Tuesday, July 28, 2009

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಿನ ಗುಳ್ಳೆ ನಿಜವಲ್ಲಾ ಹರಿಯೇ....... ಈ ಹಾಡು ನನ್ನನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ನಾವು ಬಿಟ್ಟು ಬದುಕಲೇ ಆಗದು ಎಂದುಕೊಳ್ಳುವ ಸಂಬಂಧಗಳೆಲ್ಲಾ ಇಷ್ಟೇನೇ ಎಂದು.........

ಸಂಬಂಧಗಳು ನಮ್ಮನ್ನು ತಾಯ ಗರ್ಭದಿಂದಲೇ ಸುತ್ತಿಕೊಳ್ಳುತ್ತಾ ಹೋಗುತ್ತದೆ. ಮೊಟ್ಟ ಮೊದಲಿಗೆ ತಾಯಿಯ ಜೊತೆ, ಕರುಳು ಬಳ್ಳಿಯ ಮೂಲಕ, ಹುಟ್ಟಿದ ಕ್ಷಣದಿಂದ ತಂದೆಯ ಜೊತೆ ಮತ್ತು ಒಡಹುಟ್ಟಿದವರೊಡನೆ, ಅಜ್ಜ-ಅಜ್ಜಿಯರೊಡನೆ, ನೆರೆ-ಹೊರೆಯವರೊಡನೆ, ಶಾಲೆಯಲ್ಲಿ ಮತ್ತು ಹೊರಗೆ ಸ್ನೇಹಿತರೊಡನೆ, ಮದುವೆಯಾದ ಮೇಲೆ ಗಂಡ/ಹೆಂಡತಿಯೊಡನೆ, ಮಕ್ಕಳೊಡನೆ, ಹೀಗೇ ನಾವು ಬದುಕಿರುವವರೆಗೂ ಹೊಸ ಹೊಸ ಸಂಬಂಧಗಳು ನಮ್ಮನ್ನು ಆವರಿಸಿಕೊಳ್ಳುತ್ತಲೇ ಇರುತ್ತವೆ. ನಾವು ಬೇಡ ಬೇಡವೆಂದರೂ, ಈ ಒಂದು ಕೊಂಡಿ ನಮ್ಮ ಜೀವನದಲ್ಲಿ ಅತಿಯಾಗಿ ಅವಶ್ಯಕತೆ ಇರುವ ಮತ್ತು ಅನಿವಾರ್ಯವೂ ಆಗಿರುವ, ಮಧುರ ಬೆಸುಗೆ.

ಸಂಬಂಧಗಳಲ್ಲೆಲ್ಲಾ ಮೊದಲನೆಯದಾದ ತಾಯಿಯ ಜೊತೆಗಿನ ಬೆಸುಗೆ, ಅತ್ಯಂತ ಅಪೂರ್ವವಾದದ್ದು ಮತ್ತು ಅಮ್ಮ ಅದನ್ನು ತನ್ನ ಎಲ್ಲಾ ಮಕ್ಕಳಿಗೂ ನಿರ್ವಂಚನೆಯಿಂದ, ತುಂಬು ಮನದಿಂದ ಹಂಚುವಂತಹುದು. ಮಗು ತನ್ನ ಉದರದಲ್ಲಿ ಮೊಳಕೆಯೊಡೆದಾಗಿನಿಂದ ತಾಯಿ ತನ್ನ ಕೊನೆಯುಸಿರಿರುವವರೆಗೂ ತನ್ನ ಮಗುವನ್ನು ಒಂದೇ ರೀತಿಯಲ್ಲಿ, ಏನನ್ನೂ ಎದುರು ನೋಡದೆ, ನಿಶ್ಕಲ್ಮಷವಾಗಿ ಪ್ರೀತಿಸುತ್ತಾಳೆ. ಆದರೆ ಅದೇ ಮಗು ಬೆಳೆಯುತ್ತಾ ಹೋದಂತೆ, ತನ್ನ ಸಂಬಂಧಗಳನ್ನು ವಿಸ್ತರಿಸಿಕೊಳ್ಳುವ ಭರಾಟೆಯಲ್ಲಿ, ತಾಯಿಯನ್ನು ಮತ್ತು ಅವಳ ಪ್ರೀತಿಯನ್ನೂ ತನ್ನ ಹಕ್ಕೆಂದು ತಿಳಿದು, ಅದನ್ನು ಒಂದು ಕಡೆ ಮುಚ್ಚಿಟ್ಟು ಬಿಡುತ್ತೇನೋ ಎಂದು ನನಗನ್ನಿಸುತ್ತದೆ.........

