಯಗಂಧಿ ಮೀನುಗಾರರ ಹುಡುಗಿ. ಯಮುನಾ ನದಿಯಲ್ಲಿ ದೋಣಿ ನಡೆಸುವವಳು. ಒಂದು ದಿನ ಪರಾಶರ ಮಹರ್ಷಿಗಳು ಬಂದರು, ದೋಣಿಯಲ್ಲಿ ಕುಳಿತರು. ಆಚೆ ದಡಕ್ಕೆ ಹೋಗುವಷ್ಟರಲ್ಲಿ ಮಹರ್ಷಿಗಳಿಗೆ ಅವಳ ಮೇಲೆ ಪ್ರೀತಿ ಹುಟ್ಟಿತು. ಇವರ ಪ್ರೀತಿಯ ಫಲವೇ ಕೃಷ್ಣ. ಹುಟ್ಟಿದೊಡನೆ ತಾಯಿಗೆ ತಗುಲಿದ್ದ ಮೀನಿನ ದುರ್ಗಂಧ ತೊಲಗಿ ಯೋಜನದವರೆಗೆ ಸುಗಂಧ ಬೀರುವಂತಾದಳು. ಯೋಜನ ಗಂಧಿ ಎನಿಸಿದಳು. ಇದನ್ನೇ ಸಾಂಕೇತಿಕವಾಗಿ ವ್ಯಾಸರ ರಚನೆಗಳನ್ನು ಓದುವವರು ಮನಸ್ಸಿನ ಕಲ್ಮಷ ಕಳೆದುಕೊಂಡು ಪರಿಶುದ್ಧರಾಗುತ್ತಾರೆಂದು ಅರ್ಥೈಸಬಹುದು.

ವ್ಯಾಸರಿಗಿಂತ ಮೊದಲು "ಅಪೌರುಷೇಯ" (ಮನುಷ್ಯ ರಚನೆ ಅಲ್ಲದ್ದು) ಎಂಬ ಖ್ಯಾತಿ ಹೊಂದಿದ ವೇದರಾಶಿ ಬೆಟ್ಟದೋಪಾದಿಯಲ್ಲಿತ್ತು. ಜನರಿಗೆ ಇದನ್ನು ಓದಲು, ಅರಿಯಲು, ಅನುಕೂಲಕರವಾಗುವಂತೆ ವ್ಯಾಸರು ವಿಂಗಡಿಸುವ ಮಹಾಸಾಹಸದ ಕೆಲಸ ಕೈಗೊಂಡು, ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ ಎಂದು ವಿಂಗಡಿಸಿದರು. ತಮ್ಮ ಶಿಷ್ಯರಲ್ಲಿ ಪ್ರತಿಭಾವಂತರಾದ ಪೈಲನನ್ನು ಋಗ್ವೇದದಲ್ಲಿ, ವೈಶಂಪಾಯನನನ್ನು ಯಜುರ್ವೇದದಲ್ಲಿ, ಜೈಮಿನಿಯನ್ನು ಸಾಮವೇದದಲ್ಲಿ, ಸುಮಂತನನ್ನು ಅಥರ್ವಣವೇದದಲ್ಲಿ ನಿಷ್ಣಾತರನ್ನಾಗಿಸಿದರು. ಇವರ ಮೂಲಕ ಭರತ ಖಂಡದಲ್ಲೆಲ್ಲಾ ವೇದಗಳ ಪ್ರಸಾರ ಆಯಿತು.