ಒಡಹುಟ್ಟಿದವರ ಸಂಬಂಧ ನಾವೆಲ್ಲಾ ಚಿಕ್ಕವರಿದ್ದಾಗ ಮಾತ್ರ ನಿರ್ಮಲ ಪ್ರೇಮವಾಗಿರತ್ತೆ. ಬೆಳೆಯುತ್ತಾ ಹೋದಂತೆಲ್ಲಾ ಒಬ್ಬರ ಮೇಲೊಬ್ಬರಿಗೆ ಚಿಕ್ಕ ಚಿಕ್ಕ ವಿಷಯಗಳಿಗೆಲ್ಲಾ ಹೊಟ್ಟೆಕಿಚ್ಚು, ಅಸಹನೆ ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ ನನ್ನ ಅನುಭವ ನನಗೆ ಕಲಿಸಿದ ಪಾಠದಲ್ಲಿ, ಅದು ಒಂಥರಾ ವ್ಯಾವಹಾರಿಕವೇ ಆಗಿಬಿಟ್ಟಿದೆ. ಎಲ್ಲವೂ ಸಾಲ ಕೊಟ್ಟು ವಾಪಸ್ಸು ತೆಗೆದುಕೊಳ್ಳುವಂತಾಗಿದೆ. ನೀ ಫೋನಾಯಿಸಿದರೆ, ನಾನೂ ಫೋನಾಯಿಸುವೆ, ನೀ ನನಗೆ ಜನ್ಮದಿನದ ಶುಭಾಶಯ ಹೇಳಿದರೆ, ನಾನೂ ನಿನಗೆ ನಿನ್ನ ಜನ್ಮ ದಿನಕ್ಕೆ ಹೇಳುವೆ.......... ನೀ ಮಾತಾಡಿಸಿದರೆ ನಾನೂ ಮಾತಾಡುವೆ...... ಹೀಗೇ...... ನಮ್ಮ ಏಳಿಗೆ ಅಥವಾ ಅಂತಸ್ತು ನಮ್ಮ ನಡುವಿನ ಸಂಬಂಧಕ್ಕಾಗಲೀ, ಒಡನಾಟಕ್ಕಾಗಲೀ, ಸ್ನೇಹಕ್ಕಾಗಲೀ ಸಂಬಂಧ ಪಟ್ಟಿದ್ದಲ್ಲ ಎನ್ನುವುದು ಎಲ್ಲರ ಮನದಲ್ಲೂ ಇದ್ದರೆ ಮಾತ್ರವೇ, ಆ ಒಡಹುಟ್ಟಿದವರ ಸಂಬಂಧಕ್ಕೊಂದು ಅರ್ಥ, ಸಾರ್ಥಕ್ಯ ಬರುವುದು. ಐಶ್ವರ್ಯ ಇದ್ದಾಗ, ಒಬ್ಬರಿಗೊಬ್ಬರು, ಸಹಾಯ ಮಾಡಿದರೆ, ಅದನ್ನು ಬರಿಯ ಪವಿತ್ರ ಸ್ನೇಹದ ಕೋನದಿಂದ ನೋಡಬೇಕೇ ಹೊರತು, ಅದಕ್ಕೆ ಬೇರಾವುದೇ ಅರ್ಥ ಕಲ್ಪಿಸಬಾರದು. ಇಲ್ಲಿ ಮೇಲು-ಕೀಳೆಂಬ ವ್ಯತ್ಯಾಸ ಇರುವುದಿಲ್ಲ, ಹಾಗೊಂದು ವೇಳೆ ಅರ್ಥೈಸಿದಾಗಲೇ ಈ ಸಂಬಂಧ ಒಂದು ವ್ಯಾಪಾರ ಅನ್ನಿಸಲು ಶುರುವಾಗುವುದು. ಹೀಗೆ ಲೆಕ್ಕಾಚಾರ ಮಾಡಲು ಮೊದಲಾದಾಗಲೇ ನಮ್ಮ ಸಂಬಂಧಕ್ಕೆ ಅಡಿಪಾಯವೇ ಇಲ್ಲ, ಇದು ಕೃತಕ ಅನ್ನಿಸತೊಡಗುವುದು.

ಎಲ್ಲರನ್ನೂ ಅನುಸರಿಸಿಕೊಂಡು, ಎಲ್ಲವನ್ನೂ ಸಹಿಸಿಕೊಂಡು, ಶಾಂತವಾಗಿ (ಮನ ಅಗ್ನಿಕುಂಡವಾಗಿದ್ದರೂ ಸಹ) ನಗುಮೊಗದ ಮುಖವಾಡ ಹಾಕಿಕೊಂಡು, ಕರ್ತವ್ಯ ಎನ್ನುವಂತೆ ಪಾಲಿಸುವ, ಪೋಷಿಸುವ ಸಂಬಂಧಗಳು ನಮಗೆ ಅವಶ್ಯಕವೇ ? ಎಲ್ಲಾ ಸಂಬಂಧಗಳನ್ನೂ "ತೊರೆದು ಜೀವಿಸಬಹುದೇ......." ಎಂಬ ಸಂಶಯ ನನಗ್ಯಾವಾಗಲೂ ಬರುತ್ತಲೇ ಇರುತ್ತದೆ. ಆದರೆ ಅದಕ್ಕೆ ಉತ್ತರವೂ ನಮ್ಮ ಹತ್ತಿರವೇ ಇದೆ.... ನಾ ನಂಬಿದಂತೆ ಜೀವನ ಒಂದು ರೈಲುಗಾಡಿ. ಎಷ್ಟೋ ಪ್ರಯಾಣಿಕರು, ತಮ್ಮ ತಮ್ಮ ನಿಲ್ದಾಣಗಳು ಬಂದಾಗ, ಇಳಿದು ಹೋಗುತ್ತಲೇ ಇರುತ್ತಾರೆ ಮತ್ತು ಹೊಸಬರು ಹತ್ತುತ್ತಲೇ ಇರುತ್ತಾರೆ, ನಾವು ಮಾತ್ರ ನಿರಂತರವಾಗಿ ಪ್ರಯಾಣಿಸುತ್ತಲೇ ಇರುತ್ತೇವೆ........

1 comment:

  1. ನೀವು ಹೇಳುವುದು ಖರೆ ಸಂಬಂಧಗಳು ಶಾಶ್ವತ ಅಲ್ಲ ನಾ ಹತ್ತಿರದಿಂದ ನೋಡಿದ ಅನೇಕ ಅಣ್ಣ ತಮ್ಮಂದಿರ ಅಕ್ಕ ತಂಗಿಯರ
    ಒಡನಾಟ, ಅವರ ಸಂಬಂಧ ಎಂತಹ ಶಿಥಿಲ ಎಲ್ಲ ಗಮನಿಸಿರುವೆ ಭ್ರಮ ನಿರಸನಗೊಂಡಿರುವೆ..
    ನಾ ಅಂತೂ ಒಂಟಿ ಇನ್ನು ಇದ್ದವರು ಹೊಂದಿಕೊಂಡಿರಲಾರರು ಎಂಥಾ ವಿಚಿತ್ರ ನೋಡಿ...

    ReplyDelete