ಮಹಾಭಾರತ, ಹರಿವಂಶ, ಭಾಗವತ, ಪುರಾಣಗಳು, ಉಪಪುರಾಣಗಳು, ಭಗವದ್ಗೀತೆ, ಜ್ಯೋತಿಷ್ಯ, ಆಯುರ್ವೇದ, ಧರ್ಮಶಾಸ್ತ್ರ, ಬ್ರಹ್ಮಸೂತ್ರ, ಸ್ಮೃತಿಗಳು ಇವು ವ್ಯಾಸರ ಇನ್ನಿತರ ರಚನೆಗಳು. ಇವು ಮನುಷ್ಯ ಮಾತ್ರರಿಂದ ಆಗಲಾರದ್ದೆಂಬ ಭಾವನೆ ಇರುವುದರಿಂದ ಇವರನ್ನು ಭಗವಂತನ ಅವತಾರವೆಂದೇ ಜನತೆ ಗೌರವಿಸಿದರು.

ವ್ಯಾಸರಿಗೂ ಒಬ್ಬ ಮಗನಿದ್ದ. ಅವನಿಗಾಗಿ ಅವರು ಅನೇಕ ವರ್ಷ ಕೈಲಾಸ ಪರ್ವತದಲ್ಲಿ ತಪಸ್ಸು ಮಾಡಿದ್ದರು. ಆಗ ಒಲಿದು ಬಂದವಳು ಘೃತಾಚಿ ಎಂಬ ಅಪ್ಸರೆ. ಅವಳಲ್ಲಿ ಹುಟ್ಟಿದವನೇ ಶುಕಮಹರ್ಷಿ. ಈತ ಹುಟ್ಟಿನೊಂದಿಗೇ ಮಹಾಗ್ನಾನಿ ಹಾಗೂ ಪರಮ ವೈರಾಗ್ಯ ನಿಧಿ. ಇಂತಹ ಮಗನನ್ನು ಕಳೆದುಕೊಂಡು ವ್ಯಾಸರು, ದು:ಖ ಮರೆಯಲು ಬರವಣಿಗೆಯಲ್ಲಿ ತೊಡಗಿದರು.

ವ್ಯಾಸರ ಗ್ರಂಥಗಳಲ್ಲಿ ೧೮ ಅಥವಾ ೯ ಕ್ಕೆ ತುಂಬಾ ಮಹತ್ವ ಇದೆ :

೧) ಮಹಾಭಾರತ - ೧೮ (೯) ಪರ್ವಗಳು

೨) ಭಗವದ್ಗೀತೆ - ೧೮ (೯) ಅಧ್ಯಾಯಗಳು

೩) ಪುರಾಣಗಳು - ೧೮

೪) ಉಪ ಪುರಾಣಗಳು - ೧೮

೫) ಕುರುಕ್ಷೇತ್ರದಲ್ಲಿದ್ದ ಸೈನ್ಯ - ಅಕ್ಷೋಹಿಣಿ (೧೮)

೬) ಯುದ್ಧಕಾಲ - ೧೮ ದಿನ

೭) ಯಾದವ ಕುಲದ ನಾಶಕ್ಕೆ ಗಾಂಧಾರಿಯ ಶಾಪ ೩೬ ವರ್ಷಗಳು ( ೯)

ವ್ಯಾಸರು ಹುಟ್ಟಿದ ದಿನ ಹುಣ್ಣಿಮೆ (ವ್ಯಾಸ ಪೌರ್ಣಿಮೆ). ಗ್ರಂಥಗಳನ್ನು ಇಟ್ಟುಕೊಂಡು ಪಾರಾಯಣ ಮಾಡುವ ಪೀಠಕ್ಕೆ "ವ್ಯಾಸ ಪೀಠ" ಎಂದು ಹೆಸರು. ಹಿರಿಯರನ್ನು ಗೌರವಿಸುವ ಪರಿಗೆ "ವ್ಯಾಸ ಪೂಜೆ" ಎಂದು ಹೆಸರು.




{ಹಳೆಯ ’ಕಸ್ತೂರಿ’ ಯಿಂದ ಸಂಗ್ರಹಿಸಿಟ್ಟಿದ್ದ ಮಾಹಿತಿ. ಬರೆದವರು ಯಾರೆಂದು ತಿಳಿದಿಲ್ಲ - ಕ್ಷಮಿಸಿ}

No comments:

Post a Comment